ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಶಾಲೆ ಮಾಸ್ತರ್ರು

ಫಾಲ್ಗುಣ ಗೌಡ ಅಚವೆ

ಗೆರೆ ಗೆರೆಗಳ ಪಾಯಜಾಮ
ಗದ್ದೆ ಹಾಳಿಯ ಮೇಲೆ ನಡೆದು ಬಂದರೆ
ಎದುರುಗೊಳ್ಳುತ್ತದೆ ಬೆತ್ತ ವರಾಂಡಾದಲ್ಲಿ
ಟೇಬಲ್ಲು ಚೊಕ್ ಪೀಸು ಕರಿ ಹಲಗೆ
ಎಲ್ಲವೂ ಒಮ್ಮೆ ಎದ್ದು ನಿಲ್ಲುತ್ತವೆ

ಪ್ರಾರ್ಥನಾ ಬೆಲ್ಲಿಗೆ ಎಚ್ಚರಗೊಂಡ ಗಾಂಧಿ,ಬೋಸ್,ರಾಧಾಕೃಷ್ಣನ್ ಎಲ್ಲ ಮಕ್ಕಳೊಂದಿಗೆ ಎದೆಗೆ ಕೈಯಿಟ್ಟು ನಿಂತಂತೆ ಮಕ್ಕಳಿಗೆ ಭಾಸವಾಗುತ್ತದೆ

ಮಗ್ಗಿ ಬರೆದ ಪಾಟಿ ಅದ್ದು ಹೋಗಿದೆ ಜೋರುಮಳೆಗೆ
ಮತ್ತೆ ತೋರಿಸಬೇಕು ಬರೆದು
ಇಲ್ಲದಿರೆ ಗದ್ದೆಯಲಿ ಸಗಣಿ ಹೆಕ್ಕಬೇಕು

ಆಗಾಗ ಅಂಗಿಯನು ಉಲ್ಟಾ ಹಾಕಿ ಬಂದರೂ
ನೋಡಿಯೂ ನೋಡದಂತೆ
ಕಿಟಕಿಗಳೂ ಗಪ್ ಚಿಪ್
ಹೆದರಿ ಕೂತ ಮಕ್ಕಳಂತೆ

ಏಕೋಪಾದ್ಯಾಯ ಶಾಲೆಯ ಮಾಸ್ತರರು ಇರುವುದೇ ಒಂದು ಖೋಲಿ
ಟೇಬಲ್ಲೇದುರೇ ಪಾಠ ಹೇಳುವರು
ಕರಿ ಹಲಗೆ ಇದ್ದೂ ಇಲ್ಲದಂತೆ
ಸದಾ ಎದುರಿಗಿರುತ್ತದೆ ಸೋರುವ ಹಂಚಿನಂತೆ

ಶನಿವಾರ ಬಂದರೆ ಹಬ್ಬವೋ ಹಬ್ಬ
ಹುಡುಗರೇ ನಾವೆಲ್ಲಾ ಗದ್ದೆ ಬಯಲಲ್ಲೇ
ಹೋಮ್ ವರ್ಕ ಮಾಡದಿರೆ ಬಾಯ್ ಹಾರ್ಟ್ ಹಾಕದಿರೆ
ಗಾಳ ಹಾಕುವ ಶಿಕ್ಷೆ
ಛಡಿ ಚಮ್ ಚಮ್ ವಿದ್ಯಾ ಗಮ್ ಗಮ್

ಒಮ್ಮೆ ಏನಾಯಿತೆಂದರೆ,
ಒದೆ ತಿಂದ ಮಕ್ಕಳು ಬಯಲ ದೇವರೆದುರು ನಿಂತು ಕಾಯಿಟ್ಟು
ಹರಕೆ ಮಾಡಿಕೊಂಡರು
‘ ಶನಿವಾರ ಊರಿಗೆ ಹೋದ ಮಾಸ್ತರು
ತಿರುಗಿ ಬರಬಾರದು! ‘
ಬಂತು ಸೋಮವಾರ ಯಥಾಸ್ಥಿತಿ
ಒದೆ ತಿಂದರು!!

********************************

About The Author

1 thought on “ಶಾಲೆ ಮಾಸ್ತರ್ರು”

Leave a Reply

You cannot copy content of this page

Scroll to Top