ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಾಗರಾಜ ಹರಪನಹಳ್ಳಿ

ನಾಗರಾಜಹರಪನಹಳ್ಳಿ ಕಾವ್ಯಗುಚ್ಛ ಬೆರಳ ತುದಿಗೆ ಕರುಣೆ ಪಿಸುಗುಡುವತನಕ ಕಟ್ಟೆಯ ಮೇಲೆ ಕುಳಿತದ್ದಕ್ಕಕೊಲೆಯಾಯಿತುಉಗ್ಗಿದ ಖಾರದ ಪುಡಿಗೆಇರಿದ ಚೂರಿಗೆಕಣ್ಣು ಕರುಣೆ ಇರಲಿಲ್ಲ ಅಂತಿಂತಹ ಕಟ್ಟೆಯಲ್ಲಮಲ್ಲಿಕಾರ್ಜುನನ ಕಟ್ಟೆಇರಿದವ ಅಹಂಕಾರಿಇರಿಸಿಕೊಂಡದ್ದು ಸಮಾನತೆಒಂದು ಸವರ್ಣಧೀರ್ಘ ಸಂದಿಮತ್ತೊಂದು ಲೋಪಸಂದಿ ಕಣ್ಣು ಕಟ್ಟಿದ ,ಬಾಯಿ ಮುಚ್ಚಿದ ಈ ನಾಡಿನಲ್ಲಿ ಏನೂ ಆಗಬಹುದು ಸ್ವತಃ ದೊರೆ ದೀರ್ಘಾಸನದಲ್ಲಿಶವಾಸನದಲ್ಲಿರುವಾಗಅಹಂಕಾರ ಊರ ಸುತ್ತಿದರೆಅಚ್ಚರಿಯೇನಿಲ್ಲ ಇಲ್ಲಿ ಎಲ್ಲರೂ ಬಾಯಿಗೆ ಬೀಗಜಡಿದು ಕೊಂಡಿರುವಾಗನಿತ್ಯವೂ ಸಮಾನತೆಯ ಹಂಬಲ ಕೊಲೆಯಾಗುತ್ತಿರುತ್ತದೆಮತ್ತೊಮ್ಮೆ ಕರುಣೆಭೂಮಿಯಲ್ಲಿ ಮೊಳಕೆಯೊಡೆದು ಸಸಿಯಾಗಿ ಗಿಡವಾಗಿ ,ನಡೆದಾಡುವ ಮರ ಬರುವತನಕನದಿಯೇ ಮನುಷ್ಯನಾಗಿ ಚೂರಿಯ ಅಹಂಕಾರದ ರಕ್ತ ತೊಳೆಯುವತನಕಇರಿದ ಚೂರಿಯ ತುದಿಗೆಹಿಡಿದ ಬೆರಳ ತುದಿಗೆ ಕರುಣೆಪಿಸುಗುಡುವತನಕ……….. ನಾವಿಬ್ಬರೂ ಮರವಾಗಿದ್ದೇವೆ ನಾವಿಬ್ಬರೂ ಮರವಾಗಿದ್ದೇವೆ ಇದು ನನ್ನ ಮೊದಲ ಹಾಗೂಕೊನೆಯ ಪದ್ಯವೆಂದು ಬರೆಯುವೆಪ್ರತಿ ಅಕ್ಷರಗಳಲ್ಲಿ ಪ್ರೀತಿಯ ಬೆರಸಿ ನಡೆವ ದಾರಿಯಲ್ಲಿ ನಿನ್ನಲ್ಲಿ ನಾ ತುಂಬಿ ಕೊಂಡರೆ ಅದಕ್ಕೆ ಏನೆನ್ನಲಿ?ಅಥವಾ ನನ್ನ ಜೀವನದ ಪ್ರತಿ ಉಸಿರಾಟದಿ ನೀ ತುಂಬಿ ಕೊಂಡಿರುವುದ ಹೇಗೆ ಮನದಟ್ಟು ಮಾಡಲಿ? ಹೀಗೆ ಹೇಳಬಹುದು:ನಿನಗೆ ಕಾಣುವ ಪ್ರತಿ ಗಿಡ ಮರ ಹೂ ಬಿಟ್ಟು ನಗುತ್ತಿದ್ದರೆ ಅದು ನಮ್ಮಿಬ್ಬಿರ ಪ್ರೇಮ ಅತೀ ಕಟ್ಟಕಡೆಯ ಮನುಷ್ಯನ ಮನೆ ಅಂಗಳದಿ ಮಗು ನಗು ಅರಳಿಸಿ ಅದರ ಕಣ್ಣಲ್ಲಿ ಕಾಂತಿ ಕಂಡರೆ ಅದು ನಮ್ಮಿಬ್ಬರ ಪ್ರೇಮ ವಾಸ್ತವವಾಗಿ ನಾವಿಬ್ಬರೂ ವಾಸಿಸುವುದು ಅಂತ್ಯಜರಲ್ಲಿ ಭ್ರಮಾತ್ಮಕ ಅಕ್ಷರ ಲೋಕದ‌ಖೂಳರ ನಾವಿಬ್ಬರೂ ಸೇರಿಒಂದನಿ ರಕ್ತ ಹರಿಸದೆಒಂದಕ್ಷರ ಬರೆಯದೇಮದ್ದು ಗುಂಡು ಸಿಡಿಸದೆಗೊತ್ತೇ ಆಗದಂತೆ ಕೊಲೆ ಮಾಡಿ ಬಂದೆವು ಈಗ ನಾವಿಬ್ಬರೂ ಅಕ್ಕಪಕ್ಕದ ಮರವಾಗಿದ್ದೇವೆನಮ್ಮ ಟೊಂಗೆಗಳಲ್ಲಿ ಹದವಾಗಿ ಬೆಳೆದ ಹಸಿರು ಹೂ ಕಾಯಿ ಕಣ್ಣಲ್ಲಿ ಹಕ್ಕಿಗಳು ಸಂಸಾರ ನಡೆಸಿವೆ ಹು, ಈಗ ; ಕೊನೆಯ ಮಾತುಹಠಾತ್ ನಾ ಇಲ್ಲವಾದರೆಇದ್ದಲ್ಲೇ ಕಣ್ಣೀರಾಗು……… ಗೌರಿ ಮಾತಾಡಲಿಲ್ಲ ಗೌರಿಯನು ತಂದರುಮನೆಯ ಪಡಸಾಲೆಯಲ್ಲಿ ಅದ್ಭುತವಾಗಿ ಅಲಂಕರಿಸಿದರುಗೌರಿ ಮಾತಾಡಲಿಲ್ಲಆಕೆ ಮೌನವಾಗಿದ್ದಳುಆಕೆಗೆ ಮಾತಾಡದಂತೆ ಕಲಿಸಿಲಾಗಿತ್ತು ಆಕೆ ಜೀವಂತ ಮಣ್ಣಿನಮೂರ್ತಿಯಾಗಿದ್ದಳುಅದನ್ನೇ ಸಂಸ್ಕೃತಿ ಅಂದರುಭವ್ಯ ಪರಂಪರೆ ಎಂದರು ಗೌರಿಯ ಭಕ್ತಿ ಭಾವದಿಂದಪೂಜಿಸಿದರುದೀಪ ಹಚ್ಚಿದರುಸಿಹಿ ನೈವೇದ್ಯ ಮಾಡಿದರುನಮಸ್ಕರಿಸಿದರುಪಟಾಕಿ ಹೊಡೆದರುಭಜನೆ ಮಾಡಿದರುಗೌರಿ ಮಾತಾಡಲಿಲ್ಲಮೌನವಾಗಿದ್ದಳುಅದನ್ನು ಸಂಸ್ಕೃತಿ ಅಂದರು ಸಿಹಿ ಹಂಚಿ ತಿಂದರುಕೊನೆಗೆ ಅದೇ ಗೌರಿಯ ನೀರಲ್ಲಿ ಮುಳುಗಿಸಿದರುಗೌರಿ ಆಗಲೂ ಮಾತಾಡಲಿಲ್ಲಅದನ್ನೇ ಸಂಸ್ಕೃತಿ ಎಂದರು ಮಣ್ಣು ಮಣ್ಣ‌ ಸೇರಿತ್ತು…********************************

ನಾಗರಾಜ ಹರಪನಹಳ್ಳಿ Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಕಾಡು ಸುತ್ತಿಸಿ ನಿಸರ್ಗದ ಪಾಠ ಹೇಳುವ ಕಾನ್ಮನೆಯ ಕಥೆಗಳು                        ನಾನು ಎರಡನೇ ತರಗತಿ ಇದ್ದಿರಬಹುದು. ಅಜ್ಜಿ ಮನೆಯ ಊರಲ್ಲಿ ಬಂಡಿ ಹಬ್ಬ. ಅಂಕೋಲಾ ಹಾಗೂ ಕುಮಟಾದವರು ಏನನ್ನಾದರೂ ಬಿಟ್ಟಾರು. ಆದರೆ ಬಂಡಿ ಹಬ್ಬ ಬಿಡುವುದುಂಟೆ? ಆದರೆ ಬಂಡಿ ಹಬ್ಬದಲ್ಲಿ ದೇವರು ಒಮ್ಮೆ ಕಳಸದ ಮನೆಯಲ್ಲಿ ಕುಳಿತ ನಂತರ ಮತ್ತೆ ಎದ್ದು ಬರೋದು ರಾತ್ರಿಯೇ. ಅದರಲ್ಲೂ ಬಂಡಿ ಆಟ ಮುಗಿಸಿ ತಡವಾಗಿದ್ದ ರಾತ್ರಿಯದು. ನಾವೆಲ್ಲ ನಿಂತ ಅನತಿ ದೂರದಲ್ಲಿ ಒಂದೆಡೆ ಜಾತ್ರೆಯ ತೇರಿನಂತೆ ಮರಕ್ಕೆ ಬಣ್ಣಬಣ್ಣದ ದೀಪ ವಿದ್ಯತ್ ಅಲಂಕಾರ ಮಾಡಿದಂತೆ ಕಾಣಿಸುತ್ತಿತ್ತು. ನನಗೋ ಅದು ಎಂದೂ ನೋಡಿರದ ದೃಶ್ಯ. ಮಾವನ ಮಗಳು ಮಾಲಕ್ಕನ ಬಳಿ ಅಕ್ಕಾ ಏನದು? ಎಂದೆ. ಮಾತನಾಡಿದರೆ ಈ ಧರೆಗಿಳಿದ ಸೌಂದರ್‍ಯ ಕರಗಿ ಹೋಗಬಹುದು ಎನ್ನುವ ಭಯ. ಆದರೆ ಆಕೆಗೆ ಅದು ಮಾಮೂಲು. ‘ಅದಾ ಮಿಂಚು ಹುಳ. ಮಳೆಗಾಲ ಹತ್ತಿರ ಬಂತಲ್ಲ? ಅದಕ್ಕೆ ಮಿಂಚು ಹುಳಗಳು ಮಳೆಗೆ ದಾರಿ ತೋರಸ್ತಾವೆ. ಎಂದಳು. ನನಗೆ ಅಷ್ಟು ದೂರದಿಂದ ಸೂಡಿಯ ಬೆಳಕಲ್ಲಿ ಮೈ ಮೇಲೆ ಬಂದ ದೇವರ ಆರ್ಭಟ ನೋಡುವ ಕುತೂಹಲ ಮುಗಿದು ಹೋಯ್ತು. ಕಣ್ಣೆದುರಿಗೇ ಧರೆಗಿಳಿದ ಅಮರಾವತಿಯನ್ನಿಟ್ಟುಕೊಂಡು, ಮಾತನಾಡಿದರೇ ಥಕಧಿಮಿಗುಡುವ ದೇವರನ್ನೇಕೆ ನೋಡಲು ಹೋಗಲಿ? ಅಂತೂ ದೇವರ ಕಳಸ ನಮ್ಮ ಮುಂದಿನಿಂದ ಧಪಧಪ ಹೆಜ್ಜೆ ಇಡುತ್ತ ಹೋಗುವಾಗ ಕೈ ಹಿಡಿದುಕೊಂಡಿದ್ದ ಮಾಲಕ್ಕ ನನ್ನನ್ನು ಎಳೆದುಕೊಂಡೇ ಹೊರಟಳು ಆದರೆ ನನಗೋ ಆ ಚಿತ್ತಾರ ಬಿಟ್ಟು ಬರುವ ಮನಸ್ಸಿರಲಿಲ್ಲ. ಇಂದಿನಂತೆ ಆಗೇನಾದರೂ ಕೈಯ್ಯಲ್ಲೊಂದು ಮೊಬೈಲ್ ಇದ್ದಿದ್ದರೆ ಅದೆಷ್ಟು ಫೋಟೊ ಹೊಡೆದು ಫೇಸ್‌ಬುಕ್‌ಗೆ ಹಾಕಿ ಏನೇನು ತಲೆಬರೆಹ ಕೊಡುತ್ತ ಎಷ್ಟೊಂದು ಲೈಕ್ ಗಿಟ್ಟಿಸಬಹುದಿತ್ತು ಎಂದು ಈಗಲೂ ಆ ದೃಶ್ಯವನ್ನು ನೆನಪಿಸಿಕೊಳ್ಳುವಾಗಲೆಲ್ಲ   ಅಂದುಕೊಳ್ಳುತ್ತೇನೆ. ಮತ್ತೆ ಆ ದೃಶ್ಯ ಈಗ ಶಿವಾನಂದ ಕಳವೆಯವರ ಕಾನ್ಮನೆಯ ಕಥೆಗಳು ಪುಸ್ತಕ ಓದುವಾಗ ನೆನಪಿಗೆ ಬಂತು.         ಶಿವಾನಂದ ಕಳವೆಯವರ ಕಾನ್ಮನೆಯ ಕಥೆಗಳು ನಮಗೆ ಹಲವಾರು ವಿಷಯಗಳನ್ನು ವಿವರಿಸುತ್ತ ಹೋಗುತ್ತವೆ. ಕಾಡು ಮತ್ತು ಮಾನವನ ಸಂಬಂಧದ ಕುರಿತಾದ ಅದ್ಭುತ ನುಡಿಚಿತ್ರವನ್ನು ನಾವು ಈ ಪುಸ್ತಕದಲ್ಲಿ ಕಾಣಬಹುದು. ‘ಅರೆ ಹೌದಲ್ಲ? ಇದನ್ನು ನೋಡಿದ್ದರೂ ನಾವಿದನ್ನು ಗಮನಿಸಿಯೇ ಇರಲಿಲ್ಲವಲ್ಲ’ ಎಂಬ ಅದೆಷ್ಟೋ ಘಟನೆಗಳು ನಮ್ಮನ್ನು ಅಚ್ಚರಿಯ ಸುಳಿಗಾಳಿಗೆ ಸಿಲುಕಿಸುತ್ತವೆ. ಕಾಗೆಯ ಗೂಡಿಗೆ ಕಲ್ಲು ಹೊಡೆದು ತಿಂಗಳುಗಳಿಂದ ಮನೆಯಿಂದ ಹೊರಗೇ ಬರಲಾರದಂತೆ ಮಾಡಿಕೊಂಡ ಎಡವಷ್ಟು ನಮ್ಮ ಬಾಲ್ಯದಲ್ಲಿ ಅದೆಷ್ಟಿಲ್ಲ?  ಅದೆಷ್ಟೋ ಬೀಜಗಳ ಪೋಷನೆಯನ್ನು ಹೀಗೆ ಮಾಡಿದರೆ ಮಾತ್ರ ಮೊಳಕೆಯೊಡೆಯುತ್ತದೆ ಎನ್ನುವುದನ್ನು ನಮ್ಮ ಹಿರಿಯರು ಹೇಳಿಕೊಟ್ಟಿಲ್ಲ ಹೇಳಿ. ಆದರೂ ನಾವು ಪರಿಸರವನ್ನು ಕೇವಲ ಸಸ್ಯಶಾಸ್ತ್ರೀಯ ಅಧ್ಯಯನಗಳಿಂದಲೇ ತಿಳಿದುಕೊಳ್ಳುವುದಕ್ಕೆ ಹೊರಡುತ್ತೇವೆಯೇ ಹೊರತೂ  ನಮ್ಮ ಜನಪದ ಜ್ಞಾನವನ್ನು ಇದಕ್ಕೆ ಬಳಸಿಕೊಳ್ಳುವುದಿಲ್ಲ ಎಂಬುದಕ್ಕೆ ಅದೆಷ್ಟು ಉದಾಹರಣೆಗಳು ಈ ಪುಸ್ತಕದಲ್ಲಿ ದೊರಕುತ್ತವೆಯೆಂದರೆ ಓದುತ್ತಿದ್ದರೆ ಒಮ್ಮೆ ನಗು, ಇನ್ನೊಮ್ಮೆ ವಿಷಾz, ಮತ್ತೊಮ್ಮೆ ಕೋಪ ಕೆಲವೊಮ್ಮೆ ಎಲ್ಲವೂ ಒತ್ತಟ್ಟಿಗೇ ಒಕ್ಕರಿಸಿಕೊಂಡು ಬರುತ್ತದೆ.                   ನಾವೆಲ್ಲ ಕಹಿ ಎಂದುಕೊಳ್ಳುವ, ವಿಷಕಾರಿ ಎಂದು ದೂರ ಇಡುವ ಕಾಸ್ನ (ಕಾಸರಕ) ಮರದ ವಿಶೇಷಣಗಳ ಬಗ್ಗೆ ಶಿವಾನಂದ ಕಳವೆಯವರು ಹೇಳುವಾಗ ಈ ಮರಕ್ಕೆ ಇಷ್ಟೆಲ್ಲ ಗುಣಗಳಿವೆಯೇ ಎಂದು ಅಚ್ಚರಿಯಾಗದೇ ಇರಲು ಸಾಧ್ಯವೇ ಇಲ್ಲ. ಹೆಂಡ ಇಳಿಸಲು ಬಳಸುವ ಬಗಿನೆ ಮರದ ಬೇರನ್ನು ಅಡಿಕೆಯ ಬದಲಾಗಿ ತಾಂಬೂಲ ಹಾಕಲು ಬಳಸಬಹುದಂತೆ ಎಂಬ ಮಾತಂತೂ ನನಗೆ ಹೊಸದು. ಆಗಾಗ ಹಬ್ಬ ಹಾಗೂ ಮನೆಯ ವಿಶೇಷ ಕಾರ್‍ಯಕ್ರಮಗಳಲ್ಲಿ ಮನೆಯ ಅಡಿಕೆ ಹಾಗೂ ಅದೇ ಮರಕ್ಕೆ ಹಬ್ಬಿದ್ದ ವೀಳ್ಯದೆಲೆಗೆ ಸುಣ್ಣ ಹಚ್ಚಿ ಬಾಯಿ ಕೆಂಪು ಮಾಡಿಕೊಳ್ಳುವ ನೀವು ದುರಾಭ್ಯಾಸವೆಂದರೆ ದುರಭ್ಯಾಸ, ಆರೋಗ್ಯಕರ ಎಂದರೆ ಆರೋಗ್ಯಕರವಾದ ನನ್ನ ಕವಳ ಹಾಕುವ ಚಟ ನೆನಪಿಗೆ ಬಂದು, ಈ ಬಾಡಿಗೆ ಮನೆಯಲ್ಲಿ ಹೊತ್ತಲ್ಲದ ಹೊತ್ತಲ್ಲಿ ಕವಳ ಹಾಕಲಾಗದು ಎಂದು ಪರಿತಪಿಸುವಂತಾಗಿದ್ದು ಸುಳ್ಳಲ್ಲ.    ಅಂದಹಾಗೆ ಕಾಳಿನದಿ ಕಣಿವೆಯ ಶಿವಪುರ ಎಂಬ ಹಳ್ಳಿಯ ಬಾಗಿನಗದ್ದೆಯ ಅಡಕೆ ತೋಟದ ಪಕ್ಕದಲ್ಲಿರುವ ಹಾಲೆ ಮರದಡಿಯಲ್ಲಿ ಇಟ್ಟ ವೀಳ್ಯದ ಎಲೆ ವರ್ಷವಾದರೂ ಬಾಡುವುದಿಲ್ಲವಂತೆ. ಈ ಹಾಲೆ ಮರವನ್ನು ದೇವರ ಮರ ಎಂದು ಪೂಜಿಸುತ್ತಾರೆ ಆ ಭಾಗದವರು. ಆ ಮರದ ಬುಡದಲ್ಲಿ ಎಡೆಯಿಟ್ಟ ವೀಳ್ಯದ ಎಲೆಗಳು ಬೇರು ಬಿಟ್ಟು ಬಳ್ಳಿಗಳಾಗಿ ಆ ಮರಕ್ಕೇ ಹಬ್ಬಿಕೊಂಡಿದೆಯಂತೆ. ದೇವ-ದಾನವರು ಸಮುದ್ರ ಕಡೆದು ಸಿಕ್ಕ ಅಮೃತ ಕುಡಿದ ನಂತರ ಹೆಚ್ಚಾದ ಅಮೃತವನ್ನು ಗಜರಾಜನ ಕಂಬದ ಕೆಳಗಿಟ್ಟಿದ್ದರಂತೆ. ಆದರೆ ಗಜರಾಜ ಮದವೇರಿ ಆ ಅಮೃತದ ಕಲಶವನ್ನು ಒಡೆದನಂತೆ. ಹೀಗಾಗಿ ಆ ಒಡೆದ ಕಲಶ ಒಡೆದಲ್ಲಿ ಅಮೃತ ಚೆಲ್ಲಿ ಬೆಳೆದ ಬಳ್ಳಿಯೇ ನಾಗವಲ್ಲಿ ಅಂದರೆ ವೀಳ್ಯದ ಎಲೆ ಬಳ್ಳಿಗಳಂತೆ. ಅಂತೂ ಕವಳ ತಿನ್ನುವ ನನ್ನ ರೂಢಿ ಕೆಟ್ಟದ್ದಲ್ಲ ಎಂದು ಸಿಕ್ಕಾಗಲೆಲ್ಲ ಕವಳ ಹಾಕಿಯೇ ಮಾತಿಗೆ ತೊಡಗುವ ಶಿವಾನಂದ ಹೆಗಡೆಯವರು ಹೇಳಿ ನನ್ನ ದುಗುಡ ಕಡಿಮೆ ಮಾಡಿದ್ದಾರಾದರೂ ಹಾಲೆಮರ ಎಂದು ಕರೆಯಿಸಿಕೊಳ್ಳುವ ಸಪ್ತಪರ್ಣಿಯನ್ನು ಕಡಿದು ಆ ಮನೆತನವೇ ಊರು ಬಿಟ್ಟಿದ್ದು, ಅಲ್ಲಿನ ವೀಳ್ಯದ ಬಳ್ಳಿಗಳೂ ಒಣಗಿ ಹೋಗಿದ್ದನ್ನು ಹೇಳಿ ಒಂದಿಷ್ಟು ಚಿಂತೆಯನ್ನೂ ಜೊತೆಗೆ ಅದ್ಯಾವ ಕಾರಣಕ್ಕೆ ಹಾಗೆ ಆಗಿರಬಹುದು ಎನ್ನುವ ಕುತೂಹಲ ಮೂಡಿಸಿದ್ದಾರೆ. ನನ್ನ ಮುಂದಿನ ಕಾಡಿನ ವಾಸ ಕಂಡಿತಾ ಶಿಪುರದ ಸಮೀಪಕ್ಕೆ ನನ್ನನ್ನು ಕೊಂಡೊಯ್ಯಬಹುದು. ಯಾಕೆಂದರೆ ಈ ಹಾಲೆ ಮರದ ತೊಗಟೆಯನ್ನು ತಂದು ಕುದಿಸಿ ದೀಪಾವಳಿಯ ದಿನ ಬೆಳ್ಳಂಬೆಳಿಗ್ಗೆ ಮೈ ತುಂಬ ಅರಶಿಣ ಎಣ್ಣೆ ಲೇಪಿಸಿಕೊಂಡು ಹಾಲೆ ಕಷಾಯ ಕುಡಿಯುವ ಸಂಪ್ರದಾಯ ನಮ್ಮ ಜನಾಂಗದಲ್ಲಿದೆ. ಹೀಗಾಗಿ ಹಾಲೆ ಮರದ ತೊಗಟೆ ತೆಗೆಯುವ ಈ ಶತಮಾನಗಳ ಆಚರಣೆಯ ಬಗ್ಗೆ ಒಂದಿಷ್ಟು ಭಯವೂ ಹುಟ್ಟಿಕೊಂಡಿದೆ.    ನಾನು ಹಿಂದೆ ಬಾಡಿಗೆಗೆ ಇದ್ದ ಮನೆಯ ಎರಡು ಮನೆಗಳ ಆಚೆ ಒಂದು ವೃದ್ಧ ಜೋಡಿಯಿತ್ತು. ಆತ ಸೈನ್ಯದಲ್ಲಿದ್ದು ನಿವೃತ್ತಿ ಹೊಂದಿದವರು. ಹೀಗಾಗಿ ತೀರಾ ಕಟ್ಟುನಿಟ್ಟು. ಯಾರೊಡನೆಯೂ ಹೆಚ್ಚಿನ ಮಾತಿಲ್ಲ. ಅಷ್ಟು ದೊಡ್ಡ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇರುತ್ತಿದ್ದುದು. ಬೆಳಿಗ್ಗೆ ನಾನು ಶಾಲೆಗೆ ಹೋಗುವಾಗ ಇಬ್ಬರೂ ಮನೆಯ ಅಂಗಳದಲ್ಲಿ ಖುರ್ಚಿ ಹಾಕಿಕೊಂಡು ಎದುರಿಗೆ ಬಿದ್ದ ದೊಡ್ಡ ಬಯಲನ್ನು ನೋಡುತ್ತ ಕುಳಿತಿರುತ್ತಿದ್ದರು. ಸಂಜೆ ಬಂದಾಗಲೂ ಬಹುತೇಕ ಅಲ್ಲಿಯೇ ಇರುತ್ತಿದ್ದರು. ಅಥವಾ ಆತ ಅಲ್ಲೇ ಅಂಗಳದಲ್ಲಿ ವಾಕ್ ಮಾಡುತ್ತಿದ್ದರೆ ಹೆಂಡತಿ ಅದೇ ಭಂಗಿಯಲ್ಲಿ ಕುಳಿತಿರುತ್ತಿದ್ದರು. ಕೆಲವೊಮ್ಮೆ ಮಧ್ಯಾಹ್ನ ಊಟಕ್ಕೆಂದು ನಾನು ಮನೆಗೆ ಬಂದಾಗಲೂ ಅವರು ಅಲ್ಲಿಯೇ. ಇವರಿಬ್ಬರು ಅಡುಗೆ, ಊಟ ಏನಾದರೂ ಮಾಡ್ತಾರೋ ಇಲ್ಲವೋ ಎಂಬ ಅನುಮಾನ ಆಗುತ್ತಿತ್ತು ಆಗಾಗ. ಆದರೆ ಅಕ್ಟೋಬರ್ ರಜೆ ಮುಗಿಸಿ ನಾನು ಶಾಲೆಗೆ ಹೋಗುವ ಹೊತ್ತಿನಲ್ಲಿ ಅವರಿಬ್ಬರಲ್ಲೂ ಅದೆಂಥಹ ಬದಲಾವಣೆಯಾಗುತ್ತಿತ್ತು ಎಂದರೆ ಅವರ ಮನೆಯ ಮುಂದಿನ ಜಾಗ ರಸ್ತೆಯೋ ಪಕ್ಷಿ ಸಾಕಾಣಿಕಾ ಕೇಂದ್ರವೋ ಎನ್ನುವ ಅನುಮಾನ ಹುಟ್ಟಿಸಿಬಿಡುತ್ತಿತ್ತು. ಮನೆಯ ಮುಂದೆ ದೊಡ್ಡ, ಅಗಲವಾದ ನೀರಿನ ಮಡಕೆಯೊಂದನ್ನು ಇಡುತ್ತಿದ್ದರು. ನೀರು ಕುಡಿಯಲು ಹಕ್ಕಿಗಳ ದಂಡೇ ಆಗಮಿಸುತ್ತಿತ್ತು. ನವೆಂಬರ ತಿಂಗಳ ಮುಸುಗುಡುವ ಚಳಿಯಲ್ಲಿ ನಾನು ಏಳಲಾಗದೇ ಎದ್ದು ವಾಕಿಂಗ್ ಹೋಗುವಾಗ ಆ ನೀರಿನ ಮಡಿಕೆಯ ಎದುರು ನಾಲ್ಕಾರು ನವಿಲುಗಳೂ ಇರುತ್ತಿದ್ದವು. ಶಿವಾನಂದ ಕಳೆಯವರ ಪುಸ್ತಕದಲ್ಲಿ ಹೀಗೆ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗಾಗಿ ನೀರನ್ನಿಡುವ ಪ್ರಸ್ತಾಪ ಹಲವಾರು ಸಾರಿ ಓದಿದಾಗ ನನಗೆ ನೆನಪಾಗಿದ್ದು ಅದೇ ವೃದ್ಧ ದಂಪತಿಗಳು.ಆ ಹಕ್ಕಿಗಳನ್ನು ನೋಡುತ್ತ ಅವರು ಪರವಶರಾಗುತ್ತಿದ್ದುದು ನನಗೀಗಲೂ ನೆನಪಿದೆ. ಕಾಲು ನೋವಿನಿಂದ ಒದ್ದಾಡುತ್ತ ಕುಳಿತಲ್ಲಿಂದ ಎದ್ದು ಓಡಾಡಲು ಹರಸಾಹಸ ಪಡುತ್ತಿದ್ದ ಆಕೆಯಂತೂ ಮಡಿಕೆಯಲ್ಲಿ ನೀರು ಒಂದಿಷ್ಟು ಖಾಲಿಯಾದರೂ ಸಾಕು ಬೇಗ ಬೇಗ ನೀರು ತಂದು ಹಾಕುತ್ತಿದ್ದರು. ಮೊಮ್ಮಕ್ಕಳು ಬಂದಾಗಲೂ ಆಕೆ ಹೀಗೆ ಓಡಾಡಿದ್ದನ್ನು ನಾನು ನೋಡಿರಲಿಲ್ಲ.  ಬಾವಿಗೆ ಬಿದ್ದ ಚಿರತೆಯನ್ನು ಎತ್ತಿದ ಪ್ರಸಂಗ, ಹಾಗೂ ಅದೇ ಸಮಯದಲ್ಲಿ ಮೂರನೇ ತರಗತಿಯನ್ನೂ ಕಲಿಯದ ಹಿರಿಯೊಬ್ಬರು ಹೇಳಿದ ಪರಿಸರ ಪಾಠವನ್ನು ನಿಜಕ್ಕೂ ಎಲ್ಲರೂ ಅರ್ಥ ಮಾಡಿಕೊಳ್ಳುವಂತಿದ್ದರೆ ಬಹುಶಃ ನಾವಿಂದು ಪ್ರಾಣಿಗಳನ್ನು ರಕ್ಷಿಸಿ ಎಂಬ ಸ್ಲೋಗನ್‌ಗಳನ್ನು ಹಿಡಿದು ನಮ್ಮ ಶಾಲಾ ಮಕ್ಕಳನ್ನು ಮೆರವಣಿಗೆ ಹೊರಡಿಸುವ ಅಗತ್ಯವಿರಲಿಲ್ಲ.    ನನ್ನ ಆತ್ಮೀಯ ಗೆಳೆಯನೊಬ್ಬನಿಗೆ ಬದನೆ ಕಾಯಿ, ಬಟಾಟೆ ಬೆಂಡೆಕಾಯಿಗಳನ್ನು ತಿಂದರೆ ಮೈಯ್ಯೆಲ್ಲ ಚಿಕ್ಕ ಚಿಕ್ಕ ಗುಳ್ಳೆ ಎದ್ದು ತುರಿಕೆ ಪ್ರಾರಂಭವಾಗುತ್ತದೆ. ನಾವು ಬೆಂಡೆಗೆ, ಬದನೆಗೆ ಹಾಗೂ ಅತೀವ ತುರಿಕೆ ಹುಟ್ಟಿಸುವ ಕೆಸುವಿನ ಎಲೆ, ಗಡ್ಡೆಯ ಬಾಯಲ್ಲಿ ನೀರೂರಿಸುವ ವಿವಿಧ ಭಕ್ಷ್ಯಗಳಿಗೆ, ಸುವರ್ಣ ಗಡ್ಡೆ ಎನ್ನುವ ಅತ್ಯಪೂರ್ವ ಗಡ್ಡೆಗೆ ನಮ್ಮದೇ ಆದ ವಾಟೆಹುಳಿ ಬೆರೆಸುತ್ತೇವೆ, ಮೊನ್ನೆ ‘ಬೆಂಡೆಗೆ ಮುರುಗಲು ಹುಳಿಯನ್ನೇ ಹಾಕು ಅದರ ಲೋಳೆ ಕಡಿಮೆಯಾಗಿ ತುರಿಕೆ ಇರುವುದಿಲ್ಲ’ ಎಂದು ಅಮ್ಮ ಹೇಳುತ್ತಿದ್ದರು. ಇದನ್ನೇ ನಾನು ನನ್ನ ಸ್ನೇಹಿತನಿಗೂ ಹೇಳುತ್ತಿದ್ದೆ. ಕೋಕಂ ಸಿಪ್ಪೆ ಇಟ್ಕೋಬೇಕು. ತುರಿಕೆ ಆದಾಗಲೆಲ್ಲ ನೀರಲ್ಲಿ ಹಿಚುಕಿ ಆ ನೀರು ಕುಡಿದು ಅದರ ಸಿಪ್ಪೆಯನ್ನು ತುರಿಕೆ ಎದ್ದ ಚರ್ಮಕ್ಕೆ ತಿಕ್ಕಿದರೆ ನಾವು ಪೈಥಿ ಎನ್ನುವ ಗುಳ್ಳೆ ಏಳುವ ಈ ತರಹದ ಅಲರ್ಜಿ ಕಡಿಮೆಯಾಗುತ್ತದೆಯೆಂದು. ಬಯಲು ಸೀಮೆಯ ಆತನಿಗೆ ನಾವು ಮುರುಗಲು ಅಥವಾ ಪುನಿರ್‌ಪುಳಿ ಎಂದು ಕರೆಯುವ ಕೋಕಂನ ಪರಿಚಯವಿಲ್ಲ. ಹೀಗಾಗಿ ಅದರ ಬಳಕೆಗೂ ಹಿಂದೇಟು ಹಾಕುವುದು ಸಹಜವೇ.  ಕಾಡು ಕಲಿಕೆಗೆ ನೂರಾರು ದಾರಿಗಳು ಲೇಖನ ನನ್ನ ಈ ಔಷಧಿಯ ಹುಳಿಯ ನಿಜಾಯತಿಯನ್ನು ಸಿದ್ಧಪಡಿಸಿದ್ದಕ್ಕಾಗಿ ಖುಷಿಯಾಯಿತು. ಕೆಸುವಿನ ಎಲೆ ತಿಂದು ತುರಿಕೆಯ  ಕಾರಣದಿಂದಾಗಿ ಅರ್ಧ ನಾಲಿಗೆ ಹೊರಚಾಚಿ ಉಸಿರಾಟಕ್ಕೆ ಸಂಕಷ್ಟ ಪಡುತ್ತಿದ್ದ ಆಕಳ ಕರುವಿಗೂ ಹೂಳಿ ತಿನ್ನಿಸಿ ಬದುಕಿಸಿದ ಕಥೆಯಿದೆ. ಸನೈಡ್‌ನಷ್ಟು ತೀಕ್ಷ್ಣವಾದ ವಿಷದ ನೀರು ಬಿಡುವ ಕಳಲೆಯನ್ನೂ ಆಹಾರ ಯೋಗ್ಯವನ್ನಾಗಿ ಮಾಡಿಕೊಂಡಿರುವ ಹಳ್ಳಿಗರ ವೈಶಿಷ್ಟ್ಯತೆಯನ್ನು ಕಳವೆಯವರು ವಿವರಿಸುತ್ತ ಯಾವ ಪಾಕತಜ್ಞರಾಗಲಿ, ವಿಜ್ಞಾನಿಗಳಾಗಲಿ ವಿವರಿಸಿದ ಪಾಠ ಇದಲ್ಲ ಎನ್ನುತ್ತಾರೆ. ಇಂತಹುದ್ದೇ ಉಪ್ಪಾಗೆ ಹುಳಿಗೆ ಒಂದು ಕಾಲದಲ್ಲಿ ಕೆಜಿಗೆ ಐನೂರು, ಆರು ನೂರು ರೂಪಾಯಿಗಳಾಗಿ, ಒಂದು ಹಂತದಲ್ಲಿ ಸಾವಿರ ರೂಪಾಯಿಯವರೆಗೂ ಹೋಗಿದ್ದನ್ನು ಚಿಕ್ಕಂದಿನಲ್ಲಿ ಗಮನಿಸಿದ್ದೇನೆ. ಉಪ್ಪಾಗೆ ಕಾಯನ್ನಷ್ಟೇ ಕೊಯ್ಯುವ ಬದಲು, ರೆಂಬೆಕೊಂಬೆಗಳನ್ನೆಲ್ಲ ಕಡಿದು, ಉಪ್ಪಾಗೆ ಸಸ್ಯದ ಅವನತಿಗೆ ಕಾರಣವಾಗಿದ್ದೂ ಗೊತ್ತಿದೆ. ಇಂದಿಗೂ ದೇಹದ ಉಷ್ಣತೆಗೆ, ಕೈಕಾಲು ಬಿರುಕಿಗೆ ಬಳಸುವ ಮುರುಗಲು ತುಪ್ಪ ಹಾಗೂ ದೇಹದ ತೂಕ ಇಳಿಸುತ್ತದೆಯೆಂದು ನಾನು ಹುಡುಕುತ್ತಿರುವ ಉಪ್ಪಾಗೆ ತುಪ್ಪ ಈಗ ಅಪರೂಪದ ವಸ್ತುವಾಗಿದೆ ನಮ್ಮ ಆಧುನಿಕತೆಯಿಂದಾಗಿ.         ಶಿವಾನಂದ ಕಳವೆಯವರ ಜಲಜಾಗ್ರತಿ ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಕೆರೆಗಳ ಸಂರಕ್ಷಣೆಗಾಗಿ ಇಡೀ ಕರ್ನಾಟಕದಾದ್ಯಂತ ಓಡಾಡಿ ಅನೇಕ ಕೆರೆಗಳ ಪುನರುತ್ಥಾನ ಮಾಡಿದ್ದು ಗೊತ್ತಿದೆ. ಇಲ್ಲಿ ಜಲಜಾಗ್ರತಿಯ ಬಗ್ಗೆ ಹೇಳಿದ್ದಾರೆ, ಪರಿಸರದ ಕುರಿತಾಗಿ ಭಾಷಣ ಮಾಡಿ, ಕ್ವಿಜ್ ಏರ್ಪಡಿಸಿ, ಸೆಮಿನಾರ್‌ಗಳನ್ನು ಮಾಡುವ ಬದಲು ಒಂದಿಷ್ಟು ಗಿಡನೆಟ್ಟು ಬೆಳೆಸಬೇಕಾದ ಅನಿವಾರ್‍ಯತೆಯನ್ನು ಒತ್ತಿ ಹೇಳಿದ್ದಾರೆ. ಓಡುವ ಮಳೆ ನೀರನ್ನು ನಿಲ್ಲಿಸಿದರೆ ಅದು ಕಾಡಿನ ಬಣ್ಣವನ್ನು ಹಚ್ಚಹಸಿರಾಗಿಸುವ, ಬಣ್ಣ ಬಣ್ಣದ ಹೂಗಳಿಂದ ಶೃಂಗರಿಸುವ ಪರಿಯನ್ನು ವಿವರಿಸಿದ್ದಾರೆ. ಮುಂಡುಗೋಡದ ಪಾಳಾ ಎಂಬ ಬಯಲಿನಲ್ಲಿ ಮಾವಿನ ತೋಟ ಮಾಡಿಸಿದ ಅಪ್ಪಾರಾಯರ ಬಗ್ಗೆ ಹೇಳಿ ಗಿಡ ಬೆಳೆಸುವುದು ನಮ್ಮೆಲ್ಲರ ಕಾಯಕವಾಗಬೇಕು

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಗೂಡಂಗಡಿಯ ತಿರುವು ಬದುಕು ಎನ್ನುವುದು ಕುದಿಯುತ್ತಿರುವ ಹಾಲಿನಂತೆ. ಚೆಲ್ಲಿಹೋಗದಂತೆ ಕಾಪಾಡುವುದು ಬೆಂಕಿಯ ಕರ್ತವ್ಯವೋ, ಪಾತ್ರೆಯ ಜವಾಬ್ದಾರಿಯೋ ಅಥವಾ ಮನೆಯೊಡತಿಯ ಉಸ್ತುವಾರಿಯೋ ಎಂದು ಯೋಚಿಸುವುದು ನಿರರ್ಥಕವಾದೀತು! ಕುದಿಯುವುದು ಹಾಲಿನ ಕರ್ತವ್ಯವಾದರೆ, ಆ ಕ್ರಿಯೆ ಅಪೂರ್ಣವಾಗದಂತೆ ಮುತುವರ್ಜಿ ವಹಿಸುವುದು ಮಹತ್ತರವೆನ್ನಬಹುದಾದಂತಹ ಕೆಲಸ. ಬದುಕು ಎನ್ನುವ ಕಾಯಕ ಪರಿಪೂರ್ಣವಾಗುವುದೇ ಅದಕ್ಕೆ ಸಂಬಂಧಪಟ್ಟ ಕ್ರಿಯೆ-ಪ್ರಕ್ರಿಯೆಗಳ ನಿರಂತರತೆಯಲ್ಲಿ. ಮಣ್ಣಿನ ಒಡಲಿನಲ್ಲಿ ಬೇರು ಬಿಡುವ ಬೀಜ ಬೆಳಕಿನಾಶ್ರಯದಲ್ಲಿ ಕುಡಿಯೊಡೆವ ಕ್ಷಣದಲ್ಲಿ ಸದ್ದಿಲ್ಲದೆ ಬಿದ್ದ ಮಳೆಹನಿಯೊಂದು ಜೀವಜಲವಾಗಿ ಹರಿದು ಚಂದದ ಹೂವನ್ನರಳಿಸುತ್ತದೆ; ಎಲ್ಲಿಂದಲೋ ಹಾರಿಬಂದ ಬಣ್ಣದ ರೆಕ್ಕೆಗಳ ಪಾತರಗಿತ್ತಿಯೊಂದು ಅರಳಿದ ಹೂವಿನ ಮೇಲೆ ಕುಳಿತು ಬಿಸಿಲುಕಾಯಿಸುತ್ತದೆ. ಹೀಗೆ ಬದುಕು ಎನ್ನುವುದು ಒಮ್ಮೆ ಕುದಿಯುತ್ತ, ಮರುಕ್ಷಣ ಚಿಗುರುತ್ತ, ಮತ್ತೊಮ್ಮೆ ಮುಕ್ತ ಛಂದಸ್ಸಿನ ಕವಿತೆಯಾಗಿ ನಮ್ಮೆದುರು ತೆರೆದುಕೊಳ್ಳುತ್ತದೆ.           ಬದುಕು ಚಿಗುರೊಡೆಯುವುದೇ ಅದು ಕಟ್ಟಿಕೊಡುತ್ತ ಹೋಗುವ ಚಿಕ್ಕಪುಟ್ಟ ಖುಷಿ-ನೆಮ್ಮದಿಗಳ ಕಾಂಪೌಂಡಿನ ಸಹಯೋಗದಲ್ಲಿ. ಬೆಳಗ್ಗೆ ಕಣ್ಣುಬಿಟ್ಟಾಗ ಅಡುಗೆಮನೆಯ ಪುಟ್ಟ ಡಬ್ಬದಲ್ಲಿ ಬೆಚ್ಚಗೆ ಕುಳಿತಿರುವ ಕಾಫಿಪುಡಿ-ಸಕ್ಕರೆಗಳೇ ಇಡೀದಿನದ ಸಂತೋಷವನ್ನು ಸಲಹಲು ಸಾಕಾಗಬಹುದು; ಮಧ್ಯಾಹ್ನದ ಬಿಸಿಲಿಗೊಂದು ತಣ್ಣನೆಯ ತಿಳಿಮಜ್ಜಿಗೆಯ ಗ್ಲಾಸು ದೊರಕಿ ನೆಮ್ಮದಿಯ ನಗುವನ್ನು ಅರಳಿಸಬಹುದು; ರಸ್ತೆಯಂಚಿನ ಹೊಂಗೆಮರದಲ್ಲೊಂದು ಹಕ್ಕಿ ಅದ್ಯಾವುದೋ ಅಪರಿಚಿತ ರಾಗದಲ್ಲಿ ಹಾಡುತ್ತ ಹೃದಯದಲ್ಲೊಂದು ಪ್ರೇಮರಾಗವನ್ನು ಹುಟ್ಟಿಸಿ ಮುದ ನೀಡಬಹುದು; ಪಕ್ಕದ ಮನೆಯ ಟೆರೇಸಿನಲ್ಲೊಬ್ಬಳು ಪುಟ್ಟ ಪೋರಿ ಕಷ್ಟಪಟ್ಟು ಗಾಳಿಪಟವನ್ನು ಹಾರಿಸುತ್ತ ಬಾಲ್ಯದ ನೆನಪುಗಳಿಗೊಂದು ರೆಕ್ಕೆ ಕಟ್ಟಿಕೊಡಬಹುದು; ಶಾಲೆ ಮುಗಿಯುತ್ತಿದ್ದಂತೆಯೇ  ತಳ್ಳುಗಾಡಿಯಲ್ಲಿ ನಗುನಗುತ್ತ ಕೊತ್ತಂಬರಿಸೊಪ್ಪು ಮಾರುವ ಪುಟ್ಟ ಹುಡುಗ ಸುಖ-ನೆಮ್ಮದಿಗಳ ಪರಿಕಲ್ಪನೆಯನ್ನೇ ಬದಲಾಯಿಸಬಹುದು. ಹೀಗೆ ನೋಟಕ್ಕೆ ದಕ್ಕುವ, ದಕ್ಕದೆಯೂ ತಾಕುವ ಸರಳವೆನ್ನಿಸುವ ಸಂಗತಿಗಳೇ ಒಟ್ಟಾಗಿ ಬದುಕು ಎನ್ನುವ ಬಹುದೊಡ್ಡ ಭಾರವನ್ನು ಹಗುರಗೊಳಿಸುತ್ತ, ಸಹ್ಯವಾಗಿಸುತ್ತ ಸಾಗುತ್ತವೆ.           ಬದುಕಿನ ಭಾರವನ್ನು ಇಳಿಸುತ್ತ ಹೋಗುವ ಕ್ರಿಯೆಯಲ್ಲಿ ಹುಟ್ಟಿಕೊಳ್ಳುವ ಅನುಭವಗಳೆಲ್ಲವೂ ಸುಂದರವೆನ್ನಿಸುವುದು ಅವು ನಮ್ಮದಾಗುತ್ತ ಹೋಗುವ ಗಳಿಗೆಗಳಲ್ಲಿ. ಚಳಿಗಾಲದ ಮುಂಜಾವಿನಲ್ಲಿ ರಸ್ತೆಬದಿಯ ಚಹದಂಗಡಿಯ ಎದುರು ನಿಂತು ಅಂಗೈಗಳನ್ನು ಉಜ್ಜಿಕೊಳ್ಳುತ್ತ, ಉಸಿರು ಬಿಗಿಹಿಡಿದು ಚಹಕ್ಕಾಗಿ ಕಾದು ನಿಂತವರನ್ನು ನೋಡುವುದೇ ಒಂದು ಸುಂದರವಾದ ಅನುಭವ. ಆ ಕ್ಷಣದ ಅವರೆಲ್ಲರ ಬದುಕು ಒಲೆಯ ಮೇಲಿನ ನೀರಿನ ಪಾತ್ರೆಯಲ್ಲಿ ಕುದಿಯುತ್ತಿರುವ ಟೀ ಪೌಡರಿನಂತೆ ಚಡಪಡಿಸುತ್ತದೆ. ರಾತ್ರಿ ಬಿದ್ದ ಕೆಟ್ಟ ಕನಸಾಗಲೀ, ಕ್ಲೈಂಟ್ ಮೀಟಿಂಗ್ ಶುರುವಾಗುವುದರೊಳಗೆ ಆಫೀಸು ಸೇರಬೇಕಾದ ಗಡಿಬಿಡಿಯಾಗಲೀ, ತಪ್ಪದೇ ತಪಾಸಣೆ ಬಯಸುವ ಸಕ್ಕರೆ ಕಾಯಿಲೆಯಾಗಲೀ, ಮಗನನ್ನು ಟ್ಯೂಷನ್ ಕ್ಲಾಸಿಗೆ ಮುಟ್ಟಿಸುವ ಧಾವಂತವಾಗಲೀ ಯಾವುದೂ ಅವರ ಆ ಕ್ಷಣದ ಬದುಕನ್ನು ಬಾಧಿಸುವುದಿಲ್ಲ. ಕದ್ದು ಸಿಗರೇಟು ಸೇದಲು ಕಲಿತ ಕಾಲೇಜು ಓದುತ್ತಿರುವ ಹುಡುಗನಿಂದ ಹಿಡಿದು ರಿಟೈರಮೆಂಟಿನ ಸುಖವನ್ನು ಅನುಭವಿಸುತ್ತಿರುವ ಗೆಳೆಯರ ಗುಂಪಿನವರೆಗೆ ಎಲ್ಲರ ದೃಷ್ಟಿಯೂ ಒಲೆಯ ಮೇಲಿನ ಪಾತ್ರೆಯ ಮೇಲೆ ಕೇಂದ್ರೀಕೃತವಾಗಿ, ಅವರೆಲ್ಲರ ಬದುಕು ಒಂದೇ ಆಗಿಬಿಡುವ ಅನುಭವವನ್ನು ಚಹಾದ ಪಾತ್ರೆ ಒದಗಿಸುತ್ತದೆ. ಆ ಗೂಡಂಗಡಿಯ ಬದುಕಿನ ವ್ಯಾಪಾರದಲ್ಲಿ ಅಪ್ಪ ಕೊಟ್ಟ ಪಾಕೆಟ್ ಮನಿಗೂ, ದಿನಗೂಲಿಯ ಮುದ್ದೆಯಾದ ನೋಟಿಗೂ, ನಾಲ್ಕಂತಸ್ತಿನ ಮನೆಯ ನೆಮ್ಮದಿಯ ಹಣಕಾಸಿನ ವ್ಯವಹಾರಕ್ಕೂ ಯಾವ ವ್ಯತ್ಯಾಸವೂ ಇರುವುದಿಲ್ಲ; ಕಾದು ನಿಂತವರೆಲ್ಲರಿಗೂ ಒಂದೇ ಬಣ್ಣ-ರುಚಿಗಳ ಚಹಾದ ಪೂರೈಕೆಯಾಗುತ್ತದೆ.           ಬದುಕಿನ ವ್ಯಾಪಾರಗಳೆಲ್ಲವೂ ಹಾಗೆಯೇ! ಬೆಳಗಾಗುತ್ತಿದ್ದಂತೆಯೇ ಬಾಗಿಲು ತೆರೆವ ಹೂವಿನಂಗಡಿಯ ಮಲ್ಲಿಗೆ ಮಾಲೆಯೊಂದು ಪಕ್ಕದಲ್ಲಿಯೇ ಇರುವ ದೇವರ ಮೂರ್ತಿಯ ಮುಡಿಗೇರಬಹುದು; ದೊಡ್ಡದೊಂದು ಪ್ಲಾಸ್ಟಿಕ್ ಕವರಿನಲ್ಲಿ ರಾಶಿಬಿದ್ದ ಸಂಪಿಗೆಹೂಗಳು ಮುಷ್ಟಿ ತುಂಬಿ ಕಾಗದದ ಪೊಟ್ಟಣದಲ್ಲಿ ಸ್ಕೂಟರನ್ನೇರಬಹುದು; ಕೆಂಪು ಗುಲಾಬಿಗಳ ಗುಚ್ಛವೊಂದು ಐಟಿ ಪಾರ್ಕಿನ ಹೂದಾನಿಯಲ್ಲಿ ಕುಳಿತು ಒಳಗೆ ಬಂದವರನ್ನು ಸ್ವಾಗತಿಸಬಹುದು; ರಾತ್ರಿಯಾಗುತ್ತಿದ್ದಂತೆ ಅಂಗಡಿಯಲ್ಲೇ ಉಳಿದುಹೋದ ಹೂಗಳೆಲ್ಲ ಮುಚ್ಚಿದ ಬಾಗಿಲುಗಳ ಹಿಂದೆ ಬಾಡಿಹೋಗುವ ಭಯದಲ್ಲಿ ಬದುಕಬಹುದು. ಒಮ್ಮೊಮ್ಮೆ ಎಲ್ಲವೂ ಪೂರ್ವನಿಶ್ಚಯವಾದಂತೆ ಭಾಸವಾಗಿ, ಮರುಕ್ಷಣವೇ ಎಲ್ಲ ಅನಿಶ್ಚಿತತೆಗಳ ಅಸ್ಪಷ್ಟ ನೆರಳುಗಳಂತೆ ಜಾಗ ಬದಲಾಯಿಸುವ ಬದುಕು ತನ್ನದೇ ಮಾರ್ಗ ಹಿಡಿದು ಮನಬಂದಂತೆ ಚಲಿಸುತ್ತದೆ. ಆ ಚಲನೆಯಲ್ಲೊಂದು ಹವಾಯಿ ಚಪ್ಪಲಿ ಸೂರ್ಯಾಸ್ತ ನೋಡಲೆಂದು ಬೆಟ್ಟದ ತುದಿಯನ್ನೇರಿ ಕುಳಿತಿರಬಹುದು; ಒಣಗಿದ ಎಲೆಯೊಂದು ಹೊಳೆಯ ಹರಿವಿನಲ್ಲಿ ಒಂದಾಗಿ ಇಳಿಜಾರಿನೆಡೆಗೆ ಚಲಿಸುತ್ತಿರಬಹುದು; ಸೈಕಲ್ಲಿನಲ್ಲೊಬ್ಬ ಐಸ್ ಕ್ರೀಮು ಮಾರುವವ ಬಾಲ್ಯದ ನೆನಪುಗಳಿಗೆ ತಣ್ಣನೆಯ ಸ್ಪರ್ಶ ನೀಡಬಹುದು; ಮುಗಿದುಹೋದ ಪ್ರೇಮದ ಹಾದಿಯ ಕವಲುದಾರಿಗಳುದ್ದಕ್ಕೂ ಗುಲ್ ಮೊಹರ್ ಗಿಡಗಳು ಮೈತುಂಬ ಹೂವರಳಿಸಿ ನಿಂತಿರಬಹುದು. ಹೀಗೆ ಎಲ್ಲ ಚಲನೆಗಳಿಗೂ ಹೊಸದೊಂದು ನೋಟವನ್ನು, ತಿರುವುಗಳನ್ನು ಒದಗಿಸುತ್ತ ಮುಂದೋಡುವ ಬದುಕು ನಿಂತಿದ್ದನ್ನು ಕಂಡವರಿಲ್ಲ.           ನೋಡುವ ಕಣ್ಣುಗಳಲ್ಲಿ ಹೊಸತನ-ಭರವಸೆಗಳನ್ನು ತುಂಬಿಕೊಳ್ಳಲು ಸಾಧ್ಯವಾದಾಗಲೆಲ್ಲ ಬದುಕು ಹೊಸಹೊಸ ನೋಟಗಳನ್ನು ಒದಗಿಸುತ್ತಲೇ ಇರುತ್ತದೆ. ಸಗಣಿ, ಒಣಹುಲ್ಲು, ತ್ಯಾಜ್ಯಗಳೇ ತುಂಬಿರುವ ಗೊಬ್ಬರಗುಂಡಿಯ ಅಂಚಿನಲ್ಲೊಂದು ಸೀತಾಫಲದ ಗಿಡ ಚಿಗುರುತ್ತಿರಬಹುದು; ಕಸದ ಗಾಡಿಯ ಹಸಿತ್ಯಾಜ್ಯಗಳ ರಾಶಿಯ ಮೇಲೊಂದು ಕಾಗೆ ಅನ್ನದ ಅಗುಳನ್ನು ಹೆಕ್ಕುತ್ತಿರಬಹುದು; ಪಾತ್ರೆಯ ತಳದಲ್ಲುಳಿದ ಚಹಾದ ಪುಡಿ ಗುಲಾಬಿ ಗಿಡದ ಬುಡವನ್ನು ಸೇರಿ ಹೊಸ ಹೂಗಳನ್ನರಳಿಸಬಹುದು; ಆಕ್ಸಿಡೆಂಟಿನಲ್ಲಿ ಮಗನನ್ನು ಕಳೆದುಕೊಂಡ ತಾಯಿಯೊಬ್ಬಳು ಸಾವಿನ ನೋವನ್ನು ಸಹಿಸಿಕೊಂಡು ನೈವೇದ್ಯಕ್ಕೆಂದು ಚಕ್ಕುಲಿ ಸುತ್ತುತ್ತಿರಬಹುದು. ಹೀಗೆ ಕುದಿವ ನೋವುಗಳು, ಒಣಗಿಹೋದ ಇರವುಗಳಿಗೆಲ್ಲ ಹೊಸ ಹೊಳಹುಗಳನ್ನು ಕರುಣಿಸುತ್ತ ಸಾಗುವ ಬದುಕಿನ ಪೆಟ್ಟಿಗೆಯಲ್ಲಿ ನೆನಪಿನ ಸುರುಳಿಯ ಕ್ಯಾಸೆಟ್ಟುಗಳು, ಸಂಬಂಧಗಳನ್ನು ಹಿಡಿದಿಟ್ಟ ಆಲ್ಬಮ್ಮುಗಳು, ಇತಿಹಾಸವನ್ನೇ ಕಟ್ಟಿಹಾಕುವಂತೆ ಕುಳಿತ ನಾಣ್ಯಗಳು ಎಲ್ಲವೂ ಸದ್ದುಮಾಡದೇ ಸ್ನೇಹ ಬೆಳಸಿಕೊಳ್ಳುತ್ತವೆ; ಗೋಡೆಯ ಮೇಲೊಂದು ಹಳೆಯ ಗಡಿಯಾರ ಸದ್ದುಮಾಡುತ್ತ ಚಲಿಸುತ್ತಿರುತ್ತದೆ.           ಹೀಗೆ ಬದುಕಿನ ಚಲನೆಗಳೆಲ್ಲವೂ ಒಮ್ಮೆ ಶಬ್ದ ಮಾಡುತ್ತ, ಮನಬಂದಾಗ ಮೌನವಾಗುತ್ತ, ನಗುನಗುತ್ತ ಹೆಜ್ಜೆಯಿಟ್ಟು ದಾರಿ ಸವೆಸುತ್ತವೆ. ಆ ದಾರಿಯ ಶುರುವಿನಲ್ಲೊಂದು ಬಾಣದ ಗುರುತಿನ ಬೋರ್ಡು ಎತ್ತಿಡುವ ಪ್ರತಿ ಹೆಜ್ಜೆಯನ್ನೂ ನಿರ್ಧರಿಸಬಹುದು; ದಾರಿಯ ಮಧ್ಯದಲ್ಲೊಂದು ತಿರುವು ಕಾಣಿಸಿಕೊಂಡು ಪೂರ್ವನಿಶ್ಚಿತ ಪಯಣವನ್ನೇ ಪ್ರಶ್ನಿಸಿಬಿಡಬಹುದು; ಇದ್ದಕ್ಕಿದ್ದಂತೆ ಎದುರಾದ ದಾರಿಹೋಕನೊಬ್ಬ ಆ ಕ್ಷಣದ ಎಲ್ಲ ಪ್ರಶ್ನೆಗಳ ಉತ್ತರವಾಗಿಬಿಡಬಹುದು; ಜೊತೆಗೆ ನಡೆದವರಲ್ಲೊಬ್ಬಿಬ್ಬರು ಮನಸಾರೆ ನಕ್ಕು ಕೈಹಿಡಿಯಬಹುದು; ಹಿಂತಿರುಗಿ ನೋಡಿದರೆ ಹಾದುಬಂದ ತಿರುವು ದೂರದಿಂದ ಕೈಬೀಸಿ ಬೀಳ್ಕೊಡಬಹುದು; ದಣಿವಾರಿಸಿಕೊಳ್ಳಲು ಕೊಂಚಹೊತ್ತು ಕಾಲುಚಾಚಿ ವಿರಮಿಸುವ ಹೊತ್ತು ಹಾದಿಬದಿಯ ಮರದ ಮೇಲೊಂದು ಮರಿಹಕ್ಕಿ ರೆಕ್ಕೆ ಬಲಿವ ಗಳಿಗೆಗಾಗಿ ಕಾಯುತ್ತಿರಬಹುದು; ಮುಂದಿನ ತಿರುವಿನಲ್ಲೊಂದು ಗೂಡಂಗಡಿಯ ಒಲೆಯ ಮೇಲೆ ಹಾಲು ಕುದಿಯುತ್ತಿರಬಹುದು! **************************** ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ ಚಿತ್ರಕೃಪೆ: ಶ್ರೀನಿಧಿ ಡಿ.ಎಸ್.

Read Post »

You cannot copy content of this page

Scroll to Top