ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಪ್ರೇಮಶೇಖರ

ಕವಿತೆಯೆಂದರೆ ಏನು?
ಏನಲ್ಲ?

ಕವಿತೆಯೆಂದರೆ ಕತ್ತಲೆ
ಬೆಳಕಿನಾಟ
ದ ಜೀವನರಂಗ
ಮಂಚ.

ಕವಿತೆಯೆಂದರೆ ಸಮುದ್ರ
ತೀರ
ದ ಸತ್ತ ಮೀನು
ಅರಳಿಸುವ ಮಲ್ಲಿಗೆ
ಸುವಾಸನೆ,

ಕವಿತೆಯೆಂದರೆ ಹೆಣ್ಣು
ನಾಗರ
ಇಟ್ಟ ನೂರೊಂದು ಮೊಟ್ಟೆ
ಗಳೊಡೆದು ಬಂದ
ನವಿಲುಗರಿಗಳು.

ಕವಿತೆಯೆಂದರೆ ಪ್ರೇಯಸಿ
ಕೊಟ್ಟ ಮುತ್ತು
ಒಡೆದುಹೋಗಿ
ಧಾರಾವಾಹಿಯಾದ ನಿರೀಕ್ಷೆ.

ಕವಿತೆಯೆಂದರೆ ಬೀಸಣಿಗೆ
ಯ ಬಣ್ಣದ ರೆಕ್ಕೆ
ಯ ಗಿಣಿಮರಿ
ಗೆ ಮಾತು ಕಲಿಸಹೊರಟ
ಮಗು.

ಕವಿತೆಯೆಂದರೆ ನಾಳೆ
ಹಾರಿ ಹೋಗುತ್ತದೆ
ಎಂದು ಗೊತ್ತಿದ್ದರೂ ಇಂದು
ಗುಟುಕು ನೀಡುವ
ತಾಯಿಹಕ್ಕಿ.

ಕವಿತೆಯೆಂದರೆ ಅಕ್ಷತಯೋನಿ
ಒಂಬತ್ತು ಹೆತ್ತು ಮೂಲೆಯಲ್ಲಿ
ಕೂತ ಅಡುಗೂಲಜ್ಜಿ
ಕತೆ.

ಕವಿತೆಯೆಂದರೆ ತಾಯಿ
ಹುಲ್ಲೆಯನು ಕೊಂದು
ತಿಂದು
ಎಳೆಹುಲ್ಲೆಗೆ ತಾಯಿ
ಯಾಗಿ ಹಾಲೂಡಿಸಿದ ಹೆಣ್ಣು
ಹುಲಿ.

ಕವಿತೆಯೆಂದರೆ
ಕೊನೆಗೂ ಏನುಂಟು?
ಏನಿಲ್ಲ?

ಅಹ್ ಕವಿತೆಯೇ ಅಂತಿಮ
ವಾಗಿ ನೀನೇ ಎಲ್ಲ,
ನಾನೆಲ್ಲೂ ಇಲ್ಲ.

**********************

About The Author

15 thoughts on “ಕವಿತೆಯೆಂದರೆ”

  1. ಆಹಾ…ಬಹಳ ಸೊಗಸಾಗಿದೆ ಸರ್..ಕವಿತೆ ಅಂದರೆ ಏನು? ಏನಲ್ಲ ? ಎಂಬುದರಿಂದ ಹಿಡಿದು ಎಲ್ಲ ಉಪಮೆಗಳಲ್ಲಿ ಹೊರಬಂದು , ಕೊನೆಯಲ್ಲಿ ನೀನೇ ಎಲ್ಲಾ… ಅದ್ಭುತ ಸಾಲುಗಳು

  2. ಜಯಶ್ರೀ. ಅಬ್ಬಿಗೇರಿ

    ಕೊನೆಯ ಸಾಲು ಮೊದಲಿನ ಎಲ್ಲ ಸಾಲುಗಳನು ನಿವಾಳಿಸಿ ಒಗೆದಂತಿದೆ
    ಅತಿ‌ ಸುಂದರ ‌

  3. ವಿದ್ಯಾ ಶ್ರೀ ಎಸ್ ಅಡೂರ್

    ಎಳೆ ಹುಲ್ಲೆಗೆ ಹಾಲುಣಿಸಿದ ಹೆಣ್ಣು ಹುಲಿ…… ವಾವ್ ಸರ್…. ನೀವು ಅದ್ಭುತ….

Leave a Reply

You cannot copy content of this page

Scroll to Top