ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಪ್ಪ

ಬಿದಲೋಟಿ ರಂಗನಾಥ್

ವಾತ್ಸಲ್ಯದ ಕೆನೆಕಟ್ಟಿ
ಅಪ್ಪನ ಕರಳು ಅರಳಿ
ಕಿರುಬೆರಳಿಡಿದು ನಡೆದ ಸ್ಪರ್ಶದ ಸುಖ
ಮೀಸೆ ಬಲಿತರೂ ಕಾಡುವ ನೆನಪು

ಊರ ಜಾತ್ರೆಯಲಿ
ಕನ್ನಡಕದೊಳಗಿನ ಕಣ್ಣು ಬರೆದ ಕವನ
ಮೌನದ ಮೆದು ಭಾಷೆಯಲಿ
ಹೃದಯ ತಟ್ಟಿ ಅವ್ವನ ನಿರರ್ಗಳ ಉಸಿರು

ದುಡ್ಡಿಲ್ಲದ ಅಪ್ಪನ ಜೇಬಿನಲಿ
ನೋವಿನ ಜೇಡರ ಬಲೆ ಕಟ್ಟಿದರೂ
ಬಿಡಿಸುತ್ತಾನೆ ಎಳೆ ಎಳೆಯಾಗಿ
ಕಾಲದ ನೆರಳ ಮೇಲೆ ಕುಳಿತು

ಅಪ್ಪನ ಹೇಗಲ ಮೇಲೆ
ಎರಡೂ ಕಾಲುಗಳು ಇಳಿಬಿಟ್ಟು
ಜಗದ ಬೆಳಕನು ಕಣ್ಣುಗಳಲ್ಲಿ ತುಂಬಿಕೊಂಡು
ನಡೆಯುವಾಗಿನ ದಾರಿಯ ಬದಿಯಲಿ
ಗರಿಕೆ ಚಿಗುರುವ ಪರಿಗೆ
ಸೂರ್ಯನಿಗೂ ಹೊಟ್ಟೆಕಿಚ್ಚು

ಗುಡಿಸಲ ಕವೆಗೆ ನೇತಾಕಿದ್ದ
ತಮಟೆಯ ಸದ್ದಿನಲಿ
ಕತ್ತಲೆಯ ಬೆನ್ನು ಮುರಿವ ಗತ್ತು
ಬೀಡಿ ಹೊಗೆಯು ಬರೆಯುವ ಚಿತ್ರ

ಮಗನೆಂದು ಬೀಗುವ ಎದೆಯಲಿ
ಎಷ್ಟೊಂದು ದಾರಿದೀಪದ ಬೆಳಕು
ಜೀವನದುದ್ದಕ್ಕೂ ಕಾವಲುಗಾರನಾಗಿ
ಬೆನ್ನಿಗೆ ಬಿದ್ದವನು
ದೇವರಿಗಿಂತಲೂ ಮಿಗಿಲು

*******

About The Author

Leave a Reply

You cannot copy content of this page

Scroll to Top