ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಆರ್ಭಟ ಅವ್ಯಕ್ತ ದಿನಕರನ ಉದಯ, ಅಳಿವಿಲ್ಲದ ಅಂಧಾಕಾರವಾಗಿದೆ, ಶಶಿಧರನ ತಂಪು, ಕೋಲ್ಮಿಂಚಿನ ಧಗೆಯಾಗಿದೆ. ನೀಲಿ ಗಗನದಲಿ ಕಾರ್ಮೋಡ ಕವಿದು ನಿಂತಿದೆ, ತಂಪು ಗಾಳಿಯಲಿ ದುರ್ಗಂಧ ಪಸರುತ್ತಿದೆ, ತಿಳಿ ನೀರಿನಲಿ ವಿಷದ ತೊಟ್ಟೊಂದು ಸೇರಿದೆ, ಹಸಿರು ತುಂಬಿರಬೇಕಾದ ನೆಲ ಬಂಜರಾಗಿ ಹೋಗಿದೆ… ಸ್ತಬ್ಧ ಶಿಲೆಗಳ ಕಣ್ಣಂಚಿನಲ್ಲಿ ಒಂದು ಹನಿ ನೀರಿಲ್ಲ, ಯಾವ ರೋಧನೆಗೂ ಕಿವಿಯೊಂದು ಒಡೆಯಲಿಲ್ಲ, ಮಿಡಿವ ಕಲ್ಲು ಚೂರಾದರೂ ಮನಕೆ ನಾಟಲಿಲ್ಲ, ದೈತ್ಯಾಕಾರದ ಭುಜಗಳಿಗೆ ವ್ಯಾಘ್ರತ್ವದ ಅರಿವಿಲ್ಲ, ಆ ಭಯಂಕರ ಆಕ್ರಂದ! ಯಾವ ಪಾಪದ ಶಿಕ್ಷೆಯೋ ಇದು, ಕಣ್ಮನಗಳನ್ನು ಸುಡುವುದು, ಮುಗ್ಧತೆಯ ಪರಿಹಾರವಿದು, ಕಡುತಂಪಿನಲಿ ಮೈ ಬೆವರಿದೆ, ಮನೆ ಪುನಃ ಪುನಃ ಮರುಗಿದೆ, ಬಣ್ಣದ ಓಕುಳಿಯ ನಡುವಿನಲ್ಲಿ ಮನುಷ್ಯತ್ವ ಮಾಯವಾಗಿದೆ. ಅಮಾನುಷತೆ ಪ್ರತಿರೂಪ, ನೋಡಿಲ್ಲಿ ನಿಂತಿದೆ, ಪ್ರಾಣಿಗೂ ಮೀರಿದ ಕ್ರೌರ್ಯತೆ ಈಗಿಲ್ಲಿ ನಡೆದಿದೆ, ಮದವೇರಿದ ರಕ್ಕಸಮೃಗಕ್ಕೆ ಕಿತ್ತುತಿಂದ ಸಂತೃಪ್ತಿ ಇದೆ, ತೋಳಗಳ ನಡುವಿನಲಿ ಜಿಂಕೆಯೊಂದು ಅರೆಜೀವವಾಗಿದೆ. ಮರಿಯಾಗಿ ಅರಳಿ, ಕಿರಿಯಾಗಿ ಪ್ರೀತಿಸಿ, ಸಂಗಾತಿಯಾಗಿ ರಾಜಿಸಿ , ಮರವಾಗಿ ಸಲುಹಿ, ಗುರುವಾಗಿ ಬೋಧಿಸಿ, ಸ್ವತಂತ್ರವಾಗಿ ಗಗನಕ್ಕೇರೀ, ಆದರೆ…. ಆದರೆ… ಈಗ ಹೆಣ್ಣಾಗಿದ್ದಕ್ಕೆ ಮರುಗಿ…!!! ಛೆ ಹೀಗಾಯಿತೆ ಇವಳ ಬಾಳಿನ ನೌಕೆ, ದಡ ಸೇರುವ ಮುನ್ನವೇ ಮುರಿದು ಚೂರಾಗಿಹೋಯಿತೇ, ಎಂದು ಮರುಗಿದರೆ ಬರುವುದೇ ಸಫಲತೆ ??? ಇದು ಎಂದೆಂದಿಗೂ ಮುಗಿಯದ ಕತ್ತಲಿನ ಕಥೆ !!

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನಗಿಷ್ಟವಾದ ಕವಿತೆ ಕುರಿತು. ಕವಿತೆ ಕವಿಯಿತ್ರಿ-ಪ್ರೊ. ಗೀತಾ ವಸಂತ ಯೂಸ್ ಆಂಡ್ ಥ್ರೋ ಪೆನ್ನು ಬಂದಾಗ ಸಕತ್ತು ಸಂಭ್ರಮ. ಇಂಕು ತುಂಬುವ ರೇಜಿಗೆಯಿಲ್ಲ ನಿಬ್ಬು ಕೊರೆಯುವುದಿಲ್ಲ ಬಳಸು ಬಿಸಾಕು. ಬದುಕು ಎಷ್ಟು ಸರಾಗ.. ಆಮೇಲೆ ಬಂದೇ ಬಂದವು ಯೂಸ್ ಆಂಡ್ ಥ್ರೋ ಲೋಟ ತಟ್ಟೆ ಸಿರಿಂಜು ಹೆಂಡದ ಬಾಟಲು ಸ್ಯಾನಿಟರಿ ಪ್ಯಾಡು ಕಾಂಡೋಮು ಒಳಗೊಳಗೇ ಕೊಳೆತ ಸಂಬಂಧಗಳು ಬಣ್ಣ ಬಣ್ಣದ ರ್ಯಾಪರ್ ಹೊತ್ತವು.. ಪ್ರೇಮದ ನಶೆಯೇರಿಸಿದ್ದ ಅದೇ ಪೆನ್ನು ಲೆಕ್ಕವಿಲ್ಲದಷ್ಟು ಕವಿತೆಗಳ ತಿದ್ದಿ ತೀಡಿ ತಬ್ಬಿಕೊಂಡಾಗ ಎದೆಗೊದ್ದು ಖಾಲಿಯಾಯ್ತು ಕೊಟ್ಟ ಪೆಟ್ಟಿಗೆ ನೀಲಿಗಟ್ಟಿದ ಮೈಯ ಕಡೆಗಣ್ಣಲೂ ಕಾಣದೇ ನಿದ್ದೆಹೋಯ್ತು. ಎಷ್ಟು ಪರೀಕ್ಷೆಗಳ ಬರೆದಾಯ್ತು! ಸೋತಷ್ಟೂ ಎದ್ದುನಿಲ್ಲುವ ಹುಕಿಗೆ ಹಚ್ಚಿದ್ದು ಈ ಪೆನ್ನೇ.. ಆತ್ಮದಲಿ ಅದ್ದಿ ಬರೆದಕ್ಷರಗಳ ಅರಿಯದೇ ಹೋಯ್ತು. ಕೊನೆಯ ಅಕ್ಷರವೊಂದು ಕಲಸಿ ಕಣ್ಣೀರಲ್ಲಿ ಹಿಂಜಿಹೋಗುತ್ತಿರುವಾಗ ಹಾಡುತ್ತಲಿದ್ದಾನೆ ಕಸದ ಗಾಡಿಯವನು ಕರಗುವ ಕಸವ ತನ್ನಿ ಭೂಮಿಯ ಉಳಿಸಬನ್ನೀ.. ನಾ ಪೆನ್ನ ಬಳಸಿದೆನೋ ಪೆನ್ನು ಬಳಸಿತೋ ನನ್ನ! ಎಸೆಯಬಾರದ ಪೆನ್ನು ಚುಚ್ಚುತ್ತಿದೆ ಆತ್ಮಸಾಕ್ಷಿಯನು… ಕವಿಯತ್ರಿ : ಪ್ರೊ. ಗೀತಾ ವಸಂತ ಕವಿತೆ ಕುರಿತು:ಡಾ.ಸಂಗಮೇಶ ಎಸ್.ಗಣಿ ಪ್ರೊ. ಗೀತಾ ವಸಂತ ಅವರ ಈ ಮೇಲಿನ ಕವಿತೆ ಕುರಿತು ಒಂದಿಷ್ಟು…. ಭೌತಿಕ ವಸ್ತುಗಳನ್ನು ಬಳಸುವ ಮನುಷ್ಯ ಮೂಲತಃ ಭೋಗಜೀವಿ. ಈ ನಡುವೆಯೂ ಅವನು ತನ್ನ ಅಂತರಂಗ ಮತ್ತು ಆತ್ಮಶುದ್ಧಿಗೆ ಮಿಡಿಯುವುದೂ ಕೂಡ ಅಷ್ಟೇ ಆತ್ಯಂತಿಕ ಸತ್ಯ. ಲೌಕಿಕ ಮೋಹವನ್ನು ಮೀರುವ ಹಂಬಲ ಮನದೊಳಗೆ ಮೂಡಿ, ಕಾಡಿ ತುಡಿಯುತ್ತಲೇ ಇರುವುದು ಸಹಜವೇ. ಮನುಷ್ಯ ತನ್ನ ಅಂತಿಮ ಗಮ್ಯವನ್ನು ತಲುಪಲು ಆತುಕೊಳ್ಳುವ ಮಾಧ್ಯಮ ಮಾತ್ರ ಈ ಅಶಾಶ್ವತ ಕಾಯವೇ. ಆತ್ಮಿಕ ಆನಂದವನ್ನು ಅನುಭವಿಸಲು ಇಂದ್ರಿಯಗಳನ್ನು ನಿರಾಕರಿಸದ ಅಲ್ಲಮನ ತಾತ್ವಿಕತೆ  ಮನುಷ್ಯ ಬದುಕಿನುದ್ದಕ್ಕೂ ಕಾಡುವುದೂ ದಿಟವೇ ಆಗಿದೆ.  ಲೌಕಿಕ-ಅಲೌಕಿಕ, ಜೀವಾತ್ಮ-ಪರಮಾತ್ಮ,  ಭೋಗ- ತ್ಯಾಗ, ಯೋಗ, ಪಾಪ-ಪುಣ್ಯ, ಮೋಕ್ಷ ಇತ್ಯಾದಿ ತಾತ್ವಿಕ ಸಂಘರ್ಷಗಳ ಮಧ್ಯೆ ತೊಣೆಯುವ ಮನುಷ್ಯ ಭೌತಿಕತೆಗೆ ಆತುಕೊಳ್ಳುವುದು ಸಹಜ. ಮನುಷ್ಯ ಭೌತಿಕ ಸುಖವೇ ಜೀವನದ ಪರಮಸುಖ ಎಂಬ ಭ್ರಮೆಯಲ್ಲಿ ಬದುಕಲು ಶುರುಮಾಡಿದಾಗ ‘ಬಳಸು ಬಿಸಾಕು’ ಎಂಬ ನೆಲೆಗೆ ಬಂದು ತಲುಪಿದ. ಬಳಸಿ ಬಿಸಾಕುವಾಗ ಬದುಕು ಸರಳ ಮತ್ತು ಸುಂದರ ಅನ್ನಿಸಿತು. ಪರಿಕರಗಳನ್ನು ಉಪಯೋಗಿಸುತ್ತ ಸುಖಿಸುತ್ತ ನಡೆದ. ಸುಖ ಉಪಭೋಗಿಸುವ ವಸ್ತುಗಳಲ್ಲಿ ಇದೆ ಎಂದು ಬಲವಾಗಿ ನಂಬಿದ. ಮನಸ್ಸಿನ ಮಾತು ಕೇಳುತ್ತ ನಡೆದ ಮನುಷ್ಯ ಆತ್ಮದ ನುಡಿಗೆ ಕಿವುಡಾದ. ಇದು ಕೆಡಕು ಎಂದೂ ತಿಳಿಯದ ಭ್ರಮೆಯ ಸುಳಿಗೆ ಸಿಲುಕಿದ. ಜೀವನದಲ್ಲಿ ಕೆಲವೊಂದು ವಸ್ತುಗಳನ್ನು ಬಳಸುವುದು ಅವಶ್ಯ.  ಆದರೆ ಅವುಗಳನ್ನು ಬಳಸುವ ಕ್ರಮದಲ್ಲಿ ಎಚ್ಚರ ವಹಿಸುವುದೂ ತೀರ ಅತ್ಯವಶ್ಯ. ಈ ಹಿನ್ನೆಲೆಯಲ್ಲಿ ಸರಕು, ಸಂಬಂಧ, ಬದುಕು, ಲೇಖಕ, ಲೇಖನಿ, ಆತ್ಮಸಾಕ್ಷಿ ಹೀಗೆ ಬಹು ಆಯಾಮಗಳನ್ನು ಅನಾವರಣಗೊಳಿಸುವ ಪ್ರೊ. ಗೀತಾ ವಸಂತ ಅವರ ಕವಿತೆ ಗಮನಾರ್ಹ ಮತ್ತು ಮಹತ್ವದ್ದು ಅನ್ನಿಸಿತು.ಲೇಖಕನ ಆತ್ಮಸಾಕ್ಷಿಯನ್ನೇ ಮುಖ್ಯವಾಗಿಸಿಕೊಂಡ ಕವಿತೆ ಭೌತಿಕ ಸರಕುಗಳನ್ನು ಪ್ರಸ್ತಾಪಿಸುತ್ತ ಸಂಬಂಧಗಳ ಕೊಳಕುತನವನ್ನು ಕುರಿತು ಮಾತನಾಡುವುದು ವಿಶೇಷ ಎನಿಸುತ್ತದೆ. ಜೊತೆಗೆ ಆತ್ಮದ್ರೋಹದ ಕೆಲಸಗಳನ್ನು ಮಾಡುತ್ತಿರುವ ಸೂಕ್ಷ್ಮತೆಯನ್ನು ಕಾಣಿಸುವ ಕವಿತೆಯು ಬರೆಹಗಾರನ ಜವಾಬ್ದಾರಿಯನ್ನೂ ಹೇಳುವುದು ಗಮನಾರ್ಹ. ಪೆನ್ನು ಸೇರಿದಂತೆ ಲೋಟ, ತಟ್ಟೆ,ಸಿರಿಂಜು, ಹೆಂಡದ ಬಾಟಲು, ಸ್ಯಾನಟರಿ ಪ್ಯಾಡು, ಕಾಂಡೋಮು ಇತ್ಯಾದಿ ಬಳಸಿ ಬಿಸಾಕುವ ವಸ್ತುಗಳನ್ನು ಪ್ರತಿಮಿಸುವ ಕವಿತೆಯು, ಮನುಷ್ಯನ ಇಂದಿನ ಜೀವನದಲ್ಲಿ ಸಂಬಂಧಗಳು ತಲುಪಿದ ಕೊಳಕುತನವನ್ನು ಬಯಲು ಮಾಡುತ್ತದೆ. ಒಂದುಕಾಲಕ್ಕೆ ಪುರುಷ ಸಮಾಜದ ಭೋಗದ ವಸ್ತುವಾಗಿದ್ದ ಹೆಣ್ಣೂ ಬಳಸಿ ಬಿಸಾಕಲ್ಪಟ್ಟ ವಸ್ತುವಾಗಿ ಅನುಭವಿಸಿದ ತಪ್ತತೆಯೂ ಇಲ್ಲಿ  ಧ್ವನಿ ಪಡೆದಂತಿದೆ. ಜೀವನದಲ್ಲಿ ಪ್ರೇಮದ ನಶೆ ಏರಿಸಿದ ಪೆನ್ನು ಅಸಂಖ್ಯಾತ ಕವಿತೆಗಳನ್ನು ಹೊಸೆದು ತನ್ನ ತೆಕ್ಕೆಗೆ ಕರೆದುಕೊಳ್ಳುತ್ತದೆ ಎಂಬ ಭ್ರಮೆಯಲ್ಲಿರುವಾಗಲೇ ತನ್ನನ್ನು ಒದ್ದುಬಿಡುವ ಮೂಲಕ ಕವಿಗೆ ಭ್ರಮನಿರಶನ ಉಂಟುಮಾಡುತ್ತದೆ.ಈ ಬದುಕು ಅಕ್ಷರಶಃ ಪರೀಕ್ಷೆ. ಈ ಪರೀಕ್ಷೆಯಲ್ಲಿ ಸೋಲು, ನೋವು,ನಿರಾಶೆ, ಹತಾಶೆಯ  ಪ್ರಶ್ನೆಗಳಿಗೆ ಉತ್ತರಿಸಿ ಸೋತರೂ ಗೆಲುವಿನ, ಯಶಸ್ಸಿನ ಸರಿಯಾದ ಉತ್ತರಕ್ಕೆ ಹವಣಿಸುವ ಪೆನ್ನು ಬದುಕನ್ನು ಗೆಲ್ಲುವ ಜಿದ್ದಿಗೆ ಮನುಷ್ಯನನ್ನು ಈಡು ಮಾಡಿದ್ದೂ ಕೂಡ ಗಮನಾರ್ಹ. ಆತ್ಮರತಿಯಲ್ಲಿ ತೊಡಗಿಕೊಂಡ ಲೇಖಕನ ಆತ್ಮವಂಚನೆಯ ಆಯಾಮಗಳನ್ನು ದಾಖಲಿಸುವ ಕವಿತೆಯು, ಆತ್ಮದ ಅನುಭೂತಿಯನ್ನು ಅರ್ಥಮಾಡಿಕೊಂಡು ಲೇಖಿಸುವಲ್ಲಿ ಆತನ ಪೆನ್ನು ಸೋತಿರುವುದನ್ನು ಸೂಚಿಸುತ್ತದೆ. ಈ ಮೂಲಕ ಬರೆಹಗಾರನಾದವನು ಲೇಖನಿಯನ್ನು ಬಳಸುವಾಗ ಆತ್ಮದ್ರೋಹವನ್ನು ಮಾಡಿಕೊಳ್ಳಬಾರದೆಂಬ ಎಚ್ಚರಿಕೆಯೂ ಇದೆ. ಕೊನೆಯ ಅಕ್ಷರ ಕಣ್ಣೀರಲ್ಲಿ ಹಿಂಜಿಹೋಗುವಾಗ ಕಸದ ಗಾಡಿಯವನು ಕರಗುವ ಕಸವನ್ನು ಕೇಳುವುದರಲ್ಲಿ ಔಚಿತ್ಯವಿದೆ. ಆತ್ಮರತಿ, ಆತ್ಮದ್ರೋಹ ಮಾಡಿಕೊಳ್ಳುವ ಈ ಹಂತದಲ್ಲಿ ಉಪಭೋಗಿಸುವ ಭೌತಿಕ ಸರಕುಗಳೇ ಜೀವಕ್ಕೆ ಸರಳಗಳಾಗುವ ಅಪಾಯವನ್ನೂ  ಲೆಕ್ಕಿಸುವುದೊಳಿತು. ಅಷ್ಟಕ್ಕೂ ಪೆನ್ನನ್ನು ಬಳಸಿದ ಬರೆಹಗಾರ, ಬರೆಹಗಾರನನ್ನು ಬಳಸಿದ ಪೆನ್ನುಗಳ ನಡುವೆ ಒಂದು ತಾತ್ವಿಕ ದ್ವಂದ್ವ ಯಾವ ಕಾಲಕ್ಕೂ ಇದ್ದೇ ಇದೆ. ಈವರೆಗೂ ಆತ್ಮವಂಚಿತ ಬರೆಹಗಳನ್ನುಲೇಖಿಸಿದ ಪೆನ್ನು ಬದುಕಿನುದ್ದಕ್ಕೂ ಅವಶ್ಯವಿದೆ ಎಂಬ ಸತ್ಯವನ್ನು ಸಾರುವುದರ ಜೊತೆಗೆ ಅದನ್ನು ಆತ್ಮಸಾಕ್ಷಿಯ ವಿರುದ್ಧ ಬಳಸಬಾರದೆಂಬ ನಿಲುವೂ ಪ್ರತಿಪಾದಿತವಾಗಿದೆ.ಸಂಬಂಧಗಳು ಬಳಸಿ ಬಿಸಾಕುವ ಸರಕುಗಳಲ್ಲ. ಆತ್ಮಸಾಕ್ಷಿಯ ಸಂಬಂಧಗಳ ಅನುಭೂತಿಯನ್ನು ಲೇಖಿಸುವಲ್ಲಿ ಲೆಕ್ಕಣಿಕೆ ಧನ್ಯತೆ ಪಡೆಯಬೇಕು. ತನ್ಮೂಲಕ ಬರೆಹಗಾರನೂ ಮತ್ತು ಬರೆಹವೂ ಆತ್ಮಸಾಕ್ಷಿಯ ನೆಲೆಯಿಂದಲೇ ಅಭಿವ್ಯಕ್ತಿಗೊಳ್ಳಬೇಕು ಎಂಬುದೂ ಈ ಕವಿತೆಯ ಮುಖ್ಯ ಆಶಯ. ಬಳಸಲೇಬೇಕಾದ ಪೆನ್ನು ಆತ್ಮಸಾಕ್ಷಿಯನ್ನು ಚುಚ್ಚದಂತೆ ಇರಬೇಕಾದದ್ದೂ ವ್ಯಕ್ತಿ ಮತ್ತು ಸಮಷ್ಟಿ ದೃಷ್ಟಿಯಿಂದ ಹಿತವೂ ಉಚಿತವೂ ಆಗಿದೆ. ಆತ್ಮಸಾಕ್ಷಿಯನ್ನು ಧ್ವನಿಸುವುದೇ ಇಂದಿನ ಕಾವ್ಯದ ಒಟ್ಟು ಧೋರಣೆ ಆಗಿರಬೇಕೆಂಬುದು ಕವಿತೆಯ ಕೇಂದ್ರಕಾಳಜಿ. ವಿಶೇಷವಾದ ಕವಿತೆಯನ್ನು ಕಟ್ಟಿಕೊಟ್ಟ ಪ್ರೊ. ಗೀತಾ ವಸಂತ ಅವರ ಕವಿತೆಗಳು ಕನ್ನಡ ಕಾವ್ಯಲೋಕವನ್ನು ಇನ್ನಷ್ಟೂ ಅರ್ಥಪೂರ್ಣವಾಗಿ ವಿಸ್ತರಿಸುತ್ತಲಿರುವುದಕ್ಕೆ ಅವರನ್ನು ಅಭಿನಂದಿಸಲೇಬೇಕು.ಡಾ. ಸಂಗಮೇಶ ಎಸ್. ಗಣಿಕನ್ನಡ ಉಪನ್ಯಾಸಕರು,ಅಂಚೆ: ಸೂಳೇಬಾವಿತಾ : ಹುನಗುಂದಜಿ: ಬಾಗಲಕೋಟೆ 9743171324

ಕಾವ್ಯಯಾನ Read Post »

ಕಾವ್ಯಯಾನ

ಗಝಲ್

ಶಾಂತ ಜೆ ಅಳದಂಗಡಿ ನೀಡೆನಗೆ ನನ್ನೊಡೆಯ ನಿನ್ನೊಲುಮೆ ಬಾಳ ಪಥದಲಿ ಆಗಲೆನಗದು ಹಿರಿಮೆ ನಿನಗಾಗಿ ಮಿಡಿಯುತಿದೆ ಸಂತಸದೆ ನಾಡಿ ಬಾಳದಾರಿಯಲಿ ಅನುಕ್ಷಣ ಸಂತಸ ದೇವನಿತ್ತ ವರದೊಲುಮೆ ಬದುಕ ದಾರಿಯಲಿ ನೀ ಮಾರ್ಗಸೂಚಿ ಸಪ್ತನಾಡಿಗಳೂ ಅರಸುತಿವೆ ದಾರಿ ದೊರೆತರದುವೆ ಮನಕೆ ಸಂತಸ ನಿನ್ನೊಲವು ಜೀವಕದು ಗರಿಮೆ ಆಸೆ ಒಲೆ ಹೂಡಿ ಹಿಡಿದು ಅಗ್ನಿ ನಾಡಿ ಪ್ರೇಮ ಪ್ರೀತಿಯ ಪಾಕ ನಿನಗಾಗಿ ಅಟ್ಟಡಿಗೆ ಉಂಡರದುವೆನಗೆ ಸಂತಸ ಗಮ್ಯ ಸೇರಲು ಇದೆ ಪಯಣವೊಮ್ಮೆ ನಡೆವ ದಾರಿಗೆ ಚೆಲ್ಲುವೆ ಮಲ್ಲಿಗೆ ನಿನಗಾಗಿ ದೃಷ್ಟಿ ಸರಿಸದಿರು ಗೆಲುವ ನಾಡಿ ಮಿಡಿತವಿದು ಒಂದಾಗಿರಲು ಗಮ್ಯ ಸೇರೋ ಸಂತಸ

ಗಝಲ್ Read Post »

ಕಾವ್ಯಯಾನ

ನೇಣಿಗೇರಿದ ನೈತಿಕ ಮೌಲ್ಯ.

ದೀಪಾಜಿ ನಾನು ಕೂಗುತ್ತಲೆ‌ ಇದ್ದೆ ಯಾರಾದರೂ ಬಂದು ಉಳಿಸಿಯಾರೆಂದು ಓಡುತ್ತಲೆ ಇದ್ದೆ ಯಾರಾದರೂ ಹಿಡಿದು ನಿಲ್ಲಿಸಿ ಆಸ್ಪತ್ರೆಯ ಬೆಡ್ಡಿನವರೆಗೆ ತಂದು ಬಿಟ್ಟಾರೆಂದು. ಬದುಕುವ ಆಸೆಗಲ್ಲ ಜೀವದ ಹಂಗಿಗೂ ಅಲ್ಲ ನೋವಿನ ನರಳಿಕೆಗಂತೂ ಅಲ್ಲವೇ ಅಲ್ಲ ಅದೆಲ್ಲವ ಅಂದೆ ಕೈಬಿಟ್ಟಿದ್ದೆ ಅತ್ಯಾಚಾರಕೆ ಸಿಲುಕಿ ಪೋಲೀಸ್ ಠಾಣೆ ನ್ಯಾಯಾಲಯ ಮಾಧ್ಯಮಗಳ ಮುಂದೆ ಬಂದ ದಿನವೆ ನಾನು ಸತ್ತು ಹೋಗಿದ್ದೆ ಇಲ್ಲಿ ಉಳಿದದ್ದು ವರ್ಷಾನುಗಟ್ಟಲೆ‌ ಚಪ್ಪಲಿ ಸವೆಯುವಂತೆ ತಿರುಗುತ್ತಿದ್ದದ್ದು ಕೇವಲ ಅಳಿದುಳಿದ ನಂಬಿಕೆ ಎಂಬ ಭರವಸೆಯ ಮೇಲೆ ತಪ್ಪಿದಸ್ತರ ಪೊಗರು ಕಳಚಿ ನೇಣಿಗೆ ಏರುವ ಕ್ಷಣದ ನಿರೀಕ್ಷೆಯಲಿ ಆದರಿಲ್ಲಿ ನೇಣುಗಂಬಕ್ಕೆರಿದ್ದು ಮಾತ್ರ ನೈತಿಕ ಮೌಲ್ಯ.. ಈಗಲೂ ಸುಟ್ಟು ಬೂದಿಯಾದದ್ದು ನಾನಲ್ಲ ನನ್ನ ದೇಹವೂ ಅಲ್ಲ ಈ ವ್ಯವಸ್ಥೆಯ ಮೇಲಿದ್ದ ನಂಬಿಕೆ ಅದೀಗ ನಡುರಸ್ತೆಯಲ್ಲಿ ಉರಿದು ಬೂದಿಯಾಯ್ತು ಸುಟ್ಟು ಕಮರಿದ ವಾಸನೆ ಇಡೀ ಜಗವನೆ ಆವರಿಸಿತು ಸಂತ್ರಸ್ತರ ಕೂಗು ಇಲ್ಲಾರ ಕಿವಿಗೂ ಕೇಳಿಸಲಿಲ್ಲ ವಾಸನೆ ಹಿಡಿದ ಮೂಗುಗಳು ಕೈವಸ್ತ್ರದ ಒಳಗೆ ಬಂಧಿಯಾಗಿ ದಾಟಿ ಹೋದವು ನನ್ನಂತೆ ನಲುಗಿ ಮತ್ತೆ ಕಟಕಟೆಯಲಿ ನಿಲ್ಲಲು ಹೊರಟ ಹೆಂಗಸರ ಗುಂಪು ಸುಟ್ಟ ಚರ್ಮದ ವಾಸನೆಗೆ ಹೆದರಿ ನ್ಯಾಯದ ನಿರೀಕ್ಷೆ ಬಿಟ್ಟು ಮೂಲೆ ಸೇರಿದರು..

ನೇಣಿಗೇರಿದ ನೈತಿಕ ಮೌಲ್ಯ. Read Post »

ಕಾವ್ಯಯಾನ

ನನ್ನೊಳು ಸುನಾಮಿಯೊ

ನನ್ನ ಕೊಳಲು ಚಂದ್ರಪ್ರಭ ಬಿದಿರ ರಂಧ್ರಗಳಲಿ ತೂರಿ ತುಳುಕುವಾಗ ನೀನು ಕೊಳಲ ಮಾಧುರ್ಯ.. ಇಂಪು ಸೊಂಪಿನ ಅದೇ ಮೋಡಿ ಬೀಸಿ ಬಂದ ಬಿರುಗಾಳಿಯಲಿ ಬೆರೆವಾಗ ಅಲುಗುವುದೇಕೆ ಅಸ್ತಿತ್ವದ ಸೌಧ..! ಮತ್ತದೇ ಗಾಳಿ ಭೋರ್ಗರೆವ ಸುನಾಮಿಯಲಿ ಬೆರೆವಾಗ ನನ್ನೊಳು ಸುನಾಮಿಯೊ ಸುನಾಮಿಯೊಳು ನಾನೊ..!! ನಿನ್ನ ಹೊರತು ಸಾಗದ ಉಸಿರು.. ಅಳವಿಗೇ ಸಿಕ್ಕದ ನಿನ್ನ ಗಾಳಿ ಎಂದವರಾರು..?

ನನ್ನೊಳು ಸುನಾಮಿಯೊ Read Post »

ಕಾವ್ಯಯಾನ

ಕಾವ್ಯಯಾನ

ನಾನು ನಿನ್ನಾತ್ಮದ ಗುರುತಾಗಿದ್ದೆ ಬಿದಲೋಟಿ ರಂಗನಾಥ್ ಹೌದು ನಾನು ನಿನ್ನಾತ್ಮದ ಗುರುತಾಗಿದ್ದೆ ಆ ನಿನ್ನ ನೋಡುವ ನೋಟದ ಬಿಸುಪಿಗೆ ಚಳಿಯಾಗಿದ್ದೆ ಮಳೆಯಾಗಿದ್ದೆ ಮುಗಿಲೇ ಆಗಿದ್ದೆ ನಿನ್ನ ಮೈಯೊಳಗಿನ ಬಿಸಿಗೆ ಬೆರೆತ ಜೀವವಾಗಿದ್ದೆ ನೀನು ನಡೆದ ದಾರಿಯ ಮೇಲಿನ ಹೆಜ್ಜೆಯನು ಮುಟ್ಟಿ ಬೆಳಕಿನ ಕಿರಣಗಳ ಮುಡಿಸಿದ್ದೆ ಉಳಿದ ಮಾತುಗಳ ನಿಟ್ಟುಸಿರ ಮೌನಕೆ ಕಾಲದ ಸವಾರ ಕುಂಟಾಗಿ ಬಿದ್ದಿದ್ದ ಎದೆಯೊಳಗಿನ ಗಿಲಕಿಗೆ ಕೀ ಕೊಡುವ ನಿನ್ನ ಹೃದಯದ ಕೋಮಲ ಕೈಗಳು ನನ್ನಿಂದ ಜಾರಿಹೋದಾಗಿನ ಶೂನ್ಯತೆಯಲಿ ಕತ್ತಲ ಮನೆಯಲಿ ದಿನಗಳ ಎಣಿಸುತ್ತ ಕೂತಿರುವೆ ಎಷ್ಟೊಂದಿತ್ತು ಹೇಳಲು ಮೌನದ ಒರಟುತನವ ಪಾಳಿಸಲು ನೋಡು ನಿನ್ನ ಕಣ್ಣ ಚಿಪ್ಪಿನಲಿ ಕಡೆದ ನನ್ನದೇ ಚಿತ್ರ ಕಣ್ಣೀರ ಕೋಡಿ ಹರಿದರೂ ಕೊಚ್ಚಿ ಹೋಗಿಲ್ಲ ಅಂದು ನಿನ್ನೆದೆಯೊಳಗೆ ಮಿನುಗಿದ ನಕ್ಷತ್ರ ಕಣ್ಮಿಟುಕಿಸುತ್ತಲೇ ಇದೆ… ನೀನು ಜಾರಿ ಹೋಗಿ ಎಷ್ಟೋ ವರುಷಗಳಾದರು ! ಅವತ್ತು ನೀನೆ ಹೇಳಬಹುದಿತ್ತು ಹೃದಯ ಕಣ್ಣೀರುಕ್ಕಿಸಿದ ಕಥೆಯ ಹೇಳದೆ ಹೋಗಿ ನೋವಿನಲಿ ಹೆಣೆದ ಬಲೆಯಾದೆ ನೀನೂರಿದ ಹೆಜ್ಜೆಗಳು ಕವಲೊಡೆದು ಚಾಚಿವೆ ಎದೆಯ ತುಂಬಾ ಒಣಗಿ ಬೆತ್ತಲಾಗಿದ್ದರೆ ನಿಜಕ್ಕೂ ಈ ಕವಿತೆ ಇವತ್ತು ನಗುವ ಚಲ್ಲುತಿರಲಿಲ್ಲ ನಿನ್ನ ನೆನಪ ದಾರಿಯ ಏರಿಯ ಮೇಲೆ ಕೂತು ಕೆರೆಯ ನೀರಿಗೆ ಕಲ್ಲೆಸೆಯುತ್ತಿರಲಿಲ್ಲ.!

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಾಲ್ಕಾರು ಮಳೆ ಹನಿಗಳು: ದೇವು ಮಾಕೊಂಡ ಸಿಂದ್ಗಿ ನನಗೆ ನಾನೇ ಬಂಧಿಯಾಗಿರುವೆ ಎರಡು ಕಳ್ಳ ಹುದುಲಗಳ ನಡುವೆ ಸಿಲುಕಿ ಬೇರೆರಡರ ಇಕ್ಕಟಿನಲಿ ಬೆಳೆದ ಈಚಲು ಸಸಿಯ ಹಾಗೆ ವಿಶಾಲ ಭೂಮಿ ಬಾನುಗಳ ನಡುವೆ ತಳಕು ಹಾಕಿಕೊಂಡಿರುವೆ ಪರೀಧಿಯೊಳಗಿನ ಕೇಂದ್ರದ ಹಾಗೆ ಬೆಳಗು ಬೈಗು ಪ್ರೀತಿ ಇಮ್ಮಡಿಗೊಳ್ಳುತ್ತದೆ ಸೂರ್ಯ ಬಿಸಲ ಪ್ರಖರ ಶಾಖಗೆ ಕಾಮ ಕಸ್ತೂರಿ ಅರಳಿದ ಹಾಗೆ ಎಲ್ಲೋ ಎಸೆದ ಬೀಜ ಮೊಳಕೆಯೊಡೆದು ನನ್ನೊಳಗೆ ಹೂವು ಬಿಡುತ್ತಿದೆ ತಿಂಗಳ ಚಂದಿರ ಮೂಡಿದ ಹಾಗೆ ಇರುಳ ರಾತ್ರಿ ಪುಟಿದೇಳುತ್ತಿದೆ ವಿರಹ ಕರಕಲಾಗುತ್ತಿದೆ ಸುಟ್ಟು ಸುಟ್ಟು ಅನಾಥನ ಗರಡಿಯೊಳಗೆ ಸಿಲುಕಿ ಬೆಳದಿಂಗಳ ಮೋಹ ಕಾಮದ ಚಿಗುರನು ಹಿಪ್ಪಿ ಮಾಡುತ್ತಿದೆ ಹಿಂಡಿ ಹಿಂಡಿ ಮರಡಿ ಮಣ್ಣಲಿ ನಾಲ್ಕಾರು ಮಳೆ ಹನಿ ಬಿದ್ದ ಹಾಗೆ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೌನ ಮಾತಾದಾಗ ಸರೋಜಾ ಶ್ರೀಕಾಂತ ಅಮಾತಿ ಎದೆಯಗೂಡೊಳಗೆ ಬಚ್ಚಿಟ್ಟು ಮರೆಮಾಚಿದ ಮಾತುಗಳೆಷ್ಟೋ!? ನುಡಿಯದೇ ಮೌನರಾಗವಾದ ಶ್ರುತಿ,ತಾಳಗಳಿಲ್ಲದ ಹಾಡುಗಳೆಷ್ಟೋ!!? ತುಟಿಯ ಬಿಟ್ಟು ಹೊರಬರದೇ ಅಡಗಿಸಿಟ್ಟ ನಲಿವು-ನೋವ ಬಗೆಯ! ಬಿಡಿ ಬಿಡಿಸಿ ನಿನ್ನ ಮುಂದಿಡುವೆ ನಾನೀಗ ಕೇಳದಿರಬೇಡ ಗೆಳತಿ ಮನದ ಮಾತೀಗ!! ಅಳಿಯದೆ ಉಳಿದ ಭಾವಗಳಿಗೆ  ಜೀವ ಬಂದಿದೆ ಮತ್ತೊಮ್ಮೆ ಈಗ! ಮನದ ಮೂಲೆಯಲಿ ಅವಿತಿರುವ ಆಸೆ ಹಕ್ಕಿಗೆ  ಹಾರಲು ರೆಕ್ಕೆ ಬಂತೀಗ!! ನನ್ನೀ ಮೌನ ಮಾತಾಗಬೇಕೆಂದರೂ ಬೇಕು ನಿನ್ನ ಸನಿಹ ಸಾಂಗತ್ಯ ನಾ ಬರೆವ ಲೇಖನಿ ನೀನೆಂಬುದು ಸತ್ಯ! ಮತ್ತೇ ಮತ್ತೇ ಬಂದು ಸೇರು ನನ್ನ ಕೈಗೆ ನೀ ನಿತ್ಯ ಮರೆತು ಕೂಡ ಮರೆಯಾಗದಿರು ಕಂಗಳ ಹೊಳಪಿನಿಂದ! ಕನಸ ಕಾಣೋ ಕಲ್ಪನೆಯ ಬಗೆಯಿಂದ ಬಯಸಿದೆ ಮನ ಸದಾ ನಿನ್ನ ಸ್ನೇಹ ಸಂಬಂಧ!! ಅವಿತು ಕೂತ ಮೌನಪದಗಳಿಗೆಲ್ಲ ಮಾತೆಂಬ ಕವಿತೆಯಾಗೋ ಹೊಂಗನಸೀಗ! ನನ್ನೊಲವಿನ ಗೆಳತಿ ಬಂದು ಬಿಡು  ತುಟಿಯಂಚಿನಿಂದ ಆಚೆಯೀಗ!!  ಮತ್ತೇ ಮಾತು ಮೌನವಾಗುವ ಮುನ್ನ!!!

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ದಾರಿಹೋಕನೆಂದು ನಂಬಿ ಬಿಟ್ಟೆ! ಅವ್ಯಕ್ತ ಕುಶಲ ಚೇಷ್ಟೆಗಳ ಕನಸ ಮಾರುವ ಕಾಂತನೆ ಹೆಣ್ಣಿನ ಒಳಮನಸ್ಸ ಮರ್ಮವ ಹೇಳುವೆ ತಿಳಿದುಕೊ… ನಿನ್ನ ನಿಜ ಲೋಕದ ಕಡಲ ಮುತ್ತು ಗಳಂತಿರುವ, ಮೌನ ವನಿತೆಯರ ಸಖಿಗುಟ್ಟಿದು.. ಮುಂಗುರುಳ ನಡುವೆ ನಲಿವ ಕಣ್ಣಲ್ಲಿ ಕನಸೊಂದ ಹುಡುಕುವುದು ತಪ್ಪೇನಲ್ಲಾ.. ತುಂಟ ನಗುವಿನೊಳಗೆ ರಸಿಕತೆಯ ಬಯಕೆಯು ಅಲ್ಪಾಯುಷಿಯೂ ಅಲ್ಲಾ.. ಸಭ್ಯತೆಯ ನೀಳ ಸೆರಗ ಜಾರಿಸಲು ಬಾಡದ ನಿತ್ಯಾನುರಾಗವ ಹುಡುಕುವಳಷ್ಟೆ, ಸಹಜ ಜೀವನದಲ್ಲಿರುವ ತಿರುವುಗಳ ಮಧ್ಯೆ ಸ್ಪಷ್ಟ ಮನದ ಮದುರ ಪ್ರೀತಿಯ ಅರಸುವಳಷ್ಟೇ. ಉದಾಸೀನ ಪುರುಷನ ಭೂಷಣವಾದರೆ, ಕ್ಷಮಿಸುವುದು ಸ್ತ್ರೀಯ ಮಾತೃತ್ವವೇ ಹೌದು. ನಿನ್ನ ಮೆದುಳಿನಾಟದ ದಾಳದ ಕಾಯಿ ಅವಳೆಂದರೆ, ಅವಳ ಹೃದಯದಾಟದ ಗುಪ್ತ ರಾಜ ನೀನು ಮರುಳೇ. ಅಯ್ಯೋ, ಮೂಢಾಂಧ…! ಈ ಯುಗದ ಬಲಿಷ್ಠ ಸ್ವತಂತ್ರ ನಾರಿ ಇವಳು. ಆ ಕನಸಿನ ವೀಣಾತಂತಿಗಳ ಮೀಟುವುದ ನೀ ನಿಲ್ಲಿಸಿದೆ, ಬಯಕೆಯ ಹೆಬ್ಬಾಗಿಲ ಮುಚ್ಚಿ, ಪ್ರೀತಿಯ ಹೂಗಳನಿಟ್ಟಳು ಮಚ್ಚೆಯ ಕಚ್ಚಿದಾಗಲೇ ಗುಟ್ಟಾದ ಗಂಟೊಂದ ಕಟ್ಟಿದ್ದಳು.. ಕಾಣದೆ ಅರಳುವ ಮುಗುಳ್ನಗೆಯೊಳಗಿನ ಆಲಿಂಗನವ, ತುಸುತಟ್ಟಿ ನೋಡದೆ…. ನಾನು ಕೇವಲ ದಾರಿಹೋಕ ಎಂದು ನೀ ನಂಬಿಬಿಟ್ಟೆ! ಒಲವ ಅನರ್ಘ್ಯ ಮಾಲೆಗೆ ಅಹಂಮಿನ ಮೋಡ ಕವಿಯಿತಷ್ಟೆ.

ಕಾವ್ಯಯಾನ Read Post »

ಕಾವ್ಯಯಾನ

ಮಕ್ಕಳ ಕವಿತೆ

ಚಂದ್ರಯಾನ ಎನ್. ಶಂಕರರಾವ್ ಆಹಾ ಚಂದಿರ ಪೂರ್ಣ ಚಂದಿರ ಎಷ್ಟು ಎತ್ತರ ನಿಲುಕದಷ್ಟು ದೂರ. ನಾ ನೀ ಜೊತೆ ಜೊತೆಯಲಿ ಆಡುವ ಬಾ ಚಂದಿರ, ಮೋಡದಿ ಮರೆಯಾಗದಿರು ಅಂಬರದಿ ತೇಲಾಡದಿರು. ನಿಲ್ಲು ಅಲ್ಲೇ ಚಂದಮಾಮ ಎಲ್ಲಿ ಅವಿತೆ ಬಾನಲಿ ನೀನು, ಬಲ್ಲೆ ನಿನ್ನ ಕಣ್ಣುಮುಚ್ಚಾಲೆ ಜಲದ ಹಿಂದೆ ಅವಿತೆಯೇಕೆ. ಹುಣ್ಣಿಮೆಯ ಸುಂದರ ಚಂದಿರ ವಿಧು ನೀ ಬಾನಲಿ ಮಂದಿರ, ಮುದದಲಿ ಪ್ರಕಾಶಿಸು ನಿರಂತರ ಬದುಕಿಗೆ ನೀ ಭಾಸುರ. ವಿಜ್ಞಾನದ ಪರಿಶ್ರಮ ಭಾರತದ ಚಂದ್ರಯಾನ, ನೋಡತಲಿರು ಮುಂದೊಮ್ಮೆ ನಿನ್ನಲ್ಲಿಗೆ ನಾ ಬರುವೆ ಚಂದ್ರಯಾನಕೆ ಕಾದಿರಿಸಿರುವೆ. ಕಿರುಪರಿಚಯ: ನಿವೃತ್ತ ಬ್ಯಾಂಕ್ ಮ್ಯಾನೇಜರ್,ಮೂರು ಕವನಸಂಕಲನಗಳು ಬಿಡುಗಡೆಯಾಗಿವೆ.ಇವರ ಹಬ್ಬ ಪದ್ಯ ಐದನೇ ತರಗತಿಯ ಕನ್ನಡ ದ್ವಿತೀಯ ಬಾಷೆಯಲ್ಲಿ ಪಠ್ಯವಾಗಿದೆ

ಮಕ್ಕಳ ಕವಿತೆ Read Post »

You cannot copy content of this page

Scroll to Top