ಕಾವ್ಯಸಂಕ್ರಾಂತಿ
ಸಾಕೊಂದಿಷ್ಟು ಕವಿತಾ ಸಾರಂಗಮಠ ಉತ್ತರಾಯಣನ ಪುಣ್ಯ ಕಾಲಕೆ ಗದ್ದಲದ ಅಂಧರ ಮಂಡಿಪೇಟೆಯಲ್ಲಿ ಸಂಕ್ರಮಣ ಕಾಲಕೆ ಕಣ್ಣಾವೆಗಳಾದರೂ ಸಂಧಿಸಿವೆ ಸಾಕೊಂದಿಷ್ಟು ಈ ಕಾಲಕೆ..! ಹ್ಯಾಪಿ ಪೊಂಗಲ್ ಡೇ ಎಂಬ ಜಾಹೀರಾತಿಗೆ ಸಂತೋಷ ಉಕ್ಕಿ ಮೋಬೈಲ್ ಮಾತಲಿ ತೊಡಗಿದವರ ನಡುವೆಯೂ ಕುಂಟರಿಬ್ಬರ ತೆವಳುವಿಕೆಗೆ ಗಾಳಿಯಾದರೂ ಬೀಸಿದೆಯಲ್ಲ ಸಾಕೊಂದಿಷ್ಟು ಈ ಕಾಲಕೆ..! ಭವಿಷ್ಯ ಕೇಳಿ ಮದುವೆಯಾಗಬಾರದು ಎಂಬ ನುಡಿಗೆ,ಕಣ್ಣುಗಳ ಒದ್ದೆಮಾಡಿಕೊಂಡಿದ್ದೇನಿಲ್ಲಿ ಬಿಕ್ಕಿಸಿ ಅತ್ತಾಗ ಬೀದಿ ನಾಯಿಯಾದರೂ ನಲುಗಿತಲ್ಲ ಸಾಕೊಂದಿಷ್ಟು ಈ ಕಾಲಕೆ..! ಹಬ್ಬವೆಂದರೆ ಕಿಬ್ಬದಿಯ ಕೀಲು ಮುರಿಸಿಕೊಂಡು,ಗೇಣು ಭೂಮಿಗೆ ಕಾದಾಡಿ ನ್ಯಾಯ ಕೋರ್ಟಿನಲ್ಲಿ ಹೊಟ್ಟೆಗೆ ಅಂಬಲಿಯಾದರೂ ಸಿಕ್ಕಿತಲ್ಲ ಸಾಕೊಂದಿಷ್ಟು ಈ ಕಾಲಕೆ..! ಬೇಡಿದ್ದಿಲ್ಲಿ ದೊರಕದೆ ಹಿಡಿಚೆಲ್ಲಿ ಬೊಗಸೆ ಬಾಚಿಕೊಂಡವನ ನಡುವೆ,ಮಣ್ಣು ಸಿಗದವನಿಗೂ ಹೊನ್ನು ಸಿಕ್ಕಿದೆಯಲ್ಲ ಸಾಕೊಂದಿಷ್ಟು ಈ ಕಾಲಕೆ..! ಎಳ್ಳು-ಬೆಲ್ಲ, ಕುಸುರೆಳ್ಳು-ಅರಷಿಣ ತಿರುವಿ,ಮಂಡಿಪೇಟೆಯೆಂದರೆ ಭಿಕ್ಷೆಯೆಂದಲ್ಲ,ದೇವರಿಗೆ ಹೂವಾದರು ಸಿಕ್ಕಿತಲ್ಲ ಹಿತ್ತಲಿನ ಗಿಡದಲ್ಲಿ.. ಸಾಕೊಂದಿಷ್ಟು ಈ ಕಾಲಕೆ..! *********








