ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಅಸ್ವಸ್ಥ ಅಭಿಪ್ರಾಯ –ನೂರುಲ್ಲಾ ತ್ಯಾಮಗೊಂಡ್ಲು ವಟಗುಡುವ ಕಪ್ಪೆಗಳಂತಿರುವ ಕೆಲ ಮೂರ್ಖ ಆಂಕರರು; ನೋಟಿನಲಿ ಮೈಕ್ರೊ ಚಿಪ್ಪುಕಂಡುಕೊಂಡ ವಿಜ್ಞಾನ ದೇವಿ ಪುರುಷರು ! -ಎಂದಿನಂತೆ ವಟಗುಡುವುದೇ ಅವರ ಕೆಲಸವೆಂದು ನಾನೂ ಸುಮ್ಮನಿರಲಾರದೆ ಕಪ್ಪಗೆ ಜಿನುಗುವ ಬಿಸಿಲು ಮಳೆಯ ಹಾಗೆ ಒಂದೆರಡು ಕವಿತೆಯ ತುಣುಕುಗಳನ್ನು ಹಾಳೆಯ ಮೇಲೆ ಹರಿಸುತ್ತೇನೆ ನನಗೆ ಗೊತ್ತಿದೆ ಮತ್ತೆ ಎಲ್ಲರಿಗೂ ಗೊತ್ತಿರುವ ವಿಷಯವೇ ; ಈ ಶತಮಾನದ ಪೆಂಡಮಿಕ್ ರೋಗ ! ‘ಕೊರೊನಾ’ ಚೈನಾದಿಂದ ವಕ್ಕರಿಸಿದ್ದೆಂದು ಆದರೆ , ಅದು ನಮ್ಮ ದೇಶದ ಸರಹದ್ದುಗಳನ್ನು ದಾಟಿದ್ದು ಹೇಗೆಂದು ಗುಪ್ತಾಚಾರದವರಿಗೆ ತಲೆ ಬಿಸಿಯ ವಿಷಯ ಪಾಪ ಅವರೇನೊ ತಲೆಕೆಡಿಸಿಕೊಂಡಂತಿಲ್ಲ ! ಹಾಗೆ ತಲೆ ಕೆದರಿ ಕೊಂಡಿದ್ದರೆ ಒಂದು ಕೋಮಿನವರಿಗೆ ವರ್ಣ ಬೇಧದ ಕ್ವಾರಂಟೈನ್ ಗಳನ್ನು ರಚಿಸಲಿಕ್ಕೆ ಅವಕಾಶ ಕೊಡುತ್ತಿರಲಿಲ್ಲ ನನ್ನ ಬೃಹತ್ ಪ್ರಜಾಸತ್ತಾತ್ಮಕ ದೇಶದಲಿ ಇಂಥ ಅಮಾನವೀಯ ಕೃತ್ಯಗಳನ್ನು ಖಂಡಿಸದ ಆಶಾಢಭೂತಿ ನಾಯಿಗಳು ಆಂಕರುಗಳ ನಡುವೆ ಫೋಸು ಕೊಟ್ಟು ಚಪ್ಪಾಳೆ ಹೊಡೆಯುತ್ತಾರೆ ಮನೆ ದೀಪ ಆರಿಸಿ ಹೊರಗಿನ ಕತ್ತಲಿಗೆ ಮೇಣ ಉರಿಸಿ, ಕರಗುವ ಮೇಣ ದಂತೆ ಕಿಟಕಿಯಲೇ ಕರಗಿಹೋಗುತ್ತಾರೆ… ************************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವಿಧಾಯ ಹೇಳುತ್ತಿದ್ದೇವೆ ದೇವವರ್ಮ ಮಾಕೊಂಡ(ದೇವು) ಮಧುರ ಸ್ಪರ್ಷವಿತ್ತ ನೆನಪುಗಳು ಮುಳುಗುತ್ತಿವೆ ಕಣ್ಣುಗಳ ಮುಂದೆ ಹಾದು ಹೋಗುತ್ತಿವೆ ದಿನ ದಿನ ಕಳೆದ ಘಟನೆಗಳು ಭಯವಿದೆ ನನಗೀಗ ನೂರಾರು ವರುಷಗಳಿಂದ ಪಕ್ಕೆಲುಬುಗಳಲಿ ಬಚ್ಚಿಟ್ಟಿದ್ದ ನೆನಪುಗಳು ಅಭದ್ರಗೊಳ್ಳುತ್ತಿವೆ ಎಂದು ಹೇರಳವಾಗಿರುವ ಸಿಡಿಲು ಮಳೆ ಹನಿಗಳಿಂದ ನಾನು ಏಕಾಂಗಿಯಾಗಿದ್ದೇನೆ ಸ್ವರ್ಗದ ಹಾದೀಲಿ ದುಃಖಗಳ ಗುರುತ್ವಾಕರ್ಷಣೆಯ ತುದಿಗೆ ಒರಗಿಕೊಂಡು ನಾನೀಗ ಕಳೆದು ಹೋದ ಜೋತಿರ್ವರ್ಷಗಳ ಮೆಲಕು ಹಾಕುತ್ತ ನಿಂತಿರುವೆ ಲಿಖಿತ ಡೈರಿಗಳು ಶೀರ್ಷಿಕೆ ರಹಿತ ಪದ್ಯಗಳು ರಾತ್ರಿ ಮಂಡಿಸಿದ ಕನಸುಗಳು ಕಳೆದುಕೊಂಡು ಬರಿ ಅರೆಬರೆ ತಿದ್ದಿದ ನಂಬಿಕೆ ಹದೀಸ್ ಪುರಾಣಗಳ ನಡುವೆ ನಿಂತಿದ್ದೇನೆ ನೋಡಿ ವರ್ಷಕ್ಕೊಂದೆರಡು ಸಲ ತ್ರಿವರ್ಣ ಧ್ವಜದ ಕೆಳಗೆ ಮಸುಕಾದ ಹೆಜ್ಜೆಗುರುತುಗಳು ಉಸಿರು ಕಟ್ಟಿದ ಗಂಟಲಿಂದ ಬರುವ ಶುಭಾಶಯ ಸಹಾನುಭೂತಿಗಳು ಮಿನುಗುತ್ತಿವೆ ಮರುದಿನ ಮತ್ತೆ ಅಸಮ ಉಸಿರು ಎದೆಬಡಿತ ! ಬನ್ನಿ ನೋಡಬನ್ನಿ ನಾವು ಎಷ್ಟೊಂದು ನಿಧಾನವಾಗಿ ಎಷ್ಟೊಂದು ಅಭಾರವಾಗಿ ಸಾಯುತ್ತಿದ್ದೇವೆ ಗಲ್ಲಿಯಲಿ ಕನಸು ಕಂಡ ಆತ್ಮಗಳು ಷಹರನಲಿ ಅಳಿಯುತ್ತಿವೆ ಭಯ ಬೆನ್ನುಮೂಳೆ ಸುತ್ತುವಾಗ ಖುಷಿಯನ್ನು ರಕ್ತನಾಳ ಸುಡುತ್ತಿದೆ ಹೀಗೆ… ದಿನೇ ದಿನೆ ವಿಧಾಯ ಹೇಳುತ್ತಿದ್ದೇವೆ ನಾವು ನೋಡಬನ್ನಿ ನೀವು ——–

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆಸ್ಪತ್ರೆಗಳು ಸಿ ವಾಣಿ ರಾಘವೇಂದ್ರ ರೋಗಗಳ ಭೀತಿ ಮನ-ಮನೆಗಳಲ್ಲಿ ಆಸ್ಪತ್ರೆಗಳಲ್ಲಿ ಮೂರು ನಾಲ್ಕು ರೋಗಗಳು ನೂರಾರು ರೋಗಿಗಳಲ್ಲಿ ಬಿಡದು ರೋಗಗಳು ಮೊಲೆ ಹಾಲುಗಳನ್ನು ನವಜಾತ ಶಿಶುಗಳನ್ನು ಎಲ್ಲ ಕಲೆತ ಜಗದ ವೈದ್ಯರು ಒಟ್ಟಾಗಿ ಚಿಕಿತ್ಸೆ ನೀಡಿದರೂ ಮತ್ತಷ್ಟು ಅಸಾಧ್ಯ ರೋಗಗಳು ರೋಗ ನಾಶವಾಗುವ ತನಕ ಆಸ್ಪತ್ರೆಗಳು ರೋಗಿ ನಾಶವಾಗುವ ತನಕ ರೋಗಗಳು *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನಸಿನೊಳಗೊಂದು ಕನಸು ಹುಳಿಯಾರ್ ಷಬ್ಬೀರ್ ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ ನಿಜವಾಗಿಯೂ ನಾವು ಬಡವರು ಎಂದು ನೀವು ಕರೆದವರು ದಲಿತರು ಶ್ರಮಿಕರು ಅಲ್ಪ ಸಂಖ್ಯಾತರು ನೀವು ಹಾಕಿದ ಚೌಕಗಳೊಳಗೆ ನಡೆಸಲ್ಪಡುವ ಚದುರಂಗದ ದಾಳಗಳು.. ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ ನಾನು ಮಾತಾಡುವಾಗ ನಿಮ್ಮ ಕಿವಿ ಗಬ್ಬುನಾತದ ಸಂಡಾಸಿನೊಳಗೆ ಕೂತು ತುಕ್ಕು ಹಿಡಿದ ತಗಡಿನ ಮೇಲಿನ ಅತೃಪ್ತ ಸಾಲುಗಳಲ್ಲಿ ಕಣ್ಣು ಹೂತು ಸೋತು ಹೋದ ನಿಮ್ಮ ಪಂಚೇಂದ್ರಿಯಗಳ ಪ್ರಜ್ಞಾವಂತಿಕೆಗೆ ಅಕಾಲಿಕ ಆಮಶಂಕೆ….! ಈ ಅಯೋಮಯದೊಳಗೆ ನಿಮಗೆ ಬಿತ್ತಂತೆ ಒಂದು ಕನಸು ನಿಮ್ಮದೇ ಮಗು ದಿಢೀರನೇ ಬಾಗಿಲು ಒದ್ದು ಕಟ್ಟಿದ “ಉಚ್ಚೆ ” ನುಗ್ಗಿಸಿ ಹಿಂಡಿದ ನಿಮ್ಮ ಮುಖದ ಬೆವರಲ್ಲಿ ಬೆರೆಸಿ ಉಪ್ಪೊಳಗೆ ಉಪ್ಪಾದಂತೆ. ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ ನಾವು ಬಡವರು ಕತ್ತಲೆಯ ಕಂಬಳಿಯನ್ನು ಹಾಸಿ ಹೊದ್ದು ಮಕ್ಕಳಿಗೂ ಹೊದಿಸಿದವರು ಖೋಟಾ ಬೌದ್ಧಿಕತೆಯ ಬಿಟ್ಟಿ ಬೆಳಕಿನಲ್ಲಿ ಹೇಳ ಹೆಸರಿಲ್ಲದೆ ಕೊಚ್ಚಿ ಹೋದವರು.. ಖುಲ್ಲಾ ಆಗಿರುವ ಅಟ್ಟದಲ್ಲಿ ಮರ್ಯಾದೆಗೆಟ್ಟು ಆಟವಾಡುತ್ತಿರುವ ಇಲಿಗಳ ಸದ್ದು ಬಂದರೂ ಬರಬಹುದು ತಿಂದು ತೇಗುವುದಕ್ಕೆ ದಾಸೀಮಯ್ಯನ ಇನ್ನೊಂದು ಬೆಕ್ಕು ಕದ್ದು… ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ… ! *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೆನಪಿಗೆ ಅಂಜನಾ ಹೆಗಡೆ ಎಲ್ಲ ಮರೆತೆನೆಂದು ಮೈಮರೆತರೂ ಆಗೊಮ್ಮೆ ಈಗೊಮ್ಮೆ ನೆನಪಾಗುವ ಮುಖಗಳಿಗೆ ಮುಖಕೊಟ್ಟು ಮುಂದಕ್ಕೋಡುವಾಗ ಮೈಯೆಲ್ಲ ಮುಳ್ಳು! ನನ್ನದೇ ನೆರಳು ಅಪರಿಚಿತ ಬೆನ್ನಿಗಂಟಿದ ಹಸ್ತಗಳು ಹತ್ತಾರು ದೃಷ್ಟಿಗಳು ಎಲ್ಲ ಅಸ್ಪಷ್ಟ! ಹಳೆಯದನ್ನೆಲ್ಲ ಹರಿದು ಹರಿದು ಹಂಚಿದಂತೆ ಕಾಲಿಗಡರಿದ ಕಲ್ಲು ಕತೆ ಹೇಳುತ್ತಲೇ ಮಣ್ಣಾಗಿ ಹೋದದ್ದು ಅದೇ ವರುಷ ಮಳೆ ಧಾರಾಕಾರ ಸುರಿದದ್ದು ಎಲ್ಲ ಇತಿಹಾಸವೇ ಇರಬೇಕು ಮುಖಗಳೆಲ್ಲ ಕತೆಗಳು ಈಗ! ದೃಷ್ಟಿಗಳೆಲ್ಲ ಬರಿದೇ ನೋಟಗಳು! ಮಣ್ಣಿದ್ದಲ್ಲಿ ಮರ ಮರದ ತುಂಬೆಲ್ಲ ಹೂವು ಹಣ್ಣು ಮಳೆ ಮಾತ್ರ ನಿಂತಿಲ್ಲ ನೆನಪಿಗೆ ತೀರವಿಲ್ಲ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಣ್ಣಲಿ ಅವಿತ ಜೀವ ಟಿ.ಪಿ. ಉಮೇಶ್ ಬದುಕ ಸಂಪಾದನೆಗೆ ಹೋದ ಜೀವ ಬರಲಿಲ್ಲ ಮರಳಿ ಬೀದಿಯಲಿ ಅಲೆದು ತಿರುವಿನಲಿ ಕಳೆದು ಕಛೇರಿ ಕರ್ಮಗಳ ಫೈಲುಗಳಲಿ ಹೊರಳಿ ದಿನಸಿ ತರಕಾರಿ ಹಣ್ಣಿನಂಗಡಿಯಲಿ ಉರುಳಿ ಲೈಬ್ರರಿ ಸಿನೆಮಾ ಪಾರ್ಕು ಪಾರ್ಟಿಗಳ ಸಂಧಿಸಿ ನೋವಿನ ಮನೆಗೆ ಪ್ರೀತಿಯ ತರಲೋದ ಜೀವ ಮತ್ತೆ ಮರಳಿ ಬರಲಿಲ್ಲ ಜೀವ ಬರುವಾಗ ವಿಷದ ಮಳೆ ಬಂತಂತೆ ದಾರಿ ಅಲ್ಲಲ್ಲೆ ಹುಗಿದು ಹೋಯ್ತಂತೆ ಗಿಡ ಮರ ಪಶು ಪಕ್ಷಿ ಎಲ್ಲ ಉದುರಿ ಕರಗಿದುವಂತೆ ಜೀವವೂ ನೀರು ಆಹಾರವಿರದೆ ಹೊದ್ದಾಡಿ ಸದ್ದಡಗಿತಂತೆ ಕುಸಿಯುತಿಹ ಭೂಮಿ ಮಣ್ಣಲಿ ಮರೆಯಾಯಿತಂತೆ ಮತ್ತೆ ಮರಳಿ ಬಾರದು ಜೀವ ಕನಸಾದ ಸೊಗಸಾದ ಬದುಕಾಗಿದ್ದ ಜೀವ ಜಂತಿಗಳು ಮುರಿದ ಮನೆಗೆ ತೊಲೆಯಾಗಿದ್ದ ಜೀವ ಉರಿವ ಧಗೆಯನೆ ಕುಡಿದು ಹೂ ನಗುವ ಹಂಚುತ್ತಿದ್ದ ಜೀವ ನೋವಿನಲೆ ದುಡಿದು ಪ್ರೀತಿಯನೆ ಗಳಿಸಿ ಉಣಿಸುತ್ತಿದ್ದ ಜೀವ ಏನು ಹೇಳಿದರೇನು ಮತ್ತೆ ಬರುವುದೇನು ಭರವಸೆಯ ಜೀವ ಮರಳಿ ಬಾರದು ಪ್ರೀತಿಯ ಜೀವ ಮಳೆ ಬಾರದೆ ಯಾವ ಬದುಕಿಲ್ಲ ವಿಷದ ಮಳೆಗೆ ಇನ್ನು ಉಳಿವಿಲ್ಲ ಮಳೆ ಇರಲಿ ಪ್ರೀತಿಯ ಮನೆಗೆ ವಿಷವೇಕೆ ಸಲಹುವಾ ಧರಣಿಗೆ ಯಾರಿಟ್ಟರೊ ನಂಜು ಸಿಗದಾ ಮುಗಿಲಿಗೆ ಬದುಕು ಬಹಳಿತ್ತು ಮಣ್ಣಲಿ ಅವಿತ ಜೀವಕೆ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ತೇಜಾವತಿ ಹೆಚ್. ಡಿ ಭಾರತಾಂಬೆಯ ಮಡಿಲಲ್ಲಿ ತ್ರಿವರ್ಣಗುಡಿಯು ರಾರಾಜಿಸುತ್ತಿದೆ ವೀರ ತ್ರಿರಂಗವೂ ತನ್ನದೇ ವಿಶೇಷತೆಯ ತಿಳಿಸಿ ಹೇಳುತ್ತಿದೆ ವೀರ ಮಹಾಸಾಗರ ಅರಬ್ಬೀ ಕೊಲ್ಲಿ ಹಿಮಾಲಯದವರೆಗೆ ಗಡಿ ಚಾಚಿ ಹರಡಿದೆ ಅಡಿಯಿಂದ ಮುಡಿಯವರೆಗು ವಿವಿಧತೆಯಲಿ ಏಕತೆಯ ತೋರುತ್ತಿದೆ ವೀರ ದೀಪಾವಳಿ ಕ್ರಿಸ್ಮಸ್ ಮೊಹರಂ ರಂಜಾನ್ ಹಬ್ಬಗಳೆಲ್ಲವ ಆಚರಿಸುತ್ತಿದೆ ಜಾತಿ – ಮತ ಬೇಧವಿರದೆ ಸರ್ವಧರ್ಮ ಸಹಿಷ್ಣುತೆ ಭ್ರಾತೃತ್ವ ಸಾರುತ್ತಿದೆ ವೀರ ಶಿಲಾಶಾಸನ ವೀರಗಲ್ಲು ಮಾಸ್ತಿಗಲ್ಲುಗಳು ಎಲ್ಲೆಂದರಲ್ಲಿ ಕಾಣಿಸುತ್ತವೆ ಪ್ರತಿಯೊಂದರಲ್ಲೂ ಹರಿದ ಪ್ರೇಮ, ತ್ಯಾಗ ನೆತ್ತರಿನ ಕತೆಯನ್ನು ನೆನಪಿಸುತ್ತಿದೆ ವೀರ ತನುಮನದ ನರನಾಡಿಯಲ್ಲು ದೇಶಭಕ್ತಿಯ ಮಿಂಚು ಪ್ರವಹಿಸುತ್ತಿದೆ ತೇಜಾಳ ಎದೆಯಗೂಡಲ್ಲಿ ಭಾರತೀಯಳೆಂಬ ದೀಪ ಬೆಳಗುತ್ತಿದೆ ವೀರ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕಾಲದ ಕರೆ ಡಾ.ಪ್ರಸನ್ನ ಹೆಗಡೆ ಮನೆಯ ಒಳಗೇ ಉಳಿಯಬೇಕಾಗಿದೆ ನಮ್ಮನ್ನ ನಾವೇ ಉಳಿಸಿಕೊಳಬೇಕಾಗಿದೆ ನಮ್ಮ ನಂಬಿದವರ ನಾವೇ ರಕ್ಷಿಸಿಕೊಳಬೇಕಾಗಿದೆ ಒಳಗಿದ್ದುಕೊಂಡೇ ಸಮರ ಸಾರ ಬೇಕಾಗಿದೆ ಮುಖಗವಚ ಧರಿಸಬೇಕಾಗಿದೆ ವೈರಾಣುವ ದೂರವೇ ಇಡಬೇಕಾಗಿದೆ ನಡುನಡುವೆ ಅಂತರ ಕಾಪಾಡಿಕೊಂಡು ನಮ್ಮ ನಮ್ಮ ಅಂತಸ್ಥ ಮೆರೆಯಬೇಕಾಗಿದೆ ಕಾಲ್ಗಳ ಕಂಬವಾಗಿಸಿಕೊಂಡು ಇದ್ದಲ್ಲೇ ಇರಬೇಕಾಗಿದೆ ಮನಸ್ಸನ್ನು ಕಲ್ಲಾಗಿಸಿಕೊಂಡು ಯೋಚಿಸಬೇಕಾಗಿದೆ ಶಿರವನ್ನೇ ಹೊನ್ನಗಲಶವಾಗಿಸಿಕೊಂಡು ಆತ್ಮಜ್ಯೋತಿಯ ಬೆಳಗಬೇಕಾಗಿದೆ ಮನದಿ ಕುಣಿವ ಮಂಗಗಳ ಹಿಡಿದು ಉದ್ಯಾನವನ ಉಳಿಸಿಕೊಳಬೇಕಾಗಿದೆ ಉಳಿದಿದ್ದೆಲ್ಲವ ನಾಳೆಗೆ ಮುಂದೂಡಿ ಈ ದಿನವ ಹೇಗೋ ದೂಡಬೇಕಾಗಿದೆ ಹೊರಗೆ ಆಡುವ ಮಕ್ಕಳ ಕರೆದು ಬದುಕಿನಾಟವ ಕಲಿಸಬೇಕಾಗಿದೆ ಹಿಡಿ ಹಿಡಿದು ವ್ಯಯ ತೂಗಿಸಿ ನಾಳೆಗೂ ಉಳಿಸಿಕೊಳಬೇಕಾಗಿದೆ ಶುಭ್ರ ಹಸ್ತರಾಗಬೇಕಾಗಿದೆ ಶುದ್ಧ ಚಿತ್ತರಾಗಬೇಕಿದೆ ಶುಚಿತ್ವವೇ ದೈವತ್ವವೆಂಬ ಅಮರ ಸಂದೇಶ ಸಾರಬೇಕಾಗಿದೆ ಈ ಯುದ್ಧ ಗೆಲ್ಲಬೇಕಾಗಿದೆ ಈ ರಾಷ್ಟ್ರವ ಉಳಿಸಿಕೊಳ್ಳ ಬೇಕಾಗಿದೆ ಸಹಸ್ರ ಸವಾಲ್ಗಳಿಗೆ ಎದೆಯೊಡ್ಡಬೇಕಾಗಿದೆ ಅದಕಾಗಿ ನಾವೆಲ್ಲ ಸಜ್ಜಾಗಬೇಕಿದೆ ಮೂರನೇ ಕಣ್ಣ ತೆರೆಯಬೇಕಾಗಿದೆ ಕಾಣದ ಕ್ರಿಮಿಯ ಹುಡುಕಬೇಕಾಗಿದೆ ಲಕ್ಷಣ ರೇಖೆಯೊಳಗಿದ್ದುಕೊಂಡೇ ಶೂರ್ಪನಖಿಯ ಮೂಗ ಹಿಂಡಬೇಕಾಗಿದೆ. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ತೇಜಾವತಿ ಹೆಚ್. ಡಿ ಅಭಿಮಾನದ ಎದೆಪುಟದಲಿ ಅನುಮಾನದ ಸಾಲುಗಳೇತಕೆ ಗೆಳೆಯಾ ಆತ್ಮಸಾಕ್ಷಿಯ ದೀಪದೆದುರಲಿ ಅಂಧಕಾರದ ಚಿಂತೆಗಳೇತಕೆ ಗೆಳೆಯಾ ಅಂಗೈಯ್ಯಲೇ ಮಾಣಿಕ್ಯವಿದ್ದರೂ ಅದರಾಕರ್ಷಿತರ ಗೊಡವೆಗಳೇತಕೆ ಒಡೆಯಾ ನಿನ್ನಂತರಂಗದೊಳು ನಾನು ಪಣತಿಯಾಗಿದ್ದರೂ ಭ್ರಮೆಗಳೇತಕೆ ಗೆಳೆಯಾ ಹದವರಿತು ಹೆಪ್ಪಾಗಿರುವ ಮೊಸರಿನಲಿ ಕಲ್ಲ ಹುಡುಕುವುದೇತಕೆ ಇನಿಯಾ ಒಳಗವಿತಿರುವ ಕಂಪಿನ ಘ್ರುತವಿದ್ದರೂ ನಾರುವ ಭಾವಗಳೇತಕೆ ಗೆಳೆಯಾ ನೋವುನಲಿವಲೂ ಜೊತೆಯಾಗಿ ಹಿಂಬಾಲಿಸುವ ನೆರಳ ಬಾಧಿಸುವುದೇತಕೆ ಹೃದಯಾ ನೆರಳಿಗೆ ನಿನ್ನ ಹೊರತು ಮತ್ಯಾವ ಆಸರೆ, ನಿನಗೆ ಭಯಗಳೇತಕೆ ಗೆಳೆಯಾ ದುಃಖಗಳ ಮನದ ಮರುಭೂಮಿಯಲಿ ಬಿಸಿಗಾಳಿಯಾಗಿ ಸುಳಿಯುವುದೇತಕೆ ಗೆಣೆಯಾ ಹಗಲುತೇಜದಿ ದಾಹವ ತಣಿಸಲು ಹವಣಿಸುತ್ತಿರುವ ಜೀವಕೆ ಮೃಗಜಲಗಳೇತಕೆ ಗೆಳೆಯಾ *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ವೆಂಕಟೇಶ್ ಚಾ ಭವಿಷ್ಯದ ಬದುಕಿನ ಚಿತ್ರಪಟ ಹಸಿರಾಗಿದೆ ನಾವಿಬ್ಬರೂ ಜೊತೆಯಾದಾಗ ನಿಸರ್ಗವು ಹೊಸ ಬದುಕಿಗೆ ಸಾಕ್ಷಿಯಾಗಿದೆ ನಾವಿಬ್ಬರೂ ಜೊತೆಯಾದಾಗ|| ಬಾಹುಗಳ ಬಂಧನವು ಮತ್ತಷ್ಟು ಗಟ್ಟಿಗೊಂಡಿದೆ ತಂಗಾಳಿಯ ತಂಪಿನಲಿ ಮಣ್ಣಿನ ಕಂಪಿಗೆ ಮನಸ್ಸು ಹೂವಾಗಿದೆ ನಾವಿಬ್ಬರೂ ಜೊತೆಯಾದಾಗ|| ಹೆಜ್ಜೆಗಳು ಜೊತೆಯಾಗಿ ಲಜ್ಜೆಯಿಲ್ಲದೆ ಸುಂದರ ಪಯಣ ಬೆಳೆಸಿವೆ ಮುಂಗಾರು ಮಳೆಗೆ ದಾರಿಯು ಹಸನಾಗಿದೆ ನಾವಿಬ್ಬರೂ ಜೊತೆಯಾದಾಗ || ನಂಬಿಕೆಯ ಕೊಡೆಯೊಂದು ರಕ್ಷಣೆಯ ಹೊಣೆಯನ್ನು ಹೊತ್ತಿದೆ ಬಹುದಿನಗಳ ಕನಸು ಹಣ್ಣಾಗಿ ನನಸಾಗಿದೆ ನಾವಿಬ್ಬರೂ ಜೊತೆಯಾದಾಗ || ಅಗೋ,ಮುಂಬರುವ ದಿನಗಳ ತುಂಬಾ ನೆರಳು ಬೆಳಕಿನ ಚೆಂದದ ಆಟ ‘ಚಾಗಿ’ಯ ಕಲ್ಪನೆಯ ಬದುಕು ನಿಜವಾಗಿದೆ ನಾವಿಬ್ಬರು ಜೊತೆಯಾದಾಗ || ********

ಕಾವ್ಯಯಾನ Read Post »

You cannot copy content of this page

Scroll to Top