ಅಬ್ಬರವಿಳಿದಾಗ
ಶೈಲಜಾ ಹಾಸನ್ ತಣ್ಣಗೆ ಗಾಳಿ ಬೀಸಿದಂತಾಗಿ ಮಾಧವಿ ನಡುಗಿದಳು. ಕೆರೆ ಏರಿ ಮೇಲೆ ಕುಳಿತಿದ್ದರಿಂದ ಕೆರೆಯ ಮೇಲಿಂದ ಹಾದು ಬರುತ್ತಿದ್ದ ಗಾಳಿ ಎದೆ ನಡುಗಿಸುವಂತಿತ್ತು. ಚಳಿ ಆಗುತ್ತಿದ್ದರೂ ಮಾಧವಿಗೆ ಮನೆಗೆ ಹೋಗುವ ಮನಸ್ಸು ಇರಲಿಲ್ಲ. ಏರಿ ಮೇಲೆ ಕುಳಿತು ಸಾಕಾದ ಮಾಧವಿ ನಿಧಾನವಾಗಿ ಕೆಳಗಿಳಿದು ನೀರಿಗೆ ಕಾಲು ಇಳಿಬಿಟ್ಟು ಚಪ್ಪಡಿ ಮೇಲೆ ಕುಳಿತಳು. ಕಾಲುಗಳೆರಡನ್ನು ನೀರಿನಲ್ಲಿ ಆಡಿಸುತ್ತಾ ಕಾಲಬೆರಳನ್ನು ಕಚ್ಚಲು ಬರುತ್ತಿದ್ದ ಮೀನುಗಳೊಡನೆ ಆಟವಾಡತೊಡಗಿದಳು. ಕೆಲವು ನಿಮಿಷಗಳಷ್ಟೆ ಆ ಆಟವೂ ಮುದ ನೀಡದೆ ಕಾಲುಗಳನ್ನು ಎತ್ತಿಕೊಂಡು ಮೇಲೆ ಇರಿಸಿಕೊಂಡಳು. ಬಾನಿನಲ್ಲಿ ಬೆಳ್ಳಕ್ಕಿಗಳು ಸಾಲಾಗಿ ಶಿಸ್ತಿನ ಸಿಪಾಯಿಗಳಂತೆ ಹೋಗುತ್ತಿರುವುದನ್ನು ಕಂಡು ಎದ್ದು ನಿಂತವಳೇ “ಬೆಳ್ಳಿಕ್ಕಿ, ಬೆಳ್ಳಕ್ಕಿ ನನ್ನ ಉಂಗುರ ಕೊಡ್ತಿನಿ ನಿನ್ನ ಉಂಗುರ ಕೊಡು” ಎಂದು ಕೂಗಿದಳು. ಯಾರಾದರೂ ಕೇಳಿಸಿಕೊಂಡರೇನೊ ಎಂದು ತಟ್ಟನೆ ನಾಚಿ ಸುತ್ತಲೂ ನೋಡಿದಳು. ಸ್ವಲ್ಪವೇ ದೂರದಲ್ಲಿ ಬಟ್ಟೆಗೆ ಸೋಪು ಹಚ್ಚುತ್ತಿದ್ದ ಶಾಮಣ್ಣನ ಸೊಸೆ ” ಏನೇ ಮಾಧವಿ, ಉಂಗುರ ಕೇಳಿದಿಯಾ ಬೆಳ್ಳಕ್ಕಿಯಾ, ಸ್ವಲ್ಪ ದಿನ ಇರು, ಬೆಳ್ಳಕ್ಕಿಯಂತೆ ಮದ್ವೆ ಗಂಡು ಹಾರಿ ಬಂದು ಚಿನ್ನದುಂಗುರ ತೊಡಿಸುತ್ತಾನೆ.” ಎನ್ನುತ್ತಾ ನಕ್ಕಳು. “ಥೂ ಹೋಗಕ್ಕ, ನಾನು ಚಿನ್ನದ ಉಂಗುರನೇ ಹಾಕಳಲ್ಲ, ಅದರಲ್ಲೂ ಮದ್ವೆ ಗಂಡು ತೊಡಿಸುತ್ತಾನೆ ಅಂದ್ರೆ ನಂಗೆ ಬೇಡವೇ ಬೇಡಾ” ಮೂತಿ ಉಬ್ಬಿಸಿದಳು. “ನೀನು ಬೇಡ ಅಂದ್ರೆ ನಿಮ್ಮಪ್ಪ ಕೇಳುತ್ತಾರಾ, ಆಗ್ಲೆ ಗಂಡು ಹುಡುಕುತ್ತಾ ಇದ್ದಾರೆ. ಈ ವರ್ಷವೇ ನಿಂಗೆ ಮದ್ವೆ ಕಣೇ” ಮಾಧವಿಯನ್ನು ರೇಗಿಸಿದಳು. ” ಥೂ ಎಲ್ಲಿಹೋದರೂ ಮದ್ವೆ ವಿಷಯನೇ, ಮೊದ್ಲು ನೀನು ಬಟ್ಟೆ ಒಗೆಯಕ್ಕ” ಸಿಡಾರನೇ ಸಿಡುಕಿ ಅಲ್ಲಿಂದ ಎದ್ದು ಮನೆಯತ್ತ ಹೊರಟಳು. ಮನೆಗೆ ಹೊಗಲು ಮನಸ್ಸಾಗದೆ ಸೀದಾ ತೋಪಿನೊಳಗೆ ಹೆಜ್ಜೆ ಹಾಕಿ ಅಲ್ಲಿದ್ದ ಅವಳ ಮೆಚ್ಚಿನ ಮಾವಿನ ಮರವೇರಿ ಕುಳಿತುಕೊಂಡಳು. ಮರದಲ್ಲಿನ ಮಾವಿನ ಕಾಯಿಗಳು ಬಲಿತು ಮಾವಿನ ಸುವಾಸನೆ ಸುತ್ತಲೂ ವ್ಯಾಪಿಸಿತ್ತು. ಆ ವಾಸನೆಗೆ ಅರೆ ಕ್ಷಣ ಮೂಗರಳಿಸಿ ಕಂಪನ್ನು ಒಳಗೆಳೆದುಕೊಂಡಳು. ಮನೆಯೊಳಗೆ ರಾಶಿ ರಾಶಿ ಹಣ್ಣು ಬಿದ್ದಿದ್ದರೂ ತಿನ್ನುವ ಮನಸ್ಸಾಗಿರಲಿಲ್ಲ. ಮನದೊಳಗೆ ಕೊರೆಯುತ್ತಿದ್ದ ಸ್ಕೂಟಿ ವಿಷಯವೇ ಬೃಹದಾಕಾರವಾಗಿ ಎದ್ದು ಕುಣಿಯ ತೊಡಗಿತು. ಹೊಸ ಸ್ಕೂಟಿ ಓಡಿಸುತ್ತಾ ಕಾಲೇಜಿನ ದಾರಿ ಹಿಡಿದು ತಾನು ಹೋಗುತ್ತಿದ್ದರೆ ಎಲ್ಲರ ದೃಷ್ಟಿಯೂ ನನ್ನ ಮೇಲೆಯೇ, ಸ್ಕೂಟಿಯಿಂದ ಹೆಮ್ಮೆಯಿಂದ ಇಳಿದು ಸ್ಟಾಂಡಿನಲ್ಲಿ ನಿಲ್ಲಿಸಿ, ಬ್ಯಾಗ್ ತೆಗೆದುಕೊಂಡು ಹೆಗಲಿಗೇರಿಸಿಕೊಂಡು ಕ್ಲಾಸಿನೊಳಗೆ ಹೋಗುತ್ತಿದ್ದರೆ….ರೇ… ರಾಜ್ಯದಲ್ಲಿ ಮುಳುಗಿಹೋಗಿರುವಾಗಲೇ ಅಪ್ಪನ ಕೂಗು ” ಮಾಧವಿ, ಎಲ್ಲಿದ್ದಿಯಾ, ಕತ್ತಲೆ ಆಗ್ತಾ ಇದೆ, ಈ ತೋಪಿನಲ್ಲಿ ಕುಳಿತು ಕೊಂಡು ಏನು ಮಾಡ್ತಾ ಇದ್ದಿಯಾ,ಎದ್ದು ಬಾ ಮನೆಗೆ” ಅಪ್ಪನ ಜೋರು ಧ್ವನಿ ಕೇಳಿಸಿದಾಗ ಅತ್ತ ತಿರುಗಿ ” ಈ ಅಪ್ಪಾ ಇನ್ನೂ ಸ್ವಲ್ಪ ಹೊತ್ತು ಸುಮ್ಮನಿರಬಾರದಿತ್ತಾ, ನನ್ನ ಕನಸು ಅರ್ಧಕ್ಕೆ ನಿಂತು ಹೋಯಿತು ಎಂದು ಬೈಯ್ದುಕೊಳ್ಳುತ್ತಾ ಮರದಿಂದ ಒಂದೇ ಸಲಕ್ಕೆ ಧುಮುಕಿದಳು. ತೋಪಿನಿಂದ ಮನೆ ಒಂದು ಕೂಗಳತೆ ಅಂತರ. ಮಗಳು ಕೆರೆ ಏರಿ ಅಥವಾ ತೋಪು ಇವೆರಡು ಜಾಗದಲ್ಲಿಯೇ ಇರುತ್ತಾಳೆ ಅಂತ ಗೊತ್ತಿದ್ದ ಕೇಶವ ಕೆರೆ ಬಳಿ ಮಾಧವಿ ಇಲ್ಲ ಅಂತ ತಿಳಿದು ಕೊಂಡು ತೋಪಿನಲ್ಲಿಯೇ ಇರ ಬೇಕೆಂದು ಕೂಗು ಹಾಕಿದ್ದ. ಮುಖ ದುಮ್ಮಿಸಿಕೊಂಡೇ ಮನೆಯೊಳಗೆ ಬಂದ ಮಾಧವಿ ಯಾರೊಂದಿಗೂ ಮಾತನಾಡದೆ ಕುರ್ಚಿ ಮೇಲೆ ಕುಳಿತು ಕೊಂಡಳು. ಮಗಳ ಮುದ್ದು ಮುಖ ನೋಡಿದ ವೇದಾ “ಮಾಧವಿ, ಊಟಾ ಮಾಡು ಬಾರೆ” ಕಕ್ಕುಲಾತಿಯಿಂದ ಕರೆದಳು. ಮಧ್ಯಾಹ್ನವೂ ಊಟಾ ಮಾಡದೆ ಹಸಿದಿರುವ ಮಗಳ ಬಗ್ಗೆ ಅಂತಃಕರಣದಿಂದ ಕರೆದಳು. ಮಾಧವಿ ಅಮ್ಮನ ಮುಖವನ್ನು ದುರು ದುರು ನೋಡುತ್ತಾ ತಟ್ಟನೆ ಎದ್ದವಳೇ ರೂಮಿನತ್ತ ನಡೆದು ಧಡಾರನೇ ಬಾಗಿಲು ತೆರೆದು ಒಳನಡೆದು ಬಿಟ್ಟಳು. “ನೋಡ್ರಿ, ನೋಡ್ರಿ ಅವಳು ಹೇಗಾಡ್ತಾ ಇದ್ದಾಳೆ. ಬೆಳಗ್ಗೆಯಿಂದಲೂ ಏನೂ ತಿಂದಿಲ್ಲ. ಮಧ್ಯಾಹ್ನವೂ ಊಟಾ ಮಾಡಿಲ್ಲ.ಇವಳು ಹೀಗೆ ಹಸ್ಕೊಂಡಿದ್ರೆ ಹೇಗ್ರಿ ನನ್ನ ಗಂಟಲಲ್ಲಿ ಅನ್ನ ಇಳಿಯುತ್ತೆ” ವೇದಾ ನೊಂದುಕೊಂಡಳು. “ನೋಡು ವೇದಾ, ಅವಳೇನೇ ಹಟ ಮಾಡಿದ್ರೂ ನಾನೂ ಅವಳನ್ನ ಕಾಲೇಜಿಗೆ ಕಳಿಸಲ್ಲ.ಸ್ಕೂಟಿಯನ್ನೂ ಕೊಡಿಸಲ್ಲ.ಅವಳು ಅಷ್ಟು ದೂರ ಗಾಡಿ ಓಡಿಸಿಕೊಂಡು ಕಾಲೇಜಿಗೆ ಹೋಗೋದನ್ನ ನನ್ನ ಕೈಲಿ ನೋಡೋಕೆ ಆಗಲ್ಲ ತಿಳಿತಾ.ನಾಳೆ ಗಂಡಿನ ಕಡೆಯವರು ಬರ್ತಾ ಇದ್ದಾರೆ. ಅವರ ಮುಂದೆ ರಾಮಾಯಣ ಮಾಡದೆ ಮರ್ಯಾದೆಯಿಂದ ಇರೋ ಹಾಗೆ ನಿನ್ನ ಮಗಳಿಗೆ ಬುದ್ದಿಹೇಳು.” ನಿರ್ಧಾರಿತವಾಗಿ ಕೇಶವ ನುಡಿದನು. “ನಿಮ್ಮ ಅಪ್ಪ ಮಗಳ ಮಧ್ಯೆ ನನ್ನ ಸಂಕಟ ಕೇಳೊರು ಯಾರು? ಅವಳುಕಾಲೇಜಿಗೆ ಹೋಕ್ತಿನಿ ಅಂತ ಹಟ ಮಾಡ್ತಾಳೆ, ನೀವು ಮದ್ವೆ ಮಾಡ್ತಿನಿ ಅಂತ ಹಟ ಮಾಡ್ತಿರಾ, ನಾನು ಯಾರ ಕಡೆಗೆ ಹೇಳಲಿ. ಏನಾದ್ರೂ ಮಾಡಿ ಕೊಳ್ಳಿ, ನನ್ನ ಮಾತನ್ನ ಯಾರು ಕೇಳುತ್ತಿರಿ” ಜೋರಾಗಿಯೇ ಗೊಣಗಾಡುತ್ತಾ ಅಡುಗೆ ಮನೆ ಹೊಕ್ಕಳು. ಮಾಧವಿ ತನ್ನ ಹಟ ಬಿಡಲಿಲ್ಲ. ಅಂದು ಯಾರೂ ಮನೆಯಲ್ಲಿ ಊಟಾ ಮಾಡಲಿಲ್ಲ. ಬೆಳಗ್ಗೆಯಿಂದಲೆ ಕೇಶವ ಸಡಗರದಿಂದ ಓಡಾಡುತ್ತಿದ್ದ. ಗಂಡಿನವರು ಬೆಳಗ್ಗೆ ಹನ್ನೊಂದು ಗಂಟೆಗೆ ಬರುತ್ತಾರೆ ಎಂದು ತಿಳಿಸಿದ್ದರಿಂದ ವೇದಳಿಗೆ ಬಂದವರಿಗೆ ತಿಂಡಿ ಮಾಡಿ ಸಿದ್ದವಾಗಿರಲು ತಿಳಿಸಿದ. ಮಗಳ ಕೋಪವನ್ನು ಲೆಕ್ಕಕ್ಕೆ ತೆಗೆದು ಕೊಳ್ಳದೆ ಪಾಪ ಅದು ಮಗು ಅದಕ್ಕೇನು ತಿಳಿಯುತ್ತದೆ. ಕಾಲೇಜು, ಸ್ಕೂಟಿ ಅಂತ ಕುಣಿಯುತ್ತೆ, ಬಂದ ವರ ಒಪ್ಪಿಕೊಂಡರೆ ಮದುವೆಯಾಗಿ ಅವನ ಪ್ರೀತಿಯಲ್ಲಿ ಎಲ್ಲವನ್ನು ಮರೆಯುತ್ತಾಳೆ. ನಮಗೆ ತಾನೇ ಯಾರಿದ್ದಾರೆ, ಇರುವ ಒಬ್ಬಳೆ ಮಗಳು ಓದು, ಕಾಲೇಜು ಅಂತ ಯಾಕೆ ಕಷ್ಟ ಪಡ ಬೇಕು ಅನ್ನೋವ ಧೋರಣೆಯಲ್ಲಿ ಕೇಶವನಿದ್ದ.ವೇದಳಿಗೂ ಗಂಡನ ರೀತಿ ಸರಿ ಎನಿಸಿದರೂ ಮಾಧವಿಗೆ ಮದುವೆ ಇಷ್ಟವಿಲ್ಲವಿರುವುದು, ಅವಳಿಗೆ ಮುಂದೆ ಓದಲು ಆಸೆ ಇರುವುದು, ಬಸ್ಸಿನ ಸೌಕರ್ಯ ಇಲ್ಲದಿರುವ ಈ ಊರಿನಿಂದ ಪ್ರತಿ ದಿನ ಸ್ಕೂಟಿಯಲ್ಲಿ ಕಾಲೇಜಿಗೆ ಹೋಗಲು ಮಗಳು ಬಯಸಿರುವುದು ಗೊತ್ತಿದ್ದ ವೇದ ಮಗಳ ಮನಸ್ಸನ್ನೂ ನೋಯಿಸಲಾರಳು. ಗಂಡನನ್ನು ಎದಿರು ಹಾಕಿಕೊಳ್ಳಲಾರಳು. ಇಬ್ಬರ ಮಧ್ಯೆ ಯಾರಿಗೂ ಹೇಳಲಾರದೆ ಒದ್ದಾಡಿ ಹೋಗುತ್ತಿದ್ದಾಳೆ. ಅಮ್ಮನ ಬಲವಂತಕ್ಕೆ ಗಂಡಿನ ಮುಂದೆ ಕುಳಿತಿದ್ದ ಮಾಧವಿಯ ಮುದ್ದು ಮುಖಕ್ಕೆ ಮದುವೆಯ ಗಂಡು ಕ್ಲೀನ್ ಬೈಲ್ಡ್ ಆಗಿಬಿಟ್ಟಿದ್ದ. ನಾಳೆನೇ ಮದ್ವೆ ಅಂದರೂ ತಾಳಿ ಕಟ್ಟೊಕೆ ಸಿದ್ದವಾಗಿಬಿಟ್ಟ. ಆದರೆ ಮಾಧವಿ ಮಾತ್ರಾ ಕತ್ತೆತ್ತಿಯೂ ಹುಡುಗನತ್ತ ನೋಡಿರಲಿಲ್ಲ. ಹುಡುಗ ತಂದೆ ” ಏನಮ್ಮ ನಮ್ಮ ಹುಡುಗ ಒಪ್ಪಿಗೆಯೇ ನಿನಗೆ, ಈಗ್ಲೇ ಸರಿಯಾಗಿ ನೋಡಿಕೊಂಡು ಬಿಡು, ಆಮೇಲೆ ನೋಡಿಲ್ಲ ಅಂತ ಹೇಳಬೇಡ” ಕತ್ತು ಬಗ್ಗಿಸಿ ಕುಳಿತಿದ್ದ ಮಾಧವಿಯನ್ನು ಕೇಳಿದರು. ಆಗಾ ಮಾಧವಿ ತಟ್ಟನೆ ” ಒಪ್ಗೆ ಇಲ್ಲ. ನನಗೆ ಮದ್ವೆ ಆಗೋಕೆ ಇಷ್ಟ ಇಲ್ಲ. ನಮ್ಮ ಅಪ್ಪನ ಬಲವಂತಕ್ಕೆ ಇಲ್ಲಿ ಕೂತಿದೀನಿ” ಮುಖಕ್ಕೆ ಹೊಡೆದ ಹಾಗೆ ಹೇಳಿ ಬಿಟ್ಟಳು. ಮನದೋಳಗಿನ ನಿರಾಶೆ, ಆಕ್ರೋಷ ತರಿಸಿ ಮಾಧವಿಗೆ ಹಾಗೆ ನುಡಿಯುವಂತೆ ಮಾಡಿ ಬಿಟ್ಟಿತ್ತು. ಈ ಅನಿರೀಕ್ಷಿತ ಘಟನೆಯಿಂದ ತಬ್ಬಿಬ್ಬಾದ ಗಂಡಿನವರು ದುರ್ದಾನ ತೆಗೆದುಕೊಂಡವರಂತೆ ಪೆಚ್ಚಾಗಿ ಬಿಟ್ಟರು. ಹುಡುಗನ ತಂದೆ ಎದ್ದು ನಿಂತು ಕೇಶವನತ್ತ ತಿರುಗಿ ” ಅಲ್ಲ ಸ್ವಾಮಿ, ಹುಡುಗನನ್ನು ಕರೆಸುವ ಮುಂಚೆ ನಿಮ್ಮ ಮಗಳ ಒಪ್ಪಿಗೆ ತೆಗೆದು ಕೊಳ್ಳ ಬಾರದಿತ್ತೆ. ಹುಡುಗಿಗೆ ಮದ್ವೆ ಇಷ್ಟ ಇಲ್ಲ ಅಂದ ಮೇಲೆ ಹುಡುಗಿ ನೋಡಿ ಏನು ಪ್ರಯೋಜನ, ನಮ್ಮ ಸಮಯವೂ ಹಾಳೂ, ನಿಮ್ಮ ಸಮಯವೂ ಹಾಳೂ, ನಾವಿನ್ನೂ ಹೊರಡುತ್ತೆವೆ, ಮೊದ್ಲೂ ನಿಮ್ಮ ಹುಡುಗಿಗೆ ನಡವಳಿಕೆ ಕಲಿಸಿ, ಆಮೇಲೆ ಮದುವೆ ಮಾಡುವಿರಂತೆ” ಅಂತ ವ್ಯಂಗ್ಯವಾಗಿ ನುಡಿದು ನಡೀರಿ ಹೋಗೋಣ ಅಂತ ತನ್ನವರೊಂದಿಗೆ ಹೊರಟು ನಿಂತರು. ” ದಯವಿಟ್ಟು ಕ್ಷಮಿಸಿ ಸ್ವಾಮಿ, ನನ್ನ ಮಗಳು ಇನ್ನೂ ಚಿಕ್ಕವಳು. ಏನೋ ಗೊತ್ತಾಗದೆ ಮಾತಾಡಿ ಬಿಟ್ಟಿದ್ದಾಳೆ. ನಾನು ಆಮೇಲೆ ಅವಳಿಗೆ ಬುದ್ದಿ ಹೇಳುತ್ತೆನೆ. ನೀವು ಬೇಸರ ಮಾಡಿ ಕೊಳ್ಳ ಬೇಡಿ. ಎಲ್ಲಾ ಹೆಣ್ಣು ಮಕ್ಕಳು ಮೊದ್ಲು ಮೊದ್ಲು ಮದ್ವೆ ಬೇಡಾ ಅಂತಾ ತಾನೇ ಹೇಳೊದು, ಅವಕ್ಕೇನು ಗೊತ್ತಾಗುತ್ತೆ. ನಾವು ಕೊಂಚ ತಿಳಿಸಿ ಹೇಳಿದ್ರೆ ಒಪ್ಪಿಕೊಂಡು ಮದ್ವೆ ಆಗಿ ಸಂಸಾರ ಮಾಡ್ತರೆ. ದಯವಿಟ್ಟು ನೀವು ಕುಳಿತು ಕೊಳ್ಳಿ. ಅನುನಯದಿಂದ ಕೇಶವ ಅವರ ಕೋಪ ಇಳಿಸಲು ನೋಡಿದ. ಅದ್ಯಾವುದಕ್ಕೂ ಜಗ್ಗದ ಅವರು “ಯಜಮಾನ್ರೆ , ಬಲವಂತಾಗಿ ನಿಮ್ಮ ಮಗಳನ್ನ ಸೊಸೆ ಮಾಡಿಕೊಳ್ಳುವ ದರ್ದು ನಮಗೇನು ಇಲ್ಲ. ನನ್ನ ಮಗನಿಗೆ ಹೆಣ್ಣುಕೊಡಲು ಕ್ಯೂ ನಿಂತಿದ್ದಾರೆ, ಹೆಚ್ಚು ಮಾತು ಬೇಡಾ, ನಾವಿನ್ನು ಬರ್ತಿವಿ” ಅಂದವರೆ ಮತ್ಯಾವುದಕ್ಕೂ ಅವಕಾಶ ಕೊಡದೆ ತಮ್ಮವರನ್ನು ಏಳಿಸಿಕೊಂಡು ಹೋಗಿಯೇ ಬಿಟ್ಟಾಗ ಅವಮಾನ ತಾಳದೆ ಕೇಶವ ಕುಸಿದು ಕುಳಿತರೆ, ವೇದಾ ಬಾಯಿಗೆ ಸೆರಗುಹಚ್ಚಿ ಬಿಕ್ಕಳಿಸಿದಳು. ಮಾಧವಿ ಮಾತ್ರ ಏನೂ ಆಗದವಳಂತೆ ಎದ್ದು ರೂಮಿನೊಳಗೆ ಹೋಗಿ ಬಟ್ಟೆ ಬದಲಿಸಿ ನೈಟ್ ಡ್ರಸ್ ಧರಿಸಿದಳು. ಗಂಡಿನವರು ಹೋಗಿದ್ದು ಒಳ್ಳೆಯದೇ ಆಯಿತು ಎಂದು ಕೊಂಡು ಹಾಯಾಗಿ ಹಾಸಿಗೆ ಮೇಲೆ ಉರುಳಿಕೊಂಡಳು. ಅಲ್ಲಿವರೆಗೂ ಕಾಡದಿದ್ದ ಹಸಿವು ಈಗಾ ಧುತ್ತನೆ ಕಾಡಿತು, ಹೊಟ್ಟೆ ಹಸಿವು ಹೆಚ್ಚಾಗಿ ನೆನ್ನೆಯಿಂದ ತಿನ್ನದೆ ಇದ್ದದ್ದು ಈಗಾ ಕಾಡಲು ತೊಡಗಿದಾಗ ಎದ್ದು ಅಡುಗೆ ಮನೆಗೆ ಹೋಗಿ ಗಂಡಿನವರಿಗೆ ಮಾಡಿದ್ದ ಉಪ್ಪಿಟ್ಟು, ಕೇಸರಿಭಾತನ್ನು ತಟ್ಟೆಗೆ ತುಂಬಿಕೊಂಡು ಹಾಲಿಗೆ ಬಂದು ಕುಳಿತು ಗಭ ಗಭನೆ ತಿನ್ನ ತೊಡಗಿದಳು. ಗಂಡಿನವರಿಗೆ ಅವಮಾನ ಮಾಡಿ ಏನೂ ಆಗದವಳಂತೆ ಅವರಿಗಾಗಿ ಮಾಡಿದ್ದ ತಿಂಡಿಯನ್ನು ತಿನ್ನುತ್ತಿರುವ ಮಗಳನ್ನು ನೋಡಿ ಕೇಶವನಿಗೆ ಪಿತ್ತ ಕೆರಳಿತು.ಅಷ್ಟು ಒಳ್ಳೆಯ ಸಂಬಂಧವನ್ನು ತಾನೇ ಕೈಯಾರೆ ದೂರ ತಳ್ಳಿದ ಮಗಳ ಮೇಲೆ ಮೊದಲೆ ಕ್ರೋಧ ಉಕ್ಕಿತ್ತು. ಈಗಾ ಆ ಕ್ರೋಧ ಮತ್ತಷ್ಟು ಹೆಚ್ಚಾಗಿ ಆವೇಶದಿಂದ ಮಗಳ ಬಳಿ ಬಂದವನೇ “ಹಾಳಾದವಳೆ ನಮ್ಮ ಹೊಟ್ಟೆ ಹುರಿಸೋಕೆ ಹುಟ್ಟಿದ್ದಿಯಾ. ಒಬ್ಳೆ ಮಗಳು ಅಂತ ಮುದ್ದು ಮಾಡಿ ಬೆಳೆಸಿದ್ದಕ್ಕೆ ಒಳ್ಳೆ ಉಡುಗರೆ ಕೊಟ್ಟು ಬಿಟ್ಟೆ ನೀನು,ಯಾಕಾದ್ರೂ ನನ್ನ ಮಗಳಾಗಿ ಹುಟ್ಟಿದ್ಯೆ” ಎಂದು ಬೈಯುತ್ತಾ ಅವಳು ತಿನ್ನುತ್ತಿದ್ದ ತಟ್ಟೆಯನ್ನು ಕಿತ್ತೆಸೆದು ಮಗಳ ಬೆನ್ನಿಗೆ ದಪ ದಪನೇ ಗುದ್ದಿದ. ಅಪ್ಪನ ಈ ಅನಿರೀಕ್ಷಿತ ಧಾಳಿಯಿಂದ ಕಂಗೆಟ್ಟು ಮಾಧವಿ ಜೋರಾಗಿ ಅಳತೊಡಗಿದಳು. ಅಪ್ಪನ ಹೊಡೆತ ಇದೇ ಮೊದಲು, ಈ ಆವೇಶ ರೋಷವೂ ಅವಳು ಕಂಡದ್ದು ಇದೇ ಮೊದಲು. ದಿಗ್ಭ್ರಾಂತಳಾಗಿ ಹೋದಳು ಮಾಧವಿ. ಅಪ್ಪ ಕೊಟ್ಟ ಏಟಿಗಿಂತ ಮನಸ್ಸಿಗೆ ನೋವಾಗಿದ್ದು ಅವನ ಮಾತುಗಳಿಂದ. ಮತ್ತಷ್ಟು ಹೊಡೆಯುವ ಉಮೇದಿನಲ್ಲಿದ್ದ ಕೇಶವನನ್ನು ತಡೆಯುತ್ತಾ ವೇದಾ “ಏನಾಯ್ತು ನಿಮಗೆ, ಯಾಕೀಗೆ ಆಡ್ತಾ ಇದ್ದಿರಾ, ಅವಳಂತೂ ಚಿಕ್ಕವಳು, ಗೊತ್ತಾಗದೆ ಏನೋ ಮಾತಾಡಿ ಬಿಟ್ಟಳು. ಅದನ್ನೆ ಆ ಗಂಡಿನವರು ದೊಡ್ಡದು ಮಾಡಿ ಬಿಟ್ಟರು. ಅಂಥ ಮನೆಗೆ ಮಗಳನ್ನು ಕೊಟ್ಟರೆ ಮುಂದೆ ಬಾಳಿಸುತ್ತಾರಾ, ಅವರ ನಿಜವಾದ ಬಣ್ಣ ಈಗ್ಲೆ ಗೊತ್ತಾಗಿದ್ದು ಒಳ್ಳೆಯದಾಯ್ತು. ನೀವು ಅದಕ್ಕಾಗಿ ಮಗೂನಾ ಹೊಡಿಬೇಡಿ, ನನ್ನಾಣೆ” ಅನ್ನುತ್ತಾ ಬಂದು ಮಗಳನ್ನು ರಕ್ಷಿಸಿಕೊಂಡಳು. ಪತ್ನಿಯ ವಿರೋಧ ಕಂಡು ಹಿಮ್ಮೆಟ್ಟಿದ ಕೇಸವ ತಪ್ತನಾಗಿ “ಹಾಳಾಗಿ ಹೋಗಿ ಇಬ್ಬರೂ” ಅಂತ ಪೂತ್ಕರಿಸಿ ಹೊರನಡೆದು ಬಿಟ್ಟ. “ಮಾಧವಿ, ನೀನ್ಯಾಕೆ ಗಂಡಿನವರ ಮುಂದೆ ಅಂಗೆಲ್ಲ ಮಾತಾಡಿದೆ. ನಿಮ್ಮಪ್ಪ ನೋಡು







