ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕಾವ್ಯ ಪರಂಪರೆ

ಬನ್ನಿ ನಮ್ಮ ಜೊತೆಗೂಡಿ…….. ಪ್ರತಿ ತಿಂಗಳ ಕಾರ್ಯಕ್ರಮ ಹಳಗನ್ನಡ ವಾಚನ ಮತ್ತು ವ್ಯಾಖ್ಯಾನ ದಿನಾಂಕ:15/12/2019 ಭಾನುವಾರ ಬೆಳಿಗ್ಗೆ 11ಕ್ಕೆ. ಮಹಿಳಾ ವಿಶ್ರಾಂತಿ ಕೊಠಡಿ ರವೀಂದ್ರ ಕಲಾಕ್ಷೇತ್ರ, ಬೆಂಗಳೂರು. ಬನ್ನಿ ನಮ್ಮ ಜೊತೆಗೂಡಿ……..

ಕಾವ್ಯ ಪರಂಪರೆ Read Post »

ಇತರೆ

ಲಹರಿ

ಸಂಬಂಧಗಳ ಸಂಭ್ರಮ ದೀಪಾಜಿ ಪುಟ್ಟ ಪುಟ್ಟ ಸಂಭ್ರಮಗಳನ್ನು ಬದುಕಿನುದ್ದಕ್ಕೂ ಹಿಡಿದಿಟ್ಟುಕೊಳ್ಳುವುದು ತುಂಬ ಮುಖ್ಯ. ಹೀಗೆ ಹಿಡಿದಿಟ್ಟುಕೊಂಡ ಆ ಮಧುರ ಕ್ಷಣಗಳನ್ನ ಆಗಾಗ ಮೆಲಕು ಹಾಕುತ್ತ ಅಂತ ಸಂದರ್ಭಕ್ಕೆ ಸಾಕ್ಷಿಯಾದ ಸಂಬಂಧಿಗಳನ್ನು, ಸ್ನೇಹಬಳಗವನ್ನು ನೆನೆಯುತ್ತ, ಅವಕಾಶ ಸಿಕ್ಕಾಗ ಮತ್ತೆ ಮತ್ತೆ ಭೇಟಿ ಮಾಡುತ್ತ, ಕಡಿಮೆ‌ ವೆಚ್ಚದ ಕೂಟಗಳನ್ನ ಏರ್ಪಡಿಸುತ್ತ , ಸಂಬಂಧಗಳನ್ನ ಹಸಿರಾಗಿಟ್ಟುಕೊಳ್ಳುವ ಅನಿವಾರ್ಯತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ದಿನ ದಿನಕ್ಕೆ ಬದುಕು ನಾವು ಉಹಿಸಿದ್ದಕ್ಕಿಂತಲೂ ಹೆಚ್ಚು ದುರ್ಬರವಾಗುತ್ತ ನಡೆದಿದೆ. ಸಣ್ಣ ಪುಟ್ಟ ಮಾತುಗಳು ದೊಡ್ಡ ದೊಡ್ಡ ಸಂಬಂಧಗಳ ಕತ್ತು ಹಿಸುಕಿ ಕೊಂದು ಮತ್ತೆಂದೂ ಒಬ್ಬರಿಗೊಬ್ಬರು ಎದುರಾಬದುರು‌ ನಿಂತು ಅಕ್ಕರೆಯಿಂದ ಮಾತನಾಡಿಸದಂತೆ ಒಂದು ದೊಡ್ಡ ಅಡ್ಡ ಗೋಡೆಯನ್ನೆ ನಿರ್ಮಿಸುತ್ತಿವೆ. ಎದುರಿಗಿರುವವ ಕೂಡಿ ಆಡಿದವ, ಒಂದೇ ವೇದಿಕೆಯ ಮೇಲೆ ದನಿ ಕುಗ್ಗಿದಾಗ ತನ್ನ ದನಿ ಏರಿಸಿ ಹಾಡಿ ಅಂದದ ರಾಗ ಸಂಯೋಜಿಸಿದವ, ನಾಟಕದ ಡೈಲಾಗ್ ಮರೆತಾಗ “ಏಲವೋ ವೈರಿ ಮತ್ತಿನ್ನೆನೋ ಚಿಂತಿಸುತ್ತ ನಿಂತೆ!? ಹೇಳು ಹೇಳು ನಿನ್ನೊಳಗಿನ ಅಂತರಂಗದ ಮಾತು ಬಯಲು ಮಾಡು” ಎಂದು ನೂರಾರು ಮಂದಿಯ ಮುಂದೆ‌ ಬಾಯಿಪಾಠ ಮರೆತು ಹೋದನೆಂಬ ಗೊಂದಲ ಸೃಷ್ಟಿಯಾಗದಂತೆ ತನ್ನ ಪಾತ್ರದ ಜೊತೆ ನಿನ್ನ ಪಾತ್ರವನೂ ಎತ್ತಿ ಹಿಡಿದ ಗೆಳೆಯ, ಮುಟ್ಟಾದ ದಿನಗಳಲ್ಲಿ ನೀನು ಕ್ಲಾಸುಬಿಟ್ಟೆದ್ದು ಬಾರದೆ ಇದ್ದ ಫಜೀತಿ ಕಂಡು ತಾನು ನಿನ್ನೊಡನೆಯ ಉಳಿದುಕೊಂಡ ಗೆಳತಿ, ಓಡಲಾಗದೆ ಬಿದ್ದ ಅಣ್ಣನನ್ನು ಹಿಂದೆ ಬಂದು ಅವನ ಪಾಠಿಚೀಲದೊಂದಿಗೆ ನಿನ್ನ ಪಾಠಿಗಂಟನ್ನು ಮನೆತನಕ ಹೊತ್ತು ತಂದ ತಮ್ಮ, ನಿನ್ನೋದಿಗಾಗಿ ತನ್ನ ಓದು-ಬದುಕು ಎರಡನ್ನು ಮೊಟಕುಗೊಳಿಸಿ ಕುಳಿತಿರುವ ಅಕ್ಕ. ಗದ್ದದ‌ಮೇಲೆ ಗಡ್ಡಮೊಳಕೆ ಒಡೆಯುತ್ತಿದ್ದ ಕಾಲದಲ್ಲಿ ಪಕ್ಕಡಿಗೆ ತಿವಿದು ಮೊಟ್ಟಮೊದಲ ರೋಮಾಂಚನಕ್ಕೆ ನಾಂದಿಹಾಡಿದ ಗೆಳತಿ, ಹೀಗೆ ಅಂತ್ಯವೇ ಇರದ ಖುಷಿಗಳನ್ನ ಕೊಟ್ಟ ಸಂಬಂಧಗಳ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ.. ‌‌‌ ‌‌‌ ಅಪ್ಪ ಅಮ್ಮರಂತೂ ನಮ್ಮ ನಿಮ್ಮ ಚೋಟುದ್ದದ ಬದುಕು ಕಟ್ಟಿಕೊಡಲು ತಮ್ಮ ಬೆವರಿನೊಂದಿಗೆ ರಕ್ತವನ್ನು ಬಸಿದಿದ್ದಾರೆ. ಆದರೂ ಈ ಸ್ವಾವಲಂಬಿ ಬದುಕಿಗಾಗಿ ನಾನು ಅದೆಷ್ಟು ಕಷ್ಟಪಟ್ಟಿದ್ದೇನೆ ಗೊತ್ತಾ ಎಂಬ ಉದ್ಘಾರವಾಚಕ ಉಸುರುವಾಗ ಇವರೆಲ್ಲ ನೆನಪಾಗುವುದೆ ಇಲ್ಲ. ನಾವ್ಯಾರು ಆಕಾಶದಿಂದ ಉದುರಿ ಬಿದ್ದಿಲ್ಲ ಬದಲಾಗಿ ಹೊಸೆದು ಕೊಂಡ ಕರುಳ ಬಳ್ಳಿ ಕತ್ತರಸಿ ರಕ್ತ ಜೀನುಗದಂತೆ ಗಂಟಾಕಿಸಿಕೊಂಡು ಬಾಣಂತಿಕೊಣೆಯಿಂದ ಆಚೆ ಬಂದವರು. ಬೆಳೆಯುವಾಗಲು ಅಷ್ಟೆ ಅಲ್ಲೆಲ್ಲೊ ನದಿ ಆಚೆಯ ಜುಯ್ಯಗುಡುವ ಕಾಡಿನೊಳಗೆ ಒಬ್ಬೊಬ್ಬರೆ ಹಾಡಿಕೊಂಡು ಕುಣಿದುಕೊಂಡು ಬೆಳೆದವರಲ್ಲ.. ಒಂದೆ ಪೆನ್ಸಿಲ್ಲು, ಅದೆ ಕಂಪಾಸು, ಟಿವಿ ರಿಮೋಟು ಆಶಾ ಚಾಕ್ಲೆಟು, ಪಾಪಡಿ, ಇಂತವಕ್ಕೆಲ್ಲ ಜುಟ್ಹಿಡಿದು ಕಿತ್ತಾಡಿಕೊಂಡು ಕಡೆಗೆ ಅಮ್ಮನಿಂದಲೊ ಸೋದರತ್ತೆಯಿಂದಲೊ ಬಾಸುಂಡೆ ಬರುವಂತೆ ಬಡಿಸಿಕೊಂಡು ಬೆಳೆದವರು. ಬೆಳೆಬೆಳೆಯುತ್ತಲೆ ಬದುಕಿನ ಸಂಬಂಧದ ಕೊಂಡಿಗಳಿಗೆ ಜೋತು ಬಿದ್ದುಕೊಂಡು ಇರುವುದರಲ್ಲೆ ಹಂಚಿಊಣ್ಣುವುದ ಹತ್ತನೇತ್ತ ಬರುವುದರೊಳಗೆ‌ ಕಲಿತು ಇವತ್ತಿನ ಈ ಹೊತ್ತಿಗೆ ಮರೆತು ಕುಳಿತವರು. ‌‌ ಒಂದೊಂದು ಅಕ್ಷರ ಬರೆಯುವಾಗಲೂ‌ ಸಾವಿರಾರು ರೂಪಾಯಿಯ ಚೆಕ್ಕು,ಡ್ರಾಫ್ಟು, ನೆಫ್ಟು ಬರೆಯುವಾಗಲೂ ಆ ಅಕ್ಷರಗಳ ಹಿಂದೆ ಅವಿತು ಕುಳಿತ ಮೇಷ್ಟ್ರು ಗುರು ಶಿಕ್ಷ-ಕರು ಕಲಿಸಿದ ತತ್ವ ಆದರ್ಶಗಳನ್ನ ಅಲ್ಲೆ ಶಾಲೆಯ ಕಾಂಪೊಂಡಿಗೆ ಆನಿಸಿಬಂದವರು ನಾವು. ಅಂಕಿ ಅಕ್ಷರಗಳನ್ನಷ್ಟೆ ಬದುಕಿನುದ್ದಕ್ಕೂ ತಂದವರು ನಾವು. ಅಕ್ಷರ ತಿಡುವಾಗ ತಿಂದ ಏಟಿನ ರುಚಿಯ ಮರೆತು ನಮ್ಮ ಚೆಂದದ ಬದುಕಿಗಾಗಿ ಶ್ರಮಿಸಿದ ಎಲ್ಲಾ ಸಂಬಂಧಗಳನ್ನು ಎತ್ತಿ ಗಾಳಿಗೆ ತೂರಿ ಹಾಯಾಗಿ ಕುಳಿತವರು ನಾವು. ಆದರೂ ಯಾರಾದರು ಸಿಕ್ಕು, ಅಥವಾ ಫೊನಾಯಿಸಿ ಹೇಗಿದ್ದಿ? ಹೇಗಿದೆ ಬದುಕು ಎಲ್ಲ ಅರಾಮಾ..? ಎಂಬ ಶಬ್ಧಗಳನ್ನ ಕೇಳಿದೊಡನೆ ಮೈಮೇಲೆ ಹಲ್ಲಿ -ಚೋಳು-ಜಿರಳೆ ಬಿದ್ದವರಂತೆ ಬೆದರಿ.. “ಅಯ್ಯೋ ನಿನ್ನಷ್ಟು ಚೆನ್ನಾಗಿಲ್ಲ ಬಿಡಪ್ಪ ಎನೋ ಸಣ್ಣ ಸ್ಯಾಲರಿಲಿ ಬದುಕಿನ ಬಂಡಿ ಏಳಿತಿದಿನಿ, ನಿನ್ನ ತರ ಸೆಂಟ್ರಲ್ ಗವರ್ನಮೆಂಟ್ ಸ್ಯಾಲರಿ ಅಲ್ಲ, ನಿನ್ನ ತರ ಸಾಫ್ಟವೇರ್ ಎಂಜಿನೀರ್ ಅಲ್ಲ, ನಿನ್ಮ‌ ತರ ದೊಡ್ಡ ಜಮೀನ್ದಾರ ಅಲ್ಲ, ನಿನ್ನ ತರ ಬಿಸನಸ್ಮನ್ ಅಲ್ಲ ನಿನ್ನ ತರ ಯುಜಿಸಿ ಸ್ಕೇಲ್ ಇಲ್ಲ, ನಿನ್ನ ತರ ವರುಷಕ್ಕೇರಡು ವಿದೇಶ ಪ್ರಯಾಣಗಳಿಲ್ಲ.. ಹೀಗೆ ಇಲ್ಲದರ ಅಲ್ಲದರ ಪಟ್ಟಿಗಳೂ ಬೆಳೆಯುತ್ತಲೆ ಹೋಗುತ್ತವೆಯೆ ಹೊರತು ಎಲ್ಲಿದ್ದೆ ಎಲ್ಲಿಗೆ ಬಂದು ತಲುಪಿದೆ ಬದುಕಿನ ಆರಂಭದಲ್ಲಿ ಎಷ್ಟು ಬಂಧನಗಳಿದ್ದವು ಈಗ ಎಷ್ಟೆಲ್ಲ ಗೆಳೆಯ, ಸಹೋದ್ಯೋಗಿ ನೆರೆ ಹೊರೆ ಬೆಳೆದುಕೊಂಡಿದೆ ಎಂಬುದರ ಲೆಕ್ಕಕ್ಕೆ ಅಪ್ಪಿತಪ್ಪಿಯು ಹೋಗುವುದಿಲ್ಲ. ‌‌‌‌ ಒಂದೊಮ್ಮೆ ನಮ್ಮದೆ ಬದುಕಿನ ಇತಿಹಾಸದ ಪುಟಗಳನ್ನ ಮಗುಚಿಹಾಕಿದಾಗ ಸಿಗುವ ಸತ್ಯ ಈ ದಿನಕ್ಕಾಗಿ,‌ಈ ತಿಂಗಳು ಸಿಗುತ್ತಿರುವ ಆದಾಯಕ್ಕಾಗಿ, ಈ ದಿನ ಕಟ್ಟಿಕೊಂಡಿರುವ ಪುಟ್ಟ ಗೂಡಿಗಾಗಿ ಅದೆಷ್ಟು ವರ್ಷ ನಿದ್ದೆಗೆಟ್ಟು ಕನಸುಕಂಡಿದ್ದೇವೆ..!? ಕನಸು ಕೈಗೂಡಿದ ದಿನ ಇಂತದೊಂದು ಪುಟ್ಟ ಕನಸು ನನ್ನದಾಗಿತ್ತು ಎಂಬುದನ್ನ ಮರೆತು. ಯಾರದೋ ಬದುಕಿನ ಸಾಧ್ಯತೆಗಳನ್ನ ನೋಡಿ ನಮ್ಮದೇನು ಅಲ್ಲ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತೇವೆ. ಜೊತೆಗಿರುವ ಸಂಬಂಧಗಳಲ್ಲಿ ಹೊಂದಾಣಿಕೆ ಇಲ್ಲ ಅಥವಾ ಬೇಡವೊ..!? ಸಿಕ್ಕ ಅವಕಾಶಗಳಿಗಾಗಿ ಸಂತೃಪ್ತಿ ಇಲ್ಲ, ಇಡೇರಿದ ಕನಸುಗಳ ಕುರಿತು ನಿರಾಳತೆಯು ಇಲ್ಲ. ಮುಟ್ಟಿದ ಗುರಿಯ ಬಗ್ಗೆ ಹೆಮ್ಮೆ ಇಲ್ಲ. ಅರ್ಧ ಇಂಚು ಮುಂದಿರುವವನ ಕುರಿತು ಹೊಟ್ಟೆಕಿಚ್ಚಿನ ಹೊರತಾಗಿ ಮತ್ತೇನು ಸಾಧ್ಯವಿಲ್ಲದ ಮನಃಸ್ಥಿತಿಗೆ ಬಂದು ತಲುಪಿದ್ದೇವೆ. ‌‌‌ ‌‌‌‌ ಇದು ರೋಗಗ್ರಸ್ತ ಮನಃಸ್ಥಿತಿಯ ಲಕ್ಷಣವೆಂದೆನಿಸಿದರೆ ಇಂದೆ ಈ ಕೂಡಲೆ ಕಳೆದು ಹೋದ ಸಂಬಂಧಗಳ ಕೊಂಡಿ ಹುಡುಕಿ ಹೋಗಿ, ಉಳಿದು ಹೋದ ನಾಲ್ಕು ಮಾತು, ಎರಡು ನಗು, ಒಂದುರೊಟ್ಟಿ, ಒಟ್ಟಿಗೆ ಅರ್ದರ್ಧ ಕಪ್ ಚಹಾ ಇವಿಷ್ಟನ್ನು ಗಳಿಸಿ ಬಿಡಿ.. ನೆಮ್ಮದಿಯ ಬದುಕು ನಮ್ಮದಾಗಲೂ ಇನ್ನೇನು ಬೇಕು..

ಲಹರಿ Read Post »

ಇತರೆ

ರಾಜಕಾರಣ

ಪಕ್ಷ ರಾಜಕಾರಣಕ್ಕೊಂದು ಪರ್ಯಾಯ ಗಣೇಶ ಭಟ್, ಶಿರಸಿ ಕೊಳೆತು ನಾರುತ್ತಿರುವ ಪಕ್ಷ ರಾಜಕಾರಣಕ್ಕೊಂದು ಪರ್ಯಾಯ…… ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚು ಪಕ್ಷಗಳಿದ್ದಾಗ, ಆಡಳಿತ ಪಕ್ಷದ ತಪ್ಪು, ಒಪ್ಪುಗಳನ್ನು ವಿರೋಧ ಪಕ್ಷಗಳು ವಿಶ್ಲೇಷಿಸುತ್ತವೆಂದು ಭಾವಿಸಲಾಗಿತ್ತು. ಜನಹಿತವೇ ಆಡಳಿತದ ಉದ್ದೇಶವಾಗಿದ್ದರೂ ಅದನ್ನು ಸಕಾರಗೊಳಿಸುವುದಕ್ಕಾಗಿ ಪ್ರತಿಯೊಂದು ಪಕ್ಷಕ್ಕೂ ತನ್ನದೇ ಆದ ಸಿದ್ದಾಂತ, ಪ್ರಣಾಳಿಕೆ, ಕಾರ್ಯವಿಧಾನವಿರುತ್ತದೆಂಬ ಭಾವನೆಯಿಂದ ಪಕ್ಷ ಆಧಾರಿತ ಚುನಾವಣೆ, ಸರ್ಕಾರ ರಚನೆಗಳಿಗೆ ನಮ್ಮ ಸಂವಿಧಾನ ಅವಕಾಶ ಕಲ್ಪಿಸಿದೆ. ಪಾಶ್ಚಾತ್ಯ ಪ್ರಜಾಪ್ರಭತ್ವ ದೇಶಗಳಲ್ಲಿರುವಂತೆ ನಮ್ಮಲ್ಲಿಯೂ ಸೀಮಿತ ಸಂಖ್ಯೆಯ ರಾಜಕೀಯ ಪಕ್ಷಗಳು ನಮ್ಮ ಸಂವಿಧಾಬನ ಕರ್ತರು ಊಹಿಸಿರಬಹುದು. ಈಗ 2 ಸಾವಿರಕ್ಕೂ ಹೆಚ್ಚು ಸಂಖ್ಯೆಯ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದಲ್ಲಿ ನೋಂದಾಯಿತವಾಗಿವೆ. ಇನ್ನೂ ಹೊಸ ಹೊಸ ಪಕ್ಷಗಳು ಹುಟ್ಟಿಕೊಳ್ಳುತ್ತಲೇ ಇವೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ರಾಜಕೀಯ ಪಕ್ಷಗಳ ಅಸ್ತಿತ್ವಕ್ಕೆ ಬರಬಹುದೆಂಬ ಕಲ್ಪನೆ ಪ್ರಾಯಶಃ ಸಂವಿಧಾನ ಕರ್ತೃರಿಗೆ ಇಲ್ಲದಿರಬಹುದು. ಸಾವಿರಾರು ರಾಜಕೀಯ ಪಕ್ಷಗಳ ಸಿದ್ಧಾಂತದಲ್ಲಿ ಮೂಲಭೂತ ವ್ಯತ್ಯಾಸವೇ ಇಲ್ಲ. ಇವುಗಳೆಲ್ಲವೂ ಬಂಡವಾಳವಾದದ ಚಿಂತನೆಯ ಚೌಕಟ್ಟಿನೊಳಗೇ ಸೀಮಿತವಾಗಿವೆ. ಭಾರತದ ಹತ್ತಾರು ಕಮ್ಯುನಿಸ್ಟ್ – ಪಕ್ಷಗಳು ಹೆಸರಿಗೆ ಮಾತ್ರ ಕಮ್ಯುನಿಸ್ಟ್ ಬೋರ್ಡ್ ಹಾಕಿಕೊಂಡಿವೆಯೇ ಹೊರತು ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಅಂಟಿಕೊಂಡಿಲ್ಲ. ಕಮ್ಯುನಿಸ್ಟ್ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿಲ್ಲ. ಪಕ್ಷದ ಸರ್ವಾಧಿಕಾರಿ ಆಡಳಿತವೇ ಅವರ ಗುರಿ.ಇಡೀ ಅರ್ಥವ್ಯವಸ್ಥೆ ಸರ್ಕಾರದ ನಿಯಂತ್ರಣದಲ್ಲೇ ಇರಬೇಕೆಂಂಬ ಕಮ್ಯುನಿಸಂನ ವಾದವನ್ನು ಈ ಪಕ್ಷಗಳು ಹೇಳುವುದೂ ಇಲ್ಲ. ಅಂದ ಮೇಲೆ ಇಷ್ಟೊಂದು ಪಕ್ಷಗಳು ಯಾಕಿವೆ? ನಮ್ಮ ದೇಶದ ರಾಜಕೀಯ ಪಕ್ಷಗಳು ದೊಡ್ಡ ಅಥವಾ ಸಣ್ಣ ಪ್ರಮಾಣದ ಸ್ವಹಿತಾಸಕ್ತಿಯ ಗುಂಪುಗಳು. ಯಾವುದೋ ಒಂದು ಪಕ್ಷದಲ್ಲಿರುವ ವ್ಯಕ್ತಿಗೆ ಅಪೇಕ್ಷಿತ ಸ್ಥಾನಮಾನ ಸಿಗಲಿಲ್ಲವೆಂದರೆ ಬೇರೊಂದು ಪಕ್ಷದವರು ಆವ್ಹಾನಿಸಲಿಲ್ಲವೆಂದರೆ, ಕೈಯ್ಯಲ್ಲಿ ಸಾಕಷ್ಟು ಹಣವಿದ್ದರೆ, ಜಾತಿ, ಮತಗಳ ಬೆಂಬಲದ ಭರವಸೆ ಇದ್ದರೆ, ಕೂಡಲೇ ಹೊಸ ಪಕ್ಷವನ್ನು ಹುಟ್ಟುಹಾಕುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಿದ್ದಾಂತವೆನ್ನುವುದು ಬರೀ ಬೂಟಾಟಿಕೆ ಮಾತ್ರ. ಪ್ರಾದೇಶಿಕ ಅಥವಾ ರಾಷ್ಟ್ರೀಯ ಪಕ್ಷಗಳಲ್ಲಿ ಹೈಕಮಾಮಡ್ ಸಂಸ್ಕೃತಿ ಗಟ್ಟಿಯಾಗಿ ಬೇರೂರಿದೆ. ಪ್ರತಿಯೊಂದು ಚಿಕ್ಕ ಪುಟ್ಟ ವಿಷಯಗಳಿಗೂ ಹೈಕಮಾಂಡ್ ಒಪ್ಪಿಗೆ ಪಡೆಯುವ ಪರಿಸ್ಥಿತಿಯಿಂದಾಗಿ ಸ್ಥಳೀಯ ಜನಪ್ರತಿನಿಧಿಯು ಯಾವುದೇ ಸ್ವಾತಂತ್ರ್ಯವಿಲ್ಲದ ಪಕ್ಷದ ಹೈಕಮಾಂಡ್ ಗುಲಾಮನಂತೆ ವರ್ತಿಸುವ ಸ್ಥಿತಿ ಇದೆ. ಕುಟುಂಬ ನಿಷ್ಠೆ, ಜಾತಿ, ಮತ, ಪಂಥಗಳ ಆಧಾರದ ಮೇಲೆ ಜನಸಾಮಾನ್ಯರನ್ನು ದಿಕ್ಕು ತಪ್ಪಿಸುವ ಚಿಂತನೆಗಳನ್ನೇ ಸಿದ್ಧಾಂತವೆಂದು ಬಿಂಬಿಸುವ ಪ್ರಯತ್ನವನ್ನು ಹಲವು ರಾಜಕೀಯ ಪಕ್ಷಗಳು ಮಾಡುತ್ತಿವೆ. ಹೇಗಾದರೂ ಮಾಡಿ ಅಧಿಕಾರದ ಗದ್ದುಗೆ ಹಿಡಿಯಬೇಕೆಂಬುದೇ ರಾಜಕಾರಣಿಗಳ ಗುರಿ. ಅಧಿಕಾರದ ಲಾಲಸೆಗಾಗಿ ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರನ್ನೂ ನಿಯಂತ್ರಿಸುವ ಉದ್ದೇಶದಿಂದ ರೂಪುಗೊಂಡ ಪಕ್ಷಾಂತರ ನಿಷೇಧ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಹೊಸ ಹೊಸ ವಿಧಾನಗಳನ್ನು ಹುಟ್ಟಿ ಹಾಕಲಾಗುತ್ತಿದೆ. ಒಂದು ಪಕ್ಷದಿಂದ ಆಯ್ಕೆಯಾದವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಇನ್ನೊಂದು ಪಕ್ಷ ಸೇರಿ ಪುನಃ ಚುನಾವಣೆಗೆ ಸ್ಪರ್ಧಿಸುವದು ಇತ್ತೀಚಿನ ವರ್ಷಗಳಲ್ಲಿ ಮಾಮೂಲಾಗಿದೆ. ಅಧಿಕಾರ ಮತ್ತು ಅದರೊಂದಿಗೆ ಬರುವ ಹಣದ ಹರಿವು ರಾಜಕಾರಣಿಗಳ ನೈತಿಕತೆ ಮತ್ತು ಮನಸ್ಸಾಕ್ಷಿಯನ್ನು ಪಾತಾಳಕ್ಕೆ ತಳ್ಳಿ ಬಿಟ್ಟಿದೆ. ಅಧಿಕಾರಕ್ಕಾಗಿ ಮಹಾರಾಷ್ಟ್ರದಲ್ಲಿ ಹಾಗೂ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಅಸಹ್ಯ ಹುಟ್ಟಿಸುತ್ತಿವೆ. ದುರ್ಜನರು ನಡೆಸುವ ದುರಾಚಾರಕ್ಕಿಂತ ಸಜ್ಜನರ ನಿಷ್ಕ್ರಿಯತೆಯೇ ಹೆಚ್ಚು ಅಪಾಯಕಾರಿ ಎಂಬ ಗಾದೆ ನಿಜವಾಗ ತೊಡಗಿದೆ. ಎಲ್ಲಿಯವರೆಗೆ ಮತದಾರರು ಹಣ, ಹೆಂಡ, ಜಾತಿ, ಮತ, ಪಂಥ, ಕೋಮುಭಾವನೆ , ಭಾವನಾತ್ಮಕ ವಿಷಯಗಳಿಗೆ ಮರುಳಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೋ ಅಲ್ಲಿಯವರೆಗೆ ರಾಜಕಾರಣಿಗಳ ಸಮಾಜ ಸೇವೆಯ ಸೋಗಿನ ಕಳ್ಳಾಟ ನಡೆಯುತ್ತಲೇ ಇರುತ್ತದೆ. ರಾಜಕೀಯ ಪಕ್ಷಗಳೆಂದರೆ ಅಧಿಕಾರಕ್ಕಾಗಿ ಹಪಹಪಿಸುವ ಸಮಾನ ಮನಸ್ಕರ ಗುಂಪು ಎನ್ನುವಂತಾಗಿದೆ. ಮತ ಖರೀದಿಗಾಗಿ ಚುನಾವಣೆಗಳಲ್ಲೂ ಹಣ ಚೆಲ್ಲುವುದು, ಗೆದ್ದ ನಂತರ ಖರ್ಚು ಮಾಡಿದ್ದರ ಜೊತೆಗೆ ಭವಿಷ್ಯದ ಚುನಾವಣೆ ಖರ್ಚಿಗಾಗಿ ಕೂಡಿ ಹಾಕುವುದಕ್ಕಾಗಿ ಭ್ರಷ್ಟಾಚಾರ ನಡೆಸುವ ವಿಷ ವರ್ತುಲದಲ್ಲಿ ಇಂದಿನ ರಾಜಕೀಯ ವ್ಯವಸ್ಥೆ ಬಳಲುತ್ತಿದೆ. ಈ ವಿಷ ವರ್ತುಲವನ್ನು ತುಂಡರಿಸಬೇಕೆಂದರೆ, ವಯಸ್ಸು ಆಧಾರಿತ ಸಾರ್ವತ್ರಿಕ ಮತದಾನದ ಹಕ್ಕನ್ನು ಬದಲಿಸಬೇಕು. ಆಡಳಿತ ನಡೆಸುವ ಅಧಿಕಾರ ಉಳ್ಳವರನ್ನು ಆಯ್ಕೆ ಮಾಡುವ ವ್ಯಕ್ತಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ವಿಷಯಗಳ ಕನಿಷ್ಟ ಮಟ್ಟದ ಜ್ಞಾನ ಇರಬೇಕಾದುದು ಅಗತ್ಯ. ಒಬ್ಬ ಪಂಚಾಯತ ಸದಸ್ಯನಿಂದ ಏನನ್ನು ನಿರೀಕ್ಷೆ ಮಾಡಬೇಕು, ಒಬ್ಬ ಜಿಲ್ಲಾ ಪಂಚಾಯತ್ ಸದಸ್ಯನ ಕರ್ತವ್ಯಗಳೇನು? ವಿಧಾನಸಭಾ ಸದಸ್ಯ , ಸಂಸದರ ಹೊಣೆಗಾರಿಕೆಯೇನು ಎಂಬ ಜ್ಞಾನ ಮತದಾರರ ಅರಿವಿನಲ್ಲಿ ಇರಬೇಕು. ಅರ್ಥವ್ಯವಸ್ಥೆಯ ಕುರಿತಾದ ಮೂಲಭೂತ ಜ್ಞಾನ, ರಾಜಕೀಯ ಪಕ್ಷಗಳ ಪ್ರಣಾಳಿಕೆಯನ್ನು ಅರ್ಥಮಾಡಿಕೊಳ್ಳುವ ಜಾಣ್ಮೆ ಇಲ್ಲದ ಮತದಾರರು ಮಾಡುವ ಆಯ್ಕೆ ಆಧಾರ ರಹಿತವಾಗುತ್ತದೆ. ಸ್ವಾರ್ಥಿಗಳು, ಅಯೋಗ್ಯರೇ ಆಯ್ಕೆಯಾಗಿಬಿಡುತ್ತಾರೆ. ಆದ್ದರಿಂದಲೇ ಸಾರ್ವತಿಕ ಮತದಾನದ ಹಕ್ಕನ್ನು ನೀಡುವ ಬದಲಿಗೆ ಪರೀಕ್ಷೆ ನಡೆಸಿದ ನಂತರವೇ ಉತ್ತೀರ್ಣರಾದವರನ್ನೂ ಮತದಾರರ ಯಾದಿಗೆ ಸೇರ್ಪಡೆ ಮಾಡುವಂತಾಗಬೇಕು. ಇದಕ್ಕಾಗಿ ಚುನಾವಣಾ ಆಯೋಗದಂತಹ ಸ್ವಾಯತ್ತ ಸಂಸ್ಥೆಗೆ ಮತದಾರರ ಸಮುದಾಯ ಸ್ಥಾಪಿಸುವ ಹೊಣೆಗಾರಿಕೆ ನೀಡಬೇಕು. ಸಾಮಾಜಿಕ , ಆರ್ಥಿಕ, ರಾಜಕೀಯ ವಿಷಯಗಳ ಕುರಿತು ಪ್ರಾಥಮಿಕ ಜ್ಞಾನವನ್ನು ಪಸರಿಸುವ , ಆಸಕ್ತರಿಗೆ ಶಿಕ್ಷಣ ನೀಡುವ, ಪರೀಕ್ಷೆಗಳನ್ನು ನಡೆಸುವ ಹೊಣೆಗಾರಿಕೆ ಚುನಾವಣಾ ಆಯೋಗಕ್ಕೆ ನಡೆಸುವ ಹೊಣೆಗಾರಿಕೆ ಚುನಾವಣಾ ಆಯೋಗಕ್ಕೆ ಇರಬೇಕು. ಅವರು ಕಾಲಕಾಲಕ್ಕೆ ನಡೆಸುವ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾದ ವ್ಯಕ್ತಿಗಳನ್ನು ಅರ್ಹ ಮತದಾರರೆಂದು ಪೋಷಿಸಬೇಕು. ವಯಸ್ಕರಿಗೆ ಶಿಕ್ಷಣ ನೀಡುವ, ಮತದಾರರಾಗುವ ಅವಕಾಶ ನೀಡುವ ಪರೀಕ್ಷೆಗಳನ್ನು ನಡೆಸುವ ಕಾರ್ಯ ನಿರಂತರವಾಗಿ ನಡೆಯುತ್ತಿರಬೇಕು. ಒಬ್ಬ ವ್ಯಕ್ತಿ ಎಷ್ಟು ಬಾರಿ ಬೇಕಾದರೂ ಈ ಪ್ರವೇಶ ಪರೀಕ್ಷೆ ಬರೆಯುವ ಅವಕಾಶ ಇರಬೇಕು.

ರಾಜಕಾರಣ Read Post »

ಇತರೆ

ಪಯಣ

ಸಂಜಯ ಮಹಾಜನ್ ಅಳಿದು ಹೋಗುವ ಮಾನವ ನಿರ್ಮಿತ ಕಟ್ಟಡಗಳ ಮಧ್ಯ ಅಳಿಯದೆ ಮುಂದೆ ಸಾಗಿದೆ ಹಸಿರೆಲೆಗಳ ಪಯಣ ಸದ್ದಿಲ್ಲದೆ ಮಾಸಿ ಹೋಗುವ ದೇಹಕ್ಕೆ ಚೈತನ್ಯ ತುಂಬುವ ಹೃದಯಾಂತರಾಳದ ನೆನಪುಗಳ ಪಯಣ ಪಚ್ಚೆಯಾಗಸದಿ ಸುರಿವ ಮಳೆಹನಿ ಕಪ್ಪು ಹಂಚಿನ ಹಸಿರ ಹಾಸಿನ ಮಧ್ಯ ಮಳೆಹನಿಗಳ ಪಯಣ ಮೊಳಕೆಯೊಂದು ಬೇರೂರಿ ಆಗಸಕ್ಕೆ ಕೈಚಾಚಲು ಗಟ್ಟಿ ಕಾಂಕ್ರೀಟು ಮೇಲೆ ನಡೆಸಿದೆ ಸೆನಸಾಟದ ಪಯಣ ಭೂವಿಯಲ್ಲಿ ಹೆಜ್ಜೆಯುರಿದ ಕಬ್ಬಿಣದ ಸರಳುಗಳು ಬಿಡುಗಡೆಗೆ ನಡೆಸಿವೇ ಕನಸುಗಳ ಪಯಣ ಈ ಪಯಣಗಳ ಮಧ್ಯ ಚಂಚಲ ನನ್ನ ಮನಸೊಂದು ಬಯಸಿದೆ ಎರಡು ಹೆಜ್ಜೆಯ ಪಯಣ.

ಪಯಣ Read Post »

ಇತರೆ

ಅನಿಸಿಕೆ

ಹೆಣ್ಣಿನ ಮೇಲಿನ ನಿರಂತರ ಅತ್ಯಾಚಾರ ಐಶ್ವರ್ಯ ತನ್ನ ಮೂರು ವರ್ಷದ ಹೆಣ್ಣು ಮಗುಗೆ ಮನೆಯಿಂದಾಚೆ ಕಳಿಸ್ಬೆಕಾದ್ರೆ ಒಬ್ಬ ತಾಯಿ ಹಾಕಿದ್ದ ಕಾಲ್ ಗೆಜ್ಜೆ, ಕೈಬಳೆ, ಹೂವೆಲ್ಲ ತೆಗೆದು ಗಂಡ್ಮಕ್ಕಳ ತರ ತಲೆಗೆ ಎಣ್ಣೆ ಹಾಕಿ ಕ್ರಾಪ್ ಬಾಚಿ ಹುಡ್ಗುರ ಬಟ್ಟೆ ಹಾಕಿದ್ದು ನೋಡಿ ನಾನ್ ಅನ್ಕೊಂಡೆ ಅವರಿಗೆ ಪಾಪ ಗಂಡ್ಮಗು ಅಂದ್ರೆ ಇಷ್ಟ ಅನ್ಸತ್ತೆ ಅವರಿಗೆ ಗಂಡು ಮಗು ಇಲ್ಲ ಅನ್ಕೊಳ್ತಿದ್ದ ಹಂಗೆನೆ ಮನೆಯಿಂದ ಆಚೆ ಅಳುತ್ತ ಅವರ ಮಗ ಬಂದು ನನ್ ಬಟ್ಟೆ ಯಾಕೆ ಅವಳಿಗೆ ಹಾಕಿದೆ ಅಂಥ ಹಠ ಮಾಡೋದು ನೊಡಿ ಕೂತುಹಲ ಸ್ವಲ್ಪ ಜಾಸ್ತಿನೆ ಆಯ್ತು. ಆದ್ರೆ ಆ ತಾಯಿ ಹೇಳಿದ್ದು ಕೇಳಿ ಒಂದು ಕ್ಷಣ ಮೈ, ಮನಸೆಲ್ಲ ನಿಸ್ತೇಜವಾಗಿ ಹೋಯ್ತು. ಹೆಣ್ಣು ಅಂತ ಹೆಮ್ಮೆ ಪಡೋಕು ಆಗ್ದೆ ಇರುವಷ್ಟು ಹೀನಾಯ ಪರಿಸ್ಥಿತಿಲಿ ಬದುಕ್ತಿದಿವಾ ಅನ್ನಸ್ತು. ಮಗನ್ನ ಸಮಾಧಾನ ಮಾಡ್ತ ಆ ತಾಯಿ ಹೇಳಿದ್ದು ಒಂದೇ ಮಾತು ನಂಗೂ ಅವಳಿಗೆ ಹೆಣ್ಣಿನ ಬಟ್ಟೆ ಹಾಕಿ ಗೆಜ್ಜೆ ಬಳೆ ಹಾಕಿ ನೋಡೋಕೆ ಇಷ್ಟ ಆದ್ರೆ ಅವಳು ಅದೆಲ್ಲ ಹಾಕಿದ್ನ ನೋಡಿ ಅವಳು ಹೆಣ್ಣು ಅಂತ ಗೊತ್ತಾದ್ರೆ ಚಿಕ್ಕ ಮಗು ಅಂತಾನೂ ನೋಡ್ದೆ ಎಲ್ಲಿ ನಾಯಿಗಳ ತರ ಅವಳನ್ನ ಕಿತ್ತಾಡ್ಕೊಂಡು ಹಂಚ್ಕೊಳ್ತಾರೊ ಅನ್ನೊ ಭಯ ಅಂದ್ರು. ಹುಟ್ಟಿಂದ ಹೂಳೊವರೆಗು ಹೆಣ್ಣು ಹುಣ್ಣಾಗದೆ ಬದುಕೋದೆ ಜೀವಮಾನದ ದೊಡ್ಡ ಸಾಧನೆ ಅನ್ನಸ್ತಿದೆ ಇತ್ತಿಚೆಗೆ…. ಇವತ್ತು ಪ್ರಿಯಾಂಕ, ಅವತ್ತು ನಿರ್ಭಯ, ಮೊನ್ನೆ ಮಧು, ಮತ್ತೆ ನಾಳೆ..? ನಮ್ಮಗಳಲ್ಲೆ ಇನ್ಯಾರದ್ದೊ ಮನೆಯ ಹೆಣ್ಣು.ಇದೇ ತರ ಚಿಕ್ಕ ಮಕ್ಕಳು, ಮುದುಕಿಯರು, ಮಾನಸಿಕ ಅಸ್ವಸ್ಥರು ಅನ್ನೊದನ್ನು ನೋಡದೆ ಸಿಕ್ಕ ಸಿಕ್ಕ ಹೆಣ್ಣು ಮಕ್ಕಳ ಮೇಲೆ ನಿಮ್ಮ ಕಾಮ ತೃಷೆನ ತೀರಿಸ್ಕೊಳ್ತ ಹೋದ್ರೆ ನಾಳೆ ರೋಡಲ್ಲಿ ಅಡ್ಡಾಡೊ ಹೆಣ್ಣು ನಾಯಿನೂ ನಿಮ್ಮಗಳ ಹತ್ರ ಸುಳಿಯಲ್ಲ. ದೇವರಿಗೆಲ್ಲ ಹರಕೆ ಹೊತ್ತು, ಮಕ್ಕಳನ್ನ ಪಡೆದು ಅವರನ್ನ ಮುದ್ದಾಗಿ ಸಾಕಿ ಇನ್ಯಾವನ್ದೊ ತೀಟೆಗೆ ಬಲಿ ಕೊಡುವ ಬದಲು, ಇದೆಲ್ಲ ನೋಡ್ತಿದ್ರೆ ಮೊದಲಿದ್ದ ಭ್ರೂಣ ಲಿಂಗ ಪತ್ತೆ ಆವಿಷ್ಕಾರವೇ ಚೆಂದವಿತ್ತು ಮೊದಲೆ ಹೆಣ್ಣು ಅಂತ ತಿಳ್ಕೊಂಡು ಹುಟ್ಟಿಗೆ ಕಾರಣರಾದವರ ಕೈಕಲ್ಲಿ ಸಾಯೋದೆ ನೆಮ್ಮದಿ. ಮೊದಲೆಲ್ಲ ಮನೆ ತುಂಬಾ ಮಕ್ಳಿರ್ತಿದ್ರು, ಬರ್ತಾ ಬರ್ತಾ ಭ್ರೂಣ ಲಿಂಗ ಪತ್ತೆ ನಿಷೇಧದಿಂದ ಗಂಡೊ ಹೆಣ್ಣೊ ಮನೆಗೊಂದು ಅನ್ನೊ ಹಾಗಾಯ್ತು ಆದ್ರೆ ಇವಾಗಿರೊ ಕಾಲಮಾನ ನೋಡಿದ್ರೆ ಹೆಣ್ಣು ಬಂಜೆಯಾಗೇ ಉಳಿದ್ರು ಪರವಾಗಿಲ್ಲ ಮತ್ತೊಂದು ಹೆಣ್ಣು ಹುಟ್ಟೊದೆ ಬೇಡ ಅನ್ಸ್ತಿದೆ….. ಹೆಣ್ಣಿನ ಉಬ್ಬು ತಗ್ಗಾದ ಮಾಂಸದ ಮುದ್ದೆಯ ದೇಹವಿರೋದೆ ನಿಮ್ಗಳಿಗೆ ಜನ್ಮ ಕೋಡೊಕೆ ಹಾಲಿಣಿಸಿ ಬೆಳೆಸೋಕೆ ಆದ್ರೆ ನೀವುಗಳು ಹೆಣ್ಣಿನ ಅದೇ ಎರಡು ಅಂಗಗಳಿಗೆ ಆಸೆ ಪಟ್ಟು ಅತ್ಯಾಚಾರ ಕೊಲೆ ಮಾಡ್ತಿರ, ಅಲ್ಲ ನಂಗೆ ಒಂದು ವಿಷಯ ಅರ್ಥ ಆಗ್ತಿಲ್ಲ ಕಂಡವರ ಮನೆ ಹೆಣ್ಮಕ್ಕಳ ಎದೆ ಸೀಳು ಕಂಡು ಕಣ್ಮುಚ್ಚದೆನೆ ಎದೆ ಕಡೆ ನೋಡೋವಾಗ ನಿಮ್ಗೆ ಹಾಲುಣಿಸಿ ಬೆಳೆಸಿದ ನಿಮ್ಮ ಅಮ್ಮ ನೆನಪಾಗಲ್ವ? ಬೀದಿಲಿ ಹೋಗೊ ಹೆಣ್ಣನ್ನ ಬೆತ್ತಲೆ ಮಾಡಿ ಹಿಗ್ಗಿ ಹಿಂಸಿಸುವಾಗ ಅವಳ ಅಣ್ಣ ಅನ್ನೊ ಕೂಗು ನಿಮ್ಗೆ ಕೇಳ್ಸಲ್ವ? … ಅಥವಾ ಅವಳಲ್ಲಿ ನಿಮ್ಮ ಅಕ್ಕ ತಂಗಿಯರು ಕಾಣಲ್ವ?..ದೇಹದ ಬಿಡಿ ಭಾಗಗಳ ಕಲಿಯೊ ವಯಸ್ಸಿನ ಮಕ್ಕಳ ಮೈ ಮೇಲೆಲ್ಲಾ ಮೃಗಗಳ ತರ ಬೀಳ್ತಿರಲ್ವ ಇದೇನ ನಿಮ್ಮ ಗಂಡಸ್ತನ?….ಥೂ… ಇಂಥವರನ್ನೆಲ್ಲ ಮೃಗಗಳಿಗೆ ಹೋಲ್ಸಿದ್ರೆ ಪಾಪ ಅವಕ್ಕೂ ಅವಮಾನ ಆಗಬಹುದು. ಮಕ್ಕಳಿಂದ ಹಿಡಿದು ಮುದುಕಿಯರ ಮೇಲೆಲ್ಲಾ ಗಂಡಸ್ತನ ತೊರ್ಸೊ ಗಂಡ್ಸು ಸಮಾಜದಲ್ಲಿ ಗಂಡ್ಸು ಅಂತ ಅನ್ಸ್ಕೊಳೋದು ನಾಮಾಕಾವಸ್ಥೆಗಷ್ಟೆ…. ಯಾರದ್ದೊ ಮನೆಯ ಹೆಣ್ಮಕ್ಳಿಗೆ ಹಿಂಗಾಗಿ, ಬೆಂಕಿಲಿ ಸುಟ್ಟು, ಕರಕಲಾದರೂ ಕೊನೆಗೆ ನಾವ್ ಮಾತ್ರ ಸುಡೋದು ಸತ್ತ ಆ ಜೀವಾನ ಜೊತೆಗೊಂದು ಕ್ಯಾಂಡಲ್ ನ.‌ ಕ್ಯಾಂಡಲ್ ಸುಟ್ಟು ಶಾಂತಿ ಕೋರುವ ಬದಲು ಸುಟ್ಟವನನ್ನೆ ಸುಟ್ಟರೆ ಬದಲಾಗಬಹುದೆನೊ ಮುಂದೆ ಕಾಲ. ಅತ್ಯಾಚಾರಕ್ಕೊಳಗಾದ ಹೆಣ್ಣು ನ್ಯಾಯ ಕೇಳಿದ್ರೆ ನ್ಯಾಯ ಕೊಡೊ ಕಾನೂನುಗಳೇ ಮತ್ತೆ ಮತ್ತೆ ಪ್ರಶ್ನೆ ಮಾಡಿ ಮತ್ತಷ್ಟು ಮಾನಸಿಕವಾಗಿ ಅತ್ಯಾಚಾರ ಮಾಡ್ತವೆ. ಆದ ಬಸಿರಿಗೊಂದಿಷ್ಟು ಸಾಂತ್ವಾನ ನೀಡಿ ಕೈ ತೊಳ್ಕೊತಾವೆ. ಇನ್ನು ಸ್ವಲ್ಪ ಮುಂದುವರೆದ್ರೆ ನಾಲ್ಕೈದು ವರ್ಷ ಜೈಲು ಒಂದಿಷ್ಟು ದುಡ್ಡು ಅಂತ ಹಾಕ್ತಾರೆ. ಮತ್ತೈದು ವರ್ಷದಲ್ಲಿ ಅಂಥದ್ದೆ ಕೃತ್ಯಗಳು ನಡಿತಾನೇ ಇರತ್ತೆ. ಈಗಲಾದರೂ ಕಾನೂನುಗಳು ಬದಲಾಗದಿದ್ದರೆ ಮುಂದೊಂದು ದಿನ ಜನರ ಮನಸ್ಸಲ್ಲಿ ರಾಷ್ಟ ಧ್ವಜ ಕೇವಲ ಒಂದು ಬಟ್ಟೆಯಾಗಿ, ಕೋರ್ಟಗಳು ಕಟ್ಟಡಗಳಾಗಿ, ಸಂವಿಧಾನಗಳು ಬರೀ ಪುಸ್ತಕಗಳಾಗಿ ಉಳ್ಕೊಳೊದ್ರಲ್ಲಿ ಸಂಶಯವೇ ಇಲ್ಲ…… ಅರಬ್ ನಂತಹ ದೇಶಗಳಲ್ಲಿ ಅತ್ಯಾಚಾರವಿರಲಿ ಪರ ಪುರುಷನ ಹೆಂಡತಿಯನ್ನು ಕೂಡ ಕಣ್ಣೆತ್ತಿ ನೋಡುವಂತಿಲ್ಲ. ಅದ್ಯಾವುದೊ ಹಮ್ಮುರಬಿ ರಾಜ ಅಂತೆ ಅವರ ನ್ಯಾಯವೇ ಸರಿ ಇತ್ತು. ಕಳ್ಳತನ ಮಾಡಿದ್ರೆ ಕೈ, ನೋಡಿದ್ರೆ ಕಣ್ಣು ಕಿಳೋದು, ಕೈಯಿಗೆ ಕೈಯಿ ಅನ್ನುವಂತೆ. ಜೀವಕ್ಕೆ ಜೀವ ಕೊಟ್ಟಾಗಲೇ ಜೀವದ ಬೆಲೆ ತಿಳಿಯೋದು. ಹೆಲ್ಮೆಟ್ ಹಾಕಿಲ್ಲ ಅಂದ್ರೆ ಗಲ್ಲಿಗಳಲ್ಲಿ ನಿಂತು ಪೈನ್ ಹಾಕೊ ಸರ್ಕಾರ, ಅತ್ಯಾಚಾರ ಮಾಡಿದವರನ್ನ ನಡು ರೋಡಲ್ಲಿ ನಿಲ್ಸಿ ಗಲ್ಲಿಗೇರಿಸಿದ್ರೆ ಇಂಥ ಕೃತ್ಯಗಳು ಕಡಿಮೆಯಾಗಬಹುದು. ಅದ್ರೆ ಇಂಥ ಕಾನೂನುಗಳು ಬರೋದಿಕ್ಕೆ ಮತ್ತೆ ಹಮ್ಮುರಬಿಯಂತ ರಾಜನೇ ಹುಟ್ಟಿ ಬರಬೇಕೆನೋ?…. ಹೆಣ್ಣೆಂದರೆ ನಿಮ್ಮ ಕಾಮ ತೃಷೆ ತೀರಿಸುವ ಮಷೀನಲ್ಲ, ನಿಮ್ಗೆ ಜನ್ಮ ನೀಡೋ ತಾಯಿ, ನಿಮಗಾಗಿಯೇ ಜನ್ಮ ಪಡೆದ ಹೆಂಡತಿ, ನಿಮ್ಮಿಂದ ಜನ್ಮ ಪಡೆದ ಮಗಳು, ನಿಮ್ಮೊಟ್ಟಿಗೆ ಜನ್ಮ ಪಡೆದ ಅಕ್ಕ ತಂಗಿ, ಅವಳನ್ನು ಬದುಕಲು ಬಿಡಿ ನಿಮ್ಮೊಳಗೊಬ್ಬಳಾಗಿ ಅವಳೊಂದು ಹೆಣ್ಣಾಗಿ. ಮೊದಲೇ ಹೆಣ್ಮಕ್ಕಳ ಸಂಖ್ಯೆ ಕಡಿಮೆ ಆಗ್ತಿದೆ, ಅದ್ರಲ್ಲಿ ನೀವು ಇರೊ ಬರೊ ಹೆಣ್ಮಕ್ಕಳನ್ನ ಹೀಗೆ ಮಾಡ್ತಿದ್ರೆ, ನೀವು ಈಗೆಲ್ಲ ತಮಾಷೆಗೆ ಸಿಂಗಲ್ ಸಿಂಗಲ್ ಅಂತ ಹೆಳ್ಕೊಂಡು ಅಡ್ಡಾಡೋದು ನಿಜವಾಗೋ ಕಾಲ ತುಂಬಾ ದೂರ ಉಳಿದಿಲ್ಲ……ಒಂಟಿ ಹೆಣ್ಣು ಯಾವತ್ತು ನಿಮ್ಮ ಅವಕಾಶಕ್ಕೆ ಸಿಕ್ಕ ಹಣ್ಣಲ್ಲ ನಿಮ್ಮ ಜವಾಬ್ದಾರಿಯ ಅಕ್ಕ ತಂಗಿಯರು ನಿಮ್ಮ ಮನೆಯ ಹೆಣ್ಣು ಮಕ್ಕಳಂತೆಯೇ ಅವರು….

ಅನಿಸಿಕೆ Read Post »

ಇತರೆ

ಪ್ರೀತಿಯೆನಲು ಹಾಸ್ಯವೇ

ಚಂದ್ರಪ್ರಭ ಅದು ಜಗಳವೆ.. ಕದನವೆ.. ಶೀತಲವೆ.. ಮುಕ್ತವೆ? ಯಾವುದೂ ಅಲ್ಲ. ಆದರೆ ಅವರು ಕಾಯಂ ಗುದ್ದಾಡುವುದಂತೂ ಸತ್ಯ. ಒಮ್ಮೊಮ್ಮೆ ತೆರೆದ ಗುದ್ದಾಟ.. ಒಮ್ಮೊಮ್ಮೆ ಮುಸುಕಿನ ಗುದ್ದಾಟ.. ಕಾಲನ ಪ್ರವಾಹದ ಬಿಸಿ. ಭಿನ್ನ ಭಿನ್ನ ತೀರಗಳಲ್ಲಿದ್ದೇ ದಿನ ದೂಡುವುದು ಸಹಜ ರೂಢಿಯಾಗಿದೆ ಅವರಿಗೆ. ಅದನ್ನು ಆಧುನಿಕತೆ ತಂದ ವಿಪತ್ತು, ನೀವು ಬಲಿಪಶು ಎಂದರೆ ಅವರಿಗೆ ಬೇಸರಾಗುತ್ತದೆ.. ಮಾಡರ್ನ್ ಯುಗದ ಪ್ರೊಡಕ್ಟ್ ಅಂದಾಗ ಕೊಂಚ ಸಮಾಧಾನ. ಸಂತಾನದೆದುರು ಮಾದರಿಯಾಗಿರಲು ಹರಸಾಹಸಪಡುತ್ತಾರೆ ಅವರು.. ಆದರೂ ಎಳೆಯ ಜೀವಗಳಿಗೆ ಇವರ ಜಗ್ಗಾಟದ ವಾಸನೆ ಬಡಿಯುತ್ತದೆ. ವಿರುದ್ಧ ದಿಕ್ಕಿನಲ್ಲಿ ಯೋಚಿಸುವಾಗಲೂ ಅವರು ‘… ಒಲವೆ ನಮ್ಮ ಬದುಕು’ ತರಹದ ಸಾಲುಗಳನ್ನು ಗುನುಗುತ್ತಾರೆ. ಆಗೀಗ ತಾವು ಆಸ್ಥೆಯಿಂದ ಕಟ್ಟಿದ ಮನೆಯಲ್ಲಿ ಒಟ್ಟು ಸೇರಿ ಸಂಭ್ರಮಿಸುತ್ತಾರೆ. ಕರ್ತವ್ಯದ ಕರೆಯಾಲಿಸಿ ನಾಲ್ವರು ನಾಲ್ಕು ದಿಕ್ಕಾಗುವ ಅವರು ಜಾಲ ತಾಣಗಳಲ್ಲಿ ಇಂಟರ್ ಕನೆಕ್ಟೆಡ್ ಆಗುತ್ತಾರೆ. ಸಾಹಿತ್ಯ, ರಾಜಕಾರಣ, ಸಿನಿಮಾ, ಪ್ರಚಲಿತ ವಿದ್ಯಮಾನ ಎಲ್ಲವುಗಳ ಮೇಲೆಯೂ ಕಮೆಂಟಿಸುತ್ತಾರೆ.. ಭೇಟಿಗಳಲ್ಲಿ ಒಮ್ಮೊಮ್ಮೆ ಅಭಿಪ್ರಾಯ ಭೇದ ಕಾಡುವಾಗ ಮುನಿದು ಮುಖ ತಿರುವಿಕೊಳ್ಳುತ್ತಾರೆ. ಉದ್ವಿಗ್ನತೆಯಲ್ಲೂ ನೆನಪಾಗುತ್ತದೆ ಅವರಿಗೆ ಕವಿ ಸಾಲು – ‘… ಹತ್ತಿರವಿದ್ದರೂ ದೂರ ನಿಲ್ಲುವೆವು.. ಕೋಟೆಯಲಿ.. ‘ ತಂತಮ್ಮ ಕೋಟೆಯಲ್ಲಿ ನಿಂತುಕೊಂಡೇ ಕವಿತೆ ಕುರಿತು ಅವರು ವಿಮರ್ಶೆ ಮಾಡುತ್ತಾರೆ..ಆದರೂ ಕೋಟೆ ಒಡೆಯುವ ದಾರಿಗಾಣದೇ ಪರಸ್ಪರ ಬೀಳ್ಕೊಡುವಾಗ ಎಲ್ಲದಕ್ಕೂ ಮುಸುಕೆಳೆದು ನಕ್ಕು ಬಿಡುತ್ತಾರೆ. ಜೀವನ ಪ್ರವಾಹ ತಮ್ಮನ್ನು ಜೊತೆಯಾಗಿ ಕರೆದೊಯ್ಯುತ್ತಿದೆ ಎಂದವರಿಗೆ ಮನವರಿಕೆಯಾಗುತ್ತದೆ.. ಕ್ವಚಿತ್ತಾಗಿ ಸಿಗುವ ಅವಕಾಶಗಳಲ್ಲಿ ಅವರು ಫೋಟೋಕ್ಕೊಂದು ಚಂದದ ಪೋಜು ಕೊಡುತ್ತಾರೆ.. ಅದು ನೀಡುವ ಪುರಾವೆಯಲ್ಲಿ ಜೀವನೋತ್ಸಾಹವನ್ನು ಬಚ್ಚಿಟ್ಟುಕೊಳ್ಳುತ್ತಾರೆ.. ನಿಮ್ಮ ಅಕ್ಕಪಕ್ಕದಲ್ಲೆಲ್ಲೋ ಇವರು ಇದ್ದಾರು.. ಸುಮ್ಮನೆ ಆಚೀಚೆ ಒಮ್ಮೆ ಕಣ್ಣು ಹಾಯಿಸಿ ಬಿಡಿ.. ನನಗೇಕೊ ಕೆ. ಎಸ್. ನ. ಸಾಲು ಗುನುಗುವ ಮನಸ್ಸಾಗುತ್ತಿದೆ… ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡು ಕಾಣದೊಂದ ಕನಸ ಕಂಡು ಮಾತಿಗೊಲಿಯದಮೃತವುಂಡು ದುಃಖ ಹಗುರವೆನುತಿರೆ ಪ್ರೀತಿಯೆನಲು ಹಾಸ್ಯವೆ?

ಪ್ರೀತಿಯೆನಲು ಹಾಸ್ಯವೇ Read Post »

ಇತರೆ

ಕಾಡುವ ಹಾಡು

ಮೈಸೂರು ದಸರಾ ಚಿತ್ರ-ಕರುಳಿನ ಕರೆ ಗೀತರಚನೆ- ಆರ್.ಎನ್.ಜಯಗೋಪಾಲ್ ಸಂಗೀತ-ಎಂ.ರಂಗರಾವ್ ಗಾಯಕರು-ಪಿ.ಬಿ.ಶ್ರೀನಿವಾಸ್ ಸುಜಾತ ರವೀಶ್ ಕಾಡುವ ಹಾಡು ಮೈಸೂರು ದಸರಾ ಮೈಸೂರು ಎಂದರೆ ದಸರಾ ಜಂಬೂ ಸವಾರಿ ಮೊದಲು ನೆನಪು ಬರುವುದು. ನಂತರ ಮೈಸೂರು ಪಾಕ್ ಮೈಸೂರು ಮಲ್ಲಿಗೆ ಮೈಸೂರು ರೇಷ್ಮೆ ಸೀರೆ ಮೈಸೂರು ಚಿಗುರು ವೀಳ್ಯದೆಲೆ ಹಾಗೂ ಶ್ರೀಗಂಧದ ಉತ್ಪನ್ನಗಳು ಮೈಸೂರು ವೀರನಗೆರೆ ಬದನೆಕಾಯಿ. ಅಂದಿನಿಂದ ಇಂದಿನವರೆಗೂ ಚುನಾವಣೆಯಲ್ಲಿ ಕೈಗೆ ಹಚ್ಚುವ ಮಸಿ ತಯಾರಾಗುವುದು ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆಯಲ್ಲೇ. ರಾಜ್ಯದ ರಾಜಧಾನಿ ಬೆಂಗಳೂರು ಆದರೂ ಸಾಂಸ್ಕೃತಿಕ ರಾಜಧಾನಿ ಮಾತ್ರ ನಮ್ಮ ಅರಮನೆ ನಗರಿಯೇ. ನಮ್ಮೂರು ಮೈಸೂರು ವೈಭವ ಹೊಗಳುತ್ತಾ ಕೂತರೆ ಪುಟಗಟ್ಟಲೆ ತುಂಬುತ್ತದೆ . ಬೇಡ ಈಗ ಹಾಡಿನಬಗ್ಗೆ ಮಾತ್ರ ಬರೀಬೇಕು. ಚಿಕ್ಕಂದಿನಿಂದ ಕಿವಿ ಮೇಲೆ ಬೀಳುತ್ತಿದ್ದ ಈ ಹಾಡಲ್ಲದೆ ನನ್ನನ್ನು ಕಾಡುವುದು ಬೇರ್ಯಾವುದು?”ಮೈಸೂರು ದಸರಾ ಎಷ್ಟೊಂದು ಸುಂದರ” ಕರುಳಿನ ಕರೆ ಚಿತ್ರದ ಪಿಬಿ ಶ್ರೀನಿವಾಸ್ ಅವರ ಮಧುರ ಕಂಠದ ಆರ್ ಎನ್ ಜಯಗೋಪಾಲ್ ರಚಿಸಿದ ಎಂ ರಂಗರಾವ್ ಸಂಗೀತದ ಈ ಹಾಡು ಮೈಸೂರು ಅಂದರೆ ದಸರಾ ಎನ್ನುವ ಮಾತಿಗೆ ಸುಂದರ ಪ್ರತಿಮೆ.ಪ್ರತಿ ನವರಾತ್ರಿಯ ಗೊಂಬೆ ಆರತಿಯ ದಿನ ಮಕ್ಕಳೆಲ್ಲ ಈ ಹಾಡನ್ನು ಕೋರಸ್ ಹಾಡೇ ಹಾಡುತ್ತಿದ್ದೆವು . ಕೇಳುತ್ತಿದ್ದವರ ಕಿವಿಯ ಗತಿ ಪಾಡು ನಿಮ್ಮ ಊಹೆಗೆ ಬಿಟ್ಟಿದ್ದು.😁😁😁😁😁 ಆ ನನ್ನ ಪ್ರೀತಿಯ ಹಾಡಿನ ಬಗ್ಗೆ ಬರೆಯಲು ಸಿಕ್ಕ ಸುವರ್ಣಾವಕಾಶಕ್ಕೆ ಸಾಹಿತ್ಯೋತ್ಸವಕ್ಕೆ ತುಂಬಾ ತುಂಬಾ ಧನ್ಯವಾದಗಳು . ಡಾಕ್ಟರ್ ರಾಜಕುಮಾರ್ ಕಲ್ಪನಾ ಮತ್ತು ಸಂಗಡಿಗರು ಸೇರಿ ದಸರೆಯ ಸಡಗರವನ್ನು ಸಂಭ್ರಮಿಸಿ ಹಾಡಿ ಕುಣಿವ ಹಾಡು ಇದು. ಮೊದಲಿಗೆ ಧಾರ್ಮಿಕ ಹಿನ್ನೆ ವಿವರಿಸುವ ಹಾಡು ಮಧ್ಯಮ ವರ್ಗದವರ ಹಬ್ಬದ ಆಚರಣೆಯ ರೀತಿಯನ್ನು ಕಣ್ಣಿಗೆ ಕಟ್ಟಿಕೊಡುತ್ತದ .ಮೈಸೂರು ನಗರ ಅಧಿದೇವತೆ ಚಾಮುಂಡಿಯ ಮಹಿಮೆಯನ್ನು ವರ್ಣಿಸುತ್ತದೆ . ನಂತರ ಮಹಾನವಮಿಯ ಬಗ್ಗೆ ಹೇಳುತ್ತಾ ಆ ತಾಯಿಯ ವರ್ಚಸ್ಸು ಅವಳಿಗೆ ಶರಣಾಗೋಣ ಎಂಬ ಆಶಯವನ್ನು ಬಿಂಬಿಸುತ್ತದೆ. ಕಡೆಗೆ ಚರಣದಲ್ಲಿ ಶತ್ರುವನ್ನು ಅಳಿಸಿ ಧರ್ಮ ಸಂಸ್ಥಾಪಿಸಿದ ನಾವು ಶಸ್ತ್ರ ಹೂಡಬೇಕು. ಬಡತನವನ್ನು ಅಳಿಸಲು ಪರಸ್ಪರ ಸಹಕಾರದಿಂದ ಆ ತಾಯಿಯ ಹೆಸರಲ್ಲಿ ಒಂದಾಗಿ ದುಡಿಯಬೇಕು ಎಂಬ ಸಂದೇಶವನ್ನು ಕೊಡುತ್ತದೆ. ಮುಖ್ಯವಾಗಿ ಎಲ್ಲ ಧಾರ್ಮಿಕ ಆಚರಣೆಗಳು ಸಾಮಾಜಿಕ ಉತ್ಸವದ ರೂಪ ತಾಳಿ ಆಚರಿಸಲ್ಪಡುವ ಉದ್ದೇಶವೇ ಅದು. ಸಾಮಾಜಿಕ ಸಮಾನತೆಯ ಸ್ಥಾಪನೆ ಪರಸ್ಪರ ಸಹಕಾರ ಮನೋಭಾವನೆ ಒಂದಾಗಿ ದುಡಿಯುವ ಸೇರಿ ನಲಿಯುವ ಈ ಉದ್ದೇಶ ಇಂತಹ ಹಾಡುಗಳಿಂದ ನೆರವೇರುತ್ತದೆ. ಪುಟ್ಟಣ್ಣ ಕಣಗಾಲರಂತಹ ಧೀಮಂತ ನಿರ್ದೇಶಕರು ಈ ತರಹದ ಸಾಮಾಜಿಕ ಕಳಕಳಿಯನ್ನು ಸಂದೇಶವನ್ನು ಈ ಹಾಡಿನ ಮೂಲಕ ಎತ್ತಿ ಹಿಡಿದಿದ್ದಾರೆ. ಹಿಂದಿನ ಚಿತ್ರಗಳಲ್ಲಿ ಇರುತ್ತಿದ್ದ ಒಳ್ಳೆಯ ವಿಷಯಗಳು ಇವೇ. ಮನರಂಜನೆಯ ಮೂಲಕ ಒಳಿತು ಕೆಡುಕಿನ ಬೋಧನೆ ಹಾಗೂ ಕೂಡಿ ದುಡಿಯುವ ಒಂದಾಗಿ ನಲಿಯುವ ಪಾಠ. “ಸ್ವಾಮಿ ಕಾರ್ಯದೊಂದಿಗೆ ಸ್ವಕಾರ್ಯ” ಎಂಬಂತೆ ಇಂತಹ ಚಿತ್ರಗಳು ಹಾಡುಗಳು ಈಗ ಮರೆಯಾಗಿರುವುದು ಕಾಲ ಧರ್ಮ ಪ್ರಭಾವ ಎನ್ನೋಣವೇ? ಕಾಲಾಯ ತಸ್ಮೈ ನಮಃ!

ಕಾಡುವ ಹಾಡು Read Post »

You cannot copy content of this page

Scroll to Top