ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಸ್ತುತ

ಶಾಲೆಗಳ ಪುನರಾರಂಭ ಶಾಲೆಗಳನ್ನು ಪುನರಾರಂಭಿಸುವ ಕುರಿತು ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿ ಪಾಲಕರ, ಶಿಕ್ಷಕರ , ಆಡಳಿತ ಮಂಡಳಿಗಳ ಅಭಿಪ್ರಾಯ ಸಂಗ್ರಹಿಸುತ್ತಿದೆ.ಜುಲೈ 1 ರಿಂದ 4 ರಿಂದ 7 ನೇ ತರಗತಿ, ಜುಲೈ 15 ರಿಂದ 1 ರಿಂದ 3 ಮತ್ತು 8 ರಿಂದ 10 ನೇ ತರಗತಿ, ಜುಲೈ 20 ರಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಪುನರಾರಂಭಿಸುವ ಪ್ರಸ್ತಾವನೆಯನ್ನು ಸರ್ಕಾರ ಜನರ ಮುಂದಿಟ್ಟಿದೆ. ಮೊದಲನೇ ಮಾದರಿ ಮತ್ತು ತಾರೀಖುಗಳೆರಡೂ ಸಮಂಜಸವಾಗಿವೆಯೆಂಬುದು ನನ್ನ ಅಭಿಪ್ರಾಯ.ತರಗತಿಗಳನ್ನು ನಡೆಸಲು ಮೂರು ಮಾದರಿಗಳ ಪ್ರಸ್ತಾವನೆಯನ್ನು ಸರ್ಕಾರ ಮುಂದಿಟ್ಟಿದೆ. ಅಗತ್ಯವಾದ ಸುರಕ್ಷಿತ ಕ್ರಮಗಳೊಂದಿಗೆ ಎಂದಿನಂತೆ ತರಗÀತಿ ನಡೆಸುವುದು ಮೊದಲನೇ ಮಾದರಿ.ಇದು ವ್ಯವಹಾರಿಕ ಹಾಗೂ ಸೂಕ್ತ.ಪ್ರತಿದಿನ ಎರಡು ಪಾಳಿಗಳಲ್ಲಿ ಶಾಲೆಯನ್ನು ನಡೆಸುವುದು ಎರಡನೇ ಮಾದರಿ. ಅಂದರೆ ಕೆಲವು ತರಗತಿಗಳನ್ನು ಬೆಳಿಗ್ಗೆ 8 ರಿಂದ 12 ಮತ್ತು ಉಳಿದ ತರಗತಿಗಳನ್ನು ಮದ್ಯಾಹ್ನ 1 ರಿಂದ 5 ರವರೆಗೆ ನಡೆಸುವ ವಿಧಾನ. ಬಾಡಿಗೆ ವಾಹನಗಳು ವಿದ್ಯಾರ್ಥಿಗಳನ್ನು ತರಗತಿವಾರು ಕರೆದುಕೊಂಡು ಬರುವ ಪದ್ಧತಿ ಇಲ್ಲದಿರುವುದರಿಂದ ಹಾಗೂ ಒಂದೇ ವಾಹನದಲ್ಲಿ ಎಲ್ಲಾ ತರಗತಿಯ ಮಕ್ಕಳೂ ಪ್ರಯಾಣ ಸುವುದರಿಂದ ಮಕ್ಕಳ ಪ್ರಯಾಣ ವೆಚ್ಚ ಕಡಿಮೆ ಇರುತ್ತದೆ. ತರಗತಿವಾರು ವಿದ್ಯಾರ್ಥಿಗಳು ಪ್ರಯಾಣ ಸಬೇಕೆಂದರೆ , ನಿಗದಿತ ಸಂಖ್ಯೆಯ ಕೊರತೆಯಿಂದಾಗಿ ಪ್ರಯಾಣ ವೆಚ್ಚದಲ್ಲಿ ಏರಿಕೆ ಸಹಜ.ಬಾಡಿಗೆ ವಾಹನಗಳ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಪಾಲಕರಿಗೆ ಹೆಚ್ಚಿನ ವೆಚ್ಚ ತಗಲಲಿದೆ. ಶಾಲಾ ವಾಹನಗಳೇ ಇದ್ದರೆ, ತಗಲುವ ಹೆಚ್ಚುವರಿ ವೆಚ್ಚವನ್ನು ಪಾಲಕರಿಗೆ ವರ್ಗಾಯಿಸಲಾಗುತ್ತದೆ.ಈ ವಿಧಾನದ ಅಳವಡಿಕೆಯಿಂದ ಶಾಲೆಯ ಶಿಕ್ಷಕೇತರ ಸಿಬ್ಬಂದಿ ಹಾಗೂ ಕೆಲವು ಶಿಕ್ಷಕರು ಹೆಚ್ಚುವರಿ ಸಮಯ ದುಡಿಯುವುದು ಅನಿವಾರ್ಯವಾಗಲಿದೆ; ಅದು ಅಪೇಕ್ಷಣೀಯವಲ್ಲ.ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ರಜೆ ಇದ್ದರೂ, ಮನೆಯಲ್ಲೇ ಕುಳಿತರೂ ಸಂಬಳ ಬರುತ್ತದೆ.ಆದರೆ, ಖಾಸಗಿ ಶಾಲಾ ಶಿಕ್ಷಕರಿಗೆ ಹೆಚ್ಚಿನ ದುಡಿಮೆಗೆ, ಕೆಲವರಿಗೆ ರಜಾ ಅವಧಿಗೆ ಸಂಬಳ ಇರುವದಿಲ್ಲ.ಮೂರನೇ ಮಾದರಿಯಂತೆ ತರಗತಿಗಳನ್ನೇ ದಿನಬಿಟ್ಟು ದಿನ ಪಾಳಿಯಲ್ಲಿ ನಡೆಸುವುದು. ಮಕ್ಕಳ ಕಲಿಯುವಿಕೆ,ದಿನಚರಿಯಲ್ಲಿ ನಿಯಮಿತತೆ ಕಾಪಾಡುವಿಕೆ ಹಾಗೂ ವ್ಯವಹಾರಿಕ ಸಾಧ್ಯತೆಯ ದೃಷ್ಟಿಯಿಂದ ಸಮಂಜಸವಲ್ಲ.ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತಿ ಅವಶ್ಯವಾದ ಆಟ, ಓಟ, ಸ್ನೇಹಿತರ ಒಡನಾಟದಿಂದ ಕಳೆದ 3 ತಿಂಗಳಿನಿಂದಲೂ ಲಾಕ್ ಡೌನ್ ನಿಂದಾಗಿ ಬೆಳೆಯುವ ಮಕ್ಕಳು ವಂಚಿತರಾಗಿದ್ದಾರೆ. ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರುವ ಮಕ್ಕಳಿಗೆ ಶುದ್ಧ ಗಾಳಿಯನ್ನು ಸೇವಿಸುವ, ಆಟ, ಪಾಠಗಳಲ್ಲಿ ತೊಡಗಿಕೊಳ್ಳುವ ಅವಕಾಶವನ್ನೂ ಇನ್ನೂ ತಡೆಗಟ್ಟುವುದು ಸಮಂಜಸವಲ್ಲ.ರಾಜಕೀಯ ಸಭೆ ಸಮಾರಂಭಗಳಿಗೆ ಹೋದರೆ, ಮಾಲ್ ಗೆ ಹೋದ್ರೆ, ಹೋಟೆಲುಗಳಿಗೆ ಹೋದ್ರೆ. ಕಛೇರಿಗಳಿಗೆ …ಮದುವೆ-ಎಂಗೇಜ್ಮೆಂಟ್ ಗಳಿಗೆ ಹೋದ್ರೆ.., ಧಾರ್ಮಿಕ ಸ್ಥಳಗಳಿಗೆ ಹೋದರೆ ಕೊರೊನಾ ಸೋಂಕು ತಗಲುವದಿಲ್ಲವೆ?ಮಕ್ಕಳು ಮನೆಲಿದ್ರೂ ಹೊರಗೆಹೋದ ಪಾಲಕರು ಮತ್ತೆ ಮನೆಗೆ ಹೋಗಲ್ವಾ? ಆ ಮೂಲಕ ಮನೆಯವರಿಗೆಲ್ಲಾ ಕರೋನ ಬರಲ್ವಾ? ಮದ್ಯವನ್ನು ಹೊರಗಿನಿಂದ ತಂದು ಮನೆಲಿ ಪಾರ್ಟಿ ಮಾಡೋದ್ರಿಂದ ಕೋರೊನ ಬರಲ್ವಾ?ಅಪ್ಪ ಅಮ್ಮ ಇಬ್ಬರೂ ಕೆಲಸಗಳಿಗೆ ಹೋಗುವ ಪರಿಸ್ಥಿತಿಯಲ್ಲಿ ಮನೆಯಲ್ಲೇ ಮಕ್ಕಳ ಶಿಕ್ಷಣ ಹೇಗೆ?ಆನ್ ಲೈನ್ ಸೌಲಭ್ಯ ಇಲ್ಲದ ಮಕ್ಕಳು ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೆಷ್ಟು ಮಕ್ಕಳು ಫೇಸ್ ಬುಕ್, ವಾಟ್ಸ ಏಪ್, ಬೇಡದ ಹಾಗೂ ಸುರಕ್ಷಿತವಲ್ಲದ ಜಾಲತಾಣಗಳಿಗಳಿಗೆ ಭೇಟಿ ನೀಡಿ ಮಾನಸಿಕವಾಗಿ ಕುಗ್ಗುತ್ತಿದ್ದಾರೆ ಎಂದು ಗಮನಿಸಿಲಾಗಿದೆಯೇ? ಇನ್ನೀಗ ಶಾಲೆಯೆ ಇಲ್ಲ ಅಂದ್ರೆ ಮಕ್ಕಳು ಮೊಬೈಲ್ ..ಟಿವಿ ಗಳ ನಡುವೆ ಸಿಲುಕಿ ಇನ್ನೇನೆಲ್ಲಾ ಆಗಬಹುದು?ಶಿಕ್ಷಣದಿಂದ ಮಾನವರು ರೂಪುಗೊಳ್ಳಬೇಕೇ ಹೊರತು ರೊಬೋಟ್ ಗಳಲ್ಲ. ಅಂತರ್ಜಾಲದಲ್ಲಿ ಭರಪೂರ ಮಾಹಿತಿ ಲಭ್ಯ. ಆದರೆ ಆನ್ ಲೈನ್ ಶಿಕ್ಷಣ ಶಾಲಾ ಶಿಕ್ಷಣಕ್ಕೆ ಪರ್ಯಾಯವಲ್ಲ.ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿ ಸದಸ್ಯರು(ಸರ್ಕಾರಿ ಮತ್ತು ಖಾಸಗಿ ರಂಗ) ಕೂಡಾ ಪಾಲಕರು,ಅವರಿಗೆ ವೈಯಕ್ತಿಕ ಮತ್ತು ಸಾಮಾಜಿಕ ಹೊಣೆಗಾರಿಕೆ ಇದೆಯೆಂಬುದನ್ನು ಮರೆಯಲಾಗದು.ಕೊರೊನಾವನ್ನು ಹೊಡೆದೋಡಿಸುತ್ತೇವೆ, ಮೂಲೋತ್ಪಾಟನೆ ಮಾಡುತ್ತೇವೆ, ನಾಶ ಮಾಡಿಬಿಡುತ್ತೇವೆ, ಮುಂತಾದ ಘೋಷಣೆಗಳು ರಾಜಕಾರಣಿಗಳ ವೇದಿಕೆಗೆ ಮಾತ್ರ ಸೀಮಿತ. ಕೊರೊನಾ ಭೂಮಿಯ ಮೇಲೆ ವಾಸಿಸಲು ಬಂದಿರುವ ಇನ್ನೊಂದು ವೈರಾಣು. ನೆಗಡಿ, ಫ್ಲೂ ಮುಂತಾದ ವೈರಸ್ ಗುಂಪಿಗೆ ಸೇರಿರುವ ಕೊರೊನಾ, ಮಾಧ್ಯಮಗಳು ಮತ್ತು ರಾಜಕಾರಣಿಗಳು ಬಿಂಬಿಸುತ್ತಿರುವಷ್ಟು ಅಪಾಯಕಾರಿಯಲ್ಲ. ಅದರೊಂದಿಗೆ ಬದುಕಲೇಬೇಕಾದ ಅನಿವಾರ್ಯತೆ ಉದ್ಭವಿಸಿರುವುದು ವಾಸ್ತವ.ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತಿರುವ , ಹುಲಿಯ ಹೆಸರನ್ನು ಕೇಳಿಯೇ ಭಯದಿಂದ ಬೆವರುವವರ ಅರಚಾಟವನ್ನೇ ನಿಜವೆಂದು ನಂಬುವ ಅಗತ್ಯವಿಲ್ಲ. ಆರತಿ ತೆಗೆದುಕೊಂಡರೆ ಉಷ್ಣ, ತೀರ್ಥ ಕುಡಿದರೆ ಶೀತವಾಗುವ ಸೂಕ್ಷ್ಮ ಪ್ರಕೃತಿಯ ಮಕ್ಕಳನ್ನು ಶಾಲೆಗೆ ಕಳುಹಿಸುವ ಆಯ್ಕೆಯನ್ನು ಅವರ ಪಾಲಕರೇ ನಿರ್ಧರಿಸಲಿ.ಕಂಫರ್ಟ ವಲಯದಲ್ಲಿ ಕುಳಿತಿರುವವರ ಅತಾರ್ಕಿಕ ಭಯವನ್ನು ಪುರಸ್ಕರಿಸಿ,ಶಾಲೆಗಳ ಪುನರಾರಂಭವನ್ನು ಮುಂದೂಡಿ ಲಕ್ಷಾಂತರ ಮಕ್ಕಳ ಬೆಳವಣಿಗೆ ಕುಂಠಿತಗೊಳಿಸುವದು ಸರಿಯಲ್ಲ;ಅದು ಅವರಿಗೆ ಮಾಡುವ ದ್ರೋಹ.ಈ ಹಂತದಲ್ಲಿ, ಜುಲೈ ಒಂದನೇ ತಾರೀಖಿನಿಂದ ಶಾಲೆಗಳನ್ನು ಪ್ರಾರಂಭಿಸುವದೇ ಸೂಕ್ತ. ******* ಗಣೇಶ ಭಟ್ ಶಿರಸಿ

ಪ್ರಸ್ತುತ Read Post »

ಇತರೆ

ಲಹರಿ

ಮಾವಿನ ಪುರಾಣ ಮಾವಿನ ಪುರಾಣ ಹಣ್ಣುಗಳಲ್ಲಿ ಮಾವು ಕೊಡುವ ಖುಷಿ, ಯಾವ ಹಣ್ಣು ಕೂಡ ಕೊಡದು ಎಂದರೆ ತಪ್ಪಾಗಲಾರದು.ಹಣ್ಣುಗಳಲ್ಲಿ ಮಾವಿಗೆ ವಿಶೇಷ ಸ್ಥಾನಮಾನ,ರಾಜಮರ್ಯಾದೆ.ಮಾವಿನ ಹಣ್ಣು, ಹಣ್ಣುಗಳ ರಾಜ. ಬೇಸಿಗೆ ಶುರುವಾದೊಡನೆ ಮಾವು ಶುರುವಾಗುತ್ತದೆ.ನಮ್ಮಲ್ಲಿ ಮೊದಲು ಗಿಣಿಮೂತಿ ಮಾವಿನಕಾಯಿ ಜೊತೆ ಈ ಸೀಸನ್ ಶುರುವಾಗುತ್ತದೆ.ಎರೆಡು ಮಳೆ ಆಗುವ ತನಕ ಮಾವು ತಿನ್ನುವುದಿಲ್ಲ.ಒಂದು ದೃಷ್ಟಿ , ಬಂದ ಈ ಗಿಣಿಮೂತಿ ಕಾಯಿಯ ಮೇಲೆ ಇಟ್ಟುಕೊಂಡು ನೋಡದ ಹಾಗೆ ಮಾರುಕಟ್ಟೆಯಲ್ಲಿ ಓಡಾಡುತ್ತೇವೆ.ಮಳೆ ಸ್ವಲ್ಪ ಲೇಟಾದರೆ ಚಡಪಡಿಕೆ ಶುರು.ನಾಲ್ಕೋ,ಐದೋ ಗಿಣಿ ಮಾವಿನಕಾಯಿ ಖರೀದಿಸಿ ಉಪ್ಪು,ಖಾರ ಹಚ್ಚಿಕೊಂಡು ಸವಿಯುವುದೇ ಚೆಂದ.ಮನೆಯಲ್ಲಿ ಹಿರಿಯರ ಕೂಗಾಟ….ಮಳೆ ಬರಲಿ ಎಂದು. ಅಷ್ಟರಲ್ಲೇ ಉಪ್ಪಿನಕಾಯಿ ಹಾಕುವ ಮಾವಿನ ಕಾಯಿ,ಅದರಲ್ಲೂ ಆಮ್ಲೇಟ್ ಕಾಯಿ ಬಂದಿರುತ್ತೆ.ಸ್ವಲ್ಪ ದಿನ ಮನೆಗಳಲ್ಲಿ ಅದರದ್ದೇ ಸಂಭ್ರಮ. ಮಕ್ಕಳು ಕದ್ದುಮುಚ್ಚಿ ಅದನ್ನೇ ತಿಂದು ಬೈಗುಳ ತಿನ್ನುತ್ತಾರೆ.ಉಪ್ಪಿನಕಾಯಿ ಜಾಡಿ ಸೇರಿ ಅಟ್ಟಕ್ಕೆ ಸೇರುತ್ತದೆ.ನಂತರದ್ದೇ ದಿಢೀರ್ ಗಿಣಿಮಾವಿನಕಾಯಿಯ ಉಪ್ಪಿನಕಾಯಿ.ಮಕ್ಕಳಿಗೆ ಈಗ ಸ್ವಾತಂತ್ರ ತಿನ್ನಲು.ಚಿತ್ರಾನ್ನದ ಜೊತೆ ಪರಮಾನ್ನ ಇದು. ಎರೆಡು ಮಳೆ ಆದ ತಕ್ಷಣ ಮಾರುಕಟ್ಟೆಯಲ್ಲಿ ಮಾವಿನ ಸುಗ್ಗಿ. ಎಲ್ಲಕ್ಕಿಂತ ಮೊದಲು ಬಾದಾಮಿ ಹಣ್ಢಿನ ದರ್ಬಾರು.ಮೊದಲಿಗೆ ಕೆ.ಜಿ.ಗೆ 120 ರೂಪಾಯಿಗಿಂತ ಕಮ್ಮಿ ಸಿಗದು.ಕೊಳ್ಳುವ ಜನ ಹಿಂದಕ್ಕೆ ಹೋಗಬಾರದೆಂದು ಇದರ ಜೊತೆಯ ಬುಟ್ಟಿಯಲ್ಲಿ ಸ್ಥಳೀಯ ನಾರಿನ ಹಣ್ಣು ಕೆ.ಜಿ.ಗೆ 50 ರೂಪಾಯಿ. ತಿಂದವರು ಸ್ವಲ್ಪ ಶಾಪ ಹಾಕಿ ಚಪ್ಪರಿಸುತ್ತಾರೆ. ನಂತರದ್ದೇ ಮಾವುಗಳ ರಾಜ ರಸ್ಪುರಿ ಮಾವು ಲಗ್ಗೆ ಇಡುತ್ತದೆ. ತೆಂಡುಲ್ಕರ್ ಬ್ಯಾಟಿಂಗ್ ಗೆ ಬಂದ ಹಾಗೆ ರಸ್ಪುರಿ ಮಾವು ಬರುತ್ತದೆ.ಇದಕ್ಕೆ ನಮ್ಮಲ್ಲಿ ಕಸಿಹಣ್ಣು ಎಂದೇ ಬಿರುದಾಂಕಿತ.ಮೊದಲು ಕೆ.ಜಿ.ಗೆ 70 ರಿಂದ ಶುರು.ನಂತರ ನಂತರ 60.50 ,40. ರಸ್ಫುರಿ ಬಂದ ತಕ್ಷಣ ಬಾದಾಮಿ ಮಾವಿನಹಣ್ಣು ನೆಲ ಕಚ್ಚುತ್ತದೆ.ಬಾದಾಮಿ ಕೂಡ 60 ರೂಪಾಯಿಗೆ ಸಿಗುತ್ತದೆ.ರಾಜ ಬಂದ ಮೇಲೆ ಉಳಿದವರಿಗೆ ಬೆಲೆ ಇಲ್ಲ.ನಾರಿನ ಮಾವಿನಹಣ್ಣು ಓಟ ಕಿತ್ತಿರುತ್ತದೆ. ಈ ಕಸಿ ಮಾವು ರಸ್ಪುರಿ ಬಂದ ಮೇಲೆ ಮನೆಮನೆಗಳಲ್ಲಿ ಹೋಳಿಗೆ ಶುರು.ಹೋಳಿಗೆ ಶೀಕರಣೆ ತಿನ್ನದವನು ರಸಿಕನೇ ಅಲ್ಲ!. ಶೀಕರಣೆಗೆ ರಸ್ಪುರಿ ಮಾವು ಬಿಟ್ಟು ಬೇರಾವುದೇ ಹಣ್ಣಿನಲ್ಲಿ ಮಾಡಿದರೆ ರುಚಿ ಕಮ್ಮಿ. ಬೇರೆ ಬೇರೆ ಭಾಗದಲ್ಲಿ ಈ ತಳಿಗೆ ಬೇರೆ ಬೇರೆ ಹೆಸರುಗಳಿವೆ. ನಂತರ ಬೇರೆ ಬೇರೆ ಮಾವುಗಳ ರುಚಿ ನೋಡುವ ಭಾಗ್ಯ. ಅಡಕೆ ಪುಟ್ಟ ಮಾವಂತೂ ಬಲು ರುಚಿ.ಇದರ ರುಚಿ ಸಕ್ಕರೆ. ಮಕ್ಕಳಿಗೆ ಬಲು ಪ್ರಿಯವಾದ ತಳಿ.ಇದರ ಜೊತೆಗೆ ನಾಟಿ ಮಲಗೋಬ ಹಣ್ಣು, ನಾಟಿ ಹಣ್ಣುಗಳು ಶುರು.ಈ ನಾಟಿ ಹಣ್ಣುಗಳು ಸಿಹಿಹುಳಿ ಮಿಶ್ರಿತ. ನಂತರ ಮಲಗೋಬ ಹಣ್ಣು. ಕತ್ತರಿಸಿಕೊಂಡೇ ತಿನ್ನಬೇಕು ಇದನ್ನು. ಸರಿಯಾದ ಒಂದು ಹಣ್ಣನ್ನು ತಿಂದರೆ ಹೊಟ್ಟೆ ಭರ್ತಿಯಾಗುತ್ತದೆ..ಬಹಳ ಮಜವಾದ ಸಿಹಿ.ಗೊತ್ತಿಲ್ಲದವರಿಗೆ ಕೆಲ ವ್ಯಾಪಾರಿಗಳು ಮಲಗೋಬ ಬದಲು ನಾಟಿ ಮಲಗೋಬವನ್ನೇ ಮಲಗೋಬ ಎಂದು ಮಾರುತ್ತಾರೆ.ಕೊಳ್ಳುವವರು ಹುಷಾರಾಗಿರಬೇಕು. ನಂತರದ್ದು ಜೀರಿಗೆ ಮಾವಿನಹಣ್ಣು.ಸ್ವಲ್ಪ ಮಟ್ಟಿಗೆ ಆಕಾರದಲ್ಲಿ ರಸ್ಪುರಿಯನ್ನು ಹೋಲುತ್ತದೆ.ವಿಶೇಷ ಸುವಾಸನೆಯ ತಳಿ ಇದು.ಕೆಲವರಿಗೆ ಇದು ರುಚಿಸದು.ಇತ್ತೀಚೆಗೆ ಇದರ ತಳಿ ಕಡಿಮೆಯಾಗುತ್ತಿದೆ.ಕೆಲವರು ಇದನ್ನು ಮಾರುವ ಗೋಜಿಗೆ ಹೋಗದೆ ಗಿಡದಲ್ಲೇ ಬಿಡುತ್ತಾರೆ.ಮಾರುಕಟ್ಟೆಯಲ್ಲಿ ಬೆಲೆ ಕಮ್ಮಿ ಇದಕ್ಕೆ. ಇನ್ನೂ ಹಲವು ಹೆಸರಿನ ಸ್ಥಳೀಯ ಹಣ್ಣುಗಳು ಕಡಿಮೆ ಪ್ರಮಾಣದಲ್ಲಿ ಬರುತ್ತವೆ. ಕಸಿ ಮಾವಿನ ಹಣ್ಣಿಗೆ ಸ್ವಲ್ಪ ಮಟ್ಟಿಗೆ ಸ್ಪರ್ದೆ ಒಡ್ಡುವ ತಳಿ ಎಂದರೆ ಸೇಂಧೂರ ಹಣ್ಣು. ಹಸಿರಿದ್ದರೆ ಈ ತಳಿ ಹುಳಿ.ಸಂಪೂರ್ಣ ಹಣ್ಣಾದರೆ ಸ್ವರ್ಗದ ಸಿಹಿ ರುಚಿ.ಇದನ್ನು ಸಿಂಧೂರ ಎಂತಲೂ,ಬೇರೆ ಬೇರೆ ಹೆಸರುಗಳಿವೆ.40 ರೂಪಾಯಿಯಿಂದ 25 ರೂಪಾಯಿಯ ತನಕ ಕೆ.ಜಿ.ಗೆ ಮಾರಲ್ಪಡುತ್ತದೆ. ಕೊನೆಯದಾಗಿ,ಬೇಸಿಗೆ ಮುಗಿಯುವ ಹೊತ್ತಿಗೆ ನೀಲಂ ಶುರುವಾಗುತ್ತದೆ.ಅಷ್ಟರಲ್ಲಾಗಲೇ ಮಳೆ ಶುರುವಾಗಿರುತ್ತದೆ.ಈ ನೀಲಂ ಕೂಡ ಸಿಹಿಯಾದ ತಳಿ.ಮಳೆ ಶುರುವಾದರೆ ಈ ಹಣ್ಣಿನಲ್ಲಿ ಹುಳುಗಳು ಶುರುವಾಗುತ್ತದೆ.ನೋಡಿಕೊಂಡು ತಿನ್ನಬೇಕು.ಸೀಸನ್ ಮುಗಿದರೂ ಮಾರುಕಟ್ಟೆಯಲ್ಲಿ ಸಿಗುವ ಏಕೈಕ ಹಣ್ಣು ಇದು.ಮಹಾರಾಷ್ಟ್ರದಿಂದ ಈ ಹಣ್ಣು ಬರುತ್ತದೆ.ಮಹಾರಾಷ್ಟ್ರದಲ್ಲಿ ಮಳೆ ಶುರುವಾದ ಮೇಲೆ ಮಾವಿನಹಣ್ಣನ್ನು ತಿನ್ನುವುದಿಲ್ಲವಂತೆ.ವ್ಯಾಪಾರಿಗಳು ಹೆಚ್ಚು ರಿಸ್ಕ್ ತೆಗೆದುಕೊಳ್ಳದೆ ನಮ್ಮ ರಾಜ್ಯಕ್ಕೆ ರಫ್ತು ಮಾಡುತ್ತಾರೆ. ಸೀಸನ್ ಇರುವಾಗ ಆಯಾ ಹಣ್ಣುಗಳನ್ನು ಚೆನ್ನಾಗಿ ತಿನ್ನಬೇಕು.ಆರೋಗ್ಯಕ್ಕೆ ಒಳ್ಳೆಯದು. ************ ಕೊಟ್ರೇಶ್ ಅರಸಿಕೆರೆ

ಲಹರಿ Read Post »

ಇತರೆ, ಪರಿಸರ

ಪರಿಸರ

ಮರಗಳ ಕಡಿದರೆ ಖಚಿತ ನಮ್ಮದೇ ಮಾರಣ ಹೋಮ!! ಜಯಶ್ರೀ ಜೆ.ಅಬ್ಬಿಗೇರಿ                                                    ಇದು  ಕೇವಲ ಇಪ್ಪತ್ತು ಮೂವತ್ತು ವರ್ಷಗಳ ಹಿಂದಿನ ಮಾತು ಪ್ರತಿ ಗ್ರಾಮದಲ್ಲೂ ಚಾವಡಿ ಕಟ್ಟೆಗೆ ಹೊಂದಿಕೊಂಡಂತೆ ಮತ್ತು  ಊರ ಹೊರಗಿನ ಗ್ರಾಮ ದೇವತೆಯ ದೇವಸ್ಥಾನದ ಸನಿಹ ಗಿಡ ಮರಗಳ ಸೊಂಪಾದ ನೆರಳು ಇದ್ದೇ ಇರುತ್ತಿತ್ತು.  ದುಡಿದು ದಣಿದು ಬಂದ ರೈತಾಪಿ ವರ್ಗ,  ಹಿರಿಯರು, ಹೈದರು ಮಕ್ಕಳಿಗೆಲ್ಲ ಮನದ ಭಾವನೆಗಳನ್ನು ಹಂಚಿಕೊಳ್ಳುವ ಅಡ್ಡಾದಂತೆ ಕೆಲಸ ನಿರ್ವಹಿಸುತ್ತಿತ್ತು.  ಪ್ರತಿಯೊಬ್ಬರ ಮನೆಯ ಹಿಂದೆ ಹಿತ್ತಲಿನಲ್ಲಿ ತರಹೇವಾರಿ ತರಕಾರಿಯೊಂದಿಗೆ ವಿಧ ವಿಧ ಗಿಡಗಳಿಗೂ ಜಾಗ ಕಡ್ಡಾಯವಾಗಿರುತ್ತಿತ್ತು. ಕೆಲವರಂತೂ ಊರಾಚೆಗೆ ತೋಟದಲ್ಲಿ ಮನೆ ಕಟ್ಟಿಕೊಂಡು ಪ್ರಕೃತಿ ಮಾತೆಯ ಮಡಿಲಲ್ಲಿ ಆನಂದಿಸುವ ಪರಿಯೂ ಕಂಡು ಬರುತ್ತಿತ್ತು. ಇತ್ತೀಚಿಗೆ  ಅಭಿವೃದ್ಧಿಯ ಹೆಸರಿನಲ್ಲಿ ಅದೆಷ್ಟು ನಾವು ಉನ್ಮಾದಿತರಾಗಿದ್ದೇವೆ ಎಂದರೆ ನಮ್ಮ ಕಾಲ ಮೇಲೆ ನಾವು ಕಲ್ಲು ಹಾಕಿಕೊಳ್ಳುತ್ತಿರುವುದು ನಮಗೆ ತಿಳಿಯುತ್ತಿಲ್ಲ. ಮರದ ಬುಡಕ್ಕೆ ಕೊಡಲಿ ಪೆಟ್ಟು ಹಾಕುತ್ತಿರುವುದು ನಮ್ಮ ಬುಡಕ್ಕೇ ಪೆಟ್ಟು ಎನ್ನುವುದು ಬುದ್ಧಿಗೆ ತಿಳಿದಿದ್ದರೂ ಶೋಕಿ ಹಿಂದೆ ಬೆನ್ನು ಹತ್ತಿ ನಮ್ಮ ಜೀವನದ ದಾರಿಯನ್ನೇ ಬದಲಾಯಿಸಿಕೊಂಡು ಮರಗಳ ರಕ್ಷಣೆಯನ್ನು ಕೇವಲ ಉದ್ದುದ್ದ ಭಾಷಣಗಳನ್ನು ಮಾಡಿ ಸಾಲು ಮರದ ತಿಮ್ಮಕ್ಕನಂಥ ಮರಗಳ ಪ್ರೇಮಿ ಹೆಸರು ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದೆವೆ. ಮರಗಳ ರಕ್ಷಿಸುವ ಯೋಜನೆಗಳೆಲ್ಲ ಕಾಗದದ ಕುದುರೆಗಳಾಗಿವೆ. . ರಸ್ತೆ ಅಗಲೀಕರಣದ ಹೆಸರಿನಲ್ಲಿ ಮರಣ ಹೊಂದಿದ ಮರಗಳ ಸಂಖೈಯಂತೂ ಲೆಕ್ಕಕ್ಕಿಲ್ಲ. ದಿನವೂ ಯಾವುದೋ ಒಂದು ಹೆಸರಿಗೆ ಮರಗಳ ಮಾರಣ ಹೋಮ ನಡೆಯುತ್ತಲೇ ಇದೆ. ನಮ್ಮ ದುರಾಸೆಗೆ ಬಲಿಯಾಗುತ್ತಿರುವ ಮರಗಳು ನಮ್ಮ ಅವಿವೇಕತನಕ್ಕೆ ಮರ ಮರ ಮರಗುತ್ತಿವೆ    ಧರ್ಮೋ ರಕ್ಷತಿ ರಕ್ಷತಃ ಎನ್ನುವ ಮಾತಿನಂತೆ ವೃಕ್ಷೊ ರಕ್ಷತಿ ರಕ್ಷತಃ ಮಾತು ದಿಟವೇ ಎನ್ನುವುದು ಅರಿತಿದ್ದರೂ ನಮ್ಮ ನಡೆ ಮಾತ್ರ ಪೈಶಾಚಿಕದಂತೆನೆಸುತ್ತಿದೆ. ಮರಗಳನ್ನೆಲ್ಲ ನೆಲಕ್ಕುರುಳಿಸಿ ಆಕಾಶ ಮುಟ್ಟುವ ಮಹಲು ಮಾಲ್ಗಳನ್ನು ಕಟ್ಟಲೇಬೇಕೆಂಬ ಪಣ ತೊಟ್ಟವರಂತೆ ಹಳ್ಳಿ ಪಟ್ಟಣ ನಗರಗಳೆಂಬ ಭೇದ  ಭಾವ ತೋರದೆ ತಾತ ಮುತ್ತಾತಂದಿರು ವಷರ್ಾನುಗಟ್ಟಲೇ ನೀರುಣಿಸಿ ಬೆಳೆಸಿದ ಮರಗಳನ್ನು ಕ್ಷಣಾರ್ಧದಲ್ಲಿ ಕೊಡಲಿ ಹಿಡಿದು ನೆಲಸಮಗೊಳಿಸುತ್ತಿದ್ದೇವೆ. ಇದು ಊರುಗಳಲ್ಲಿಯ ಕತೆಯಾದರೆ, ಕಾಡಿನತ್ತ ಧಾವಿಸಿ  ಕಾಂಚಾಣ ಎಣಿಸಲು ಹವಣಿಸಿ, ಕಾಡಿನ ಪ್ರಾಣಿಗಳನ್ನು ನಾಡಿಗೆ ಕರೆತರುತ್ತಿದ್ದೇವೆ.  ಇದೇ ಸ್ಥಿತಿ ಮುಂದುವರೆದರೆ ಭವಿಷ್ಯ ಘನಘೋರ. ನಮ್ಮ ಜೀವಕ್ಕೆ  ಕುತ್ತು ಖಚಿತ.ಎಂಬುದು ಪರಿಸರ ವಾದಿಗಳಿಗೆ  ಪ್ರಕೃತಿ ಪ್ರೀಯರಿಗೆ ಬಿಡದೇ ಕಾಡುತ್ತಿರುವ ಭಯ.  ಸೃಷ್ಟಿ ಹುಟ್ಟಿದ ಆರಂಭದಲ್ಲಿ ಮೂರು ಭಾಗದಷ್ಟು ನೀರು ಒಂದು ಭಾಗದಷ್ಟೇ ಭೂಮಿ ಇತ್ತು. ಭೂಮಿಯ ಮೇಲೆಲ್ಲ ಹಸಿರು ಕಂಗೊಳಿಸುತ್ತಿತ್ತು. ಆಹಾರ ಧಾನ್ಯಗಳ ಉತ್ಪಾದನೆಗಾಗಿ ಜಮೀನಿನ ಅವಶ್ಯಕತೆಯಿದೆ ಎಂದು   ಮಾನವ ಕಾಡನ್ನು ನಾಶ ಪಡಿಸಿದ. ದೈವತ್ವದ ಸ್ಥಾನ ನೀಡಿ ಪೂಜಿಸುತ್ತಿದ್ದ ಮರಗಳನ್ನು ಬರುಬರುತ್ತ ಸಂಚಾರಿ ಹೆಸರಿನಲ್ಲಿ ಸಾವಿರಾರು ಮರಗಳ ತಲೆಗಳನ್ನು ತುಂಡರಿಸಿದ. ಈ ಭೂಮಿಯ ಮೇಲೆ ಬದುಕಲು ನಮ್ಮಷ್ಟೇ ಹಕ್ಕು ಪಡೆದ ನಮ್ಮ ಜೀವನಕ್ಕೆ ಸಹಕಾರಿಯಾಗಿರುವ ಸುಮಾರು 500ಕ್ಕೂ ಹೆಚ್ಚು ಪಕ್ಷಿ ಸಂಕುಲಗಳ ಕ್ರಿಮಿ ಕೀಟಗಳ ನಾಶಕ್ಕೂ  ಮುನ್ನುಡಿ ಬರೆಯತೊಡಗಿದ. ಈ ವಿನಾಶವನ್ನು ಕಂಡ ಪ್ರಾಜ್ಞರು, ಆಯುವರ್ೇದದ ಚಿಕಿತ್ಸೆ ತಜ್ಞರು ಸಸಿಗಳ ನೆಡುವಿಕೆಗೆ ಪ್ರೇರೇಪಿಸಿದರು.. ಬೇವು ಆಲದ ಮರದಂಥ ಅತ್ಯುಪಯುಕ್ತ  ಮರಗಳ ಮಹತ್ವವನ್ನು ಸಾರಿದರು.ಅವುಗಳ ಗಾಳಿಯನ್ನು ಶ್ವಾಸಿಸಿದರೆ ಶ್ವಾಸಕೋಶಗಳಿಗೆ ಅತ್ಯುತ್ತಮವೆಂದು  ಜನಮಾನಸದಲ್ಲಿ ಬಿತ್ತಿದರು. ಒತ್ತಡದ  ಬದುಕಿನ ಫಲಶೃತಿಯಾಗಿ ರಕ್ತದೊತ್ತಡ ಮಧುಮೇಹದಂಥ ಜೀವನ ಪೂತರ್ಿ ಜೀವ ತಿನ್ನುವ ಕಾಯಿಲೆಗಳು ವಯೋ ಭೇದವಿಲ್ಲದೇ ಬೆನ್ನು ಬಿದ್ದಿವೆ. ದಿನವಿಡಿ ಕಂಪ್ಯೂಟರ್ ಇಂಟರ್ಪಪಪಪಪಪನೆಟ್ನಲ್ಲಿ ಮುಳುಗಿದ ಕಣ್ಣುಗಳಿಗೆ ದಿನದ ಕೆಲ ಹೊತ್ತು ಹಸಿರು ಗಿಡಗಳೆಡೆಗೆ  ದೃಷ್ಟಿಯಿಡುವಂತೆ, ಹಸಿರನ ಮಧ್ಯದಲ್ಲಿ ವಾಯುವಿಹಾರ ನಡೆಸುವಂತೆ ವೈದ್ಯರು ಗ್ರೀನ್ ಥೆರಪಿ ಸಲಹೆ ನೀಡುತ್ತಿದ್ದಾರೆ. ಆದರೆ ಹಸಿರು ಗಿಡ ಮರಗಳೆಲ್ಲಿ ಸಿಗುತ್ತಿಲ್ಲ. ಅಲ್ಲಲ್ಲಿ ಕಾಂಕ್ರೀಟ್ ಕಾಡುಗಳು ಸಣ್ನ ಪುಟ್ಟ ಪಾಕರ್್ಗಳು ಮಾತ್ರ ಕಣ್ಣಿಗೆ ಬೀಳುತ್ತವೆ. ಸಮೀಕ್ಷೆಯ ಅಧ್ಯಯನದ ಪ್ರಕಾರ ಹಸಿರು ಒತ್ತಡವನ್ನು ಕಡಿಮೆ ಮಾಡುವುದಲ್ಲದೇ ಇತ್ತೀಚಿಗೆ ಹೆಚ್ಚುತ್ತಿರುವ ಹೃದ್ರೋಗದ ಸಾವುಗಳನ್ನು ಕಡಿಮೆಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂಬ ವರದಿ ಹೊರ ಬಿದ್ದಿದೆ. ಮನೆಯ ಮುಂದೆ ಹಿಂದೆ ಹಸಿರಿಗೆಂದೇ ಮೀಸಿಲಿಟ್ಟಿದ್ದ ಜಾಗ ಈಗೀಗ ಫೋರ್ ವ್ಹೀಲರ್ಸ್ ಬೈಕ್ ಪಾಕರ್ಿಂಗ್ನ ಪಾಲಾಗುತ್ತಿದೆ. ಮರಗಳಿಗಾಗಿ ಹುಡುಕಿಕೊಂಡು ಮೈಲುಗಟ್ಟಲೇ ನಡೆಯುವ ಪ್ರಸಂಗ ತಲೆದೋರಿದೆ.  ಮರ ಗಿಡಗಳು ಮನೆ ಮುಂದೆ ಇದ್ದರೆ ಕೋಟಿ ಕೋಟಿ ಅದಾಯ ಅದ್ಹೇಗೆ ಎಂದು ಹುಬ್ಬೇರಿಸುತ್ತೀರೇನು! ಮರವೊಂದು ತನ್ನ ಜೀವಿತಾವಧಿಯಲ್ಲಿ ಹೂವು ಕಾಯಿ ಹಣ್ಣು ಉರುವಲು ರೂಪದಲ್ಲಿ ಆದಾಯ ತರುವುದಲ್ಲದೇ ತಜ್ಞರ ಪ್ರಕಾರ ಶ್ವಾಸ ಸಂಬಂಧಿತ ಕ್ಯಾನ್ಸರ್ನಿಂದ ಬಳಲುವ 10 ಲಕ್ಕಕ್ಕಿಂತಲೂ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಜೀವ ದಾನ ನೀಡುತ್ತವೆ. ಅವು ನೀಡುವ  ಪ್ರಾಣ ವಾಯುವಿಗೆ ಬೆಲೆ ಕಟ್ಟಲಾದೀತೆ? ವೈಭವೀಕರಣದ ಜೀವನದ ಭ್ರಾಂತಿಯಲ್ಲಿ  ಸ್ವಚ್ಛ ಗಾಳಿಗೆ ಪರದಾಡುವ ಸ್ಥಿತಿ ನಿಮರ್ಾಣವಾಗಿದೆ ಎಲ್ಲೆಲ್ಲೂ ಕಾಖರ್ಾನೆಯ ವಿಷಾನೀಲ ವಾಹನದ ದಟ್ಟನೆಯ ಧೂಳು ನಮ್ಮ ಶ್ವಾಸದ ಗೂಡಿಗೆ ಕೈ ಹಾಕುತ್ತಿದೆ. ಮಳೆಯ ಆರ್ಭಟವನ್ನು ಸಹಿಸಿಕೊಂಡು ಮಣ್ಣಿನ ಸವಕಳೀಯನ್ನು ತಡೆಯುತ್ತಿದ್ದ ಮರಗಳು ಇದೀಗ  ನಮ್ಮ ಆರ್ಭಟಕ್ಕೆ  ತಾವೇ  ಕೊನೆಯುಸಿರೆಳೆಯುತ್ತಿವೆ. “       ಅತಿಯಾದ ಕಾಡಿನ ನಾಶ ಅತಿವೃಷ್ಟಿ ಅನಾವೃಷ್ಟಿ ಉಂಟಾಗುತ್ತಿದೆ. ಇದರಿಂದ  ತುತ್ತಿನ ಚೀಲ ತುಂಬಿಸುವ ಅನ್ನದಾತನ ತುತ್ತಿಗೆ ತತ್ವಾರ ತಂದೊಡ್ಡಿ ಆತನನ್ನು ಆತನ ಕುಟುಂಬವನ್ನೂ ಬಲಿತೆಗೆದುಕೊಳ್ಳುವ ಹಂತಕ್ಕೆ ಬಂದು ನಿಂತಿದ್ದೇವೆ.   ನಮ್ಮ ಸ್ವಾರ್ಥಕ್ಕೆ ಭೂ ಮಂಡಲವೆಲ್ಲ ಧಗ ಧಗ ಉರಿಯುವ ಕೆಂಡದುಂಡೆಯಂತೆ ಭಾಸವಾಗುತ್ತಿದೆ. ಕಾಡುಗಳ ಕಣ್ಮರೆಯಿಂದ. ಜೀವ ವೈವಿಧ್ಯತೆಯ ಅಮಾಯಕ ಮೂಕ ಪ್ರಾಣಿಗಳ ಮತ್ತು ಕಾಡು ಪ್ರಾಣಿಗಳ ಅವಸಾನವಷ್ಟೇ ಅಲ್ಲ ಪ್ರಕೃತಿಯ ಸಮತೋಲನವನ್ನೇ ಅಲ್ಲಾಡಿಸುತ್ತಿದೆ. ಅದಲ್ಲದೇ ಮಳೆಯ ಪ್ರಮಾಣವೂ ತುಂಬಾ ಕುಸಿಯುತ್ತಿದೆ. ರೆಫ್ರಿಜರೇಟರ್ನಂತಹ ವಸ್ತುಗಳ ಬಳಕೆಯಿಂದ ಭೂಮಿಗೆ ರಕ್ಷಣಾ ಕವಚದಂತಿರುವ ಓಜೋನ್ ಪರದೆಗೂ ಅಲ್ಲಲ್ಲಿ ರಂಧ್ರಗಳು ಬಿದ್ದು ಅದಕ್ಕೂ ಜೀವ ಭಯ ಕಾಡುತ್ತಿದೆ. ಇದರ ಪರಿಣಾಮ ಜಾಗತಿಕ ತಾಪಮಾನ ಏರಿ ಜೀವ ಹಿಂಡುತ್ತಿದೆ ಬಿಸಿಲಿನ ತಾಪಕ್ಕೆ ಮಂಜು ಕರಗಿ ಸಮುದ್ರಕ್ಕೆ ಸೇರುತ್ತಿದೆ. ಪ್ರವಾಹಗಳ ಭೀತಿಯೂ ಹೆಚ್ಚುತ್ತಿದೆ. ಜೀವ ರಕ್ಷಕ ಆಮ್ಲಜನಕ ನೀಡುವ ಗಿಡ ಮರಗಳ ರಕ್ಷಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಮರಗಳ ಧರೆಗುರುಳಿಸುವುದು ಅತಿ ಸುಲಭ. ಮರಗಳನು ಧರೆಯ ಮೇಲೆ ಬೆಳೆಸುವುದು ಕಷ್ಟದ ಕೆಲಸ. ಅಶ್ವತ್ಥಮೇಕಂ ಪಿಚುಮಂದುಮೇಕಮ್ ನ್ಯಗ್ರೋಧಮೇಕಂ ದಶತಿಂತ್ರಿಣೀಶ್ಚ ಕಪಿತ್ಥಬಿಲ್ವಾಮಲಕಾಮ್ರವೃಕ್ಷಾನ್ ಧಮರ್ಾರ್ಥಮಾರೋಪ್ಯ ಸ ಯಾತಿ ನಾಕಂ ಒಂದು ಅರಳಿ ಮರ ಒಂದು ಬೇವಿನ ಮರ ಒಂದು ಆಲದ ಮರ ಹತ್ತು ಹುಣಸಿ ಮರ ಸಾಕಷ್ಟು ಬೇಲ ಬಿಲ್ವ ನೆಲ್ಲಿ ಮತ್ತು ಮಾವಿನ ಮರಗಳನ್ನು ಧಮರ್ಾರ್ಥಕ್ಕಾಗಿ ಬೆಳೆಸಿ ಒಬ್ಬನು ಸ್ವರ್ಗಕ್ಕೆ ಹೋಗುತ್ತಾನೆ ಎಂದು ಹೇಳುವ ಸಂಸ್ಕೃತ ಶ್ಲೋಕ ಧರೆಯನ್ನೇ ಸ್ವರ್ಗವನ್ನಾಗಿಸುವ ಸಂದೇಶವನ್ನು ಸಾರುತ್ತದೆ. ಮರಗಳು ಆಮ್ಲಜನಕ ತಯಾರಿಸುವ ಕಾಖರ್ಾನೆಗಳು ಒಂದು ಬಲಿತ ಮರವು ಪ್ರತಿ ವರ್ಷ 25-30 ಕಿಲೊ ಇಂಗಾಲದ ಡೈ ಆಕ್ಸೈಡ್ ತೆಗೆದು ಹಾಕಬಲ್ಲದು. ಜೀವ ರಕ್ಷಕ ಮರಗಳನ್ನು ಅಭಿವೃದ್ಧಿ ಹೆಸರಿನಲ್ಲಿ  ಕಡಿದರೆ ಖಚಿತ ನಮ್ಮದೇ ಮಾರಣ ಹೋಮ.  ಇನ್ನಾದರೂ ಎಚ್ಚೆತ್ತುಕೊಂಡು ಗಿಡ ಮರಗಳನ್ನು ಬೆಳೆಸಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವತ್ತ ಹೊಸ ಹೆಜ್ಜೆ ಇಡೋಣ.                                                   *********

ಪರಿಸರ Read Post »

ಇತರೆ, ಪರಿಸರ

ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ.

ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ? ನಂದಿನಿ ಹೆದ್ದುರ್ಗ ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ. ‘ರೀಫಿಲ್ ಮಾತ್ರ ಸಾಕು’ ಎಂದೆ.. ‘ಅಯ್ಯೋ ರೀಫಿಲ್ಗೂ ,ಫುಲ್ ಪೆನ್ನಿಗೂ ಎರಡೇ ರೂಪಾಯಿ ವ್ಯತ್ಯಾಸ ಮೇಡಮ್ . ಇದನ್ನೇ ತಗೋಳಿ ‘ ಅಂದ ಅಂಗಡಿಯ ಹುಡುಗ. ತಕ್ಕಮಟ್ಟಿಗೆ ವಿದ್ಯಾವಂತನಂತೇ ಕಾಣುತ್ತಿದ್ದ.. ಎರಡು ಮೂರು ರೂಪಾಯಿಗಳ ವ್ಯತ್ಯಾಸಕ್ಕಲ್ಲಣ್ಣ ರಿಫಿಲ್ ಕೇಳ್ತಿರುವುದು.. ನಾನು ಉತ್ಪತ್ತಿ ಮಾಡುವ ಕಸದ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಎಂದೆ… ವಿಚಿತ್ರ ಪ್ರಾಣಿಯಂತೆ ಸುತ್ತಲಿನವರು ನೋಡಿದರೆ ಇನ್ನೂ ಕೆಲವರು ನೀವು ಏನ್ ಮಾಡ್ತೀರಾ ಮೇಡಮ್…?ಎಂದರು. ಗೃಹಿಣಿ ಎಂದೆ.. ಅಬ್ಬಾ ಗೃಹಿಣಿ ಯಾಗಿ ಇಷ್ಟು ಸೂಕ್ಷ್ಮ ವಿಷಯಗಳಲ್ಲಿ ಗಮನವಿದೆಯಾ ಎಂದರು… ಗೃಹಿಣಿ ಇಂತಹ ವಿಷಯಗಳಲ್ಲಿ ಹೆಚ್ಚು ಜಾಗೃತಿ ವಹಿಸಬಾರದೇ ಅಥವಾ ಆಕೆ ಬೇಸಿಕಲಿ ಅಸೂಕ್ಷ್ಮಳೇ? ಅವರ ಪ್ರಶ್ನೆಗಳು ವಿಚಿತ್ರವೆನಿಸಿತು. “ಇಲ್ಲಾಆಆಆ….ಇನ್ ಮುಂದೆ ಹೀಗೇ ತರಕಾರಿ ತಂದರೆ ನಾನು ಮನೆಯೊಳಗೇ ತಗೊಂಡು ಹೋಗಲ್ಲ…” ಅವತ್ತು ಮನೆಯಲ್ಲಿ ಜೋರು ಜಗಳ. ಅವಳ ಗಂಡ ದಿನಾ ಎಫ್ಬಿಯಲ್ಲಿ ಬರುವ ವಿಡಿಯೊ ಗಳನ್ನು ನೋಡಿ ‘ನೋಡ್ ಸುಮಿ ಇಲ್ಲಿ.. ಮೀನಿನ ಹೊಟ್ಟೆಯಲ್ಲು ,ಹಸುವಿನ ಹೊಟ್ಟೆಯಲ್ಲೂ ಬರೀ ಪ್ಲಾಸ್ಟಿಕ್ಕು…ಜನರಿಗೆ ಬುದ್ದಿನೇ ಬರಲ್ಲಾ ಅಲ್ವಾ…’ ಅಂತಿರ್ತಾನೆ. ಆದರೆ ಅವನು ಮಾತ್ರ ಹೊರಗೆ ಹೋಗುವಾಗ ಕೈಚೀಲ ಕೊಟ್ರೆ ಅಲ್ಲೇ ಇಟ್ಟು ಹೋಗ್ತಾನೆ.. ನಾನೊಬ್ಬ ಪ್ಲಾಸ್ಟಿಕ್ ಬಳಸುವುದರಿಂದ ಮಹಾ ಬದಲಾವಣೆ ಏನೂ ಆಗಲ್ಲ…ಅನ್ನುವುದು ಅವನ ವಾದ. ಬಹಳಷ್ಟು ಬಾರಿ ತಿಳಿಹೇಳಿ,ವಾದಿಸಿ ಸೋತ ಸುಮತಿ ಅವತ್ತು ಪ್ಲಾಸ್ಟಿಕ್ ನಲ್ಲಿ ತಂದ ತರಕಾರಿಗಳನ್ನು ಒಳಗೆ ತೆಗೆದುಕೊಂಡೇ ಹೋಗಲಾರೆ ಅಂತ ಮುಷ್ಕರ ಮಾಡಿದಳು.. ಆ ಮೇಲಿಂದ ಸ್ವಲ್ಪ ಸ್ವಲ್ಪ ಬದಲಾವಣೆ ಕಾಣುತ್ತಿದೆ… ಚಪ್ಪಲಿ ಕೊಂಡ ಮೇಲೆ ಅದಕ್ಕಾಗಿ ಕೊಡುವ‌ ರಟ್ಟಿನ ಪೆಟ್ಟಿಗಳನ್ನು ಬೇಡ ಎಂದರೆ ಅಂಗಡಿಯವ‌ನಿಗೆ ಅಚ್ಚರಿ.! ಸೀರೆ ಕೊಂಡಮೇಲೆ ಪಾಕೀಟು ಹಿಂದಿರುಗಿಸಿದರೆ ಹೊಸತರ ಹಾಗೆ ಅನಿಸುವುದಿಲ್ವಂತೆ. ಅಗತ್ಯವಿದೆಯೇ ಅದೆಲ್ಲಾ? ತಿನ್ನುವ ಪಿಜ್ಜಾದ ಮೂರುಪಟ್ಟು ಪ್ಯಾಕಿಂಗ್. ಸಣ್ಣದೊಂದು ಬಿಸ್ಕತ್ತು ಪ್ಯಾಕಿಗೆ ಮತ್ತೇನೋ ಪ್ಲಾಸ್ಟಿಕ್ ಆಟಿಕೆ ಫ್ರಿ.. ಆ ಫ್ರಿ ಸಿಗುವ ವಸ್ತವಿಗಾಗಿಯೇ ಮಗುವಿಗೆ ಬಿಸ್ಕತ್ತು ಪ್ಯಾಕಿನ ಮೋಹ.. ಒಂದು ಕೊಂಡರೆ ಮತ್ತೊಂದೇನೋ ಉಚಿತ… ಆ ಉಚಿತದ್ದು ಮೂರು ದಿನಕ್ಕೆ ಖಂಡಿತವಾಗಿ ಕಸ.. ಚೈನಾ ಮೇಡ್ ಬಹಳ ಚೀಪು. ಇದೊಂದು ಇರಲಿ ಅಂತ ಅನಿಸುವುದೂ ಸಹಜ. ಮೂರೇ ದಿನಕ್ಕೆ ಕೆಟ್ಟು ಹೋಗುವ ಅವು ರಿಪೇರಿಗೆ ಒದಗಲಾರವು. ಮತ್ತೆ ಕಸ.. ಮನೆಯಿಂದ ಹೊರಗೆ ಕಾಲಿಟ್ಟರೆ ಕಸ.. ಹೊರಗಿನಿಂದ ಒಳಗೆ ಬಂದರೆ ಮತ್ತೊಂದಿಷ್ಟು ಕಸ.. ಕಸ ಕಸ ಕಸ.. ಬದುಕೇ ಕಸಮಯವಾದ ಕಾಲ ಇದು. …. ಈ‌ ಮೊದಲೆಲ್ಲಾ ಮಹಾನಗರಗಳಿಗೆ ಮಾತ್ರ ಕಸ ವಿಲೇವಾರಿ ಸಮಸ್ಯೆ ಎನಿಸುತಿತ್ತು.. ಹಳ್ಳಿಯಲ್ಲಾದರೆ ಪ್ರತಿ ಮನೆಯಲ್ಲೂ ಒಂದು ತಿಪ್ಪೆ ಇರುತಿತ್ತು..ಮನೆಯ ಎಲ್ಲಾ ಕಸವೂ ಅಲ್ಲಿ ಕೊಳೆತು ಅದರ ಮೇಲೆ ಎರಡು ಕುಂಬಳ ಬೀಜ ಎಸೆದರೆ ವರ್ಷಕ್ಕಾಗುವಷ್ಟು ಕುಂಬಳ ಸಿಕ್ತಿತ್ತು.. ಆದರೆ.. ಪ್ಲಾಸ್ಟಿಕ್ ಹಳ್ಳಿಯನ್ನೂ ಬಿಡುತಿಲ್ಲ ಈಗ. ಪ್ರತಿ ಪ್ರಜ್ಞಾವಂತ ಹಳ್ಳಿಗ ನಿತ್ಯ ದಿನಚರಿಯೊಂದಿಗೆ ಕಡ್ಡಾಯ ಎನುವಂತೆ ಒದಗುವ ಪ್ಲಾಸ್ಟಿಕ್ ಅನ್ನು ಏನು ಮಾಡಬಹುದು ಅಂತ ತೋಚದೆ ಒದ್ದಾಡುತ್ತಾನೆ.. ನಗರದಂತೆ ಕಸ ಒಯ್ಯುವ ಗಾಡಿ ಇಲ್ಲಿಗೆ ಬರುವುದಿಲ್ಲ. ನೀರೊಲೆ ಕಾಣಿಸುವುದು ಸುಲಭದ ಮಾರ್ಗವಾದರೂ ವಾಯುಮಾಲಿನ್ಯ ನಿಶ್ಚಿತ. ಮಣ್ಣು ಅದನ್ನು ಜೀರ್ಣಿಸಿಕೊಳ್ಳಲಾರದು.. ಹರಿವ ನೀರಿಗೆ ಬಿಡವುದು ಥರವಲ್ಲ. ಮತ್ತೇನು ಮಾಡಬಹುದು..? … ಪ್ರತಿ ಮನುಷ್ಯನು ಜಾಗೃತನಾಗಲೇಬೇಕಾದ  ಪರ್ವಕಾಲ ಇದು ಎನಿಸುತ್ತದೆ. ಆದಷ್ಟೂ ಮಟ್ಟಿಗೆ ತಾನು ವೈಯಕ್ತಿಕವಾಗಿ ಸೃಷ್ಟಿಸುವ ಕಸದ ಪ್ರಮಾಣವನ್ನು ಕಡಿಮೆ ಮಾಡುವ ಕಡೆಗೆ ಯೋಚಿಸಲೇಬೇಕಾಗಿದೆ. ಒಂದು ಎಕ್ಸಟ್ರಾ ಪೇಪರ್ ನ್ಯಾಪ್ಕಿನ್ ತೆಗೆಯುವ ಮೊದಲು,ಅನಗತ್ಯ ವಸ್ತವೊಂದನ್ನು ಕೊಳ್ಳುವ ಮೊದಲು,ಒಂದು ತುತ್ತು ಆಹಾರವನ್ನು ವ್ಯರ್ಥಮಾಡುವ ಮುನ್ನ ಎರಡನೇ ಬಾರಿ ಯೋಚಿಸುವವ ಮಾತ್ರ ನಿಜಕ್ಕೂ ಇಂದಿನ ನಾಗರಿಕ ವ್ಯಕ್ತಿ ಎನ್ನಬಹುದು.. “ಮಾಲಿನ್ಯ ನಿಯಂತ್ರಿಸಿ ,ಪರಿಸರ ಉಳಿಸಿ” ಈ ಘೋಷ ವಾಕ್ಯಕ್ಕೆ ಬದ್ದರಾಗಲೇಬೇಕಾದ ಕಾಲ ಸನ್ನಿಹಿತ ವಾಗಿದೆ. … ಜಗತ್ತೇ ಒಂದು ಕುಟುಂಬ ಎನ್ನುವ ಮಾತು ಈಗಿನ ದಿನಮಾನಗಳಲ್ಲಿ ಹೆಚ್ಚು ಪ್ರಸ್ತುತ ಎನಿಸುವುದಿಲ್ಲವೇ.? ದೂರದ ವೂಹಾನ್ ನಲ್ಲಿ‌ ಬಂದ ‌ಕೊರೊನಾ ತಿಂಗಳೊಪ್ಪತ್ತಿಗೆ ಜಗತ್ತನ್ನೇ ವ್ಯಾಪಿಸಿದ ಬಗೆ .. ಭೂಮಿಯ ಆ ಬದಿಯಲ್ಲಿ ಬಂದ ರಾಕ್ಷಸ ಸ್ವರೂಪಿ ಮಿಡತೆಗಳು ಎರಡೇ ವಾರದಲ್ಲಿ ನಮ್ಮ ದೇಶಕ್ಕೂ ಬಂದ ವೇಗ. ಲೋಕವನ್ನೇ ಆಹುತಿ ತೆಗೆದುಕೊಳ್ಳುವಂಥ  ಮನುಷ್ಯ ಮನುಷ್ಯನ ನಡುವಿನ ವರ್ಣ ವರ್ಗ ಸಂಬಂಧಿ ಕದನಗಳು ದಿನ‌ ಮುಗಿಯುವುದರೊಳಗಾಗಿ ಎಲ್ಲೆಡೆ ಸುದ್ದಿಯಾಗುವ ಗದ್ದಲೆಬ್ಬಿಸುವ ಹುನ್ನಾರ.. ಈ ಎಲ್ಲವೂ “ಸದ್ಯ..ನಾನು ಸುಖವಾಗಿದ್ದೇನೆ ಸಾಕು” ಎನ್ನುವ ಮನಸ್ಥಿತಿಗೆ ಅಂಕಿತ ಹಾಡಲಿಕ್ಕಾಗಿಯೇ ಬಂದವು ಎಂಬುದು ತಿಳಿಯುತ್ತಿದೆ.. ನೀನು ಕ್ಷೇಮವಿದ್ದರೆ ಮಾತ್ರ ನಾನೂ ಕ್ಷೇಮ ಎನ್ನುವ ಹೊಂದಾವಳಿ ನಿರ್ಮಾಣವಾಗಲೇಬೇಕಿದೆ.. ಜೂನ್ ಐದು..ಅಂದರೆ ಇಂದು ವಿಶ್ವ ಪರಿಸರ ದಿನ.. ನಾಲ್ಕು ಮಾತಾಡಿ, ನಾಲ್ಕಕ್ಷರ ಬರೆದು ನಮ್ಮ ಕರ್ತವ್ಯ ಮುಗಿಸುವ ಯೋಜನೆಗೆ ಇತಿಶ್ರಿ ಹಾಡಿ ಸಣ್ಣಪುಟ್ಟ ಬದಲಾವಣೆಗಳನ್ನು ದಿನಚರಿಗೆ ಅಳವಡಿಸಿಕೊಳ್ಳಬಹುದೇ..? ನೂರು ಸಸಿಯನ್ನು ಕ್ಯಾಮೆರಾಗಾಗಿ ನೆಟ್ಟು ಒಂದೂ ಬದುಕದ ಒಣ ಮಹೋತ್ಸವದ ಆಚರಣೆಗೆ ಬದಲಾಗಿ ತನ್ನ ಇತಿಮಿತಿಯಲ್ಲಿ ಐದಾದರೂ ಗಿಡಗಳನ್ನು ನೆಟ್ಟು ಪೋಷಿಸುವುದಕ್ಕೆ ಈ ದಿನವನ್ನು ನಿಮಿತ್ತ ಮಾಡಿಕೊಳ್ಳಬಹುದೇ..? ಒಮ್ಮೆ ಹಿಂದಿರುಗಿ ನೋಡಿದರೆ ಹಿರಿಯರು ನಿರ್ಮಿಸಿಕೊಂಡ ದೇವರಕಾಡು,ಬನದ ಮರ,ಚೌಡಿ ಪೂಜೆ, ಬಯಲು ಬಸವ,ಕಾಡು ಬಸವ,ಬ್ರಹ್ಮ ದೇವರು, ಗುಂಡುತೋಪು ಇವೆಲ್ಲವೂ ಅದೆಷ್ಟು ಸಹಜವಾಗಿ ಈ ನೆಲ ಜಲ ವೃಕ್ಷಗಳನ್ನು ರಕ್ಷಿಸುತ್ತಿದ್ದವು. ಇವೆಲ್ಲವೂ ‘ನಂಬಿಕೆಯೆಂದರೆ..,ಇಲ್ಲಾ ಇಲ್ಲ ಮೂಢನಂಬಿಕೆ’  ಎನ್ನುವ ನಾಗರಿಕರ ಲೋಕ ಈಗ ನಮ್ಮದು. … ಮನುಷ್ಯನ ಮಿತಿ ಮೀರಿದ ವೇಗಕ್ಕೆ ಇತಿ ಹೇಳಲಿಕ್ಕಾಗಿಯೇ ಜಗತ್ತಿಗೆ ಕೊರೊನಾ ಬಂದಿದೆ ಎನುವುದನ್ನು ಒಂದಿಲ್ಲೊಂದು ಬಾರಿ ನಾವೆಲ್ಲರೂ ಹೇಳಿರುವ ಈ ಕಾಲದಲ್ಲಿ  ನಿತ್ಯವೂ ಬೇಸರ ಹುಟ್ಟಿಸುವಷ್ಟು ಬಾರಿ ಜಗತ್ತಿನ,ದೇಶದ ,ರಾಜ್ಯದ ,ಜಿಲ್ಲೆಯ, ಸ್ಥಳೀಯ ಸೋಂಕಿನ ಅಂಕಿಅಂಶಗಳನ್ನು ಮಾದ್ಯಮಗಳು  ಹೇಳುತ್ತಲೇ ಇರುತ್ತವೆ.. ಪ್ರತಿ ಬಾರಿ ಕೇಳಿದಾಗಲೂ ಮಾಸ್ಕಿನ ನೆನಪೂ,ಕೈತೊಳೆಯುವ ಮನಸ್ಸೂ,ಕ್ವಾರಂಟೈನಿನ ಭಯವೂ ಹೃದಯಮೆದುಳಿರುವ ಈ‌ ಮನುಷ್ಯ ಮಾತ್ರನಿಗೆ ಹೊಕ್ಕಿಳಿಯುವುದಂತೂ ಸತ್ಯ. ಹೀಗೊಂದು ಬಗೆ ಮನುಷ್ಯನನ್ನು ಎಚ್ಚರಿಸುತ್ತದೆ ಎಂದರೆ ಪ್ರತೀ ಹನ್ನೆರಡು ತಾಸಿಗೊಮ್ಮೆ ನಮ್ಮ ದೇಶದ,ನಮ್ಮ ರಾಜ್ಯದ,ಜಿಲ್ಲೆಯ, ತಾನು ವಾಸಿಸುವ ಏರಿಯಾದ ಮಾಲಿನ್ಯದ ಕುರಿತಾದ ಅಂಕಿಅಂಶಗಳು ಪ್ರತಿಯೊಬ್ಬರ ಮೊಬೈಲಿಗೆ ಬಂದು ಬೀಪಿಸಿದರೆ ನಮ್ಮೊಳಗೆ ಒಂದು ಎಚ್ಚರಿಕೆಯ ಗಂಟೆ ಮೊಳಗಬಹುದೇ…? ಪ್ರತೀ ರಸ್ತೆಯ ತಿರುವಿನಲ್ಲಿ, ಊರಿನ ಆರಂಭದಲ್ಲಿ ವಾಯುಮಾಲಿನ್ಯ ,ಶಬ್ದ ಮಾಲಿನ್ಯ, ನೆಲಮಾಲಿನ್ಯ ಇಷ್ಟಿಷ್ಟಿದೆ ಎನ್ನುವ ಮಾಹಿತಿ ದೊರಕಿದರೆ ನಮ್ಮ ಕೊಳ್ಳುಬಾಕತನಕ್ಕೆ ,ಕಸೋತ್ಪಾದನೆಗೆ ಒಂದು ಶೇಕಡವಾದರೂ ತಡೆ ಬೀಳಬಹುದಲ್ಲವೇ..? ಒಂದು ನದಿ ಅಥವಾ ಹೊಳೆಯ  ನೀರಿನ ಮಟ್ಟದಂತೆಯೇ ಅದರ ಜಲದ ಮಾಲಿನ್ಯ ‌ಮಟ್ಟವೂ ಪ್ರತಿನಿತ್ಯ ಮಾಹಿತಿ ಬೋರ್ಡಿನಲ್ಲಿ ದಾಖಲಾದರೆ  ನಮ್ಮ ಅಸೂಕ್ಷ್ಮತೆ ತುಸುವಾದರೂ ಬದಲಾಗಬಹುದೇ..? … ಪರಿಸರದಷ್ಟು ನಿಗೂಢ, ನಿಷ್ಠುರ  ವಿಷಯ ಬೇರೊಂದಿಲ್ಲ. ತಾನು ಗೆದ್ದೆ ಎಂದುಕೊಂಡಾಗಲೆಲ್ಲಾ ಅದು ಮನುಷ್ಯ ಜೀವಿಗೆ ನಾನಿದ್ದೇನೆ ಎನುವಂತೆ ಪಾಠ ಕಲಿಸುತ್ತಲೇ ಬಂದಿದೆ.. ಬದುಕು ಮತ್ತು ಭೂಮಿ ಒಂದನ್ನೊಂದು ಗಾಢವಾಗಿ ಅವಲಂಬಿಸಿರುವುದು ತಿಳಿದ ನಂತರವೂ ನಮ್ಮ ಹಮ್ಮು ಕಮ್ಮಿಯಾಗುವುದಿಲ್ಲ.. ಗುಬ್ಬಚ್ಚಿಯನ್ನು ನಾಶ ಪಡಿಸಿದರೆ ತಾನು ವರ್ಷಕ್ಕೆ ಬೆಳೆಯುವ ಧಾನ್ಯ  ಮೂರು ವರ್ಷ ಉಣ್ಣಲು ಸಾಲುತ್ತದೆ ಎಂದುಕೊಂಡ ತಲೆತಿರುಕ ಚೀನಾ ಅವುಗಳನ್ನು ಕೊಂದು ಅನುಭವಿಸಿದ ಬೇಗೆ ನಮ್ಮ ಕಣ್ಣೆದುರಿಗೇ ಇದ್ದರೂ ತಪ್ಪಿನಿಂದ ನಾವು ಕಲಿಯುವುದಿಲ್ಲ… ಗರ್ಭ ತುಂಬಿಕೊಂಡ ಆನೆಗೆ ಹಣ್ಣಿನ ರೂಪದಲ್ಲಿ ಸಾವು ತೋರುವ ಮಹಾ ಮನುಷ್ಯರು ನಾವು… ಅಗಾಧ‌ನೋವು ಅನುಭವಿಸುತ್ತಲೇ ಸುಮ್ಮನೇ ಘೀಳಿಟ್ಟು ,ಹರಿವ ನದಿಗಿಳಿದು ಬೇಗೆ ಶಮನಗೊಳಿಸಿಕೊಳ್ಳಲೆತ್ನಿಸಿ ಸಾವು ನೋಡಿದ ಯಃಕಶ್ಚಿತ್ ಆನೆ ಅದು.. ಮನುಷ್ಯ ಹೇಗೆ ಮತ್ತು ಏಕೆ ಇಷ್ಟೊಂದು ಸ್ವಾರ್ಥಿಯಾದ.!! ಹಣವೇ..?ಹಸಿವೇ…?ಗೆಲ್ಲುವ ಬಗೆಯೇ? ಸಾಮಾನ್ಯ ತಿಳುವಳಿಕೆಗೂ ನಿಲುಕುವ ಸಂಗತಿ ಎಂದರೆ ಎಕಾಲಜಿ ಮತ್ತು ಎಕಾನಮಿ ಸದಾ ಒಂದಕ್ಕೊಂದು ಪೂರಕವಾಗಿಯೇ ಕೆಲಸ ಮಾಡುತ್ತವೆ. ಹಾವು ಇಲಿಯನ್ನು,ಇಲಿ ಕಪ್ಪೆಯನ್ನು ಕಪ್ಪೆ ಕೀಟವನ್ನು ,ಕೀಟ ಹೂವು ಹೀಚುಗಳನ್ನು ತಿನ್ನುವುದು ಕೊರತೆ ಅಲ್ಲ..ಅದೇ ಕ್ರಮ ಬದ್ದತೆ ‌. its not by default.. It is by design.. .. ಮಣ್ಣನ್ನು ಆರೋಗ್ಯವಾಗಿಡುವ,ಪರಿಸರವನ್ನು ಸಹಜವಾಗಿರಿಸುವ , ಕಸದ ಉತ್ಪತ್ತಿ ಕಡಿಮೆಯಾಗಿಸುವ ಕುರಿತು ನಮ್ಮ ಕೊಡುಗೆ ಏನು.? ಬಹುಶಃ ಇಂದಲ್ಲದಿದ್ದರೆ ಇನ್ನೆಂದೂ‌ ನಮಗೆ ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗುವ ಅವಕಾಶ ಸಿಗದೇ ಹೋಗಬಹುದು… ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ.? _ ನಂದಿನಿ ಹೆದ್ದುರ್ಗ.

ನಾಲ್ಕು ನಿಮಿಷ ಕುಳಿತು ಯೋಚಿಸಬಹುದೇ. Read Post »

ಇತರೆ, ಪರಿಸರ

ಪ್ರಕೃತಿ ರಕ್ಷತಿ ರಕ್ಷಿತಾಃ

ಪ್ರಕೃತಿ ರಕ್ಷತಿ ರಕ್ಷಿತಾಃ ಜ್ಯೋತಿ ನಾಯ್ಕ ಜೂನ್ ಐದು ಅಂದಾಕ್ಷಣ ವಿಶ್ವ ಪರಿಸರ ದಿನಾಚರಣೆ ಸ್ಮರಿಸೋದು ಸಾಮಾನ್ಯ ಏಕೆಂದರೆ ಪರಿಸರವು ಹಲವು ಜೈವಿಕ & ಭೌತಿಕ ಘಟಕಗಳ ಆಗರ, ಇವುಗಳ ನಡುವೆಯೇ ಬೇಕು-ಬೇಡಗಳ ಸಂಘರ್ಷ. ೧೯೭೨-೧೯೭೩ರಿಂದ ವಿಶ್ವ ಸಂಸ್ಥೆಯ ನೇತೃತ್ವದಲ್ಲಿ ಪರಿಸರದ ಜಾಗೃತಿಗೊಳಿಸುತ್ತಲೇ ಬಂದಿದ್ದೇವೆ ಆದರೂ ಮತ್ತೆ ಮತ್ತೇ ನಮ್ಮ ಪರಿಸರದ ಬಗ್ಗೆ ತಿಳಿಯುವ ಹಾಗೂ ಅದರ ಮಹತ್ವ ಅರಿಯುವ ಜೊತೆಗೆ ನಮ್ಮಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅವಲೋಕಿಸಿ ಸಂರಕ್ಷಿಸಲು ಪಣತೊಡುವ ಮಹತ್ವದ ದಿನ. ಈ ಪರಿಸರ ಅನ್ನೋ ಮೌನ ದೃಶ್ಯ ದೇವತೆ ಆರಾಧನೆ ಪ್ರಾಚೀನ ಕಾಲದಿಂದಲೂ ಸಾಗಿ ಬಂದಿದೆಯಾದರು ಇಂದಿನ ಪ್ರಕೃತಿ ಆರಾಧಕರೆ ಭಿನ್ನ. ಮಾತನಾಡುವಂತಹ ವಿವೇಚನೆ ಮನುಷ್ಯನಂತೆ ಪ್ರಕೃತಿಗೂ ಇದ್ದಿದ್ದರೆ ಬಹುಶಃ ಸೇಟೆದು ನಿಂತು ಪ್ರತಿರೋಧವೊಡ್ಡಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿತ್ತೇನೋ.! ದುಡಿಮೆಯ ಅರ್ಧದಷ್ಟು ಆರೋಗ್ಯಕ್ಕೆ, ಆಸ್ಪತ್ರೆಗೆ ಹಾಕುವ ನಮಗೆ ಪ್ಲಾಸ್ಟಿಕ್ನ ಹಸಿರು ವರ್ಣದ ನೀರು ಸೇವಿಸದ, ಆಮ್ಲಜನಕ ಬಿಡುಗಡೆ ಮಾಡದ, ಇತರೆ ಗೊಬ್ಬರ ಬಯಸದೆ ಕಣ್ಣಿಗೆ, ಮನಸ್ಸಿಗೆ ಮುದ ನೀಡುವ ಕಾರ್ಖಾನೆಗಳ ಮೂಲಕ ಹೆರಿಗೆಯಾದ ಸಾವಿಲ್ಲದ ವಸ್ತುಗಳ ಮೇಲೆಯೇ ಹೆಚ್ಜಿನ ಮೋಹವೆಂದರೆ ಅತಿಶಯೋಕ್ತಿಯೇನಲ್ಲ. ನಗರವಾಸಿಗಳ & ಹಳ್ಳಿಗರ ನಿತ್ಯ ಬದುಕು ಪ್ರಕೃತಿಯ ಮಧ್ಯೆಯೇ. ಮಾನವನು ಪ್ರಕೃತಿಯ ಶಿಶುವಾಗಿದ್ದು ಪ್ರಕೃತಿಯ ಉಳಿವಿಲ್ಲದೆ ಮನುಷ್ಯ & ಪ್ರಾಣಿ ಸಂಕುಲದ ಆಸ್ತಿತ್ವಕ್ಕೆ ಧಕ್ಕೆಯಾಗುವುದರಲ್ಲಿ ನಿಸ್ಸಂದೇಹ. ಪ್ರಸ್ತುತ ಆಧುನೀಕರಣದ ಭರಾಟೆಯಲ್ಲಿ ಕೈಗಾರಿಕರಣ, ನಗರೀಕರಣ, ವಿಜ್ಞಾನ & ತಂತ್ರಜ್ಞಾದ ಅಭಿವೃದ್ಧಿ ನೆಪದಲ್ಲಿ ಪ್ರಕೃತಿಯ ಸಂರಕ್ಷಣೆಯನ್ನು ಮರೆತು ಆಧುನಿಕ ಜಗತ್ತು ಜಾಗತಿಕ ತಾಪಮಾನ, ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ, ಮಣ್ಣಿನ ಮಾಲಿನ್ಯ, ಕಾಡಿನ ನಾಶಕ್ಕೆ ಕಾರಣರಾಗುತ್ತಲೇ ಬಂದಿದ್ದು, ಹೃದ್ರೋಗ, ಉಸಿರಾಟ, ಕ್ಷಯ, ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳು ಜನ್ಮ ತಾಳಿ ಮಾನವ ಸಂತತಿಗೆ ಕಾಡುತ್ತಲೇ ಬಂದಿವೆ ಎಂಬುವುದನ್ನು ಮರೆಯಬಾರದು. ಬಹು ಮಹಡಿಯ ಕಟ್ಟಡಗಳು ತಲೆ ಎತ್ತುತ್ತಲೇ ಇವೆ, ಆದರೆ ಪ್ರಕೃತಿಯ ಸೊಬಗು ಮಾತ್ರ ಕಾಸು ಖರ್ಚು ಮಾಡಿ ಸವಿಯುವ ದುಃಸ್ಥಿತಿಗೆ ತಲುಪಿದ್ದೇವೆ. ಇವಕ್ಕೆಲ್ಲ ಕಾರಣ ನಮ್ಮೊಳಗೆ ಅಂತರ್ಗತವಾಗಿ ಅಡಗಿ ಕುಳಿತ ಬಯಕೆಯೆಂಬ ಧೂರ್ತ, ಪ್ರಕೃತಿವೆಂಬ ಸಂಜೀವಿನಿಯು ಮಾನವನ ಹಸಿವಿಗೆ ಕಸುವು ನೀಡಿದರೆ ಪ್ರಕೃತಿಯ ಹಸಿವಿಗೆ ಕಸುವು ಮನುಷ್ಯನೇ ಆಗಬೇಕಾದ ದುಃಸ್ಥಿತಿ ಬರಬಹುದು, ಆದ್ದರಿಂದ ಪ್ರಕೃತಿ ರಕ್ಷತಿ ರಕ್ಷಿತಾಃ ಅನ್ನೋ ಮಾತು ಮರೆಯದೆ ಪ್ರಕೃತಿಯ ಸೊಬಗನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರಕೃತಿ ಸೌಂದರ್ಯದ ಸೊಬಗನ್ನು ಸವಿಯುವ ಧಾವಂತದಲ್ಲಿ ಎಲ್ಲಿ, ಯಾವ ರೀತಿ ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತಿದ್ದೇವೆಂದು ಅರಿಯದೆ ಸಾಗುತ್ತಲೇ ಇದ್ದೇವೆ. ಸೇವಿಸಲು ಶುದ್ಧ ಗಾಳಿ,ನೀರಿಲ್ಲದೆ ಬಾಟಲ್ ನೀರು ಸೇವಿಸುವ ನಾವು ಮುಂದೊಂದು ದಿನ ಆಮ್ಲಜನಕದ ಟ್ಯಾಂಕ್ ಟೊಂಕಕ್ಕೆ ಕಟ್ಟಿಕೊಂಡು ಜೀವ ಉಳಿಸಿಕೊಳ್ಳುವ ಸಲುವಾಗಿಯೇ ದುಡಿದು  ಹೆಣವಾಗಬೇಕಾದ ಸಮಯ ಬಂದೊದಗಬಹುದು. ಈಗಾಗಲೇ ಪ್ರಾಣಿ ಸಂಗ್ರಹಾಲಯ, ಗಾರ್ಡನ್ಗಳೆಂದು ನಿರ್ಮಿಸಿಕೊಂಡು ಹಣ ಪೀಕಿ ಕೊಳ್ಳುವ ವ್ಯವಸ್ಥೆ ಆರಂಭವಾಗಿದ್ದು ಅದೆಲ್ಲ ಕ್ಷಣ ಮಾತ್ರದ ಆನಂದ. ಬದುಕು, ಬದುಕಲು ಬಿಡು ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಳ್ಳುತ  ಇತರೆ ಪ್ರಾಣಿಗಳನ್ನು, ಪಕ್ಷಿಗಳನ್ನು ಸ್ವಾತಂತ್ರವಾಗಿ, ಸ್ವಚೆಂದವಾಗಿ ಬಿಡಬೇಕು ಆಗ ನಿಜವಾದ ಪ್ರಕೃತಿ ಸೌಂದರ್ಯ ಶಾಶ್ವತವಾಗಿ ನೆಲೆಯೂರುವಂತಹ ವ್ಯವಸ್ಥೆ ಆಗಬಹುದು. ಕಲ್ಪನೆಗೂ ನಿಲುಕದ ನಿಸರ್ಗದ ತಾಣಗಳನ್ನು ಅಳಿವಿನಂಚಿನಲ್ಲಿ ದೂಡಿರುವ ಕಾರಣ ನಾಳೆ ನಮ್ಮಗಳ ಅಳಿವಿನ ದಿನಗಳು ಹತ್ತಿರ ಬಂದಿವೆ ಎಂಬುವುದನ್ನು  ಈಗಾಗಲೇ ಕೊರೊನಾ ಮಾರಿಯು ಸೂಚನೆ ಕೊಟ್ಟು ಎಚ್ಚರಿಸಿದೆ. ನಮ್ಮ ಹೆಣಗಳು ನಮ್ಮವರೇ ಮುಟ್ಟದಂತಹ ದುಃಸ್ಥಿತಿಗೆ ಬಂದಿದ್ದೇವೆಂದರೆ ಮೌನ ಪ್ರಕೃತಿಯು ಹೆಣಗಳನ್ನು ಹುಳಲು ತೆರಿಗೆ ಕೇಳುತ್ತಿರುವಂತೆ ಭಾಷವಾಗುತ್ತಿದೆ ಹಾಗೂ ಧರೆಯು ತನ್ನ ಒಡಲೊಳಗೆ ಸ್ವೀಕರಿಸಿ ತೃಪ್ತಿ ಪಡಲು ಸಹ ಸಂಕೋಚ ಪಡುತ್ತಿದೆ ಅನ್ನಿಸುತ್ತೆ.! ಸೋಜಿಗವಲ್ಲವೇ..!? ಮರಗಿಡಗಳಲ್ಲಿ ಇದ್ದಿದ್ದರೆ ನೆತ್ತರ ಕೆಂಪು ಧರೆಯೆಲ್ಲ ಆಗಿರುತ್ತಿತ್ತು ಇಷ್ಟೊತ್ತಿಗೆ ಕೆಂಪು!. ಇಷ್ಟೊಂದು ಪ್ರಕೃತಿದತ್ತ ನೈಸರ್ಗಿಕ ಸಂಪನ್ಮೂಲಗಳ ನಾಶಕ್ಕೆ ಮಾನವ ಸಂಕುಲದ ಸ್ವಾರ್ಥವೇ ಪ್ರಧಾನವೆಂದರೆ ತಪ್ಪಾಗದು. ಭಾರತೀಯ ನೆಲದಲ್ಲಿ ವನಸಿರಿಯ ಸೊಬಗು ವರ್ಣಿಸಲಸದಳ ಏಕೆಂದರೆ ಇಲ್ಲಿನ ಪ್ರತಿ ಸಸ್ಯವು ಸಂಜೀವಿನಿಗಳಂತೆ..! ವೈದ್ಯ ಲೋಕ ಕಣ್ಬಿಡುವ ಮುನ್ನವೇ ನಮ್ಮ ಪೂರ್ವಜರು ಬಳಕೆ ಮಾಡಿ ಆರೋಗ್ಯ ಕಾಪಾಡಿಕೊಂಡು ಈ ಪ್ರಕೃತಿ ವಿಸ್ಮಯದ ಮಹತ್ವವನ್ನು ನಮ್ಮ ಪೀಳಿಗೆಗೆ ವರ್ಗಾಯಿಸಿದ್ದು ಇಡೀ ವಿಶ್ವವೇ ನಮ್ಮೆಡೆ ಗಮನ ಕೇಂದ್ರೀಕರಿಸಿ ನೋಡುವಂತೆ ಮಾಡಿದೆ. ಹೀಗೆ ನಮ್ಮಉಪಯೋಗಕ್ಕೆ ಕಾಡುಗಳನ್ನು ಸಂಪೂರ್ಣ ನಾಶಗೊಳಿಸುತ್ತ ಸಾಗಬೇಕೆ!? ಅಥವಾ ಉಳಿಸುವೆಡೆಗೆ ಗಮನ ಹರಿಸಬೇಕೆ!? ಎಂಬುದನ್ನು ಅರಿತು ಏರುತ್ತಿರುವ ಜಾಗತಿಕ ತಾಪಮಾನ & ಜನ ಸಂಖ್ಯೆಯ ನಿಯಂತ್ರಣ ಮಾಡುತ್ತ ಇಂದಿನ ಶಾಲಾ,ಕಾಲೇಜಿನ ಮಕ್ಕಳಿಗೆ ವಿಜ್ಞಾನ,ತಂತ್ರಜ್ಞಾನದ ಜೊತೆಗೆ ಪರಿಸರ ಮಹತ್ವವನ್ನು ತಿಳಿಸಿಕೊಡುವ ಅತ್ಯಗತ್ಯವಿದೆ. ಭಾರತ ಸರ್ಕಾರ ಜೂನ್ ಮಾಸ ಸಂಪೂರ್ಣ ವನಮಹೋತ್ಸವ ಆಚರಣೆ ಮಾಡುವ ಕೆಲಸ ಮಾಡುತ್ತಿದ್ದು ಅದರಲ್ಲಿ ಪೂರ್ಣ ಪ್ರಮಾಣದ ತೊಡಗಿಸಿಕೊಳ್ಳುವಿಕೆ ಆಗಬೇಕಿದೆ. ಶುದ್ಧಗಾಳಿ & ನೀರು, ಉತ್ತಮ ಆಹಾರ, ಅಂತರ್ಜಲ ಏರಿಕೆ ಹಾಗೂ ತಾಪಮಾನದ ಇಳಿಕೆಗೆ ಸರ್ಕಾರ & ಕೈ ಜೋಡಿಸುತ್ತಿರುವ ಸಂಸ್ಥೆಗಳಿಗೆ ನಾವು ಸಹಕರಿಸುತ್ತ ಪ್ರತಿ ಕುಟುಂಬದಲ್ಲಿ ಎಷ್ಟು ಜನರಿದ್ದೆವೋ ಅಷ್ಟು ಮರಗಳನ್ನು ನೆಡುವ ಪ್ರಯತ್ನ ಮಾಡುವ ಅವಶ್ಯವಿದೆ. ಹಾಗೂ ಕೃಷಿಯಲ್ಲಿ ತೊಡಸಿಗಿಸಿಕೊಂಡಿರುವ ರೈತವರ್ಗಕ್ಕೆ ಬೆಲೆಬಾಳುವ ಮರಗಳನ್ನು ಬೆಳೆಸಲು ಸಂಸ್ಥೆಗಳು ಸಾಲ ಕೊಡಲು ಸಹ ಮುಂದಾಗಿದ್ದು ಸರ್ಕಾರವು ಮುಂದಾಗಿದೆ. ಜೊತೆಗೆ ಕೆರೆಗಳ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು. ಕಾಡಂಚಿನ ಗ್ರಾಮಗಳ ಜನತೆಗೆ ವನ್ಯ ಜೀವಿಗಳಿಂದ ತೊಂದರೆ ಆಗದಂತೆ ನೋಡಿಕೊಳ್ಳುವುದು. ಹಾಗೂ ವನ್ಯ ಜೀವಿಗಳ ಜೀವಕ್ಕೆ ಅಪಾಯವಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಾ ಅರಣ್ಯ ಕೃಷಿ ಯೋಜನೆ, ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಇಳಿಜಾರಿಗೆ ಇಂಗು ಗುಂಡಿಗಳ ನಿರ್ಮಾಣ ಮಾಡುತ್ತ ಕೃಷಿಕರಿಗೂ ಸರ್ಕಾರ ಸಹಕಾರ ನೀಡುತ್ತಾ ಪ್ರಕೃತಿಯ ಉಳಿವಿಗೆ ಎಲ್ಲಾರು ಶ್ರಮಿಸುವ ಅಗತ್ಯವಿದೆ ಎಂಬ ಇಂಗಿತ ನನ್ನದು. ಧನ್ಯವಾದ. ***********

ಪ್ರಕೃತಿ ರಕ್ಷತಿ ರಕ್ಷಿತಾಃ Read Post »

ಇತರೆ

ಒಲವಿನೋಲೆ

ಓದೋಕೊಂದು ಒಲವಿನೋಲೆ ಜಯಶ್ರೀ ಜೆ.ಅಬ್ಬಿಗೇರಿ ಜೀವದ ಗೆಳತಿ, ನೆತ್ತಿ ಸುಡುವ ಸೂರ‍್ಯನ ಅರ್ಭಟ ತಗ್ಗಿಸಲೆಂದೇ ಮಟ ಮಟ ಮಧ್ಯಾಹ್ನ ಸುರಿದ ಮಳೆ ಗಕ್ಕನೇ ನಿಂತಾಗ, ಆಗಸದಲ್ಲಿ ಕಾಮನಬಿಲ್ಲು ಮೈ ಅರಳಿಸಿಕೊಂಡು ತುಟಿ ಬಿರಿದು ನಿಂತಿತು. ಅದೇ ಕ್ಷಣ ಕಾಗದವನ್ನೇ ದೋಣಿಯಾಗಿಸಿ ನಾನು ನೀನು ಕೈ ಕೈ ಹಿಡಿದು ತೇಲಿ ಬಿಟ್ಟ ಘಳಿಗೆ ಅದೆಷ್ಟು ಮಧುರ ಅನುಭವ! ಅಲ್ಲವೇ ಗೆಳತಿ? ಅದನ್ನು ಮರೆಯಲಾದೀತೆ? ಹಾಲ್ಗಡಲು ಕಡೆಯುವಾಗ ಜನಿಸಿದ ಅಪ್ಸರೆಯಂತೆ ನಿನ್ನ ನೋಟ ಕಂಗೊಳಿಸುತ್ತಿರುವಾಗ ಗಗನದ ಮಳೆ ಬಿಲ್ಲು ನಸು ನಾಚಿ ಮರೆಯಾಯಿತು. ತಕ್ಷಣವೇ ಬಲು ಮೋಹಗೊಂಡು ನಿನ್ನ ಸುಕೋಮಲ ಬೆರಳಿಗೆ ಬೆರಳು ಬೆಸೆದೆ. ನಿನ್ನನ್ನು ಗೆಳತಿಯಾಗಿ ಪಡೆದು ಪರಿಪೂರ‍್ಣನಾದೆ ಎಂಬ ಭಾವದಲ್ಲಿ ಮಿಂದು ನನ್ನ ಹೃದಯ ಕುಣಿಯಿತು. ನಾನೇ ಭಾಗ್ಯವಂತ ನಾನೇ ಪುಣ್ಯವಂತ ನನಗರಿವಿಲ್ಲದೇ ಉಸಿರಿದೆ ..ಅದಕ್ಕೆ ನೀನು ಊಹ್ಞೂಂ ಇಲ್ಲ ನಾನೇ ಭಾಗ್ಯವತಿ ಎಂದದ್ದು ಇಂದಿಗೂ ಕಿವಿಯಲ್ಲಿ ಅನುರುಣಿಸುತ್ತಿದೆ. ಅರೆಗಳಿಗೆಯೂ ನಿನ್ನಿಂದ ದೂರಾಗಿ ಇರಲಾರೆ.ಎಂದೆನಿಸಿತು. ಆ ಕ್ಷಣವೇ ನಿನ್ನಲ್ಲಿ ಬೆರೆತು ನನ್ನನ್ನೇ ಮರೆತು ಬಿಡಬೇಕೆಂದು ಹೃದಯ ವೀಣೆಯ ತಂತಿ ಹಠ ಹಿಡಿಯಿತು. ಯಾರಿಗೂ ಕಾಣದಂತೆ ಹೃದಯದಲ್ಲಿ ಮರೆ ಮಾಡಿ ನಿನ್ನನ್ನು ಮುಚ್ಚಿಟ್ಟುಕೊಂಡು ಬಂದು ನನ್ನ ಕೋಣೆ ಸೇರಿದೆ. ನಾನೆಂದೂ ಕಾಣದ ಅನುಭವ ಮನದಲ್ಲಿ ಅಂದು ರಾತ್ರಿಯೆಲ್ಲ ಕಣ್ಣಿಗೆ ಕಣ್ಣು ಅಂಟಿಸಲು ಸಾಧ್ಯವಾಗಲೇ ಇಲ್ಲ. ನಿನ್ನನ್ನು ಕಾಣುವ ಮುನ್ನ ಈ ಕಣ್ಣುಗಳು ಅದೆಷ್ಟು ಸುಂದರಿಯರನ್ನು ಕಂಡಿವೆ ಲೆಕ್ಕವಿಲ್ಲ. ಆದರೆ ಆ ಯಾರೊಬ್ಬರಲ್ಲೂ ನಿನ್ನಂತೆ ಆಕರ್ಷಣೆಯ ಸೆಳೆತ ಇರಲಿಲ್ಲವೆಂತಲ್ಲ. ಮನಸ್ಸು ಯಾಕೋ ಅತ್ತ ವಾಲಲೇ ಇಲ್ಲ. ತೆರೆದ ಬಾಹುಗಳ ಚಾಚಿ ಬಿಗಿದಪ್ಪುವಂತ ಕನಸು ಕಾಣಲೇ ಇಲ್ಲ. ಅದಾವ ಗಳಿಗೆಯಲ್ಲಿ ಸಂಚಾರಿ ಮನಸ್ಸು ನಿನ್ನ ಕಂಡು ಬೆಸೆದುಕೊಂಡಿತೋ ತಿಳಿಯಲಿಲ್ಲ. ನಿನ್ನ ಹೆಜ್ಜೆಯೊಂದಿಗೆ ಹೆಜ್ಜೆ ಬೆಸೆಯುವ ಕೆಲಸಕ್ಕೆ ಮನಸ್ಸು ದಿನವೂ ಜಾತಕ ಪಕ್ಷಿಯಂತೆ ಕಾಯುತ್ತಿತ್ತು. ನನ್ನ ಪ್ರತಿ ನೋವನ್ನು ನಿನ್ನದೆಂದೇ ತಿಳಿದು, ಮುಂದೆ ಮುಂದೆ ನಡೆ ನಾನೂ ನಿನ್ನೊಂದಿಗಿದ್ದೇನೆ ಎಂದು ಎದೆಗೆ ಧೈರ‍್ಯ ತುಂಬಿ,ಕಣ್ಣ ಕಂಬನಿ ಒರೆಸಿದ ಪರಿಯಲ್ಲಿ ಒಡಲ ಬಳ್ಳಿಯನ್ನು ಸಂತೈಸುವ ತಾಯಿ ಹೃದಯವನ್ನು ನಿನ್ನಲ್ಲಿ ಕಂಡು ಅಚ್ಚರಿಗೊಂಡೆ. . ನಮ್ಮ ಸ್ನೇಹವೆಂದೆಂದೂ ಇರಲಿ ಹೀಗೆ ಶಾಶ್ವತ ಎಂದು ನೀ ತುಟಿಯಂಚಿನಲ್ಲಿ ನಗುತ್ತ ಹೇಳಿದಾಗ ಇದ್ದ ಕೊಂಚ ಸಂಕೋಚವೂ ದೂರ ಓಡಿತು. ತುಂಟತನದ ಆಟಗಳಲ್ಲಿ ಮೈ ಮರೆತು ಪಟ್ಟ ಖುಷಿಗೆ ಲೆಕ್ಕವಿಲ್ಲ. ಪ್ರೀತಿಯೇ ಬದುಕು ಅದಿಲ್ಲದೇ ಬದುಕಿಲ್ಲ ಎಂದು ತೋರಿದವಳು ನೀನಲ್ಲವೇ? ನಿನ್ನೊಂದಿಗಿರುವ ಬದುಕು ಅದೆಷ್ಟು ಚೆಂದವಲ್ಲವೇ? ಗೆಳತಿ ನಿನ್ನಂತೆ ಇನ್ನಾರು ಕಾಡಿಲ್ಲ ನನ್ನ ನಿದ್ದೆಗೆಡಿಸಿಲ್ಲ ನನ್ನ. ಬಂದು ಬಿಡು ನನ್ನ ಬಳಿಗೆ ಈಗ. ಕೈಯಲ್ಲಿ ಕಾಗದದ ದೋಣಿ ಹಿಡಿದು ನಿಂತಿರುವೆ. ಮಳೆ ಬಿಲ್ಲೂ ನಿನ್ನ ಬರುವಿಗಾಗಿಯೇ ಕಾಯುತ್ತಿದೆ. *************

ಒಲವಿನೋಲೆ Read Post »

ಇತರೆ, ಪರಿಸರ

ಇಕೊ ಕ್ಲಬ್ ಗಳ ಅನುಷ್ಠಾನ

ಪರಿಸರದ ಮಹತ್ವ ಮತ್ತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಇಕೋ ಕ್ಲಬ್ ಗಳ ಅನುಷ್ಠಾನ ಪರಿಸರದ ಮಹತ್ವ ಮತ್ತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಗಳಲ್ಲಿ ಇಕೋ ಕ್ಲಬ್ ಗಳ ಅನುಷ್ಠಾನ ಹಸಿರೇ ಉಸಿರು- ಪ್ರಕೃತಿಯ ವಿಸ್ಮಯಗಳನ್ನು ಒಳಗೊಂಡಿರುವ ನಮ್ಮ ಸುತ್ತಲಿನ ಪರಿಸರವನ್ನು ನಾವು ಕಾಪಾಡಿಕೊಳ್ಳಬೇಕಾಗಿರುವುದು ಇಂದು ಅನಿವಾರ್ಯವಾಗಿದೆ. ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮ(NGC)ವು ಪರಿಸರ ಮತ್ತು ಅರಣ್ಯ ಮಂತ್ರಾಲಯ(MOEF) ಭಾರತ ಸರ್ಕಾರ (GOL)ದ ರಾಷ್ಟ್ರೀಯ ಶಾಲಾ ಕಾರ್ಯಕ್ರಮವಾಗಿದೆ. ಇದರಡಿಯಲ್ಲಿ ದೇಶದಾದ್ಯಂತ ಪ್ರತಿ ಜಿಲ್ಲೆಯ ಸುಮಾರು 250 ಶಾಲೆಗಳಲ್ಲಿ ಇಕೋಕ್ಲಬ್ ಗಳನ್ನು ಸ್ಥಾಪಿಸುವ ಮೂಲಕ ರಾಷ್ಟ್ರೀಯ ಹಸಿರು ಸೈನ್ಯವನ್ನು ರೂಪಿಸಲು ಹಾಕಿಕೊಂಡ ಯೋಜನೆಯಾಗಿದೆ. ಮಕ್ಕಳ ಮನಸ್ಸುಗಳನ್ನು ಆಕರ್ಷಿಸಿ “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬ ಗಾದೆ ಮಾತಿನಂತೆ ಪರಿಸರ ಜಾಗೃತಿಯನ್ನು ಅಚ್ಚು ಮಾಡುವುದಕ್ಕೆ ಸುಲಭವಾಗಿತ್ತದೆ. “ಯುವಕರನ್ನು ಹಿಡಿಯಿರಿ” ಎಂಬ ಮಂತ್ರವು ರಾಷ್ಟ್ರೀಯ ಹಸಿರು ಪಡೆಯ ಪ್ರಮುಖ ಅಂಶವಾಗಿದೆ. ಪ್ರಮುಖ ಉದ್ದೇಶ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಪರಿಸರ ರಕ್ಷಣೆ ಹಾಗೂ ಸುಧಾರಣೆಗಾಗಿ ಕ್ರಮಬದ್ಧ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಆರಂಭ – 2001 ರಲ್ಲಿ ಆರಂಭವಾದಾಗಿನಿಂದಲೂ ಹಲವು ನೋಡಲ್ ಏಜೆನ್ಸಿಗಳು ರಾಜ್ಯದಲ್ಲಿನ ಕಾರ್ಯಕ್ರಮದ ಅನುಷ್ಠಾನವನ್ನು ತೆಗೆದುಕೊಂಡಿವೆ.1 ಜನವರಿ 2009 ರಿಂದ ಕರ್ನಾಟಕದಲ್ಲಿ ಎಂಪ್ರಿ ಸಂಸ್ಥೆಯು ರಾಷ್ಟ್ರೀಯ ಹಸಿರುಪಡೆಯ ನೋಡೆಲ್ ಏಜೆನ್ಸಿ(NA)ಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿವರ್ಷ ಇಕೋಕ್ಲಬ್ ನ ವಿವಿಧ ಚಟುವಟಿಕೆಗಳನ್ನು ಮೂರು ಹಂತಗಳಲ್ಲಿ ಕೈಗೊಳ್ಳಲಾಗುವುದುಮೊದಲ ಹಂತ- ಜಾಗೃತಿ ಆಧಾರಿತ ಚಟುವಟಿಕೆಗಳುಉದಾ – ರಾಲಿ/ಜಾಥಾ, ತಜ್ಞರ ಜೊತೆ ಮಾತುಕತೆಗಳು, ಶೈಕ್ಷಣಿಕ ಚಲನಚಿತ್ರ ಪ್ರದರ್ಶನಗಳು /ವಿಚಾರಗೋಷ್ಠಿಗಳು ) ಎರಡನೆಯ ಹಂತ – ಕ್ರಿಯಾಶೀಲತೆ ಮತ್ತು ವೀಕ್ಷಣೆಉದಾ – ಸಮೀಕ್ಷೆ ಪ್ರವಾಸ, ದತ್ತಾಂಶ ಸಂಗ್ರಹ, ದಾಖಲೆಗಳ ರಕ್ಷಣೆ ಮೂರನೆಯ ಹಂತ- ಹೆಚ್ಚಿನ ಕ್ರಿಯಾಶೀಲತೆ.ಉದಾ – ತೋಟಗಳು, ವರ್ಮಿಕಾಂಪೋಸ್ಟಿಂಗ್, ನೀರು /ಶಕ್ತಿ ಸಂರಕ್ಷಣೆ ಮತ್ತು ನೈರ್ಮಲ್ಯ. ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಆರ್ಥಿಕ ಸಹಾಯವಾಗಿ ವಾರ್ಷಿಕ 5000 ರೂಗಳನ್ನು ಪ್ರತಿ ಇಕೋಕ್ಲಬ್ ಶಾಲೆಗೆ ನೀಡಲಾಗುತ್ತದೆ. ನಿಯಮಿತ ಹಾಗೂ ಶಾಲಾ ಭೇಟಿಗಳನ್ನು ನಡೆಸುವ ಮೂಲಕ ಕಾರ್ಯಕ್ರಮವನ್ನು ಬಲಪಡಿಸಲು ನಿರಂತರ ಬೆಂಬಲ ಮತ್ತು ನೆರವನ್ನು ಒದಗಿಸುವಲ್ಲಿ ರಾಷ್ಟ್ರೀಯ ಹಸಿರುಪಡೆ ತಂಡವು ತೊಡಗಿಕೊಂಡಿದೆ. ಇಕೋಕ್ಲಬ್ ನ ಉಸ್ತುವಾರಿ ಶಿಕ್ಷಕರಿಗೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಕ್ತ ತರಬೇತಿ/ಕಾರ್ಯಾಗಾರವನ್ನು ಮಾಡಲಾಗಿದೆ. ಅನುಷ್ಠಾನದ ಪರಿಣಾಮಗಳು ಧನಾತ್ಮಕ ಬದಲಾವಣೆಗೆ ಈ ಕಾರ್ಯಕ್ರಮವು ಪರಿಣಾಮಕಾರಿಯಾಗಿದ್ದು ವಿದ್ಯಾರ್ಥಿ/ನಿಯ ವೈಯಕ್ತಿಕ ಮಟ್ಟ, ಶಾಲಾ ಮಟ್ಟ ಹಾಗೂ ನೆರೆಹೊರೆ ಮಟ್ಟದಲ್ಲಿ ಧನಾತ್ಮಕ ಬದಲಾವಣೆಯನ್ನು ಕಾಣಬಹುದಾಗಿದೆ. ಪರಿಸರಾತ್ಮಕವಾಗಿ ಸುಸ್ಥಿರತೆ – ಸಾಮಾಜಿಕವಾಗಿ ವೈಯಕ್ತಿಕವಾದ ಜೀವನ ಶೈಲಿಯಲ್ಲಿ ಬದಲಾವಣೆ, ವಿದ್ಯಾರ್ಥಿಗಳ ನಡವಳಿಕೆ /ವರ್ತನೆ / ನಡತೆಯಲ್ಲಿ ಸಕಾರಾತ್ಮಕ ಬದಲಾವಣೆಯಾಗುತ್ತದೆ. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಸ್ಥಳೀಯ ಸಮಸ್ಯೆಗಳನ್ನು /ವಿಷಯಗಳನ್ನು ಗುರುತಿಸುವ ಅಗತ್ಯತೆಯನ್ನು ತಿಳಿಸುವುದರ ಜೊತೆಗೆ ಸಮಸ್ಯೆಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ. ಮಕ್ಕಳಿಂದ ಹೆಚ್ಚು ಕ್ರಿಯಾಧಾರಿತ ಚಟುವಟಿಕೆಗಳನ್ನು ಮಾಡಿಸುವುದರಿಂದ ಮಕ್ಕಳು ಕೂಡ ಕ್ರಿಯಾಶೀಲರಾಗುತ್ತಾರೆ. ವಿಶ್ವ ಪರಿಸರ ದಿನದ ಆಚರಣೆಯ ಬಗ್ಗೆ ಅರಿವು ಮೂಡುತ್ತದೆ. ವಿದ್ಯಾರ್ಥಿಗಳಲ್ಲಿ ಪರಿಸರದ ಮಹತ್ವ, ಅರೋಗ್ಯ ಸ್ವಚ್ಛತೆ, ಪರಿಸರ ಸ್ವಚ್ಛತೆ ಮತ್ತು ಆರೋಗ್ಯಕರ ಅಭ್ಯಾಸಗಳಿಗೆ ಸಂಬಂಧಿಸಿದ ಹಲವು ವಿಚಾರಗಳನ್ನು ತಿಳಿಸುವುದರಿಂದ ವಿದ್ಯಾರ್ಥಿಗಳಲ್ಲಿ ಕಾಳಜಿ ಮೂಡುತ್ತದೆ. ಅವರು ಕೂಡ ಶ್ರಮದಾನದಲ್ಲಿ ತೊಡಗಿ ತಮ್ಮ ಶಾಲೆಗಳನ್ನು ಶುದ್ಧವಾಗಿಟ್ಟುಕೊಳ್ಳುವರು. ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿ ಪರಿಸರದ ಕುರಿತು ಮಕ್ಕಳಲ್ಲಿ ಆಸಕ್ತಿ ಮತ್ತು ಕಾಳಜಿ ಮೂಡಿಸುವುದರಿಂದ ಎಳೆಯ ವಯಸ್ಸಿನಲ್ಲೇ ಮಕ್ಕಳು ಇದರ ಉದ್ದೇಶವನ್ನರಿತು ಪರಿಸರದೊಂದಿಗೆ ಅವಿನಾಭಾವ ಸಂಬಂಧವೊಂದನ್ನು ಬೆಳೆಸಿಕೊಳ್ಳುತ್ತಾರೆ. ಶಾಲಾ ಪರಿಸರ ಹಾಗೂ ಊರಿನ ಪರಿಸರ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದರ ಜೊತೆಗೆ ಇರುವ ಸಸ್ಯಗಳನ್ನು ಸಂರಕ್ಷಿಸಿ ಇನ್ನೂ ಹೆಚ್ಚಿನ ಸಸಿಗಳನ್ನು ಬೆಳೆಸುವ ಕಡೆಗೆ ಗಮನ ಹರಿಸುತ್ತಾರೆ. ಯೋಗದಿಂದ ಆರೋಗ್ಯ ವೃದ್ಧಿ – ವಿದ್ಯಾರ್ಥಿಗಳಲ್ಲಿ ಯೋಗದ ಮಹತ್ವ ಅರಿತಾಗ ಸದೃಢ ಆರೋಗ್ಯಕ್ಕಾಗಿ ಯೋಗದ ಮಹತ್ವವನ್ನು ಅರಿತು ಅಳವಡಿಸಿಕೊಳ್ಳುತ್ತಾರೆ. ವನಮಹೋತ್ಸವ ಆಚರಣೆಯ ಮೂಲಕ ಸಸಿಗಳನ್ನು ನೆಟ್ಟು ದತ್ತು ಪಡೆದು ಅವುಗಳ ಆರೈಕೆ ಮತ್ತು ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಜಾಥಾ ಕಾರ್ಯಕ್ರಮಗಳ ಮೂಲಕ ಸಮುದಾಯದಲ್ಲಿ ಸ್ವಚ್ಛತೆಯ ಬಗೆಗಿನ ಅರಿವನ್ನು ಮೂಡಿಸಲು ಸಾಧ್ಯವಾಗಿದೆ. ಶೌಚಾಲಯದ ಪಾತ್ರ, ಆರೋಗ್ಯಕರ ಆಹಾರ ಮತ್ತು ನೀರಿನ ಸಂರಕ್ಷಣೆಯ ವಿಧಾನ ಮುಂತಾದವುಗಳ ಘೋಷಣೆಯಿಂದ ಎಲ್ಲರಲ್ಲಿ ಜಾಗೃತಿ ಉಂಟಾಗುತ್ತದೆ. ಕೈ ತೊಳೆಯುವ ಆರು ಕ್ರಮಬದ್ಧ ಹಂತಗಳನ್ನು ಮಾದರಿಯಾಗಿ ನೋಡಿ ಪಾಲಿಸುವುದರಿಂದ ಕೈತೊಳೆಯುವ ಕ್ರಮ ಮತ್ತು ಮಹತ್ವವನ್ನು ಅರಿತಿದ್ದಾರೆ. ಪರಿಸರ ವೀಕ್ಷಣೆಗಾಗಿ ಪ್ರವಾಸ, ನೈಸರ್ಗಿಕ ನೋಟ, ಪ್ರಾಣಿ ಸಂಗ್ರಹಾಲಯ, ಜಲಪಾತ, ಪರ್ವತ ಹಾಗೂ ನದಿ ಕಣಿವೆಗಳ ವೀಕ್ಷಿಸುವುದರಿಂದ ಮಕ್ಕಳಲ್ಲಿ ಪರಿಸರದ ಬಗ್ಗೆ ಆಸಕ್ತಿ, ಕುತೂಹಲ, ವೈವಿಧ್ಯ, ವಿಸ್ಮಯಗಳ ಅರಿವಾಗುತ್ತದೆ.*ವಿವಿಧ ಪರಿಸರಸ್ನೇಹಿ ಸ್ಪರ್ಧೆಗಳ ಆಯೋಜನೆಯ ಮೂಲಕ ಮಕ್ಕಳಲ್ಲಿ ಆರೋಗ್ಯಕರ ಸ್ಪರ್ಧಾ ಮನೋಭಾವ ಬೆಳೆಯುತ್ತದೆ.ಉದಾ – ಕೈಚೀಲ ತಯಾರಿಕೆ, ಭಾಷಣ ಸ್ಪರ್ಧೆ, ಆಶುಭಾಷಣ, ಪರಿಸರಗೀತೆಗಳ ಗಾಯನ, ಪ್ರಬಂಧ, ಚಿತ್ರಕಲಾ ಸ್ಪರ್ಧೆ ಇತ್ಯಾದಿ.. ಬೆಂಕಿ ಅವಘಡದ ಕುರಿತು ಪ್ರಾತ್ಯಕ್ಷಿಕೆ ಮತ್ತು ಜಾಗೃತಿಯನ್ನು ಮೂಡಿಸುವುದರಿಂದ ವಿಪತ್ತುಗಳ ಸಮಯದಲ್ಲಿ ತುರ್ತು ಕ್ರಮಗಳನ್ನು ಅಳವಡಿಸಿಕೊಳ್ಳುವ ಜ್ಞಾನ ವೃದ್ಧಿಯಾಗುತ್ತದೆ. ಪರಿಸರಪ್ರೇಯಿಮಗಳಾದ ಸಾಲುಮರದ ತಿಮ್ಮಕ್ಕ, ಸುಂದರಲಾಲ್ ಬಹುಗುಣರಂತಹ ಮಹಾನ್ ವ್ಯಕ್ತಿಗಳ ಪರಿಚಯ ಮತ್ತು ಅವರ ಕುರಿತು ಪ್ರಬಂಧ, ಭಾಷಣಗಳ ಮೂಲಕ ಅವರ ತತ್ವ ಆದರ್ಶಗಳನ್ನು ಮನದಟ್ಟು ಮಾಡಿಕೊಳ್ಳುತ್ತಾರೆ. ನಮ್ಮ ಸುತ್ತಮುತ್ತಲಿನ ಗಿಡಮೂಲಿಕೆಗಳ ಬಗ್ಗೆ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯ ಮೂಲಕ ಆಯುರ್ವೇದದ ಬಗ್ಗೆ ಹಾಗೂ ನೈಸರ್ಗಿಕವಾಗಿ ಆರೋಗ್ಯವನ್ನು ಪ್ರಕೃತಿಯಲ್ಲಿ ದೊರೆಯುವ ಗಿಡಮೂಲಿಕೆಗಳಿಂದ ಹೇಗೆ ಕಾಪಾಡಿಕೊಳ್ಳುವುದು ಎಂಬ ಅಂಶವನ್ನು ತಿಳಿಯುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ “ಮುಸುಕಿನಿಂದ ಪರಿಸರದೆಡೆಗೆ ಪಯಣ” ಎಂಬಂತೆ ಪರಿಸದ ಮಹತ್ವ ತಿಳಿಸಿ ಮತ್ತು ಜಾಗೃತಿಯನ್ನು ಮೂಡಿಸುವಲ್ಲಿ ಶಾಲೆಗಳಲ್ಲಿ ಇಕೋ ಕ್ಲಬ್ ರಚನೆಯ ಅನುಷ್ಠಾನವು ಒಂದು ಮೈಲಿಗಲ್ಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಪರಿಸರದೊಂದಿಗೆ ಭಾವ ಬೆಸೆದು ಪರಿಸಸ್ನೇಹಿಗಳಾಗಿ ಬದುಕುವ ಪರಿಪಾಠವು ಕೂಡ ಮೈಗೂಡುತ್ತದೆ. ಜೂನ್ 5 ರಂದು ಪ್ರಪಂಚದಾದ್ಯಂತ ವ್ಯಾಪಕವಾಗಿ ಸಾಂಕೇತಿಕವಾಗಿ ಆಚರಿಸುತ್ತಿರುವ ವಿಶ್ವ ಪರಿಸರ ದಿನಾಚರಣೆಗೆ ಮಕ್ಕಳಲ್ಲಿ ಅವರ ಜೀವನಶೈಲಿಯಲ್ಲಿ ನಿರಂತರವಾಗಿ ಪರಿಸರ ಜಾಗೃತಿಯನ್ನು ಅಳವಡಿಸಿಕೊಳ್ಳುವ ಸ್ಫೂರ್ತಿಯನ್ನು ಇಕೋಕ್ಲಬ್ಗಳು ಮಾಡುತ್ತಿವೆ. ಇದು ಇನ್ನಷ್ಟು ಕ್ರಿಯಾಶೀಲವಾಗಿ ಅನುಷ್ಠಾನವಾದರೆ ಮುಂದಿನ ಪೀಳಿಗೆ ಪರಿಸರವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ****** ತೇಜಾವತಿ ಹೆಚ್.ಡಿ.

ಇಕೊ ಕ್ಲಬ್ ಗಳ ಅನುಷ್ಠಾನ Read Post »

ಇತರೆ

ಪ್ರಸ್ತುತ

ದುಬಾರಿಯಾಗಲಿರುವ ದಿನಗಳು ಅರುಣ್ ಕೊಪ್ಪ *ಕೊರೊನಾ ದಿನಗಳು ಇನ್ನೂ ದುಬಾರಿಯಾಗಲಿವೆ* ಹೌದು ಇಲ್ಲಿ ದುಬಾರಿ ಎಂದ ಮಾತ್ರಕ್ಕೆ ಹಣ ಅನ್ನೋ ಶಬ್ಧ ಕಾಲ್ಪನಿಕತೆ ಒಂದೆಡೆ ಆದರೆ  ಸಂಕ್ಷಿಪ್ತದೆಡೆಗೆ ಒಯ್ದು ಆಚೆ ಕಿವಿಯಿಂದ ಕೇಳಿ ಈಚೆ ಕಿವಿಯಲ್ಲಿ ಬಿಡುವ ಆಲಸಿ ಪ್ರಮೇಯಕ್ಕೆ ಎಳೆದು ಬಿಡುತ್ತದೆ ಅಲ್ಲವೇ? ಅದು ಹಾಗಲ್ಲ ಇಲ್ಲಿನ ಸಮತೋಲನ ಪರೋಕ್ಷವಾಗಿ ಬದಲಾವಣೆಯಾಗಿ ಆರ್ಥಿಕತೆ ಮೇಲೆ ಪರಿಣಾಮ ಬೀರುವದಷ್ಟೇ ಅಲ್ಲದೆ ,ಮುಂದಿನ ಕ್ರಮ,ಮುಂದೇನು ಅನ್ನೋ ಪ್ರಶ್ನೆ ಮೂಡುವದು ಸಹಜವಾಗಿಯೇ ವಯಕ್ತಿಕ ಬದುಕಿನತ್ತ ಲಗ್ಗೆ ಇಡುತ್ತವೆ. ನಾವಿಷ್ಟು ದಿನ ಮಾಡಿದ ವ್ರತ ಕೆಡಲೂಬಹುದು. (ಸಾಮಾಜಿಕ ಅಂತರ ಕಾಪಾಡುವ ಹಾಗೂ ಆರೋಗ್ಯ ಕೋವಿಡ್ ಕ್ರಮಗಳು) ಕ್ಷಣಕ್ಕೂ ಮುಟ್ಟಿದ್ದೆಲ್ಲಾ ವಿಷವೆಂಬಂತೆ ಇಂದು ಬರಬರುತ್ತಾ ಕಾಳಜಿ ಕ್ಷೀಣಿಸುತ್ತಿದೆ. ಇದು ಯಾರ ಕಾಳಜಿ ಅಂತೀರಾ ನಮ್ಮದೇ.. ಮತ್ತೆ ಯಥಾ ಸ್ಥಿತಿಗೆ ಬರುವಾಗ ನಮ್ಮ ಸಾಮಾಜಿಕ ಅಂತರದ ಬದುಕು, ಕೆಲವಷ್ಟು ತ್ಯಾಗಗಳಿಗೆ, ಪಾಲನೆಗೆ ಬದ್ದವಾಗಿಯೇ ಇರಬೇಕು ಎನ್ನೋದನ್ನ ನಾವು ಮರೆಯುವಂತಿಲ್ಲ. ಮುಂದೇನು ಜನಸಾಮಾನ್ಯರ ಸ್ಥಿತಿ ——————————————— ಇದೊಂದು ದೊಡ್ಡ ಸಮೂಹ ಇಲ್ಲಿ ದೊಡ್ದವರಿಂದ ಹಿಡಿದು ಕಾರ್ಮಿಕ ಕುಳಿಗಾರರೊರೆಗೆ ಎಲ್ಲರೂ ಜನ ಸಾಮಾನ್ಯರೇ… ಅಂದ ಮೇಲೆ ಇವರ ಅವಲಂಬನೆಯ ಕ್ಷೇತ್ರಗಳ ,ಕಾರ್ಯಗಳ ಪಾಡಿನ ಮೇಲೆ ಎಲ್ಲವೂ ನಿರ್ಧರಿತ. ಕುಟುಂಭ, ಬೇಡಿಕೆಗಳು, ಸಾಲಗಳು,ಸವಲತ್ತುಗಳಿಗೆ ಹುಟ್ಟಿನಿಂದಲೇ ಒಗ್ಗಿ ಕೊಂಡ ಜನಸಾಮಾನ್ಯರ ಜೀವನ ಶೈಲಿಗೆ ಇನ್ನೂ ಕೂಡ ಯಾವಾಗಲೂ ಈ ರೀತಿಯ ಅನುಭವಗಳು ಆಗಲೇ ಇಲ್ಲ. ಇದೊಂದು ಹೊಸ ದುರ್ ಬೆಳವಣಿಗೆ. ಅನಿರೀಕ್ಷಿತ ವಿಪತ್ತು ಬಂದೊದಗಿದೆ. ಬಹುಪಾಲು ಜನಜೀವನ ದೂರದರ್ಶಿತ್ವದ ವಿಮರ್ಶೆಯೊಂದಿಗೆ ನಡೆಯುತ್ತಿದ್ದ ಈ ಆಧುನಿಕ ಜನ ಜೀವನ ಇಂದು ಸೋತು ಸುಣ್ಣಗಿದೆ. ವನ್ಯಮೃಗಗಳ ಹಾಗೆ ನಡೆದದ್ದೇ ದಾರಿಯಾಗಿ ಗೋಚರಿಸುತ್ತಿದೆ. ——————————————————- ಹೌದು ಅನೇಕ ಅಸಂಘಟಿತ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಎಷ್ಟೋ ದಿನಗಳ ಹಿಂದೆ ಮನೆ, ಮಠ ಬಿಟ್ಟು ಪದವಿ ಹಾಗೂ ಹೆಚ್ಚಿನ ಓದಿಲ್ಲದೆ ಬೇಕಾದದ್ದನ್ನು ಸಾಧಿಸಿ ಸ್ವಾವಲಂಬಿಗಳಾದವರು ಊರತ್ತ ಮುಖ ಮಾಡಿದ ಅನೇಕ ಉದಾಹರಣೆಗಳಿವೆ. ಹಾಗಾದರೆ ಮುಂದೇನು…? ಎಸ್, ಎಸ್, ಎಲ್, ಸಿ, ಮೊದಲೇ ಮುಂದೇನು? ನಂತರ ಮುಂದೇನು ಅನ್ನೋ ಲೇಖನಗಳನ್ನು ಈ ಮೊದಲೆಲ ಓದುತ್ತಾ ಇದ್ವಿ… ಈಗದೇ ವಿರುದ್ಧವಾಗಿದೆ. ಭವಿಶ್ಯದ ಕನಸುಗಳು ಕಮರಿಹೋಗುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿವೆ. ಮುಂದೇನು? ——————- ಸರ್ಕಾರದ ಚಿಂತನೆಗಳಾದ ಅಂತರ್ಜಾಲ ಕಲಿಕಾ ವ್ಯವಸ್ಥೆಯನ್ನು ಸರ್ಕಾರ ಈಗಾಗಲೇ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತಿಸಿ ,ಪರೀಕ್ಷೆಗೆ ಪೂರಕ ಅಭ್ಯಾಸದ ಮರು ಅವಲೋಕನ ಒಂದೆಡೆಯಾದರೆ ಮುಂದಿನ ಶೈಕ್ಷಣಿಕ ವರ್ಷ ಅಂದರೆ ಇದೇ ಜೂನ್ ಒಂದರ ಆರಂಭದ ಪ್ರಾಥಮಿಕ ,ಪ್ರೌಢ, ಹಾಗೂ ಪದವಿ ಪೂರ್ವ ಶಿಕ್ಷಣ ಹಂತಗಳ ಆರಂಭ ಅಥವಾ ಮುಂದುಡಿಕೆಯ ಎಂಬ ಬಗ್ಗೆಯೂ ಈಗಾಗಲೇ ಚರ್ಚೆ ಆದರೂ ಈ ಎಲ್ಲ ಮೇಲಿನ ಸನಸ್ಯಗಳಿಗೆ, ಅಂತ್ಯ ಹಾಗೂ ಸ್ಪಷ್ಟ ಉತ್ತರ ಸಿಗೋದು ಕಷ್ಟವೇ ಆಗಿದೆ. ತೀರ ಕಳವಳ ಕಕ್ಕಾ -ಬಿಕ್ಕಿಯಲ್ಲಿ ಸಾಗಿತ್ತಿರುವ ಈ ಪ್ರಮುಖ ಸಾಮಾಜಿಕ ಹಂತಗಳಾದ, ವ್ಯಾಪಾರ, ವಹಿವಾಟು, ಶಿಕ್ಷಣ ,ಉದ್ಯೋಗಗಳ ಪುನಶ್ಚೇತನ ಹಾಗೂ ಮರು ಹುಟ್ಟು ಆಗಬೇಕಿದೆ. ದೇಶದಲ್ಲಿ ಜಿ ಡಿ ಪಿ ಯ ಕುಸಿತ ಹಾಗೂ ನಿರುದ್ಯೋಗದ ಮಟ್ಟ ಹಾಕುವ ಪ್ರಕ್ರೀಯೆ ಈಗ ಹೇಗೆ ಕೋವಿಡ್ ವಿರುದ್ಧ ನಡೆಯುವ ಸರ್ಕಾರದ ವೇಗದ ಕ್ರಮಗಳ ಮಾಧರಿಯಲ್ಲೇ ಆಗಬೇಕಿದೆ. ಕೃಷಿ ಚಟುವಟಿಕೆಯೊಂದಿಗೆ ಕರೊನಾ ಕಾಲದ ರೈತನ ಬದುಕು ಹೌದು ದೇಶದ ಬೆನ್ನೆಲುಬು ಅನ್ನ ನೀಡುವ ಅನ್ನದಾತ ರೈತ ಈ ಮುಂಗಾರಲ್ಲಿ ತನ್ನ ಕೆಲಸದ ಕೈ ಚುರುಕುತನ ಪ್ರಾರಂಭಿಸುತ್ತಾನೆ. ಹದ ಮಳೆ, ಸಮರ್ಪಕ ಬೆಳೆಯ ಇಳುವರಿಗಾಗಿ ಗೊಬ್ಬರ ಹತ್ತಲವು ಕೀಟನಾಶಕ, ಬೀಜ ನಾಶಕಗಳನ್ನೊಳಗೊಂಡಂತೆ ತೀರ ಬಂಡವಾಳ ಹಾಕುವ ಸಕಾಲವಿದು. ಸರ್ಕಾರ ಈ  ಬಗ್ಗೆ ಗಮನ ಹರಿಸುವದು ಸೂಕ್ತ. ವಿಶೇಷವಾಗಿ ಬತ್ತದ ಬೆಳೆಯ ತಯಾರಿ ,ಅಂದರೆ ಕೆಲ ಭಾಗದಲ್ಲಿ ಈ ಮೊದಲು ಬಿತ್ತುವ ಕಾರ್ಯ ಹೆಚ್ಚಿನದ್ದಾಗಿತ್ತು ಈಗ ಅದು ವಿರಳವಾಗಿ ಹೆಚ್ಚಿನ ರೈತರು ನಾಟಿಯನ್ನೆ ಅವಲಂಭಿಸಿದ್ದಾರೆ. ಇದಕ್ಕೆ ಪೂರಕ ಮಳೆ ಹಾಗೂ ಕೆಲಸಗಾರರ ಲಭ್ಯತೆ ಕೂಡ ಒಂದು ಮುಖ್ಯ ವಿಚಾರ. ಹೀಗೆ ಹತ್ತು ಹಲವು ಸಾಮಾಜಿಕ ವ್ಯವಸ್ಥೆಯ ಕ್ಷೇತ್ರಗಳು ಅಸಮತೋಲನದ ಹಂತ ತಲುಪಿರುವದು ಕರೋನವೇ ಪ್ರಮುಖ ಕಾರಣವಾಗಿದೆ ಎಂದು ಪ್ರತ್ಯಕ್ಷವಾಗಿ ಕಾಣುವ ವಸ್ತು ಸ್ಥಿತಿ. ಭೂತಕಾಲ, ಭವಿಷ್ಯತಕಾಲ ಹಾಗೂ ವರ್ತಮಾನದ ತುಲನೆಗೆ ಹೋದಾಗ ನೇರವಾಗಿ ದುಬಾರಿ ಕಾಲ ಅನುಭವವಾಗುತ್ತದೆ. ಕಾದು ನೋಡೋಣ ಕರೊನಾ ಬದುಕಿನ ಸಂಕ್ಷಿಪ್ತ ಕಲ್ಪನೆಯೊಂದಿಗೆ ಬರೆದ ಈ ಲೇಖನ ಹೋಲುವ ದಿನಗಳು ಹೌದೋ ಅಲ್ಲವೋ ಎಂದು… *****

ಪ್ರಸ್ತುತ Read Post »

ಆರೋಗ್ಯ, ಇತರೆ

ಆರೋಗ್ಯ

ಧೂಮಪಾನ ದುಷ್ಟಪರಿಣಾಮಗಳು. ಸಂಗಮೇಶ ಎನ್ ಜವಾದಿ  ಧೂಮಪಾನ ಎಂದರೆ ಹೊಗೆಯ ರುಚಿ ತೆಗೆದುಕೊಳ್ಳುವ ಅಥವಾ ಉಸಿರಿನ ಮೂಲಕ ಹೊಗೆಯನ್ನು ಒಳತೆಗೆದುಕೊಳ್ಳುವುದನ್ನು ಧೂಮಪಾನ ಸೇವನೆ ಯೆಂದು ಕರೆಯಲಾಗುತ್ತದೆ. ಇದರಿಂದ ಹೊರಡುವ ಹೊಗೆಯನ್ನು ಉಚ್ಛ್ವಾಸದ ಮೂಲಕ ಒಳತೆಗೆದುಕೊಂಡಾಗ ಇದರ ಸಕ್ರಿಯ ವಸ್ತುಸಾರಗಳು ಆಲ್ವಿಯೋಲೈ ಮೂಲಕ ಶ್ವಾಸಕೋಶದಲ್ಲಿ ಹೀರಲ್ಪಡುತ್ತವೆ.ಈ ಸಕ್ರಿಯ ವಸ್ತುಸಾರಗಳು ನರಗಳ ತುದಿಗಳಲ್ಲಿ ರಾಸಾಯನಿಕ ಕ್ರಿಯೆಗಳನ್ನುಂಟುಮಾಡಿ ಹೃದಯ ಬಡಿತದ ವೇಗ, ನೆನಪಿನ ಶಕ್ತಿ, ಸಕ್ರಿಯತೆ ಹಾಗೂ ಪ್ರತಿಕ್ರಿಯಿಸುವ ಸಮಯದಲ್ಲಿ ಏರಿಕೆಯನ್ನುಂಟುಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ಚಟ ಹೆಚ್ಚಾಗಿ ಗ್ರಾಸವಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ 500ರಲ್ಲಿ 100ಜನರಿಗೆ ಮಾದಕ ವ್ಯಸನಿಗಳಾಗಿದ್ದರೆ, ಇತ್ತೀಚಿನ ದಿನಗಳಲ್ಲಿ 100ರಲ್ಲಿ 40 ಜನರಿಗೆ ಇಂತಹ ಚಟಗಳಿಗೆ ವ್ಯಸನಿಯಾಗಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಇಂತಹ ಮಾದಕ ವಸ್ತುಗಳ ಸೇವನೆಯಿಂದ ಯಾವುದೇ ಪ್ರಯೋಜನ ವಿಲ್ಲದುದ್ದರೂ,ಮೋಜು ಮಸ್ತಿಗಾಗಿ, ಪಾಶ್ಚಾತ್ಯ ಸಂಸ್ಕೃತಿಯ ಸೆಳೆತ, ಸಂಪ್ರದಾಯದ ಕಂದಾಚಾರ, ಕಾಮೋತ್ತೇಜನ ಪ್ರಚೋದನೆಗಾಗಿ, ಆಕ್ರಮಣ ಶೀಲತೆ ತೋರಿಸಲು, ಪ್ರತಿಭೆ ಪ್ರದರ್ಶನಕ್ಕೆ, ಹಣಕಾಸು ಸಮಸ್ಯೆ, ಖಿನ್ನತೆ ಯಂತಹ ವಿಷಯಗಳಿಂದಾಗಿ,ಧೂಮಪಾನದಂತ ಚಟಗಳತ್ತ ಆಕರ್ಷಿತರಾಗುತ್ತಿದ್ದಾರೆ. ಹೀಗಾಗಿ ಈಗ ತಂಬಾಕು ಭಾರತದಲ್ಲಿ ಹಲವು ರೂಪಗಳಲ್ಲಿ ಸರ್ವೇಸಾಮಾನ್ಯವಾಗಿ ವ್ಯಾಪಕವಾಗಿ ಬಳಕೆಯಲ್ಲಿರುವ ಒಂದು ವ್ಯಸನಕಾರಿ ಪದಾರ್ಥ. ನಿಕೊಟಿನ್ ತಂಬಾಕನ್ನು ಸಿಗರೇಟ್ ರೂಪದಲ್ಲಿ ವಿಶ್ವದಾದ್ಯಂತ ಹೆಚ್ಚಾಗಿ ಬಳಸಲಾಗುತ್ತಿರುವಂತೆ, ಭಾರತದಲ್ಲಿ ಸಿಗರೇಟ್, ಬೀಡಿ, ನಶ್ಯ, ಹುಕ್ಕಾ ಮತ್ತು ಜಗಿಯುವ ತಂಬಾಕು ಎಂಬ ಬೇರೆಬೇರೆ ರೂಪದಲ್ಲಿ ಬಳಸಲಾಗುತ್ತದೆ.ಧೂಮಪಾನ ದುಶ್ಚಟಗಳ  ಬಳಕೆಗೆ ಯಾವುದೇ ನಿರ್ಧಿಷ್ಟ ಕಾರಣಗಳು ಇಲ್ಲದಿದ್ದರೂ, ಹಿರಿಯರ ಜೊತೆಗೆ ಇವತ್ತಿನ ಯುವ ಸಮೂಹ ಕೂಡ, ಕ್ಷುಲಕ ಕಾರಣ, ಕ್ಷಣಿಕ ತೀರ್ಮಾನಗಳಿಂದಾಗಿ ದುಶ್ಚಟಕ್ಕೆ ಬಲಿಯಾಗುತ್ತಿದೆ. ವಿಶ್ವ ಸಂಸ್ಥೆಯ ಸಮೀಕ್ಷೆಯ ಪ್ರಕಾರ 1 6ರ ವಯೋಮಿತಿಯಿಂದ 30ರ ವಯೋಮಿತಿಯ ಒಳಗಿನವರೇ, ಇಂತಹ ದುಶ್ಚಟಗಳಿಗೆ ಬಲಿಯಾಗುತ್ತಾರೆ ಎನ್ನುವ ಅಂಶ ಹೊರಗೆಡುವಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯ ಎಂದರೆ ಶೇ 10ರಲ್ಲಿ 4 ಜನ ಧೂಮಪಾನವನ್ನು, 3 ಜನ ಮದ್ಯಪಾನವನ್ನು ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಕೂಡ ಇದರಿಂದ ಹೊರತಾಗಿಲ್ಲ. ಧೂಮಪಾನ ಅತಿ ಹೆಚ್ಚಿನ ವ್ಯಸನಕಾರಿ ಪದಾರ್ಥ ಮತ್ತು ಅದರ ಸೇವನೆ ಬಿಡಬೇಕೆಂದುಕೊಂಡರೂ ಬಿಡಲು ಸಾಧ್ಯವಾಗುವುದಿಲ್ಲ. ಇದು ಹೆಚ್ಚಿನ ವಿಷಕಾರಿ ಗುಣ ಹೊಂದಿದೆ. ಜಗತ್ತಿನಾದ್ಯಂತ ಪ್ರತಿ ವರ್ಷ ತಂಬಾಕು ಸೇವನೆಯಿಂದ 40 ಲಕ್ಷ ಸಾವು ಸಂಭವಿಸುತ್ತಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ತಂಬಾಕು ಪ್ರತಿ ವರ್ಷ ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಕೊಲ್ಲುತ್ತಿದೆ.ತಂಬಾಕು ಸಂಬಂಧಿತ ರೋಗಗಳಿಂದ ಭಾರತದಲ್ಲಿ ಪ್ರತಿನಿತ್ಯ 2500 ಜನರು ಮರಣ ಹೊಂದುತ್ತಿದ್ದಾರೆ. ವಿಶ್ವದಾದ್ಯಂತ ಕೊಕೇನ್ ಅಥವಾ ಹೆರಾಯಿನ್ ಮತ್ತು ಮದ್ಯ ಬಳಕೆಯಿಂದ, ಅಗ್ನಿ ದುರಂತ, ಕೊಲೆ, ಆತ್ಮಹತ್ಯೆ, ಅಪಘಾತ ಮತ್ತು ಏಡ್ಸ್ ನಿಂದಾಗುವ ಸಾವುಗಳ ಒಟ್ಟೂ ಸಂಖ್ಯೆಗಳಿಗಿಂತಲೂ ತಂಬಾಕು ಸೇವನೆಯಿಂದ ಸಾಯುವವರ ಸಂಖ್ಯೆಯು ಅಧಿಕ ಪ್ರಮಾಣದಲ್ಲಿದೆ. ಧೂಮಪಾನದಲ್ಲಿ ಏನಿದೇ : ಹೊಗೆಸೊಪ್ಪಿನ ಗಿಡದಲ್ಲಿನ ನಿಕೊಟಿಯಾನಾ ಟೊಬ್ಯಾಕಮ್ ಎನ್ನುವ ಸಾರವನ್ನು ಬಳಸಿಕೊಂಡು ತಯಾರಾಗುವ ಪದಾರ್ಥ ತಂಬಾಕು. ಈ ಗಿಡದ ಒಣಗಿದ ಎಲೆಗಳನ್ನು ಉಳಿದ ಕೆಲವು ವಸ್ತುಗಳೊಂದಿಗೆ ಮಿಶ್ರಣ ಮಾಡಿ ಬೀಡಿ, ಸಿಗರೇಟ್, ನಶ್ಯ, ಹುಕ್ಕಾ, ಜರ್ದಾ, ಕಡ್ಡಿಪುಡಿ ಮತ್ತು ತಂಬಾಕಿನ ಉಳಿದ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಸುಫಾರಿ ಜಗಿಯುವುದರ ಮೂಲಕ, ಸೇದುವುದರ ಮೂಲಕ (ನಶ್ಯ), ಧೂಮಪಾನದ ಮೂಲಕ (ಸಿಗರೇಟ್, ಬೀಡಿ) ಹೀಗೆ ಅನೇಕ ವಿಧಗಳಲ್ಲಿ ತಂಬಾಕನ್ನು ಬಳಸಲಾಗುತ್ತದೆ. ಮುದ ನೀಡುವ ನಿಕೊಟಿನ್ ತಂಬಾಕು ಗಿಡದ ಎಲೆಗಳಲ್ಲಿ ಕಂಡುಬರುವ ರಾಸಾಯನಿಕ. ಧೂಮಪಾನ ಅಥವಾ ತಂಬಾಕು ಜಗಿಯುವುದು ನಿಕೊಟಿನ್ ಮತ್ತು ಕಾರ್ಬನ್ ಮೋನಾಕ್ಸೈಡ್ ಹಾಗೂ ಟಾರ್ಗಳನ್ನೊಳಗೊಂಡು ಅಂದಾಜು 4000 ಬೇರೆ ರೀತಿಯ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಧೂಮಪಾನ ವ್ಯಸನಕ್ಕೆ ಕಾರಣಗಳು : ತಂಬಾಕು ಸೇವನೆಯು ಮಿದುಳಿನಲ್ಲಿ ಆನಂದ ನೀಡುವ ಡೋಪಮೈನ್‌ ನರವಾಹಕವನ್ನು ಬಿಡುಗಡೆ ಮಾಡುತ್ತದೆ. ಮಿದುಳು ಇದನ್ನು ಆನಂದದಾಯಕವಾದ ಚಟುವಟಿಕೆ ಎಂದು ಗ್ರಹಿಸುತ್ತದೆ ಮತ್ತು ವ್ಯಕ್ತಿಯು ತಂಬಾಕು ಸೇವನೆಯನ್ನು ಮತ್ತೆಮತ್ತೆ ಬಯಸುವಂತೆ ಮಾಡುತ್ತದೆ. ಕ್ರಮೇಣ ಮಿದುಳಿನ ಸಂದೇಶವಾಹಕಗಳು ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತವೆ. ಇದರಿಂದಾಗಿ ಆನಂದದ ಭಾವ ಹೊಂದಲು ಮಿದುಳು ಹೆಚ್ಚು ತಂಬಾಕು ಪದಾರ್ಥಗಳ ಸೇವನೆಯನ್ನು ಬಯಸುತ್ತದೆ. ವ್ಯಕ್ತಿಯು ನಿಕೊಟಿನ್ ಸೇವಿಸಿದಾಗ, ರಾಸಾಯನಿಕಗಳು ಚರ್ಮ, ಬಾಯಿ, ಮೂಗಿನ ನಾಳಗಳು ಹಾಗೂ ಶ್ವಾಸಕೋಶಗಳ ಮೂಲಕ ಮಾನವನ ಮಿದುಳನ್ನು ತಲುಪುತ್ತವೆ. ನಿಕೊಟಿನ್ಯುಕ್ತ ಧೂಮಪಾನವು ನಿಮಗೆ ತಕ್ಷಣ ನಶೆಯನ್ನು ಮತ್ತು ಅತಿಯಾದ ಶಕ್ತಿಯನ್ನು ನೀಡುತ್ತದೆ. ಕೆಲವು ನಿಮಿಷಗಳ ನಂತರ, ನಶೆ ಇಳಿದು ಹೋಗುತ್ತದೆ ಮತ್ತು ನಿಮಗೆ ಸುಸ್ತಾದಂತೆ ಅಥವಾ ಶಕ್ತಿ ಕಡಿಮೆಯಾದಂತೆ ಭಾಸವಾಗುತ್ತದೆ. ಇದರ ಪರಿಣಾಮವಾಗಿ, ನಿಮಗೆ ಮತ್ತೆ ಧೂಮಪಾನ ಮಾಡಬೇಕೆಂದು ಅನಿಸುತ್ತದೆ.ಅಧ್ಯಯನಗಳ ಪ್ರಕಾರ ಮಕ್ಕಳು ಹಾಗೂ ಹದಿಹರೆಯದವರು ಹೆಚ್ಚಿನ ಪ್ರಮಾಣದಲ್ಲಿ ತಂಬಾಕು ಉತ್ಪನ್ನಗಳ ವ್ಯಸನಿಗಳಾಗುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತಂಬಾಕು ಬಳಸಲು ಆರಂಭಿಸಿದರೆ, ವ್ಯಸನಿಗಳಾಗುವ ಸಾಧ್ಯತೆ ಹೆಚ್ಚು.ತಂಬಾಕು ವ್ಯಸನದಿಂದ ಮಿದುಳಿನಲ್ಲಿ ಉಂಟಾಗುವ ಬದಲಾವಣೆಗಳು ಕೊಕೇನ್ ಮತ್ತು ಹೆರಾಯಿನ್ ಬಳಕೆಯಿಂದ ಉಂಟಾಗುವ ಬದಲಾವಣೆಗಳಂತೆ. ದೀರ್ಘಕಾಲದ ಬಳಕೆಯಿಂದ ವ್ಯಕ್ತಿಗೆ ಧೂಮಪಾನ ಮಾಡುವ (ಅಥವಾ ತಂಬಾಕು ಪದಾರ್ಥಗಳ ಬಳಕೆಯ) ಬಯಕೆ ಕೂಡ ಉಂಟಾಗಬಹುದು. ಸಾಮಾನ್ಯವಾಗಿ ಬೆಳಗ್ಗೆ ಏಳುವಾಗ, ಕಾಫಿಯ ಸೇವಿಸುವಾಗ, ಕೆಲಸದ ನಡುವಿನ ಊಟದ ವಿರಾಮದಲ್ಲಿ ತಂಬಾಕು ಸೇವನೆಯನ್ನು ಬಯಸುವಂತೆ ಮಾಡುತ್ತದೆ. ವಾಹನ ಚಲಿಸುವಾಗ, ಮದ್ಯಪಾನ ಮಾಡುವಾಗ ಅಥವಾ ಒತ್ತಡದ ಕೆಲಸ ಮಾಡುತ್ತಿರುವಾಗ ಧೂಮಪಾನ ಮಾಡಬೇಕೆಂದು ಬಲವಾಗಿ ಅನಿಸುವ ಸಾಧ್ಯತೆಯೂ ಇದೆ. ಧೂಮಪಾನದ ದುಷ್ಟಪರಿಣಾಮಗಳು : ಸಿಗರೇಟ್ ನಲ್ಲಿ ಸುಮಾರು 4000 ವಿಷ ಪದಾರ್ಥಗಳಿದ್ದು 400ರಕ್ಕೂ ಹೆಚ್ಚು ಪದಾರ್ಥಗಳು ಕ್ಯಾನ್ಸರಿಗೆ ಕಾರಣವಾಗಿವೆ,ಅತಿಯಾದ ಧೂಮಪಾನ ನರಗಳ ದೌರ್ಬಲ್ಯ,  ಜೀರ್ಣ  ಶಕ್ತಿಯಲ್ಲಿನ  ಇಳಿತಕ್ಕೆ ಕಾರಣವಾಗುತ್ತದೆ. ಸತತವಾದ ದಮ್ಮು , ರಕ್ತದ ಖಾಯಿಲೆ  ಉಂಟುಮಾಡುತ್ತದೆ. ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಗೆ ಭಂಗ ತರುತ್ತದೆ. ದೇಹದ ಎಲ್ಲಾ ಅಂಗಗಳಿಗೂ ಧಕ್ಕೆಯಾಗುತ್ತದೆ .5 ಸೆ, ಮೀ, ಸಿಗರೇಟ್ ಸೇವನೆಯಿಂದ 5 ನಿಮಿಷ ಆಯಸ್ಸು ಕಡಿಮೆಯಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಜಠರ ಮತ್ತು ಕರುಳಿನ ಮೇಲೆ ಧೂಮಪಾನ ಸರಿಪಡಿಸಲು ಆಗದಂತಹ ಪರಿಣಾಮ ಬೀರುತ್ತದೆ. ಸಿಗರೇಟಿನಲ್ಲಿರುವ ದುಷ್ಪರಿಣಾಮ ಬೀರುವ ವಿಷದ ಅಂಶ ಜಠರದ ಒಳಪದರವನ್ನು ಸವೆಸುತ್ತದೆ ಮತ್ತು ಜೀರ್ಣಾಂಗದ ಕಿಣ್ವಗಳು ಸರಿಯಾಗಿ ಕೆಲಸ ಮಾಡಲು ಅಡ್ಡಿಪಡಿಸುತ್ತದೆ. ಇದೇ ಕಾರಣದಿಂದ ಧೂಮಪಾನ ವ್ಯಸನಿಗಳು ಆಹಾರ ಜೀರ್ಣವಾಗುವುದರಲ್ಲಿ ತೊಂದರೆ ಅನುಭವಿಸುತ್ತಾರೆ.ಧೂಮಪಾನ ವ್ಯಸನಿಯಾಗಿದ್ದರೆ ನಿಮ್ಮ ನಾಲಗೆಯ ಮೇಲಿರುವ ರುಚಿ ಗ್ರಾಹಕ (ಟೇಸ್ಟ್ ಬಡ್) ಗಳು ಬೇಗನೆ ನಶಿಸಿ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿಯೇ ಧೂಮಪಾನ ವ್ಯಸನಿಗಳು ಖಾರ ಪದಾರ್ಥಗಳನ್ನು ಯಾವುದೇ ತೊಂದರೆಯಿಲ್ಲದೆ ಸೇವಿಸುತ್ತಾರೆ. ಅವರ ನಾಲಗೆಯ ಮೇಲಿನ ರುಚಿ ಗ್ರಾಹಕಗಳು ನಶಿಸಿ ಹೋಗಿರುವ ಕಾರಣ ಅವರಿಗೆ ರುಚಿ ತಿಳಿಯುದಿಲ್ಲ. ಕಳೆದ ದಶಕದಲ್ಲಿ ತಂಬಾಕು ಸಂಬಂಧಿತ ರೋಗಗಳು ತ್ವರಿತವಾಗಿ ಹೆಚ್ಚಾಗಿವೆ. ಸಂತಾನಕ್ಕಾಗಿ ದಂಪತಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಮಹಿಳೆಯರಲ್ಲಿ ಬೇಗನೆ ರಜೋನಿವೃತ್ತಿ ಹೊಂದುವಿಕೆ ಕಂಡು ಬರುತ್ತಿದೆ.ಧೂಮಪಾನ ಮಾಡುವವರು ಶೇ.14 ಬಂಜೆತನಕ್ಕೆ ಒಳಗಾಗುತ್ತಾರೆ. ಶೇ.30ರಷ್ಟು ಬಹುಬೇಗ ರಜೋನಿವೃತ್ತಿ ಹೊಂದುತ್ತಾರೆ. 30ರ ವಯೋಮಾನದ ಮಹಿಳೆಯರಲ್ಲಿ ಫಲವತ್ತತೆ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆಯು 35ರ ನಂತರ ವೇಗ ಪಡೆದುಕೊಳ್ಳುತ್ತದೆ. ಆದರೆ ತಂಬಾಕು ಬಳಕೆಯು ಅವಧಿಗೆ ಮುಂಚೆಯೇ ಈ ಸಮಸ್ಯೆಯನ್ನು ಹೆಚ್ಚಿಸುತ್ತದೆ. ದಿನಕ್ಕೆ 10ಕ್ಕಿಂತಲೂ ಹೆಚ್ಚು ಸಿಗರೇಟುಗಳ ಸೇವನೆಯು ನಿಮ್ಮ ಗರ್ಭಧರಿಸುವ ಸಾಮರ್ಥ್ಯ‌ದ ಮೇಲೆ ಹಾನಿಯುಂಟುಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.ಧೂಮಪಾನ ಮಾಡುತ್ತಿರುವ ಮಹಿಳೆಯರು ಶೇ.60ರಷ್ಟು ತಾವು ಗರ್ಭವತಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡಿಕೊಳ್ಳುವರು. ಇದು ಅಪಸ್ಥಾನೀಯ ಗರ್ಭಾವಸ್ಥೆ ಮತ್ತು ಇತರೆ ಟ್ಯೂಬಲ್‌ ಫ್ಯಾಕ್ಟರ್‌ ಬಂಜೆತನಕ್ಕೂ ಸಂಬಂಧ ಹೊಂದಿದೆ. ಸಿಗರೇಟಿನಲ್ಲಿ ಇರುವ ರಾಸಾಯನಿಕಗಳು ಗರ್ಭಕಂಠದ ಕ್ಯಾನ್ಸರ್‌ನ ಅಪಾಯವನ್ನು ಒಳಗೊಂಡಿವೆ.ತಂಬಾಕು ಪುರುಷರ ಸಂತಾನೋತ್ಪತ್ತಿ ಶಕ್ತಿಯ ಮೇಲೂ ಪ್ರಭಾವ ಬೀರುತ್ತದೆ. ಇದು ರಕ್ತನಾಳಗಳಿಗೆ ಹಾನಿಯುಂಟು ಮಾಡಿ ರಕ್ತದ ಹರಿವಿನ ಮೇಲೂ ಪ್ರಭಾವ ಬೀರುತ್ತದೆ. ಕೆಲವು ಅಧ್ಯಯನಗಳು ಧೂಮಪಾನದ ಪರಿಣಾಮಗಳನ್ನು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಮತ್ತು ಕಡಿಮೆಯಾದ ಲೈಂಗಿಕ ನೆರವೇರಿಕೆಯೊಂದಿಗೆ ಸಂಬಂಧ ಕಲ್ಪಿಸಿವೆ. ಮಾನವನ ವೀರ್ಯ ಕಣಗಳು ಸಮರ್ಪಕವಾಗಿ ಸಂತುಲಿತ ಒಂದರಿಂದ ಒಂದಕ್ಕೆ ಸಂಬಂಧ ಹೊಂದಿರುವ ಪ್ರೊಟಮೈನ್‌ 1 ಮತ್ತು ಪ್ರೊಟಮೈನ್‌ 2 ಎಂದು ಕರೆಯಲಾಗುವ ಎರಡು ಚಿಕ್ಕ, ಅಧಿಕ ಆವೇಶದ ಪ್ರೊಟೀನುಗಳನ್ನು ಕೊಂಡೊಯ್ಯುತ್ತವೆ. ಆದರೂ ಧೂಮಪಾನಿಗಳ ವೀರ್ಯವು ಬಹಳ ಕಡಿಮೆ ಪ್ರೊಟಮೈನ್‌ ಅನ್ನು ಕೊಂಡೊಯ್ಯುತ್ತದೆ. ತಂಬಾಕಿನಿಂದ ಉಂಟಾಗುವ ಹಾನಿಯು ವೀರ್ಯದಲ್ಲಿ ಕ್ರೊಮೊಸೋಮುಗಳ ಹಾನಿ ಮತ್ತು ಡಿಎನ್‌ಎ ವಿಘಟನೆಯನ್ನೂ ಒಳಗೊಳ್ಳುತ್ತದೆ. ಧೂಮಪಾನವು ವೀರ್ಯಕ್ಕೆ ಹಾನಿಯುಂಟುಮಾಡಿ ಸಂತಾನಶಕ್ತಿಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಧೂಮಪಾನಿಗಳ ವೀರ್ಯದಿಂದ ಬೆಳವಣಿಗೆಯಾದ ಭ್ರೂಣವು ಡಿಎನ್‌ಎ ಹಾನಿಯ ಕಾರಣದಿಂದಾಗಿ ಬದುಕುಳಿಯುವ ಕಡಿಮೆ ಸಾಧ್ಯತೆಯನ್ನು ಹೊಂದಿರುತ್ತದೆ. ನಿಷ್ಟ್ರೀಯ ಧೂಮಪಾನ ಪುರುಷರ ಸಂತಾನಶಕ್ತಿಯ ಮೇಲೆ ಪ್ರಭಾವ ಬೀರಬಹುದು. ಪುರುಷ ಧೂಮಪಾನಿಗಳು ಕಡಿಮೆ ಚಲನಶೀಲತೆಯೊಂದಿಗೆ ವೀರ್ಯದ ಕಡಿಮೆ ಗುಣಮಟ್ಟದೊಂದಿಗೆ ಬಳಲಬಹುದು ಮತ್ತು ಇದು ಅಸಹಜ ಆಕಾರದ ವೀರ್ಯಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಒಬ್ಬ ವ್ಯಕ್ತಿಯು ನಿರಂತರವಾಗಿ ಧೂಮಪಾನ ಮಾಡುವವನಾಗಿದ್ದರೆ, ಮೊಟ್ಟೆಗಳನ್ನು ಫಲವತ್ತತೆಗೊಳಿಸುವ ವೀರ್ಯದ ಸಾಮರ್ಥ್ಯ‌ವನ್ನೂ ಕಡಿಮೆ ಮಾಡಬಹುದು. ದೀರ್ಘಕಾಲದ ತಂಬಾಕು ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚರ್ಮ ಹಾಗೂ ಹಲ್ಲುಗಳ ಅಕಾಲಿಕ ಮುಪ್ಪು (ಚರ್ಮ ಸುಕ್ಕುಗಟ್ಟುವಿಕೆ), ಕಣ್ಣಿನ ಪೊರೆ, ಅಧಿಕ ಅಥವಾ ಕಡಿಮೆ ರಕ್ತದೊತ್ತಡ, ಬೊಜ್ಜು, ಉಸಿರಾಟದ ತೊಂದರೆ, ಹೃದಯದ ತೊಂದರೆ ಹಾಗೂ ಸ್ಟ್ರೋಕ್ ಅಪಾಯ, ಭ್ರೂಣಕ್ಕೆ ಹಾನಿ ( ಗರ್ಭಿಣಿ ಮಹಿಳೆಯರು ಧೂಮಪಾನ ಮಾಡುವುದರಿಂದ), ನಪುಂಸಕತ್ವ ಅಥವಾ ಬಂಜೆತನದ ಸಮಸ್ಯೆಗಳು ಉಂಟಾಗಬಹುದು. ತಂಬಾಕು ಸೇವನೆಯು ಮಧುಮೇಹ, ಸಂಧಿವಾತ ಹಾಗೂ ಆಸ್ಟಿಯೋಪೊರೊಸಿಸ್ ಮುಂತಾದ ತೊಂದರೆಗಳನ್ನು ಹೆಚ್ಚು ಮಾಡಬಹುದು ಜೊತೆಗೆ ಧೂಮಪಾನ ಮಾಡಿದವರ ಆಯುಷ್ಯವು ಧೂಮಪಾನ ಮಾಡದವರ ಆಯುಷ್ಯಕ್ಕಿಂತ 15 ವರ್ಷ ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ ಹಾಗೂ ತಂಬಾಕಿನ ಪರೋಕ್ಷ ಧೂಮಪಾನ (ಪ್ಯಾಸಿವ್ ಸ್ಮೋಕಿಂಗ್) ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು, ಹಾಗೂ ಇದು ಮಾರಕವೆಂದು ಸಾಬೀತಾಗಿದೆ. ದೀರ್ಘಾವಧಿಯ ಪರೋಕ್ಷ ಧೂಮಪಾನದಿಂದ ಶ್ವಾಸಕೋಶ, ಸ್ತನ ಹಾಗೂ ಲಿವರ್ ಕ್ಯಾನ್ಸರ್ ಸಾಧ್ಯತೆ ಹೆಚ್ಚು. ಇದು ಸ್ಟ್ರೋಕ್ ಹಾಗೂ ಹೃದಯಾಘಾತಗಳಿಗೆ ಕೂಡ ಕಾರಣವಾಗಬಹುದು. ಪರೋಕ್ಷ ಧೂಮಪಾನದಿಂದ ಹೊರಬರಲು ಯಾವುದೇ ‘ಸುರಕ್ಷತೆ’ಗಳಿಲ್ಲ ಹಾಗೂ ಹೊಗೆಯ ಅಪಾಯವನ್ನು ತಡೆಯಲು ಸಾಧ್ಯವಿಲ್ಲ.ಸಾಮಾನ್ಯವಾಗಿ ಬೀಡಿ, ನಶ್ಯ ಮತ್ತು ಇತರ ಹೊಗೆ ರಹಿತ ತಂಬಾಕು ಪದಾರ್ಥಗಳು ಸಿಗರೇಟ್ ಗಿಂತ ‘ಸುರಕ್ಷಿತ’ ಎಂಬ ನಂಬಿಕೆಯಿದೆ. ಇದು ಸತ್ಯವಲ್ಲ. ಅವು ಕೂಡ ಸಿಗರೇಟ್ನಂತೆಯೇ ವ್ಯಕ್ತಿ ಹಾಗೂ ಆತನ ಸುತ್ತಮುತ್ತಲಿನವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಧೂಮಪಾನ ವ್ಯಸನದ ಪರಿಣಾಮಗಳು — ತಂಬಾಕು ಅಥವಾ ನಿಕೊಟಿನ್ ಬಳಕೆ ದೇಹದ ಪ್ರತಿಯೊಂದು ಅಂಗದ ಮೇಲೂ ಪರಿಣಾಮ ಬೀರುತ್ತದೆ. ತಂಬಾಕು ಉತ್ಪನ್ನಗಳ ಬಳಕೆಯು ಅಡ್ರೆನಾಲಿನ್ (ದೇಹದೊಳಗೆ ಬಿಡುಗಡೆಗೊಳ್ಳುವ ಮುದ ನೀಡುವ ವಸ್ತು) ಬಿಡುಗಡೆ ಮಾಡುತ್ತದೆ. ಅದು ದೇಹದ ಉಷ್ಣಾಂಶವನ್ನು, ಹೃದಯ ಬಡಿತವನ್ನು ಹಾಗೂ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಶ್ವಾಸಕೋಶ, ಬಾಯಿ, ಸ್ತನ, ಗರ್ಭಕೋಶ, ಪ್ಯಾನ್ಕ್ರಿಯಾಸ್, ಮೂತ್ರಪಿಂಡ ಅಥವಾ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ತೊಂದರೆಗೆ ಒಳಗಾಗುವ ಅಪಾಯ ಹೆಚ್ಚು. ಹೊಗೆರಹಿತ ತಂಬಾಕು ಸೇವನೆಯನ್ನು ಮಾಡುವವರಲ್ಲಿ ಬಾಯಿ, ಧ್ವನಿಪೆಟ್ಟಿಗೆ, ಅನ್ನನಾಳ, ಪ್ಯಾನ್ಕ್ರಿಯಾಸ್ ಹಾಗೂ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಧೂಮಪಾನವನ್ನು ತಡೆಗಟ್ಟುವ ವಿಧಾನ: ಅನೇಕ ಜನರು ಕೋಲ್ಡ್ ಟರ್ಕಿ ವಿಧಾನದ ಮೂಲಕ ತಮ್ಮ ನಿಕೋಟಿನ್ ಚಟವನ್ನು ಬಿಡಲು ಸಮರ್ಥರಾಗಿದ್ದಾರೆ (ಆದರೆ ಮನೋವೈದ್ಯರು

ಆರೋಗ್ಯ Read Post »

ಇತರೆ

ಪ್ರಸ್ತುತ

ಸಮಯ ಅಮೂಲ್ಯ ಸಮಯ ಅಪವ್ಯಯ ಮಾಡದಿರುವುದು ಹೇಗೆ? ಜಯಶ್ರೀ.ಜೆ.ಅಬ್ಬಿಗೇರಿ. ಎಲ್ಲವನ್ನೂ ಗೆಲ್ಲಬಹುದು.ಸಮಯವನ್ನು ಗೆಲ್ಲಲಾಗುವುದಿಲ್ಲ. ಎಲ್ಲವನ್ನೂ ಕೊಳ್ಳುವ ಶಕ್ತಿ ಇರುವ ಸಿರಿವಂತನೂ ಬಡವ ಸಮಯದ ಮುಂದೆ. ಎಲ್ಲರೂ ನಿದ್ರಿಸುವಾಗಲೂ ಇದು ಜಾಗೃತವಾಗಿಯೇ ಇರುತ್ತದೆ. ಸಮಯವನ್ನು ಗೆಲ್ಲಲಾಗುವುದಿಲ್ಲ ಆದರೆ ಸರಿಯಾದ ಸಮಯ ನಿರ್ವಹಣೆ ಮಾಡಿ ಗೆಲ್ಲಬಹುದು. ಕನಸುಗಳನ್ನು ನನಸಾಗಿಸಬಹುದು. ಅಂಥವರನ್ನು ಯಶಸ್ವಿಗಳು ಎಂದು ಗುರುತಿಸಿ ಗೌರವಿಸುತ್ತಾರೆ. ಇವೆಲ್ಲ ಸಮಯದ ಕುರಿತಾದ ಸಾಮಾನ್ಯ ಮಾತುಗಳು. ‘ನೆನಪಿಡಿ, ಸಮಯ ಹಣವಿದ್ದಂತೆ.’ ಎನ್ನುವ ಬೆಂಜಮಿನ್ ಫ್ರಾಂಕ್ಲಿನ್ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಅದನ್ನು ನಂಬುತ್ತೇವೆ. ಆದರೂ ಸಮಯದ ಅಪವ್ಯಯದ ಬಗ್ಗೆ ಹೆಚ್ಚು ಒತ್ತನ್ನು ನೀಡುವುದೇ ಇಲ್ಲ. ಬಹಳ ಸಲ ಮನೋರಂಜನೆಗಳಲ್ಲಿ ಅಮೂಲ್ಯ ಸಮಯ ಹಾಳುಮಾಡುತ್ತೇವೆ. ಇದು ಮನಸ್ಸಿಗೆ ಮುದ ನೀಡುತ್ತದೆಯಾದರೂ ದೀರ್ಘ ಸಮಯದ ನಂತರ ಇದರ ದುಷ್ಪರಿಣಾಮ ಆಗದೇ ಇರದು. ಸಮಯದ ಅಪವ್ಯಯವನ್ನು ತಡೆಯುವ ಮುನ್ನ ನಾವೇಕೆ ವ್ಯರ್ಥ ಸಮಯ ಕಳೆಯುತ್ತಿದ್ದೇವೆಂದು ತಿಳಿಯುವುದು ಮುಖ್ಯ. ಸೋಲಿನ ಭಯ ಪರಿಣಾಮಕಾರಿ ಕೆಲಸಗಳ ಆಧಾರದ ಮೇಲೆ ಸಮಾಜವು ಕೆಲವು ಉನ್ನತ ಸ್ತರಗಳನ್ನು ಗುರುತಿಸಿರುತ್ತದೆ. ಸೋತ ಹೆಸರನ್ನು ಪಡೆದುಕೊಳ್ಳುವ ನೋವು ಯಾರಿಗೂ ಬೇಕಿಲ್ಲ. ಹೀಗಾಗಿ ಏನೂ ಮಾಡದೇ ಇರುವುದು ಒಳಿತು ಎಂದೆನಿಸಿಬಿಡುತ್ತದೆ. ಸೋಲಿನ ಭಯ ಇರುವವರಿಗೂ ವ್ಯರ್ಥ ಸಮಯ ಕಳೆಯುವಿಕೆ ಮತ್ತು ಕೆಲಸ ಮುಂದೂಡುವಿಕೆಯು ಅದರೊಂದಿಗೆ ಅಂಟಿಕೊಂಡಿರುತ್ತವೆ. ಆದರೆ ಇದು ಬದುಕಿನಲ್ಲಿ ಸಂಪರ‍್ಣ ವೈಫಲ್ಯತೆಯನ್ನು ಮನೆ ಮಾಡಿಸುವಷ್ಟು ಅಪಾಯಕಾರಿ. ಭವಿಷ್ಯವನ್ನು ನಿರೀಕ್ಷಿಸುವ ಮಟ್ಟಕ್ಕೆ ಕರೆದೊಯ್ಯುತ್ತದೆ. ಕರ‍್ಯದ ಗುಣಮಟ್ಟವನ್ನು ಹೆಚ್ಚಿಸುವತ್ತ ಗಮನ ನೀಡಿದರೆ ಸೋಲಿನ ಭಯ ಕಡಿಮೆಯಾಗುವುದು. ಪರಿಪರ‍್ಣತೆಯ ಮುಂದಾಲೋಚನೆಯಲ್ಲಿ ತಡೆ ಹಿಡಿದುಕೊಳ್ಳದಿರಿ.’ಯಶಸ್ವಿ ವ್ಯಕ್ತಿಯು ವಿಫಲರು ಮಾಡಲು ಇಷ್ಟಪಡದದ್ದನ್ನೇ ಮಾಡುವ ಅಭ್ಯಾಸ ಹೊಂದಿರುತ್ತಾರೆ.’ಎನ್ನುವ ಇ.ಎಂ.ಗ್ರೇ ಮಾತುಗಳನ್ನು ಅರ್ಥೈಸಿಕೊಳ್ಳಬೇಕು.. ನಿರುತ್ಸಾಹ ಅನಾರೋಗ್ಯ ಜೀವನ ಶೈಲಿಯುಳ್ಳವರಲ್ಲಿ ಕಡಿಮೆ ಶಕ್ತಿ ಹೆಚ್ಚು ನಿರುತ್ಸಾಹ ಕಂಡು ಬರುತ್ತದೆ. ಸಾಧಿಸಲು ಮನಸ್ಸೇ ಆಗುವಂಥ ಮನೋಭಾವದಲ್ಲಿ ಸಿಲುಕಿ ಹಾಕಿಕೊಂಡು ಬಿಡುತ್ತಾರೆ. ಇದು ಸಮಯದ ಅಪವ್ಯಯಕ್ಕೆ ಕಾರಣವಾಗುತ್ತದೆ. ಅನಾರೋಗ್ಯಕರ ಜೀವನ ಶೈಲಿಯು ದಣಿವನ್ನು,ಜಡತ್ವನ್ನು ಹೆಚ್ಚಿಸುವುದಲ್ಲದೇ ನಿಷ್ಕಿçÃಯರನ್ನಾಗಿಸುತ್ತದೆ.ನಿರುತ್ಸಾಹದ ಹಿಂದಿನ ಮೂಲ ಕಾರಣವನ್ನು ಹುಡುಕಲೇಬೇಕು. ಅಂದಾಗ ಮಾತ್ರ ಮುಂದೆ ಹೆಜ್ಜೆ ಇಡಲು ಅನುವಾಗುತ್ತದೆ. ಇದಕ್ಕೆ ಯಶಸ್ವಿ ವ್ಯಕ್ತಿಗಳು ಕಂಡು ಕೊಂಡಿರುವ ದಾರಿಯೆಂದರೆ ಮುಂಜಾನೆ ಹೊತ್ತಿನಲ್ಲಿ ವಾಕಿಂಗ್ ಜಾಗಿಂಗ್ ಮಾಡುವುದು. ಇದು ದಿನವೆಲ್ಲ ಉತ್ಸಾಹ ಭರಿತರನ್ನಾಗಿಸುತ್ತದೆ. ದೈಹಿಕ ಚೈತನ್ಯ ಕಡಿಮೆಯಾದರೆ ನಿರುತ್ಸಾಹ ಜಪ್ಪಯ್ಯ ಅಂದರೂ ಬಿಟ್ಟು ಹೋಗಲ್ಲ. ಆದ್ದರಿಂದ ವ್ಯಾಯಾಮಗಳಲ್ಲಿ ತೊಡಗಿಸುಕೊಳ್ಳುವುದು ಅಗತ್ಯ. ದೃಷ್ಟಿ ಕೋನದ ಅಭಾವ ‘ಆಲಿಸ್ ಇನ್ ವಂಡರ್ ಲ್ಯಾಂಡ್’ ಕೃತಿಯಲ್ಲಿಯ ಘಟನೆಯೊಂದು ನನಗೆ ನೆನಪಾಗುತ್ತಿದೆ. ಆಲಿಸ್ ಕಾಡಿನಲ್ಲಿ ಹೋಗುತ್ತಿರುವಾಗ ಮುಂದಿನ ದಾರಿ ಎಲ್ಲಿಗೆ ಹೋಗುತ್ತದೆ ಎಂದು ಬೆಕ್ಕನ್ನು ಕೇಳುತ್ತಾಳೆ. ಅದಕ್ಕೆ ಬೆಕ್ಕು ‘ನಿನಗೆಲ್ಲಿ ಹೋಗುವುದಿದೆ?’ ಎಂದು ಕೇಳುತ್ತದೆ.’ಎಲ್ಲೂ ಹೋದರೂ ನಡೆಯುತ್ತದೆ.’ ಎನ್ನುತ್ತಾಳೆ ಖಚಿತವಾಗಿ ಎಲ್ಲಿಗೆ ಹೋಗಬೇಕೆನ್ನುವುದು ನಿನಗೆ ಗೊತ್ತಿಲ್ಲವೆಂದರೆ ದಾರಿ ಎಲ್ಲೋ ಒಂದು ಕಡೆ ಕರೆದೊಯ್ಯುತ್ತದೆ ಹೋಗು.’ಖಚಿತ ಗುರಿ ಇಲ್ಲದಿದ್ದಾಗ ಹೀಗೆ ಎಲ್ಲಿ ಬೇಕಾದಲ್ಲಿ ಅಲೆದಾಡಿ ಸಮಯ ವ್ಯರ್ಥವಾಗುತ್ತದೆ..ಆದ್ದರಿಂದ ಖಚಿತ ಗುರಿ ಹೊಂದಬೇಕು. ಸಮಯದ ಅಪವ್ಯವ ತಡೆಯಲು ಮೂರು ‘ಸಿ’ಗಳನ್ನು ಅಳವಡಿಸಿಕೊಳ್ಳಿ. ಸೆರೆ ಹಿಡಿಯುವಿಕೆ. ಮಾಡ ಬೇಕಾದ ಕೆಲಸಗಳನ್ನು ಸೆರೆ ಹಿಡಿಯುವುದರಿಂದ ಉತ್ಪಾದಕತೆ, ಕಾರ‍್ಯಕ್ಷಮತೆ, ದಕ್ಷತೆ ಗುಣಿಸಿದಷ್ಟು ಹೆಚ್ಚುತ್ತವೆ. ಮೆದುಳು ನಮ್ಮ ದೇಹದ ಒಂದು ಚುರುಕಾದ ಅವಯವವಾದರೂ ಅದು ಸ್ವಭಾವದಲ್ಲಿ ಸೋಮಾರಿಯಾಗಿದೆ. ಬೇಕಾದದನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದಾಗೊಂದಿಷ್ಟು ನೆನಪಿಗೆ ಬರುತ್ತದೆ. ನೆನಪಾಗದಿದ್ದರೆ ನಮಗೆ ಒತ್ತಡ ಉಂಟಾಗುತ್ತದೆ.ಇದರಿಂದ ನಮ್ಮ ಮೆದುಳಿಗೆ ನಾವೇ ಘಾಸಿ ಮಾಡಿಕೊಳ್ಳುತ್ತೇವೆ ಎಂದು ಅನೇಕ ಸಂಶೋಧನೆಗಳ ವರದಿಗಳು ಹೇಳಿವೆ. ಅಷ್ಟೇ ಅಲ್ಲ ಕಾರ‍್ಯಕ್ಷಮತೆ ಮತ್ತು ಉತ್ಪಾದಕತೆಯ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಅತ್ಯಗತ್ಯವಾಗಿ ಬೇಕಾದ ವಿಚಾರಗಳನ್ನು ಬರೆದಿಡಲು ನೋಟ್ ಪ್ಯಾಡ್ ಒಂದನ್ನು ಬಳಿಸಿ. ಇಲ್ಲದಿದ್ದರೆ ಮೊಬೈಲ್‌ನಲ್ಲಿರುವ ನೋಟ್‌ನ್ನು ಬಳಸಿ.ಮೆದುಳಿನಿಂದ ತೆಗೆದು ಇದರಲ್ಲಿ ದಾಖಲಿಸಬೇಕು. ಯಾವುದು ಯಾವಾಗ ನೆನಪಾದರೂ ಅದರಲ್ಲಿ ಬರೆಯಲು ಸಾಧ್ಯ.ಮಾಡದೇ ಉಳಿದ ಕೆಲಸಗಳ ಪಟ್ಟಿಯೂ ಅದರಲ್ಲಿ ಗೊತ್ತಾಗುತ್ತದೆ. ಜಗತ್ಪçಸಿದ್ಧ ವರ್ಜಿನ್ ಗ್ರೂಪ್‌ನ ಮಾಲಿಕ ರಿಚರ್ಡ್ ಬ್ರಾನ್ಸನ್ ಯಾವಾಗಲೂ ತಮ್ಮ ಹತ್ತಿರ ಒಂದು ನೋಟ್ ಪ್ಯಾಡ್‌ನ್ನು ಇಟ್ಟುಕೊಳ್ಳುತ್ತಾರೆ.ಇದೊಂದು ತರ ಎಕ್ಸಟರ್ನಲ್ ಹಾರ್ಡ್ ಡಿಸ್ಕ್ ತರಾ. ಡಿಸ್ಕ್ ನಮ್ಮ ಮೆದುಳಿನ ಜಾಗವನ್ನು ಖಾಲಿ ಮಾಡಲು ಅನುಕೂಲವಾಗುತ್ತದೆ. ಮೆದುಳು ಮತ್ತೆ ಹೊಸದಾಗಿ ಆಲೋಚಿಸಲು ಉತ್ತೇಜನ ನೀಡಿದಂತಾಗುತ್ತದೆ. ಒತ್ತಡ ಕಡಿಮೆಯಾಗಿ ಏಕಾಗ್ರತೆ ಹೆಚ್ಚುತ್ತದೆ. ಇವೆಲ್ಲ ಕರ‍್ಯಕ್ಷಮತೆಯ ಮೇಲೆ ಅತ್ಯಧಿಕವೆನಿಸುವಷ್ಟು ಸುಧಾರಣೆ ತರುತ್ತವೆ. ಕ್ಯಾಲೆಂಡರ್ ಈ ಸಂಜೆ ನನಗೆ ಇಂಥ ಲೇಖನವನ್ನು ಓದುವುದಿದೆ. ನನ್ನ ಗೆಳೆಯ/ತಿಯ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸುವುದಿದೆ. ಇದು ಕಾಲೇಜ್ ಫೀ ತುಂಬಲು ಕೊನೆಯ ದಿನಾಂಕ. ಇವೆಲ್ಲವಕ್ಕೆ ನಿಗದಿತ ದಿನಾಂಕವನ್ನು ಗುರುತಿಸುವುದು.ಹೀಗೆ ಮಾಡುವುದರಿಂದ ಮೆದುಳು ರಿಲ್ಯಾಕ್ಸ್ ಆಗಿರುತ್ತದೆ. ಮತ್ತು ಮಾಡಲೇ ಬೇಕಾದ ಕೆಲಸಗಳು ಮಾಡಲಾಗದೇ ಉಳಿಯುವುದಿಲ್ಲ. ಸೆರೆಹಿಡಿಯುವರಿಂದ ಮತ್ತು ಕ್ಯಾಲೆಂಡರ್ ಬಳಿಸಿದ್ದರಿಂದ ಯಾವ ಕೆಲಸ ಯಾವಾಗ ಮಾಡುವುದಿದೆ ಎನ್ನುವುದರ ಬಗೆಗೆ ಸಂಪೂರ್ಣ ಚಿತ್ರಣ ಸಿಗುತ್ತದೆ. ಬೆಳಿಗ್ಗೆದ್ದು ಕ್ಯಾಲೆಂಡರ್ ನೋಡಿದರೆ ಸಾಕು ಇಂದು ನಾನು ಯಾವ ಮುಖ್ಯ ಕೆಲಸಗಳನ್ನು ಮಾಡಬೇಕಾಗಿದೆ ಎನ್ನುವ ದೃಶ್ಯ ಕಣ್ಮುಂದೆ ಬರುತ್ತದೆ. ರಾತ್ರಿ ಮಲಗುವಾಗ ಅಂದು ನಿಗದಿಪಡಿಸಿದ್ದ ಕೆಲಸಗಳೆಲ್ಲ ಮಾಡಿ ಆಯಿತೇ? ಎಂದು ಚೆಕ್ ಮಾಡಿಕೊಳ್ಳಬೇಕು. ಉಳಿದಿದ್ದರೆ ಮತ್ತೆ ಅದನ್ನು ಎಂದು ಮಾಡಲಾಗುವುದು ಎಂದು ಕ್ಯಾಲೆಂಡರ್‌ನಲ್ಲಿ ಗುರುತಿಸಿಕೊಳ್ಳುವುದು. ಇದರಿಂದ ಸಮಯ ನರ‍್ವಹಣೆಯೂ ಆಗುತ್ತದೆ ಮತ್ತು ಮಾಡುವ ಕೆಲಸಗಳಿಗೆ ಸರಿಯಾದ ದಿಕ್ಕು ಸಿಗುತ್ತದೆ. ಏಕಾಗ್ರತೆ ಮೊದಲನೆಯ ‘ಸಿ’ ಕ್ಯಾಪ್ಚರ್ ಮೆದುಳಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಎರಡನೇ ‘ಸಿ’ ಕ್ಯಾಲೆಂಡರ್ ಯಾವ ಯಾವ ಕೆಲಸ ಯಾವಾಗ ಎನ್ನುವ ಸ್ಪಷ್ಟ ಚಿತ್ರಣವನ್ನು ನೀಡುತ್ತವೆ. ಸರಿಯಾದ ಫಲಿತಾಂಶ ಪಡೆಯಲು ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದು. ಬೇರೆ ಬೇರೆ ವಿಚಾರಗಳು ಮನಸ್ಸಿನೊಳಗೆ ಸದ್ದು ಮಾಡತೊಡಗಿದರೆ ಅವುಗಳನ್ನು ನೋಟ್ ಪ್ಯಾಡಿನಲ್ಲಿ ಬರೆದರೆ, ಮೆದುಳು ಮತ್ತೆ ಕಾರ‍್ಯದತ್ತ ಕೇಂದ್ರೀಕರಿಸಿ ಅಡೆತಡೆಗಳಿಲ್ಲದ ಕೆಲಸ ಮಾಡಲು ಸಾಧ್ಯ. ಸಾಮಾನ್ಯವಾಗಿ ಏಕಾಗ್ರತೆ ಮುಂಜಾನೆ ಹೆಚ್ಚಿರುತ್ತದೆ. ಮುಖ್ಯವಾದ ಕೆಲಸಗಳನ್ನು ಮುಂಜಾನೆಯೇ ಮಾಡಿ ಮುಗಿಸುವುದು ಸೂಕ್ತ. ಇದರಿಂದ ಮುಖ್ಯವಾದ ಕೆಲಸಗಳನ್ನು ಚೆನ್ನಾಗಿ ಬೇಗ ಮುಗಿಸಲು ಸಾಧ್ಯವಾಗುವುದು. ‘ಸಿಂಹವೂ ಸಹ ಮೊದಲು ಎರಡು ಹೆಜ್ಜೆ ಹಿಂದೆ ಹೋಗಿ ಬೇಟೆ ಆಡುತ್ತದೆ.’ ಹಾಗೆಯೇ ನಾವೂ ಸಹ ಏಕಾಗ್ರತೆ ಆಗುತ್ತಿಲ್ಲವೆಂದರೆ ಸ್ವಲ್ಪ ಹೊತ್ತು ವಿರಾಮ ಪಡೆದು ಕೆಲಸಕ್ಕೆ ಮರಳುವುದು ಒಳ್ಳೆಯದು. ಈ ಎರಡು ಹೆಜ್ಜೆಗಳ ವಿರಾಮ ಪಡೆಯುವುದರಿಂದ ಪುನಃಶ್ಚೇತನ್ಯ ಉಂಟಾಗುತ್ತದೆ. ಬದುಕಿನ ಪ್ರತಿ ಕ್ಷಣವನ್ನು ಸುಸಂಘಟಿತವಾಗಿ, ಉತ್ಪಾದನಶೀಲ, ಶಿಸ್ತು ಬದ್ಧ ಮಾಡಬೇಕೆಂದರೆ ಈ ಮೂರು ‘ಸಿ’ ಗಳನ್ನು ಅಳವಡಿಸಿಕೊಳ್ಳುವುದು ಬಹು ಮುಖ್ಯ. ಈ ರೀತಿಯ ಕರ‍್ಯ ನರ‍್ವಹಣೆಯು ಸಮಯದ ಅಪವ್ಯವನ್ನು ತಡೆಯುವುದಲ್ಲದೇ ಕಾರ‍್ಯಕ್ಷಮತೆ ಮತ್ತು ಫಲಿತಾಂಶವನ್ನು ಅಧಿಕಗೊಳಿಸುತ್ತದೆ. ‘ನಿಮ್ಮ ಪ್ರಪಂಚದಲ್ಲಿ ನೀವು ಬಹಳಷ್ಟು ಆಶಿಸುವ ಬದಲಾವಣೆ ನೀವಾಗಿ.’ ಎನ್ನುವ ಗಾಂಧೀಜಿಯವರ ಮಾತನ್ನು ಅಳವಡಿಸಿಕೊಂಡರೆ ಸಮಯದ ಸವಿ ಸವಿಯಲು ಸಾಧ್ಯ. ********

ಪ್ರಸ್ತುತ Read Post »

You cannot copy content of this page

Scroll to Top