ಧಾರಾವಾಹಿ ಆವರ್ತನ ಅದ್ಯಾಯ-34 ಆವರ್ತನ ಅಧ್ಯಾಯ: 34 ಗುರೂಜಿಯವರು ತಾವು ಮಸಣದ ಗುಡ್ಡೆಯ ನಾಗಬನವನ್ನು ಜೀರ್ಣೋದ್ಧಾರಗೊಳಿಸಲು ಇಚ್ಛಿಸಿದ ಕಾರ್ಯಕ್ಕೆ ಸಂಬಂಧ ಪಟ್ಟ ಹೊಸ ವಿಚಾರವೊಂದನ್ನು ಇತ್ಯಾರ್ಥಗೊಳಿಸಲು ಮನಸ್ಸು ಮಾಡಿ ಫೋನೆತ್ತಿಕೊಂಡವರು, ‘ಓಂ ನಾಗಾಯ ನಮಃ…!’ ಎಂದು ಭಾವಪೂರ್ಣವಾಗಿ ಅಂದು, ‘ನಮಸ್ಕಾರ ರೋಹಿತ್ ಅವರೇ… ನಾವು ಏಕನಾಥ ಗುರೂಜಿಯವರು ಮಾತಾಡ್ತಿರೋದು ಹೇಗಿದ್ದೀರೀ ತಾವು…?’ ಎಂದು ವಿಚಾರಿಸಿದರು. ರೋಹಿತ್ ಈಶ್ವರಪುರದ ಒಬ್ಬ ಪ್ರಸಿದ್ಧ ಉರಗಪ್ರೇಮಿ. ಅವನು ತನ್ನ ನಾಡಿನ ಅಪೂರ್ವ ಉರಗಸಂತತಿಯನ್ನು ಸಂರಕ್ಷಣೆ ಮಾಡುತ್ತ ಬಂದವನಲ್ಲದೇ ಆ ಸರೀಸೃಪ ಜೀವವರ್ಗಗಳಿಂದ ಪ್ರಕೃತಿಗೂ ಮತ್ತು ಮುಖ್ಯವಾಗಿ ಮಾನವ ಪರಿಸರಕ್ಕೂ ದೊರಕುತ್ತಿರುವಂಥ ವಿವಿಧ ರೂಪದ ಉಪಕಾರಗಳು ಹಾಗೂ ನಿಸರ್ಗದಲ್ಲಿ ಆ ಜೀವರಾಶಿಗಳ ಪಾತ್ರ ಮತ್ತು ಮಹತ್ವಗಳು ಯಾವ ಬಗೆಯವು ಎಂಬಂಥ ಹತ್ತು ಹಲವು ವಿಚಾರಗಳ ಕುರಿತು ಅನೇಕ ವರ್ಷಗಳಿಂದ ಅಧ್ಯಯನ ಮಾಡುತ್ತ ಬಂದವನು. ಜೊತೆಗೆ ಒಂದಷ್ಟು ಜನರ ಪ್ರಕೃತಿ ವಿರೋಧಿ ಚಟುವಟಿಕೆ ಮತ್ತು ಜೀವನಕ್ರಮಗಳಿಂದ ಆಗಾಗ ಘಾಸಿಗೊಳ್ಳುವ ವಿವಿಧ ಜಾತಿಯ ಹಾವುಗಳನ್ನು ತಂದು ಶುಶ್ರೂಷೆ ನೀಡುವ ಸೇವೆಯಲ್ಲೂ ಸಾರ್ಥಕತೆಯನ್ನು ಕಾಣುತ್ತಿರುವವನು. ಅಷ್ಟಲ್ಲದೇ ಹಾವುಗಳು ಮತ್ತವುಗಳ ಮೇಲಿನ ಜನರ ನಂಬಿಕೆಗಳು ಹಾಗೂ ವಿಶೇಷತೆಗಳ ಕುರಿತು ಪತ್ರಿಕೆಗಳಿಗೂ ನಿರಂತರ ಬರೆಯುತ್ತ ಜನಜಾಗ್ರತಿ ಮೂಡಿಸುತ್ತ ಬರುತ್ತಿರುವವನು.ಹೀಗಾಗಿ ಅವನಿಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳು ಮತ್ತು ಜನರ ಪ್ರೀತಿ, ಬೆಂಬಲಗಳೂ ಸಹಜವಾಗಿಯೇ ಒಲಿದು ಬಂದಿದ್ದವು.ಗುರೂಜಿಯವರಿಗೆ ರೋಹಿತ್ನ ಈ ಎಲ್ಲ ಕಾರ್ಯ ಚಟುವಟಿಕೆಗಳ ಕುರಿತು ಚೆನ್ನಾಗಿ ತಿಳಿದಿತ್ತು.ಹಾಗಾಗಿ ಅವರಿಂದು ಅವನನ್ನು ಪರಿಚಯಿಸಿಕೊಳ್ಳಲಿಚ್ಛಿಸಿ ಶಂಕರನಿಂದ ಫೋನ್ ನಂಬರ್ ಪಡೆದುಕೊಂಡು ಕರೆ ಮಾಡಿದ್ದರು.ಅತ್ತಲಿಂದ ರೋಹಿತನೂ ಕರೆ ಸ್ವೀಕರಿಸಿದ. ಅವನಿಗೂ ಗುರೂಜಿಯವರ ಕುರಿತು ತಿಳಿದಿತ್ತು.ಹಾಗಾಗಿ ಅವರೊಡನೆ ಮಾತಾಡುವ ಆಸಕ್ತಿ ಉಂಟಾಗದಿದ್ದರೂ ಶಿಷ್ಟಾಚಾರಕ್ಕೆ, ‘ನಮಸ್ಕಾರ ಸರ್ ಹೇಳಿ…?’ ಎಂದ. ‘ಏನಿಲ್ಲ ರೋಹಿತರೇ, ನಿಮ್ಮ ಬಗ್ಗೆ ಬಹಳಷ್ಟು ಕೇಳಿದ್ದೇವೆ ಮತ್ತು ಓದಿದ್ದೇವೆ.ಪ್ರಕೃತಿಗೂ ನಾಗಸಂತತಿಗೂ ನೀವು ಮಾಡುತ್ತಿರುವ ಸೇವೆ ನಿಜಕ್ಕೂ ಶ್ರೇಷ್ಠವಾದದ್ದು.ಆ ಸುಬ್ರಹ್ಮಣ್ಯ ಮತ್ತು ಆದಿಶೇಷರ ಆಶೀರ್ವಾದಗಳು ಸದಾ ನಿಮ್ಮ ಮೇಲಿರುತ್ತವೆ.ಹಾಗಾಗಿಯೇ ನೀವಿಂದು ನಮ್ಮ ರಾಜ್ಯದ್ಯಂತ ಪ್ರಸಿದ್ಧಿ ಪಡೆದಿದ್ದೀರಿ…!’ ಎಂದು ಹೊಗಳಿದರು. ರೋಹಿತ್ಗೆ ಮುಜುಗರವಾಯಿತು.‘ಹಾಗೇನಿಲ್ಲ ಸರ್.ನಾನೂ ಎಲ್ಲರಂತೆಯೇ ಬದುಕುತ್ತಿರುವವನು.ಆದರೆ ಜೀವನವೆಂದ ಮೇಲೆ ಅದಕ್ಕೊಂದು ಚಟುವಟಿಕೆ ಮತ್ತು ಅರ್ಥವಿರಬೇಕೆಂದು ಅನ್ನಿಸಿದ್ದರಿಂದ ಈ ಹವ್ಯಾಸಕ್ಕೆ ಅಂಟಿಕೊಂಡೆ.ನೀವು ಹೇಳಿದಂತೆ ನನ್ನ ಕಾಯಕಕ್ಕೆ ದೇವರ ಆಶೀರ್ವಾದವೂ ದೊರಕಿರುವುದು ನನ್ನ ಪುಣ್ಯ. ಹ್ಞಾಂ! ಹಾಗಂತ ನನ್ನದೇನೂ ನಿಸ್ವಾರ್ಥ ಸೇವೆಯಲ್ಲ ಸರ್.ನನ್ನ ಕುಟುಂಬ ನಿರ್ವಹಣೆಗೆ ಅದೆಷ್ಟು ಬೇಕೋ ಅಷ್ಟನ್ನು ನನ್ನ ಹವ್ಯಾಸವೇ ಒದಗಿಸುತ್ತಿದೆ.ನಿಮ್ಮ ಹಾರೈಕೆಗೆ ಥ್ಯಾಂಕ್ಸ್!’ ಎಂದ. ‘ಅರೆರೇ, ಹಾಗಲ್ಲ ರೋಹಿತರೇ…! ನಿಮ್ಮ ಹವ್ಯಾಸವನ್ನು ನೀವು ಅಷ್ಟೊಂದು ಹಗುರವಾಗಿ ಭಾವಿಸಬೇಡಿ ಮತ್ತು ನಿಮ್ಮ ಕಾರ್ಯಕ್ಷೇತ್ರ ನಿಮ್ಮದೇ ಆಯ್ಕೆ ಎಂದು ಕೂಡಾ ತಿಳಿಯಬೇಡಿ. ಅದೆಲ್ಲ ನೀವು ನಿಮ್ಮ ಪೂರ್ವಜನ್ಮದಲ್ಲಿ ಮಾಡಿದ ಸತ್ಕಾರ್ಯದ ಫಲವೇ ಸರಿ! ಆದ್ದರಿಂದಲೇ ನಿಮ್ಮ ಸೇವೆಯನ್ನು ಎಲ್ಲರೂ ಹೊಗಳುವಂತಾಗಿರುವುದು! ಅಲ್ಲದೇ ಇನ್ನೊಂದು ಮಾತನ್ನೂ ಹೇಳುತ್ತೇವೆ ಕೇಳಿ. ಹಾವು ಹಿಡಿಯುವವರು ಬೇಕಾದಷ್ಟು ಜನ ಸಿಗುತ್ತಾರೆ ರೋಹಿತರೇ! ಆದರೆ ನಿಮ್ಮಂತೆ ಆ ಜೀವಿಗಳ ಮೇಲೆ ನಿಜವಾದ ಪೀತಿ ಮತ್ತು ಕಾಳಜಿಯಿಟ್ಟುಕೊಂಡು ಅವುಗಳೊಂದಿಗೇ ಬದುಕುವುದಿದೆಯಲ್ಲ ಅದು ಎಲ್ಲರಿಂದಲೂ ಸಾಧ್ಯವಾಗುವಂಥದ್ದಲ್ಲ. ಅದಕ್ಕೆ ಭಾರಿ ಧೈರ್ಯವೂ ಸಾಹಸವೂ ಬೇಕಾಗುತ್ತದೆ. ಅದೆಲ್ಲ ನಿಮ್ಮಲ್ಲಿದೆ.ಹಾವುಗಳ ಕುರಿತು ನೀವು ಜನರಲ್ಲಿರುವ ಅಜ್ಞಾನವನ್ನು ನಿವಾರಿಸುವಂಥ ಉಪನ್ಯಾಸಗಳನ್ನೂ ನೀಡುತ್ತಿರುವುದನ್ನು ಗಮನಿಸುತ್ತಿದ್ದೇವೆ.ಹಾಗಾಗಿಯೇ ಇವತ್ತು ನಿಮ್ಮೊಂದಿಗೆ ಮಾತಾಡಲು ನಮಗೆ ಮನಸ್ಸಾದುದು.ನಾವು ನಿಮ್ಮನ್ನು ಹೊಗಳಿದೆವು ಅಂತ ದಯವಿಟ್ಟು ಭಾವಿಸಬೇಡಿ!’ ಎಂದು ಗುರೂಜಿಯವರು ಅವನ ಮನಸ್ಸಿಗೆ ನಾಟುವಂತೆಯೂ ಮತ್ತು ತಮ್ಮ ಬಗ್ಗೆ ಅವನಲ್ಲಿ ಸದಾಭಿಪ್ರಾಯ ಮೂಡುವಂತೆಯೂ ಮಾತಾಡಿದರು. ಆದರೆ ಅವನ ಹವ್ಯಾಸ ಹಾಗೂ ಆ ಕುರಿತು ಅವನ ಜ್ಞಾನವನ್ನು ತಿಳಿದಿದ್ದ ಊರಿನ ಬಹುತೇಕರು ಒಂದಲ್ಲ ಒಂದು ಸಂದರ್ಭದಲ್ಲಿ ಅವನನ್ನು ಇದೇ ರೀತಿ ಪ್ರಶಂಸಿಸುತ್ತ ಬರುತ್ತಿದ್ದುದರಿಂದ ಇಂದು ಗುರೂಜಿಯವರ ಮಾತಿನಿಂದ ಅವನಿಗೆ ಖುಷಿಯೊಂದಿಗೆ ಅತೀವ ಸಂಕೋಚವೂ ಮೂಡಿತು. ‘ಎಲ್ಲಾ ತಮ್ಮಂಥವರ ಆಶೀರ್ವಾದ ಸರ್…!’ ಎಂದಷ್ಟೇ ಹೇಳಿ ಸುಮ್ಮನಾದ. ‘ನಮ್ಮ ಆಶೀರ್ವಾದ ಮತ್ತು ಹಾರೈಕೆಗಳು ಸದಾ ನಿಮ್ಮೊಂದಿಗೆ ಇರುತ್ತವೆ ರೋಹಿತರೇ.ಯಾಕೆಂದರೆ ನಾವು ಕೂಡಾ ನಿಮ್ಮ ಹಾಗೆಯೇ ಬೇರೊಂದು ರೀತಿಯಲ್ಲಿ ನಾಗನ ಸೇವೆ ಮಾಡುತ್ತ ಬರುತ್ತಿರುವವರು.ಆ ಸೇವೆಯಲ್ಲಿ ಸಿಗುವ ಒಂದು ಸಣ್ಣ ಮೊತ್ತವನ್ನು ನಿಮ್ಮಂಥವರ ಸತ್ಕಾರ್ಯಕ್ಕೂ ವಿನಿಯೋಗಿಸಬೇಕೆಂಬುದು ನಮ್ಮ ಬಹಳ ದಿನದ ಆಸೆಯಾಗಿತ್ತು.ಹಾಗಾಗಿ ನಿಮ್ಮನ್ನೊಮ್ಮೆ ಭೇಟಿಯಾಗಬೇಕು.ಅದಕ್ಕೆ ಯಾವಾಗ ಬರಬಹುದು ನಾವು…?’ ಎಂದರು ಆತ್ಮೀಯವಾಗಿ.ಆದರೆ ಅಷ್ಟು ಕೇಳಿದ ರೋಹಿತ್ನಿಗೆ ಪೇಚಾಟಕ್ಕಿಟ್ಟುಕೊಂಡಿತು. ಆದರೂ ಸಂಭಾಳಿಸಿಕೊಂಡವನು, ‘ಅಯ್ಯೋ ಸರ್ ತಾವು ಯಾವತ್ತು ಬೇಕಿದ್ದರೂ ಬರಬಹುದು.ಆದರೆ ನನಗೀಗ ಹಣದ ಅವಶ್ಯಕತೆಯಿಲ್ಲ. ಆ ವಿಷಯದಲ್ಲಿ ದಯವಿಟ್ಟು ಕ್ಷಮಿಸಬೇಕು!’ ಎಂದು ನಯವಾಗಿ ನಿರಾಕರಿಸಿದ. ಅದರಿಂದ ಗುರೂಜಿ ತುಸು ನಿರಾಶರಾದರು.ಆದರೂ ಪ್ರಯತ್ನ ಬಿಡದೆ, ‘ಸರಿ ರೋಹಿತರೇ, ನೀವು ಬಹಳ ಸ್ವಾಭಿಮಾನಿ ಅಂಥ ತಿಳಿಯುತ್ತದೆ.ಹಾಗಾಗಿಯೂ ನಿಮ್ಮನ್ನು ಆದಷ್ಟು ಬೇಗ ಭೇಟಿಯಾಗಲು ಬಯಸುತ್ತೇವೆ.ನಾಳೆ ಬಂದರೆ ಹೇಗೆ…?’ ಎಂದು ಅಮಾಯಕರಂತೆ ಪ್ರಶ್ನಿಸಿದರು. ‘ಖಂಡಿತವಾಗಿಯೂ ಬನ್ನಿ ಸರ್..!’ ಎಂದ ರೋಹಿತ್. ಗುರೂಜಿಯವರು ಮರುದಿನ ಮುಂಜಾನೆ ರೋಹಿತ್ಗೆ ಕರೆ ಮಾಡಿ ತಾವು ಹೊರಟಿರುವುದನ್ನು ತಿಳಿಸಿದರು.ಯಾವುದಕ್ಕೂ ಘನತೆಗಿರಲಿ ಎಂದುಕೊಂಡು ಒಬ್ಬ ಸಹಾಯಕನನ್ನೂ ಕರೆದುಕೊಂಡು ದೊಡ್ಡ ಟ್ಯಾಕ್ಸಿಯೊಂದರಲ್ಲಿ ರೋಹಿತ್ನ ಮನೆಗೆ ಹೋದರು. ಗುರೂಜಿಯವರ ವೇಷ ಭೂಷಣವನ್ನೂ, ಮತ್ತವರ ಎದೆಯ ಮೇಲೆ ತೂಗಾಡುತ್ತಿದ್ದ ವಿವಿಧ ದೇವತಾ ಮೂರ್ತಿಗಳಿದ್ದ ಅನೇಕ ಮಾಲೆಗಳನ್ನೂ ಕಂಡ ರೋಹಿತ್ ಕಸಿವಿಸಿಯಾಗಿಬಿಟ್ಟ. ಆದರೂ ತನ್ನ ಪುಟ್ಟ ಮನೆಗೆ ಅವರನ್ನು ಆದರದಿಂದ ಸ್ವಾಗತಿಸಿದ. ಅಂಗಳದಲ್ಲಿಯೇ ಕುರ್ಚಿಗಳನ್ನು ಹಾಕಿ ಅವರನ್ನು ಕುಳ್ಳಿರಿಸಿ ಕುಶಲೋಪರಿ ವಿಚಾರಿಸಿದ. ಗುರೂಜಿಯವರು ಸರಳ ಸಜ್ಜನಿಕೆಯ ಮೂರ್ತಿಯಂತೆ ಅವನೆದುರು ಕುಳಿತು ಮಾತಿಗಿಳಿದರು. ಅವನ ಸಾಧನೆ ಮತ್ತು ಪರಿಶ್ರಮವನ್ನು ಮರಳಿ ಪದೇಪದೇ ಹೊಗಳುತ್ತ ಒಲಿಸಿಕೊಳ್ಳಲು ಪ್ರಯತ್ನಿಸಿದರು.ಅದರಿಂದ ಅವನಿಗೂ ತಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಮೂಡಿದಂತೆ ಅವರಿಗನ್ನಿಸಿತು.ಹಾಗಾಗಿ ಸುಮಾರು ಹೊತ್ತಿನ ಮಾತುಕತೆಯ ನಂತರ ತಾವು ಬಂದ ವಿಷಯದತ್ತ ಗಮನ ಹರಿಸಿದವರು ತಮ್ಮ ಸಹಾಯಕನಿಗೇನೋ ಸಜ್ಞೆ ಮಾಡಿದರು. ಅವನು ಕೂಡಲೇ ಕಾರಿನತ್ತ ಓಡಿಹೋಗಿ ಒಂದು ದೊಡ್ಡ ಚೀಲವನ್ನು ಹೊತ್ತು ತಂದ. ಅದರೊಳಗಿದ್ದ ಹಿತ್ತಾಳೆಯ ಹರಿವಾಣವನ್ನು ತೆಗೆದಿರಿಸಿದ. ಸೇಬು ಚಿಕ್ಕು ಮೋಸಂಬಿ ಮತ್ತು ಬಾಳೆಹಣ್ಣುಗಳನ್ನು ಆ ಹರಿವಾಣದಲ್ಲಿ ಓಪ್ಪವಾಗಿ ಜೋಡಿಸಿದ. ಗಂಧದ (ಅಕೇಶಿಯಾ ಮರದ ಕೀಸುಳಿಯಿಂದ ತಯಾರಿಸಿ, ತುಸು ಗಂಧದ ಪರಿಮಳವನ್ನು ಅದಕ್ಕೆ ಸಿಂಪಡಿಸಿ ಶ್ರೀಗಂಧದ ಹಾರವೆಂದು ಮಾರಾಟ ಮಾಡುವ ಮಾಲೆ!) ಹಾರವನ್ನೂ ರೇಶ್ಮೆಯ ಶಾಲನ್ನೂ ತೆಗೆದು ಗುರೂಜಿಯವರ ಕೈಗಿತ್ತ. ಆಗ ರೋಹಿತ್ಗೆ, ಗುರೂಜಿಯವರು ಸಾಧಕರ ಮನೆ ಬಾಗಿಲಿಗೇ ಬಂದು ಅವರನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂಬುದು ಮನವರಿಕೆಯಾಯಿತು. ಅವನು ಸಂಕೋಚದಿಂದ ಹಿಡಿಯಾದ. ಆದರೂ ತನ್ನ ಒಳಮನಸ್ಸು ಆನಂದದಿಂದ ಅರಳಿದ್ದನ್ನೂ ಗಮನಿಸಿದ. ಜೊತೆಗೆ ಈ ಗುರೂಜಿಯವರ ಸನ್ಮಾನವನ್ನು ಸ್ವೀಕರಿಸಬೇಕೋ, ಬಿಡಬೇಕೋ ಎಂಬ ಗೊಂದಲಕ್ಕೂ ಬಿದ್ದ. ಆದರೆ ಅವನ ಯಾವ ಯೋಚನೆಗಳಿಗೂ ಆಸ್ಪದವಿಲ್ಲದಂತೆ ಗುರೂಜಿಯವರು ತಟ್ಟನೆ ಎದ್ದು ನಿಂತರು. ನಗುತ್ತ ಅವನ ಕೊರಳಿಗೆ ಗಂಧದ ಮಾಲೆ ತೊಡಿಸಿ ಫಲಪುಷ್ಪಾದಿಗಳು ತುಂಬಿದ ಹರಿವಾಣವನ್ನು ಅವನ ಮಡಿಲಲ್ಲಿಟ್ಟು ಪ್ರಶಸ್ತಿ ಫಲಕದ ಬದಲಾಗಿ ಕಾವಿ ಬಟ್ಟೆಯ ಸಣ್ಣದೊಂದು ಗಂಟನ್ನು ಅವನ ಕೈಯಲ್ಲಿಟ್ಟು ಪುರಸ್ಕರಿಸಿದರು. ಗುರೂಜಿಯವರ ಅಭಿಮಾನಕ್ಕೆ ರೋಹಿತ್ ತುಸುಹೊತ್ತು ಮೂಕನಾದ. ಅವರ ಪಾದಗಳೆದುರು ಡೊಗ್ಗಾಲು ಬಿದ್ದು ನಮಸ್ಕರಿಸಿದ. ಗುರೂಜಿಯವರು ಅವನ ಹಿಂತಲೆಗೆ ಹಸ್ತಗಳನ್ನಿಟ್ಟು, ‘ನೂರು ಕಾಲ ಸಮಾಜಸೇವೆ ಮಾಡುತ್ತ ಪ್ರಸಿದ್ಧಿವಂತನಾಗಿ ಬಾಳು!’ ಎಂದು ಹರಸಿದರು. ತಮ್ಮ ಮನೆಗೆ ಧಾರ್ಮಿಕ ಗುರುಗಳೊಬ್ಬರು ಬಂದು ಕುಳಿತುಕೊಂಡು ತಮ್ಮೊಡನೆ ಪ್ರೀತಿಯಿಂದ ಮಾತನಾಡಿದ್ದು ರೋಹಿತ್ನ ತಾಯಿಗೆ ಮಠದ ಶ್ರೀ ಸ್ವಾಮಿಗಳೇ ಆಗಮಿಸಿದಷ್ಟು ಆನಂದವಾಗಿದ್ದರೆ ಅವನ ಹೆಂಡತಿಗೂ ಗುರೂಜಿಯವರು, ‘ಪ್ರತಿಯೊಬ್ಬ ಸಾಧಕನ ಯಶಸ್ಸಿನ ಹಿಂದೆ ಅವನ ಹೆಂಡತಿಯ ಪಾತ್ರವೂ ಅಷ್ಟೇ ಮಹತ್ವದ್ದಾಗಿರುತ್ತದೆ!’ ಎಂಬ ಮಾತನ್ನು ಒತ್ತಿ ಹೇಳಿದ್ದು ಮತ್ತು ತಮ್ಮಿಬ್ಬರನ್ನೂ ಅವರು ಯದ್ವಾತದ್ವ ಹೊಗಳಿ ಅಟ್ಟಕೇರಿಸಿ ಆಶೀರ್ವದಿಸಿದ್ದೆಲ್ಲವೂ ಅವಳಿಗೆ ಹೇಳತೀರದಷ್ಟು ಖುಷಿಕೊಟ್ಟಿತ್ತು. ಹಾಗಾಗಿ ಅವರಿಬ್ಬರೂ ಮಕ್ಕಳೊಂದಿಗೆ ಗುರೂಜಿಯವರ ಪಾದಕ್ಕೆ ಸಾಷ್ಟಾಂಗ ಬಿದ್ದು ಎದ್ದವರು ಇವತ್ತಿಗೆ ತಮ್ಮ ಜನ್ಮ ಸಾರ್ಥಕವಾಯಿತು ಎಂದುಕೊಂಡು ರೋಮಾಂಚಿತರಾದರು.ಅವರನ್ನು ಮನದುಂಬಿ ಹರಸಿದ ಗುರೂಜಿಯವರು ತಮ್ಮ ಕೆಲಸವಾಗುತ್ತಲೇ ರೋಹಿತ್ನಿಂದ ಬೀಳ್ಗೊಂಡು ಹಿಂದಿರುಗಿದರು.ಅವರು ಹೋದ ಬಳಿಕ ರೋಹಿತ್ ಅವರು ನೀಡಿದ್ದ ಕಾವಿಯ ಗಂಟನ್ನು ಬಿಚ್ಚಿದ. ಅದರಲ್ಲಿ ಒಂದು ಕುಂಕುಮದ ಕಟ್ಟಿನೊಂದಿಗೆ ಹತ್ತು ರೂಪಾಯಿ ನೋಟಿನ ಮೂರು ಕಟ್ಟುಗಳಿದ್ದವು.ಅದನ್ನು ಕಂಡವನಿಗೆ ಹಿಂಸೆಯಾಯಿತು.ಆದರೆ ಅವನಿಗೆ ಹಣದ ಅವಶ್ಯಕತೆ ಇರಲಿಲ್ಲವೆಂದಲ್ಲ. ಹಾವುಗಳ ಶುಶ್ರೂಷೆಗೆ ಬೇಕಾಗುವ ವಿವಿಧ ಔಷಧಿ ಮತ್ತು ಅವನ್ನಿಟ್ಟುಕೊಳ್ಳುವ ಪಂಜರಗಳಿಗೆ ಸದಾ ದುಡ್ಡಿನ ಅಗತ್ಯ ಬೀಳುತ್ತಿತ್ತು. ಆದರೆ ಅದನ್ನು ಅವನು ಎಲ್ಲರಿಂದಲೂ ಸ್ವೀಕರಿಸುತ್ತಿರಲಿಲ್ಲ. ಮೂಕ ಜೀವರಾಶಿಗಳ ಮೇಲೆ ನಿಜವಾದ ಪ್ರೀತಿಯಿದ್ದು ಪ್ರಚಾರದ ಗೀಳಿಲ್ಲದಂಥ ಜನರು ಅವರಾಗಿ ಬಂದು ನೀಡಿದರೆ ಸ್ವೀಕರಿಸುತ್ತಿದ್ದ. ಆದರೂ ಇಂದು ಯಾಕೋ ಅವನಿಗೆ ಈ ಹಣವನ್ನು ಗುರೂಜಿಯವರಿಗೇ ಹಿಂದಿರುಗಿಸಬೇಕು ಎಂದೆನ್ನಿಸಿಬಿಟ್ಟಿತು. ಕೂಡಲೇ ಕರೆ ಮಾಡಿದ. ‘ಹಲೋ ಸರ್, ನಮಸ್ಕಾರ…!’ ಎಂದ. ‘ಓಂ ನಾಗಾಯ ನಮಃ ಹೇಳಿ ರೋಹಿತರೇ…?’ ಎಂದರು ಗುರೂಜಿ. ‘ಸರ್ ತಪ್ಪು ತಿಳಿದುಕೊಳ್ಬೇಡಿ.ತಾವು ನನ್ನ ಮನೆ ಬಾಗಿಲಿಗೇ ಬಂದು ನನ್ನನ್ನು ಗೌರವಿಸಿರುವುದರ ಕುರಿತು ಅಪಾರ ಅಭಿಮಾನವಿದೆ. ಆದರೆ ಅದರೊಂದಿಗೆ ತಾವು ಹಣವನ್ನೂ ನೀಡಿರುವುದು ನನಗ್ಯಾಕೋ ಸರಿಬರುತ್ತಿಲ್ಲ. ದಯವಿಟ್ಟು ತಾವು ಅದನ್ನು ಹಿಂದೆ ಪಡೆಯಬೇಕು. ಈ ವಿಷಯದ ಕುರಿತು ನಾನು ನಿನ್ನೆಯೇ ತಮಗೆ ತಿಳಿಸಿದ್ದೆ!’ ಎಂದ ನಯವಾಗಿ. ಅರೆರೇ, ಇವನೆಂಥ ಹುಚ್ಚನಪ್ಪಾ…? ಕಾಲಬುಡಕ್ಕ ಬಂದಂಥ ಲಕ್ಷ್ಮಿಯನ್ನು ದೂರತಳ್ಳುವ ಇವನಿಗೆ ಇನ್ನೂ ಬದುಕುವ ದಾರಿಯೇ ತಿಳಿದಿಲ್ಲ ಮೂರ್ಖನಿಗೆ!’ ಎಂದು ಮನಸ್ಸಿನಲ್ಲೇ ಬೈದುಕೊಂಡ ಗುರೂಜಿಯವರು, ‘ಅಯ್ಯಯ್ಯೋ ರೋಹಿತರೇ… ನಮ್ಮನ್ನು ತಪ್ಪು ತಿಳಿಯಬೇಡಿ! ನೀವು ತುಂಬಾ ಸ್ವಾಭಿಮಾನಿ ಅಂತ ಗೊತ್ತು.ಹಾಗಾಗಿ ಆ ಹಣವನ್ನು ನಾವು ನಿಮ್ಮ ಸ್ವಂತ ಖರ್ಚಿಗೆಂದು ಕೊಟ್ಟದ್ದಲ್ಲ. ನೀವು ಚಿಕಿತ್ಸೆ ಮಾಡುವ ನಾಗನ ಸಂತತಿಗೆ ನಮ್ಮಿಂದಲೂ ಸ್ವಲ್ಪ ಸಹಾಯವಾಗಲಿ ಅಂತ ಒಂದು ಸಣ್ಣ ಕಾಣಿಕೆಯಷ್ಟೆ.ನಮ್ಮ ಮೇಲೆ ಬೇಸರವಾಗಿದ್ದರೆ ಕ್ಷಮಿಸಿಬೇಕು!’ ಎಂದು ಕೃತಕ ನಮ್ರತೆಯಿಂದ ಮಾತಾಡಿದರು. ಆಗ ರೋಹಿತ್ನಿಗೆ ಏನು ಹೇಳಲೂ ತೋಚಲಿಲ್ಲ. ಆದ್ದರಿಂದ, ‘ಹಾಗಾದರೆ ಸರಿ ಸರ್.ನಿಮ್ಮಿಚ್ಛೆಯಂತೆಯೇ ಆಗಲಿ!’ ಎಂದು ಹೇಳಿ ಸುಮ್ಮನಾದ. ಜೊತೆಗೆ ಗುರೂಜಿಯವರ ಬಣ್ಣದ ಮಾತುಗಳಿಂದ ಅವನಿಗೆ ಅವರ ಮೇಲೆ ಅಭಿಮಾನವೂ ಹೆಚ್ಚಿತು.ಅಂದಿನಿಂದ ಸಮಯ ಸಿಕ್ಕಾಗಲೆಲ್ಲ ಗುರೂಜಿಯವರು ಅವನಿಗೆ ಕರೆ ಮಾಡಿ ಸ್ನೇಹದಿಂದ ಮಾತಾಡುತ್ತಿದ್ದವರು ಒಂದೆರಡು ಬಾರಿ, ‘ನಿಮ್ಮೂರಿನಾಚೆಯೇ ಬರುವುದಿತ್ತು.ಹಾಗೆ ನಿಮ್ಮನ್ನೂ ಮಾತಾಡಿಸಿಕೊಂಡು ಹೋಗುವ ಅಂತ ಮನಸ್ಸಾಯಿತು!’ ಎಂದು ಸುಳ್ಳು ಹೇಳಿ ಭೇಟಿ ಕೊಟ್ಟು ಅವನಿಗೆ ತಮ್ಮ ಮೇಲೆ ಇನ್ನಷ್ಟು ಪ್ರೀತ್ಯಾದರ ಮೂಡುವಂತೆ ವರ್ತಿಸತೊಡಗಿದರು.ಅದರಿಂದ ಅವನೂ ಅವರ ಮೇಲಿನ ಹಿಂದಿನ ಧೋರಣೆಯನ್ನು ತೊರೆದು ಆತ್ಮೀಯವಾಗಿ ಇರತೊಡಗಿದ. ಇತ್ತ ಮಸಣದಗುಡ್ಡೆಯ ನಾಗಭವನ ಜೀರ್ಣೋದ್ಧಾರದ ಸಮಯವೂ ಸಮೀಪಿಸುತ್ತಿತ್ತು.ಹಾಗಾಗಿ ಗುರೂಜಿಯವರು ಚುರುಕಾದರು.ಇನ್ನು ಸಮಯ ಕಳೆಯಬಾರದು.ರೋಹಿತನಿಗೆ ತಮ್ಮ ಮೇಲೆ ಸಂಪೂರ್ಣ ವಿಶ್ವಾಸ ಬಂದ ಹಾಗಿದೆ. ಕೂಡಲೇ ತಮ್ಮ ಕೆಲಸವನ್ನು ಸಾಧಿಸಬೇಕು! ಎಂದು ಯೋಚಿಸಿದವರು ಆವತ್ತೊಂದು ಮುಂಜಾನೆ ರೋಹಿತ್ನ ಮನೆಗೆ ದಿಢೀರ್ ಭೇಟಿಕೊಟ್ಟರು.ರೋಹಿತನೂ ಅವರನ್ನು ಆದರದಿಂದ ಮಾತಾಡಿಸಿದ. ಗುರೂಜಿಯವರು ಇವತ್ತು ಅವನೊಂದಿಗೆ ಹಿಂದೂ ಧರ್ಮ ಮತ್ತು ನಾಗಾರಾಧನೆ ಹಾಗೂ ಅದಕ್ಕೆ ಸಂಬಂಧಿಸಿದ ಹಲವು ನಂಬಿಕೆ, ಆಚರಣೆಗಳ ಕುರಿತು ತುಂಬಾ ಹೊತ್ತು ಚರ್ಚಿಸಿದರು. ಅವನೂ ಅವರ ವಿಚಾರಧಾರೆಯನ್ನು ಕೇಳುತ್ತಿದ್ದ ಹಾಗೂ ತನಗೆ ಸರಿ ಅನ್ನಿಸಿದ್ದರ ಕುರಿತು ಅಭಿಮಾನದಿಂದ ತಲೆದೂಗುತ್ತಿದ. ತಪ್ಪು
ಹಿಂದಿ ಹೇರಿಕೆ ಹಿಂದಿರುವ ಭಾಷಾ ರಾಜಕಾರಣ
ಹಿಂದಿ ಹೇರಿಕೆಯ ಹಿಂದೆ ಭಾಷಾ ರಾಜಕಾರಣದ ನಂಟಿದೆ. ಒಟ್ಟಾರೆಯಾಗಿ ಒಂದೇ ಏಟಿಗೆ ಭಾರತದ ಮೂಲ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲೆಯಾಳಿ ಹಾಗೂ ಮರಾಠಿ ಸೇರಿದಂತೆ ಅನೇಕ ಪ್ರಾದೇಶಿಕ ತಾಯ್ತನದ ಭಾಷೆಗಳನ್ನು ಮುಗಿಸುವ ಹುನ್ನಾರವಿದೆ.
ಹಿಂದಿ ಹೇರಿಕೆ ಹಿಂದಿರುವ ಭಾಷಾ ರಾಜಕಾರಣ Read Post »
ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳು ಜನಾದೇಶ ಪಡೆದು ರಾಜ್ಯಗಳ ಹಿತ ಕಾಪಾಡುತ್ತಿರುವ ನಿದರ್ಶನಗಳು ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿವೆ. ಹಾಗೆ ನೋಡಿದರೆ ಕೆಲಮಟ್ಟಿಗೆ ಕೇರಳದ ಎಡಪಂಥೀಯ ಸರಕಾರವೂ ಪ್ರಾದೇಶಿಕ ನೆಲೆಗಟ್ಟಿನದೇ. ಕೇಂದ್ರ ಮತ್ತು ರಾಜ್ಯದ ನಡುವಿನ ಮಧುರ ಬಾಂಧವ್ಯದಷ್ಟೇ ಪ್ರಾದೇಶಿಕ ಹಿತಾಸಕ್ತಿಯ ಬಾಂಧವ್ಯ ಅಕ್ಷರಶಃ ಅಲ್ಲಗಳೆಯಲಾಗದು.
ಧಾರಾವಾಹಿ ಆವರ್ತನ ಅದ್ಯಾಯ-33 ಆಸ್ಪತ್ರೆಯಲ್ಲಿ ಒಂದು ವಾರ ತೀವ್ರ ನಿಗಾಘಟಕದಲ್ಲಿ ನರಳಿದ ಶ್ರೀನಿವಾಸ ಕೊನೆಗೂ ಬದುಕುಳಿದ. ಆದರೆ ಈ ಘಟನೆಯಿಂದ ಪ್ರವೀಣನ ನಾಗದೋಷದ ಭೀತಿಯು ದುಪ್ಪಟ್ಟಾಗಿ ಪ್ರಜ್ವಲಿಸತೊಡಗಿತು. ತನ್ನ ಅನಾಚಾರದಿಂದಲೇ ಇವೆಲ್ಲ ಅನಾಹುತಗಳು ನಡೆಯುತ್ತಿರುವುದು! ಎಂದು ಭಾವಿಸಿದವನು ಇನ್ನು ತಡಮಾಡಬಾರದು. ತನ್ನ ಜೀವನ ಸರ್ವನಾಶ ಆಗುವುದಕ್ಕಿಂತ ಮುಂಚೆಯೇ ಎಚ್ಚೆತ್ತುಕೊಳ್ಳಬೇಕು ಎಂದು ನಿರ್ಧರಿಸಿದ. ಅದೇ ಸಂದರ್ಭದಲ್ಲಿ ಶಂಕರನ ಶೀಂಬ್ರಗುಡ್ಡೆಯ ನಾಗಬನ ಜೀರ್ಣೋದ್ಧಾರದ ಸಂಗತಿಯೂ ಅವನಿಗೆ ತಿಳಿಯಿತು. ಕೂಡಲೇ ಹಳೆಯ ಗೆಳೆಯನನ್ನು ಹೊಸ ಆತ್ಮೀಯತೆಯಿಂದ ಅರಸಿ ಹೋಗಿ ಭೇಟಿಯಾದ. ಶಂಕರನೂ ಪ್ರವೀಣನನ್ನು ಆಪ್ತತೆಯಿಂದ ಬರಮಾಡಿಕೊಂಡು ಕುಶಲೋಪರಿ ವಿಚಾರಿಸಿದ. ಆದರೆ ಅವನ ಮೂತ್ರ ಪ್ರಸಂಗ, ಚರ್ಮರೋಗ ಮತ್ತು ಹಾವಿನ ಕಡಿತದ ವಿಷಯವನ್ನು ಕೇಳಿದವನು ‘ಇದು ಖಂಡಿತಾ ನಾಗದೋಷದ ಪ್ರತಿಫಲವೇ ಮಾರಾಯಾ…! ಇಲ್ಲದಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ!’ ಎಂದು ಆತಂಕ ವ್ಯಕ್ತಪಡಿಸಿದ. ‘ಅಲ್ವಾ ಅಲ್ವಾ ಶಂಕರಣ್ಣಾ…? ನನಗೆ ಆವತ್ತು ಸುರೇಶ ಹೇಳಿದಾಗಲೇ ಅದು ಗೊತ್ತಾಗಿತ್ತು. ಆದರೆ ನನ್ನ ಮನೆಯವಳೂ, ಆ ಚರ್ಮರೋಗದ ಡಾಕ್ಟ್ರೂ ಹೇಳುವುದು ನಾನು ಸರಿಯಾಗಿ ಸ್ನಾನನೇ ಮಾಡುವುದಿಲ್ಲವಂತೆ. ಅದರಿಂದ ಹುಳಕಜ್ಜಿ ಬಂದಿದೆಯಂತೆ! ಹಾಗಾದರೆ ನನ್ನ ಮೈದುನನಿಗೆ ಹಾವು ಯಾಕೆ ಕಚ್ಚಿತು? ಅದೂ ನನ್ನ ಅಂಗಡಿಯ ಒಳಗೆಯೇ ಬಂದು ಕಚ್ಚಬೇಕಿತ್ತಾ…!’ ಎಂದು ಭಯದಿಂದ ಕಣ್ಣುಬಾಯಿ ಬಿಟ್ಟುಕೊಂಡು ಅಂದವನು, ‘ನನಗೀಗ ನೀವು ಹೇಳಿದ ಮೇಲೆ ಧೈರ್ಯ ಬಂತು ಶಂಕರಣ್ಣಾ…ಆದ್ದರಿಂದ ನೀವೇ ಇದಕ್ಕೊಂದು ಪರಿಹಾರವನ್ನೂ ಸೂಚಿಸಬೇಕು!’ ಎಂದು ಕೇಳಿಕೊಂಡ. ‘ನೀನೇನೂ ಹೆದರಬೇಡ ಮಾರಾಯಾ ನಾನಿದ್ದೇನೆ. ಎಲ್ಲಾ ಸಮ ಮಾಡುವ ನಡೀ…!’ ಎಂದು ಶಂಕರ ಗತ್ತಿನಿಂದ ಹೇಳಿದವನು ಕೂಡಲೇ ಅವನನ್ನು ಏಕನಾಥ ಗುರೂಜಿಯವರ ಹತ್ತಿರ ಕರೆದೊಯ್ದ. ಆ ಸಮಯದಲ್ಲಿ ಗುರೂಜಿಯವರು ತಮ್ಮ ಹಳೆಯ ಮನೆಯ ಒಂದು ಪಾಶ್ರ್ವವನ್ನು ಒಡೆದು, ಮುಂದೆ ತಮ್ಮಲ್ಲಿ ನಿರಂತರ ನಡೆಯಲಿರುವ ವಿವಿಧ ಪೂಜಾ ಕೈಂಕರ್ಯಗಳಿಗೆ ಸಹಾಯಕವಾಗುವಂಥ ವಿಶಾಲವಾದ ಆಧುನಿಕ ಪಡಸಾಲೆಯೊಂದನ್ನು ನಿರ್ಮಿಸತೊಡಗಿದ್ದರು. ಅತ್ತ ಶಂಕರನ ಕಾರು ಬಂದು ತಮ್ಮ ಮನೆಯೆದುರು ನಿಂತುದನ್ನೂ, ಅವನೊಂದಿಗೆ ಶ್ರೀಮಂತನೊಬ್ಬ ಇಳಿದು ಬರುತ್ತಿರುವುದನ್ನೂ ಮತ್ತು ಅವನ ಮುಖದಲ್ಲಿದ್ದ ಕಳವಳವನ್ನೂ ಗ್ರಹಿಸಿದವರಿಗೆ ತಮ್ಮ ಪಡಸಾಲೆಯ ಕೆಲಸವು ನಿರ್ವಿಘ್ನವಾಗಿ ಸಮಾಪ್ತಿಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದೆನಿಸಿತು. ಆದ್ದರಿಂದ ಮಂದಹಾಸ ಬೀರುತ್ತ ಇಬ್ಬರನ್ನೂ ಬರಮಾಡಿಕೊಂಡು ತಮ್ಮ ಜ್ಯೋತಿಷ್ಯದ ಕೋಣೆಗೆ ಕರೆದೊಯ್ದರು. ಶಂಕರ ತನ್ನ ಗೆಳೆಯನ ವ್ಯವಹಾರ ಮತ್ತು ಅವನ ಪ್ರಸ್ತುತ ಸಮಸ್ಯೆಯನ್ನು ಗುರೂಜಿಗೆ ಹಳೆಯ ಸಲುಗೆಯಿಂದ ವಿವರಿಸಿದ. ಆದರೆ ಅವರು ಅವನ ಸ್ನೇಹದತ್ತ ಗಮನಕೊಡದೆ ಅವನ ಮಾತುಗಳನ್ನು ಮಾತ್ರವೇ ಗಂಭೀರರಾಗಿ ಕೇಳಿಸಿಕೊಂಡರು ಹಾಗೂ ಕ್ಷಣಹೊತ್ತು ಕಣ್ಣುಮುಚ್ಚಿ ಧ್ಯಾನಸ್ಥರಂತೆ ಕುಳಿತು ಪ್ರವೀಣನ ಸಮಸ್ಯೆಗಳನ್ನು ತಮ್ಮದೇ ದೃಷ್ಟಿಕೋನದಿಂದ ಮಥಿಸಿದರು. ಗುರೂಜಿಯ ಗಾಂಭೀರ್ಯವನ್ನೂ ಅವರು ತನಗಾಗಿ ಧ್ಯಾನಿಸುತ್ತಿದ್ದ ರೀತಿಯನ್ನೂ ಕಂಡ ಪ್ರವೀಣನಿಗೆ ಅರ್ಧಕ್ಕರ್ಧ ಭಯ ಹೋಗಿಬಿಟ್ಟಿತು. ಆದರೆ ಅತ್ತ ಗುರೂಜಿಯ ಯೋಚನಾಲಹರಿ ಈ ರೀತಿ ಸಾಗುತ್ತಿತ್ತು, ‘ಓ ಪರಮಾತ್ಮಾ… ಕೊನೆಗೂ ನೀನು ನಮ್ಮ ಜೀವನಕ್ಕೊಂದು ಭದ್ರ ನೆಲೆಯನ್ನು ಕರುಣಿಸಿಬಿಟ್ಟೆ. ಅದಕ್ಕಾಗಿ ಅನಂತಾನಂತ ಕೃತಜ್ಞತೆಗಳು ದೇವಾ! ಹಾಗೆಯೇ ಈಗ ನಮ್ಮಲ್ಲಿಗೆ ನೀನು ಕಳುಹಿಸಿರುವ ಈ ವ್ಯವಹಾರವೂ ಸಾಂಗವಾಗಿ ನೆರವೇರುವಂಥ ಶಕ್ತಿಯನ್ನು ದಯಪಾಲಿಸು ಪ್ರಭುವೇ!’ಎಂದು ಪ್ರಾರ್ಥಿಸಿದರು. ನಂತರ ನಿಧಾನವಾಗಿ ಕಣ್ಣು ತೆರೆದು ಪ್ರವೀಣನನ್ನು ದಿಟ್ಟಿಸಿದರು. ಆಗ ಅವನು ಅವರನ್ನು ದೈನ್ಯದಿಂದ ನೋಡಿದ. ‘ಹೌದು ಪ್ರವೀಣರೇ, ನೀವು ಮಾಡಿರುವುದು ಮಹಾ ಅಪರಾಧವೇ ಆಗಿದೆ! ಅದರಲ್ಲಿ ಎರಡು ಮಾತಿಲ್ಲ’ ಎನ್ನುತ್ತ ಅವನನ್ನು ತೀಕ್ಷ್ಣವಾಗಿ ದಿಟ್ಟಿಸಿದರು. ಪ್ರವೀಣ ಭಯದಿಂದ ಇನ್ನಷ್ಟು ಇಳಿದುಹೋದ. ಅದನ್ನು ಗಮನಿಸಿದ ಗುರೂಜಿ, ‘ಆದರೂ ನೀವಿನ್ನು ಹೆದರಬೇಕಾಗಿಲ್ಲ. ನಿಮ್ಮ ಆ ಪಾಪಕೃತ್ಯವನ್ನು ಸರಿಪಡಿಸುವ ಮಾರ್ಗ ನಮ್ಮಲ್ಲಿದೆ. ಆದರೆ ಅದಕ್ಕೆ ಸಂಬಂಧಿಸಿದ ಕೆಲವು ವಿಧಿವಿಧಾನಗಳನ್ನು ನೆರವೇರಿಸಲು ಸಿದ್ಧರಿದ್ದೀರಾ?’ ಎಂದು ಮುಖದಲ್ಲಿ ನಿರ್ಭಾವ ತೋರಿಸುತ್ತ ಕೇಳಿದರು. ಆದರೂ ಅವರ ಕೆಳದುಟಿಯು ಸಣ್ಣಗೆ ಕಂಪಿಸುತ್ತಿದ್ದುದು ಯಾರ ಗಮನಕ್ಕೂ ಬರಲಿಲ್ಲ. ‘ಆಯ್ತು ಗುರೂಜಿ. ತಾವು ಹೇಗೆ ಹೇಳುತ್ತೀರೋ ಹಾಗೆ ನಡೆದುಕೊಳ್ಳುತ್ತೇನೆ. ಒಟ್ಟಾರೆ ನನ್ನ ಸಮಸ್ಯೆಯನ್ನು ನಿವಾರಿಸಿಕೊಡಬೇಕು ತಾವು!’ ಎಂದ ಪ್ರವೀಣ ನಮ್ರನಾಗಿ ಕೇಳಿಕೊಂಡ. ಆಗ ಗುರೂಜಿಯ ಮುಖದಲ್ಲಿ ನಗು ಮೂಡಿತು. ‘ಆಯ್ತು, ಸರಿಮಾಡಿ ಕೊಡುವ. ಆದರೆ ಅದಕ್ಕಿಂತ ಮೊದಲು ಆ ಜಾಗವನ್ನು ನಾವೊಮ್ಮೆ ನೋಡಬೇಕಲ್ಲಾ…?’ ‘ಆಯ್ತು ಗುರೂಜಿ. ನಿಮಗೆ ಪುರುಸೋತ್ತಿದ್ದರೆ ಈಗಲೇ ಹೋಗಿ ನೋಡಿ ಬರಬಹುದು!’ ಎಂದ ಪ್ರವೀಣನು, ಶಂಕರನ ಮುಖ ನೋಡುತ್ತ, ‘ಹೇಗೇ…ಹೋಗಿ ಬರುವ ಅಲ್ಲವಾ…?’ ಎಂದು ಕಣ್ಣಿನಲ್ಲೇ ಪ್ರಶ್ನಿಸಿದ. ಆದರೆ ಅತ್ತ, ‘ಈಗಲೇ ಹೋಗುವುದಾ…?’ ಎಂದ ಗುರೂಜಿ ಬೇಕೆಂದೇ ಕೆಲವುಕ್ಷಣ ಯೋಚಿಸುವಂತೆ ನಟಿಸಿದವರು ನಂತರ, ‘ಸರಿ. ಹೊರಡುವ…!’ ಎಂದರು. ‘ನೋಡಮ್ಮಾ ದೇವಕೀ… ಎಲ್ಲಿದ್ದೀಯೇ?’ ಎಂದು ಹೆಂಡತಿಯನ್ನು ಕೂಗಿ ಕರೆದರು. ಅವಳು ಅಡುಗೆ ಕೋಣೆಯಿಂದಲೇ, ‘ಏನೂಂದ್ರೆ….?’ ಎಂದಳು. ‘ಪಡಸಾಲೆಯ ಕೆಲಸವನ್ನು ಸ್ವಲ್ಪ ಗಮನಿಸುತ್ತಿರು. ನಾವು ಹೊರಗೆ ಹೋಗಿ ಬರುತ್ತೇವೆ…’ ಎಂದು ಸೂಚಿಸಿದರು. ‘ಆಯ್ತು, ಹೋಗಿ ಬನ್ನಿ…!’ ಎಂಬ ಅವಳ ಉತ್ತರ ಸಿಗುತ್ತಲೇ ಎದ್ದು ಅವರೊಂದಿಗೆ ಹೊರಟರು. *** ಗುರೂಜಿ ಮತ್ತು ಶಂಕರನೊಂದಿಗೆ ಪ್ರವೀಣ ಮಸಣದಗುಡ್ಡೆಗೆ ಬಂದವನು ಅಲ್ಲಿಂದ ಸ್ವಲ್ಪ ದೂರವಿದ್ದ ಸುರೇಶನ ಸರಕಾರಿ ಕಾಲೋನಿಗೆ ಅವರನ್ನು ಕರೆದೊಯ್ದ. ಅಲ್ಲಿನ ಅಶ್ವತ್ಥ ಮರದ ಕಟ್ಟೆಯೊಂದಲ್ಲಿ ಗುರೂಜಿಯವರನ್ನು ಕುಳ್ಳಿರಿಸಿದವನು ಶಂಕರನನೊಂದಿಗೆ ಸುರೇಶನ ಮನೆಯತ್ತ ಹೋದ. ಸುರೇಶ ಆಹೊತ್ತು ತನ್ನ ಬಡಾವಣೆಯ ಕೊನೆಯ ಸಾಲಿನ ಹರಕು ಮುರುಕು ಮನೆಯೊಂದರಲ್ಲಿ ಕುಡಿದು ಮತ್ತನಾಗಿ ಮಲಗಿದ್ದ. ಪ್ರವೀಣ ಮತ್ತು ಶಂಕರನ ಚೆನ್ನಾಗಿ ಪರಿಚಯವಿದ್ದ ಅಲ್ಲಿನವರಲ್ಲಿ ಒಂದಿಬ್ಬರು ಗಂಡಸರು ಅವರನ್ನು ಕಂಡು ದಡಬಡನೆದ್ದು ಬಂದು ಅವರಿಂದ ವಿಷಯ ತಿಳಿದುಕೊಂಡವರು ಕೂಡಲೇ ಸುರೇಶನನ್ನು ಎಬ್ಬಿಸಲು ಅವನ ಮನೆಯೊಳಗೆ ನುಗ್ಗಿದರು. ಆದರೆ ಸುರೇಶ ಏಳುವ ಸ್ಥಿತಿಯಲ್ಲಿರಲಿಲ್ಲ. ಆದ್ದರಿಂದ ಅವರಲ್ಲೊಬ್ಬ ಸುರೇಶನ ನೆತ್ತಿಗೆ ಒಂದು ಚೊಂಬು ತಣ್ಣೀರು ಸುರಿದು ಎಬ್ಬಿಸಬೇಕಾಯಿತು. ಅದರಿಂದ ಸುರೇಶ ಎಚ್ಚರಗೊಂಡು ಕೆಂಡಾಮಂಡಲನಾದವನು ಇಬ್ಬರಿಗೂ ಕೆಟ್ಟಕೆಟ್ಟ ಪದಗಳಿಂದ ಬಯ್ಯುತ್ತ ಎದ್ದು ಕುಳಿತ. ಆದರೆ ಅವರು ಅವನ ಅಂಥ ಬೈಗುಳವನ್ನು ಕೇಳಿ ತಮಾಷೆಯಾಗಿ ನಗುತ್ತ ಪ್ರವೀಣ, ಶಂಕರರು ಬಂದಿರುವುದನ್ನು ಅವನಿಗೆ ತಿಳಿಸಿದರು. ಅವರ ಹೆಸರು ಕಿವಿಗೆ ಬೀಳುತ್ತಲೇ ಸುರೇಶ ತಟ್ಟನೆ ನೆಟ್ಟಗಾದ. ‘ಓಹೋ, ಆ ಬೇವರ್ಸಿ ಬಂದಿದ್ದಾನಾ…? ಅಂವ ನನ್ನನ್ನು ಹುಡುಕಿಕೊಂಡು ಬಂದೇ ಬರ್ತಾನೆ ಅಂತ ಗೊತ್ತಿತ್ತು ಬಿಡಿ!’ ಎಂದು ನಗುತ್ತ ಎದ್ದು ತೂರಾಡುತ್ತ ಹೊರಗೆ ಬಂದ. ಅಲ್ಲಿ ತನ್ನ ವಠಾರದವರೆಲ್ಲರೂ ತಂತಮ್ಮ ಹೊಸ್ತಿಲು, ಅಂಗಳದಲ್ಲಿ ನಿಂತುಕೊಂಡು ತನ್ನತ್ತ ಕುತೂಹಲದಿಂದ ನೋಡುತ್ತಿದ್ದುದನ್ನು ಕಂಡ ಸುರೇಶ ತನ್ನ ಮಹತ್ವವನ್ನು ಸಾರುವ ಉದ್ದೇಶದಲ್ಲಿ,‘ನಮಸ್ಕಾರ ಪ್ರವೀಣಣ್ಣ… ಏನು ವಿಷಯ ಮಾರಾಯ್ರೇ…?’ಎಂದು ಸಂಗತಿ ತನಗೆ ಗೊತ್ತಿದ್ದರೂ ಜೋರಿನಿಂದ ಪ್ರಶ್ನಿಸಿದ. ಅವನ ಅಹಂಕಾರದ ಮಾತುಗಳನ್ನು ಕೇಳಿದ ಪ್ರವೀಣ, ಶಂಕರರಿಬ್ಬರಿಗೂ ಕೆಟ್ಟ ಕೋಪ ಬಂತು. ಆದರೆ ಈ ಸಮಯದಲ್ಲಿ ತಾಳ್ಮೆಗೆಟ್ಟರೆ ಕೆಲಸ ಕೆಡುವುದೆಂದು ವಿವೇಕ ಎಚ್ಚರಿಸಿತು. ‘ಏನಿಲ್ಲ ಮಾರಾಯಾ ನಮ್ಮ ಗುರೂಜಿಯವರು ಬಂದಿದ್ದಾರೆ. ಮೊನ್ನೆ ನೀನು ತೋರಿಸಿದ ನಾಗನ ಕಲ್ಲಿದ್ದ ಆ ಜಾಗ ಮತ್ತು ಅದರ ಕಥೆಯನ್ನು ಸ್ವಲ್ಪ ಅವರಿಗೆ ಹೇಳಬೇಕಿತ್ತಲ್ಲವಾ…?’ ಎಂದು ಪ್ರವೀಣ, ‘ಈಗಲೇ ಹೊರಡು…!’ ಎಂಬಂಥ ಭಾವದಿಂದ ಆಜ್ಞಾಪಿಸಿದ. ‘ಅರೇ, ಅದಕ್ಕೇನಂತೆ ಹೋಗುವ. ನಡೆಯಿರಿ!’ ಎಂದು ಸುರೇಶ ಅವರಿಗಿಂತ ಮುಂದೆ ನಡೆದವನು ತಟ್ಟನೆ ನಿಂತು,‘ಆದರೆ ಪ್ರವೀಣಣ್ಣ ನನಗೀಗ ಸ್ವಲ್ಪ ಎದುರು ಹಾಕದೆ (ಸಾರಾಯಿ ಕುಡಿಯದೆ) ಕೈಕಾಲು ಅಲ್ಲಾಡುವುದಿಲ್ಲ ನೋಡಿ. ಆಗ ಸ್ವಲ್ಪ ಕುಡಿದು ಮಲಗಿದ್ದೆ. ಆದರೆ ಈ ದರ್ವೇಶಿಗಳಿದ್ದಾರಲ್ಲ…ಇವರು, ನೀವು ಬಂದ ಸುದ್ದಿಯನ್ನು ಹೇಳುವ ಗಡಿಬಿಡಿಯಲ್ಲಿ ನನ್ನ ಮಂಡೆಗೆ ಸಮಾ ನೀರು ಸುರಿದು ಎಬ್ಬಿಸಿ ಎಲ್ಲಾ ಹಾಳು ಮಾಡಿಬಿಟ್ಟರು!’ಎಂದು ಆ ಇಬ್ಬರತ್ತ ಕೋಪದಿಂದ ದಿಟ್ಟಿಸುತ್ತ ಹೇಳಿದ. ಆದರೆ ಅವರು ಆಗಲೂ ತಮಾಷೆಯಿಂದ ನಗುತ್ತ ನಿಂತಿದ್ದರು. ‘ಆಯ್ತು, ಆಯ್ತು ಮಾರಾಯಾ. ಸ್ವಲ್ಪವೇನು ಕೆಲಸವಾದ ಮೇಲೆ ಇಡೀ ಬಾಟಲಿಯನ್ನೇ ಕೊಡಿಸುತ್ತೇನೆ. ಕುಡಿದು ಬಿದ್ದು ಸಾಯಿ ಅತ್ಲಾಗೆ. ಈಗ ಮೊದಲು ನಡೆ!’ ಎಂದು ಪ್ರವೀಣ ತನ್ನ ಕೋಪವನ್ನು ತಮಾಷೆಯೊಂದಿಗೆ ಬೆರೆಸಿ ತೋರಿಸಿದ.‘ಹಾಗಾದರೆ ಸರಿ ಹೋಗುವ…!’ ಎಂದು ಸುರೇಶ ತಾಳತಪ್ಪಿದ ಹೆಜ್ಜೆಗಳನ್ನಿಡುತ್ತ ಮುಂದೆ ನಡೆದ. ಸ್ವಲ್ಪಹೊತ್ತಿನಲ್ಲಿ ಸುರೇಶ ಗುರೂಜಿಯವರನ್ನು ಅಲ್ಲಿನ ಕುರುಚಲು ಹಾಡಿಯತ್ತ ಕರೆದುಕೊಂಡು ಹೋಗಿ ಆ ಪೊದೆಯನ್ನು ತೋರಿಸಿದ. ಪ್ರವೀಣನಿಗೆ ಮೂತ್ರ ಹುಯ್ಯಲು ಆ ಸ್ಥಳವು ಬಹಳ ಇಷ್ಟವಾಗಿದ್ದುದರಿಂದ ಆ ಪರಿಸರವಿಡೀ ಗಬ್ಬು ವಾಸನೆ ಬೀರುತ್ತಿತ್ತು. ಗುರೂಜಿಯವರು ಕುತೂಹಲದಿಂದ ಅದರತ್ತ ಹೋದವರಿಗೆ ಒಮ್ಮೆಲೇ ವಾಂತಿ ಬಂದಂತಾಯಿತು. ಆದರೂ ಮೂಗು ಮುಚ್ಚಿಕೊಂಡು ಆ ಜಾಗವನ್ನೂ ಅಲ್ಲಿನ ಕಲ್ಲುಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸತೊಡಗಿದರು. ಆದರೆ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದೆ ಉಸಿರುಗಟ್ಟಿತು. ತಟ್ಟನೆ ಈಚೆಗೆ ಧಾವಿಸಿ ಬಂದವರು, ‘ಛೇ, ಛೇ! ಎಂಥದಿದು ಪ್ರವೀಣರೇ… ಎಷ್ಟು ವರ್ಷಗಳಿಂದ ಇಲ್ಲಿ ಗಲೀಜು ಮಾಡುತ್ತಿದ್ದೀರಿ…? ಈ ಜಾಗವಿಡೀ ಸರ್ಕಾರಿ ಪಾಯಿಖಾನೆಯ ಥರಾ ನಾರುತ್ತಿದೆಯಲ್ಲ. ಅಪಚಾರ ಅಪಚಾರ…!’ ಎಂದು ಗೊಣಗಿದರು. ಅಷ್ಟು ಕೇಳಿದ ಪ್ರವೀಣನಿಗೆ ಭಯ, ಅವಮಾನವೆಲ್ಲವೂ ಒಟ್ಟೊಟ್ಟಿಗಾಯಿತು. ಪೆಚ್ಚು ನಗುತ್ತ ನಿಂತುಕೊಂಡ. ಗುರೂಜಿಯವರು ಆ ಪೊದೆಯ ಸುತ್ತಮುತ್ತ ದಟ್ಟ ಮರಗಳಿಂದ ತುಂಬಿದ ಪ್ರದೇಶವೊಂದನ್ನು ಮೂಗು ಮುಚ್ಚಿಕೊಂಡೇ ಪರೀಕ್ಷಿಸುತ್ತ ಸ್ವಲ್ಪಹೊತ್ತು ಸುತ್ತಾಡಿದರು. ಅಲ್ಲೊಂದು ಕಡೆ ವಿಶಾಲವಾದ ಮನೆಯಿದ್ದು ಈಗ ಅದರ ನಾಮಾಶೇಷ ಮಾತ್ರವೇ ಉಳಿದಿದ್ದುದು ಕಾಣಿಸುತ್ತಿತ್ತು. ಆದ್ದರಿಂದ ಈ ಬನವೂ ಅದಕ್ಕೆ ಸಂಬಂಧಿಸಿದ್ದು ಎನ್ನುವುದು ಅವರಿಗೆ ಸ್ಪಷ್ಟವಾಯಿತು. ಮತ್ತೊಮ್ಮೆ ಅವೆಲ್ಲವನ್ನೂ ಪರಿಶೀಲಿಸಿ ಮುಂದಿನ ಕಾರ್ಯಚರಣೆ ಏನೆಂಬುದರ ಕುರಿತು ಅಲ್ಲಿಯೇ ನಿರ್ಧರಿಸಿಬಿಟ್ಟರು. ಈಗ ಸುರೇಶ ಮಾತನಾಡಿ,‘ಆ ಜಾಗದ ವಾರಸುದಾರರು ಈಗ ಇಲ್ಲಿ ಸುತ್ತಮುತ್ತ ಯಾರು ಇಲ್ಲ. ಜಾಗವು ಸರಕಾರದ ಸ್ವಾಧೀನದಲ್ಲಿದೆ! ಎಂದ. ಗುರೂಜಿ ಅವನ ಹೇಳಿಕೆಯನ್ನು ಕೇಳಿಸಿಕೊಂಡರಾದರೂ ಅವರಿಗೆ ಅದರಲ್ಲಿ ವಿಶ್ವಾಸ ಬರಲಿಲ್ಲ. ಆದ್ದರಿಂದ ಆ ಕುರಿತು ಸತ್ಯವನ್ನು ತಿಳಿದುಕೊಳ್ಳುವ ಜವಾಬ್ದಾರಿಯನ್ನು ಪ್ರವೀಣ ಮತ್ತು ಶಂಕರನಿಗೆ ವಹಿಸಲಿಚ್ಛಿಸಿದವರು,‘ನೋಡಿ ಪ್ರವೀಣರೇ, ನೀವಿನ್ನು ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ. ಇಲ್ಲಿನ ಸಂಗತಿ ಏನೆಂಬುದು ನಮಗೆ ಸ್ಪಷ್ಟವಾಗಿದೆ. ಅವೆಲ್ಲವನ್ನೂ ಸುಸೂತ್ರವಾಗಿ ಪರಿಹರಿಸಿಕೊಡುವ ಜವಾಬ್ದಾರಿ ನಮ್ಮದು. ಆದರೆ ಸ್ವಲ್ಪ ದುಡ್ಡು ಖರ್ಚಾಗುತ್ತದೆ. ನೀವು ಕೂಡಲೇ ಆ ವ್ಯವಸ್ಥೆಯನ್ನು ಮಾಡಿಕೊಳ್ಳಿ ಮತ್ತು ಈ ಸ್ಥಳಕ್ಕೆ ಸಂಬಂಧಪಟ್ಟು ನಾವು ಹೇಳುವ ಕೆಲವು ಮುಖ್ಯ ವಿಚಾರಗಳನ್ನೂ ತಿಳಿದುಕೊಳ್ಳುವ ಕೆಲಸವನ್ನು ನೀವಿಬ್ಬರೂ ಮಾಡಬೇಕಾಗುತ್ತದೆ. ಎಷ್ಟು ಬೇಗ ಆ ಮಾಹಿತಿಯನ್ನು ತಂದು ನಮಗೆ ಒಪ್ಪಿಸುತ್ತೀರೋ ಅಷ್ಟೇ ಬೇಗ ನಿಮ್ಮ ಸಮಸ್ಯೆಯನ್ನೂ ನಿವಾರಿಸಿಕೊಡುತ್ತೇವೆ!’ ಎಂದರು ಗಂಭೀರವಾಗಿ. ‘ಹಣದ ವ್ಯವಸ್ಥೆ ಮಾಡಿಕೊಳ್ಳಿ…!’ಎಂದಾಕ್ಷಣ ಪ್ರವೀಣ ಸ್ವಲ್ಪ ಅಶಾಂತನಾದ. ಅದನ್ನು ಗಮನಿಸಿದ ಶಂಕರ,‘ಅದರ ಬಗ್ಗೆ ಈಗಲೇ ತಲೆಕೆಡಿಸಿಕೊಳ್ಳುವುದು ಮಾರಾಯಾ ಸುಮ್ಮನಿರು…!’ ಎಂದು ಕಣ್ಣಿನಲ್ಲೇ ಅವನನ್ನು ಸಮಾಧಾನಿಸಿದ. ಗುರೂಜಿಯ ಆಜ್ಞೆಯಂತೆ ಗೆಳೆಯರಿಬ್ಬರು ಕೆಲವೇ ದಿನದೊಳಗೆ ಆ ಬನದ ಚರಿತ್ರೆಯನ್ನು ತಿಳಿದುಕೊಂಡು ಬಂದು ಅವರಿಗೊಪ್ಪಿಸಿದರು. ಆ ವರದಿಯ ಪ್ರಕಾರ, ‘ಸದ್ಯ ಬನದ ವಾರಸುದಾರರು ಈಶ್ವರಪುರದಲ್ಲಿ ಯಾರೂ ಇಲ್ಲ. ಅವರ ದೂರದ ಸಂಬಂಧಿಗಳಾದ ಒಂದೆರಡು ಕುಟುಂಬಗಳು ಇರುವುವಾದರೂ ಮೂಲ ಜಾಗಕ್ಕೆ ಸಂಬಂಧಿಸಿದವರ ಮಾಹಿತಿ ಮತ್ತು ವಿಳಾಸ ಅವರಿಗೂ ಗೊತ್ತಿಲ್ಲ ಹಾಗೂ ಬನದ ಜಾಗವೂ ಸರಕಾರಕ್ಕೆ ಸಂಬಂಧಿಸಿದ್ದಲ್ಲ. ಸ್ಮಶಾನವಿದ್ದ ಜಮೀನು ಮಾತ್ರ ಸರಕಾರದ್ದು. ಹಾಗಾಗಿ ಸ್ಮಶಾನದ ಸುತ್ತಮುತ್ತದ ಒಂದಷ್ಟು ಭೂಮಿ ಸಹಜವಾಗಿಯೇ ಪಾಳುಬಿದ್ದಿದೆ. ಅದರಲ್ಲಿ ಬನವೂ ಸೇರಿಬಿಟ್ಟಿದೆ!’ ಎಂದು ತಿಳಿದು ಬಂತು. ಅಷ್ಟು ವಿಷಯನ್ನು ತಿಳಿದ ಗುರೂಜಿಯವರು ಒಳಗೊಳಗೇ ಹರುಷಗೊಂಡರು.‘ಈಶ್ವರಪುರದ ಹೃದಯಭಾಗದಲ್ಲಿರುವ ನಾಗ ಬನವದು. ಅಲ್ಲಿ ಸುತ್ತಮುತ್ತಲ್ಲೆಲ್ಲೂ ಬೇರೊಂದು ಬನವೂ ಇಲ್ಲ. ಹಾಗಾಗಿ ಅದನ್ನು ತಮ್ಮಿಂದ ಊರ್ಜಿತಗೊಳಿಸುವುದೇ ನಾಗದೇವನಿಚ್ಛೆಯಿರಬೇಕು. ಅಷ್ಟಲ್ಲದೇ ತಮ್ಮ ಜೀವನದೇಳಿಗೆಯ ಕಾರ್ಯಸಾಧನೆಗೂ ಆ ಪರಿಸರವು ಹೇಳಿ ಮಾಡಿಸಿದಂತಿದೆ. ಆದಷ್ಟು ಬೇಗ ಅದನ್ನು ಜೀರ್ಣೋದ್ಧಾರ ಮಾಡಿ ತಮ್ಮದಾಗಿಸಿಕೊಳ್ಳಬೇಕು!’ ಎಂದು ನಿರ್ಧರಿಸಿದರು ಹಾಗೂ ಕೂಡಲೇ ಪ್ರವೀಣನನ್ನೂ ಶಂಕರನಿಗೂ ಮನೆಗೆ ಕರೆದು ತಮ್ಮ ಮನದಿಂಗಿತವನ್ನು ಅವರಿಗೆ ವಿವರಿಸಿದರು. ಜೊತೆಗೆ ಆ ಶುಭಕಾರ್ಯಕ್ಕೆ ತಗಲುವ ಖರ್ಚುವೆಚ್ಚವನ್ನೂ ಮತ್ತದನ್ನು ಹೊಂದಿಸುವ ಬಗೆಯನ್ನೂ ಹಾಗೂ ಆ ಕಾರ್ಯದಲ್ಲಿ ಪಾಲುಗೊಳ್ಳುವುದರಿಂದ ಅವರ ಜೀವನದಲ್ಲಾಗುವ ಸಮೃದ್ಧಿಗಳು ಯಾವ ಯಾವ ರೀತಿಯವು ಎಂಬುದನ್ನೆಲ್ಲ ಅಂದು ಶಂಕರನಿಗೆ ವಿವರಿಸಿದಂತೆಯೇ ಇಂದು ಪ್ರವೀಣನಿಗೂ ತಿಳಿಸಿ ಅವನನ್ನು ಸಜ್ಜುಗೊಳಿಸಿದರು. ಗುರೂಜಿಯವರ ಮಾತು ಕೇಳಿದ ಪ್ರವೀಣ ಮತ್ತು ಶಂಕರ ಆ ಕಾರ್ಯದ ಕುರಿತು ಭಾರೀ ಉತ್ಸುಕರಾದರು. ಗುರೂಜಿಯ ಮಾರ್ಗದರ್ಶನದಂತೆ ಅವರ ಹೇಳಿಕೆಯನ್ನು ಆ ಬನದ ಸುತ್ತಮುತ್ತಲಿನ ಜನರಲ್ಲಿ ಪ್ರಚಾರ ಮಾಡುತ್ತ ಬಂದರು. ಬಳಿಕ ಜೀರ್ಣೋದ್ಧಾರದ ವಿಷಯಕ್ಕೆ ಸಂಬಂಧಿಸಿ ನಗರಸಭೆಯಿಂದಲೂ ಕೆಲವೇ ದಿನದಲ್ಲಿ ‘ನೋ ಅಬ್ಜಕ್ಷನ್!’ ಲೆಟರ್ ಕೂಡಾ ಪ್ರವೀಣನ ಕೈಸೇರಿತು. ಆದ್ದರಿಂದ ದಟ್ಟ ಹಸಿರಿನಿಂದ ತುಂಬಿ ಆರೋಗ್ಯಪೂರ್ಣವಾಗಿದ್ದ ಆ ಬನವನ್ನು ಕೂಡಲೇ‘ಕಾಂಕ್ರೀಟ್ ಭವನ’ವನ್ನಾಗಿ ಮಾರ್ಪಡಿಸಲು ಶುಭದಿನವೊಂದನ್ನು ಗೊತ್ತುಪಡಿಸಲಾಯಿತು. ಆದರೆ ಅದಕ್ಕಿನ್ನೂ ಒಂದೂವರೆ ತಿಂಗಳ ಗಡುವಿತ್ತು. ಈ ಎರಡನೆಯ ಜೀರ್ಣೋದ್ಧಾರದ ಮೂಲಕ ಗುರೂಜಿಯವರಿಗೆ ತಮ್ಮ ಧಾರ್ಮಿಕ ವರ್ಚಸ್ಸು ಮತ್ತು ಸಂಪಾದನೆಯನ್ನು ವೃದ್ಧಿಸಿಕೊಳ್ಳುವುದು ಬಹಳ ಮುಖ್ಯ ಉದ್ದೇಶವಾಗಿತ್ತು. ಹಾಗಾಗಿ ಬಹಳ ಹಿಂದೆಯೇ ಅವರೊಳಗೆ ಹೊಸ ವಿಚಾರವೊಂದು ಮೊಳೆತಿತ್ತು. ಆದ್ದರಿಂದ ಇದೇ ಕಾರ್ಯಕ್ರಮದಲ್ಲಿ ಅದನ್ನು ಕಾರ್ಯಗತಗೊಳಿಸಲು ಅವರು ಮನಸ್ಸು ಮಾಡಿದರು. (ಮುಂದುವರೆಯುವುದು) ********* ಗುರುರಾಜ್ ಸನಿಲ್ ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ. ********************************************
ಮಿರಗಿನ ಮಳೆ
ಜಮೀನು ಕೆಲಸವೆಲ್ಲ ಅನುಭವಕ್ಕೆ ಇಲ್ಲದ್ದು .ಕೂಲಿ ಆಳಿಟ್ಟು ಕಳೆ ತೆಗೆದು ಹದ ಮಾಡೋಣವೆಂದರೆ ದಿನಗೂಲಿ ಮೂನ್ನುರು ರೂಪಾಯಿ,ಅದನ್ನ ಎಲ್ಲಿಂದ ಹುಟ್ಟು ಹಾಕೋದು? ನಾವೇ ಮಾಡಿದರಾಯಿತು…ಕಂದ್ಲಿ,ಸಲಿಕೆ,ಗುದ್ಲಿ,ಹಿಡಿದು ನಿಂತರೆ ಮುಂದೆ ಕಳೆ ತೆಗೆದು ಮುಗಿಸುವದರಲ್ಲಿ ಹಿಂದೆ ಬೆಳೆದು ನಿಲ್ಲುತ್ತೆ.ಇದ್ದಕ್ಕಿದ್ದಂತೆ ಕೃಷಿ ಕೆಲಸ ಬಾರದ್ದು,ಒಗ್ಗದ್ದು,ತಿಳಿಯದು…ಕಲಿತು ಕೃಷಿ ನೆಟ್ಟು ಬೆಳೆ ಕೊಯ್ದು ಉಂಬೋವರಿಗೂ ಈಗ ಹೊಟ್ಟೆಗೆ ಎನು ಉಂಬುವುದು? ಹಸಿವಾದ್ರು ಯಾಕೆ ಇಟ್ಟಿದ್ದಾನೆ ಆ ಭಗವಂತ!
ಕಾತ್ಯಾಯಿನಿಯವರಿಗೆ ‘2021 ರ ನಾಗಶ್ರೀ ಕಾವ್ಯ ಪುರಸ್ಕಾರ’
ಕಾತ್ಯಾಯಿನಿಯವರಿಗೆ ‘2021 ರ ನಾಗಶ್ರೀ ಕಾವ್ಯ ಪುರಸ್ಕಾರ’
ಕಾತ್ಯಾಯಿನಿಯವರಿಗೆ ‘2021 ರ ನಾಗಶ್ರೀ ಕಾವ್ಯ ಪುರಸ್ಕಾರ’ Read Post »
ಮರೆಯಲಾಗದ ದಲಿತ ನಾಯಕ: ಅಯ್ಯನ್ ಕಾಳಿ
500 ಕುಟುಂಬಗಳಿಗೆ ತಲಾ ಒಂದೊಂದು ಎಕರೆಯಂತೆ 500 ಎಕರೆಯನ್ನು ಹಂಚಿಸಿ ದಲಿತರಿಗೆ ಭೂ ಓಡೆತನ ಕೊಡಿಸಿದ ಅಯ್ಯನ್ ಕಾಳಿ ಅವರ ಹೋರಾಟ ಮತ್ತು ಪಾತ್ರ ಮಹತ್ವದ್ದಾಗಿತ್ತು. ಇಂದಿಗೂ ಕೂಡ ಕೇರಳಾದಲ್ಲಿ ಅಯ್ಯನ್ ಕಾಳಿ ಎಂದರೆ ಮನೆಮಾತು. ಅವರನ್ನು ಅಲ್ಲಿನ ಜನತೆ ಮಹಾತ್ಮ ಅಯ್ಯನ್ ಕಾಳಿ ಎಂದೇ ಕರೆಯುತ್ತಾರೆ. ಇಂದು ಅವರ 158ನೇ ಜನ್ಮದಿನದ ಸಂಭ್ರಮ. ಇಂತಹ ಸುದಿನದಲ್ಲಿ ಅವರ ವಿಚಾರ ಮತ್ತು ಕ್ರಾಂತಿಯನ್ನು ಮತ್ತಷ್ಟು ಮುನ್ನೆಲೆಗೆ ತರುವ ಹಾಗೂ ವಿಸ್ತರಿಸುವ ಅಗತ್ಯತೆಯಿಂದ ನಾವು ನೋಡಬೇಕಿದೆ
ಮರೆಯಲಾಗದ ದಲಿತ ನಾಯಕ: ಅಯ್ಯನ್ ಕಾಳಿ Read Post »
ನಮಸ್ಕಾರ, ಹೋಗಿ ಬಾರಯ್ಯ ರಂಗ ಸರದಾರ
ಗುಡಿಹಳ್ಳಿ ನಾಗರಾಜ-
ನಮಸ್ಕಾರ, ಹೋಗಿ ಬಾರಯ್ಯ ರಂಗ ಸರದಾರ
@ಮಲ್ಲಿಕಾರ್ಜುನ ಕಡಕೋಳ
ನಮಸ್ಕಾರ, ಹೋಗಿ ಬಾರಯ್ಯ ರಂಗ ಸರದಾರ Read Post »







