ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಆರೋಗ್ಯ

ಮೊದಲ ಬಾರಿ ಪೇಯಿಂಗ್ ಗೆಸ್ಟ್ ಆಗಿ ಹೋದಾಗ

ಅನುಭವ ಮೊದಲಬಾರಿಪೇಯಿಂಗ್ ಗೆಸ್ಟ್ಆಗಿಹೋದಾಗ      ಬೆಂಗಳೂರಿಗೆ ಹೋಗಿ ಬಂಧುಗಳ ಮನೆಯಲ್ಲಿ  ಬಂಧುಗಳ  ಹಾಗೆ ಒಂದೆರಡು ದಿನ ಇದ್ದು ಬರುವುದು ಬೇರೆ ವಿಚಾರ !ಅದೇ ನಮ್ಮ ಕೆಲಸಕ್ಕೆ ಹೋಗಿ ಇರುವುದು ವೆರಿ ಹಾರಿಬಲ್‌! ಯಾರಿಗೂ ಇರಿಸು ಮುರಿಸು ಬೇಡ ಎಂಬ ಕಾರಣಕ್ಕೆ ಸಾಧನಾಕಾಂಕ್ಷೆಗಳ ಅರ್ಥಾತ್ ಉದ್ಯೋಗಾಕಾಂಕ್ಷೆಗಳು,. ಸ್ಪರ್ಧಾಕಾಂಕ್ಷಿಗಳು ಏನೇ ಕರೆಯಲಿ ಅವರ ಮುಂದಿನ ಆಯ್ಕೆ ಪಿಜಿ.  ಪಿಜಿ ಅಂದರೆ  ‘ಪೇ’ ಮಾಡಿ ‘ಗೆಸ್ಟ್’ ಆಗಿರಿ ಅಂತ ಅಲ್ಲ ಪೇ ಮಾಡಿ  ಪೇನ್ಫುಲ್ ಅಡ್ಜಸ್ಮೆಂಟ್ ಮಾಡಿಕೊಂಡಿರಿ ಎಂದರ್ಥ. ಅತ್ತೆ ಮನೆಯ ಝಲಕ್‌ಗಳನ್ನು ಅಂದರೆ ಅತ್ತೆ ಮನೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ರಿಯಲ್ ಡೆಮೊ ಕ್ಲಾಸ್‌ಮಾಡಿ ತೋರಿಸಿ ಬಿಡುತ್ತಾರೆ  ಕೆಲವೊಮ್ಮೆ ಪಿಜಿ ಸುಂದರಿಯರು ಎದ್ದರೆ ಕಾಲು ಹಿಡಿಯುತ್ತಾರೆ ಬಗ್ಗಿದರೆ ಜುಟ್ಟು ಹಿಡಿಯುತ್ತಾರೆ ಅಂತರಲ್ಲ ಹಾಗೆ ಮುಖ ನೋಡಿ ವ್ಯವಹರಿಸುತ್ತಾರೆ. ನಮಗೆ ಪ್ರತಿಸ್ಪರ್ಧೆ ಒಡ್ಡುತ್ತಾರೆ ಎಂದು ಗೊತ್ತಾಗಿಬಿಟ್ಟರೆ ಚಿತ್ರ-ವಿಚಿತ್ರವಾಗಿ ವರ್ತಿಸುತ್ತಾರೆ. ಆದರೆ ನನಗೆ ಸಿಕ್ಕಿದ ರೂಮ್ಮೇಟ್ ಸ್ಮಿತಳ ಹಾಗೆ ಸದ್ಭಾವದವರೂ ಖಂಡಿತಾ ಇರುತ್ತಾರೆ ಹೇಗಾದರೂ ಮಾಡಿ ಕೆ.ಎ.ಎಸ್. ಪಾಸು ಮಾಡಿಯೇ ತೀರುತ್ತೇನೆ ಅಂತಿದ್ದ ನಂಗೆ ಪಿಜಿ ಗೆ ಹೋಗಲು ಮನಸ್ಸಾಯಿತು. ಲಗೇಜ್ ಸಮೇತ ಹೊರಟೇಬಿಟ್ಟೆ.  ಜಸ್ಟ್ ಡಯಲ್‌ ಮೂಲಕ ಪಿಜಿ ಅಡ್ರೆಸ್ ಹುಡುಕಿದ್ದ ನನಗೆ ವಿಳಾಸ ಸಿಕ್ಕಿತು.  ಅದು ನನ್ನ ಪಾಲಿಗೆ “ಅಡ್ಜಸ್ಟ್ ಡಯಲ್”  ಪಿಜಿಯ ಹೆಸರು ‘ವಸಂತವಿಹಾರ’. ಅಲ್ಲಿಯ ವಾಚ್‌ಮ್ಯಾನ್ ನನ್ನನ್ನು ನೋಡುತ್ತಲೇ ಒಳಕರೆದ ನನ್ನ ತಮ್ಮ ಪೂರ್ವಾಪರ ವಿಚಾರಿಸತೊಡಗಿದ. ನಮ್ಮ ಲಗೇಜ್ ನೋಡುತ್ತಲೇ ಶಾಕ್‌ಗೆ ಒಳಗಾಗಿದ್ದ ಅವನು ನನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡಲಾರದೆ ಬಾಯಿ ಮುಚ್ಚಿಸಬೇಕೆಂದು “ನಿಮ್ಮನೆ ಅಂತ ತಿಳಿದುಕೊಳ್ಳಬೇಡಿ ಇದು ಬೆಂಗಳೂರು ಅದೂ  ಪಿಜಿ…” ಅಂದುಬಿಟ್ಟ. “ಪ್ರಥಮ ಚುಂಬನA ದಂತಭಗ್ನA” ಆಯಿತು ಎಂಬ ಭಾವನೆ ನನ್ನನ್ನಾವರಿಸಿತು.      ಪಿಜಿಯ ಮ್ಯಾನೇಜರ್ ನೀಲಾದೇವಿ ಬಂದು  “ಮ್ಯಾಡಮ್” ಎಂದು ಪರಿಚಯ ಮಾಡಿಕೊಂಡು ಅಡ್ವಾನ್ಸ್ ತೆಗೆದುಕೊಂಡರು  ಅಡ್ರೆಸ್ ಫೋಟೊ ಎಲ್ಲಾ ತೆಗೆದುಕೊಂಡು “ನಮ್ಮ ಪಿಜಿ ಅಂದರೆ ಬಹಳ ಫೇಮಸ್ ಇಲ್ಲಿ ಬಂದವರಿಗೆ ಯಾರಿಗೂ ಮೋಸವಾಗಿಲ್ಲ sಸಕ್ಸಸ್ss ಅಗಿಯೇ ಇಲ್ಲಿಂದ ಕಾಲ್ತೆಗೆಯುವುದು. ನಿಮಗೂ ಶುಭಕಾಲ ಬಂದಿದೆ ಅದಕ್ಕೆ ಇಲ್ಲಿಗೆ ಬಂದಿರುವುದು” ಎಂದು ಕೊಚ್ಚಿಕೊಂಡಿದ್ದೇ ಕೊಚ್ಚಿಕೊಂಡಿದ್ದು. ನಂತರ “ನೀವು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಬೇಕು ಯುಗಾದಿ ಹಬ್ಬಕ್ಕೆ ವೆಕೇಟ್ ಮಾಡ್ತೀವಿ ಅಂದವರು ಇನ್ನೂ ಬಂದಿಲ್ಲ ಇನ್ನೆರಡು ದಿನದಲ್ಲಿ ಅವರು ಬರುತ್ತಾರೆ. ಅಲ್ಲಿವರೆಗೆ ಹಬ್ಬಕ್ಕೆ ಊರಿಗೆ ಹೋಗಿರುವವರ ಬೆಡ್‌ಖಾಲಿ ಇದೆ ಅದನ್ನು ಉಪಯೋಗಸಿಕೊಳ್ಳಿ” ಎಂದರು ಸರಿ! ಎಂದು ನಾನು ತಲೆಯಾಡಿಸಿದೆ ಅಲ್ಲಿಗೆ ಎರಡನೆ ದಂತಭಗ್ನವಾದAತಾಯಿತು.   ಎರಡು ದಿನ ಹೇಗೋ ಕಳೆಯಿತು ಹಬ್ಬಕ್ಕೆ ಹೋದವಳು ಮರಳಿ ಬಂದು ನನ್ನನ್ನು ನೋಡಿದ ಕೂಡಲೆ ನೀಲಾದೇವಿಯನ್ನು ಕರೆದು “ನೋಡಿ ನಮ್ಮ ರೂಂನಲ್ಲಿ ಇರೋರು ಮೂವರು ಆ ಮೂವರನ್ನು ಬಿಟ್ಟರೆ  ವಾಶ್ ರೂಮನ್ನು ಬೇರೆಯವರು ಉಪಯೋಗಿಸುವಂತಿಲ್ಲ”. ಎಂದು ಸುಟ್ಟುರಿಯುವಂತೆ ನುಡಿದಳು. ಬೇಜಾರಿನ ಮೇಲೆ ಬೇಜಾರು ಪ್ರಾರಂಭವಾಯಿತು. ಅಷ್ಟರಲ್ಲಾಗಲೇ ಅವರಿಗೆ ಜಾಗ! ಜಾಗ! ಎಂದು ಸುದ್ದಿ ಇಡೀ ಪಿ.ಜಿಯ ತುಂಬೆಲ್ಲಾ ಹರಡಿತು. ಬೃಹತ್ ಸುದ್ದಿಯೇ ಆಯಿತು ಅನ್ನಿ. ಇವತ್ತೊಂದು ದಿನ ಬಂಧುಗಳ ಮನೆಗೆ ತೆರಳಿ ಊರಿಗೆ ಹೊರಡುವ ನಿರ್ಧಾರದಿಂದ ಲಗೇಜ್ ಬ್ಯಾಗ್ ಎತ್ತಿಕೊಂಡಾಗಲೇ ಸ್ಮಿತ ನನಗೆ ಪರಿಚಯವಾದಳು. ಹುಡುಗಿ ಮಂದಸ್ಮಿತಳಾಗಿಯೇ ಬಂದು “ಎಲ್ಲಿ ಮಲಗುವಿರಿ?” ಎಂದಳು “ಗೊತ್ತಿಲ್ಲ? ಊರಿಗೋ ಕಸಿನ್ ಮನೆಗೋ ಹೋಗುವೆ” ಎಂದೆ “ನೀವು ಬಂದಿರುವುದು ಸಾಧನೆಯ ಉದ್ದೇಶದಿಂದ ಊರಿಗೆ ಹೊರಡುವುದು ಏನು ಮಾತು ಬನ್ನಿ ನನ್ನ ರೂಮಿಗೆ ಅರೆ ಏನು ನೋಡೋದು ಬನ್ನಿ…. ಬನ್ನಿ ಅಂದರೆ ಬರಬೇಕಪ್ಪ” ಎಂದು ನನ್ನನ್ನು ಅವಳ ರೂಮಿಗೆ ಕರೆದೊಯ್ದಳು.      “ನಿಮ್ಮನ್ನು ನೋಡಿದರೆ ನನಗೆ ಏನು ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ ನಮ್ಮ ರೂಮು ಖಾಲಿಯಿಲ್ಲ ಅದರೆ ನನ್ನ ಗೆಳತಿ ಬೇಸಿಗೆ ರಜೆಗೆ ಊರಿಗೆ ಹೋಗಿದ್ದಾಳೆ ಅವಳ ಬೆಡ್ ನೀವು ಉಪಯೋಗಿಸಬಹುದು” ಎಂದಳು. ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ.  ಒಡಹುಟ್ಟಿದವರಿಗಿಂತ ಹೆಚ್ಚಾಗಿ ಪ್ರೀತಿ ತೋರಿಸಿದಳು.      ಎಷ್ಟು ಆತ್ಮೀಯತೆ ಎಂದರೆ ಇವತ್ತಿಗೂ ನೆನೆಸಿಕೊಂಡರೆ ಕಣ್ಣಾಲಿಗಳು ತೇವಗಟ್ಟುತ್ತವೆ. ಪರಿಚಯ ಗಾಢವಾದಂತೆ ಒಂದೇ ಊರಿನವರು ಎಂದು ಗೊತ್ತಾಯಿತು. ಕಣ್ಣರಿಯದಿದ್ದರೂ ನಮ್ಮ ಕೊರಳ ಧ್ವನಿ ಒಂದೇ ಆದ್ದರಿಂದ ಕರುಳ ಬಳ್ಳಿಯ ಸಂಬAಧಕ್ಕಿAತ ನಮ್ಮ ಭಾಂದವ್ಯ ಹೆಚ್ಚಾಗಿಬಿಟ್ಟಿತು. ಒಂದೇ ಮಾತು ಹೇಳಿದಳು “ನೀವು ಬಂದಿರುವುದು ಉದ್ದೇಶವಿಟ್ಟುಕೊಂಡು ಉದ್ದೇಶ ಈಡೇರಿಸಿಕೊಳ್ಳಿ ಅಷ್ಟೆ” ಎಂದಳು. ಮರುದಿನ ಎದ್ದು ಸ್ನಾನ ಮುಗಿಸಿ ಕ್ಲಾಸ್‌ಗೆ ಹೊರಟೆ. ನನ್ನ ಊರಿನಿಂದ ನನ್ನೊಟ್ಟಿಗೆ ಬಂದಿದ್ದ ನನ್ನ ಜೊತೆಗಾತಿಗೆ ಆಗಲೆ ಮುಖ ಗಡಿಗೆಯಾಯಿತು! ಇಲ್ಲಿ ಬಂದರೂ ಅವರಿಗೆ ಆತ್ಮೀಯರು ಸಿಕ್ಕಿಬಿಟ್ಟರಲ್ಲ ಎಂಬ ಧಗೆ ಇತ್ತು. ಪಾಪ ಸ್ಮಿತ  ಪಿಜಿಗೆ ಬರುವಷ್ಟರಲ್ಲಿ ತಿಂಡಿ ಖಾಲಿಯಾಗಿರುತ್ತದೆಂದು ಬಾಕ್ಸ್ಗೆ ತಿಂಡಿ ತುಂಬಿಸಿಕೊAಡು ನಮ್ಮ ತರಗತಿಗೇ ತಂದುಕೊಟ್ಟಳು. ರುಚಿರುಚಿಯಾಗಿ ಮಾಡಿಕೊಂಡು ತಿಂದಿದ್ದ ನಾಲಿಗೆಗೆ ಸ್ವಲ್ಪ ಕಷ್ಟದ ದಿನಗಳೆನೇ. ಮುರಿದ ಇಡ್ಲಿ, ಸುಕ್ಕುಗಟ್ಟಿದ ದೋಸೆ, ಬಣ್ಣಕಳೆದುಕೊಂಡ ಚಿತ್ರನ್ನ, ಸೊರಗಿದ ಉಪ್ಪಿಟ್ಟು, ಬಾಡಿದ ಪಲವ್ ಇವೆ! ಹಿಡಿಸಲಿಲ್ಲ.      ನಾನು ಡಯಟ್ ಮಾಡುತ್ತಿದ್ದೇನೆ ಎಂದು ನೆಪಹೇಳಿ  ಫ್ರಷ್ ಫ್ರೂಟ್ ಜೂಸ್ ತಂದು ಕುಡಿದು ರೂಮಿನಲ್ಲಿಯೇ ಓದುತ್ತಾ ಕುಳಿತೆ.  ಅದೇ ಟೈಮ್ ಟೇಬಲ್ .  ಸಂಜೆಯ  ತರಗತಿ ಮತ್ತೆ ೪ ರಿಂದ ೬ ಗಂಟೆಗೆ, ಸರಿಯಾಗಿ ೧೨.೦೦ ೧೨.೦೫ಕ್ಕೆ ಕುಕ್ಕರ್‌ಯುವತಿ ವಿಷಲ್ ಹಾಕಿ ಹಾಕಿ ಅಡುಗೆ ಆಗುತ್ತಿದೆ ಎಂದು ಸಾರಿಸಾರಿ ಹೇಳುತ್ತಿದ್ದಳು. ಒಗ್ಗರಣೆಯ ಸದ್ದು ಅಷ್ಟೇನು ಆರ್ಭಟಿಸಲಿಲ್ಲ ! ಆಘ್ರಾಣಿಸುವಂತಿರಲಿಲ್ಲ!. ನಮಗೆ ಒಂದು ಗಂಟೆಗೆ ಊಟಕ್ಕೆ ಬನ್ನಿ ಎಂಬ ಕರೆ ಬಂತು. ಬೇರೆ ಬೇರೆ ರೂಮಿನವರೆಲ್ಲ ಊಟದ ಬಾಕ್ಸ್ಗಳನ್ನು ಲೋಟಗಳನ್ನು ಸದ್ದುಮಾಡಿಕೊಂಡು ಹೊರ ಮೆಟ್ಟಿಲಿಳಿಯುತ್ತ ಬಂದರು. ನನಗೆ ಮಜುಗರವಾಯಿತು ಅವರೆಲ್ಲ ಊಟ ತೆಗೆದುಕೊಂಡು ಹೋಗಲಿ ಎಂದು ನಿಧಾನವಾಗಿ ಹೊದೆ. ಸಾಂಬರ್ ಏನೋ ಇದೆ ಸರಿ! ಆದರೆ ಯಾವ ಎಂದು ಕೇಳುವ ಪರಿಸ್ಥಿತಿ ಬಂದೇ ಬಿಟ್ಟಿತು.   ಮೊದಲಿಗೆ ಬಂದವರ ಪಾತ್ರೆಗೆ ಇದ್ದ ಸ್ವಲ್ಪ ತರಕಾರಿಗಳು ಸೇರಿದ್ದವು.      ಸಂಜೆ  ಟೀ ಟೈಮ್ ಅಗುತ್ತಲೇ ಬೆಕ್ಕು ಕೆಡಿಸಿದ ದುರ್ನಾತ ಎಲ್ಲಾ ಕಡೆ ಹಬ್ಬಿತು ಪಿಜಿ  ಲಲನೆಯರು ಮೂಗು ಹಿಡಿದುಕೊಂಡೇ ಬೆಕ್ಕು ಕೆಡಿಸಿದ ಜಾಗ ಹುಡುಕಹೊರಟರೆ ಆ ಗಬ್ಬುನಾತ ಬರುತ್ತಿರುವುದು ಟೀ…  ಪಾತ್ರೆಯಿಂದ ಎಂದು ತಿಳಿದುಕೊಳ್ಳುವುದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ. ಕಾಫಿ ಅಭ್ಯಾಸವಿದ್ದ ನಮಗೆ ಈ ಟೀ   ಉಸಾಬರಿ ಬೇಡವೆಂದೇ ಕಾಫಿಗೆ ಅನ್ಯ ಮಾರ್ಗ ಕಂಡುಕೊAಡೆ. ತಿಂಗಳಿಗೆ ರೂ.೫೦ ಕೊಟ್ಟರೆ ಎರಡು ಗ್ಲಾಸ್ ಬಿಸಿನೀರು ಸಿಗುತ್ತಿತ್ತು ಸಂಜೆಗೆ ಸರಿ ಅಂತ ಬಿಸಿನೀರು ತಂದು ಇನ್ಸಟಂಟ್ ಕಾಫಿ ಪೌಡರ್, sಸಕ್ಕರೆ  ಮಿಲ್ಕ್ ಪೌಡರ್ ಹಾಕಿ ಕಾಫಿ Éಅರೇಂಜ್   ಮಾಡಿಕೊಂಡರೆ ನನ್ನ ಊರಿನ ಜೊತೆಗಾತಿ “ಇದು ಕಾಫಿ ತರಾನೇ ಇಲ್ಲ” ಎಂದಳು ಇನ್ನೇನು ಅವಳ ತಲೆಗೆ ಮೊಟಕುವುದೊಂದು ಬಾಕಿ ಸುಮ್ಮನಾದೆ. ಹೀಗೆ ದಿನಗಳು ಉರುಳಿದವು. ಸಂಜೆ ಹೊರಗೆಲ್ಲು ಹೋಗಲಾಗುವುದಿಲ್ಲವಲ್ಲ ಪೇರ‍್ನಂಥ  ನಂತಹ ಚಪಾತಿಗೆ  ಟಿ ಸ್ಪೂನ್ನಂಥ sಸ್ಪೂನಲ್ಲಿ  ಪಲ್ಯ ಹೆಸರುಗೊತ್ತಿಲ್ಲದ ಸಾಂಬರ್ ಸೋಡದಿಂದ ಉಬ್ಬಿದ ಅನ್ನ ನೀರ್‌ರ್ ……… ಮಜ್ಜಿಗೆ ಅನಿವಾರ್ಯವಾಗಿ ನನ್ನ ಊಟದ ಪರಿ ಅಡ್ಜಸ್ಟ್  ಆಯ್ತು.      ಒದಲು ಕುಳಿತರೆ ೯.೩೦ ರಿಂದ ೯.೪೦ರ ಒಳಗೆ ಒಳ್ಳೆಯ  ಸ್ಟಾçಂಗ್ ಕಾಫಿಯ ಮಸಾಲೆ ರೊಟ್ಟಿ ಬೇಯುತ್ತಿರುವ ಘಮಲು ಹಾಗೆ ನಾವಿದ್ದ ಎರಡನೆ ಮಹಡಿಗೆ ತೇಲಿ ತೇಲಿ ಬರುತ್ತಲಿತ್ತು. ಅಂದರೆ ನಮ್ಮ ಅಡುಗೆಯಾಕೆ ದ್ರೌಪದಿಯಮ್ಮನ ಸ್ಪೆಷಲ್ ಅಡುಗೆ ಅವರಿಗೆ ಮಾತ್ರ. ತೋಳಿಲ್ಲದ ಬಟ್ಟೆಯ ಲಲನೆಯರು ಬಂದರೆ ಕೆಂಗಣ್ಣಾಗುತ್ತಿದ್ದರು. ವಾಪಸಕಳಿಸಿ “ಮೈತುಂಬ ಬಟ್ಟೆ ಹಾಕೊಂಡು ಬಿಟ್ಟಿದ ಮುಡಿಯನ್ನು ಕಟ್ಟಿಕೊಂಡು ಬಾ!” ಎಂದು ಗದರುತ್ತಿದ್ದರು. ಸ್ಮಿತಾಳ ಚಿಕ್ಕಪ್ಪನ ಮನೆ ಜಯನಗರದ ಕಡೆಯಿತ್ತು. ಆಕೆ ವಾರಾಂತ್ಯದ ಎರಡು ದಿನಗಳು ಅಲ್ಲಿ ಹೋಗಿ ಗೆಳತಿಯರ ಜೊತೆ ಸೇರಿಸಿ ನನಗೂ ಬೇಕಾದ ಅಡುಗೆಯನ್ನು ದೊಡ್ಡ ದೊಡ್ಡ ಬಾಕ್ಸ್ಗಳಲ್ಲಿ ತುಂಬಿ ತರುತ್ತಿದ್ದಳು. ಸದ್ಯ ಒಳ್ಳೆಯ ಮನೆ ರುಚಿ ತೋರಿಸಿ ಆಕೆಗೆ ಇಂದಿಗೂ ಮನಸ್ಸಿನಲ್ಲಿ ನೆನಪಾದಾಗಲೆಲ್ಲ ಥ್ಯಾಂಕ್ಸ್s ಹೇಳಿಕೊಳ್ಳುತ್ತೇನೆ. ಊಟವಾದ ನಂತರ ಬಿಡುವು ಮಾಡಿಕೊಂಡು ನಾನು ಕುಮಾರ ವ್ಯಾಸ ಭಾರತ ಸನ್ನಿವೇಶಗಳನ್ನು, ಕುವೆಂಪುರವರ ಬಗೆಗಿನ ವಿಚಾರ ಹೇಳುತ್ತಿದ್ದೆ ಅವಳು ಅವಳ ಗೆಳತಿ ರಮ್ಯ ಬಹಳ ಆಸಕ್ತಿಯಿಂದ ಕೇಳಿ ಮಲಗುತ್ತಿದ್ದರು.      ಸ್ಮಿತ ಉದ್ಯೋಗ ಮಾಡುತ್ತಿದ್ದ ಯುವತಿ ನಾನು ಸಂಜೆಯ ತರಗತಿಗೆ ಹೋಗುವಾಗ ಹಾಲ್‌ನಲ್ಲಿ  ಕೀಇಡುವ ಬದಲು ಮರೆತು ತೆಗೆದುಕೊಂಡು ಹೋಗಿದ್ದೆ  ಫೋನ್ ಮಾಡಿ ಸುಟ್ಟವರಿಯುವಂತೆ ಮಾತನಾಡಿದಳು ದಢದಢನೆ ಅವಳೆಡೆಗೆ ಧಾವಿಸಿ ಬರುತ್ತಿದ್ದ ನನ್ನನ್ನು ಕಂಡಾಕೆ ಕೂಲ್ ಆದಳು ಮರುಮಾತನಾಡಲಿಲ್ಲ. ಇಂದಿಗೂ ಅವಳ ನೆನಪು ನನ್ನಲ್ಲಿ ಹಸಿರಾಗಿದೆ. ಬಿಸಿ ನೀರು ಎಲ್ಲಿ ಖಾಲಿಯಾಗಿಬಿಡುವುದೋ ಎಂದು ಸ್ನಾನಮಾಡಿಕೊಂಡು ಮಲಗುವವರು ಅಲ್ಲಿದ್ದರು. ಸ್ವಲ್ಪವೂ ಮುಜುಗರವಿಲ್ಲದೆ ಉಪಯೋಗಿಸಿದ ಪ್ಯಾಡನ್ನು ಬೇಕಾಬಿಟ್ಟಿ ಎಸೆದು ಬೇರೆಯವರಿಗೆ ಮಜುಗರ ತರಿಸುವವರು ಅಲ್ಲಿದ್ದರು. ಎದ್ದು ಶನಿಕಸ ಗುಡಿಸಿಕೊಳ್ಳದೆ ಕಸ ಗುಡಿಸುವವರು ಬರುವವರೆಗೂ ಕಾಯುವ ಸೋಮಾರಿಗಳು ಅಲ್ಲಿದ್ದರು. ಅಂತವರಿಗೆಲ್ಲ ಈ ಸ್ಮಿತ ಅಂದರೆ ಭಯ. ಒಂತರಾ  ಲೇಡಿ ರ್ಯಾಂಬೋ ಆಕೆ ಬರುತ್ತಿದ್ದಳೆಂದು ಗೊತ್ತಾದರೆ ಎಲ್ಲರು ಅಲರ್ಟ್ ಆಗಿ ಬಿಡುತ್ತಿದ್ದರು. ನನಗೋಸ್ಕರ ಅವರಿವರ ಬಳಿ ಕೇ ಕೇಳಿ  ನೋಟ್ಸ್s ತಂದುಕೊಡುತ್ತಿದ್ದಳು. ಇಷ್ಟರಲ್ಲಿ ಸ್ಮಿತಳ  ರೂಮ್ ಮೇಟ್ ವಾಪಾಸ್ಸು  ಪಿಜಿಗೆ ಬರುವುದು ಖಾತ್ರಿಯಾಯಿತು. ಬೇರೆ ರೂಂಗಳು ಖಾಲಿಯಿದ್ದರೂ ಅಲ್ಲಿಗೆ ಹೋಗಲು ನನಗೆ ಮನಸ್ಸಾಗಲಿಲ್ಲ. ಸ್ಮಿತ ಆಫೀಸಿನಿಂದ ಬರುವುದನ್ನೆ ಕಾಯ್ದು ನಾನು ಊರಿಗೆ ಹೊರಡುತ್ತೇನೆ! ನಿನಗೆ ಶುಭವಾಲಿ! ಎಂದೆ. ಮನಸ್ಸಿನಲ್ಲಿ ಅಲ್ಲಿ ಇರುವುದಕ್ಕೆ ಅಸೆ ಅದರೆ ಪರಿಸ್ಥಿತಿ ಬೇಡ ಅನ್ನಿಸುತ್ತಿತ್ತು. ಅಲ್ಲಿಗೆ ಅಕ್ಷಯ ತದಿಗೆ ಸ್ಮಿತಳ ಗೆಳತಿ ರಶ್ಮಿ ಅವರಿಬ್ಬರು ವಿಜಯನಗರ  ಮಾರ್ಕೆಟ್ಗೆ ಹೋಗಿ ಅಗತಾನೆ ಸಂಪಿಗೆ, ಕನಕಾಂಬರ, ಮರುಗ ಹಾಕಿ ಕಟ್ಟಿದ ಮೈಸೂರು  ಮಲ್ಲಿಗೆಹೂವನ್ನು , ಬಳೆ ಅರಿಸಿನ ಕುಂಕುಮ ಸ್ವೀಟ್ ಎಲ್ಲ ತಂದರು. ನನ್ನನ್ನು ಕೂರಿಸಿ ನನ್ನ ಮಡಿಲು ತುಂಬಿದರು ಎಲ್ಲರ ಕಣ್ಣಂಚಲ್ಲಿ ನೀರು!  ನನ್ನ ವೇಲನ್ನೆ ಹರಹಿ ಮಡಿಲು ತುಂಬಿಸಿಕೊಂಡೆ.ಈಗಿನ ಹಾಗೆ ಸ್ಮಾರ್ಟ್   ಫೋನ್ ಹಾವಳಿ ಅಗಿರಲಿಲ್ಲ ಇದ್ದರೆ  ಫೋಟೊಗಳಲ್ಲಿ ಒಂದಷ್ಟು ನೆನಪು ಹಸಿಯಾಗಿ ಇರುತ್ತಿದ್ದವೇನೋ.? ಗೊತ್ತಿಲ್ಲ!! “ಥ್ಯಾಂಕ್ಸ್ ಫಾರ್ ಟೀಚಿಂಗ್ ಪಲ್ಸಸ್ ಆಫ್ ಲೈಫ್ ಬಿಟ್ಸ್ ಆಫ್ ಲೈಫ್”s  ಅಂತ ಅಂದುಕೊAಡೇ ನನ್ನೆಲ್ಲಾ ಲಗೇಜ್ ಪ್ಯಾಕ್ ಮಾಡಿಕೊಂಡೆ. ಆದರೆ ಹೊಸಬರನ್ನು ಕಳ್ಳಗಣ್ಣುಗಳಿಂದಲೆ ನೋಡುವ ಅನುಮಾನದ ಕಣ್ಣುಗಳಿಗೆ ಈಗಲೂ ಧಿಕ್ಕಾರವಿದೆ.      ಮರು ದಿನ ಸ್ಮಿತ ಕಛೆರಿಗೆ ರಜೆ ಹಾಕಿ ಅಚೇ ಕರೆದುಕೊಂಡು ಎಂದು ಲಗೇಜ್ ಇಟ್ಟುಕೊಟ್ಟು ಶುಭಾಶಯಗಳನ್ನು ಗದ್ಗದಿತಳಾಗಿಯೇ ಹೇಳಿದಳು ಬಾಯ್! ಬಾಯ್! ಅನ್ನುವ ಆಕೆಯ ಕೈಸನ್ನೆ ಇನ್ನೊಮ್ಮೆ “ಈ ಪಿ.ಜಿ. ಗೆ ಕಾಲಿಡಬೇಡಿ ನಿಮ್ಮಂತಹವರಿಗೆಲ್ಲ ಈ ಪಿ.ಜಿ. ಜೀವನ!” ಎಂದು ವಿನಂತಿಸಿಕೊಳ್ಳುವAತಿತ್ತು. ವಿನಂತಿಗೊಳ್ಳುತ್ತಲೇ ಆಕೆ ಮರೆಯಾದಳು.. ಬಿಳಿಬಣ್ಣದ ಚೂಡಿದಾರ್ಗೆ ಧರಿಸಿದ್ದ ಅವಳ ತಿಳಿನೀಲಿ ಬಣ್ಣದ ವೇಲ್ ತಿಳಿಗಾಳಿಗೆ  ಹಾರಾಡುತ್ತಿರುವಂತೆಯೇ  ನಾನಿದ್ದ ಅಟೋ ಮುಂದೆ  ಸಾಗಿತ್ತು. ಅವಳ ನಂಬರ್  ಬಹಳ ದಿನಗಳವರೆಗೆ ಇತ್ತು! ಆದರೆ ಈಗಿಲ್ಲ !ಕಡೆ ಪಕ್ಷ ಆಕೆಯ ನಂಬರನ್ನಾದರೂ ಉಳಿಸಿಕೊಂಡಿಲ್ಲವಲ್ಲ ಎಂಬ ಕೊರಗು ಇವತ್ತಿಗೂ ಇದೆ. ಆದರೆ ಆಕೆ ಸಾಯಿಮಂದಿರದಿAದ ತಂದು ಕೊಟ್ಟ ಸಾಯಿ ಫೋಟೋ ನನ್ನ

ಮೊದಲ ಬಾರಿ ಪೇಯಿಂಗ್ ಗೆಸ್ಟ್ ಆಗಿ ಹೋದಾಗ Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಜ್ಞಾನವೆಂಬ ತಿಜೋರಿಯ ಕೀಲಿಕೈ… ಪುಸ್ತಕಗಳ ರಾಶಿಯನ್ನು ತಡವುವಾಗೆಲ್ಲಾ ಎಂಥದೋ ಆಪ್ತಭಾವ. ಗುಪ್ತಗೆಳೆಯನೊಬ್ಬ ಮನಕ್ಕೆ ಆಗಮಿಸಿದಂತೆ ಪ್ರತಿ ಪುಸ್ತಕವೂ ನಮ್ಮ ಅತಿ ಖಾಸಗೀತನವನ್ನು ಕೊಳ್ಳೆ ಹೊಡೆಯುತ್ತಿರುತ್ತದೆ. ನನಗೆ ಪುಸ್ತಕದ ರುಚಿ ಹತ್ತಿದ್ದು ಬಹುಶಃ ಮೂರೋ ನಾಲ್ಕನೆಯದೋ ತರಗತಿಯಲ್ಲಿದ್ದಾಗ. ಆಗ ನನ್ನ ಮನೆಗೆ ಬರುತ್ತಿದ್ದದ್ದು ದಿಕ್ಸೂಚಿ ಮಾತ್ರ. ಅದು ಖಂಡಿತ ದಿಕ್ಸೂಚಿ ಆಕರ್ಷಕವಾಗಿ ಕಾಣಿಸಬಹುದಾದ ವಯಸ್ಸು ಆಗಿರಲಿಲ್ಲ. ಆದರೆ ಒಂದು ಪುಸ್ತಕದ ಸ್ಪರ್ಶದ ಅನುಭೂತಿ ಹೇಗಿರುತ್ತದೆಂದು ತಿಳಿದದ್ದು ಮಾತ್ರ  ದಿಕ್ಸೂಚಿಯಿಂದಲೇ. ಶಾಲೆಯ ಪಠ್ಯ ಪುಸ್ತಕಗಳು ಸದಾ ನಮ್ಮೊಂದಿಗಿರುತ್ತಿದ್ದವಾದರೂ ಯಾವತ್ತಿಗೂ ಅವು ನಮಗೆ ಆತ್ಮೀಯವಾಗಿ ಕಾಣಿಸುತ್ತಿರಲಿಲ್ಲ. ಅವನ್ನು ಎಷ್ಟು ಬೇಗ ಹೊರತೆಗೆಯುತ್ತಿದ್ದೆವೋ ಅಷ್ಟೇ ಬೇಗ ಒಳ ಹಾಕಿ ಮುಚ್ಚಿಟ್ಟು ಎದ್ದರೇ ಸಮಾಧಾನ. ಆದರೆ ಕತೆಗಳ ಲೋಕ ಪರಿಚಯವಾಯ್ತು ನೋಡಿ ಪುಸ್ತಕಗಳ ರುಚಿಯೂ ಸಿಕ್ಕಿಬಿಟ್ಟಿತು. ಕತೆಗಳು ಹತ್ತಿರವಾದ ನಂತರ ಕನ್ನಡ, ಇಂಗ್ಲೀಷ್ ಮತ್ತು ಹಿಂದಿಯ ಪಾಠಗಳು ಪಾಠವಾಗಲ್ಲದೇ ಕಥೆಗಳಾಗಿಯೂ ಇಷ್ಟವಾಗತೊಡಗಿದವು. ಕವಿತೆಗಳು ಆಪ್ತ ಹಾಡಾದವು. ಇದು ಓದಿನ ರುಚಿ ಹತ್ತಿಸಿದ ಕತೆಗಳಿಂದ ಆದ ಬಹುದೊಡ್ಡ ಲಾಭ.  ಆದರೆ ಚಿಕ್ಕಂದಿನಲ್ಲಿ ಬಾಲಮಂಗಳ, ಚಂದಾಮಾಮ, ಚಂಪಕದಂತಹ ಪುಸ್ತಕಗಳ ಬಗ್ಗೆ ಇರುತ್ತಿದ್ದ ಆಕರ್ಷಣೆಯ ಮಟ್ಟ ಎಷ್ಟಿರುತ್ತಿತ್ತೆಂದರೆ ಎಲ್ಲಿಯಾದರೂ ಸಿಕ್ಕರೆ ಸಾಕು ಲಪಟಾಯಿಸಿಬಿಡಬೇಕು ಎನ್ನುವಷ್ಟು. ಆದರೆ ಲಪಟಾಯಿಸುವ ಅವಕಾಶ  ಸಿಗಲಿಲ್ಲ ಅದು ಬೇರೆ ಮಾತು. ಮನೆಯಲ್ಲಿ ಕೊಡಿಸಿ ಎಂದು ದುಂಬಾಲುಬಿದ್ದರೆ ದಿಕ್ಸೂಚಿ ಓದು ಎನ್ನುವ ಉತ್ತರ ಬರುತ್ತಿತ್ತು. ದಿಕ್ಸೂಚಿಯ ಪುಟ ತಿರುವುವಾಗ ಎಂಥದೋ ನಿರಾಸೆ… ಅಲ್ಲಿ ಎಲ್ಲಿಯಾದರೂ ಇತಿಹಾಸದ ರಾಜರ ಕತೆಗಳಿದ್ದರೆ ಕಣ್ಣುಗಳು ಕೊಂಚ ಮಿಂಚುತ್ತಿದ್ದವು. ಒಂದಷ್ಟು ವರ್ಷ ದಿಕ್ಸೂಚಿಯಲ್ಲಿ ನಾಗರೀಕತೆಗಳ ಬಗ್ಗೆ ಸಚಿತ್ರ ವಿವರಣೆ ಬರುತ್ತಿತ್ತು. ಅದು ಸ್ವಲ್ಪ ಆಸಕ್ತಿ ಹುಟ್ಟಿಸುತ್ತಿತ್ತು. ಆದರೆ ಬಾಲಮಂಗಳದ ಕತೆಗಳ ಮುಂದೆ ಮೃಷ್ಟಾನ್ನದ ಮುಂದೆ ಇಟ್ಟ ಮುದ್ದೆಯ ಹಾಗೆ ಸಪ್ಪೆ ಸಪ್ಪೆ… ನನ್ನ ಗೆಳತಿಯೊಬ್ಬಳು ತನ್ನಲ್ಲಿರುತ್ತಿದ್ದ ಬಾಲಮಂಗಳ ಪುಸ್ತಕವನ್ನು ಆಗಾಗ ಶಾಲೆಗೆ ತರುತ್ತಿದ್ದಳು. ಅದನ್ನು ನೋಡುವಾಗೆಲ್ಲಾ ಇವಳೆಷ್ಟು ಅದೃಷ್ಟವಂತಳು, ಇವಳ ಅಮ್ಮ  ಇವಳಿಗೆ ಓದಲು ಕತೆ ಪುಸ್ತಕ ಕೊಡಿಸುತ್ತಾರಲ್ಲಾ ಎಂದು ಕರುಬುತ್ತಿದ್ದೆ. ರಜೆ ಸಿಕ್ಕಾಗ ಅವಳ ಮನೆಗೆ ಬಾಲ ಮಂಗಳವನ್ನು ನೋಡಲಿಕ್ಕೆಂದೇ ಹೋದದ್ದಿದೆ. ಆದರೆ ಅವನ್ನು ದೂರದಿಂದ ನೋಡಬಹುದಿತ್ತಷ್ಟೇ, ಮುಟ್ಟುವಂತಿರಲಿಲ್ಲ. ಇರಲಿ ಆ ಗೆಳತಿ ಕನಿಷ್ಟ ನೋಡಲು ಬಿಟ್ಟಿದ್ದಳಲ್ಲಾ… ಅದೇ ಸಮಾಧಾನ. ಈ ಪರಿಸ್ಥಿತಿಯನ್ನು ದಾಟುತ್ತಿರುವಾಗ ಅಚಾನಕ್ ನನಗೆ ಸಿಕ್ಕ ದೊಡ್ಡ ನಿಧಿ ಎಂದರೆ ಲೈಬ್ರರಿ ಕಾರ್ಡ್.  ನಾನು ಐದನೇ ತರಗತಿಯಲ್ಲಿದ್ದಾಗ ಬಹುಶಃ ನನ್ನಪ್ಪ ನನಗದನ್ನು ಮಾಡಿಸಿಕೊಟ್ಟದ್ದು. ನಂತರ ಅಲ್ಲಿದ್ದ ಪಂಚತಂತ್ರದ ಕತೆಗಳಿಂದ ಹಿಡಿದು ಎಲ್ಲಾ ರೀತಿಯ ಕತೆಗಳನ್ನೂ ಒಂದು ಕಡೇಯಿಂದ ಓದಿ ಮುಗಿಸಿದ್ದೆ. ಪರೀಕ್ಷೆಗಳಿದ್ದಾಗಲೂ ಕತೆ ಪುಸ್ತಕಗಳನ್ನು, ಪಠ್ಯಪುಸ್ತಕದ ನಡುವೆ ಬಚ್ಚಿಟ್ಟುಕೊಂಡು ಓದಲು ಹೋಗಿ ಅಪ್ಪನ ಕೈಗೆ ಸಿಕ್ಕುಬಿದ್ದು ಬೈಸಿಕೊಂಡದ್ದೂ ಇದೆ. ಹೈಸ್ಕೂಲು ಮುಗಿದು ಕಾಲೇಜು ಮೆಟ್ಟಿಲು ಹತ್ತಿದಾಗ ನಾನು ನನ್ನ ಜೀವನದ ಮೊಟ್ಟ ಮೊದಲ ಸಾಮಾಜಿಕ ಕಾದಂಬರಿ ಓದಿದ್ದು. ನಾನು ಓದಿದ ಮೊದಲ ಕಾದಂಬರಿ ಉಷಾನವರತ್ನರಾಮರ ಬಿರುಕು. ಆ ಕತೆಯ ಧರಣಿ, ಚಾರುದಾಸ್, ಅವರ ಮುದ್ದಾದ ಮಗಳು ಈಶಾನ್ಯ… ಪ್ರತಿ ಪಾತ್ರವೂ ಇಂದಿಗೂ ಮನಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅದೆಷ್ಟೋ ಬಾರಿ ಆ ಪಾತ್ರಗಳು ನನ್ನನ್ನು ವಿಪರೀತ ಕಾಡಿವೆ. ಆ ವಯಸ್ಸೇ ಅಂಥದ್ದು. ಕಾದಂಬರಿಯ ಪಾತ್ರವನ್ನೇ ಆವಾಹಿಸಿಕೊಂಡು ಅನುಭವಿಸುವಂತಹ ವಯಸ್ಸು.  ನಂತರ ಓದಿನ ಸಲುವಾಗಿ ನಗರದ ಹಾಸ್ಟೆಲ್ಲಿಗೆ ಬಂದೆ. ಅಲ್ಲಿ ನಮ್ಮ ಹಾಸ್ಟೆಲ್ ಎದುರಿಗೆ ಒಂದು ಸಣ್ಣ ಹೋಟೆಲ್ ಇತ್ತು. ಅದರ ಮುಂಭಾಗದ ಶೋಕೇಸಿನಲ್ಲಿ ಕುವೆಂಪುರವರು ಬರೆದ ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ಜೀವನ ಚರಿತ್ರೆಗಳನ್ನು ಇಟ್ಟಿರುತ್ತಿದ್ದರು. ದಿನಾ ಅವನ್ನು  ಗಮನಿಸುತ್ತಿದ್ದ ನಾನು ಒಮ್ಮೆ ತಡೆಯಲಾಗದೆ ಆ ಪುಸ್ತಕವನ್ನು ಕೊಡುತ್ತೀರಾ ಓದಿ ತಂದುಕೊಡುವೆ ಎಂದು ಕೇಳಿಯೇಬಿಟ್ಟಿದ್ದೆ. ಒಂದೆರೆಡು ದಿನ ಇಲ್ಲ ಎನ್ನುತ್ತಾ ಸತಾಯಿಸಿದ  ಹೋಟೇಲಿನ ಮಾಲೀಕರು, ಕೊನೆಗೆ ನಾ ಯಕೋ ಬಿಡೋ ಗಿರಾಕಿ ಅಲ್ಲ ಅನಿಸಿ ಒಂದಿನ ವಿವೇಕಾನಂದರ ಜೀವನ ಚರಿತ್ರೆಯನ್ನು ಮಾತ್ರ ಕೊಟ್ಟರು. ಅವತ್ತು ಆ ಪುಸ್ತಕವನ್ನು ಕೈಯಲ್ಲಿ ಹಿಡಿದದ್ದೇ ಒಂದು ರೋಮಾಂಚನ. ಅದರ ಓದು ನನ್ನಲ್ಲಿ ತಂದ ಬದಲಾವಣೆಯೂ ಒಂದು ಅದ್ಭುತವೇ ಸರಿ. ಆ ಅದ್ಭುತವೇ ಮೂರು ವರ್ಷಗಳ ಕಾಲ ಹಾಸ್ಟೆಲ್ಲಿನಲ್ಲಿದ್ದಾಗ ನನ್ನನ್ನು ತಿದ್ದಿದೆ, ಬುದ್ಧಿ ಹೇಳಿದೆ, ಸಮಾಧಾನಿಸಿದೆ, ಸರಿ ದಾರಿಯಲ್ಲಿ ನಡೆಸಿದೆ. ಆ ಪುಸ್ತಕವನ್ನು ವಾರಕ್ಕೆ ಮುಂಚೆಯೇ ಒಂದು ಮುಕ್ಕು ಬಾರದಂತೆ ಜೋಪಾನವಾಗಿಟ್ಟುಕೊಂಡು, ಓದಿ ಮುಗಿಸಿ ಹೋಟೇಲಿನ ಅಂಕಲ್ (ಇಷ್ಟು ದಿನಗಳಲ್ಲಿ ಅವರೀಗ ಅಂಕಲ್ ಆಗಿ ಬದಲಾಗಿದ್ದದ್ದೂ ಸೋಜಿಗ…) ಗೆ ಮರಳಿ ತಂದು ಕೊಟ್ಟಾಗ ಅವರ ಮುಖದಲ್ಲಿ ಒಂದು ಸಣ್ಣ ಸಂತೋಷ ಮತ್ತು ಮೆಚ್ಚುಗೆ ಇತ್ತು. ಮರಳಿ ಪಡೆದ ಪುಸ್ತಕವನ್ನು ಅದಿದ್ದ ಜಾಗದಲ್ಲೇ ಇಟ್ಟು, ಸದ್ದಿಲ್ಲದೇ ನಾ ಕೇಳದೆಯೇ ರಾಮಕೃಷ್ಣರ ಪುಸ್ತಕವನ್ನು ತಂದು ನನ್ನ ಕೈಗೆ ಇತ್ತಿದ್ದರು. ನನ್ನ ಕಣ್ಣಲ್ಲಿ ಕೃತಜ್ಞತೆಯ ಮಹಾಪೂರ… ಖುಷಿಯ ಉತ್ತುಂಗದಲಿ ನಾನಿದ್ದೆ. ಮತ್ತೊಂದು ವಾರದ ನನ್ನ ಓದು ಸಂಪನ್ನವಾಗಿತ್ತು. ಅಲ್ಲಿಂದ ಮುಂದಕ್ಕೆ ಪುಸ್ತಕಗಳನ್ನು ನಾನು ಹುಡುಕಿ ಹೊರಡಲು ಶುರುಮಾಡಿದೆ. ಎಲ್ಲೇ ಪುಸ್ತಕ ಕಾಣಲಿ ಅದು ನನಗೆ ಬೇಕು ಅನಿಸುತ್ತಿತ್ತು. ನನ್ನ ಪಾಕೆಟ್ ಮನಿಯ ಬಹುಭಾಗ ಪುಸ್ತಕಗಳಿಗೇ ಖರ್ಚಾಗುತ್ತಿತ್ತು. ಇನ್ನು ನಾನು ಯಾವ ಯಾವ ಊರಿನಲ್ಲಿರುತ್ತಿದ್ದೆನೋ ಅಲ್ಲೆಲ್ಲಾ ಒಂದೊಂದು ಲೈಬ್ರರಿ ಕಾರ್ಡ್ ಇರುತ್ತಿತ್ತು ನನ್ನ ಬಳಿ. ಇನ್ನು ನೌಕರಿ ಸಿಕ್ಕಾಗ ಆದ ಮೊದಲ ಆನಂದವೆ ಇನ್ನು ಮುಂದೆ ಸ್ವಂತ ಖರ್ಚಿನಲ್ಲಿ ಪುಸ್ತಕ ಕೊಳ್ಳಬಹುದು ಎಂಬುದು. ಅದು ಮತ್ತೊಂದೇ ಮಟ್ಟಿಗಿನ ಖುಷಿ. ನನ್ನ ಆಸಕ್ತಿ ಎಷ್ಟು ವೈವೀಧ್ಯವಿರುತ್ತಿತ್ತೋ ಅಷ್ಟೇ ರೀತಿಯ ಪುಸ್ತಕಗಳನ್ನು ನಾನು ಓದುತ್ತಿದ್ದದ್ದು. ಸಾಹಿತ್ಯ, ವ್ಯಕ್ತಿತ್ವ ವಿಕಸನ, ಆಧ್ಯಾತ್ಮ, ಸಂಗೀತ, ಜ್ಯೋಯಿಷ್ಯ, ಸಂಖ್ಯಾಶಾಸ್ತ್ರ… ಹೀಗೆ ನಾನಾ ಬಗೆಯ ಪುಸ್ತಕಗಳಿರುತ್ತಿದ್ದವು ನನ್ನ ಬಳಿ. ನನ್ನ ಗೆಳತಿಯರು ಕೆಲವೊಮ್ಮೆ ಶಾಸ್ತ್ರ ಕೇಳಲು ಬರುತ್ತಿದ್ದರು ನನ್ನ ರೂಮಿಗೆ. ಈಗ ನೆನೆದರೆ ನಗು ಬರುತ್ತದೆ. ಈಗಲೂ ಆ ಎಲ್ಲ ಪುಸ್ತಕಗಳೂ ಇವೆ… ಎಲ್ಲೋ ಮೂಲೆಯಲ್ಲಿ. ಅಪ್ಪ ಒಮ್ಮೆ ತಮಾಷೆಗೆ, “ಸುಮ್ನೆ ಒಂದು ಬೋರ್ಡ್ ಹಾಕ್ಕೊಂಡು, ಪಂಚಾಂಗ ಇಟ್ಕೊಂಡು ಕೂತುಬಿಡು ಹೋಗ್ಲಿ, ಒಂಚೂರು ಸಂಪಾದನೆಯಾದ್ರೂ ಆಗುತ್ತೆ…” ಅಂತ ಹೇಳಿ ಹೇಳಿ ನಗಾಡಿದ್ರು. ಆದ್ರೆ ಯಾರೇನೇ ಹೇಳಲಿ, ನನಗೆ ಆಸಕ್ತಿ ಹುಟ್ಟಿದ್ದನ್ನೆಲ್ಲಾ ನಾ ಓದಿದ್ದೇ ಸೈ ಎನ್ನುವಂತೆ ಓದುತ್ತಿದ್ದೆ ಆಗ. ತುಷಾರ, ಮಯೂರ, ಓ ಮನಸೇ, ಸುಧಾ, ತರಂಗ… ತಪ್ಪದೇ ನನ್ನ ಕೋಣೆ ಸೇರುತ್ತಿದ್ದವು. ನಾನಾಲ್ಕು ನ್ಯೂಸ್ ಪೇಪರ್ ಹಾಕಿಸಿಕೊಳ್ತಿದ್ದೆ ಮನೆಗೆ. ಅಕ್ಕಪಕ್ಕದವರು ಒಂದು ರೀತಿ ಹುಚ್ಚರನ್ನು ನೋಡುವ ಹಾಗೆ ನೋಡುತ್ತಿದ್ದರು. ಒಂದೆರೆಡು ಮಂದಿ ತಮ್ಮ ಮನೆಗೆ ನ್ಯೂಸ್ ಪೇಪರ್ ಹಾಕಿಸಿಕೊಳ್ಳುವುದನ್ನೇ ಬಿಟ್ಟುಬಿಟ್ಟಿದ್ದರು. ಇಲ್ಲಿಯೇ ಬಂದು ಓದಿ ಹೋದರಾಯಿತು ಎಂದುಕೊಂಡು. ಅವರು ಬಂದು ಕೇಳಿದಾಗ ನನಗೂ ಇಲ್ಲ ಎನ್ನಲು ಸಾಧ್ಯವಿರುತ್ತಿರಲಿಲ್ಲ.  ವಾರವಿಡೀ ಕೆಲಸಕ್ಕೆ ಹೋಗುವ ತರಾತುರಿ. ಸಿಗುತ್ತಿದ್ದ ಒಂದೇ ಒಂದು ದಿನದ ಬಿಡುವು ಭಾನುವಾರ. ಭಾನುವಾರದಂದು ನಾ ಮಾಡುತ್ತಿದ್ದ ಮೊಟ್ಟ ಮೊದಲ ಕೆಲಸವೇ ಲೈಬ್ರರಿಗೆ ಹೋಗಿ ಅಲ್ಲೊಂದಿಷ್ಟು ಹೊತ್ತು ಪುಸ್ತಕಗಳನ್ನು, ನೋಡಿ, ಮುಟ್ಟಿ, ತಡವಿ ಕೊನೇಗೆ  ಯಾವುದೋ ತುಂಬಾ ಬಿಡಲಾಗದ ಮೂರು ಪುಸ್ತಕಗಳಿಗೆ ಡೇಟ್ ಹಾಕಿಸಿಕೊಂಡು ತರುತ್ತಿದ್ದದ್ದು. ಅಷ್ಟಕ್ಕೂ ಡೇಟ್ ಹಾಕಿಸಿಕೊಂಡು ಬರುವ ಅವಶ್ಯಕತೆಯೇ ಇರುತ್ತಿರಲಿಲ್ಲ. ಕಾರಣ ನಾಲ್ಕೈದು ದಿನಗಳೊಳಗಾಗಿಯೇ ಅವು ಲೈಬ್ರರಿಗೆ ಮರಳಿಬಿಡುತ್ತಿದ್ದವು. ಮತ್ತೆ ಹೊಸಪುಸ್ತಕಗಳು ಮನೆ ಸೇರುತ್ತಿದ್ದವು. ಇದೊಂದು ಮಾತ್ರ ಯಾವಾಗಲೂ ಹೀಗೆ ನಡೆಯುತ್ತಿತ್ತು. ಹಾಗಾಗಿ ಲೈಬ್ರೇರಿಯನ್ನೂ ಮೂರು ಕೊಡೋ ಜಾಗದಲ್ಲಿ ನಾಲ್ಕು, ಐದು ಪುಸ್ತಕಗಳನ್ನೂ ಕೊಟ್ಟು ಕಳಿಸಿಬಿಡುತ್ತಿದ್ದ. ಭಾನುವಾರ ಬಂತೆಂದರೆ ಪೂರ್ತಿ ಎಲ್ಲ ಪೇಪರ್ರುಗಳ ಅಡಿಶನಲ್ಸ್ ಗಳನ್ನು ಓದುವುದರಲ್ಲೇ ಮುಗಿಯುತ್ತಿತ್ತು. ಯಾವುದನ್ನು ಬೇಕಾದರೂ ತಪ್ಪಿಸಿ ಬಿಡುತ್ತಿದ್ದೆನೇನೋ ಆದರೆ ಇದನ್ನು ಬಿಡುವುದು ಸಾಧ್ಯವಿರುತ್ತಿರಲಿಲ್ಲ. ಹಾಗೆ ಲೋಕದ ಅರಿವಿಲ್ಲದೆ ಓದುತ್ತಾ ಕಾಲ ಕಳೆದುಬಿಡುವುದೂ ಒಂಥರಾ  ಸುಖ.  ಈಗ ಇವೆಲ್ಲಾ ನೆನಪುಗಳೂ ನನಗೇ ಒಂದು ನಮೂನಿ ದಂತಕಥೆಗಳಂತೆ ಕಾಣಿಸುತ್ತವೆ. ಕಾರಣ ಮದುವೆ, ಸಂಸಾರ, ಮಕ್ಕಳು, ಕೆಲಸ…  ಒಟ್ಟಾರೆ ಧಾವಂತದ ಈ ಬದುಕಿನ ನಡುವೆ ಓದುವ ಸುಖ ಕಳೆದುಹೋಗಿದೆ. ಸಿಗುವ ಸಣ್ಣ ಸಣ್ಣ ಸಮಯದ ತುಣುಕುಗಳನ್ನು ಜೋಡಿಸಿಕೊಂಡು ಒಂದೊಂದೇ ಪುಸ್ತಕವನ್ನು ಪ್ರೀತಿಯಿಂದ ಮುಗಿಸಬೇಕಾಗಿ ಬರುತ್ತದೆ. ಆದರೆ ಓದುವ ಪ್ರೀತಿ ಇನ್ನೂ ಬತ್ತಿಲ್ಲ, ಸ್ವಲ್ಪವೂ ಸೊರಗಿಲ್ಲ, ಬದಲಿಗೆ ದುಪ್ಪಟ್ಟಾಗಿದೆ ಎನ್ನುವುದೇ ಖುಷಿಯ ವಿಚಾರ.  ನಾವೆಲ್ಲಾ ಓದಿನ ಬಗ್ಗೆ ಚರ್ಚಿಸುತ್ತಾ, ಓದಿನ ಸುಖಕ್ಕಾಗಿ ಪುಸ್ತಕಗಳ ಕನಸುತ್ತಾ ಕೂತಿರುವಾಗ ನಮ್ಮ ಮಕ್ಕಳು ಅದಕ್ಕಿಂತ ಭಿನ್ನವಾಗಿ ಬೆಳೆಯುತ್ತಿದ್ದಾರೆ. ಆದರೆ ಆ ಭಿನ್ನತೆ  ನಮ್ಮಲ್ಲಿ ಆತಂಕ ಹುಟ್ಟಿಸುತ್ತಿದೆ. ಮಕ್ಕಳಿಗೀಗ ಪುಸ್ತಕಗಳು ಬೇಕಿಲ್ಲ. ದೃಷ್ಯ ಮಾಧ್ಯಮದ ಎದುರು ಸಪ್ಪಗೆ ಕಾಣುವ ಪುಸ್ತಕಗಳನ್ನು ಅವರು ಮೂಸುವುದೇ ಇಲ್ಲ. ಡಿಜಿಟಲ್ ಲೈಬ್ರರಿ, ಇ ಬುಕ್ಸ್… ಹೀಗೆ ಎಲ್ಲವೂ ಮೊಬೈಲು, ಕಂಪ್ಯೂಟರಿನ ಮುಂದೆಯೇ ನಡೆಯಬೇಕು. ಅವರಿಗಾಗಿ ಕೂಡಿಟ್ಟ ಪುಸ್ತಕಗಳು, ಇಟ್ಟಲ್ಲೇ ಮುಲುಗುತ್ತವೆ. ಆದರೆ ಬುದ್ಧಿ ಮತ್ತು ಮೆದುಳಿಗೆ ಪುಸ್ತಕಕ್ಕಿಂತ ದೊಡ್ಡ ಆಹಾರವಿಲ್ಲ ಮತ್ತು ಕಣ್ಣಿಗೂ ಒಳ್ಳೆಯದು. ಇದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವುದಾದರೂ ಹೇಗೆ ಎನ್ನುವುದೇ ಚಿಂತೆ. ಆದರೆ ನನ್ನ ತರಗತಿಯಲ್ಲಿ ಒಬ್ಬ ಹುಡುಗನಿದ್ದಾನೆ. ಬಹಳಾ ಚೂಟಿ, ತರಲೆ, ಕಿತಾಪತಿ, ತುಂಬಾ ಬುದ್ಧಿವಂತ ಮೇಲಾಗಿ ಕವಿ ಕತೆಗಾರ. ತುಂಬಾ ಬಡತನವಿರುವ ಮನೆಯಿಂದ ಅವ ಶಾಲೆಗೆ ಬರುತ್ತಾನೆ. ಆದರೆ ಪುಸ್ತಗಳ ಬಗ್ಗೆ ಅವನಿಗೆ ಅಪಾರ ಪ್ರೀತಿ.  ಎಲ್ಲೇ ಪುಸ್ತಕ ಸಿಕ್ಕರೂ ಅವನಿಗದು ಬೇಕು. ತನ್ನ ಓರಗೆಯವರಿಗಿಂತಲೂ ಹೆಚ್ಚಿನ ಜ್ಞಾನ ಅವನದು. ಅವನಿಗೆ ಆಗಾಗ ಒಂದಷ್ಟು ಪುಸ್ತಕಗಳನ್ನು ಕೊಡುತ್ತಿರುತ್ತೇನೆ. ಕಳೆದ ಬಾರಿ The magic of the lost temple ಎನ್ನುವ ಸುಧಾಮೂರ್ತಿಯವರ ಒಂದು ಪುಸ್ತಕ ಕೊಟ್ಟಿದ್ದೆ. ಅವನಿನ್ನೂ ನನಗೆ ಮರಳಿಸಿಲ್ಲ. ಒಂದುವೇಳೆ ಕೊಡದಿದ್ದರೂ ತೊಂದರೆ ಏನಿಲ್ಲ. ನನಗೆ ಗೊತ್ತು ಅದನ್ನವನು ಜೀವನಪರ್ಯಂತ ನನಗಿಂತಲೂ ಜೋಪಾನವಾಗಿ ಇಟ್ಟುಕೊಂಡಿರುತ್ತಾನೆ ಎಂದು. ************************************************************* –ಆಶಾಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ ಹೊಸ ಬನಿ – ೧೦. ಹಂಗೆ ಇಲ್ಲದ ಖಬರಿನೊಳಗ ಏನೊ ಗುನುಗಿದ್ಹಾಂಗ ಚಂ ಸು ಕವಿತೆಗಳು ರಾಣೇಬೆನ್ನೂರು ಸಮೀಪ ಕೂನಬೇವು ಗ್ರಾಮದ ಸಾಹಿತಿ ಚಂಸು (ಚಂದ್ರಶೇಖರ ಸುಭಾಸ ಗೌಡ ಪಾಟೀಲ ಅಂದರೆ ಯಾರಿಗೂ ಗೊತ್ತಾಗುವುದಿಲ್ಲ!) ಅವರ “ಬೇಸಾಯದ ಕತಿ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೧೮ನೇ ಸಾಲಿನ ಸಿಂಪಿ ಲಿಂಗಣ್ಣ ದತ್ತಿ (ಜೀವನಚರಿತ್ರೆ) ಪ್ರಶಸ್ತಿ ಪ್ರಕಟವಾದಾಗ ಅವರನ್ನು ಅಭಿನಂದಿಸಲು ಫೋನ್ ಮಾಡಿದ್ದೆ.  ಆ ಲೇಖನಗಳಲ್ಲಿ ಕೆಲವನ್ನು ಓದಿದ್ದರಿಂದಾಗಿ ಬೇಸಾಯದ ಬದುಕಿನ ಹಿಂದಣ ಕಷ್ಟ ಕಾರ್ಪಣ್ಯಗಳ ಕುರಿತು ಮಾತೆತ್ತಿದೆ. “ಅಯ್ಯೋ ಅದು ನಂದು ಒಬ್ಬನ್ನದೇ ಅಲ್ರೀ ಎಲ್ಲ ರೈತ ಮಕ್ಳ ಕತೇರೀ” “ಅಲ್ರೀ ನನ್ ಸಂಕಲ್ನದ ಬಗ್ಗೆ ಬರೆದವ್ರೂ ನೀವೊಬ್ರೇ, ಈಗ ಬಹುಮಾನ ಬಂತಂತ ಫೋನ್ ಮಾಡಿದವ್ರೂ ನೀವೇರೀ” ” ಶಿಶುನಾಳದಾಗ ಭೆಟ್ಟಿಯಾಗಿ ಇಪ್ಪತ್ತೊರ್ಸ ಆದ್ರೂ ನೆಪ್ಪಿಟ್ಟೀರಿ” ಎಂದು ಮಾತಾಡಿದ ಚಂಸು ದನಿಯಲ್ಲಿ ಈವರೆಗಿನ ಅವರ ಮೂರೂ ಕವನ ಸಂಕಲನಗಳಲ್ಲಿ ಕಂಡರಿಸಿದ್ದ ಬಂಡಾಯದ ಮೊಳಗು ಮತ್ತು ಮೊಹರು ಅವರ ಮಾತಲ್ಲಿ ಬತ್ತಿ ಹೋಗಿತ್ತು. ಹ್ಯಾಗಾದರೂ ಬದುಕು ಸಾಗಿಸಿದರೆ ಸಾಕು ಅನ್ನುವ ವ್ಯಥೆಯೂ ತುಂಬಿ ಕೊಂಡಂತಿತ್ತು. ಚಂಸು “ಬೇಸಾಯದ ಕತಿ” ಅನ್ನುವ ಶೀರ್ಷಿಕೆಯಲ್ಲಿ ತಮ್ಮ ಕೃಷಿ ಅನುಭವಗಳನ್ನು ಪತ್ರಿಕೆಯೊಂದರಲ್ಲಿ ಬರೆಯುತ್ತಿದ್ದರು. ರಾಸಾಯನಿಕಗಳನ್ನು ಬಳಸದೇ ಸಹಜ ಕೃಷಿಯಲ್ಲೇ ಇಳುವರಿ ಕಡಿಮೆಯಾದರೂ ಲುಕ್ಸಾನು ಇಲ್ಲವೆಂಬ ಅವರ ಅನುಭವ ಇತ್ತೀಚೆಗೆ ಎಲ್ಲ ರೈತರಿಗೂ ಮಾದರಿಯಾಗಿದೆ. ೧೯೯೫ರಲ್ಲಿ ಗೆಳೆಯನಿಗೆ, ೨೦೦೪ ರಲ್ಲಿ ಕೆಂಪು ಕಂಗಳ ಹಕ್ಕಿ ಮತ್ತದರ ಹಾಡು, ೨೦೦೯ರಲ್ಲಿ ಅದಕ್ಕೇ ಇರಬೇಕು ಎನ್ನುವ ಕವನಸಂಕಲಗಳನ್ನು ಪ್ರಕಟಿಸಿರುವ ಚಂಸು ಪಾಟೀಲ್ ೨೦೦೨ ರಿಂದ ೨೦೦೬ ರವರೆಗೆ ನೋಟ, ಕ್ರಾಂತಿ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿಯು ಕೆಲಸ ನಿರ್ವಹಿಸಿದ್ದಾರೆ. ೨೦೦೭ ರಿಂದ ರಾಣೇಬೆನ್ನೂರಿಗೆ ಅಂಟಿದಂತಿರುವ ಕೂನಬೇವು ಗ್ರಾಮದಲ್ಲಿ ನೆಲೆಸಿದ್ದು ಸಹಜ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಮೂರು ಸಂಕಲನದ ಎಷ್ಟು ಕವಿತೆಗಳನ್ನು ಜನ ಓದಿದ್ದರೋ ಇಲ್ಲವೋ ಆದರೆ ಮೂರು ಸಾವಿರಕ್ಕೂ ಮೀರಿದ ಅವರ ಫೇಸ್ಬುಕ್ ಗೆಳೆಯರ ಬಳಗದಲ್ಲಿ ಅವರು ಹೊಸದೊಂದು ಕವಿತೆ ಪ್ರಕಟಿಸಿದ ಕೂಡಲೇ ಹಲವರು ಲೈಕುಗಳನ್ನು ಕೊಡುತ್ತಾರೆ. ಮತ್ತು ಮೇಲ್ನೋಟಕ್ಕೆ ಸಾಧಾರಣ ಶೈಲಿಯ ಹಾಸ್ಯದಂತೆ ಕಂಡರೂ ಆಂತರ್ಯದಲ್ಲಿ ವಿಷಾದವೇ ಅವರ ಎಲ್ಲ ಕವಿತೆಗಳಲ್ಲೂ ಸ್ಥಾಯಿಯಾಗಿ ಇರುತ್ತದೆ. ಬಂಡಾಯದ ದನಿ ಇಂಗಿ ಹೋಗಿದ್ದರೂ ಒಟ್ಟೂ ವ್ಯವಸ್ಥೆಯೊಳಗಿನ ದೌರ್ಬಲ್ಯಗಳನ್ನು ಅವರು ಶಕ್ತವಾಗಿ ದಟ್ಟವಾಗಿ ಹೇಳುತ್ತಾರೆ. ರೈತ ವಿರೋಧೀ ನಿಲುವನ್ನು ಪ್ರಶ್ನಿಸುವ ಅವರ ಕವಿತೆಗಳ ಮುಖ್ಯ ಸ್ಥಾಯಿಯೇ ರೈತನ ನಿತ್ಯ ಬದುಕಿನ ಸಮಸ್ಯೆಗಳು ಆಗಿರುವುದನ್ನು ಗಮನಿಸಲೇ ಬೇಕು. ಇವನಿಗೇಕೆ ಕವಿತೆಯ ಉಸಾಬರಿ? ತತ್ವಮೀಮಾಂಸಕರು ಕಾವ್ಯವಿಮರ್ಶಕರು ತಗಾದೆ ತೆಗೆದರು…. ಈ ಇಳೆಗೆ ಬೆಳೆಗೆ ತಗುಲಿದ ಕಳೆ ತೆಗೆಯುವುದು ಹೇಗೆಂದು ನಾ ಚಿಂತೆಗೆ ಬಿದ್ದಿರುವೆ! ಕವಿತೆ ಬರೆಯುವಾಗಲೂ ರೈತನ ಸಮಸ್ಯೆಯೇ ಇವರ ಕಾವ್ಯದ ಪ್ರತಿಮೆಗಳಾಗುವುದು ವಿಶೇಷ. ಹಸಿರು ಟವೆಲ್ ಕಟ್ಟಿಕೊಂಡು ಉದ್ದುದ್ದದ ಭಾಷಣ ಹೊಡೆಯುವವರು ಈ ಕವಿಯಿಂದ ಕಲಿಯಬೇಕಾದ್ದು ಬಹಳ ಇದೆ. ಇಲ್ಲ, ಇಲ್ಲ ನಾವು ಬದಲಾಗುವುದೇ ಇಲ್ಲ! ಎಂದು ಪ್ರತಿ ಅನುಪಲ್ಲವಿಯಲ್ಲಿ ಕೊನೆಯಾಗುವ ಕವಿತೆಯ ಆಂತರ್ಯ ಇಡೀ ಜಗತ್ತೇ ಬದಲಾದರೂ ಬದಲಾಗದ ಮನುಷ್ಯನ ಮಿತಿಯ ಬಗ್ಗೆ ಹೇಳುತ್ತದೆ. ಇಡೀ ಪದ್ಯ ಧೇನಿಸಿದ ಸಂಗತಿ ಕಡೆಯಲ್ಲಿ ಹೀಗೆ ವರ್ಣಿತವಾಗುತ್ತದೆ; ಮೋಡದಂತೆ ಕರಗುತ್ತೇವೆ; ನಿಜ, ಯಾರ ದಾಹವನ್ನೂ ಇಂಗಿಸುವುದಿಲ್ಲ! ಹೆಮ್ಮರವಾಗಿ ಬೆಳೆಯುತ್ತೇವೆ; ನಿಜ, ಯಾರ ಹಸಿವೆಯನ್ನೂ ಪೊರೆಯುವುದಿಲ್ಲ! ಮಳೆಬಿಲ್ಲಿನಂತೆ  ಬಣ್ಣಗಟ್ಟುತ್ತೇವೆ; ನಿಜ, ಎಲ್ಲರ ಸಂಭ್ರಮವಾಗಿ ಮೂಡುವುದಿಲ್ಲ! ನಕ್ಷತ್ರ‌ದಂತೆ ಮಿನುಗುತ್ತೇವೆ; ನಿಜ, ಯಾರ ಬದುಕನ್ನೂ ಬೆಳಗುವುದಿಲ್ಲ! ಬದಲಾಗುತ್ತಲೆ ಇದೆ ಜಗತ್ತು ಇಲ್ಲ, ಇಲ್ಲ ನಾವು ಮಾತ್ರ ಬದಲಾಗುವುದೇ ಇಲ್ಲ! ಪ್ರಾಯಶಃ ಪದ್ಯ ಇಲ್ಲಿಗೇ ಆಗಿದ್ದಿದ್ದರೆ ಕವಿತೆ ಗೆಲ್ಲುತ್ತಿತ್ತು. ಆದರೆ ತನ್ನ ಹೇಳಿಕೆಯನ್ನು ಸಮರ್ಥಿಸಲು ಕವಿ ಮತ್ತೆ ಮುಂದುವರೆಸಿದ ಸಾಲುಗಳು ಪದ್ಯವನ್ನು ನಾಟಕೀಯ ಅಂತ್ಯಕ್ಕೆ ಎಡೆಮಾಡುತ್ತದೆ. “ಮಾನವ ಜಾತಿ ತಾನೊಂದೇ ವಲಂ” ಎಂದಾ ಕವಿಯ ಮಾತು ನಮ್ಮೆದೆಯೊಳಗೆ ಇಳಿಯುವುದೇ ಇಲ್ಲ! ಇಲ್ಲ, ಇಲ್ಲ ನಾವು ಬದಲಾಗುವುದೇ ಇಲ್ಲ! ಈ ಸಾಲು ಪದ್ಯದ ಆಂತರಿಕ ಸತ್ವವನ್ನು ಘೋಷವಾಕ್ಯ ಮಾಡಿದ ಕಾರಣ ಮುಟ್ಟಬೇಕಾದ ಎತ್ತರ ಮುಟ್ಟದ ದೀಪಾವಳಿಯ ರಾಕೆಟ್ಟಿನಂತಾಗಿದೆ. ಬೆಳಕು ಬೆಳಕೆ ಆಗಿರುವುದಿಲ್ಲ; ಕತ್ತಲೆ ಕತ್ತಲೆಯೇ ಆಗಿರುವುದಿಲ್ಲ,; ಬೆಳಕಿನಲ್ಲಿ ಎಷ್ಟೊಂದು ಕತ್ತಲೆ…‌ ನಾವದನ್ನು ಗಮನಿಸುವುದೇ ಇಲ್ಲ! ಈ ಸಾಲುಗಳನ್ನು ಓದಿದ ಕೂಡಲೇ ಯಾರೋ ದಾರ್ಶನಿಕರ ನೆನಪಾದರೆ ತಪ್ಪೇನಿಲ್ಲ. ಈ ಕವಿತೆಯಲ್ಲಿ ಚಂಸು ದಾರ್ಶನಿಕ ಸಂಗತಿಗಳನ್ನೇ ಹೇಳಹೊರಟಿದ್ದಾರೆ. ಆದರೆ ಪದ್ಯದ ಕೊನೆ ಕತ್ತಲಿನಂಥ ದ್ವೇಷದಲ್ಲೂ ಪ್ರೀತಿಯ ಬೆಳಕು ಮಿಂಚುವುದಿಲ್ಲವೇ? ಅನ್ನುವಾಗ ಈ ಕವಿ ಹೇಳ ಹೊರಟ ದಾರ್ಶನಿಕ ಸತ್ಯಕ್ಕೆ ತಲೆ ಬಾಗಲೇ ಬೇಕಾಗುತ್ತದೆ. ವರ್ತಮಾನದ ಸಂಗತಿಗಳಿಗೂ ಕವಿಯನ್ನು ಬಾಧಿಸುತ್ತವೆ. ಆ ಅಂಥ ಸಂಗತಿಗಳು ಕವಿತೆಗಳಾದಾಗ ಅಂದರೆ ನಿತ್ಯದ ಬದುಕಿನಲ್ಲಿ ನಾವೆಲ್ಲ ಕೇಳುತ್ತಲೇ ಇರುವ ಬ್ರಷ್ಟಾಚಾರ, ಅತ್ಯಾಚಾರ, ಮಧ್ಯವರ್ತಿಗಳ ಕಾಟವನ್ನು ಈ ಕವಿ ಪ್ರಶ್ನಿಸಿ ಉತ್ತರಕ್ಕಾಗಿ ತಡುಕುತ್ತಾರೆ. ಸೀತೆಗೆ ಪರೀಕ್ಷೆಯ ಮೇಲೆ ಪರೀಕ್ಷೆ! ಕೊನೆಗೊಂದು ಶವಪರೀಕ್ಷೆ… ವರದಿಗಳೆಷ್ಟೋ ಅಷ್ಟೂ ರಾಮಾಯಣ! ಮನಿಷಾಳ ಹತ್ಯೆ ಕುರಿತಂತೆ ಏನೆಲ್ಲವನ್ನೂ ಓದಿದ ನಮಗೆ ಚಂಸು ಅವರ ಈ ಕವಿತೆ ರಾಮಾಯಣದ ಸೀತೆಯನ್ನು ಈ ಕಾಲದ ಮನಿಷಾಳಿಗೆ ಲಿಂಕ್ ಮಾಡುತ್ತಲೇ ನಿಲ್ಲದ ಈ ಅತ್ಯಾಚಾರಗಳ ಬಗ್ಗೆ ವ್ಯಥೆ ಪಡುತ್ತಾರೆ. ಬರ್ತೇನಂತ ಬಂದೇ ಬಿಟ್ಟಳು ಎಂಥ ಬಜಾರಿ ಹೆಣ್ಣಪ್ಪ! ಮಾಯಗಾತಿ ಮುತ್ತೇಬಿಟ್ಟಳು ಹೋರಿ ಮ್ಯಾಲೆ ಮಾರಿ ಕಣ್ಣಪ್ಪ! ರೈತ ಮತ್ತು ಭೂಮಿಯ ಮೇಲೆ ವ್ಯವಸ್ಥೆ ಮಾಡುತ್ತಲೇ ಇರುವ ಕಂಟಕಗಳನ್ನು ಮಾರಿಯಂತೆ ಚಿತ್ರಿಸುವ ಈ ಕವಿ ರಾಣೇಬೆನ್ನೂರು ಭಾಗದಲ್ಲಿ ಬಿಟಿ ಹತ್ತಿ ಬೀಜದಿಂದ ಆಗಿದ್ದ ಘಟನೆಯನ್ನು ಸ್ವಾರಸ್ಯವಾಗಿ ವಿಸ್ತರಿಸುತ್ತಲೇ ಒಟ್ಟೂ ಸಾಮಾಜಿಕ ಸನ್ನಿವೇಶವನ್ನು ಚಿತ್ರಿಸುತ್ತಾರೆ ಅಜ ಒಯ್ದು ಗಜ ಮಾಡುವಳು ರೂಪಾಂತರವೊ ಎಲ್ಲ ಅಜಗಜಾಂತರ! ಜೀವ ಸಂಕುಲದ ಸ್ವಭಾವಾ ತಿದ್ದುವಳು ಕುಲಾಂತರವೊ ಎಲ್ಲ ಕಲಸುಮೇಲೋಗರ! ಚಾನೆಲ್ಲಗೆ ಚಾಕ್ಲೇಟು ಪೇಪರ್ಗೆ ಬಿಸ್ಕೀಟು ಏರಿಕೊಂಡೆ ಸಾರೋಟು ಮಾಡ್ತಾಳೆ ಕಣ್ಕಟ್ಟು! ಇವಳೆ ಲೆಫ್ಟು ಇವಳೆ ರೈಟು ಇವಳೇ ಫ್ರಂಟು ಚುಂಬಿಸಿ ರಂಬಿಸಿ ಎಗರಿಸಿ ಗಂಟು…. ಸದ್ಯ ಭೂ ಸುಧಾರಣೆ ಕಾಯಿದೆ ಮತ್ತು ಎಪಿಎಂಸಿ ಕುರಿತು ಚರ್ಚೆಗಳು ನಡೆದಿರುವ ಹೊತ್ತಲ್ಲಿ ಚಂಸು ಹೇಗೆ ಅಧಿಕಾರ ಪಿಪಾಸು ವ್ಯವಸ್ಥೆ ಬೇಸಾಯಗಾರನ ಬೆನ್ನು ಸುಲಿಯುತ್ತಿದೆ ಎನ್ನುವುದನ್ನು ಸರಳವಾಗಿ ಹೇಳುತ್ತಲೇ ರೈತನ ಮುಂದಿರುವ ಭವಿಷ್ಯದ ಸವಾಲುಗಳನ್ನು ಪಟ್ಟಿ ಮಾಡುತ್ತಾರೆ. ಇದರ ಮುಂದುವರೆದ ಸಾಲುಗಳನ್ನು ಅವರ ಇನ್ನೊಂದು ಪದ್ಯದಲ್ಲಿ ಹೀಗೆ ಹೇಳುತ್ತಾರೆ; ಬದಲಾಗುವ ಕಾಯ್ದೆಗಳ ಮಧ್ಯೆ ನಿನಗೂ ಇದೆಯೆ? ಕೃತಜ್ಞತೆಗೊಂದಿಷ್ಟು ಸ್ಥಳ? ಚಂಸು ಅವರನ್ನು ಯಾಕೋ ಬೇಸಾಯದಷ್ಟೇ ಕಾಡುವ ಸಂಗತಿಗಳು ಎಂದರೆ ಕತ್ತಲು ಮತ್ತು ಬೆಳಕು. ಅವರ ಇನ್ನೊಂದು ಪದ್ಯ ಹೀಗೆ ಕೊನೆಯಾಗುತ್ತದೆ; ಒಳಗಿನ ಕತ್ತಲೆಯ ಕಳೆಯಲು ಬೆಳೆಸಲೇಬೇಕು ಆತ್ಮಸಾಕ್ಷಿಯೊಂದಿಗೆ ನಂಟು! ಇದನ್ನು ಕವಿಯಾಗಿ ಹೇಳುವುದು ಸುಲಭ. ಆದರೆ ಬದುಕು ಅಷ್ಟು ಸರಳ ಅಲ್ಲವಲ್ಲ. ನಮ್ಮನ್ನು ಮುತ್ತಿರುವ ಕತ್ತಲನ್ನು ತೊಡೆಯುವ ಅಧಿಕಾರಕ್ಕೆ ಆತ್ಮ ಸಾಕ್ಷಿಯೇ ಸತ್ತಿದೆಯಲ್ಲ, ಅದಕ್ಕೇನು ಮಾಡಬೇಕು? ಇದು ಎಡವೂ ಅಲ್ಲ! ಬಲವೂ ಅಲ್ಲ! ಎಡಬಲವೊಂದಾದ ಏಕತೆಯ ಹಾದಿ! ಭಾವೈಕ್ಯತೆಯ ಹಾದಿ! ಉಳಿದೆಲ್ಲವೂ ಆಗಲಿ ಬೂದಿ! ಇದು ಈ ಕವಿ ನೆಚ್ಚಿಕೊಂಡ ಮೆಚ್ಚಿಕೊಂಡ ಬದುಕಿನ ಹಾದಿ. ಹಾಗಾಗಿಯೇ ಗಾಂಧಿ, ಬಸವ, ಅಂಬೇಡ್ಕರರ ಮುಂದಿಟ್ಟು ಕೊಂಡ ಸ್ಪಷ್ಟ ಹಾದಿ. ಆದರೆ ಬದುಕು ಕವಿತೆಯಷ್ಟು ಸರಳ ಅಲ್ಲವಲ್ಲ! ಸುಮ್ಮನೆ ಕೂತಿದ್ದೇನೆ ಅಂಧಭಕ್ತಿಯ ಸುಳ್ಳಿನುರುಳಿಗೆ ಗೋಣನೊಡ್ಡಿ ವಿಶ್ವಗುರುವಿನ ಪಟಾಕಿ ಹಾರಿಸಿ ಕೂಗುತ್ತ, ತಿಸ್‌ಮದ್ದು ಬುಸ್ ಅಂದಷ್ಟಕ್ಕೆ ಉಬ್ಬಿ ಹಲ್ಕಿರಿಯುತ್ತ! ಅಡಿಗರ “ಶ್ರೀ ರಾಮ ನವಮಿಯ ದಿನ” ಕವಿತೆಯ ಅಣುಕು ಈ ಸಾಲುಗಳು. ಅಡಿಗರ ಈ ಕವಿತೆಯನ್ನು ನೆನೆಯದೇ ನಮ್ಮ ಯಾವುದೇ ಕಾವ್ಯ ಕುರಿತ ಸಂಕಿರಣಗಳು ನಡೆಯಲಾರವು. ಅದನ್ನು ಅರಿತ ಈ ಕವಿ ಅಣಕವಾಡಿನ ಮೂಲಕ ಮತ್ತೊಂದು ಮಜಲಿಗೆ ಒಯ್ಯುವುದು ಹೀಗೆ; ಷಟ್ಚಕ್ರ ರಾಕೆಟುಗಳೆಲ್ಲಕ್ಕೂ ಚಲನೆಯೆ ಮೂಲಾಧಾರ. ಸಹಸ್ರಾರಕ್ಕದೇ ದಾರಿದೀಪ ಹುತ್ತಗಟ್ಟಿದೆ ಚಿತ್ತ! ಗೆದ್ದಿಲು ಪರಿತ್ಯಕ್ತ ಜಾಗ? ಎದೆಬಗೆದುಕೊಳ್ಳದೆ ಕಾಣಬಹುದೇ ಪ್ರಜಾವತ್ಸಲ ಬಾಪೂರಾಮನ ಆ ಅಂಥ ರೂಪ? ಗಾಂಧಿಯನ್ನು ಕಾಣಬೇಕಿರುವ ರೀತಿಯನ್ನು ಈ ಕವಿತೆ ಬಗೆಯುವ ಬಗೆಯೇ ಸಶಕ್ತವಾಗಿದೆ ಮತ್ತು ವಿಶಿಷ್ಠವೂ ಆಗಿದೆ. “ಹಂಗೆ ಇಲ್ಲದ ಖಬರಿನೊಳಗ ಏನೊ ಗುನುಗಿದ್ಹಾಂಗ” ಎಂದು ಒಂದು ಕವಿತೆಯಲ್ಲಿ ತಮ್ಮ ಕನಸನ್ನು ತಾವೇ ವರ್ಣಿಸುವ ಈ ಕವಿಯ ಕನಸು ಖಬರಿಲ್ಲದವೇನೂ ಅಲ್ಲ. ಸಾಮಾಜಿಕ ಮೌಲ್ಯಗಳೇ ದಿವಾಳಿಯಾಗುತ್ತಿರುವ ಹೊತ್ತಲ್ಲಿ ತೀರ ಬೇಕೇ ಬೇಕಾದ ಆದರೆ ಮರೆತೇ ಹೋದ ಖಬರನ್ನು ಚಂಸು ಎತ್ತಿ ಹಿಡಿಯುತ್ತಾರೆ ಮತ್ತು ಆ ಕಾರಣಕ್ಕೇ ಹೆಚ್ಚು ಇಷ್ಟವಾಗುತ್ತಾರೆ. ಸ್ವಲ್ಪ ಹೊತ್ತು ಬಿಟ್ಟು ಗುಂಪು ಕರಗಿದ ಮೇಲೆ ಮತ್ತೆ ಅಲ್ಲಿಗೆ ಧಾವಿಸಿದೆ…. ಧ್ಯಾನಸ್ಥ ತಪಸ್ವಿಯಂತೆ ಅದು ಹಾಗೆ ಕೂತಿರುವುದನ್ನು ಕಂಡು ಅಚ್ಚರಿಗೊಂಡೆ! ಅದೇ ನನ್ನ ಕವಿತೆ ಎಂದು ಎತ್ತಿಕೊಂಡೆ; ಎದೆಗೊತ್ತಿಕೊಂಡೆ! ಇಂಥ ಬರವಣಿಗೆಯ ನಡುವೆಯೇ ಬೇಂದ್ರೆಯವರ           “ಕುಣಿಯೋಣು ಬಾರಾ” ಪದ್ಯಕ್ಕೂ ಚಂಸು ಅಣಕು ಮಾಡಬಲ್ಲರು; ಅವ್ನೌನು ಲಾಕ್ಡೌನು ಮುಗೀತು ಕೊರೊನಾ ಹೈರಾಣಾ ಸಾಕಾತು ಜುಮ್ಮಂತ ನುಗ್ಗಿ ಬಿಮ್ಮಂತ ಹಿಗ್ಗಿ ಕುಣಿಯೋಣಾ ಬಾರಾ ಕುಣಿಯೋಣಾ ಬಾರಾ! ಇನ್ನೂ ಸ್ವಾರಸ್ಯದ ಸಂಗತಿಯೆಂದರೆ ಲಾಕ್ಡೌನ್ ಕಾಲದ ಕವಿ ಈ ಚಂಸು. ಅದನ್ನು ಅತ್ಯಂತ ಸ್ವಾರಸ್ಯವಾಗಿ ಹಾಸ್ಯದಲ್ಲಿ ಹೇಳುತ್ತಲೇ ಆಳದಾಳದ ವಿಷಾದವನ್ನೂ ಗುರ್ತಿಸುವುದು ಇವರ ವಿಶೇಷ ಚಿತ್ರಕ ಶಕ್ತಿ. ಭಲ ಭಲಾ ಚಂಸು, ನಿಮ್ಮ ಪದ್ಯಗಳು ಓದುಗರದೇ ಆಗುವುದು ಈ ಸರಳ ರೀತಿಯಲ್ಲಿ ಹೇಳುತ್ತಲೇ ಸಂಕೀರ್ಣವೂ ಆಗುವ ತಿರುವುಗಳಿಂದಾಗಿ. ಮತ್ತು ಆ ತಿರುವುಗಳೇ ತಿವಿಯುವ ಆಯುಧಗಳಾಗಿ ಬದಲಾಗುವ ಕಾರಣಕ್ಕಾಗಿ. ಆದರೂ ಏನೆಲ್ಲ ಬಂಡಾಯದ ಮಾತುಗಳನ್ನು ಬರೆಯುತ್ತಿದ್ದ ನಿಮ್ಮ ಕವಿತೆಗಳು ಈಗ ಹತಾಶೆಯ ಮೂಸೆ ಸೇರಿ ನಿಜ ಬದುಕಿನ ಆವರ್ತನಗಳನ್ನು ಸರಳ ಸಾಲುಗಳಲ್ಲಿ ಕಂಡಿರಿಸುತ್ತಿರುವ ಪರಿಗೆ ದಿಗ್ಮೂಡಗೊಂಡಿದ್ದೇನೆ ಮತ್ತು ನಿಮ್ಮೊಳಗಿನ ಆ ಬಂಡಾಯ ಮತ್ತೆ ಪುಟಿದೆದ್ದು ಸದ್ಯದ ಕಾಯಿದೆ ಕಾನೂನುಗಳನ್ನು ಪ್ರಶ್ನಿಸುತ್ತಲೇ ಈ ನೆಲದ ಮಕ್ಕಳ ಹಕ್ಕನ್ನು ಎತ್ತಿ ಹಿಡಿಯಲಿ ಎನ್ನುವ ಆಶದೊಂದಿಗೆ ನಿಮ್ಮ ಕವಿತೆಗಳ ಟಿಪ್ಪಣಿಯನ್ನು ಕೊನೆಗೊಳಿಸುತ್ತಿದ್ದೇನೆ. ————————————————————————————————— ಚಂಸು ಪಾಟೀಲರ ಆಯ್ದ ಕವಿತೆಗಳು ೧. ಬದಲಾಗುತ್ತಲೆ ಇದೆ ಜಗತ್ತು ಅನುಕ್ಷಣ, ಅನುದಿನ, ವರ್ಷ ಯುಗಗಳಾಚೆಗೂ ಪುನರಾವರ್ತನೆಯ ಮಧ್ಯೆಯೂ ಪರಿವರ್ತನೆಯೆ ಜಗದ ನಿಯಮವೆಂಬಂತೆ ಬದಲಾಗುತ್ತಲೇ ಇದೆ ಜಗತ್ತು! ಇಲ್ಲ, ಇಲ್ಲ, ನಾವು ಮಾತ್ರ ಬದಲಾಗುವುದೇ ಇಲ್ಲ! ಮುಂಜಾನೆಯ ಇಬ್ಬನಿ ಕರಗಿತಲ್ಲ! ಮೊಗ್ಗು ಅರಳಿದೆಯಲ್ಲ; ಕೆಂಪನೆ ನೇಸರ ಬೆಳ್ಳಿತಟ್ಟೆಯಾಗಿ ಫಳಫಳಿಸುತಿಹನಲ್ಲ! ಚಿಲಿಪಿಲಿಗುಟ್ಟುತಿದ್ದ ಹಕ್ಕಿಗಳೆಲ್ಲೋ ದೂರಕೆ ಹಾರಿ ಹೋಗಿವೆಯಲ್ಲ…. ಬದಲಾಗುತ್ತಲೇ ಇದೆ ಜಗತ್ತು ಇಲ್ಲ, ಇಲ್ಲ, ನಾವು ಮಾತ್ರ ಬದಲಾಗುವುದೇ ಇಲ್ಲ! ಅದೇ ಭಾಷೆ, ಅದೇ ದೇಶ ಈ ಗಡಿಗಳಾಚೆ ನಾವು ಇಣುಕಿಯೂ ನೋಡುವುದಿಲ್ಲ! ಇಲ್ಲ, ಇಲ್ಲ ನಾವು ಬದಲಾಗುವುದೇ ಇಲ್ಲ! ವೈಶಾಖದಿ ಬಿತ್ತಿದ ಬಿತ್ತವಿದೋ ತೆನೆದೂಗಿ ನಿಂತಿದೆ! ಆಷಾಡದ ಸಮೀರನ ಶೀತಗಾಳಿ ಬಯಲಾಗಿ ಈಗೀಗ ಮತ್ತೆ ಮೂಡಲಸೋನೆ ಕೀಳುತಿದೆ! ಮಹಾನವಮಿಗೊಂದಿಷ್ಟು ಪಡುಗಾಳಿ ಬೀಸಿದರೆ ಹಾಯೆನಿಸುತ್ತದೆ…. ಬದಲಾಗುತ್ತಲೇ ಇದೆ ಜಗತ್ತು ಇಲ್ಲ, ಇಲ್ಲ ನಾವು ಮಾತ್ರ ಬದಲಾಗುವುದೇ ಇಲ್ಲ! ಅದೇ ಧರ್ಮ, ಅದೇ ಜಾತಿ ಈ ಲಕ್ಷ್ಮಣರೇಖೆಯಾಚೆ ನಾವು ಖಂಡಿತ ಕಾಲಿಡುವುದಿಲ್ಲ! ಇಲ್ಲ,.ಇಲ್ಲ

Read Post »

ಅಂಕಣ ಸಂಗಾತಿ, ದಿಕ್ಸೂಚಿ

   ಭಯದ ಬಗ್ಗೆ ಭಯ ಬೇಡ      ಇಂದಿನ ಆಧುನಿಕ ಗಡಿಬಿಡಿ ಜೀವನ ಶೈಲಿಯು ನಮ್ಮ  ಮನಸ್ಸಿನ ಮೆಲೆ ಅನೇಕ ದುಷ್ಪರಿಣಮಗಳನ್ನು ಬೀರುತ್ತಿದೆ. ಅದರಲ್ಲಿ ಭಯವು ಪ್ರಮುಖವಾಗಿದೆ. ಭಯದ ಜೊತೆಗೆ ಉತ್ಸುಕತೆ ಹೆಚ್ಚುತ್ತಿದೆ. ಇವೆರಡೂ ಮಾನವನ ಸಹಜ ಗುಣಗಳಾದರೂ ಇತ್ತೀಚಿನ ದಿನಮಾನಗಳಲ್ಲಿ ಇವು ನಮ್ಮ ನಿಕಟ ಸಂಗಾತಿಗಳಾಗಿವೆ. ಮನಸ್ಸಿನಲ್ಲಿ ಭಯ ಮೂಡಿತೆಂದರೆ ಅದರಿಂದ ಹೊರಬರುವದು ಅಷ್ಟು ಸುಲಭದ ಮಾತಲ್ಲ.        ಮಕ್ಕಳು ಯಾವ ಯಾವದೆ ವಿಷಯಕ್ಕೆ ಭಯಗೊಳ್ಳುತ್ತವೆ. ಭಯ ಕೇವಲ ಮಕ್ಕಳಿಗೆ ಅಷ್ಟೇ ಅಲ್ಲ ದೊಡ್ಡವರಿಗೂ ಕಾಡುವ ಮಾನಸಿಕ ಸಮಸ್ಯೆ. ಭಯ ಅಂದರೇನು? ಅದು ಏಕೆ ಉಂಟಾಗುತ್ತದೆ ಅದನ್ನು ಹೇಗೆ ನಿವಾರಿಸುವದು ಎಂಬ ಪ್ರಶ್ನೆಗಳು ನಮ್ಮಲ್ಲಿ  ಅದೆಷ್ಟೋ ಬಾರಿ ಸುಳಿಯುತ್ತವೆ. ಭಯ ಅಂದರೆ ಏನು ಅಂತ ಹೇಳೋಕೆ ಆಗಲ್ಲ ಆದರೆ ಅದನ್ನು ಒಂದಿಲ್ಲೊದು ಸಂದರ್ಭದಲ್ಲಿ ನಾವು ಅನುಭವಿಸುತ್ತೇವೆ. ಇದು ಮನಸ್ಸಿನ ನಕಾರಾತ್ಮಕ ಭಾವನೆ.         ಭಯ ಎಂದರೇನು?         ನಮ್ಮ ಶಕ್ತಿಗೆ ಮೀರಿದ ಅಸಾಂಭವ್ಯ ವಿಚಾರವು ನಮ್ಮ ಮನಸ್ಸಿಗೆ ಹೊಕ್ಕಿತೆಂದರೆ ಆಗ ನಮ್ಮಲ್ಲಿ ನಾವು ಏನೋ ಕಲ್ಪಿಸಿಕೊಳ್ಳುತ್ತೇವೆ. ಇಂತಹ ವಾಸ್ತವವಲ್ಲದ ಕಲ್ಪನೆಗಳಿಗೆ ಒಂದು ಸ್ಪಷ್ಟ ಚಿತ್ರಣವನ್ನು ಸೃಷ್ಟಿಸಿಕೊಂಡು ನೋಡಲು ಶುರು ಮಾಡುತ್ತೇವೆ. ಆಗ ಮನದಲ್ಲಿ ಸಾವಕಾಶವಾಗಿ ಭಯವು ಆವರಿಸಕೊಳ್ಳತೊಡುಗತ್ತದೆ. ನಾವು ಸೃಷ್ಟಿಸಿಕೊಂಡ ಕಾಲ್ಪನಿಕ ಚಿತ್ರಣವು ಕ್ರಮೇಣ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ.          ಬಹಳಷ್ಟು ಬಾರಿ ಭಯವು ನಮ್ಮ ಭ್ರಮೆಯೇ ಆಗಿರುತ್ತದೆ. ಇಲ್ಲದ್ದನ್ನು ಇದ್ದ ಹಾಗೆ ತಿಳಿದುಕೊಳ್ಳುತ್ತೇವೆ. ಇದು ಒಂದು ಭಾವನಾತ್ಮಕ ಅನುಭವ. ಮನದಲ್ಲಿ ಆತಂಕ ಭಾವ ಸೃಷ್ಟಿ ಮಾಡಿ, ಭಾವನಾತ್ಮಕ ಅಡಚಣೆಯನ್ನುಂಟು ಮಾಡುತ್ತದೆ. ಭಯದಿಂದಾಗಿ ನಮ್ಮ ಜಾಗೃತ ಮನಸ್ಸು ನೋವನ್ನು ಅನುಭವಿಸುತ್ತದೆ. ನೋವಿನಿಂದ ಹೊರಬರಲು ನಮ್ಮ ಮನಸ್ಸು ಒದ್ದಾಡುತ್ತದೆ. ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ಎಚ್ಚರಿಕೆಯ ಸಂಕೇತವಾಗಿ ವರ್ತಿಸುತ್ತದೆ. ಇಲ್ಲವಾದಲ್ಲಿ ಮಾನಸಿಕ ವ್ಯಾಧಿಯಾಗಿ ಕಾಡುತ್ತದೆ.         ಭಯ ಉಂಟಾಗೋದು ಯಾವಾಗ?    ನಾಳೆ ಏನಾಗುತ್ತದೆಯೋ ಏನೊ ಎಂಬ ಚಿಂತೆಯು ಭಯವಾಗಿ ಪರಿವರ್ತನೆಯಾಗುತ್ತದೆ. ಯಾವುದೇ ವಿಷಯದ ಬಗೆಗೆ ನಿರಾಶಾದಾಯಕವಾಗಿ ಆಲೋಚಿಸುವದು, ಸುಮ್ಮನೆ ಏನನ್ನೋ ಇಲ್ಲದ್ದನ್ನು ಊಹಿಸಿಕೊಳ್ಳುವದು,ಹಿಂದೆ ನಡೆದು ಹೋದ ಕಹಿ ಘಟನೆಗಳನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುವದು, ನಾನೆಲ್ಲಿ ಸೋತು ಹೋಗುತ್ತೇನೊ ಎಂಬ ಸೋಲಿನ ಆತಂಕ, ನನಗಾರೂ ಇಲ್ಲ ನಾನು ಏಕಾಂಗಿ ಎಂಬ ಭಾವ, ಪರರು ನನಗಿಂತ ಮುಂದೆ ಹೋಗುತ್ತಿದ್ದಾರೆ ಎಂಬ ಮತ್ಸರ ಭಾವ ನಮ್ಮಲ್ಲಿ ಭಯವನ್ನು ಹುಟ್ಟು ಹಾಕುತ್ತವೆ. ನಾವು ಅಪಾಯದಲ್ಲಿ ದ್ದಾಗ ನಮ್ಮ ಜೀವನದ ಬಗ್ಗೆ ಹೆದರಿಕೆಯಾಗುತ್ತದೆ.        ಯಾವುದಕ್ಕೆ ಭಯಗೊಳ್ಳುತ್ತೆವೆ?     ಚಿಕ್ಕ ಪುಟ್ಟ ವಿಷಯಗಳಿಗೂ ಮನಸ್ಸು ಭಯಗೊಳ್ಳುತ್ತದೆ. ಇದು ಒಂದು ತೆರನಾದ ಮಾನಸಿಕ ಸಂಘರ್ಷ. ಇದಕ್ಕೆ ಫೋಬಿಯೋ ಅಂತಲೂ ಕರೆಯುತ್ತಾರೆ. ಕೆಲವರಿಗೆ ಕಾಡುಪ್ರಾಣಿಗಳೆಂದರೆ ಭಯ. ಇನ್ನೂ ಕೆಲವರಿಗೆ ಸಾಕು ಪ್ರಾಣಿಗಳಾದ ನಾಯಿ ಬೆಕ್ಕು ಕಂಡರೂ  ಭಯ. ಮಳೆ ಗುಡುಗು ಮಿಂಚಿಗೂ ಹೆದರುತ್ತಾರೆ. ವಿಚಿತ್ರೆಮದರೆ ಕೆಲವರು ಜನರನ್ನು ಕಂಡರೆ ಕಾಡು ಪ್ರಾಣಿ ನೋಡಿದ ತರ ಭಯಗೊಳುತ್ತಾರೆ.ಆಹಾರದ ಭಯ, ಎತ್ತರ ಜಾಗದ ಭಯ, ಬಸ್ಸಿನಲ್ಲಿ , ರೈಲಿನಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುವದೆಂರೆ ಭಯ ಇನ್ನು ಕೆಲವರು ನೀರು ಕಂಡರೆ ಹೆದರುತ್ತಾರೆ. ಅಂದರೆ ಭಯ ಎಲ್ಲ ಹಂತಗಳಲ್ಲಿ ಇದ್ದೇ ಇರುತ್ತದೆ.ಒಬ್ಬೊಬ್ಬರಿಗೆ ಒಂದೊಂದನ್ನು ಕಂಡರೆ ಭಯ. ಆಫೀಸಿಗೆ ಹೋದ ಗಂಡ, ಸ್ಕೂಲಿಗೆ ಹೋದ ಮಕ್ಕಳು ಮನೆಗೆ ಸರಿಯಾದ ಸಮಯಕ್ಕೆ ಮರಳಿ ಬರದಿದ್ದರೂ ಭಯಗೊಳ್ಳುವ ಪ್ರಸಂಗಗಳಿವೆ.               ನಾವು ಧೈರ್ಯವಂತರು ಎಂದು ಎಷ್ಟೋ ಜಂಭ ಕೊಚ್ಚಿಕೊಂಡರೂ ಭಯಗೊಳ್ಳುತ್ತೇವೆ ಎಲ್ಲಕ್ಕಿಂತ ದೊಡ್ಡ ಭಯ ಎಂದರೆ ಸಾವಿನ ಭಯ. ಈ ಭಯ ನಮ್ಮ ಅಸ್ತಿತ್ವಕ್ಕೆ ಸಂಭಧಿಸಿದ್ದುಎಲ್ಲಿ ನಮ್ಮ ಪ್ರಾಣಕ್ಕೆ ಸಂಚಕಾರ ಬರುತ್ತೇನೋ ಎಂದು ಎಷ್ಟೋ ಬಾರಿ ಭಯಗೊಳ್ಳುತ್ತೇವೆ.             ಭಯದ ಲಕ್ಷಣಗಳೇನು?      ಭಯವುಂಟಾದಾಗ ಮೈಂಡ್ ಫುಲ್ ಬ್ಲ್ಯಾಂಕ್ ಆಗಿರುತ್ತೆ ಯಾವುದೇ ವಿಚಾರಗಳು ಆಲೋಚನೆಗಳು ಹೊಳೆಯೊದಿಲ್ಲ. ಮೈಯೆಲ್ಲ ಬೆವರುತ್ತೆ.ಕೈ ಕಾಲುಗಳಲ್ಲಿ ಶಕ್ತಿಯಿಲ್ಲದಂತೆ ಭಾಸವಾಗುತ್ತೆ. ಮಾತೇ ಹೊರಡೊದಿಲ್ಲ.ಹೊರಡಿದರೂ ತೊದಲುತ್ತೆ. ಭಯದ ವಿಚಾರವನ್ನು ಹೊರತುಪಡಿಸಿ ಬೇರೆ ಯಾವ ವಿಚಾರಗಳು ಮನಸ್ಸಿನಲ್ಲಿ ಸುಳಿಯಲಾರವು. ವಿಚಾರಗಳೆಲ್ಲ ಅಸ್ಥವ್ಯಸ್ಥವಾಗುವವು ಅಂದುಕೊಂಡ ಯಾವ ಕೆಲಸವನ್ನು ಮಾಡಲು ಸಾಧ್ಯವಾಗುವದಿಲ್ಲ. ಸಣ್ಣ ಪುಟ್ಟ ವಿಷಯಗಳಿಗೆ ಬೆಚ್ಚಿ ಬೀಳುವದು ಅಥವಾ ಇದಕ್ಕೆ ತದ್ವಿರುದ್ಧವಾಗಿ ಗಂಭೀರ ವಿಷಯಗಳಿಗೂ ಪ್ರತಿಕ್ರಿಯಿಸದೆ ಮೌನವಾಗಿರುವದು.ಇವೆಲ್ಲ ಭಯದ ಮುಖ್ಯ ಲಕ್ಷಣಗಳು.            ಭಯ ತಡೆಯೋಕೆ ಏನು ಉಪಾಯ       ಪ್ರತಿಯೊಂದು ಭಯದಿಂದಲೂ ನಾವು ಮುಕ್ತರಾಗಬಹುದು. ಭಯ ತಡೆಯುವ ಉಪಾಯಗಳು ಕಠಿಣವೆನಿಸಿದರೂ ಅಸಾಧ್ಯವೇನಲ್ಲ. ನಾವು ಭಯಗೊಳ್ಳುತ್ತೇವೆ ಎನ್ನುವ ಸಂಗತಿಯನ್ನು ಒಪ್ಪಿಕೊಳ್ಳುವದು.ಯಾವ ವಿಷಯದ ಬಗ್ಗೆ ಭಯವಿದೆಯೋ ಎಂಬುನ್ನು ತಿಳಿದು ಅದನ್ನು ಮುಕ್ತವಾಗಿ  ಆತ್ಮೀಯರೊಂದಿಗೆ ಚರ್ಚಿಸುವದು.ಯಾವಾಗಲೂ ಕೆಲಸದಲ್ಲಿ  ತೊಡಗಿಸಿಕೊಳ್ಳುವದು. ಮೂಢನಂಬಿಕೆ ಮತ್ತು ಅಪಶಕುನಗಳನ್ನು ನಂಬದೆ ಇರುವದು. ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳುವದು. ಪರಿಸ್ತಿತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಿರ್ಣಯ ಕೈಗೊಳ್ಳುವದು ಅನುಮಾನಕ್ಕೆ ಆಸ್ಪದ ಕೊಡದಿರುವದು ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ನಮಗೆ ಎಚ್ಚರಿಕೆಯಂತೆ ವರ್ತಿಸುತ್ತದೆ ಎಂದು ತಿಳಿದುಕೊಳ್ಳುವದು.ಭಯ ನಿವಾರಿರಿಸುವದಕ್ಕೆ ಪ್ರಯತ್ನಿಸಿ ತಜ್ಞ ವೈಜ್ಞರನ್ನು ಭೇಟಿ ಮಾಡುವದು. ನಿಜವಾದ ಧೈರ್ಯವನ್ನು ಮನಸ್ಸಿಗೆ ತುಂಬಿಕೊಳ್ಳುವದು ಆಶಾವಾದಿಯಾಗಿರುವದು. ನಾನು ಧೈರ್ಯವಂತ ಎಂದು ನನ್ನಷ್ಟಕ್ಕೆ ನಾವೇ ಹೇಳಿಕೊಳ್ಳುವದು ಎಂದರೆ ಸೆಲ್ಪ ಹಿಪ್ನಾಟಿಸಂ ಮಾಡಿಕೊಳ್ಳುವದು.         ವಿವೇಕಾನಂದರ ವಾಣಿಯಂತೆ ‘ನಿಮ್ಮಿಂದ ನೀವೇ ಉದ್ದಾರವಾಗಬೇಕು. ಸ್ನೇಹಿತನೆ ನಿನಗೆ ಯಾರೂ ಸಹಾಯ ಮಾಡಲಾರರು. ನಿನಗೆ ನೀನೇ ದೊಡ್ಡ ಶತ್ರು ನಿನಗೆ ನೀನೇ  ದೊಡ್ಡ ಮಿತ್ರ ಹಾಗಾದರೆ ನೀನು ಆತ್ಮವನ್ನು ದೃಢವಾಗಿ ಹಿಡಿದುಕೊ ಎದ್ದು  ನಿಲ್ಲು ಅಂಜಬೇಕಾಗಿಲ್ಲ. ನೀನು ಜಗತ್ತನ್ನೇ ಅಲ್ಲಾಡಿಸಲು  ಸಮರ್ಥನಾಗುವೆ. ಶಕ್ತಿಯ ರಹಸ್ಯ ವ್ಯಕ್ತಿ ಮತ್ತು ಆತನ ಜೀವನವೇ ಹೊರತು ಮತ್ತಾವುದು ಅಲ್ಲವೆಂಬುವದನ್ನು ನೆನಪಿನಲ್ಲಿಡಿ’.          ಸ್ವಾಮಿ ವಿವೇಕಾನಂದರ ವಿವೇಕಭರಿತವಾದ ಈ ವಾಣಿಯನ್ನು  ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತ ಕೇವಲ ದೈಹಿಕ ಆರೋಗ್ಯದ ಕಡೆಗೆ ಗಮನ ಕೊಡದೆ ಮಾನಸಿಕ ಆರೋಗ್ಯದ ಬಗೆಗೆ ಗಮನವಹಿಸಿ ಆಗಾಗ ತಜ್ಞ ವೈದ್ಯರನ್ನು ಭೇಟಿಯಾಗಿ ನಮ್ಮ ವರ್ತನೆಯಲ್ಲಾದ ಬದಲಾವಣೆಯ ಕುರಿತು ಚರ್ಚಿಸಿ, ಅವರ ಸಲಹೆಗಳನ್ನು ಪಾಲಿಸಿದರೆ, ಭಯ ಮಂಗಮಾಯವಾಗುವದು ಖಚಿತ. ************************** ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

ಅಂಕಣ ಸಂಗಾತಿ, ಮುಖಾಮುಖಿ

ಕವಿತೆ ಹುಟ್ಟುವುದು ಎರಡೇ ಕಾರಣಕ್ಕೆ ನೋವು ಬಿಕ್ಕಲಿಕ್ಕೆ,ನಲಿವು ಹಂಚಲಿಕ್ಕೆ ವಿಭಾ ಪುರೋಹಿತ ಮುಖಾಮುಖಿ  ೧. ಕತೆ, ಕವಿತೆಗಳನ್ನ ಏಕೆ ಬರೆಯುತ್ತೀರಿ ?             ಕೆಲವು ಕಾಡುವ ವಿಷಯಗಳು ತನ್ನಷ್ಟಕ್ಕೆ ತಾನೇ ಬರೆಸಿಕೊಂಡುಬಿಡುತ್ತವೆ. ಮನದಲ್ಲಿ ಚಿಮ್ಮಿಬಂದ ತೀವ್ರ ಭಾವನೆಗಳ ಅಲೆಗಳನ್ನು ಅಕ್ಷರಗಳಲ್ಲಿ ಹಿಡಿದಿಡುವ ಕ್ರಿಯೆಯೇ ಕವಿತೆಗಳಾಗಿವೆ. ಹೀಗೇ  ಹರಿದುಬಂದ ಪ್ರಬಲ , ಸಂವೇದನೆಗಳ ಕಂತೆಗಳು ಪದಗಳೊಂದಿಗೆ ಬೆಸೆದು ಕವನಗಳಾಗಿವೆ ಜೀವನದ ಅದೇ ರುಟೀನ್ ಕೆಲಸಕ್ಕೆ ಹೋಗುವದು,ಅಡುಗೆ,ಮನೆ,ಮಕ್ಕಳು ಅಂತ ಇದರಲ್ಲೇ ಮುಳುಗಿರುತ್ತೇವೆ. ಈ ಯಾಂತ್ರಿಕತೆಯಿಂದ ಹೊರಬರಲು ಚೂರು ಚಿನಕುರುಳಿಯಂತೆ ಸಹಾಯವಾಗುತ್ತದೆ ನನ್ನ ಬರವಣಿಗೆ. ಮನಸ್ಸು ಗೆಲುವಾಗಿರುತ್ತದೆ,ಬದುಕು ಕಳೆಕಟ್ಟಿದಂತಾಗುತ್ತದೆ. ವರಕವಿ ಬೇಂದ್ರೆಯವರು ಹೇಳಿದಂತೆ- ರಸವೇ ಜೀವನ , ವಿರಸ ಮರಣ, ಸಮರಸವೇ ಜೀವನ ಎಂತಾದರೆ ಕವನ ರಚನೆಯ ಗೀಳು ಜೀವನದಲ್ಲಿ ನನಗೆ ರಸವನ್ನು ತುಂಬಿವೆ. ೨. ಕತೆ, ಕವಿತೆ ಹುಟ್ಟುವ ಕ್ಷಣ ಯಾವದು ?   ಹಿರಿಯರು ಹೇಳಿದಂತೆ ಕವಿತೆ ಹುಟ್ಟುವುದು ಎರಡೇ ಕಾರಣಕ್ಕೆ ನೋವು ಬಿಕ್ಕಲಿಕ್ಕೆ,ನಲಿವು ಹಂಚಲಿಕ್ಕೆ. ನನಗೂ ಸಹ ಈ ಎರಡೂ ಸಮಯದಲ್ಲಿ ಕವಿತೆಗಳು ಹುಟ್ಟುತ್ತವೆ. ಹಾಗೂ ಯಾರಾದರು ಅಸಹಾಯಕರನ್ನು ನೋಡಿದಾಗ ಅವರ ಪರಿಸ್ಥಿತಿಗೆ ಕಿವಿಯಾದಾಗ ಭಾವಲೋಕದಲ್ಲಿ ತೇಲಿ ನಾನೇ ಅವರ ಸ್ಥಿತಿಯಲ್ಲಿದ್ದೇನೆ ಎಂದು ( ಪರಕಾಯ ಪ್ರವೇಶ ಎನ್ನಬಹುದು) ಮನ ಕಂಬನಿಮಿಡಿಯುತ್ತದೆ,   ಕವಿತೆ, ಕತೆ ಹುಟ್ಟುತ್ತದೆ. ಕೆಲವು ಕವಿತೆಗಳು ಮಿಂಚಿನ ಹಾಗೆ ಬಂದು ಬರೆಸಿಕೊಳ್ಳುತ್ತವೆ. ಇನ್ನೂ ಕೆಲವು ಒಂದೆರಡು ದಿನ ಮನಸ್ಸಿನಲ್ಲಿ,ಬುದ್ಧಿಯಲ್ಲಿ ಮಂಥನ ಚಿಂತನಗೊಂಡು ಕವಿತೆಗಳ ನವನೀತ ರೂಪುಗೊಳ್ಳುತ್ತದೆ. ಎಷ್ಟೋಸಲ ಹೆಣ್ಣಿನ ಸಂವೇದನೆಗಳಿಗೆ ಪ್ರತಿವಾದಿಯಾಗಿ ನಿಲ್ಲುವ ಘಟನೆಗಳು ಎದುರಾದಾಗ ಕವಿತೆಗಳು ಸೃಷ್ಟಿಯಾಗಿದ್ದಿವೆ. ಎದೆತುಂಬ ಒಲವು ತುಳುಕುವಾಗ ,ನಿಸರ್ಗ ರಮ್ಯತೆಯನ್ನು ಕಂಡಾಗ,ಅಂತಃಕರಣ ಒಳಹರಿವನ್ನು ಅನುಭವಿಸಿದಾಗ ಅನೇಕ ರಚನೆಗಳು ಜನ್ಮತಳಿದಿವೆ. ೩. ನಿಮ್ಮ ಕತೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ?  ಸ್ವೇದನೆಯೇ ಹೆಚ್ಚಾಗಿ ಕಂಡುಬರುತ್ತದೆ. ಸಾಮಾಜಿಕ ವ್ಯವಸ್ಥೆ, ಅಸಮಾನತೆ,ಮನುಷ್ಯನ ಹಣದ ಮೋಹ ಇವೆಲ್ಲವು ವಿಷಯವಾಗುತ್ತವೆ. ಹೆಣ್ಣಿನ ಅನಾದರ,ಅಗೌರವ ನನ್ನನ್ನು ತಲ್ಲಣಗೊಳಿಸುತ್ತವೆ. ಸದಾ ಕಾಡುವ ಪಾತ್ರಗಳು ದ್ರೌಪದಿ,ಭಾನುಮತಿ,ಕುಂತಿ….. ಇತ್ಯಾದಿ. ಪ್ರಸ್ತುತವಾಗಿ ಕಾಡುವದೇನೆಂದರೆ ದೊಡ್ಡ ದೊಡ್ಡ ನಗರಗಳಲ್ಲಿ ಹೆಚ್ಚಿನ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸಿರುವ ಹೆಣ್ಣು ಗಂಡಿಗೆ ಸರಿಸಮನಾಗಿ ದುಡಿಯುತ್ತಿದ್ದಾಗಲೂ   ವಿವಿಧ ರೀತಿಯ ಸಂಕಟಗಳನ್ನು ಅನುಭವಿಸುವದು. ಮಾನಸಿಕವಾಗಿಯೂ ದೈಹಿಕವಾಗಿಯೂ ಅವಳ ಗೋಳು ಹೇಳತೀರದ್ದು. ಇದು ಒಂದು ಮುಖವಾದರೆ ಇನ್ನೊಂದು ಕಡೆ ಅನಕ್ಷರಸ್ಥರ ಗೋಳು , ಮನೆಗೆಲಸ ಮಾಡುವವರು, ಗಾರೆ ಕೆಲಸದವರು ವಿದ್ಯೆಗಳಿಸಿಲ್ಲವೆಂದು ಈ ಸಂಕಷ್ಟಗಳು ಎದುರಾಗಿವೆ ಎಂದು ಗೊಣಗುತ್ತಾ ಇರುತ್ತಾರೆ. ವ್ಯತ್ಯಾಸ     ಕಂಡುಬರುವದಿಲ್ಲ ಇಬ್ಬರೂ ನೋವಿಗೆ ಮೈ ಒಡ್ಡಿಕೊಂಡೇ ದುಡಿಯುತ್ತಾರೆ. ೪. ಕತೆ, ಕವಿತೆಗಳಲ್ಲಿ ಬಾಲ್ಯ ಹರೆಯ ಇಣುಕಿದೆಯೆ ?  ಖಂಡಿತವಾಗಿಯೂ ಇಣುಕಿದೆ. ಬಾಲ್ಯದ ಊರು,ಕಲಿತ ಶಾಲೆ, ಅಜ್ಜಅಜ್ಜಿ, ಗೆಳೆಯರು ಜೀವಮಾನವಿಡೀ ಮರೆಯಲಾರದ ನೆನಪಿನ ಜಾದೂಪೆಟ್ಟಿಗೆಗಳು : ತೆಗೆದರೆ ಒಂದೊಂದಾಗಿ ಹೊರಬಂದು ಹೃನ್ಮನಗಳನ್ನು ತಣಿಸುತ್ತವೆ. ಬಾಲ್ಯ ಎಲ್ಲರ ಜೀವನದ ಅದ್ಭುತ ಘಟ್ಟ.  ಓ…. ಆ ಸುಂದರ ನೆನಪುಗಳ ಸೆಳೆತ ಮನಸ್ಸಿನ ಶೂನ್ಯತೆ,ಖಿನ್ನತೆಯ ಭಾವಗಳಿಂದ ಬಡಿದೆಬ್ಬಿಸಿ ಸಂತಸ ತುಂಬುತ್ತವೆ. ಕ್ಯಾಮರಾ ಕಣ್ಣಲ್ಲಿ ಚಿತ್ರಗಳು ಶಾಶ್ವತವಾದಂತೆ ಈ ಸುಂದರ ನೆನಪುಗಳ ತೊರೆಗಳನ್ನು ನನ್ನ ಹೃದಯದಲ್ಲಿ ಹಾಗೂ ಆತ್ಮದಲ್ಲಿ ಸೆರೆಹಿಡಿದು  ಅವುಗಳಿಗೆ ಅಮರತ್ವವನ್ನು ನೀಡಿದ ಹಲವಾರು ಕವಿತೆಗಳಿವೆ. “ಹುಚ್ಚು ಖೋಡಿ ಈ ವಯಸು ಅದು ಹದಿನಾರರ ವಯಸು”  ಎಂದು ಹಾಡಿದ ಹಿರಿಯಕವಿಯ ಸಾಲುಗಳಂತೆ ನನ್ನ ಕವಿತೆಗಳು ಕೆಲವು ಸಾಕ್ಷಿಯಾಗಿವೆ. ೫. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ಪ್ರತಿಕ್ರಿಯೆ ಏನು ?   ಮೊದಲಿನಿಂದಲೂ ರಾಜಕೀಯ ನನಗೆ ನಿರಾಸಕ್ತಿಯ ವಿಷಯ. ರಾಜಕೀಯ ದೊಂಬರಾಟವನ್ನು ನಿರ್ಭಿಡೆಯಿಂದ ಬಯಲಿಗೆಳೆಯುವ ಅನೇಕ ಬರಹಗಳು ತಂಡೊಪತಂಡವಾಗಿ ಬರುತ್ತವೆ. ಆದರೂ ಇದು ಯಾವಾಗಲೂ ಹಗ್ಗಜಗ್ಗಾಟದ ಮೈದಾನವೇ ಸರಿ.ಲೋಕಕಲ್ಯಾಣಾರ್ಥವಾಗಿ  ಸೇವೆ ಮಾಡುವವರು ಈಗ ವಿರಳ. ದೇಶಭಕ್ತಿಯನ್ನು ಬಹಿರಂಗವಾಗಿ ಪ್ರದರ್ಶನ ಮಾಡುತ್ತಾ ಅಂತರಂಗದಲ್ಲಿ ಸ್ವಾರ್ಥವೇ ತುಂಬಿಕೊಂಡಿರುವರು ಹೆಚ್ಚಾಗಿದ್ದಾರೆ. ಅಪರೂಪಕ್ಕೆ ಒಂದಿಬ್ಬರು ನಿಜವಾದ ದೇಶಸೇವಕರಿದ್ದರೂ ಅವರ ಸುತ್ತ ಕಾಲೆಳೆಯುವ ಅಮೂರ್ತ ಕೈಗಳು ಬೇಕಾದಷ್ಟು ಇರುತ್ತವೆ. ಪಕ್ಷಾತೀತವಾದ ಅಪ್ಪಟ ಸೇವಾಮನೋಭಾವವುಳ್ಳ ನೇತಾರರು ಇಂದಿನ ಅಗತ್ಯ. ೬. ಧರ್ಮ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?  ವಿಶ್ವದ ಸಕಲ ಚರಾಚರಗಳ ಚಲನೆಗೆ ಯಾವುದೋ ಒಂದು ಶಕ್ತಿ ಕಾರಣ . ಆ ಆಮೂರ್ತ ಅವ್ಯಕ್ತ ಅನನ್ಯ ಶಕ್ತಿಯೇ ದೇವರು ಎಂದು ನನ್ನ ಭಾವನೆ.ಶಕ್ತಿ ನಿರಂತರ ಹಾಗೇ ದೇವರು ನಿರಂತರ. ವಿಗ್ರಹ ಆರಾಧನೆಯಲ್ಲಿ ನಂಬಿಕೆಯಿಲ್ಲ.ಮೌಢ್ಯ ಆಚರಣೆಗಳಿಗೆ ವಿರೋಧವಿದೆ.  ಪ್ರೇಮ,ಜ್ಞಾನ,ಧ್ಯಾನ ಇವುಗಳ ತ್ರಿವೇಣಿಸಂಗಮವೇ ಧರ್ಮ.  ಭಾರತೀಯತೆಯೇ ಶ್ರೇಷ್ಠ ಧರ್ಮ. ೭. ಪ್ರಸ್ತುತ ಸಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನೆನಿಸುತ್ತದೆ ?   ನಾವು ಹಿಂತಿರುಗಿ ನಡೆದು ಬಂದ ದಾರಿಯನ್ನು ಅವಲೋಕಿಸಿದಾಗ ನಮ್ಮ ಗಮನಕ್ಕೆ ಬರುವ ವಿಷಯವೆಂದರೆ ನಮ್ಮ ಪರಂಪರೆಯಲ್ಲಿ ಹಾಗೂ ಸಮಷ್ಟಿಪ್ರಜ್ಞೆಯಲ್ಲಿ ಅನೇಕ ಪುರಾತನ ವಿಚಾರಗಳು   ಪದ್ಧತಿಗಳು ನಡೆ-ನುಡಿಗಳು ತಾವೇ ತಾವಾಗಿ ಕಳಚಿ ಹೋಗಿವೆ. ಹಲವು ಹೊಸತತ್ವಗಳು ಅಸ್ತಿತ್ವಕ್ಕೆ ಬಂದಿವೆ. ” ಬದಲಾವಣೆ ಪ್ರಕೃತಿಯ ನಿಯಮ” ಅಲ್ಲವೆ ? ಇಂದು ವಿಜ್ಞಾನದ ಪ್ರಗತಿಯಿಂದಾಗಿ      ಜಗತ್ತೆಲ್ಲವೂ ಒಂದಾಗುತ್ತಿರುವ ಹಾಗೂ ಜಾಗತೀಕರಣದ ನೂತನ ಬಿರುಗಾಳಿ ಬೀಸುತ್ತಿರುವಾಗ ಹೊಸ ಚಿಂತನ,ಹೊಸ ಜೀವನಶೈಲಿ,ಹೊಸ ಆಲೋಚನೆಗಳು  ನಮ್ಮ ಬದುಕಿನಲ್ಲಿ ಹೊಸ ಸವಾಲುಗಳನ್ನು ಹುಟ್ಟಿಸುತ್ತವೆ. ಹೊಸತನದ ತೆರೆಗಳ ಅಬ್ಬರ !  ಜಾಗರೂಕತೆಯಿಂದ ಯಾವ ತತ್ವವನ್ನು ಸ್ವೀಕರಿಸಬೇಕು ? ಎಂಬ ಪ್ರಶ್ನೆಗೆ  ಉತ್ತರ ಹುಡುಕುವಾಗ ಮಹಾಮಾರಿ ಕೊರೋನಾ ಕಲಿಸಿದ ಪಾಠವನ್ನು ಮರೆಯುವಂತಿಲ್ಲ. ಪ್ರಜ್ಞಾಪೂರ್ವಕವಾಗಿ ಚಿಂತನ ಮಂಥನ ಮಾಡಿ ಹೊಸತತ್ವದಲ್ಲಿ ಯಾವುದು ಸತ್ವಹೀನವೋ  ಅದನ್ನು ಬದಿಗೊತ್ತಿ  ಪುಷ್ಟಿಯಿರುವ ತತ್ವಗಳನ್ನು ಮಾತ್ರ ಆಯ್ದುಕೊಳ್ಳಬೇಕಿದೆ. ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು, ಒಲವು ಹಾಗೂ ಗೌರವವಿದೆ. ೮. ಸಾಹಿತ್ಯವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಸುವಿರಿ ?   ಇದರ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಪಂಥ ರಾಜಕೀಯವಿದೆ ಎಂದು ಆಗಾಗ ಕೇಳಿಬರುತ್ತದೆ. ಸಾಹಿತ್ಯದ ಅಂತಃಸತ್ವವನ್ನರಿತು ಮತಿವಂತರಾಗಿ ವರ್ತಿಸಬೇಕಾಗಿದೆ. ೯. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತದೆ ?  ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ದೇಶದ ಚಲನೆ ಅವ್ಯಾಹತ. ಪಾರದರ್ಶಕತೆ ಮತ್ತು ದೂರದೃಷ್ಟಿ ಹೊಂದಿರುವ ಸಮರ್ಥ ಆಡಳಿತಗಾರರಾದರೆ ದೇಶ ಸುಗಮವಾಗಿ ನಡೆಯಬಲ್ಲದು.ಇಲ್ಲವಾದರೆ ದೇಶದ  ಪ್ರಜೆಗಳು ದುರ್ಗಮ ಸ್ಥಿತಿ ಅನುಭವಿಸಬೇಕಾಗುವದು. ೧೦. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ?  ಸತ್ವಯುತವಾದ , ಕಾಲಾತೀತವಾಗಿ ನಿಲ್ಲುವ ಸಾಹಿತ್ಯ ಸೃಷ್ಟಿಯಡೆಗೆ ತುಡಿತವಿದೆ.  ಎಲ್ಲ ಹಿರಿಯ ಸಾಹಿತಿಗಳ ಅಧ್ಯಯನ,ಹೊಸತಲೆಮಾರಿನ ಪ್ರಯೋಗಶೀಲತೆಯನ್ನು ಮನಸಲ್ಲಿಟ್ಟುಕೊಂಡು ನಮ್ಮತನವನ್ನು ಉಳಿಸಿಕೊಳ್ಳುತ್ತ ಮುಂದುವರಿಯಬೇಕಿದೆ. ಶೋಷಿತರಿಗೆ ದನಿಯಾಗುವ , ಸ್ತ್ರಿ ಸಂವೇದನೆ , ಸ್ತ್ರೀ ಪರ ಚಿಂತನೆಗೆ  ಮೆಟ್ಟಿಲಾಗುವ ದಾರಿಯತ್ತ ಸಾಗಬೇಕಿದೆ. ೧೧. ನೆಚ್ಚಿನ ಕನ್ನಡದ ಹಾಗೂ ಆಂಗ್ಲ ಸಾಹಿತಿಗಳಾರು ?  ಇಷ್ಟದಕವಿ ಜಿ.ಎಸ್. ಶಿವರುದ್ರಪ್ಪ  ಇನ್ನೂ ಹಲವಾರು ಸಾಹಿತಿಗಳು ಜಯಂತ ಕಾಯ್ಕಿಣಿ, ಚೆನ್ನವೀರ ಕಣವಿ  ಕವಯಿತ್ರಿಯರು ವೈದೇಹಿ,ಲಲಿತಾ ಸಿದ್ಧಬಸವಯ್ಯಾ ,ಮಾಲತಿ ಪಟ್ಟಣಶೆಟ್ಟಿ  ಆಂಗ್ಲ ಸಾಹಿತಿಗಳೆಂದರೆ ಜಾನ್ ಕೀಟ್ಸ ಮತ್ತು ಟಿ.ಎಸ್.ಎಲಿಯಟ್ ೧೨. ಇತ್ತೀಚೆಗೆ ಓದಿದ ಕೃತಿಗಳಾವುವು ?   ನಾರಾಯಣ.ಪಿ.ಭಟ್ಟ ಅವರ “ನೆನಪಿನ ಉಯ್ಯಾಲೆ”   ನಾಗರೇಖಾ ಗಾವ್ಕರ್ ಅವರ ” ಆಂಗ್ಲ ಸಾಹಿತ್ಯ ಲೋಕ” ೧೩.  ಇಷ್ಟವಾದ ಕೆಲಸ ಯಾವದು ?    ಕನ್ನಡೇತರರಿಗೆ ಕನ್ನಡ ಕಲಿಸುವದು, ರಂಗೋಲಿ ಹಾಕುವದು ಮತ್ತು ಅಡುಗೆ ಮಾಡುವದು. ೧೪.  ಇಷ್ಟವಾದ ಊರು ?    ಧಾರವಾಡ  ಎರಡು ಕಾರಣಗಳಿಂದ * ನನ್ನ ತವರುಮನೆ * ವರಕವಿ ಬೇಂದ್ರೆಯವರಂಥ ಮಹಾನ್ ಸಾಹಿತಿ ನೆಲೆಸಿದ್ದ ಊರು. ಹಾಗೂ ಕನ್ನಡ ಸಾರಸ್ವತಲೋಕಕ್ಕೆ ಧಾರವಾಡ ಹಲವಾರು ಮೇರು ಸಾಹಿತಿಗಳನ್ನ ನೀಡಿದಂತಹ ನೆಲ. ೧೫.  ಇಷ್ಟವಾಗುವ ಸಿನಿಮಾಗಳು ಯಾವವು ?     ಮಾಲ್ಗುಡಿ ಡೇಸ್, ಕವಿರತ್ನಕಾಳಿದಾಸ ಮತ್ತು ಫಸ್ರ‍್ಯಾಂಕ್ ರಾಜು ೧೬. ಮರೆಯಲಾರದ ಘಟನೆಗಳಾವವು ?    * ಧಾರವಾಡದಲ್ಲಿ ನಡೆದ ೮೪ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸುವ ಸುಯೋಗ ಓದಗಿಬಂದಿತ್ತು. ಅಪ್ಪ,ಅಮ್ಮ ಇಬ್ಬರನ್ನೂ ಕರೆದುಕೊಂಡು ಹೋದೆ.   ವಿಶಾಲವಾದ ಸಭಾಂಗಣದ ಆಸನದ ಮೇಲೆ ಕುಳಿತೆವು. ಕರ‍್ಯಕ್ರಮ ಇನ್ನೇನು ಶುರುವಾಗಬೇಕು ಕವಿಗೋಷ್ಠಿಯ ಅಧ್ಯಕ್ಷರು,ಅತಿಥಿಗಳು ಒಬ್ಬೊಬ್ಬರಾಗಿ ಆಗಮಿಸತೊಡಗಿದರು, ನಂತರ ಕವಿಗಳ ಹೆಸರುಗಳನ್ನು ವೇದಿಕೆಗೆ ಬರಬೇಕೆಂದು ಆಹ್ವಾನಿಸುತ್ತದ್ದರು,ಆಗ ವೇದಿಕೆಯ ಮೇಲೆ ನನ್ನ ಹೆಸರು ಕರೆದ ತಕ್ಷಣ ಅಪ್ಪನ ಕಣ್ಣಲ್ಲಿ ಆನಂದಬಾಷ್ಪಗಳು ದಳದಳನೇ ಇಳಿದುಬಂದವು. ಅಪ್ಪನ ಹೆಮ್ಮೆಯ ಭಾವ  ಕಂಡು  ನನ್ನ ಮತ್ತು ಅಮ್ಮನ ಕಣ್ಣುಗಳು ಆದ್ರಗೊಂಡಿದ್ದವು. ************************************************* ********************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಲೇರಿಯೊಂಕ ಲೇರಿಯೊಂಕ ( ಕಾದಂಬರಿ)ಮೂಲ : ಹೆನ್ರಿ ಆರ್. ಓಲೆ ಕುಲೆಟ್ ಕನ್ನಡಕ್ಕೆ : ಪ್ರಶಾಂತ ಬೀಚಿಪ್ರ : ಛಂದ ಪುಸ್ತಕಪ್ರಕಟಣೆಯ.ವರ್ಷ : ೨೦೦೮ಬೆಲೆ : ರೂ.೧೦೦ಪುಟಗಳು : ೨೫೦  ಕೀನ್ಯಾದ ಹೆಸರಾಂತ ಕಾದಂಬರಿಕಾರ ಹೆನ್ರಿ ಆರ್.ಓಲೆ ಕುಲೆಟ್ ಅವರ ಈ ಕಾದಂಬರಿಯು ಲೇರಿಯೊಂಕ ಎಂಬ ಒಬ್ಬ ದನಗಾಹಿ ಹುಡುಗ ಶಾಲೆಗೆ ಹೋಗಲು ಪಡಬಾರದ ಪಾಡು ಪಟ್ಟು ಕೊನೆಗೆ ಸ್ವಂತ ಪರಿಶ್ರಮದಿಂದ ವಿದ್ಯಾವಂತನಾಗಿ ಸ್ವತಂತ್ರ ಮನೋಭಾವವನ್ನು ಬೆಳೆಸಿಕೊಳ್ಳುವುದರ ಕುರಿತಾದ ಕಥೆಯನ್ನು ಹೇಳುತ್ತದೆ.  ಮಾಸಯಿ ಜನಾಂಗಕ್ಕೆ ಸೇರಿದ ಲೇರಿಯೊಂಕ ಸರಕಾರದ ಒತ್ತಾಯಕ್ಕೊಳಗಾಗಿ ಶಾಲೆಗೆ ಸೇರುತ್ತಾನಾದರೂ ಕಾಲಕ್ರಮೇಣ ಶಾಲೆಯ ಬದುಕನ್ನು ಬಹಳವಾಗಿ ಇಷ್ಟ ಪಡುತ್ತಾನೆ. ವಾಸ್ತವದಲ್ಲಿ ಮಾಸಯಿಗಳು ಯಾರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಒಪ್ಪುವುದಿಲ್ಲ. ಲೇರಿಯೊಂಕ ಏನೇನೋ ಸಬೂಬು ಹೇಳಿ ಮನೆ ಬಿಟ್ಟು ಕಾಲ್ನಡಿಗೆಯಲ್ಲಿ ಬಹು ದೂರ ಸಾಗಿ , ಹಳ್ಳ-ತೊರೆ-ಗುಡ್ಡ-ಕಾಡುಗಳನ್ನು ದಾಟಿ, ಅನೇಕ ಅಪಾಯ-ತೊಂದರೆಗಳನ್ನು ಎದುರಿಸಿ ದೂರದ ನಗರ ಸೇರಿ ಅಲ್ಲಿ ಎಂಟು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡುತ್ತಾನೆ. ಆಗ ಅವನಿಗೆ ವಿದ್ಯಾವಂತರೆಲ್ಲ ಬಿಳಿಯರ ವಿರುದ್ಧ ನಿಂತು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿರುವುದು ಕಾಣುತ್ತದೆ.   ಕೆನ್ಯಾದವರಿಗೆ ತಮ್ಮನ್ನು ಆಳಿಕೊಳ್ಳುವ ಶಕ್ತಿಯಿದೆ, ಆದ್ದರಿಂದ ಬಿಳಿಯರು ತಮ್ಮ ಮೇಲೆ ಅಧಿಕಾರ ಚಲಾಯಿಸುವ ಅಗತ್ಯವಿಲ್ಲವೆನ್ನುವ ಭಾವನೆ ಲೇರಿಯೊಂಕನಿಗೂ ಬರುತ್ತದೆ.  ಎಲ್ಲ ವಿದ್ಯಾವಂತರಂತೆ ಕೆನ್ಯಾ ಸ್ವತಂತ್ರವಾಗಬೇಕು, ಮತ್ತು ತನ್ನ ಸಂಸ್ಕೃತಿಯ ಎಲ್ಲ ಅಂಶಗಳನ್ನು ಉಳಿಸಿಕೊಂಡು ಆ ಬಗ್ಗೆ ಅಭಿಮಾನ ಪಡಬೇಕು ಎಂಬ ಆಶಯವನ್ನು ಲೇರಿಯೊಂಕನೂ ಇಟ್ಟುಕೊಳ್ಳುತ್ತಾನೆ.  ವಿದ್ಯೆ ಪಡೆದರೆ ಕಪ್ಪು ಜನರೂ ಬಿಳಿಯರ ಸಮಾನರಾಗಬಲ್ಲರು ಎಂಬ ನಂಬಿಕೆಯನ್ನು ಹಿರಿಯ ತಲೆಮಾರಿನವರಲ್ಲೂ ಹುಟ್ಟಿಸಿ ಕಾದಂಬರಿ ಕೊನೆಗೊಳ್ಳುತ್ತದೆ. ಕಾದಂಬರಿಯುದ್ದಕ್ಕೂ ಮಾಸಯಿ ಜನಾಂಗದ ಜೀವನ ಪದ್ಧತಿ, ನಂಬಿಕೆ-ಆಚರಣೆಗಳು, ನಡೆ-ನುಡಿ-ವರ್ತನೆ, ಅವರು ಸಂಬಂಧಗಳನ್ನಿಟ್ಟುಕೊಳ್ಳುವ ಪರಿ ಮತ್ತು ಅವರ ನಾಣ್ಣುಡಿ-ಗಾದೆ ಮಾತುಗಳು ತುಂಬಿಕೊಂಡಿವೆ.  ವಸ್ತು-ವಿನ್ಯಾಸ-ರಚನೆ, ನಿರೂಪಣೆ-ಪಾತ್ರ ಚಿತ್ರಣಗಳ ದೃಷ್ಟಿಯಿಂದ  ಇದು ಅತ್ಯುತ್ತಮವಾದ ಒಂದು ಕೃತಿ. ಆಧುನಿಕೋತ್ತರ ಸಾಹಿತ್ಯದ ಒಂದು ಪ್ರಮುಖ ಲಕ್ಷಣವಾಗಿರುವ ಬದಿಗೆ ತಳ್ಳಲ್ಪಟ್ಟ ಜನಾಂಗದ ಬದುಕಿನ ಚಿತ್ರಣ ಇಲ್ಲಿರುವುದರಿಂದ ಇದರ ಅನುವಾದ ಅತ್ಯಂತ ಪ್ರಸ್ತುತ.  ಅನುವಾದಕರ ಪ್ರಯತ್ನ ಶ್ಲಾಘನೀಯ. ಆದರೆ ವಾಕ್ಯ ರಚನೆ ಮತ್ತು ಪದಪ್ರಯೋಗಗಳನ್ನು ಸಮರ್ಪಕವಾಗಿ ಮಾಡುವಲ್ಲಿ ಇನ್ನಷ್ಟು ಪರಿಶ್ರಮವಿದ್ದರೆ ಒಳ್ಳೆಯದು. ******************************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ವೃದ್ಧಾಶ್ರಮ ಅಥಶ್ರೀ ಒಮ್ಮೆ ಕನ್ನಡದ ಸುದ್ದಿಮಾಧ್ಯಮಗಳು, ಹಿರಿಯ ರಂಗನಟರೊಬ್ಬರ ಹೆಂಡತಿ ವೃದ್ಧಾಶ್ರಮದಲ್ಲಿದ್ದಾರೆ ಎನ್ನುವುದನ್ನು ದೊಡ್ಡದಾಗಿ ವರದಿ ಮಾಡಿದವು. ಕೆಲವು ವರದಿಗಳಲ್ಲಿ `ಇದೊಂದು ಶೋಚನೀಯ ಸಂಗತಿ’ ಎಂಬ ದನಿಯಿರಲಿಲ್ಲ. ಇದಕ್ಕೆ ತಕ್ಕಂತೆ ಆ ಮಹಿಳೆ ಕೂಡ `ಕುಟುಂಬದವರು ಬೀದಿಪಾಲು ಮಾಡಿದರು’ ಎಂದೂ ಹೇಳಲಿಲ್ಲ. ವೃದ್ಧಾಶ್ರಮಕ್ಕೆ ಬರಲು ಕಾರಣವಾದ ಸನ್ನಿವೇಶವನ್ನು ಯಾರಮೇಲೂ ಆರೋಪ ಮಾಡದಂತೆ ಘನತೆಯಿಂದ ವಿವರಿಸಿದರು. ಆದರೂ ವ್ಯಕ್ತಿಗಳ ಖಾಸಗಿ ಬದುಕಿನ ವಿಷಯವನ್ನು ಮಾಧ್ಯಮಗಳು ನೈತಿಕ ರಕ್ಷಕರಂತೆ ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿ ಮಾಡುವ ಚಾಳಿ ಹೆಚ್ಚುತ್ತಿದೆ. ಇಂತಹ ಸುದ್ದಿ ಪ್ರಸರಣೆಯಲ್ಲಿ ಎರಡು ಅಪಾಯಗಳಿವೆ. ಮೊದಲನೆಯದು-ಸಾಮಾನ್ಯ ಜನ ಈ ಸುದ್ದಿಯನ್ನು ಗಮನಿಸಿ, ಕುಟುಂಬದವರು ತಮ್ಮ ಹಿರಿಯರನ್ನು ಸರಿಯಾಗಿ ನೋಡಿಕೊಳ್ಳದೆ ಅನಾಥಗೊಳಿಸಿದರು ಎಂದು ನೈತಿಕ ಶೋಕಭಾವದಿಂದ ಪರಿಭಾವಿಸುವ ಅಪಾಯ. ಹೀಗೆ ಪರಿಭಾವಿಸುವ ಹೆಚ್ಚಿನ ಮಂದಿ, ತಾವು ಅಂತಹವರಲ್ಲವೆಂದು ಸ್ವಯಂ ಶಹಬಾಸುಗಿರಿ ಕೊಟ್ಟಕೊಳ್ಳುತ್ತಿರುತ್ತಾರೆ; ಸ್ವತಃ ತಂತಮ್ಮ ಮನೆಗಳಲ್ಲಿ ವೃದ್ಧರನ್ನು, ಅಂಗವಿಕಲರನ್ನು, ವಿಧವೆಯರನ್ನು ಹಾಗೂ ನೌಕರಿಯಿಲ್ಲದ ಗಂಡುಮಕ್ಕಳನ್ನು ಸಾಕುವ ಕರ್ತವ್ಯದ ಅಹಮಿನಲ್ಲಿ, ಸೂಕ್ಷ್ಮಿ ವಿಧಾನಗಳಲ್ಲಿ ಹಿಂಸೆ ಕೊಡುತ್ತಿರುವುದನ್ನು ಮರೆತುಬಿಡುತ್ತಾರೆ. ಬಹಳಷ್ಟು ಸಲ ನಾವು ಅಂಜುವುದು ನಮ್ಮ ಅಂತಃಸಾಕ್ಷಿಗಲ್ಲ, ಸಮಾಜಕ್ಕೆ. ರೋಗಿಯನ್ನೊ ಶವವನ್ನೊ ನೋಡಲು ಹೋಗುವುದು `ಇಂತಹ ಹೊತ್ತಲ್ಲೂ ಬರಲಿಲ್ಲವಲ್ಲ’ ಎಂಬ ಮಾತನ್ನು ತಪ್ಪಿಸಲು. ಸಾಮಾಜಿಕ ರೂಢಿಯ ಒತ್ತಡವೇ ಹಾಗೆ ಮಾಡಿಸುತ್ತಿರುತ್ತದೆ. ಹಾಗೆ ಕರ್ತವ್ಯಪ್ರಜ್ಞೆಯಿಂದ ಕೊಡುವ ಭೇಟಿಯಿಂದ ರೋಗಿಗೂ ಅವರನ್ನು ನೋಡಿಕೊಳ್ಳುತ್ತಿರುವ ಕುಟುಂಬಕ್ಕೂ ಕಷ್ಟವೇ ಆಗುತ್ತದೆ. ಯಾರನ್ನಾದರೂ ಮನೆಯ ಶುಭಕಾರ್ಯಗಳಿಗೆ ಕರೆಯುವಾಗಲೂ ವೈಯಕ್ತಿಕವಾಗಿ ಇಷ್ಟವಿಲ್ಲದಿದ್ದರೂ `ಕರೆಯದಿದ್ದರೆ ಜನ ಏನಂದಾರು’ ಎಂದು ಕರೆಯುವುದು; ಕರೆಸಿಕೊಂಡವರಾದರೂ `ಮನೆತನಕ ಬಂದು ಕರೆದಿದ್ದಾರೆ. ಹೋಗದಿದ್ದರೆ ತಪ್ಪಾಗುತ್ತದೆ’ ಎಂದು ಶಿಷ್ಟಾಚಾರಕ್ಕಾಗಿ ಬರುವುದು. ಇದು ಅಂತರಂಗದ ದನಿಗೆ ಕಿವುಡಾಗಿ ಮತ್ತೊಬ್ಬರಿಗಾಗಿ ಬದುಕುವ ಆಷಾಢಭೂತಿತನ; ಸಾಮಾಜಿಕ ನೈತಿಕತೆಯ ಹೆಸರಲ್ಲಿರುವ ಅನೈತಿಕತೆ. ನಮ್ಮ ಸಾಂಪ್ರದಾಯಿಕವಾದ ಈ ಮನೋಭಾವಕ್ಕೆ ಹೋಲಿಸಿದರೆ, ಹಿರಿಯರ ಮತ್ತು ಅವಲಂಬಿತರ ಬಗ್ಗೆ ವಾಸ್ತವವಾದಿಯಾಗಿ ವರ್ತಿಸುವ ಪಾಶ್ಚಿಮಾತ್ಯ ದೃಷ್ಟ್ಟಿಕೋನ ಹೆಚ್ಚು ಮಾನವೀಯ ಮತ್ತು ಹಿಪಾಕ್ರಸಿ ಇಲ್ಲದ್ದು ಅನಿಸುತ್ತದೆ. ಎರಡನೆಯದು- ಇಂತಹ ಸುದ್ದಿಗಳು ಹೊಸತಲೆಮಾರಿನವರನ್ನು ಅನವಶ್ಯವಾಗಿ ಕಟಕಟೆಯಲ್ಲಿ ನಿಲ್ಲಿಸುವ ಮತ್ತು ಹಿರೀಕರೆಲ್ಲರೂ ಅಮಾಯಕರು ಅಸಹಾಯಕರು ಎಂದು ಬಿಂಬಿಸುವ ಅಪಾಯ. ವಿದ್ಯಾಭ್ಯಾಸಕ್ಕೊ ನೌಕರಿಗೊ ನಗರಕ್ಕೆ ಹೋದ ಮಕ್ಕಳು ಹಳ್ಳಿಯಲ್ಲುಳಿದ ಸಂಪ್ರದಾಯಸ್ಥ ತಂದೆತಾಯಿಗಳನ್ನು ಅಸ್ಪøಶ್ಯರಂತೆ ನಡೆಸಿಕೊಳ್ಳುವ ಬಗ್ಗೆ ಸಮಾಜದಲ್ಲಿ ನೈತಿಕ ಟೀಕೆಗಳಿವೆ. `ಸನಾದಿ ಅಪ್ಪಣ್ಣ’ ಇಂತಹ ಲೋಕಾರೂಢಿಯ ಬುನಾದಿ ಮೇಲೆ ಹುಟ್ಟಿದ ಸಿನಿಮಾ. ಇದೇ ಆಶಯವನ್ನು ಅತಿರಂಜಿತವಾಗಿ ಚಿತ್ರಿಸುವ ಕಂಪನಿ ನಾಟಕಗಳೂ ಇವೆ. ಇವೆಲ್ಲ ಹೊಸತಲೆಮಾರಿನ `ಕೃತಘ್ಞತೆ’ `ವಿಶ್ವಾಸದ್ರೋಹ’ಗಳನ್ನು ಚಿತ್ರಿಸುತ್ತವೆ; ಆಧುನಿಕತೆಯನ್ನು ಒಂದು ಪಾಪವೆಂದು ಬಣ್ಣಿಸುತ್ತವೆ. ಆದರೆ ಈ ಸಿನಿಮಾ ಮತ್ತು ನಾಟಕಗಳು ಕಿರಿಯರ ಆಕಾಂಕ್ಷೆಯನ್ನು ಹಿರೀಕರು ನಾನಾ ಕಾರಣದಿಂದ ಹೊಸಕಿ ಹಾಕಿರುವುದನ್ನು ಮರೆತುಬಿಡುತ್ತವೆ. ಇದೇ ಹಿರೀಕರು, ಜಾತಿ ಧರ್ಮಗಳ ವಿಷಯದಲ್ಲಿ ತಮಗಿಂತ ಉದಾರವಾಗಿರುವ ಹೊಸತಲೆಮಾರಿನವರು, ಮನೆಗೆ ಆಹ್ವಾನಿಸಿದ ಗೆಳೆಯರ ಜಾತಿಕೇಳಿ ಮುಖಕ್ಕೆ ಹೊಡೆದಂತೆ ಅಪಮಾನಿಸಿರುತ್ತಾರೆ. ಅನ್ಯಜಾತಿಯಲ್ಲಿ ಮದುವೆಯಾದ ಮಕ್ಕಳ ಮುಖವನ್ನು ಸಾಯುವ ತನಕ ನೋಡಲಾರದೆ ಹಟ ಮಾಡಿರುತ್ತಾರೆ. ವರದಕ್ಷಿಣೆಗಾಗಿ ಸೊಸೆಯಂದಿರನ್ನು ಪೀಡಿಸಿರುತ್ತಾರೆ. ಯಾವುದೇ ತಲೆಮಾರಿನ ವರ್ತನೆಯನ್ನು ಸರಿತಪ್ಪುಗಳಲ್ಲಿ ಭಾವನಾತ್ಮಕವಾಗಿ ಕಪ್ಪುಬಿಳುಪಾಗಿ ನೋಡುವುದು ಸಾಧ್ಯವಿಲ್ಲ. ಪ್ರತಿ ಘಟನೆಗೂ ಅದರದ್ದೇ ಆದ ಸಂಕೀರ್ಣ ಹಿನ್ನೆಲೆ ಮತ್ತು ಆಯಾಮ ಇರುತ್ತವೆ. ಹಿರಿಯರು ಮೊಮ್ಮಕ್ಕಳ ಜತೆ ಕಾಲಕಳೆಯುತ್ತ ಬಾಳಿನ ಅಂತಿಮ ದಿನಗಳನ್ನು ಬದುಕುವುದು ಇಬ್ಬರಿಗೂ ಉಚಿತವೇ. ಅದು ಅಸಾಧ್ಯವಾಗದೆ ಹೋದಾಗ, ಅದರಲ್ಲೂ ಸಂಗಾತಿಗಳಿಲ್ಲದೆ ಹಿರಿಯ ಜೀವಗಳು ಒಂಟಿಯಾಗಿ ಬದುಕುವಾಗ, ಮನೆಯವರ ಉಪೇಕ್ಷೆಯಲ್ಲಿ ಬದುಕುವುದಕ್ಕಿಂತ, ಕಾಳಜಿಯಿಂದ ನೋಡಿಕೊಳ್ಳುವ ವೃದ್ಧಾಶ್ರಮಗಳಲ್ಲಿರುವುದು ಎಷ್ಟೊ ವಾಸಿ. ಭಾವುಕವಾದ ನೈತಿಕ ಆಕ್ರೋಶದಲ್ಲಿ ಇದು ತಪ್ಪೆಂದು ಭಾವಿಸುವ ಅನೇಕರಿಗೆ ವೃದ್ಧಾಶ್ರಮಗಳ ಹಾಗೂ ಅನಾಥಾಶ್ರಮಗಳ ನಡುವೆ ಸರಿಯಾದ ತಿಳುವಳಿಕೆ ಇದ್ದಂತಿಲ್ಲ.ವೃದ್ಧಾಶ್ರಮಗಳ ಮಾನವೀಯ ಮುಖ ನನಗೆ ಅರಿವಾಗಿದ್ದು ಪುಣೆಯ `ಅಥಶ್ರೀ’ ನೋಡಿದ ಬಳಿಕ. ಕನ್ನಡದ ಹಿರಿಯ ಗಾಯಕಿಯರಾದ ಜಯವಂತಿ ಹಿರೇಬೆಟ್ ಹಾಗೂ ವಿಜಯಾ ನಾಯಕ ಅವರ ಭೇಟಿಗೆಂದು ಪುಣೆಗೆ ಹೋಗಿದ್ದೆ. ಇವರು 40ರ ದಶಕದಲ್ಲೇ ಕನ್ನಡದಲ್ಲಿ ಹಾಡಿದವರು. ಈಗ ತೊಂಬತ್ತರ ಆಸುಪಾಸಲ್ಲಿರುವ ಇವರು, ಹಿರಿಯ ನಾಗರಿಕರಿಗಾಗಿ ಮೀಸಲಾಗಿದ್ದ `ಅಥಶ್ರೀ’ ಅರ್ಪಾಟಮೆಂಟಿನಲ್ಲಿದ್ದರು. ಪಾಶ್ ಹೋಟೆಲಿನಂತಿದ್ದ ಈ ಅಪಾರ್ಟ್‍ಮೆಂಟನ್ನು ಕಂಡು ಬೆರಳು ಕಚ್ಚಿಕೊಂಡೆ. ಅಲ್ಲಿ ವೃದ್ಧರು ತಮ್ಮ ಅವಲಂಬಿತರ ಜತೆ ಸ್ವಂತ ಮನೆಯಲ್ಲಿ ಇರಬಹುದು. ಅವರಿಗೆ ತಿರುಗಾಟಕ್ಕೆ ಬೇಕಾದ ಪಾರ್ಕು, ಆರೋಗ್ಯ ವ್ಯವಸ್ಥೆ, ಲಿಫ್ಟು ಮತ್ತು ಸೆಕ್ಯುರಿಟಿ ಸೌಲಭ್ಯಗಳಿವೆ. ಒಂದೆಂದರೆ ಇಲ್ಲಿ ಸಿರಿವಂತ ಮತ್ತು ಮಧ್ಯಮವರ್ಗದವರಿಗೆ ಮಾತ್ರ ಬದುಕಲು ಸಾಧ್ಯ. ಇವರು ಉಳ್ಳವರಾದರೂ ಏಕಾಂಗಿಗಳು. ಮಕ್ಕಳು ಒಂದೊ ತ್ಯಜಿಸಿದ್ದಾರೆ ಇಲ್ಲವೇ ನೌಕರಿಗಾಗಿ ಬೇರೆ ದೇಶಗಳಲ್ಲಿದ್ದು ಖರ್ಚುವೆಚ್ಚ ನೋಡಿಕೊಳ್ಳುತ್ತಿದ್ದಾರೆ. ಅವರು ಕಳಿಸಿದ ಹಣದಲ್ಲೊ ಅಥವಾ ತಾವೇ ಪ್ರಾಯವಿದ್ದಾಗ ಗಳಿಸಿದ ಹಣದಲ್ಲೊ ಇವರು ತಮ್ಮ ಕೊನೆಯ ವರ್ಷಗಳನ್ನು ಕಳೆಯುತ್ತಿದ್ದಾರೆ. ಹೊಸ ತಲೆಮಾರಿನ ನೌಕರಿಯ ಅವಸರ ಗಡಿಬಿಡಿ, ಏಕಾಂತಪ್ರಿಯತೆ ಹಾಗೂ ತಾತ್ಸಾರಗಳಲ್ಲಿ ಬಳಲುವ ಅನೇಕ ಜೀವಗಳು, ಈ ಪರ್ಯಾಯ ವ್ಯವಸ್ಥೆಯಲ್ಲಿ ನೆಮ್ಮದಿ ಪಡೆದುಕೊಂಡಿರಬಹುದು ಅನಿಸಿತು. ಮಕ್ಕಳನ್ನು ಓದಿಸಿ ವಿದೇಶಗಳಿಗೆ ಕಳಿಸಿ ಒಂಟಿಮನೆಯಲ್ಲಿ ಬದುಕುವ ಮುದಿ ತಂದೆತಾಯಿಗಳ ಅವಸ್ಥೆಯನ್ನು ಗಮನಿಸಬೇಕು. ಮಕ್ಕಳು ಮೊಮ್ಮಕ್ಕಳು ಬಂದಾಗ ಅವರ ಬಾಳಿಗೆ ಹೊಸ ಮಿನುಗು. ಉಳಿದಂತೆ ಖಾಲಿತನ. ಇಂತಹ ಮನೆಗಳನ್ನು ಪತ್ತೆಮಾಡಿ ವೃದ್ಧರನ್ನು ಕೊಂದು ದೋಚುತ್ತಿರುವ ಸುದ್ದಿಗಳೂ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಹಿರಿಯರ ಆಶ್ರಮಗಳು ಜೀವದ ಭದ್ರತೆಯನ್ನೂ ಹೊಸ ಸಾಮಾಜಿಕ ಸಂಬಂಧಗಳನ್ನು ಕೊಡುತ್ತಿವೆ. ಆಧುನಿಕ ಮತ್ತು ನಗರದ ಜೀವನ ವ್ಯವಸ್ಥೆಯೇ ಸೃಷ್ಟಿಸಿಕೊಂಡಿರುವ ಪರ್ಯಾಯ ವ್ಯವಸ್ಥೆಯಿದು. ಮಕ್ಕಳು ಗೌರವಾನ್ವಿತವಾದ ಹೊಸ ಬದುಕನ್ನು ಕಲ್ಪಿಸಿಕೊಟ್ಟಿರುವುದರಿಂದ, ಅವರ ವೃದ್ಧಾಪ್ಯದ ದಿನಗಳು ತೀರ ನರಳಿಕೆಯಿಂದ ಕೂಡಿಲ್ಲ. ವೃದ್ಧಾಪ್ಯವನ್ನು ಮೊಮ್ಮಕ್ಕಳ ಜತೆ ಕಳೆಯುತ್ತ ತಮ್ಮ ಬಾಲ್ಯಕ್ಕೆ ಮರಳಿಹೋಗುವ ಕುಟುಂಬಗಳ ಪ್ರೀತಿ ಇಲ್ಲಿ ಸಿಗುವುದಿಲ್ಲ, ಖರೆ. ಆದರೆ ಇಲ್ಲಿಯೂ ಬೇರೆ ಮಕ್ಕಳಿದ್ದಾರೆ. ಅವರನ್ನು ಪೀತಿಯಿಂದ ನೋಡಿಕೊಳ್ಳುವ ವ್ಯವಸ್ಥೆಯಿದೆ.ವೃದ್ಧಾಶ್ರಮಗಳು ಎಂದೂ ಆದರ್ಶವಲ್ಲ. ಆದರೆ ಲೋಕಕ್ಕಂಜಿ ಹಿರಿಯರನ್ನು ಸಾಕುತ್ತ, ಮಾನಸಿಕ ಹಿಂಸೆ ಕೊಡುವ ಕುಟುಂಬಗಳ ಆತ್ಮವಂಚಕತೆಗೆ ಹೋಲಿಸಿದರೆ ಇವು ವಾಸಿ. ಅನೇಕ ದರ್ಗಾ ಮತ್ತು ಆಶ್ರಮಗಳು, ನಾನಾ ಕಾರಣದಿಂದ ಕುಟುಂಬ ತಿರಸ್ಕøತ ವೃದ್ಧರು ಬಂದು ನೆಲೆಸುವ ಮಾನವೀಯ ಸ್ಥಳಗಳಾಗಿವೆ. ತನ್ನ ಕುಟುಂಬವನ್ನು ಅಪಘಾತದಲ್ಲಿ ಕಳೆದುಕೊಂಡ ಮುದುಕಿಯೊಬ್ಬರು ಗಟ್ಟನಹಳ್ಳಿ ಅಂಜನಪ್ಪನವರ ಆಶ್ರಮದಲ್ಲಿ ನೆಮ್ಮದಿ ಕಂಡುಕೊಳ್ಳುತ್ತ ಇರುವುದನ್ನು ಕಂಡೆ. ಆದರೆ ಸಿರಿವಂತರು ಪುಣ್ಯ ಸಂಪಾದನೆಗಾಗಿ ಕಟ್ಟಿಸಿರುವ ಕೆಲವು ವೃದ್ಧಾಶ್ರಮಗಳಲ್ಲಿ ಶೋಚನೀಯ ಸ್ಥಿತಿಯಿದೆ. ವೃದ್ಧಾಶ್ರಮವೊಂದನ್ನು ಕಾಠ್ಮಂಡುವಿನಲ್ಲಿ ನೋಡಿದೆ. ವೃದ್ಧಾಶ್ರಮದ ಮಗ್ಗುಲಿಗೇ ಉರಿವ ಚಿತೆಗಳು. ಕೌಂಪೌಂಡಿನಲ್ಲಿ ಕಾಣುವಂತೆ ಚಿತೆಯ ಸೌದೆಸೀಳುವ ಕೆಲಸ ನಡೆಯುತ್ತದೆ. ಈ ದೃಶ್ಯಗಳನ್ನು ದಿನವೂ ಕಾಣವು ಜೀವಗಳು ಏನೆಂದು ಭಾವಿಸುತ್ತಿರಬಹುದು? ನಡುಗಿದೆ. ವೃದ್ಧಾಶ್ರಮ ನಡೆಸುವುದು ಪುಣ್ಯದ ಕೆಲಸ ಅಥವಾ ಸಾಮಾಜಿಕ ಸೇವೆ ಎಂದಾಗಿದ್ದರೆ, ಅಲ್ಲಿ ಸೂಕ್ಷ್ಮತೆಗಳೂ ಇರಬೇಕು. ಅದೊಂದು ದಂಧೆ ಇಲ್ಲವೇ ಧಾರ್ಮಿಕ ಕರ್ತವ್ಯವಾದರೆ, ಈ ಮಾನವೀಯ ಘನತೆ ಇರುವುದಿಲ್ಲ. ಸರ್ಕಾರಗಳು ಕೊಡುವ ವೃದ್ಧಾಪ್ಯ ವೇತನ ತುಂಬ ಉಪಯುಕ್ತವಾಗಿದೆ. ಆದರೆ ಅದಕ್ಕಾಗಿ ಹಿರಿಯ ಜೀವಗಳು ಅಂಚೆಕಛೇರಿಗಳ ಅಂಗಳದಲ್ಲಿ ಕೂತಿರುವುದನ್ನು ನೋಡುವಾಗ ಈ ಘನತೆ ಕಳೆದುಹೋಗಿದೆ ಅನಿಸುತ್ತದೆ. ವೃದ್ಧಾಶ್ರಮಗಳ ಬಗ್ಗೆ ಧೇನಿಸುತ್ತಿರುವಾಗ, ಪ್ರಾಯದವರೆಲ್ಲ ದುಡಿಯಲೆಂದು ಊರಿಗೆ ಊರೇ ವೃದ್ಧಾಶ್ರಮ ಆಗಿರುವ, ಉತ್ತರ ಕರ್ನಾಟಕದ ಹಳ್ಳಿಗಳು ನೆನಪಾಗುತ್ತವೆ. ಹಾಗೆಂದು ದುಡಿಯಲು ಹೊರಗೆ ಹೋಗಿರುವವರು ಸುಖಿಗಳಾಗಿದ್ದಾರೆ ಎಂದೇನು ಭಾವಿಸಬೇಕಿಲ್ಲ. ಮಣ್ಣುಕೆಲಸಕ್ಕೆ ಗುಳೆಹೋಗಿ ಎಲ್ಲೊ ಸ್ಲಮ್ಮುಗಳಲ್ಲಿ ಬದುಕುವ ಕೂಲಿಕಾರರು ನೆನಪಾಗುತ್ತಾರೆ. ಚಳಿಮಳೆಯಲ್ಲಿ ಟ್ರೆಂಚಿನಲ್ಲಿ ಕುಳಿತು ಯಾವಾಗಲಾದರೂ ಎರಗುವ ಸಾವನ್ನು ಎದುರಿಸುತ್ತಿರುವ ಸೈನಿಕರು, ಭಾರತಕ್ಕಿಂತ ಸುಖೀ ಬದುಕಿಗಾಗಿ ಹಂಬಲಿಸಿ ವಿದೇಶದಲ್ಲಿ ಎರಡನೇ ದರ್ಜೆಯ ಪ್ರಜೆಯಾಗಿ ಬದುಕುತ್ತಿರುವ ನೌಕರರು, ನೆನಪಾಗುತ್ತಾರೆ. ಇಲ್ಲಿ ವೃದ್ಧಾಶ್ರಮದ ತಬ್ಬಲಿತನ ಇರಲಿಕ್ಕಿಲ್ಲ. ಆದರೆ ಬದುಕು ಕಟ್ಟಿಕೊಳ್ಳುವುದಕ್ಕೆ ನಡೆಸುವ ಹೋರಾಟದ ಭಾಗವಾಗಿಯೇ ಇರುವ `ಅನಾಥತನದ’ ಅಂಶವಿರುತ್ತದೆ. *********************************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ   ಪಟ್ಟಣದ ಕವಿತೆಗೆ ಛಂದಸ್ಸಿಲ್ಲ! ಈ ಷಹರ ನಿದ್ರಿಸಲ್ಲ!.  ಏರ್ಪೋರ್ಟ್ ನಲ್ಲಿ ಇಳಿಯಲು ಅನುಮತಿ ಸಿಗುವ ವರೆಗೆ ಪೈಲಟ್ ವಿಮಾನವನ್ನು ಷಹರಕ್ಕೆ ಸುತ್ತು ಹಾಕುತ್ತಿದ್ದ. ವಿಂಡೋ ದಿಂದ ಕಣ್ಣು ಹಾಯಿಸಿದರೆ, ಕೆಳಗೆ ಅಷ್ಟೂ ಬೆಳಕು. ಉದ್ದಕ್ಕೆ ಅಡ್ಡಕ್ಕೆ ಕೆಲವು ನೇರ,ಹಲವು ವಕ್ರ ರಸ್ತೆಗಳು. ಅವುಗಳನ್ನು ಬೆಳಗುವ ರಾತ್ರಿ ದೀಪಗಳು. ಈ ಪಟ್ಟಣಕ್ಕೆ ಮಧ್ಯರಾತ್ರಿ ಎನ್ನುವುದು ಬರೇ ಒಂದು ಪದ. ಆಕಾಶದಿಂದ ನೋಡಿದರೆ, ನೆಲದೆದೆಗೆ ಮೊಳೆ ಹೊಡೆದ ಹಾಗಿರುವ ಕಟ್ಟಡಗಳು. ಅವುಗಳ ಕಿಟಿಕಿಗಳಿಂದ ತಡರಾತ್ರೆ ದಣಿದು ಹೊರ ಜಾರುವ ಮಂದ ಬೆಳಕು. ಮನೆ ಕಟ್ಟಲು ಜಾಗ ಕಡಿಮೆ ಅಂತ ಸಾಲುಮನೆಗಳು ಗೋಡೆಗಳನ್ನು ಹಂಚಿಕೊಂಡಿವೆ. ಹ್ಞಾ! ಅಲ್ಲಿದೆ ನೋಡಿ, ವಾಂಖೇಡೆ ಸ್ಟೇಡಿಯಂ. ಈ ಅಂಗಣದಲ್ಲಿ ಐದಡಿಯ ಹುಡುಗ ಸಚಿನ್ ಸಿಕ್ಸರ್ ಹೊಡೆದಾಗ ಸಾವಿರ ಚಪ್ಪಾಳೆಗಳು ಅನುರಣಿಸಿತ್ತು. ಆತ ಸೊನ್ನೆಗೆ ಔಟಾದಾಗ ಜನ ಅವಹೇಳನದಿಂದ ಕಿರುಚಿದ್ದೂ ಇಲ್ಲಿಯೇ. ವಿಮಾನ ರೆಕ್ಕೆ ತಗ್ಗಿಸಿ ಎಡಕ್ಕೆ ವಾಲಿ, ಮೂತಿ ತಿರುಗಿಸುವಾಗ, ಕೆಳಗಿನ ರೆಡ್ ಲೈಟ್ ನ ರಸ್ತೆಗಳು, ಹತ್ತಿರವಾದಂತೆ ಕಂಡಿತು. ಇಲ್ಲಿ ಕೆಂಪು ದೀಪಗಳು ಮೊಟ್ಟೆಯಿಟ್ಟು, ಕಾಯದಕಾವು ಕೊಟ್ಟು, ಮರಿಯಾಗುವಾಗ ಬೆಳಕಿನ ಹೆಣ್ಣು-ಬಣ್ಣಕ್ಕೆ ಕಣ್ಣೀರು ಬೆರೆತು ರಾಡಿ ರಾಡಿಯಾಗಿ ಹರಡುತ್ತೆ. ಹರಡಿದ ವರ್ಣ ಕೊಲಾಜ್ ಆರ್ಟ್ ಅನ್ನೋವವರೂ ಇದ್ದಾರೆ. ಚಿತ್ರ ಚಲಿಸುತ್ತಾ ಚಲನಚಿತ್ರವಾಗಿ ಬಾಕ್ಸ್ ಆಫೀಸ್ ಹಿಟ್ ಕೂಡಾ ಆಗಿದೆ. ಆಗಸದ ಕಣ್ಣಿಗೆ, ಬುಸ್ ಬುಸ್ ಅಂತ ಬುಸುಗುಟ್ಟುತ್ತಾ ಓಡುವ  ಉಗಿಬಂಡಿಗಳು ಸಹಸ್ರ ಪದಿಯಂತೆ ನಿಧಾನವಾಗಿ ತೆವಳುವಂತೆ ಕಂಡವು. ಇರುವೆ ಸಾಲಿನಂತೆ ರಸ್ತೆ ತುಂಬಾ ವಾಹನಗಳು. ಕರ್ರಗೆ ಹೊಗೆ ಕಾರ್ಖಾನೆಯ ಚಿಮಿಣಿಯಿಂದ, ರಜನೀಕಾಂತ್ ಸಿನೆಮಾದಲ್ಲಿ ಧೂಮದ ಉಂಗುರ ಬಿಟ್ಟ ಹಾಗೆ ಸುತ್ತಿ ಸುಳಿದು ವಿದ್ಯುತ್ ದೀಪಗಳ ನಡುವೆ ಕತ್ತಲನ್ನು ಕಪ್ಪಾಗಿಸಲು ಪ್ರಯತ್ನ ಮಾಡುತ್ತವೆ. ಸಹಸ್ರಾರು ವರ್ಷಗಳಿಂದ ದಡದಿಂದ ಬಿಡುಗಡೆಗೆ ಎಡೆಬಿಡದೆ ಅಲೆಯಾಗಿ ಅಪ್ಪಳಿಸಿ ಪ್ರಯತ್ನಿಸಿ ಉಪ್ಪುಪ್ಪಾದರೂ ಸೋಲೊಪ್ಪದ ಕಡಲಿನ ನೀರು, ಇಡೀ ಪೇಟೆಯ ಬೆಳಕನ್ನು ಪ್ರತಿಫಲಿಸಿ ತನ್ನೊಳಗೆ ಬಿಂಬವಾಗಿಸಿ ಬೆಚ್ಚಗಿದ್ದಂತೆ ಕಂಡಿತು. ಮುಂಬಯಿಯಲ್ಲಿ ಅತ್ಯಂತ ದೊಡ್ಡ ಸ್ಲಮ್ ಇದೆ ಅಂತಾರೆ. ಆದರೆ ಎತ್ತರದಲ್ಲಿ ಹಾರುವ ವಿಮಾನದಲ್ಲಿ ಕುಳಿತ ಕಣ್ಣುಗಳಿಗೆ ಈ ಗುಡಿಸಲುಗಳು, ನಿರ್ಲಕ್ಷಿಸುವಷ್ಟು ಚಿಕ್ಕವು. ಷಹರದ ಅಂಡರ್ ಗ್ರೌಂಡ್ ಚಟುವಟಿಕೆಗಳು ಮನಸ್ಸಿನ ಒಳಪದರದ ವ್ಯಭಿಚಾರೀ ಭಾವದ ಹಾಗೆ, ವಿಮಾನದ ನೇರ ಕಣ್ಣಿಗೆ ಕಾಣಿಸಲ್ಲ.  ಪ್ಲೀಸ್ ಟೈ ಯುವರ್ ಸೀಟ್ ಬೆಲ್ಟ್.  ವಿಮಾನ ಕೆಲವೇ ನಿಮಿಷಗಳಲ್ಲಿ ಲ್ಯಾಂಡ್ ಆಗಲಿದೆ ಅಂತ ಪೈಲಟ್ ಗೊಗ್ಗರು ಇಂಗ್ಲಿಷ್ ನಲ್ಲಿ ಕೊರೆದಾಗ ಪೇಟೆಯ ನೋಟದಿಂದ ಕಣ್ಣು ಒಳ ಸೆಳೆದು ವಿಮಾನದ ಚೌಕಟ್ಟಿನ ಒಳಗೆ ಸ್ಥಿರನಾದೆ. ಹೌದಲ್ಲಾ! ಇದೇ ಮುಂಬಯಿ ನಗರದ ಬಗ್ಗೆ ಜಿ.ಎಸ್.ಶಿವರುದ್ರಪ್ಪ ನವರು ಬರೆದ ಕವಿತೆ ನೆನಪಾಯಿತು. ಕೇಳುವಿರಾ.. **   **   **   ** ಮುಂಬೈ ಜಾತಕ ಹುಟ್ಟಿದ್ದು: ಆಸ್ಪತ್ರೆಯಲ್ಲಿ ಬೆಳೆದದ್ದು: ಬಸ್ಸು ಟ್ರಾಂ ಕಾರು ಟ್ಯಾಕ್ಸಿ ಎಲೆಕ್ಟ್ರಿಕ್ ಟ್ರೇನುಗಳಲ್ಲಿ ಕುಡಿದದ್ದು: ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿ ಹಾಲು, ಗ್ರೈಪ್ ಸಿರಪ್ ಹಾರ್ಲಿಕ್ಸ್ ಇತ್ಯಾದಿ ಕಂಡಿದ್ದು :ಬೆಳಗಿನಿಂದ ಸಂಜೆಯ ತನಕ ಲಕ್ಷ ಚಕ್ರದ ಉರುಳು ಅವಸರದ ಹೆಜ್ಜೆ ಯ ಮೇಲೆ ಸರಿವ ನೂರಾರು ಕೊರಳು ಕಲಿತದ್ದು: ಕ್ಯೂ ನಿಲ್ಲು:ಪುಟ್ಪಾತಿನಲ್ಲೇ ಸಂಚರಿಸು; ರಸ್ತೆವದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು; ಎಲ್ಲಾದರೂ ಸರಿಯೆ, ಬೇರೂರು,ಹೀರು. ತಾಯಿ:  ಸಾವಿರ ಗಾಲಿ ಉರುಳಿ ಹೊರಳುವ ರಸ್ತೆ ಯಂಚಿನಲ್ಲೇ ಕೈಹಿಡಿದು ನಡೆಸಿದವಳು. ಇರುವ ಒಂದಿಂಚು ಕೋಣೆಯಲ್ಲೇ ಹೊರಲೋಕವನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು. ತಂದೆ: ಬೆಳಗಿನಿಂದ ಸಂಜೆಯ ತನಕ ಕಣ್ಮರೆಯಾಗಿ ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತು ಕೆಮ್ಮುವ ಪ್ರಾಣಿ. ವಿದ್ಯೆ: ಶಾಲೆ ಕಾಲೇಜುಗಳುವಕಲಿಸಿದ್ದು; ದಾರಿ ಬದಿ ನೂರಾರು ಜಾಹೀರಾತು ತಲೆಗೆ ತುರುಕಿದ್ದು, ರೇಡಿಯೋ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸ್ಸು ಮಾಡಿದ್ದು.  ನೀನಾಗಿ ಕಲಿತದ್ದು ಬಲು ಕಡಿಮೆ, ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದೊಂದನ್ನು ಹೊರತು. ಜೀವನ:  ಈ ಲಕ್ಷ ದಾರಿಗಳ ಚದುರಂಗದಾಟದಲಿ, ನೂರು ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ ಮುಂದುವರಿಯುವುದು.  ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು; ರೈಲನ್ನೊ ಬಸ್ಸನೋ ಹಿಡಿಯುವುದು, ಸಾಯಂಕಾಲ ಸೋತು  ಸುಸ್ತಾಗಿ ರೆಪ್ಪೆಯ  ಮೇಲೆ ಹತ್ತು ಮಣ ಆಯಾಸವನ್ನು ಹೊತ್ತು ಹನ್ನೊಂದು ಘಂಟೆ ಹೊಡೆವಾಗ ಮನೆಯಲ್ಲಿ ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು ಎಚ್ಚರಿಸುವುದು. ತಣ್ಣಗೆ ಕೊರೆವ ಕೂಳುಂಡು ಬಾಡಿಗೆ ಮನೆಯ ನೆರಳಿನ ಕೆಳಗೆ, ಮತ್ತೆ  ಸಾವಿರ ಗಾಲಿಗಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು. ***       ***       **** ಕವಿತೆಯ ಹೆಸರೇ ಮುಂಬೈಯ ಜಾತಕ. ಜಾತಕ ಎಂದರೆ ಹುಟ್ಟು, ಸಾವು ಇವಿಷ್ಟರ ನಡುವಿನ ಬದುಕಿನ ಚಿತ್ರವನ್ನು ಸೂತ್ರರೂಪದಲ್ಲಿ ಹಿಡಿದಿಟ್ಟ ಚಿತ್ರಸಮೀಕರಣ. ಕವಿತೆ ಮುಂಬಯಿ ನಗರದ ಬದುಕಿನ ಹಲವು ಘಟ್ಟಗಳನ್ನು ಒಂದೊಂದಾಗಿ ತೆರೆದಂತೆ ನಗರದ ಫಿಸಿಯಾಲಜಿ ಮತ್ತು ಸೈಕಾಲಜಿ ಎರಡರ ಪರಿಚಯವಾಗುತ್ತೆ. ಇಲ್ಲಿ ಅತ್ಯಂತ ಮುಖ್ಯ ಅಂಶವೆಂದರೆ, ಕವಿ ಪಟ್ಟಣವನ್ನು ಒಳ್ಳೆಯದು, ಕೆಟ್ಟದು ಎಂಬ ಬೈಪೋಲಾರ್ ದೃಷ್ಟಿಕೋನದಿಂದ ನೋಡುವುದೇ ಇಲ್ಲ. ಸರಿ- ತಪ್ಪುಗಳು, ಯಾವಾಗಲೂ ಮನುಷ್ಯನ ಪರಿಸ್ಥಿತಿಗೆ ಸಾಪೇಕ್ಷವಾಗಿರುವುದರಿಂದ, ಈ ಕವಿತೆಯ ಧ್ವನಿಗೆ ಸಮತೋಲನವಿದೆ. ಹುಟ್ಟಿದ್ದು: ಆಸ್ಪತ್ರೆಯಲ್ಲಿ ಯಾರು ಹುಟ್ಟಿದ್ದು!  ಹಳೆಯ ಕಾಲದಲ್ಲಿ ಹಳ್ಳಿಯಲ್ಲಿ ಮನೆಯಲ್ಲಿಯೇ ಹೆರಿಗೆಯ ವ್ಯವಸ್ಥೆ ಇತ್ತು. ಹಳ್ಳಿಯಲ್ಲಿ ಮನೆಗೆ ಬಂದು ಹೆರಿಗೆ ಮಾಡಿಸುವ ಹೆಂಗಸು, ಮಗುವಿನ ಜೀವನದುದ್ದಕ್ಕೂ, ಎರಡನೇ ಅಮ್ಮನ ಥರ ವಿಶೇಷ ಅಟ್ಯಾಚ್ಮೆಂಟ್ ಮತ್ತು ಸ್ಥಾನಮಾನ ಪಡೆಯುತ್ತಾಳೆ. ಆ ಹೆಂಗಸು, ಆಗಾಗ ತಾನು ಹೆರಿಗೆ ಮಾಡಿದ ಮಕ್ಜಳನ್ನು ನೋಡಿ ಖುಷಿ ಪಡುವುದು ಅತ್ಯಂತ ಸಾಮಾನ್ಯ. ಅದೊಂದು ಭಾವನಾತ್ಮಕ ಸಂಬಂಧ. ಆದರೆ ನಗರದಲ್ಲಿ ಆಸ್ಪತ್ರೆಯಲ್ಲಿ ಹೆರಿಗೆ. ಅದೊಂದು ವ್ಯವಸ್ಥೆ. ಒಂದು ಥರಾ ಈ ಕಡೆ ಬಾಗಿಲಿಂದ ಗರ್ಭವತಿಯರು ಒಳ ಹೋದರೆ, ಆ ಕಡೆ ಬಾಗಿಲಿಂದ ಅಮ್ಮ ಮತ್ತು ಮಗು ಹೊರಗೆ ಬರುವಂತಹ ಇಂಡಸ್ಟ್ರಿಯಲ್ ವ್ಯವಸ್ಥೆ. ಇಲ್ಲಿ ಭಾವನಾತ್ಮಕ ಸಂಬಂಧ ಇಲ್ಲ. ಆಸ್ಪತ್ರೆಗೆ ಹಣ ಕಟ್ಟಿದರೆ, ಹೆರಿಗೆ ಮಾಡಿಸಿ ಕಳಿಸುತ್ತಾರೆ. ಹಾಗೆ, ಮಗುವಿನ ಹುಟ್ಟಿನಲ್ಲಿಯೇ ನಗರಸ್ವಭಾವವಿದೆ. ಹಾಗೆ ಹುಟ್ಟಿದ ಮಕ್ಕಳು ಬೆಳೆದು ನಗರದ ಪ್ರಜೆಗಳಾಗುತ್ತಾರೆ. ಅಂದರೆ ನಗರವೇ ಆಗುತ್ತಾರೆ. ಹಾಗೆ ನೋಡಿದಾಗ ತಿಳಿಯುತ್ತೆ, ಹುಟ್ಟಿದ್ದು ಆಸ್ಪತ್ರೆಯಲ್ಲಿ, ಅನ್ನುವಾಗ, ನಗರಕ್ಕೆ ನಗರವೇ ಹುಟ್ಟಿದ್ದು ಆಸ್ಪತ್ರೆಯಲ್ಲಿ ಅಂತ. ” ಬೆಳೆದದ್ದು: ಬಸ್ಸು ಟ್ರಾಂ ಕಾರು ಟ್ಯಾಕ್ಸಿ ಎಲೆಕ್ಟ್ರಿಕ್ ಟ್ರೇನುಗಳಲ್ಲಿ “ ಬಸ್ಸು,ಟ್ರಾಂ, ಕಾರು, ಎಲೆಕ್ಟ್ರಿಕ್ ಟ್ರೈನ್ ಗಳು ಸದಾ ಚಲನಶೀಲವಾದ, ಸದಾ ಗಿಜಿಗುಟ್ಟುವ, ವ್ಯವಸ್ಥೆಯ ಸಂಕೇತ. ಮುಂಬಯಿಯಲ್ಲಿ ಅಮ್ಮಂದಿರೂ ದಿನವಿಡೀ ಕೆಲಸಕ್ಕಾಗಿ ಚಲಿಸುವಾಗ ಕಂಕುಳಲ್ಲಿ ಮಗು! ಹಳ್ಳಿಯಲ್ಲಿ ಪ್ರಾಣಿ ಪಕ್ಷಿಗಳ ಜತೆಗೆ ಬೆಳೆದರೆ, ಮುಂಬಯಿ ಯಲ್ಲಿ ಬೆಳವಣಿಗೆಯ ಸಂಗಾತಿ, ಯಂತ್ರಗಳು. ಅದರ ಪರಿಣಾಮ ಮನಸ್ಸಿನ ಮೇಲೆ ಏನು ಎಂಬುದು ಓದುಗನ ಗ್ರಹಿಕೆಗೆ ಬಿಟ್ಟದ್ದು. ” ಕುಡಿದದ್ದು: ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿ ಹಾಲು, ಗ್ರೈಪ್ ಸಿರಪ್ ಹಾರ್ಲಿಕ್ಸ್ ಇತ್ಯಾದಿ “ ಸಾಧಾರಣವಾಗಿ ಹಳ್ಳಿಯ ಮನೆಯಲ್ಲಿ ದನ, ಅದರ ಹಾಲು ಕರೆದು ಮಗುವಿಗೆ ಕುಡಿಸುತ್ತಾರೆ. ಮಗು ಬೆಳೆದು ಮಾತಾಡಲು ತೊಡಗಿದಾಗ ಆ ದನವನ್ನು ಮಗುವಿಗೆ ಗೋಮಾತೆ ಎಂದು ಪರಿಚಯಿಸುವ ಪರಿಪಾಠ. ಆ ಮಗು ಮತ್ತು ದನದ ನಡುವೆ ಒಂದು ಅನೂಹ್ಯ ಸಂಬಂಧ ಬೆಳೆಯುತ್ತೆ. ಮುಂಬಯಿಯಲ್ಲಿ ಹಾಗಲ್ಲ. ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟಲೀ ಹಾಲು!. ಮಗುವಿಗೆ ಹಾಲಿನ ಉಗಮವೇ ಒಂದು ಬಾಟಲಿಯಂತಹ ವಸ್ತುವಾದ ಹಾಗೆ. ಗೋಮಾತೆಯ ಜಾಗದಲ್ಲಿ ಬಾಟಲಿ. ಗ್ರೈಪ್ ಸಿರಪ್, ಹಾರ್ಲಿಕ್ಸು ಎಲ್ಲವೂ, ಜಾಹೀರಾತು ಜಗತ್ತಿನ ಪೇಯಗಳು. ಮಗು ಮತ್ತು ಅಮ್ಮ ಎಲ್ಲರೂ ಜಾಹೀರಾತಿನ ಮೇಲೆ ವಿಶ್ವಾಸವಿಟ್ಟು ಮಗುವಿನ ಬೆಳವಣಿಗೆಯ ಪೋಷಕಾಂಶಗಳ ನಿರ್ಧಾರ ಮಾಡುತ್ತಾರೆ. ” ಕಂಡಿದ್ದು: ಬೆಳಗಿನಿಂದ ಸಂಜೆಯ ತನಕ ಲಕ್ಷ ಚಕ್ರದ ಉರುಳು ಅವಸರದ ಹೆಜ್ಜೆಯ ಮೇಲೆ ಸರಿವ ನೂರಾರು ಕೊರಳು “ ಕಾಣುವುದು ಎಂದರೆ ದರ್ಶನ. ಬೆಳಗಿನಿಂದ ಸಂಜೆಯ ತನಕ ಎಂದರೆ, ಒಂದು ದಿನವೂ ಆಗಬಹುದು, ಹುಟ್ಟಿನಿಂದ ಸಾವಿನ ತನಕದ ಬದುಕೂ ಆಗಬಹುದು. ಲಕ್ಷ ಲಕ್ಷ ಚಕ್ರದ ಉರುಳು, ಕಾಲಚಕ್ರವೇ, ಋತುಚಕ್ರವೇ, ಬದುಕಿನ ಏರಿಳಿತವೇ, ನಗರದ ಚಲಿಸುವ ವಾಹನಗಳ ಚಕ್ರಗಳು ಉರುಳುವ ಚಲನಶೀಲತೆಯೇ, ಅಥವಾ ಕೊರಳಿಗೆ ಉರುಳಾಗುವ ಹಲವಾರು ಸಮಸ್ಯೆಗಳೇ?. ಸುಶಾಂತ್ ಸಿಂಗ್ ಹಾಕಿಕೊಂಡ ಉರುಳೇ?. ಅವಸರದ ಹೆಜ್ಜೆ ಹಾಕುವುದು, ಕಾಲುಗಳು. ಜತೆಗೇ ಸರಿಯುವುದು ಕೊರಳು. ಕೊರಳು ಎಂದರೆ ಧ್ವನಿ, ಮಾತು,ಅಭಿಪ್ರಾಯ ಸಿದ್ಧಾಂತ ಇತ್ಯಾದಿಗಳಾಗಿ ಅನ್ವಯಿಸಲು ಸಾಧ್ಯ. ನಡಿಗೆಯ ವೇಗಕ್ಕೆ ಪ್ರಾಮುಖ್ಯತೆ. ಕೊರಳಿನ ದನಿಗಲ್ಲ ಅನ್ನುವುದು ಒಂದರ್ಥವಾದರೆ, ಚಲನಶೀಲ ವ್ಯವಸ್ಥೆಗೆ ಸಾಪೇಕ್ಷವಾಗಿ ಸಿದ್ಧಾಂತ, ಅಭಿವ್ಯಕ್ತಿ, ಚಲಿಸುತ್ತೆ. ” ಕಲಿತದ್ದು: ಕ್ಯೂ ನಿಲ್ಲು:ಪುಟ್ಪಾತಿನಲ್ಲೇ ಸಂಚರಿಸು; ರಸ್ತೆವದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು; ಎಲ್ಲಾದರೂ ಸರಿಯೆ, ಬೇರೂರು,ಹೀರು.” ಜೀವನದ ಶಾಲೆಯಲ್ಲಿ ನಡೆದ ಪ್ರತೀ ಹೆಜ್ಜೆ ಪಠ್ಯ.  ಮೇಲಿನ ಪ್ಯಾರಾದಲ್ಲಿ ಅಷ್ಟೂ ಪ್ರತಿಮೆಗಳೇ.  ಅವುಗಳನ್ನು ಓದುಗರ ಚಿಂತನೆಗೆ ಬಿಡಲೇ?. ಬೇರೂರು, ಹೀರು ಎನ್ನುವ ಕವಿಯ ಭಾವ ಚಲನಶೀಲ ಬದುಕು ಹಂಬಲಿಸುವ ಸ್ಥರತೆಯೇ?. ಬೇರೂರದಿದ್ದಲ್ಲಿ ಹೀರುವುದು ಹೇಗೆ. ಜೀವನದ ಸಾರವನ್ನು ಹೀರಲು ಚಲನಶೀಲತೆಯಷ್ಟೇ ಸ್ಥಿರಪ್ರಜ್ಞೆಯೂ ಆಳ ಚಿಂತನೆಯೂ ಅಗತ್ಯವೇ. ತಾಯಿ, ತಂದೆ, ವಿದ್ಯೆಯ ಬಗ್ಗೆ ಕವಿ ಸೂಚ್ಯವಾಗಿ ತಿಳಿಸುವ ಸಾಲುಗಳು ನಿಮ್ಮ ಸೃಜನಶೀಲ ಚಿಂತನೆಗೆ ಹಲವು ರೂಪದಲ್ಲಿ ಕಾಣ ಬಹುದು. ” ಜೀವನ:  ಈ ಲಕ್ಷ ದಾರಿಗಳ ಚದುರಂಗದಾಟದಲಿ, ನೂರು ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ ಮುಂದುವರಿಯುವುದು.  ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು; ರೈಲನ್ನೊ ಬಸ್ಸನೋ ಹಿಡಿಯುವುದು, ಸಾಯಂಕಾಲ ಸೋತು  ಸುಸ್ತಾಗಿ ರೆಪ್ಪೆಯ  ಮೇಲೆ ಹತ್ತು ಮಣ ಆಯಾಸವನ್ನು ಹೊತ್ತು ಹನ್ನೊಂದು ಘಂಟೆ ಹೊಡೆವಾಗ ಮನೆಯಲ್ಲಿ ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು ಎಚ್ಚರಿಸುವುದು. ತಣ್ಣಗೆ ಕೊರೆವ ಕೂಳುಂಡು ಬಾಡಿಗೆ ಮನೆಯ ನೆರಳಿನ ಕೆಳಗೆ, ಮತ್ತೆ  ಸಾವಿರ ಗಾಲಿಗಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು.” ಈ ಸಾಲುಗಳಲ್ಲಿ ಪ್ರತಿಯೊಂದು ಪದವೂ ರೂಪಕ ಅಥವಾ ಪ್ರತಿಮೆ. ಬಟ್ಟೆಯಲ್ಲಿ ಮೈ ತುರುಕಿ ಓಡುವುದು! ಎಂತಹಾ ಕಲ್ಪನೆ ಅಲ್ಲವೇ. ಬಟ್ಟೆಗೆ ಹೊಂದುವಂತೆ ದೇಹವನ್ನು ಫಿಟ್ ಮಾಡುವ ಜರೂರತ್ತು. ಬಟ್ಟೆ ಎಂದರೆ ದಾರಿ ಎಂಬ ಅರ್ಥ ತಗೊಂಡರೆ, ಬದುಕಿನ ದಾರಿ ಹೇಗಿದೆಯೋ ಅದಕ್ಕೆ ಸರಿಯಾದ ದೇಹಶಿಸ್ತು ಅಗತ್ಯ. ಆಫೀಸ್ ೫೦ ಕ.ಮೀ.ದೂರದಲ್ಲಿ ಇದ್ದರೆ, ಬೆಳಗಿನ ಜಾವ ಎದ್ದು ಮೂಡುವ ಸೂರ್ಯನಿಗೆ ಬೆನ್ನು ಹಾಕಿ,  ಆಫೀಸಿನತ್ತ ರೈಲುಗಾಡಿ ಹತ್ತಿ ಚಲಿಸಬೇಕು. ನಿದ್ದೆ ಬೇಡುವ ದೇಹವನ್ನು ದಂಡಿಸಿ, ಹೊಂದಿಸಿ, ಬದುಕಿನ ಬಟ್ಟೆಗೆ ತುರುಕಬೇಕು.   ‘ಸಾಯಂಕಾಲ ರೆಪ್ಪೆಯ ಮೇಲೆ ಹತ್ತು ಮಣ ಭಾರ ಹೊತ್ತು’  ಬದುಕಿನ ಸಾಯಂಕಾಲವೇ? ಅನುಭವದ ಭಾರವೇ?. ಕಲಿತ, ನಂಬಿದ ಸಿದ್ಧಾಂತದ/ ನಂಬಿಕೆಗಳ ಭಾರವೇ. ಆ ಭಾರದಿಂದ ಮುಂದಿನ ದರ್ಶನದ ಬಾಗಿಲಾದ ರೆಪ್ಪೆ ಮುಚ್ಚುತ್ತಾ ಇದೆಯೇ?. “ಬಾಡಿಗೆ ಮನೆಯ ನೆರಳು” ಅನನ್ಯ ಅಭಿವ್ಯಕ್ತಿ.  ಇಹ ಲೋಕವೇ ಬಾಡಿಗೆ ಮನೆಯೇ?. “ಸಾವಿರ ಗಾಲಿಗಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು”

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಮೂರನೇ ಆಯಾಮ

ಅಂಕಣ ಬರಹ ಹಾಡುವ ತೊರೆಗೆ ಹಾದಿ ತೋರುವ ಕವಿತೆಗಳು ಸಂಕಲನ-ತೊರೆ ಹರಿವ ಹಾದಿಕವಿ- ವಿನಯಚಂದ್ರಬೆಲೆ-೧೨೦ಪ್ರಕಾಶನ- ವಿಶಿಷ್ಟ ಪ್ರಕಾಶನ, ಹಾಸನ   ಕವಿತೆಗಳ ಜಾಡು ಎಂತಹದ್ದು? ಅದು ಯಾವ ಹಾದಿ ಹಿಡಿದು ಹೊರಟಿರುತ್ತದೆ? ಕವಿತೆ ಅಂತರ್ಮುಖಿಯಾಗಿರಬೇಕೆ ಅಥವಾ ಬಹಿರ್ಮುಖಿಯಾಗಿರಬೇಕೆ ಎನ್ನುವ ಪ್ರಶ್ನೆ ಸದಾಕಾಲ ವಿಮರ್ಶೆಯನ್ನು ಕಾಡುತ್ತಿರುತ್ತದೆ. ಒಂದು ಕವಿತೆ ಅತ್ಯುತ್ತಮ ಅಥವಾ ಇನ್ನೊಂದು ಕವಿತೆ ಸಾಧಾರಣ ಇಲ್ಲವೆ ಈ ಕವಿತೆ ಕಳಪೆ ಎಂದು ಹೇಳುವ ಮಾನದಂಡವಾದರೂ ಯಾವುದು? ಕವಿತೆಯನ್ನು ಓದಿ ಆಸ್ವಾದಿಸಬೇಕೋ ಅಥವಾ ವಿಮಶೆಯ ನಿಕಶಕ್ಕೆ ಒಡ್ಡಿ ಒಳ್ಳೆಯ ಕವಿತೆಯೋ ಕೆಟ್ಟ ಕವಿತೆಯೋ ಎಂದು ತೀರ್ಪುಕೊಡುವಲ್ಲಿ ನಿರತರಾಗಬೇಕೋ? ಇದಾವುದರ ಹಂಗಿಲ್ಲದೇ ಓದಿ ಆಸ್ವಾದಿಸುವ ಕವನಗಳು ನಮ್ಮ ಮುಂದಿವೆ. ಕವಿ ವಿನಯಚಂದ್ರ ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಪುಸ್ತಕ ಬಿಡುಗಡೆಗೆಂದು ಕರೆದಾಗ ನನಗೆ ಹುಟ್ಟಿದ ಪ್ರಶ್ನೆಗಳು ಇವೆಲ್ಲ. ಒಂದಿಷ್ಟು ಸ್ನೇಹಿತರು ಸೇರಿ ಪುಸ್ತಕವನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿ ಸಂಭ್ರಮಿಸಿದ್ದೆವು.    ಹಾಗೆ ನೊಡಿದರೆ ವಿನಯಚಂದ್ರ ಕಾವ್ಯಲೋಕಕ್ಕೆ ಹೊಸಬರೇನಲ್ಲ. ಈಗಾಗಲೇ ಒಂದು ಕವನಸಂಕಲನ ಬಿಡುಗಡೆಯಾಗಿದೆ. ಈಗಾಗಲೇ ಅವರ ಮೌನಗೀತ ಎನ್ನುವ ಕವನ ಸಂಕಲನ ಪ್ರಕಟಗೊಂಡಿದೆ. ಸಾಹಿತ್ಯಾಸಕ್ತರಿಗೆ ಹಾಗೂ ಸಹೃದಯರಿಗೆ ಫೇಸ್‌ಬುಕ್ ಮುಂತಾದ ಕಡೆಗಳಲ್ಲಿ ತಮ್ಮ ಕವನವನ್ನು ಉಣಬಡಿಸಿದ್ದಾರೆ.  ಇವರ ಎರಡನೆ ಸಂಕಲನ ತೊರೆ ಹರಿವ ಹಾದಿ ಈಗ ನಿಮ್ಮ ಮುಂದಿದೆ. ಇಲ್ಲಿ ಉಳಿಸಿದರಲ್ಲವೇಅಲ್ಲಿ ಸಮನಾಗುವುದು? ಎನ್ನುತ್ತ ಉಳಿಕೆ ಗಳಿಕೆ ಹಾಗು ಲಯದ ಕುರಿತು ನಮ್ಮ ಗಮನ ಸೆಳೆಯುವ ಕವನದ ಇವೆರಡೇ ಸಾಲುಗಳನ್ನಿಟ್ಟು ಓದಿನೋಡಿ. ಅದೆಷ್ಟೆಲ್ಲ ಅರ್ಥ ಹೊಮ್ಮಿಸುತ್ತದೆ. ಎಲ್ಲಿ ಉಳಿಸಬೇಕು ಮತ್ತು ಎಲ್ಲಿ ಸಮನಾಗಿಸಬೇಕು ಎನ್ನುವುದನ್ನು ಜೀವನದಲ್ಲಿ ಕಲಿಯಬೇಕಾದುದು ಬಹು ಮುಖ್ಯ. ಉಳಿಸಬೇಕಾದಲ್ಲಿ ಉಳಿಸಿ, ಖರ್ಚು ಮಾಡುವಲ್ಲಿ ಮಾಡಿದರೆ ಮಾತ್ರ ಜೀವನಕ್ಕೆ ಬೆಲೆ. ಜೀವನದಲ್ಲಿ ಕೊಡಬೇಕಾದ ಪರೀತಿಯನ್ನು ಧಾರಾಳವಾಗಿ ಕೊಟ್ಟುಬಿಡಬೇಕು. ಪ್ರೀತಿಯನ್ನು ಉಳಿಸಿಕೊಂಡರೆ ಅದು ಎಲ್ಲಿಯೂ ಸಮನಾಗುವುದಿಲ್ಲ. ತಂದೆ ತಾಯಿಗೆ ಕೊಡಬೇಕಾದ ಪ್ರೀತಿ, ಸಹೋದರ ಸಹೋದರಿಯರಿಗೆ ನೀಡಬೇಕಾದ ವಾತ್ಸಲ್ಯ, ಸ್ನೇಹಿತರಿಗೆ ಕೊಡುವ ಆತ್ಮೀಯತೆ ಹಾಗೂ ಪ್ರೇಮಿಗೆ ಮತ್ತು ಜೀವನ ಸಂಗಾತಿಗೆ ನೀಡಬೇಕಾದ ಪ್ರೇಮ, ಮಕ್ಕಳಿಗೆ ನೀಡುವ ಮಮತೆ ಎಲ್ಲವೂ ಬೇರೆ ಬೇರೆಯದ್ದೇ. ಆದರೆ ನಾವು ಅದನ್ನೆಲ್ಲ ಒಂದಾಗಿಸಿ ನಮ್ಮೊಳಗೇ ಒಂದು ಗೊಂದಲವನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. ಯಾರಿಗೆ ಯಾವುದನ್ನು ಕೊಡಬೇಕು ಎಂಬ ವಿಭ್ರಾಂತಿಯಲ್ಲಿ ಯಾರಿಗೂ ಸರಿಯಾಗಿ ನೀಡದೇ ಉಳಿಸುವ ಪ್ರಯತ್ನ ಮಾಡುತ್ತಲೇ ಎಲ್ಲ ಕಡೆಯೂ ಸೋಲುತ್ತೇವೆ. ಹಾಗಾದರೆ ಕೊಡುವುದೆಲ್ಲಿ ಸಮನಾಗುವುದೆಲ್ಲಿ? ಕೊಡುವ ಮತ್ತು ಸಮನಾಗುವ ನಮ್ಮ ಪ್ರಯತ್ನ ಹಣಕಾಸಿನ ವ್ಯವಹಾರದಲ್ಲಿ ತುಂಬ ಚೆನ್ನಾಗಿ ನಿರೂಪಿತವಾಗುತ್ತದೆ. ಎಲ್ಲೆಲ್ಲೋ ಬೇಕಾಬಿಟ್ಟಿ ಖರ್ಚು ಮಾಡುವ ಬದಲು ಅನಾವಶ್ಯಕ ಎನ್ನಿಸಿದಲ್ಲಿ ಉಳಿಸಿಕೊಂಡು ಖರ್ಚು ಮಾಡಲೇ ಬೇಕಾದಲ್ಲಿ ಧಾರಾಳವಾಗಬೇಕು. ಆದರೆ ಕವಿ ಸಂತೆಯ ದಿನ ಮುಂಜಾನೆಗೆದ್ದುಮುಂಡಾಸು ಬಿಗಿದ ರೈತನಿಗೆ ರೇಗುತ್ತೇನೆದರ ಹೆಚ್ಚಿತೆಂದು ಮುನಿಯುತ್ತೇನೆಚೌಕಾಸಿಗಿಳಿದು ಚಿಲ್ಲರೆಯ ಜೇಬಿಗಿಳಿಸುತ್ತೇನೆ ಎಂಬ ಸಾಲಿನ ಮುಂದೆ ಈ ಮೊದಲೆ ಹೇಳಿದ ಎರಡು ಸಾಲುಗಳನ್ನು ಸೇರಿಸುತ್ತಾರೆ. ಅಂದರೆ ಅದಕ್ಕೂ ಹಿಂದೆ ಅದೆಲ್ಲೋ ಸೌತೆಕಾಯಿಗೆ ಉಪ್ಪು ಹಾಕಿಕೊಟ್ಟಿದ್ದಕ್ಕೆ ಕೇಳಿದ್ದಷ್ಟು ಬೆಲೆ ತೆರುವ, ಸುಮ್ಮನೆ ಡೊಗ್ಗು ಸಲಾಮು ಹೊಡೆಯುವವನಿಗೆ ಗರಿಗರಿ ನೋಟುಗಳನ್ನು ನೀಡಿ ಹೀಗೆ ಬಡ ರೈತನ ಎದುರು ಚಿಲ್ಲರೆಗಾಗಿ ಚೌಕಾಶಿ ಮಾಡಿ ನಮ್ಮ ಸಾಮರ್ಥ್ಯವನ್ನು ತೋರಿಸಿ, ಹಣ ಉಳಿಸಿಕೊಂಡ ಆತ್ಮತೃಪ್ತಿಯಲ್ಲಿ ಮೆರೆಯುತ್ತೇವೆ. ಯಾಕೆಂದರೆ ನಮ್ಮ ರೋಷಾವೇಶಗಳನ್ನು ತೋರಿಸಬಹುದಾದದ್ದು ಕೇವಲ ಬಡ ರೈತನ ಎದುರಿಗೆ ಮಾತ್ರ. ದೊಡ್ಡ ದೊಡ್ಡ ಮಾಲ್‌ಗಳಲ್ಲಿ ಬಾಗಿಲು ಕಾಯುವವನೂ ನಮ್ಮ ಕೋಪಕ್ಕೆ ಹೆದರಲಾರ. ಆದರೆ ನಾವು ಅವನಿಗೆ ಟಿಪ್ಸ್ ಕೊಟ್ಟು ಅವನನ್ನು ಸಂತೃಪ್ತಿಗೊಳಿಸುತ್ತೇವೆಯೇ ಹೊರತೂ ಅವನ ಬಳಿ ಚೌಕಾಶಿ ಮಾಡುವುದಿಲ್ಲ ಎಂಬ ನೋವು ಕವಿಗಿದೆ. ಅದು ಈ ಕವಿತೆಯಲ್ಲಿ ತುಂಬ ಸುಂದರವಾಗಿ ಬಿಂಬಿತವಾಗಿದೆ. ಬಿಟ್ಟರೆ  ಗೊಮ್ಮಟನನ್ನೂ ಕುಟ್ಟಿಜಲ್ಲಿ ಮಾಡಿ ಲೋಡು ಮಾಡಲುಕಾದಿದ್ದಾರೆ ಜನಮರಳು ಮರಳಾಗಳೂ ಕಾಯದೆಮಣ್ಣ ಸೋಸಿಯೇ ಒಡೆಯುತ್ತಿದ್ದಾರೆಗಾಂಧಾರಿ ಪಿಂಡ ಎಂತಹ ಮಾರ್ಮಿಕ ಸಾಲುಗಳು ಇವು. ನಮ್ಮ ಜನ ನಿಸರ್ಗದ ಯಾವುದನ್ನು ಇದ್ದಂತೆಯೇ ಇರಲು ಬಿಟ್ಟಿದ್ದೇವೆ ಹೇಳಿ? ಅದಂದೆಂದೋ ಬೆಟ್ಟವಾಗಿದ್ದ ಕಲ್ಲನ್ನು ಒಡೆದು ಕೆತ್ತಿ ಗೊಮ್ಮಟನನ್ನಾಗಿ ಮಾಡಿದರು. ಈಗ ನಮಗೆ ಅವಕಾಶ ಸಿಕ್ಕರೆ ಆ ಗೊಮ್ಮಟನನ್ನೂ ಒಡೆದು ಜಲ್ಲಿ ಮಾಡಿ ಮನೆ ಕಟ್ಟಲೋ, ರಸ್ತೆಗೋ ಹಾಕಿ ದಮಾಸು ಹಾಕಿ ನುಣುಪು ಮಾಡಿಬಿಡುತ್ತೇವೆ. ಯಾಕೆಂದರೆ ಮರಳಿನ ಹೆಸರಲ್ಲಿ ನದಿಯ ಒಡಲನ್ನು ಬಗೆದು ಬರಿದಾಗಿಸಿ ನದಿಯ ಪಾತ್ರವೇ ಬದಲಾಗುವಂತೆ ಮಾಡುವುದರಲ್ಲಿ ನಾವು ನಿಸ್ಸಿಮರು. ಇನ್ನು ಕಡಲ ತೀರದಲ್ಲಂತೂ ಸಮುದ್ರ ದಮಡೆಯ ಮರಳನ್ನೂ ಬಗೆದು ಹೊತ್ತೊಯ್ಯುತ್ತಿದ್ದೇವೆ. ಕೆಲವೊಮ್ಮೆ ಮರಳು ಎನ್ನುವ ಹೆಸರಿನಲ್ಲಿ ಮಣ್ಣನ್ನೂ ಹೊತ್ತೊಯ್ದು ಮಾರಾಟ ಮಾಡಿ ಹಣಗಳಿಸುತ್ತಿದ್ದೇವೆ. ಚಿನ್ನದ ಮೊಟ್ಟೆಯಿಡುವ ಕೋಳಿಯ ಗರ್ಭವನ್ನು ಉದರದಿಮದ ಹೊರತೆಗೆದು ಹೊರಗೇ ಕಟ್ಟಿ, ಹುಂಜದ ವೀರ್‍ಯ ತಾಗಿ ಮೊಟ್ಟೆಯಾದ ತಕ್ಷಣ ಕಿತ್ತುಕೊಳ್ಳುವ ಮನುಷ್ಯ ಸಮಾಜದ ನೀಚ ಹುನ್ನಾರಗಳ ಕುರಿತಾಗಿ ಕವಿಯಲ್ಲಿ ಬೇಸರವಿದೆ. ಅದಕ್ಕೂ ಹೆಚ್ಚಾಗಿ ಇಲ್ಲಿ ಕವಿ ತನ್ನನ್ನು ತಾನು ವ್ಯಂಗ್ಯವಾಡಿಕೊಳ್ಳುವುದನ್ನು ಇಲ್ಲಿ ಕಾನುತ್ತೇವೆ. ತನಗೂ ಎರಡು ಮಕ್ಕಳಿವೆ, ನಾನೂ ಇಷ್ಟೆಲ್ಲ ಮಂತ್ರ ಹೇಳಿ ಕಾರಿನಲ್ಲೇ ಓಡಾಡುತ್ತೇನೆ ಎಂಬ ಅಪರಾಧಿಭಾವವನ್ನು ತೋರಿಸುತ್ತಾರೆ.    ವಿನಯಚಂದ್ರರ ಕವಿತೆಗಳು ಇಷ್ಟವಾಗುವುದೇ ಅಲ್ಲಿರುವ ಸಾಮಾಜಿಕ ಪ್ರಜ್ಞೆಯಿಂದಾಗಿ. ಭವಿಷ್ಯ ಎನ್ನುವ ಕವಿತೆಯಲ್ಲಿ ಅವರು ಅಂತಹ ಸಾಮಾಜಿಕ ಕಳಕಳಿಯಿಂದಲೇ ನಮ್ಮನ್ನು ಅಲ್ಲಾಡಿಸಿಬಿಡುತ್ತಾರೆ. ಇರಾಕಿನಲ್ಲಿ ಗೋಲಿಯಾಡಬೇಕಾಗಿದ್ದ, ಚಿನ್ನಿ ದಾಂಡು ಆಡಬೇಕಾಗಿದ್ದ ಮಕ್ಕಳ ಕೈಯ್ಯಲ್ಲಿ ಬಂದೂಕುಗಳನ್ನು ನೀಡಿ, ಚಿಕ್ಕವರಿರುವಾಗ ನಮ್ಮ ಕುತ್ತಿಗೆಯಲ್ಲಿ ರಕ್ಷಾ ಕವಚದಂತೆ ಇರುತ್ತಿದ್ದ ತಾಯಿತದ ಜಾಗದಲ್ಲಿ ಸೈನೈಡ್ ಕಟ್ಟಿ ಆಟದ ಮೈದಾನದಲ್ಲಿ ಬಾಂಬುಗಳೊಂದಿಗೆ ಆಟವಾಡುವುದನ್ನು ಕಂಡಾಗ ಮಕ್ಕಳ ಬಾಲ್ಯವನ್ನು ಕಿತ್ತುಕೊಂಡವರ ಕುರಿತು ಆಕ್ರೋಶ ಉಕ್ಕುತ್ತದೆ. ಸೋಮಾಲಿಯಾದಲ್ಲಿ ಮೂಳೆ ಚಕ್ಕಳವಾಗಿದ್ದ ಮಕ್ಕಳ ಅಸ್ತಿಪಂಜರದಂತಹ ದೇಹ, ಹಾಲು ಕೊಡಬೇಕಾಗಿದ್ದ ಅಮ್ಮನ ಮೊಲೆಯಲ್ಲಿ ಜಿನುಗುವ ರಕ್ತ ನಮ್ಮನ್ನು ಅಧೀರಗೊಳಿಸುತ್ತದೆ. ಚೀನಾದಲ್ಲಂತೂ ಬ್ರೂಣ ಹತ್ಯೆ ಸಾಮಾನ್ಯ. ಹುಟ್ಟಲಾರದ ಮಕ್ಕಳು ಶೌಚಾಲಯದ ಗುಂಡಿಗಳಲ್ಲಿ ನರಳಿದರೆ, ಹುಟ್ಟಿದ ಮಕ್ಕಳು ಸಾಧಿಸಲೇ ಬೇಕಾದ ಒತ್ತಡಕ್ಕೆ ಸಿಲುಕಿ, ಸರಕಾರದ ಅಣತಿಯಂತೆ ಬಾಲ್ಯ ಕಳೆದುಕೊಳ್ಳುವುದನ್ನು ಕಂಡರೆ ಆಧುನಿಕ ಸಮಾಜದ ಕುರಿತಾಗಿಯೇ ಅಸಹ್ಯ ಹುಟ್ಟುತ್ತದೆ. ಚಂದ್ರ ಲೋಕಕ್ಕೆ, ಮಂಗಳ ಗ್ರಹಕ್ಕೆ ಹೋಗುವ ಆತುರದಲ್ಲಿ ನಾವು ನಮ್ಮ ಭೂಮಿಯನ್ನು ಹಾಳುಗೆಡವುದನ್ನು ಕಂಡು ಕವಿ ಮಮ್ಮಲ ಮರಗುವುದು ಈ ಕವಿತೆಯಲ್ಲಿ ಕಾಣುತ್ತದೆ.            ಅಸಹಾಯಕ ಕವಿತೆಯಲ್ಲಿ ದೇಶದ ತುಂಬ ನಡೆಯುತ್ತಿರುವ ಜಲಪ್ರವಾಹವನ್ನು ಉಲ್ಲೇಖಿಸುತ್ತಾರೆ. ಕೇರಳದಲ್ಲಿ, ಕೊಡಗಿನಲ್ಲಿ, ಶಿರಾಡಿಯಲ್ಲಿ, ಎಡಕುಮರಿಯಲ್ಲಿ ಹೀಗೆ ಸುತ್ತಮುತ್ತ ಎತ್ತ ನೋಡಿದರೂ ಜಲಪ್ರವಾಹ. ಗುಡ್ಡಗುಡ್ಡಗಳೇ ಕುಸಿದು, ನೀರು ಎಲ್ಲೆಡೆಯಿಂದ ಜನವಸತಿ ಪ್ರದೇಶದ ಮೇಲೆ ಜಾರಿ, ಮನೆಗಳೆಲ್ಲ ಕೊಚ್ಚಿಕೊಂಡು ಹೋಗುವಾಗ ಎಲ್ಲರ ಮನದಲ್ಲೂ ಅದೆಷ್ಟು ನೋವು, ಅದೆಷ್ಟು ವಿಷಾದ. ಆಗೆಲ್ಲ ಉಣ್ಣಲು, ತಿನ್ನಲು ಇಲ್ಲದವರಿಗೆ ಸಹಾಯ ಮಾಡುತ್ತೇನೆಂದು ಹೊರಟವರು ಅದೆಷ್ಟೋ ಮಂದಿ. ಕೆಲವರಂದು ಸಹಾಯ ಮಾಡುವ ನೆಪದಲ್ಲಿ ಆಹಾರ, ವಸ್ತ್ರ, ಹಣವನ್ನು ನೆಪ ಮಾತ್ರಕ್ಕೆ ನಿರಾಶ್ರಿತರಿಗೆ ನೀಡಿ, ಉಳಿದ್ದ್ದ್ನ್ನು ತಾವೇ ಹಂಚಿಕೊಂಡವರೂ ಇದ್ದರು. ಆದರೂ ಹೀಗೆ ಜನಜಾನುವಾರುಗಳ ಅಸಹಾಯಕತೆಗೆ ಹೆಚ್ಚಿನವರು ಮಾಡಿದ್ದೇನು? ಒಂದು ವಿಷಾದದ ಇಮೋಜಿ ಒತ್ತಿ, ಬೇಸರವಾಯಿತೆಂಬಂತೆ ಮೆಸೇಜು ಕುಟ್ಟಿ, ಹಣ ಕೊಡಲೇ, ಸಹಾಯಕ್ಕೆ ಹೊರಟು ಬಿಡಲೇ ಎಂದು ಯೋಚಿಸುತ್ತ ಕೊನೆಗೆ ಏನೂ ಮಾಡಲಾಗದೇ ಸುಮ್ಮನಿದ್ದವರೇ ಹೆಚ್ಚು, ಇದನ್ನು ಕವಿ ಅಜ್ಜಿಯ ಸಾವಿನೊಂದಿಗೆ ಹೋಲಿಸಿಕೊಳ್ಳುತ್ತಾರೆ. ಅಜ್ಜಿ ಸತ್ತ ಸುದ್ದಿ ಕೇಳಿ ಬೋರಾಡಿ ಅತ್ತು, ಏನೂ ಮಾಡಲಾಗದ ಅಸಹಾಯಕತೆಗೆ ಚೀರಿ, ಕಣ್ಣೀರಾಗಿ ಅಳುವಿಗೆ ನೆರೆಹೊರೆಯವರ ಸಾಂತ್ವಾನ ಕೇಳಿ, ನಂತರ ಕೆಲವೇ ದಿನಗಳಲ್ಲಿ ಅಜ್ಜಿ ಇದ್ದಳೆಂಬುದನ್ನೇ  ಮರೆತಿದ್ದೆ ಎನ್ನುತ್ತಾರೆ. ನಮ್ಮೆಲ್ಲರ ಬದುಕೂ ಇಷ್ಟೇ. ಘಟನೆ ನಡೆದಾಗ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂದು ದೊಡ್ಡ ದೊಡ್ಡ ಮಾತುಗಳನ್ನಾಡುತ್ತೇವೆ. ಆದರೆ ಏನೂ ಮಾಡಲಾಗದೆ ಆ ಪರಿಸ್ಥಿತಿಗೆ ಹೊಂದಿಕೊಂಡು ಬಾಳುವುದನ್ನು ರೂಢಿಸಿಕೊಳ್ಳುತ್ತೇವೆ. ಹಿಂದಿನ ಎಲ್ಲ ನೋವುಗಳನ್ನು ಮರೆತು ಮತ್ತೆ ಸಲೀಸಾದ ಬದುಕಿನಲ್ಲಿ ಕರಗಿ ಹೋಗುತ್ತೇವೆ. ಜೀವವಿದಕೊಳ್ಳಿ ಎನ್ನುವ ಕವಿತೆಯು ನಮ್ಮನ್ನು ಮತ್ತೆ ಮತ್ತೆ ಚಿಂತನೆಗೆ ಹಚ್ಚುತ್ತದೆ.  ಖಂಡವಿದಕೋ, ಮಾಂಸವಿದಕೋ, ಗುಂಡಿಗೆಯ ಬಿಸಿ ರಕ್ತವಿದಕೋ ಎನ್ನುವ ಪುಣ್ಯಕೋಟಿಯ ಕಥೆಯನ್ನು ನೆನಪಿಸುವ ಶೀರ್ಷಿಕೆಯ ಈ ಕವನ ಸಾವನ್ನು ಕೊಟ್ಟು ಜೀವವನ್ನು ತೆಗೆದು ಕೊಳ್ಳಿ ಎನ್ನುವ ಮಾತನ್ನು ಮಾರ್ಮಿಕವಾಗಿ ಹೇಳುತ್ತದೆ. ಗಿಡಕ್ಕೆ ಹೂವು ಮೊಗ್ಗು ಭಾರವಾದರೆ ಆ ಜೀವ ಇದ್ದೇನು ಪ್ರಯೋಜನ? ಮಾನವೀಯತೆಯನು ಮರೆತು ಅಧಿಕಾರ ದಾಹಿಯಾಗುವ ಬದಲು ಪ್ರಾಣ ಹೋದರೆ ತಪ್ಪೇನಲ್ಲ ಎನ್ನುತ್ತಾರೆ ಕವಿ. ಕವಿತೆಯು ಪ್ರಸ್ತುತ ಪಡಿಸುವ ರೀತಿಯಿಂದಲೂ, ಅದರ ಆಶಯದಿಂದಲೂ ಗೆಲ್ಲುತ್ತದೆ. ನಮ್ಮೆಲ್ಲರ ಬದುಕು ಅದೆಷ್ಟು ಅರ್ಥಹೀನ. ನಾವೇನು ಮಾಡಬೇಕೆಂದುಕೊಂಡಿದ್ದವೋ ಅದನ್ನು ಮಾಡಲಾಗುವುದಿಲ್ಲ. ಏನನ್ನು ಸಾಧಿಸಬೇಕು ಎಂದುಕೊಂಡಿದ್ದೆವೋ ಅದನ್ನು ಸಾಧಿಸಲು ನಮ್ಮ ಸುತ್ತಲಿನ ಸಮಾಜ ಬಿಡುವುದಿಲ್ಲ. ಪ್ರಖ್ಯಾತ ಹಾಡುಗಾರನಾಗಬೇಕು, ಅದ್ಭುತ ನೃತ್ಯಪಟುವಾಗಬೇಕು, ಸೋಲಿರದ ಆಟಗಾರನಾಗಬೇಕು ಎಂದೆಲ್ಲ ಆಸೆ ಇಟ್ಟುಕೊಂಡ ಮಕ್ಕಳಿಗೆ ಅದನ್ನು ಮಾಡಲು ಪ್ರೋತ್ಸಾಹಿಸದೇ, ‘ಹೊಟ್ಟೇಗೇನು ಮಾಡ್ತಿ’ ಎಂದು ಕೇಳುತ್ತೇವೆ. ಹೊಟ್ಟೆಗೆ ಸಂಪಾದಿಸಿಕೊಳ್ಳಬೇಕಾದ ಆತುರದಲ್ಲಿ ಮಗು ತನ್ನ ಇಷ್ಟದ ಎಲ್ಲವನ್ನೂ ಮರೆಯುತ್ತದೆ. ಬದುಕು ಎಂದರೆ ಹೊಟ್ಟೆ ಬಟ್ಟೆ ಹಾಗೂ ಹಣ ಮಾತ್ರ ಎಂದು ಅರ್ಥ ಮಾಡಿಕೊಳ್ಳುತ್ತದೆ. ಆದರೆ ಹೊಟ್ಟೆ ತುಂಬಾ ಉಂಡು, ಕೈ ತುಂಬ ಹಣ ಸಂಪಾದಿಸಿ, ಐಶಾರಾಮಿ ಮನೆಯಲ್ಲಿ, ನಮ್ಮದೇ ಅದ್ಭುತವಾದ ವಾಹನದಲ್ಲಿ ಓಡಾಡುತ್ತೇವೆ. ಆದರೆ ಇವೆಲ್ಲವೂ ಬದುಕಿಗೆ ಸಂತಸ ಕೊಡಬಲ್ಲದೇ? ಅಪ್ಪನ ಮಾತಿನಂತೇ ನಡೆದೆಹೊಟ್ಟೆಗೇನೋ ಒಂದು ಮಾಡಿಕೊಂಡಿದ್ದೇನೆಬದುಕು ಮಾತ್ರ ನಿಸ್ಸಾರ, ಶೂನ್ಯಪ್ರಶ್ನೆ ಎತ್ತೋಣವೆಂದರೆಉತ್ತರಿಸಲು ಈಗ ಅಪ್ಪನಿಲ್ಲ ಎಲ್ಲವೂ ಇದ್ದು ನಿಸ್ಸಾರ ಬದುಕನ್ನು ಸಾಗಿಸುವಾಗ ನಮ್ಮನ್ನು ನಾವು ಸಾಧಿಸುವ ಖುಷಿಯಿಂದ ಹಿಮ್ಮೆಟಿಸಿದವರನ್ನು  ಕೇಳೋಣವೆಂದರೆ ಅವರು ನಮ್ಮೆದುರಿಗೆ ಇರುವುದಿಲ್ಲ. ಇಲ್ಲಿ ಹೊಟ್ಟೆಗೇನು ಮಾಡುತ್ತಿ ಎಂದು ಕೇಳುವ ಕವಿಯ ಅಪ್ಪ ಒಂದು ಹೆಸರು ಮಾತ್ರ. ನಾವೆಲ್ಲರೂ ಮಾಡುತ್ತಿರುವುದು ಅದೇ ಕೆಲಸ. ನಮ್ಮ ಬಾಲ್ಯದಲ್ಲಿ ನಮ್ಮ ಇಷ್ಟವನ್ನು ಕಿತ್ತುಕೊಂಡ ಅಪ್ಪ- ಅಮ್ಮ, ಹಿತೈಷಿಗಳು ಎನ್ನಿಸಿಕೊಂಡ ಸಂಬಂಧಿಕರು ಮಾಡಿದ ಕೆಲಸವನ್ನು ನಾವೀಗ ಮಾಡುತ್ತಿದ್ದೇವೆ. ಆಟ ಇಷ್ಟ ಎನ್ನುವ, ಚಿತ್ರ ಬಿಡಿಸುವುದರಲ್ಲಿ ಪ್ರಪಂಚವನ್ನೇ ಮರೆಯುವ, ಹಾಡುತ್ತ ಹಾಡುತ್ತ ಅದ್ಭುತ ಗಂಧರ್ವ ಲೋಕವನ್ನೇ ಸೃಷ್ಟಿಸುವ ಹತ್ತಾರು ಪ್ರತಿಭೆಗಳನ್ನು ಒಡಲಲ್ಲಿ ಇಟ್ಟುಕೊಂಡ ನಮ್ಮ ಮಕ್ಕಳಿಗೆ ಅವರಿಷ್ಟದ್ದನ್ನು ಮಾಡಲು ಬಿಡುತ್ತಿದ್ದೇವೆಯೇ? ‘ಮೊದಲು ಓದು, ಒಂದು ನೌಕರಿ ಹಿಡಿ. ನಂತರ ಬೇಕಾದ್ದು ಮಾಡಿಕೊ’ ಎಂದು ಉಪದೇಶ ಕೊಡುತ್ತಿದ್ದೇವೆ. ಇದು ಜನರೇಶನ್ ಗ್ಯಾಪ್ ಅಲ್ಲ. ಬದುಕು ಎಂದರೇನು ಎನ್ನುವುದು ಅರ್ಥವಾದ ಕಾರಣಕ್ಕೆ ಹೀಗೆ ಮಾಡುತ್ತೇವೆಯೇ? ಅಥವಾ ಬೆಳೆದಂತೆಲ್ಲ ನಮಗೆ ಹಣ ಹಾಗೂ ಒಂದು ಕಂಫರ್ಟ ಲೈಫ್ ಮಾತ್ರ ಸರಿಯಾದದ್ದು ಎನ್ನಿಸಲು ಪ್ರಾರಂಭವಾಗುತ್ತದೆಯೇ? ಅಥವಾ ಹಾಗೆ ಜೀವನವನ್ನು ಒಂದು ಹಂತಕ್ಕೆ ತಂದುಕೊಳ್ಳದೇ ಕೊನೆಗೆ ಅಸಹಾಯಕರಾಗಿ, ತಮ್ಮೆಲ್ಲ ಸಂಬಂಧಿಗಳಿಗೆ, ಆಪ್ತರಿಗೆ, ಮಿತ್ರರಿಗೆ ಹೊರೆಯಾಗಿ ನಿಂತವರನ್ನು ಕಂಡು ಇಂತಹ ಭಾವ ಮೂಡುತ್ತದೆಯೇ? ಯಾವುದು ಸರಿ? ಮಕ್ಕಳ ಇಷ್ಟದಂತೆ ಅವರ ಆಯ್ಕೆಯ ಕ್ಷೇತ್ರದಲ್ಲಿ ಬಿಡುವುದೇ ಅಥವಾ ಅವರ ಓದು ಬರೆಹಕ್ಕೆ ಆದ್ಯತೆ ನೀಡಿ, ಅವರಿಗೊಂದು ಉದ್ಯೋಗ ದೊರೆತು, ಅವರ ಬದುಕು ಒಂದು ಹಂತಕ್ಕೆ ತಲುಪುವುದೇ? ಕವಿ ಕೊನೆಯಲ್ಲಿ ಇಂತಹುದ್ದೊಂದು ಪ್ರಶ್ನೆಯನ್ನು ಹಾಗೇ ಓದುಗರಿಗೆ ಬಿಟ್ಟುಬಿಟ್ಟಿದ್ದಾರೆ.             ವಿನಯಚಂದ್ರರಿಗೆ ಆಂಗ್ಲ ಸಾಹಿತ್ಯದ ಅಪಾರವಾದ ಓದು ಬೆನ್ನಿಗಿದೆ. ಶ್ರೇಷ್ಠ ಆಂಗ್ಲ ಸಾಹಿತಿಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದಾರೆ. ಆಂಗ್ಲ ಸಾಹಿತ್ಯದ ವಿದ್ಯಾರ್ಥಿಗಳಿಗೆ

ಮೂರನೇ ಆಯಾಮ Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಸೀಗಲ್ ಸೀಗಲ್ಮೂಲ : ಆಂಟನ್ ಚೆಕಾಫ್ ಕನ್ನಡಕ್ಕೆ : ಹೇಮಾ ಪಟ್ಟಣಶೆಟ್ಟಿಪ್ರ : ಅನನ್ಯ ಪ್ರಕಾಶನಪ್ರ.ವರ್ಷ :೨೦೦೭ಬೆಲೆ :ರೂ.೭೦ಪುಟಗಳು : ೧೦೮ ಎರಡು ತಲೆಮಾರುಗಳ ನಡುವಣ ಸಂಘರ್ಷವೇ ಈ ನಾಟಕದ ಮುಖ್ಯ ಕಥಾ ವಸ್ತು. ಇಬ್ಬರು ನಟಿಯರು ಮತ್ತು ಇಬ್ಬರು ಲೇಖಕರುಗಳ ನಡುವಣ ಸಂಬಂಧದ ಸ್ವರೂಪದ ಶೋಧನೆಯೇ ಇಲ್ಲಿನ ಮುಖ್ಯ ಕಾಳಜಿಯಾಗಿದೆ. ಹಿರಿಯ ನಟಿ ಅರ್ಕಾದಿನಾ ಮತ್ತು ಹಿರಿಯ ಲೇಖಕ ತ್ರಿಗೊರಿನ್ ಆಗಲೇ ಸಮಾಜದಲ್ಲಿ ತಮ್ಮ ನೆಲೆಯನ್ನು ರೂಪಿಸಿಕೊಂಡವರು. ಯುವಕ ತ್ರೆಪ್ಲೆಫ್ ಮತ್ತು ಎಳೆಯ ಯುವತಿ ನೀನಾ ಇನ್ನೂ ಅನನುಭವಿಗಳು. ಹಿರಿಯ ಜೋಡಿಗೆ ನಗರದ ಹಿನ್ನೆಲೆಯಿದ್ದರೆ ಕಿರಿಯ ಜೋಡಿಯ ಸ್ವಭಾವದಲ್ಲಿ ಗ್ರಾಮೀಣ ಸೊಗಡಿದೆ. ತ್ರೆಪ್ಲೆಫ್ ಪ್ರಸಿದ್ಧ ಲೇಖಕನಾಗಲು ಮತ್ತು ನೀನಾ ಪ್ರಸಿದ್ಧ ನಟಿಯಾಗಲು ಬಯಸುತ್ತಾರೆ. ಆದರೆ ತ್ರೆಫ್ಲೆಫ್ ನೀನಾಳನ್ನು ಪ್ರೀತಿಸಿದರೆ ನೀನಾ ತ್ರಿಗೊರಿನ್ ಬಗ್ಗೆ ಮೆಚ್ಚುಗೆಯಿಟ್ಟುಕೊಂಡಿದ್ದಾಳೆ. ತ್ರಿಗೊರಿನ್‌ಗೆ ನೀನಾ ಬೇಕು. ಆದರೆ ಅರ್ಕಾದಿನಾಗೆ ತ್ರಿಗೊರಿನ್ ಬೇಕು. ಹಾಗೆಂದು ಇದು ಸಾಮಾನ್ಯ ತ್ರಿಕೋನ ಪ್ರೇಮದ ಕಥೆಯಲ್ಲ. ಇದರ ಜತೆಗೆ ಮಾಶಾ ಮತ್ತು ಮೆದ್ವೆದೆಂಕೋ ಎಂಬ ಇನ್ನೊಂದು ಜೋಡಿಯ ಕಥೆಯೂ ಇಲ್ಲಿ ಹೆಣೆದುಕೊಳ್ಳುತ್ತದೆ. ಇಡೀ ನಾಟಕದಲ್ಲಿ ಪ್ರತಿಯೊಬ್ಬರೂ ಪ್ರೀತಿಯೆಂಬ ಮಧುರ ಸಂಬಂಧದ ಬೆನ್ನು ಹತ್ತಿದರೂ ವಾಸ್ತವದ ಬದುಕಿನಲ್ಲಿ ತಮ್ಮ ಆಸೆಗಳ ವೈಫಲ್ಯದಿಂದಾಗಿ ಹತಾಶರಾಗುತ್ತಾರೆ. ಮಾಶಾ ಮಾತ್ರ ವಾಸ್ತವವನ್ನು ಅರ್ಥ ಮಾಡಿಕೊಂಡು ಮೆದ್ವೆದೆಂಕೋನನ್ನು, ತಾನು ಆತನನ್ನು ಪ್ರೀತಿಸದೇ ಇದ್ದರೂ ಮದುವೆಯಾಗುತ್ತಾಳೆ. ಮನುಷ್ಯ ಸ್ವಭಾವ ಮತ್ತು ಮನುಷ್ಯ ಸಂಬಂಧಗಳ ವಿವಿಧ ವಾಸ್ತವಿಕ ಮುಖಗಳನ್ನು ನೈಜವಾಗಿ ಕಟ್ಟಿಕೊಡುವ ‘ಸೀಗಲ್ ‘ ನಲ್ಲಿ ಎಲ್ಲರೂ ಆ ಹಕ್ಕಿಯಂತೆ ಸ್ವಚ್ಛಂದವಾಗಿ ಹಾರಬಯಸುತ್ತಾರೆ. ಆದರೆ ಒಂದಿಲ್ಲೊಂದು ರೀತಿಯಲ್ಲಿ ಎಲ್ಲರೂ ಸೀಗಲ್ ನಂತೆ ಬೇಟೆಯಾಡಲ್ಪಡುತ್ತಾರೆ. ಹೀಗೆ ಶೀರ್ಷಿಕೆಯೇ ರೂಪಕವಾಗುವ ವಿಶಿಷ್ಟ ನಾಟಕ ‘ಸೀಗಲ್’ ಹಾಗೆಂದು ಸೀಗಲ್ ಕೇವಲ ಪ್ರೀತಿಯ ಕುರಿತಾದ ನಾಟಕವಲ್ಲ. ನಾಟಕಕ್ಕೆ ಇನ್ನೊಂದು ಆಯಾಮವಿದೆ. ಅದು ಸೃಜನಶೀಲತೆಯ ಕುರಿತಾದದ್ದು. ನಾಟಕದ ಆರಂಭದಲ್ಲಿ ಕಾಣುವ ತ್ರೆಪ್ಲೆಫ್ ರಚಿಸಿದ ನಾಟಕದ ಮೂಲಕ ಇದು ಕಾಣಿಸಿಕೊಳ್ಳುತ್ತದೆ. ಅವನು ಮಹತ್ವಾಕಾಂಕ್ಷಿ. ತನ್ನ ನಾಟಕ ಎಲ್ಲರಿಂದಲೂ ಪ್ರಶಂಸೆಗೊಳಗಾಗುತ್ತದೆ ಎಂಬ ಕನಸನ್ನು ಕಟ್ಟಿಕೊಂಡವನು. ಆದರೆ ಅವನು ಲೇವಡಿಗೊಳಗಾಗುತ್ತಾನೆ ಮತ್ತು ಹತಾಶನಾಗುತ್ತಾನೆ. ತ್ರಿಗೊರಿನ್ ಈ ಎಲ್ಲ ಹಂತಗಳನ್ನು ದಾಟಿದವನಾಗಿದ್ದಾನೆ. ಒಟ್ಟಿನಲ್ಲಿ ಸೃಷ್ಟಿಕ್ರಿಯೆಯಲ್ಲಿ ಉಂಟಾಗುವ ನೋವು, ಯಾತನೆಗಳಿಗೆ ನಾಟಕ ಸಾಕ್ಷಿಯಾಗುತ್ತದೆ. ಚೆಕಾಫ್‌ನ ಮೂಲಕೃತಿಯ ಸಾರ್ವಕಾಲಿಕ ಪ್ರಸ್ತುತತೆ ಈ ಅನುವಾದವನ್ನು ಸಾರ್ಥಕವಾಗಿಸಿದೆ. ನಾಟಕವನ್ನು ವೇದಿಕೆಯ ಮೇಲೆ ನೋಡಿ ಆನಂದಿಸುವಷ್ಟೇ ಸರಾಗವಾಗಿ ಹೇಮಾ ಪಟ್ಟಣಶೆಟ್ಟಿಯವರ ಅನುವಾದವೂ ಖುಷಿಯಿಂದ ಓದಿಸಿಕೊಂಡು ಹೋಗುವ ಸುಂದರ ಶೈಲಿಯಲ್ಲಿದೆ. ಹೆಚ್.ಎಸ್. ಉಮೇಶ್ ಅವರ ವಿದ್ವತ್ಪೂರ್ಣ ಮುನ್ನುಡಿಯಲ್ಲಿ ನಾಟಕದ ಅನುವಾದ ಹೇಗಿರಬೇಕೆಂಬುದರ ಬಗ್ಗೆ ಅನೇಕ ವಿಚಾರಗಳ ಚರ್ಚೆಯಿದೆ. ************************************************************ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top