‘ರಸ್ತೆಯ ಆತ್ಮಕತೆ’ ಲಲಿತ ಪ್ರಬಂಧ ಜಿ.ಎಸ್.ಹೆಗಡೆ

ಪ್ರಬಂಧ ಸಂಗಾತಿ

ಜಿ.ಎಸ್.ಹೆಗಡೆ

ರಸ್ತೆಯ ಆತ್ಮಕತೆ’

gshegade

ನಾನು ಮತ್ತು ಮರ ಹಿಂದಿನ ಜನ್ಮದಲ್ಲಿ ಒಂದೇ ಆಗಿದ್ದವೋ ಏನೋ? ಗೊತ್ತಿಲ್ಲ. ಸುಭಾಷಿತವೊಂದು ವೃಕ್ಷದ ಕುರಿತು ಹೇಳುತ್ತದೆ.
‘ಪರೋಪಕಾರಾಯ ಫಲಂತಿ ವೃಕ್ಷಾಃ’ ಎಂದು. ನಾನೂ ಸಹ ಪರೋಪಕಾರಕ್ಕಾಗಿಯೇ ಜೀವವನ್ನು ಸವೆಸುತ್ತಿದ್ದೇನೆ. ವೃಕ್ಷಗಳು ಅನೇಕ ಜೀವಿಗಳಿಗೆ ಆಶ್ರಯ‌ ನೀಡುತ್ತವೆ. ಅವುಗಳ ಜೊತೆಗೆ ಬಂದಳಿಕೆಯಂತಹ ಜೀವಿಗೆ ಆಶ್ರಯ ‌ನೀಡಿ ಕೊನೆಗೆ ತಾವೇ ನಾಶ ಹೊಂದುತ್ತವೆ. ನಾನೂ ಸಹ ಹಾಗೆಯೇ. ಹೇಗೆ ಬಂದಳಿಕೆಗಳು ವೃಕ್ಷಗಳಿಗೆ ಬೇಡವಾಗಿದ್ದವೋ ಅದೇ ರೀತಿ ನನಗೆ ಬಂದಳಿಕೆಯಂತೆ ವಕ್ಕರಿಸುವಂತಹ ಅನೇಕ ಅವಸ್ಥೆ, ವ್ಯವಸ್ಥೆಗಳು ನನ್ನನ್ನು ಬೆಂಬಿಡದೇ ಕಾಡುತ್ತಿವೆ. ಅದರಲ್ಲೂ ವಿದ್ಯುತ್ ಗೂ ನನಗೂ ಯಾಕೋ ಏನೋ ಎಡಬಿಡದ ಬಂಧ? ಬಂಧನ! ನಾನು ಹಿರಿದಿರಲಿ, ಕಿರಿದಿರಲಿ, ರಾಜ ಪಥವೇ ಇರಲಿ, ಮಣ್ಣಿನಿಂದ ಕೂಡಿರಲಿ ನನ್ನ ಪಕ್ಕದಲ್ಲಿ ಕರೆಂಟ್ ಕಂಬಗಳ ಸಾಲು ಸಾಲು‌.ನನ್ನನ್ನು ನನ್ನ ಪಾಡಿಗೆ ಜನರು ಬಿಡಲೊಲ್ಲರು ಎಂದೆನಿಸುತ್ತದೆ.
ನಾನು ಮೊದಲೋ, ವಿದ್ಯುತ್ ಮಾರ್ಗ ಮೊದಲೋ ಎಂದು ಪ್ರಶ್ನಿಸವ ಸಂದರ್ಭವಿಲ್ಲ. ಕೋಳಿ‌ ಮೊದಲೋ ಮೊಟ್ಟೆ ಮೊದಲೋ ಎಂದು ಕೇಳುವ ರೀತಿ ಇಲ್ಲಿಲ್ಲ. ನಾನೇ ಮೊದಲು ನಂತರ ವಿದ್ಯುತ್ ಕಂಬಗಳು ಮತ್ತು ತಂತಿಗಳು ಎಂದು ಸಾಕ್ಷಿ ಸಹಿತ ತೋರಿಸಬಹುದು.
ನಾನು ಹೋದಲ್ಲೆಲ್ಲಾ ನನ್ನ ಬೆನ್ನು ಬಿಡದ ಬೇತಾಳನಂತೆ ಈ ವಿದ್ಯುತ್ ಕಂಬಗಳು ಧುತ್ತೆಂದು! ಬಂದು ಪ್ರತಿಷ್ಠಾಪಿಸಲ್ಪಡುತ್ತವೆ. ನನ್ನ ಎಡಕ್ಕಿರಲಿ, ಬಲಕ್ಕಿರಲಿ ಇವರ ಅತಿಕ್ರಮಣ ಸದಾ ಇದ್ದದ್ದೇ. ಕೆಲವೊಮ್ಮೆ ನನ್ನ ಎರಡೂ ಕಡೆ ಬಂದು ಸ್ಥಿರವಾಗಿ ನಿಂತು ಬಿಡ್ತಾವೆ ನೋಡಿ. ಈ ತಂತಿಗಳು ಮತ್ತು ಕಂಬದ ಮೆಲಿನ ಬಿರಡೆಗಳು ನನ್ನ ಅವಸ್ಥೆಯನ್ನು ಕಂಡು ಕುಹಕವಾಡುತ್ತವೆ. ನನ್ನ ಮೇಲೆ ಪ್ರತೀ‌ ನಿತ್ಯ ಎಷ್ಟೊಂದು ಭಾರವಾದ ಲಾರಿಗಳು, ಬಸ್ ಗಳು ಚಲಿಸುತ್ತವೆಂದು ಊಹಿಸಲೂ ಅಸಾಧ್ಯ. ಅಷ್ಟೊಂದು ಭಾರವನ್ನು ನಾನು ಹೊರಬೇಕು. ಆದರೆ ಆ ವಿದ್ಯುತ್ ಕಂಬವನ್ನು‌ ಲೈನ್ ಮ್ಯಾನ್ ಬಿಟ್ಟು ಮತ್ತೆ ಯಾರೂ ಏರಲಾರರು.ಇನ್ನು ಏರಿದರೆ ಕೋತಿಗಳು ಏರಬಹುದು. ಅಥವಾ ಅಕಸ್ಮಾತ್ ಹಾರಿಬಿಡಬಹುದು. ಅವನ್ನೂ ಕ್ಷಣಮಾತ್ರದಲ್ಲಿ ಭಸ್ಮಮಾಡಿ ನನ್ನೆಡೆಗೆ ಎಸೆಯುವ ಕ್ರೂರತೆ ಈ ವಿದ್ಯುತ್ ತಂತಿಗಳದ್ದು.ಆದರೆ ಇವು ಮಾತ್ರ ಹಾಯಾಗಿ ನನ್ನ ಪಕ್ಕದಲ್ಲಿ ನಿಂತು ನಿದ್ರಿಸುತ್ತವೆ. ನಿದ್ದೆಗಣ್ಣಿನಲ್ಲೂ ಈ ಕಂಬಗಳು ಬೀಳಬಾರದೆಂದು ನೆಲದಿಂದ ಕಂಬದ ತುದಿಗೆ ಕಬ್ಬಿಣ ತಂತಿಯಿಂದ ಎಳೆತದ ವ್ಯವಸ್ಥೆ ಬೇರೆ ಇದೆ. ಹಾಗಾಗಿ ವಿದ್ಯುತ್ ಕಂಬ ಹಾಯಾಗಿ ಇದೆ. ಅಪರೂಪಕ್ಕೆಲ್ಲಾದ್ರೂ ನಾಯಿ ಅಪವಿತ್ರ ಮಾಡಿ ಹೋದೀತು ಅಷ್ಟೆ!.
ನನ್ನ ಪಕ್ಕದಲ್ಲಿ ಬೇಲಿಗುಟ್ಟದಂತೆ ನಿಂತಿರುವ ವಿದ್ಯುತ್ ಕಂಬಗಳು ನನ್ನಲ್ಲಿ ಚಲಿಸುವ ವಾಹನ ಸವಾರರ ಕಡೆಗೆ ಸ್ವಲ್ಪವೂ ಕಾಳಜಿ ತೋರಿಸಲಾರವು. ಆದರೆ ನಾನು ಹಾಗಲ್ಲ. ಮೈ ಮೇಲೆ ಹೊಂಡಬಿದ್ದಿದ್ದರೆ ಸವಾರರ ವಾಹನಗಳನ್ನು ಏರಿಸುತ್ತಾ ಇಳಿಸುತ್ತಾ ನಿಧಾನ ಚಲಿಸು ಎನ್ನುವ ಸಂಜ್ಞೆ ನೀಡಿ ನಿಧಾನವಾಗಿ ಚಲಿಸುವಂತೆ ನೋಡಿಕೊಳ್ಳುತ್ತೇನೆ.
ನನ್ನ ಪಕ್ಕದಲ್ಲಿ ನಿಂತಿರುವ ಈ ವಿದ್ಯುತ್ ತಂತಿಗಳಿಗೆ ನನ್ನ ಮೇಲೆ ಯಾಕೆ ಅಷ್ಟೊಂದು ಆಕ್ರೋಶವೋ ಗೊತ್ತಿಲ್ಲ. ನಾನು ಬಿಸಿಲಲ್ಲಿ ಬೆಂದು ಕರಗುತ್ತಿದ್ದರೂ ಸ್ವಲ್ಪವಾದರೂ ನೆರಳನ್ನು ನೀಡುವ ಕೃತಜ್ಞತೆ ತೋರುವುದಿಲ್ಲ. ಅಕಸ್ಮಾತ್ ಮರವೇನಾದರೂ ನನ್ನ ಪಕ್ಕದಲ್ಲಿ ಬೆಳೆಯಲು ಪ್ರಾರಂಭಿಸಿದರೆ ವಿದ್ಯುತ್ ನಿರ್ವಹಣಾ ಘಟಕದವರು ಬಂದು ಮರ ಕಡಿಯುವವರೆಗೂ ಛಲ ಬಿಡದೆ ನನಗೆ ಸ್ವಲ್ಪವಾದರೂ ಸಿಗುವ ನೆರಳನ್ನು ತಪ್ಪಿಸಿಬಿಡುವ ಹುಳುಕು ಬುದ್ಧಿ ಅವರದ್ದು.
ನನ್ನಲ್ಲಿ ಚಲಿಸುವ ವಾಹನ ಸವಾರರು ಏನಾದರೂ ನಿಯಂತ್ರಣ ತಪ್ಪಿ ನನ್ನ ಪಕ್ಕಕ್ಕೆ ಹೋದರಂತೂ ಸವಾರರ ಆಪೋಷಣೆಗೆಂದೇ ಕಾಯುತ್ತಿರುವಂತಿವೆ ಈ ವಿದ್ಯುತ್ ಕಂಬಗಳು. ಈ ವಿದ್ಯುತ್ ಕಂಬಗಳು ಅಕಸ್ಮಾತ್ ಅವಘಡಕ್ಕೆ ಸಿಲುಕಿದರೆ ತಾವೇ ಬಾಗಿ ತಂತಿಗಳನ್ನು ವಾಹನಗಳಿಗೆ ಸ್ಪರ್ಶಿಸಿಯಾದರೂ ಸುಟ್ಟು ಹಾಕಲು ಕಾಯುತ್ತಿರುತ್ತವೆ. ಕೇವಲ ನನ್ನ ಬದಿಯಲ್ಲಿ ಮಾತ್ರ ಇವರ ಅಸ್ತಿತ್ವವಲ್ಲ. ನನ್ನ ಮಧ್ಯದಲ್ಲೂ ತಮ್ಮ ಜೋಲು ತಂತಿಗಳನ್ನು ಹಾಯಿಸುವುದುಂಟು. ಈ ಜೋಲು ತಂತಿಗಳು ಅದೆಷ್ಟೋ ಹುಲ್ಲು ಲಾರಿಯನ್ನು ಭಸ್ಮಗೈದವೋ ತಿಳಿಯದು.
ನಾನು ಅಗಲೀಕರಣಕ್ಕೆ ಒಳಪಟ್ಟರೆ ಈ ಕಂಬಗಳೂ ಇನ್ನೂ ಪಕ್ಕಕ್ಕೆ ಸರಿದು ನಿಲ್ಲುತ್ತವೆಯೇ ಹೊರತು ಅಲ್ಲಿಂದ ಏಳಲಾರರು. ನಾನು ಎಲ್ಲಿ ತಿರುವುನ್ನು ಪಡೆಯುತ್ತೇನೋ ಅವೂ ಸಹ ಅಲ್ಲೇ ತಿರುವನ್ನು ಪಡೆಯುವವು. ಎಲ್ಲಿಯೂ ನನ್ನೊಂದಿಗಿನ ನಂಟನು ಬಿಡಲಾರವು.
ನಾನು ಮೊದಲೋ ವಿದ್ಯುತ್ ಮಾರ್ಗ ಮೊದಲೋ ಅಂದಾಗ ಹೇಳುವುದನ್ನು ಮರೆತೆ. ಮಾನವ ನಾಗರೀಕತೆಯ ಕಡೆಗೆ ಒಲವು ತೋರಿದಾಗ ಒಂದೆಡೆ ಸ್ಥಿರವಾಗಿ ನಿಂತು ಮನೆ ಕಟ್ಟಿಕೊಂಡ, ನಂತರ ಊರು ಕೇರಿಗಳು ಬೆಳೆದವು. ನಂತರ ದಾರಿ ಅನಿವಾರ್ಯವಾಯಿತು. ಅದೇ ಅಗಲವಾಗಿ ನಾನು ರೂಪುಗೊಂಡೆ ಆವಿಷ್ಕಾರದಿಂದಾಗಿ ವಿದ್ಯುತ್ ಕಂಡುಹಿಡಿಯಲ್ಪಟ್ಟಾಗ ಅದು ಮನೆ ಮನೆಗೆ ಸಂಪರ್ಕ ಕಲ್ಪಿಸಲು ದಾರಿಯನ್ನು ಹುಡುಕಿ ಹೊರಟಿತು.ನನ್ನ ಪಕ್ಕದಲ್ಲೇ ನನ್ನನ್ನು ಅನುಸರಿಸಿತು.


ವಿದ್ಯುತ್ ತಂತಿ ನನ್ನ ಪಕ್ಕವನ್ನು ಆಕ್ರಮಿಸಿದ್ದನ್ನು ಕಂಡು OFC ಕೇಬಲ್ಗಳೂ ಸಹ ನನ್ನ ಪಕ್ಕದಲ್ಲೇ ಸಾಗಿದವು. ಅವಂತೂ ನನ್ನ ಸೌಂದರ್ಯ ಮತ್ತು ಆರೋಗ್ಯವನ್ನೂ ಹದಗೆಡಿಸಿದವು‌. ನುಣುಪಾದ ಮೈಯನು ಹೊಂದಿದ್ದ ನನ್ನನ್ನು ಜೆ‌.ಸಿ.ಬಿಯ ಚೈನು ಗಾಲಿಗಳು ಹಿಂದೆ ಮುಂದೆ ಎಳೆದಾಡಿ ಮತ್ತೊಂದಿಷ್ಟು ಗಾಯವನ್ನು ಮಾಡಿದವು. ನನ್ನ ಒಂದು ಕಡೆ ಈ ಕೇಬಲ್ ಹಾದು ಹೋದರೆ ನನ್ನ ಇನ್ನೊಂದು ಪಾರ್ಶ್ವದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಗಳು ಹಾದು ಹೋದವು. ಇವರ್ಯಾರೂ ನನ್ನ ಒಂದು ಮಾತನ್ನೂ ಕೇಳದೆ ಪಕ್ಕದಲ್ಲಿ ಅಗೆದು, ಧೂಳೆಬ್ಬಿಸಿ ಅನಾಚಾರಗೈದವು. ನಾನು ಮಾತ್ರ ಮೂಕವಾಗಿ ರೋಧಿಸಿದೆ. ಈ ಜೆ.ಸಿ.ಬಿ ಯೆನ್ನುವ ಭೂ ರಕ್ಕಸನ ಉಗಮದಿಂದಾಗಿ ನನ್ನ ಪಕ್ಕದಲ್ಲಿಯ ಗುಡ್ಡವನ್ನೇ ಅಗೆಯಲಾರಂಭಿಸಿದರು ಈ‌ ಮಾನವರೆನ್ನುವ ಉದ್ದಾರಕರು. ಈ‌ ಮಣ್ಣನ್ನು ಅಗೆದು ನನ್ನ ಅಗಲೀಕರಣವನ್ನೇನೋ ಮಾಡಿದರು. ಆದರೆ ಮಳೆಗಾಲದಲ್ಲಿ ಭೂ ಕುಸಿತ ಉಂಟಾಗುವುದನ್ನು ಮಾತ್ರ ತಪ್ಪಿಸಲು ಮರೆತು ಬಿಟ್ಟರು. ಮಳೆಗಾಲ ಪ್ರಾರಂಭವಾದೊಡನೆ ಬಹಳ ಕಡೆ ಕಲ್ಲು ಬಂಡೆಗಳು, ಮಣ್ಣಿನ ರಾಶಿ ನನ್ನ ಮೇಲೆ ಬಿದ್ದಿದ್ದೇ ಬಿದ್ದಿದ್ದು. ಇನ್ನು ಜನರೋ ನನಗೆ ಹಿಡಿ ಶಾಪ ಹಾಕಿದ್ರು. ಈ ರಸ್ತೆ ಸರೀ ಇಲ್ಲ. ಅವೈಜ್ಞಾನಿಕ ಇತ್ಯಾದಿ, ಇತ್ಯಾದಿ. ಮಾನವರ ಧನದಾಹದಿಂದಾಗಿ ನಾನು ಬೈಸಿಕೊಂಡೆ.
ಧನದಾಹಿ ಮಾನವ ನನ್ನ ಹೆಸರಲ್ಲಿ ಎಷ್ಟೊಂದು ಭ್ರಷ್ಟಾಚಾರ ಎಸಗಿದ ಎನ್ನುವುದು ತಿನ್ನಲು ಸರಿಯಾದ ಮೇವು ಸಿಕ್ಕದ ಬಡಕಲು ಆಕಳಿನಂತೆ ನನ್ನ ಪರಿಸ್ಥಿತಿ. ಆದರೆ ಅದರ ಪಕ್ಕದ ವಿದ್ಯುತ್ ತಂತಿ ಹಾಗಲ್ಲ ಎಲ್ಲೂ ಕಲಬೆರಕ ಇಲ್ಲದ ವಿದ್ಯುತ್ ನ್ನೇ ಸಾಗಿಸುತ್ತಿದೆ‌. ಇನ್ನು ಕಂಬದ ಲೆಕ್ಕದಲ್ಲೋ ಅಥವಾ ಕಂಬ ತಯಾರಿಕೆಯ ಸಾಮಗ್ರಿಯಲ್ಲೋ, ಹೊಂಡ ತೆಗೆಯುವ ಲೆಕ್ಕದಲ್ಲೋ ಹಣ ನುಂಗಬಹುದು. ಆದರೆ ನನ್ನ ಪಾಡು ಅದಲ್ಲ. ಅದೊಂತರ open secret ಇದ್ದ ಹಾಗೆ.


ನನ್ನ ಒಂದು ಪಕ್ಕದಲ್ಲಿ ಈಗ ವಿದ್ಯುತ್ ಕಂಬಗಳದ್ದು, ತಂತಿಗಳದ್ದು,ವಿದ್ಯುತ್ ಪರಿವರ್ತಕಗಳದ್ದೇ ಕಾರುಬಾರಾದರೆ ಇನ್ನೊಂದು ಪಕ್ಕದಲ್ಲಿ OFC ಗಳದ್ದು ಮತ್ತು ನೀರುಸರಬರಾಜು ಮಂಡಳಿಯವರದ್ದು ಅಗೆಯುವುದು ಕತ್ತರಿಸುವುದು, ಕೂಡಿಸುವದು ಇದು ನಿತ್ಯ ನಿರಂತರ. ಇವಿಷ್ಟು ಸಾಲದೇ? ನನಗೆ ಚಿತ್ರಹಿಂಸೆ ನೀಡಲು. ಊಹೂಂ ಸಾಕಾಗದು ಎನಿಸುತ್ತದೆ. ಈಗ‌ ಮಾನವ ಒಳಚರಂಡಿ ಎನ್ನುವ ನೆಪದಲ್ಲಿ ನನ್ನ ಸರೀ ಮಧ್ಯದಲ್ಲಿ ಒಡಲಾಳವನ್ನೇ ಅಗೆಯಲು ಜೆ.ಸಿ.ಬಿ ಯಿಂದ ಪ್ರಾರಂಭಿಸಿದ್ದಾನೆ. ಅದರಲ್ಲಿ ಕೊಳವೆಗಳನ್ನು ಶಾಶ್ವತವಾಗಿರಿಸಿ ನನ್ನನ್ನೇ ಬಲಹೀನಗೊಳಿಸಿದ್ದಾನೆ. ಅದರಲ್ಲೂ ಅವು ಮಾನವನ ತ್ಯಾಜ್ಯ ಸಾಗಿಸುವ ಕೊಳವೆಗಳು. ಇಂತಹ ನಾವುಗಳು ನಗರ, ಪಟ್ಟಣಗಳಲ್ಲಿ ಸಿದ್ದಗೊಂಡು ಒಡಲಾಳದಲ್ಲಿ ಮಲಿನ ಕೊಳವೆಗಳನ್ನು ಅಳವಡಿಸಿಕೊಂಡೆವು.ಕೆಲವು ಕಡೆ ಕೊಳವೆಗಳಲ್ಲಿ ತ್ಯಾಜ್ಯ ಸಾಗಿಸುವ ವ್ಯವಸ್ಥೆ ಉದ್ಘಾಟನೆಗೆಂದು ಕಾಯ್ದು ಕುಳಿತಿದೆ.'(ಹಣ ನುಂಗುವ) ಕಾಮಗಾರಿ ಪ್ರಗತಿಯಲ್ಲಿದೆ’ ಎನ್ನುವ ಬೋರ್ಡು ನನ್ನ ಕಿವಿಯ ರಿಂಗಿನಂತೆ ನೇತಾಡುತ್ತಿರುತ್ತದೆ. ಈ ದೃಷ್ಟಿಯಿಂದ ಯೋಚಿಸಿದಾಗ ಗ್ರಾಮಾಂತರದಲ್ಲಿರುವ ನನ್ನ ಸಹೋದರರ ಒಡಲಾಳ ಮಲಿನಗೊಂಡಿಲ್ಲ. ಆದರೆ ಸ್ವಚ್ಛಭಾರತ ಅಭಿಯಾನಕ್ಕಿಂತ‌ ಮೊದಲು ಗ್ರಾಮಾಂತರದಲ್ಲಿದ್ದ ನಮ್ಮ ಬದಿಗಳೇ ಅತ್ಯಂತ ಮಲಿನವಾಗಿದ್ದವು. ಸೂರ್ಯೋದಯಕ್ಕಿಂತ ಸ್ವಲ್ಪ‌ ಮುಂಚೆ ನಮ್ಮ ಪಕ್ಕದಲ್ಲೇ ಪುರುಷ, ಮಹಿಳೆ ಮಕ್ಕಳೆನ್ನುವ ಬೇಧವಿಲ್ಲದೇ‌ ಮಲಿನಗೈಯುತ್ತಿದ್ದರು. ಆದರೆ ಈಗ ಸ್ವಚ್ಛ ಭಾರತವಿರಲಿ, ಇರದೇ ಇರಲಿ ನಗರ ಪ್ರದೇಶದಲ್ಲಿರುವ ನಾವುಗಳು ಒಡಲಾಳದಲ್ಲಿ ಮಲಿನ ಕೊಳವೆಗಳನ್ನು ಮಾನವನ ಹೊಟ್ಟೆಯಲ್ಲಿ ಹೊಂದಿರುವಂತೆ ಶಾಶ್ವತ ಸ್ಥಾನ ಪಡೆದಿವೆ.
ನಾವು ಮತ್ತು ವಿದ್ಯುತ್ ಕಂಬಗಳು ಒಂದು ವಿಷಯದಲ್ಲಿ ಮಾತ್ರ ಸಹಬಾಳ್ವೆ ನಡೆಸುತ್ತಿದ್ದೇವೆ. ರಾತ್ರಿ ಹೊತ್ತಿನಲ್ಲಿ ವಿದ್ಯುತ್ ಕಂಬಗಳು ದಾರಿದೀಪವನ್ನು ನನ್ನೆಡೆಗೆ ಬೀಳಿಸುತ್ತಿವೆ. ಅಪರೂಪಕ್ಕೆ ಅಲ್ಲಲ್ಲಿ ಪಕಪಕ ಎಂದು ಅಸ್ಪಷ್ಟ ಬೆಳಕನ್ನು ತೋರಿ ನನ್ನ ಕಣ್ಣುಕುಕ್ಕಬಹುದು ಬಿಟ್ಟರೆ ಉಳಿದ ಕಡೆ ಸಹಬಾಳ್ವೆ ಕಾಣಬಹುದಾಗಿದೆ.


ನಾವು ಅದೆಷ್ಟೋ ಕುಟುಂಬವನ್ನು ಧನಿಕರನ್ನಾಗಿ‌ ಮಾಡಿದೆವೋ ನಮಗೇ ತಿಳಿಯದು.ಈಗಲೂ ಮಾಡುತ್ತಿದ್ದೇವೆ. ಜೊತೆಗೆ ಅತೀ ಹೆಚ್ಚಿನ ವಾಹನ ಸವಾರರ ಅಂತ್ಯವೂ ಸಹ ನನ್ನ ಮೇಲೇ ಆಗಿದೆ. ನಮ್ಮಿಂದ ಧನಿಕರಾದವರಿಂದಲೇ ನಮಗೆ ಕೆಟ್ಟ ಹೆಸರು. ನಮ್ಮ ನಿರ್ಮಿಸಲು ಹಾಕಬೇಕಾದ ಸಾಮಗ್ರಿ ಸರಿಯಾಗಿ ಹಾಕಿದ್ದರೆ ಇಂತಹ ದುರವಸ್ಥೆ ನಮಗೆ ಬರುತ್ತಿರಲಿಲ್ಲ. ಮಾನವನೇ ನಮ್ಮನ್ನು ವೈಜ್ಞಾನಿಕವಾಗಿ ನಿರ್ಮಿಸಿದ್ದರೆ ನಮ್ಮ ಬದಿಯಲ್ಲಿ ತಲೆ ಬುರುಡೆಯ ಚಿತ್ರ ಹಾಕಿ ಭಯ ಹುಟ್ಟಿಸುವ ಪ್ರಮೇಯವೂ ಇರುತ್ತಿರಲಿಲ್ಲ. ಆದರೂ ಹೆಸರು ಹಾಳಾದದ್ದು ನಮ್ಮದೆ. ನಮ್ಮನ್ನು ಈ ಸ್ಥಿತಿಯಲ್ಲಿ ಹುಟ್ಟಿಸಿದವರು ನಮ್ಮಲ್ಲಿ ಓಡಾಡಲಿಲ್ಲ. ಆಗಸ ಮಾರ್ಗದಲ್ಲಿ ಓಡಾಡಿದರು ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲ.
ನಮ್ಮನ್ನು ಗತಿಸಿದ ಮಹಾನ್ ವ್ಯಕ್ತಿಗಳನ್ನು ನೆನಪಿಸಲು ಮಾನವ ಬಹುವಾಗಿ ಉಪಯೋಗಿಸಿಕೊಂಡ. ಉದಾಹರಣೆಗೆ ಮಹಾತ್ಮಾ ಗಾಂಧಿ ರಸ್ತೆ ಎಂದು ಹೆಸರು ಇಟ್ಟ. ಗಾಂಧಿಯವರನ್ನು ನೆನಪಿಸಲು ಅಷ್ಟೇ ಬಿಡಿ.ಆದರ್ಶಕ್ಕಂತೂ ಅಲ್ಲವೇ ಅಲ್ಲ. ಅಂತೂ ಅಲ್ಲಿಯೂ ನಮ್ಮ ಬಳಕೆಯಾದಷ್ಟು ಮತ್ತೆಲ್ಲೂ ಆಗಿಲ್ಲ.
ಇನ್ನು ಪ್ರತಿಭಟನೆ ವಿಷಯಕ್ಕೆ ಬಂದಾಗ ನಡೆದ ಪ್ರತಿಭಟನೆಗಳೆಲ್ಲವೂ ನಮ್ಮ‌ ಮೇಲೆಯೇ.ಅಪರೂಪಕ್ಕೆ ಅಲ್ಲಲ್ಲಿ ಮೈದಾನದಲ್ಲಿ ನಡೆದಿರಬಹುದು. ಈ ಪ್ರತಿಭಟನೆಗಳು ನಮ್ಮಂತವರಿಗಾಗಿ, ನೀರಿಗಾಗಿ ಇತ್ಯಾದಿ ಇತ್ಯಾದಿ. ರೊಚ್ಚಿಗೆದ್ದ ಜನ ಟೈರಗಳಿಗೆ ಬೆಂಕಿ ಹಚ್ಚಿದ್ದು ನಮ್ಮ ಮೈ‌ ಮೇಲೇ. ಬಸ್ ನ ಗಾಜು ಒಡೆದದ್ದೂ ಸಹ ನಮ್ಮಲ್ಲೇ. ಇಂತಹ ಘಟನೆಗಳೆಲ್ಲವನ್ನೂ ಮೂಕ ಪ್ರೇಕ್ಷಕನಾಗಿ ನೋಡಿದ್ದು ನಾವು. ಜೊತೆ ಜೊತೆಗೆ ಲಾಂಗು ಮಚ್ಚುಗಳ ಝಳಪನ್ನು ಕಂಡಿದ್ದು ನಾವೇ ಮೊದಲು ನೋಡಿದ್ದು. ಬೇಡವೆಂದರೂ ನೆತ್ತರಾಭಿಷೇಕ ನಿತ್ಯ ನಡೆಯುತ್ತದೆ.
ನಾವು ಏಳು ಬೀಳುಗಳನ್ನು ಕಂಡಂತವರು. ರೂಪಾಂತರಗೊಂಡಿದ್ದೇವೆ. ನಮ್ಮಿಂದಲೇ ಮಾನವನ ಬದುಕು ರೂಪುಗೊಂಡಿದೆ.ನಾಗರೀಕತೆ ಬೆಳೆದಿದೆ. ನಮ್ಮ ಅಭಿವೃದ್ಧಿ ದೇಶದ ಅಭಿವೃದ್ಧಿಯ ಸಂಖೇತವಾಗಿದೆ. ಉರುಳು ಸೇವೆಗೆ, ಹೊರಳು ಸೇವೆಗೆ, ಪಾದಯಾತ್ರಗೆ ಬನ್ನಿ. ರಕ್ತಾಭಿಷೇಕ ನಿಲ್ಲಿಸಿ. ಪದೇ ಪದೇ ಅಗೆದು ನನ್ನ ನೋಯಿಸದಿರಿ. ನನ್ನ ನಿರ್ಮಾಣದಲ್ಲಿ ಪ್ರಾಮಾಣಿಕತೆ ಮೆರೆಯಿರಿ. ನಿಮ್ಮ ಜೇಬನ್ನು ನಾನು ಕಾಯುವೆ.

  ಇಂತಿ ನಿಮ್ಮ ಹೆದ್ದಾರಿ, ಕಿರುದಾರಿ
-------------------------------

ಜಿ.ಎಸ್.ಹೆಗಡೆ

Leave a Reply

Back To Top