ಆಶಾ ರಘು ಅವರ ಕಾದಂಬರಿ- “ಆವರ್ತ

ಪುಸ್ತಕ ಸಂಗಾತಿ

ಆಶಾ ರಘು ಅವರ ಕಾದಂಬರಿ

ಆವರ್ತ

ಲೇಖಕರ ಬಗ್ಗೆ:

“ಆವರ್ತ” ಇದು ವೇದೋತ್ತರ ಕಾಲ ಘಟ್ಟದ ಕಲ್ಪನೆಯಲ್ಲಿ ಮೂಡಿಬಂದತಹ ಕಾದಂಬರಿ. ಇದರ ಲೇಖಕಿ ಶ್ರೀಮತಿ ಆಶಾ ರಘು. “ಆವರ್ತ” 2014 ರಲ್ಲಿ ಪ್ರಥಮ ಆವೃತಿ ಬಿಡುಗಡೆಯಾಗಿ  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಹಾಗೆಯೇ ಲೇಖಕಿ ಆಶಾ ರಘು ರವರಿಗೆ ಅನೇಕ ಸಾಹಿತ್ಯಾಭಿಮಾನಿಗಳನ್ನು ದೊರಕಿಸಿಕೊಟ್ಟಂತಹ ಕೃತಿ.

ಶ್ರೀಮತಿ ಆಶಾ ರಘು ರವರು ಬೆಂಗಳೂರಿನ ವಿಜಯನಗರ ಪಿ. ಯು. ಕಾಲೇಜು ಹಾಗು ಆದಿಚುಂಚನಗಿರಿ ಬಿ ಬಿ ಎಂ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿ, ನಂತರ ಸಾಹಿತ್ಯಕ್ಷೇತ್ರದಲ್ಲಿ ತಮ್ಮನು ಸಂಪೂರ್ಣ ತೊಡಗಿಸಿಕೊಂಡು “ಚೂಡಾಮಣಿ, ಕ್ಷಮಾದಾನ, ಬಂಗಾರದ ಪಂಜರ ಮತ್ತು ಇತರ ಮಕ್ಕಳ ನಾಟಕಗಳು” ರಚಿಸಿ ಜೊತೆಗೆ “ಬೊಗಸೆಯಲ್ಲಿ ಕಥೆಗಳು, ಅಪರೂಪದ ಪುರಾಣ ಕಥೆಗಳು, ಆರನೇ ಬೆರಳು” ಕಥಾ ಸಂಕಲನಗಳು ಹೊರಬಂದು ಕನ್ನಡದ ಸಾಹಿತ್ಯಾಭಿಮಾನಿಗಳಿಗೆ ಹತ್ತಿರವಾದರು. “ಆವರ್ತ” ಇವರ ಚೊಚ್ಚಲ ಕಾದಂಬರಿ, “ಗತ, ಮಾಯೆ” ಕಾದಂಬರಿಗಳು ಆನಂತರ ಮೂಡಿ ಬಂದದ್ದು. ಅವರ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅಲ್ಲದೆ “ಸೂರ್ಯನಾರಾಯಣ ಚಡಗ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಪಳಕಳ ಸೀತಾರಾಮಭಟ್ಟ ಪ್ರಶಸ್ತಿ, ರಾಯಚೂರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜಲಕ್ಷ್ಮಿ ಬರಗೂರು ರಾಮಚಂದ್ರಪ್ಪ ಪ್ರಶಸ್ತಿಗಳು ಲಭಿಸಿದೆ.

2018 ರಲ್ಲಿ ಸಾಹಿತ್ಯ ಬಂಡಾರ ದವರು ಎರಡನೇ ಆವೃತಿ ಹೊರತಂದು ಇದೀಗ ಬೇಡಿಕೆ ಹೆಚ್ಚಾಗಿ ಮೂರನೇ ಮುದ್ರಣವನ್ನು ಸಾಹಿತ್ಯಲೋಕ ಪಬ್ಲಿಕೇಷನ್ ನವರು ಹೊರತಂದಿದ್ದಾರೆ.

*****

ಈ ಸಮಯದಲ್ಲಿ ಲೇಖಕಿ ಆಶಾ ರಘು ರವರನ್ನು “ಆವರ್ತ” ಕೃತಿಯ ಯಶಸ್ಸು ಹಾಗು ಅವರ ಸಾಹಿತ್ಯಲೋಕದ ಪಯಣದ ಬಗ್ಗೆ ತಿಳಿದುಕೊಳ್ಲಲು ಅವರನ್ನು ಮಾತನಾಡಿಸಿದೆವು

ಕು ಶಿ: ನಮಸ್ಕಾರ ಮೇಡಂ, ಆವರ್ತ ಮೂರನೇ ಮುದ್ರಣದ ಸಂದರ್ಭದಲ್ಲಿ ನಿಮ್ಮ ಸಾಹಿತ್ಯಲೋಕದ  ಪಯಣದ ಬಗ್ಗೆ ತಿಳಿದುಕೊಳ್ಳುವ ಇಚ್ಛೆಯಿಂದ ಇಂದು ನಮ್ಮ ನಿಮ್ಮ ಭೇಟಿ. ಆವರ್ತ ಮತ್ತು ನಿಮ್ಮ ಇತರ ಕೃತಿಗಳು ಹಾಗು ಸಾಹಿತ್ಯಲೋಕದಲ್ಲಿನ ನಿಮ್ಮ ಪಯಣದ ಬಗ್ಗೆ ವಿವರವಾಗಿ ತಿಳಿಸಿಕೊಡುವಿರಾ.

ಆಶಾ ರಘು: “ಆವರ್ತ” ಕಾದಂಬರಿ ವೇದೋತ್ತರ ಕಾಲ ಘಟ್ಟದಲ್ಲಿ ನೆಡೆದಿರುವಂತೆ ರಚಿಸಿರುವಂತದ್ದು. ಇದು ಐತಿಹಾಸಿಕ ಅಥವಾ ಪುರಾಣದಲ್ಲಿ ಘಟಿಸಿರುವ ಯಾವುದೇ ಘಟನೆಗಳನ್ನು ಆದರಿಸಿಲ್ಲ. ನನ್ನದೇ ಆದಂತ ಕಾಲ್ಪನಿಕ ಚೌಕಟ್ಟಿನಲ್ಲಿ ಕತೆಯ ಎಳೆಯನ್ನು ಸಿದ್ದಪಡಿಸಿ, ಕಲ್ಪನೆಯ ಪಾತ್ರಧಾರಿಗಳನ್ನು ಹಾಗು ನನ್ನದೇ ನಕಾಶೆಯಲ್ಲಿ ಸ್ಥಳಗಳನ್ನು ಕೂಡ ಸೃಷ್ಟಿಸಿ ರಚಿಸಿರುವಂತದ್ದು. ಇದರಲ್ಲಿ ನಾನು ಯೋಗ – ಭೋಗ ಸಮನ್ವಯ ತತ್ವವನ್ನ ಪ್ರತಿಪಾದಿಸಲು ಪ್ರಯತ್ನ ಪಟ್ಟಿದ್ದೇನೆ.

ನನಗೆ ಅಧ್ಯಾತ್ಮದ ಜ್ಞಾನ ಚೆನ್ನಾಗಿ ಇದೆ ಅಂತ ಹೇಳಲ್ಲ, ನನ್ನ ಪತಿ ರಘು ಭಾರತೀಯ ತತ್ವಜ್ಞಾನದ ಬಗ್ಗೆ ಹಾಗು ಝೆನ್ ಬಗ್ಗೆ ಬಹಳಷ್ಟು ಓದಿ ನನ್ನ ಕೂಡ ಚರ್ಚಿಸುತ್ತಿದ್ದರು. ಇದರಿಂದ ನಾನು ಪ್ರಭಾವಿತಳಾಗಿ ಅಧ್ಯಾತ್ಮದ ಬಗ್ಗೆ ತಿಳಿದುಕೊಳ್ಲಲು ಯತ್ನಿಸಿ ನನ್ನ ಗ್ರಹಿಕೆಗೆ ಎಷ್ಟು ತಿಳಿಯಿತೋ ಏನೋ! ಆದರೆ ಕಾದಂಬರಿಗೆ ಬೇಕಾದ ವಸ್ತುವಂತೂ ಸಿಕ್ಕಿತು. ಯೋಗಾ-ಭೋಗ ಸಮನ್ವಯ ತತ್ವವನ್ನ ಕಾದಂಬರಿಯಲ್ಲಿ ಅಳವಡಿಸಿಕೊಳ್ಳಲು ಯೋಚಿಸಿದೆ, ಹಾಗೆಯೇ ಅರಿಷಡ್ವರ್ಗಗಳ ಕಲ್ಪನೆಯನ್ನು ಕಥೆಯಲ್ಲಿ ತಂದೆ.

ಕು ಶಿ: ಅರಿಷಡ್ವರ್ಗಗಳ ಕಲ್ಪನೆಯನ್ನು ಕಥೆಯ ಪ್ರಾರಂಭದಿಂದ ಅಂತ್ಯದವರೆಗೂ ಕಾಲಘಟ್ಟಗಳ ಮೂಲಕ ಹೇಳಿದ್ದೀರ, ಇದನ್ನು ಓದುಗರು ಎಷ್ಟು ಮೆಚ್ಚಿದರು ಮತ್ತು ಯಾವ ರೀತಿ ಅಭಿಪ್ರಾಯಗಳು ಬಂದವು?

ಆಶಾ ರಘು: ಸ್ತ್ರೀ ಪಾತ್ರಗಳಿಗೆ ಆಶಾ ರಘು ರವರು ಅರಿಷಡ್ವರ್ಗಳನ್ನು ಆರೋಪಿಸಿದ್ದಾರೆ ಎಂಬ ಅಭಿಪ್ರಾಯಗಳು ಬಂದವು. ಇಲ್ಲಿ ತಂದಿರುವಂತಹ ಅರಿಷಡ್ವರ್ಗಗಳು ಕಾದಂಬರಿಯ ನಾಯಕ ಪ್ರತೀಪನಲ್ಲಿ ಬರುವಂತದ್ದು. ಅರಿ ಎಂದರೆ ವೈರಿ ಆದರೆ ನನ್ನ ಪ್ರಕಾರ ಅರಿಷಡ್ವರ್ಗಗಳು ಮನುಷ್ಯನಲ್ಲಿ ಇರುವ ಪ್ರವೃತ್ತಿ ಅದ್ಯಾವುದು ವೈರಿಯಾಗುವ ಗುಣಗಳಲ್ಲ. ಅವೆಲ್ಲ ಮನುಷ್ಯನಲ್ಲಿ ಇರುವ ಸಹಜವಾದ ಪ್ರವೃತ್ತಿ, ನಗು, ದುಃಖ, ಅಳು, ಕೋಪ ಎಲ್ಲ ಬರುತ್ತದೆ ಇದರಿಂದ ನಾವು ಹೊರಬರಬೇಕೆನ್ನುವುದು ನನ್ನ ಕೃತಿಯ ಉದ್ದೇಶವಲ್ಲ. ಪ್ರತೀಪನಲ್ಲಿ ಇರುವಂತಹ ಒಂದೊಂದು ಪ್ರವೃತ್ತಿಗಳನ್ನು ಅನಾವರಣಗೊಳಿಸಲು ಒಂದೊಂದು ಸ್ತ್ರೀ ಪಾತ್ರಗಳು ಪ್ರವೇಶಿಸುತ್ತವೆ. “ಲಾಕ್ಷಿ” ಪಾತ್ರ ಕ್ರೋಧದ ಸಂಕೇತ ಅನಿಸಬಹುದು ಆದರೆ ಅದು ಅವಳ ಕ್ರೋಧವಲ್ಲ. ಪ್ರತೀಪನ ಬದುಕಿನಲ್ಲಿ ಬಂದು ಸಂಭಂದಕ್ಕೆ ಹತ್ತಿರವಾಗುವ ಮೂಲಕ ಅವನಲ್ಲಿ ಇರುವ ಕ್ರೋಧದ ಪ್ರವೃತ್ತಿಯನ್ನು ಅನಾವರಣ ಮಾಡುತ್ತಾಳೆ. ಇದೇ ರೀತಿ ಅರಿಷಡ್ವರ್ಗಗಳಾದ “ಮೋಹ, ಕಾಮ, ಕ್ರೋಧ, ಲೋಭ, ಮದ, ಮತ್ಸರ” ಇವೆಲ್ಲವೂ ಒಂದೊಂದು ಸ್ತ್ರೀ ಪಾತ್ರದ ಮೂಲಕ ಬಂದು ಪ್ರತೀಪನಲ್ಲಿರುವ ಪ್ರವೃತ್ತಿಯನ್ನು ಅನಾವರಣಗೊಳಿಸಲು ಬರುತ್ತವೆಯೇ ಹೊರತು ಸಾಂಕೇತಿಕವಾಗಿ ಆ ಸ್ತ್ರೀ ಪಾತ್ರಗಳೇ ಅರಿಷಡ್ವರ್ಗಗಳು ಎಂದು ಚಿತ್ರಿಸಿಲ್ಲ. ಹಾಗೆಯೇ ಇನ್ನೊಂದು ಆರೋಪ ಏನೆಂದರೆ ಪ್ರತೀಪ ಚಕ್ರವರ್ತಿಗೆ ಎಷ್ಟು ಹೆಣ್ಣುಗಳನ್ನು ತಂದು ಕಟ್ಟಿದ್ದೀರಾ ಎಂದು? ಆಗಿನ ಕಾಲಘಟ್ಟದಲ್ಲಿ ರಾಜರಿಗೆ ಒಂದಕ್ಕಿಂತ ಹೆಚ್ಚು ಪತ್ನಿಯರು, ದಾಸಿಯರು ಇರುತ್ತಿದ್ದರು, ಜೊತೆಗೆ ಅವರೆಲರಿಗೂ ಮಕ್ಕಳು ಸಹ ಇರುತ್ತಿದ್ದರು. ಇವೆಲ್ಲ ಪ್ರವೃತ್ತಿಗಳಿಂದ ನಾಯಕ ತೊಳಲಾಡಿ ಯೋಗದ ಮಾರ್ಗವನ್ನು ಹಿಡಿಯಲು ಪ್ರಯತ್ನಪಡುತ್ತಾನೆ, ಕೊನೆಗೆ ಎಲ್ಲಾ ಪಾತ್ರಗಳಿಗೂ ಅಭಿಮುಖನಾಗುತ್ತಾನೆ ಆದರಿಂದ ಈ ಕಾದಂಬರಿ ಯೋಗಾ-ಭೋಗ ಸಮನ್ವಯ ತತ್ವವನ್ನು ಅನಾವರಣಗೊಳಿಸುವ ಪ್ರಯತ್ನ ಮತ್ತು ಸಾಂಕೇತಿಕ ಕಾದಂಬರಿ ಎಂದು ನನ್ನ ಅಭಿಪ್ರಾಯ.

ಗುರು: ವಿವರಣೆಗೆ ಧನ್ಯವಾದಗಳು. ಶಂಕರಾಚಾರ್ಯರ ನಾಟಕದಲ್ಲಿ ಅವರು ಹುಟ್ಟಿದ ತಕ್ಷಣ ಅವರ ಜೊತೆ ಇನ್ನೊಂದು ಪಾತ್ರವು ಹುಟ್ಟುತ್ತದೆ ಮತ್ತು ಅದು ಅವರ ಕಡೆಯ ತನಕ ಜೊತೆಗೆ ಬರುತ್ತದೆ ಅದು “ಮೃತ್ಯು” ಹಾಗೆಯೇ ಪಂಪ ಭಾರತ ನಾಟಕದಲ್ಲಿ ಕೂಡ ಕರ್ಣನ ಪಾತ್ರ ಹಾಗು ವ್ಯಕ್ತಿತ್ವ ಎರಡು ವಿಭಿನ್ನ ರೀತಿಯಲ್ಲಿ ನಟಿಸುತ್ತಾ ಹೋಗುತ್ತವೆ ಆದರಿಂದ “ಆವರ್ತ” ಒಂದು ಸಾಂಕೇತಿಕ ಕಾದಂಬರಿ ಎನ್ನಬಹುದು. ಆವರ್ತದಲ್ಲಿ ಸೃಷ್ಟಿಸಿರುವ ಪಾತ್ರಗಳು ಹಾಗು ಅದರಲ್ಲಿ ಬರುವ ಸ್ಥಳಗಳ ಹೆಸರುಗಳು ವಿಭಿನ್ನವಾಗಿವೆ ಇದನ್ನೆಲ್ಲಾ ಹೇಗೆ ರಚಿಸಿದಿರಿ?

ಆಶಾ ರಘು: ನಾನು ಇದಕ್ಕಾಗಿ ಸಂಸ್ಕೃತದ ಹಾಗು ಹಳೆಗನ್ನಡದ ನಿಘಂಟುಗಳನ್ನು ಇಟ್ಟುಕೊಂಡು ಹೂವಿಗೆ, ಸಸ್ಯಕ್ಕೆ ಹೆಸರು ಹುಡುಕೋದು, ಮಹಾಭಾರತ, ಶಿವಪುರಾಣಗಳನ್ನು ಓದಿ ಅದರಲ್ಲಿ ಬರುವ ಸ್ಥಳಗಳನ್ನ ಗುರುತಿಸಿಟ್ಟುಕೊಂಡು ಆವರ್ತ ದಲ್ಲಿ ಬರುವ ಪಾತ್ರ ಅಥವಾ ಸನ್ನಿವೇಶಗಳನುಗುಣವಾಗಿ ಬಳಸಿದ್ದೇನೆ, ಇದರಲ್ಲಿ ಬರುವ ಫ್ಲಾಶ್ ಬ್ಯಾಕ್ ನಿರೂಪಣೆ ಡಾ. ಎಸ್. ಎಲ್. ಭೈರಪ್ಪ ನವರು ತಮ್ಮ “ಪರ್ವ” ಕೃತಿಯಲ್ಲಿ ಬಳಸಿದ್ದಾರೆ ಅದೇ ನನಗೆ ಪ್ರೇರಣೆಯಾಗಿ ಪ್ರತೀಪನ ಹಿಂದಿನ ಜೀವನವನ್ನು ಪ್ರಸ್ತುತ ಜೀವನದ ಸನ್ನಿವೇಶದಲ್ಲಿ ಹೇಳುತ್ತಾ ಹೋದೆ.  

ಗುರು: ಆವರ್ತ ಬರೆದ ನಂತರ ನಿಮ್ಮ ಮತ್ತೊಂದು ಕಾದಂಬರಿ ಹೊರಬರಲು ಬಹಳ ವರ್ಷಗಳೇ ಬೇಕಾಯಿತು. ಅಷ್ಟೊಂದು ಸಮಯ ತೆಗೆದುಕೊಳ್ಳಲ್ಲು ಏನಾದರೂ ಬಲವಾದ ಕಾರಣ ಇದೆಯೇ?

ಆಶಾ ರಘು: ಇಲ್ಲಿ ನಾನು ಒಂದು ಬೇಸರದ ಸಂಗತಿಯನ್ನು ಹಂಚಿಕೊಳ್ಳುತ್ತೇನೆ. ಅದೇನೆಂದರೆ ನೀವೇನೋ ನನ್ನನ್ನು ಮಾತನಾಡಿಸಬೇಕು ಅಂತ ಬಂದಿದ್ದೀರಿ ಆದರೆ ಅದಕ್ಕೆ ನಾನು ಅರ್ಹಳಾ ಎಂಬ ಪ್ರಶ್ನೆ ಬರುತಿದೆ. ಯಾಕೆಂದರೆ ನಾನು ಅಷ್ಟೊಂದು ಸಾಧನೆ ಮಾಡಿಲ್ಲ ಎಂಬ ನೋವು ನನಗಿದೆ. 2014 ರಲ್ಲಿ ಆವರ್ತ ರಚಿಸಿದ ಮೇಲೆ 2019 ರ ತನಕ ನಾನು ಏನನ್ನು ರಚಿಸಲು ಆಗಲಿಲ್ಲ. “ಗತ” ಬಿಡುಗಡೆಯಾದದ್ದು 2020 ರಲ್ಲಿ. ಆವರ್ತ ರಚಿಸಿ ಆದಮೇಲೆ ಜನ ಮೆಚ್ಚಿದರು ಎಂಬ ಕಾರಣಕ್ಕೋ ಅಥವಾ ನನಗೇ ಗರ್ವ ಬಂತೋ ಗೊತ್ತಿಲ್ಲ ಒಂದೊಂದು ವಾಕ್ಯ ರಚನೆಗೂ ಕಷ್ಟ ಪಡುವಂತಾಯಿತು. ಎಷ್ಟೋ ವಿಷಯ – ವಸ್ತುಗಳನ್ನು ಯೋಚಿಸಿ ಬರೆಯಲು ತೊಡಗಿದರೆ ಮುಂದಕ್ಕೆ ಹೋಗುತ್ತಲೇ ಇರಲಿಲ್ಲ. ಹೇಗೋ ಪ್ರಯತ್ನ ಪಟ್ಟು ಪುನರ್ಜನ್ಮದ ಕಲ್ಪನೆಯಿಟ್ಟುಕೊಂಡು “ಗತ” ರಚಿಸಿದೆ. ಅದರಲ್ಲಿ ಬಾವೋತ್ಕಟ ಅಥವಾ ರಸಗಟ್ಟುವ ಸನ್ನಿವೇಶಗಳು ಇರಲಿಲ್ಲ. ಕೆ.ಎನ್. ಗಣೇಶಯ್ಯ ನವರ ರೋಚಕತೆಯ ದಾಟಿಯಲ್ಲಿ ಕಾದಂಬರಿ ರಚಿಸಿದೆ, ಚೆನ್ನಾಗಿ ಬಂತು ಕೂಡ, ಆದರೆ ಅದರಲ್ಲಿ ನನ್ನ ಮೊದಲಿನ ಬಾವೋತ್ಕಟ ಅಥವಾ ರಸಗಟ್ಟುವ ಸನ್ನಿವೇಶಗಳು ಇರಲಿಲ್ಲ ಎಂಬ ಕೊರಗು ನನಗೇ ಈಗಲೂ ಇದೆ.

ಕು ಶಿ: “ಗತ” ಕಾದಂಬರಿಯನ್ನು ಮೆಚ್ಚಿ ಡಾ. ಎಸ್. ಎಲ್. ಭೈರಪ್ಪನವರು ತಮ್ಮ ನಿವಾಸದಲ್ಲೇ ಬಿಡುಗಡೆ ಸಹ ಮಾಡಿದರು. ಅವರ “ನಾಯಿ ನೆರಳು” ಕಾದಂಬರಿಯಲ್ಲಿ ಇರುವ ಪುನರ್ಜನ್ಮದ ಕಲ್ಪನೆಯಲ್ಲೇ “ಗತ” ವನ್ನು ರಚಿಸಿದ್ದೀರಿ.

ಆಶಾ ರಘು: ಭೈರಪ್ಪನವರು “ಗತ” ಕಾದಂಬರಿಯನ್ನು ಓದಿಲ್ಲ ಆದರೆ “ಆವರ್ತ” ವನ್ನು ಓದಿದ್ದರು ಆದರಿಂದ ಅವರು ಅದೇ ನೆಲೆಗಟ್ಟಿನಲ್ಲಿ “ಗತ” ವನ್ನು ಬರೆದಿದ್ದೀರಿ ಎಂದು ಮೆಚ್ಚಿ ಹಾರೈಸಿದರು. ಆದರೆ ನನಗೇ ಈಗಲೂ ಅನಿಸುವುದು ಏನೆಂದರೆ “ಗತ” ಕಾದಂಬರಿಯು ತಾಂತ್ರಿಕವಾಗಿ ರಚಿಸಿದ್ದೀನಿ ಅದರಲ್ಲಿ ಮನಮುಟ್ಟುವ, ರಸಗಟ್ಟುವ ಸನ್ನಿವೇಶಗಳು ಇರದಿದ್ದರಿಂದ ಅವರು ಓದದಿದ್ದದ್ದೇ ಒಳ್ಳೆಯದಾಯಿತೇನೋ ಎಂದುಕೊಳ್ಳುತ್ತೇನೆ. ಆದರೆ ಕಥೆಯನ್ನು ಭೈರಪ್ಪನವರಿಗೆ ಹೇಳಿದ್ದೆ ಆದರಿಂದ ಕಥಾವಸ್ತು ರೋಚಕವಾಗಿದೆ ಎಂದೇ ಅವರು ಕೂಡ ಅಭಿಪ್ರಾಯಪಟ್ಟರು. ನಂತರ “ಮಾಯೆ” ಬರೆದೆ ಅದರಲ್ಲಿ ತಾಂತ್ರಿಕತೆಯ ಜೊತೆಗೆ ನನ್ನ ಭಾವನಾತ್ಮಕ ಹಾಗು ರಸಗಟ್ಟುವ ಸನ್ನಿವೇಶಗಳನ್ನು ಇಟ್ಟು ನನ್ನ ಮೊದಲಿನ ದಾಟಿ ಸಾದಿಸಲು ಪ್ರಯತ್ನಿಸುವಲ್ಲೂ ಸ್ವಲ್ಪ ಮಟ್ಟಿಗೆ ಯಶಸ್ವಿಯಾದೆ. ಓದುಗರು ಕೂಡ “ಮಾಯೆ” ಯನ್ನು ಮೆಚ್ಚಿದರು.

ಗುರು: ನಿಮ್ಮ ಮೊದಲ ಕಾದಂಬರಿಯಲ್ಲೇ ಅಷ್ಟೊಂದು ಪಾತ್ರಗಳನ್ನೂ ಸೃಷ್ಟಿಸಿ ಅವುಗಳೆಲ್ಲವನ್ನೂ ಒಂದಕ್ಕೊಂದು ಜೋಡಿಸಿ ಕಥೆಯಾಗಿಸಿ ಕಾದಂಬರಿಯನ್ನು ರಚಿಸಿದ್ದೀರಿ. ನಿಮ್ಮಲ್ಲಿ ಸಾಹಿತ್ಯದ ಕುರಿತು ಆಸಕ್ತಿ ಯಾವಾಗ ಮೂಡಿತು?

ಆಶಾ ರಘು: ನಂಜನಗೂಡಿನ ಹತ್ತಿರ ಇರುವ “ಕುಲಗಾಣ” ನಮ್ಮ ಊರು. ನನಗೆ ಸಾಹಿತ್ಯಾಸಕ್ತಿ ನಮ್ಮ ತಾಯಿಯಿಂದ ಬಂದದ್ದು. ಗೀತ ರಚನೆಕಾರರಾದ ಕೆ. ಕಲ್ಯಾಣ್ ನನ್ನ ಸೋದರ ಮಾವ. “ಆವರ್ತ” ನನ್ನ ಮೊದಲ ಕಾದಂಬರಿಯಲ್ಲ, ಚಿಕ್ಕಂದಿನಲ್ಲೇ ನಾನು ಒಂದು ಕಿರು ಕಾದಂಬರಿಯನ್ನು ರಚಿಸಿದ್ದೆ. ನಾವು ಆಗ ಆರ್ಥಿಕವಾಗಿ ಕಷ್ಟದ ದಿನಗಳನ್ನು ನೋಡಿದ ಕಾಲ. ಆಗಾಗ ಬಾಡಿಗೆ ಮನೆ ಬದಲಾಯಿಸುವುದು ಅನಿವಾರ್ಯವಾಗಿತ್ತು. ನಾನು ರಚಿಸಿದ್ದ ಕಾದಂಬರಿಯ ಪ್ರತಿಯನ್ನು ಕಳೆದುಹೋಗುವದೆಂದು ನಮ್ಮ ಅಜ್ಜಿಯ ಕೈಯಲ್ಲಿ ಕೊಟ್ಟಿದ್ದೆ ಆದರೆ ಅದು ನಿಜಕ್ಕೂ ಹೇಗೋ ಕಳೆದು ಹೋಯಿತು. ನನ್ನ ಕಾಲೇಜಿನ ದಿನಗಳಲ್ಲಿ ಆಗ ಬರುತ್ತಿದ್ದ ಪತ್ರಿಕೆಗಳಿಗೆ ಕಥೆ, ಕವನಗಳನ್ನು ಬರೆಯುತ್ತಿದ್ದೆ. ನಮ್ಮ ತಾಯಿ ಕಾದಂಬರಿಗಳನ್ನು ಹೆಚ್ಚಾಗಿ ಓದುತ್ತಿದ್ದರು. ಎಲ್ಲಿ ಇವಳು ಓದಿ ಶಾಲೆಯ ಪಾಠಗಳ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಾಳೋ ಎಂದು ನನಗೆ ಅವುಗಳು ಸಿಗದ ಹಾಗೆ ಅವಿತಿಡುತ್ತಿದ್ದರು. ನಾನು ಅವನೆಲ್ಲ ಹುಡುಕಿ ಓದುತಿದ್ದೆ. ನನ್ನ ಕಾಲೇಜು ದಿನಗಳಲ್ಲಿ ತ್ರಿವೇಣಿ ಮುಂತಾದವರ ಕಾದಂಬರಿಗಳಿಂದ ಪ್ರಭಾವಿತಳಾಗಿದ್ದೆ. ಇದು ನನಗೆ ಆವರ್ತ ರಚಿಸುವ ಸಮಯದಲ್ಲಿ ನೆರವಾಯಿತು.

ಗುರು: ಸಾಹಿತ್ಯರಂಗದಲ್ಲಿ ನಿಮಗೆ ಪ್ರಭಾವ ಬೀರಿದ ಲೇಖಕ ಅಥವಾ ಲೇಖಕಿ ಯಾರು ಮತ್ತು ಎಷ್ಟರ ಮಟ್ಟಿಗೆ ಅದು ನಿಮ್ಮಲ್ಲಿನ ಬರಹಕ್ಕೆ ಪ್ರೇರಣೆಯಾಯಿತು?

ಆಶಾ ರಘು: ಚಿಕ್ಕಂದಿನಿಂದಲೂ ತ್ರಿವೇಣಿ ಯವರ ಕಾದಂಬರಿಗಳೆಂದರೆ ನನಗೆ ತುಂಬಾ ಇಷ್ಟ ಅವರ ಮನೋ ವೈಜ್ಞಾನಿಕ ಕಥಾವಸ್ತುಗಳು ಎಡೆಬಿಡದೆ ಓದಿಸುತ್ತಿದ್ದವು. ದೇವನೂರು ಮಹಾದೇವ ಅವರ “ಒಡಲಾಳ” ಇಷ್ಟ ಪಟ್ಟು ಓದಿದ ಕೃತಿ. ಮಹಾದೇವ ರ ಊರು ನಮ್ಮ ಊರಾದ ಕುಲಗಾಣ ದ ಸಮೀಪವೇ ಮತ್ತು ಅವರು ಬಳಸುತ್ತಿದ್ದ ಗ್ರಾಮ್ಯ ಭಾಷೆ ನನಗೇ ಇಷ್ಟವಾಗಿ ಅದೇ ರೀತಿ ಭಾಷೆಯನ್ನೂ ನನ್ನ “ಆರನೇ ಬೆರಳು” ಕಥಾಸಂಕಲದ ಕೆಲವು ಕಥೆಗಳಲ್ಲಿ ಬಳಸಿದ್ದೇನೆ. ಹಾಗೆಯೇ ಡಾ. ಎಸ್. ಎಲ್. ಭೈರಪ್ಪನವರ ಪ್ರಜ್ಞಾಪ್ರವಾಹವಾಗಿ ರಚಿಸುವ ಶೈಲಿ ಮತ್ತು ದಾಟಿ ಇಷ್ಟವಾಯಿತು.     

ಗುರು: ನಿಮ್ಮ ಎಷ್ಟು ನಾಟಕಗಳು ರಂಗಪ್ರಯೋಗ ವಾಗಿವೆ?

ಆಶಾ ರಘು: ಮೂರು ವರ್ಷಗಳ ಕಾಲ ನಾನು “ನವರಸ ಕಲಾ ಶಾಲೆ” ಯನ್ನು ನೆಡೆಸಿದೆ. ಅಲ್ಲಿ ಹಲವು ಕಲೆಗಳ ಅಭ್ಯಾಸವನ್ನು ಒಂದೇ ಸೂರಿನಡಿ ನೆಡೆಸುವ ವಿಚಾರವಿತ್ತು. ರಂಗಭೂಮಿಯ ತರಗತಿಗಳನ್ನ ಹಾಗು ಸಿನೆಮಾಕ್ಕೆ ಸಂಬಂದಿಸಿದ ಸ್ಕ್ರಿಪ್ಟ್ ರೈಟಿಂಗ್ ತರಗತಿಗಳನ್ನ ನೆಡೆಸುತಿದ್ದೆ. ಆಗ ಕ್ಷಮಾಧಾನ, ಬಂಗಾರದ ಪಂಜರ ಮತ್ತು ಮುಂತಾದ ಕೆಲವು ಸಣ್ಣ ನಾಟಕಗಳನ್ನು ರಂಗದಲ್ಲಿ ಪ್ರಯೋಗ ಮಾಡಿದೆ. ಒಟ್ಟು ನನ್ನದೇ ರಚನೆಯಲ್ಲಿ ಒಂಬತ್ತು ನಾಟಕಗಳನ್ನು “ಪೂತನಿ” ಎಂಬ ಪುಸ್ತಕ ರೂಪದಲ್ಲಿ “ಆವರ್ತ” ಮೂರನೇ ಮುದ್ರಣದ ಜೊತೆ ಬಿಡುಗಡೆಯಾಗುತ್ತಿದೆ.  ಇದರಲ್ಲಿನ ಒಂದು ನಾಟಕವನ್ನು ಸದ್ಯಕ್ಕೆ ಡಾ. ಮಲ್ಲಿಕಾರ್ಜುನ ಮಹಾಮನೆ ಯವರು ರಂಗಪ್ರಯೋಗಕ್ಕೆ ಸಜ್ಜಾಗಿದ್ದಾರೆ.

ಕು ಶಿ: ಸಾಹಿತ್ಯ ರಚನೆಯಲ್ಲಿ ನಿಮ್ಮ ಇಷ್ಟದ ಪ್ರಾಕಾರ ಯಾವುದು?

ಆಶಾ ರಘು: ಕಾದಂಬರಿ ನನ್ನ ಇಷ್ಟದ ಪ್ರಾಕಾರ. ಕಥೆ, ನಾಟಕಗಳು ನನ್ನಲ್ಲಿ ಉದ್ಭವಿಸಿ ತಂತಾನೇ ರಚಿಸಿಕೊಂಡು ಹೋಗಿರುವಂತದ್ದು ಆದರೆ ಚಿಕ್ಕಂದಿನಿಂದ ಕಾದಂಬರಿಯೇ ನನ್ನ ಮೆಚ್ಚಿನ ಪ್ರಾಕಾರ ಮತ್ತು ಅದರಲ್ಲೇ ಹೆಚ್ಚೆಚ್ಚು ಕೆಲಸ ಮಾಡುವ ನಿಟ್ಟಿನಲ್ಲಿ ಯೋಚಿಸಿದ್ದೇನೆ.

ಗುರು: ನಿಮ್ಮ ಮನೆಯಲ್ಲಿನ ನಿಮ್ಮ ಮೊದಲ ಓದುಗರು ಯಾರು? ನಿಮ್ಮ ಸಾಹಿತ್ಯ ರಚನೆಯಲ್ಲಿನ ಅವರ ಪಾತ್ರವೇನು?

ಆಶಾ ರಘು: ಪತಿ ರಘು ನನ್ನ ಕೃತಿಗಳ ಮೊದಲ ಓದುಗರು. ನಾನು ಆಯ್ಕೆ ಮಾಡಿಕೊಂಡ ಕಥಾವಸ್ತುವಿಗೆ ನೆರವಾಗುವಂತಹ ಪುಸ್ತಕಗಳನ್ನು ತಂದು ಕೊಟ್ಟು ನಾನು ಬರೆದದ್ದನ್ನು ಓದಿ ನನ್ನೊಡನೆ ಚರ್ಚಿಸುತ್ತಾರೆ. ನನ್ನ ಸಾಹಿತ್ಯ ರಚನೆಗೆ ಅವರ ಬೆಂಬಲ ಯಾವಾಗಲೂ ಇರುತ್ತದೆ. ನನ್ನ ತಂಗಿ ದೀಪ ಕೂಡ ನನ್ನ ಬರವಣಿಗೆಗಳನ್ನು ಮೆಚ್ಚಿ ಚರ್ಚಿಸುತ್ತಾರೆ.

ಗುರು: ನಿಮ್ಮ ಮುಂದಿನ ಪುಸ್ತಕ ಯಾವುದು ತಿಳಿಸಿ.

ಆಶಾ ರಘು: ಶಾರದಾಂಬೆಯ ಕೃಪೆಯಿಂದ ನನ್ನ ಮೊದಲಿನ ಬರಹದ ದಾಟಿ ಬಂದಿದೆ ಅಂದುಕೊಂಡಿದ್ದೇನೆ. ಚಿತ್ರರಂಗದ ನೆಲೆಗಟ್ಟಿನಲ್ಲಿ “ಚಿತ್ತರಂಗ” ಎಂಬ ಕಾದಂಬರಿಯನ್ನು ಬರೆಯುತ್ತಿದ್ದೇನೆ ಮತ್ತು ಅದು ಕೊನೆಯ ಅಂತದಲ್ಲಿದೆ. ಸದ್ಯದಲ್ಲೇ ಓದುಗರ ಮುಂದಿಡುವ ಯೋಚನೆ ಇದೆ.


ತುಂಕೂರ್ ಸಂಕೇತ್ ಮತ್ತು ಕು. ಶಿ. ಚಂದ್ರಶೇಖರ್

Leave a Reply

Back To Top