ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ನಿಮಿತ್ತ ಮಾತ್ರ ಎಂದೊಪ್ಪದ ಅಹಂ

ಮೋಹನ. ವೀ. ಹೊಸೂರ.

ಬಯಸಿದಷ್ಟೂ ಬಯಕೆಗಳು
ಒಂದರ ಹಿಂದೆ ಒಂದರಂತೆ ಕೆನೆಯಾಗುವುದರೊಳಗೆ
ಕೆನೆಯುವ ಕೊನೆಯಾಗದ ಮತ್ತೊಂದರಂತೆ
ಬಿಟ್ಟೇನೆಂದರೂ ಬಿಡದೀ ಮಾಯೆ..

ರಕ್ತ ಬೀಜಾಸುರನಾಗಿ ಸಂನ್ಯಾಸಿ ಸಂಸಾರದಂತೆ
ಬೆಳೆವ ಬಯಕೆಗಳನ್ನೇ ಕತ್ತರಿಸಿದರೆ..!!
ಓಟ ನಿಂತೀತು.. ಧಾವಂತ ತಪ್ಪೀತು ನಿಜ
ಮಂತ್ರಕ್ಕೆ ಮಾವಿನ ಕಾಯಿ ಉದುರೀತೆ
ಅಗತ್ಯ ಗಳ ಪೂರೈಕೆ ಹೇಗೆ? ಮೇಲಿಂದುದರೀತೆ?

ಬಯಕೆಯೇ ಇಲ್ಲದಿದ್ದರೆ…! ಸುಂದರ..!!
ಆದರೆ ಬಯಕೆಯೇ ಇಲ್ಲದಿರೆ ಬದುಕುವುದು ಯಾಕೆ?
ಎಲ್ಲ ಬಿಟ್ಟು ಇಟ್ಟ ಹಾಗೆ ಇರಲು
ಬಂದ ಹಾಗೆ ಬದುಕಲು ನಾನ್ಯಾಕೆ ಬೇಕು?

ಚಿಂತನ ಚೇತನವಾಗದೆ ಜಡವಾಗುವುದಾದರೆ
ನಾನ್ಯಾಕಿರಬೇಕು ಸತ್ತಂತಿರುವುದಾದರೆ?
ನನ್ನ ಪಾತ್ರ ವೇನು? ಗುರುತಾಗದ ನಾನಾರು?
ಕಂಡ ಕನಸು ಹೊಸೆದು ಗೊತ್ತು ಮಾಡಿದ ಗುರಿ
ಮುಟ್ಟುವ ಛಲದೆಡೆ ನಡೆ ಆ ಹೆಚ್ಚಿನ ಹೆಜ್ಜೆಯ
Walk that extra mile.. ಎನ್ನುವ
ಪ್ರಚೋದನೆ ಮಹತ್ವಾಕಾಂಕ್ಷೆ ಹುಸಿಯೇ?

ನಾನು ನಿಮಿತ್ತ ಮಾತ್ರ ಎಂದೊಪ್ಪದ ಅಹಂ
ಎಲ್ಲ ಬರಿದಾಗಿಸಿ ಬಯಲಾಗಿ ಬಯಲೊಂದಿಗೆ ಒಂದಾಗಿ
ಜರಗುವುದಕೆ ಬೆರಗಾಗದೆ ನಡೆಯುವದಕೆ ಸಾಕ್ಷಿಯಾಗಿ
ಜಗನ್ನಿಯಾಮಕನಂತೆ ಜರಗಲು ಎಲ್ಲಿಲ್ಲದ ಭಯವೇಕೊ..!?

*****************************

About The Author

4 thoughts on “ನಿಮಿತ್ತ ಮಾತ್ರ ಎಂದೊಪ್ಪದ ಅಹಂ”

Leave a Reply

You cannot copy content of this page

Scroll to Top