ಅಂಕಣ ಬರಹ

ರಾಮಕೃಷ್ಣ ಗುಂದಿ ಅವರ ಆತ್ಮಕಥೆ—34

ಆತ್ಮಾನುಸಂಧಾನ

ಹಾಸ್ಟೆಲ್ ಊಟದಲ್ಲಿ ಮೈತುಂಬಿಕೊಂಡೆ

Hostel Dining Hall N, Narmada Girls Hostel | Saurashtra University-Rajkot

‘ಶಾಲ್ಮಲಾ ಹಾಸ್ಟೆಲ್‌ನ ಊಟದ ವ್ಯವಸ್ಥೆ ತುಂಬ ಸೊಗಸಾಗಿತ್ತು. ದಿನವೂ ಒಂದೊಂದು ಬಗೆಯ ಕಾಳು-ಕಡಿಯ ಬಾಜಿ, ಸೊಪ್ಪಿನ ಪಲ್ಯ, ಹಸಿ ತರಕಾರಿಯ ಕೋಸಂಬರಿ, ದಿನಕ್ಕೊಂದು ವಿಧದ ಚಟ್ನಿ, ಕೆನೆ ಮೊಸರು, ರೊಟ್ಟಿ ಇಲ್ಲವೆ ಚಪಾತಿ, ಬಯಸಿದಷ್ಟೂ ಅನ್ನ…. ಇತ್ಯಾದಿಗಳಿಂದ ಊಟವು ಸಮೃದ್ಧವಾಗಿರುತ್ತಿತ್ತು. ರವಿವಾರದಂದು ವಿಶೇಷ ಸಿಹಿ ತಿನಿಸು ಪೂರೈಕೆಯಾಗುತ್ತಿತ್ತು.

                ಇತರ ವಿದ್ಯಾರ್ಥಿಗಳ ಮಾತು ಅಂತಿರಲಿ, ನನಗೂ ನನ್ನಂಥ ಹಲವಾರು ವಿದ್ಯಾರ್ಥಿಗಳಿಗೆ ಇಲ್ಲಿನ ಊಟದ ವ್ಯವಸ್ಥೆ ಅದ್ಭುತವಾಗಿಯೇ ತೋರುತ್ತಿತ್ತು. ನಾನಂತೂ ಯಾವ ಸಂಕೋಚವೂ ಇಲ್ಲದೇ ಸಂತೃಪ್ತಿಯ ಊಟ ಮಾಡತೊಡಗಿದೆ. ಆರಂಭದ ಒಂದೆರಡು ತಿಂಗಳು ತರಗತಿಯ ಪಾಠಕ್ಕಿಂತ ಹಾಸ್ಟೆಲ್ಲಿನ ಊಟವೇ ನನ್ನ ಮೊದಲ ಆದ್ಯತೆಯಾಯಿತು. ಕೆಲಸವೇ ಇಲ್ಲದೇ ದುರ್ಬಲವಾಗಿದ್ದ ನನ್ನ ಜೀರ್ಣಾಂಗಗಳಿಗೆ ಪೂರ್ಣ ಪ್ರಮಾಣದ ಕೆಲಸ ದೊರೆತಂತಾಗಿ ಅವು ಚೇತರಿಸಿಕೊಂಡು ಕ್ರಿಯಾಶೀಲವಾದವು.

                ವಿಶ್ವವಿದ್ಯಾಲಯವು ವ್ಯಕ್ತಿಯ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂಬ ಸಾಮಾನ್ಯ ಅಭಿಪ್ರಾಯವು ನನ್ನ ಪಾಲಿಗೆ ಹುಸಿಯಾಗುತ್ತ ನನ್ನ ದೈಹಿಕ ಸಾಮರ್ಥ್ಯ ಮತ್ತು ಚಹರೆಗಳು ಸಂಪೂರ್ಣ ಬದಲಾಗಿ ತೇಜಸ್ವಿಯಾಗತೊಡಗಿದ್ದೆ. ವಿಶ್ವವಿದ್ಯಾಲಯಕ್ಕೆ ಬರುವಾಗ ಮುಖ, ಮೈಗಳಲ್ಲಿ ಮೂಳೆಗಳೇ ಎದ್ದು ಕಾಣುವ ಸ್ಥಿತಿಯಲ್ಲಿದ್ದ ನಾನು ಎರಡೇ ತಿಂಗಳಲ್ಲಿ ಮೈಕೈ ತುಂಬಿಕೊಂಡು ಚಂದವಾಗಿದ್ದೆ.

                ಮೊದಲ ಮೂರು ತಿಂಗಳ ಓದು ಮುಗಿಸಿ ಗಣೇಶ ಹಬ್ಬದ ರಜೆಯಲ್ಲಿ ನಾನು ಊರಿಗೆ ಬಂದಾಗ ಎಲ್ಲರಿಗೂ ಅಚ್ಚರಿಯಾಗುವಷ್ಟು ನನ್ನ ಆಳ್ತನದಲ್ಲಿ ಬದಲಾವಣೆ ಎದ್ದು ಕಾಣುತ್ತಿತ್ತು. ನನ್ನ ಗೆಳೆಯರು “ಧಾರವಾಡದ ಹವಾ ನಿನಗೆ ಹಿಡಿಸಿದೆ…” ಎಂದು ಅಲ್ಲಿಯ ಹವಾಮಾನವನ್ನು ಕೊಂಡಾಡಿದರು. ಸ್ವತಃ ನನ್ನ ಅವ್ವನ ಕಣ್ಣುಗಳಲ್ಲಿಯೂ ಒಂದು ಸಂತೃಪ್ತಿಯ ಮಿಂಚು ಹೊಳೆದದ್ದನ್ನು ನಾನು ಗಮನಿಸಿದ್ದೆ.

                ಎಂ.ಎ. ಮೊದಲ ವರ್ಷದ ಓದು ಮುಗಿಯುತ್ತ ಬಂದಿತ್ತು. ಅದೇ ಸಮಯಕ್ಕೆ ಸರಿಯಾಗಿ ಅಂದಿನ ಕರ್ನಾಟಕ ರಾಜ್ಯ ಸರಕಾರದ ಉನ್ನತ ಶಿಕ್ಷಣ ಸಚಿವರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವ ಮಹತ್ವದ ಕಾರ್ಯಕ್ರಮವೊಂದು ನಿಗದಿಯಾಯಿತು. ಇಡಿಯ ವಿಶ್ವವಿದ್ಯಾಲಯವೂ ಸುಣ್ಣ ಬಣ್ಣಗಳಿಂದ ಅಲಂಕಾರಗೊಳ್ಳುವ ಕೆಲಸಗಳು ಭರದಿಂದ ನಡೆದವು. ಕನ್ನಡ, ಇಂಗ್ಲಿಷ್, ಹಿಂದಿ ಇತ್ಯಾದಿ ಭಾಷಾ ವಿಭಾಗಗಳನ್ನು ಹೊಂದಿದ ವಿಶ್ವಚೇತನ ಕಟ್ಟಡವೂ ಇಂಥ ಅಲಂಕಾರ ಗಳಿಂದ ಸಿಂಗಾರ ಗೊಂಡಿತು.

                ಒಂದು ದಿನ ನಮ್ಮ ಗುರುಗಳಾದ ಡಾ. ಕಲ್ಬುರ್ಗಿಯವರು ತರಗತಿಗೆ ಬಂದವರು “ನಿಮ್ಮಲ್ಲಿ ಚಂದವಾಗಿ ಕನ್ನಡ ಅಕ್ಷರ ಬರೆಯಬಲ್ಲವರು ಯಾರಿದ್ದೀರಿ?” ಎಂದು ವಿಚಾರಿಸಿದರು. ಯಾರೋ ಒಂದಿಬ್ಬರು ಸಹಪಾಠಿಗಳು ನೇರವಾಗಿ ನನ್ನತ್ತ ಬೆರಳು ಮಾಡಿ ತೋರಿದರು. ಗುರುಗಳು “ಫಾಲೋ ಮಿ…” ಎಂದು ಅಪ್ಪಣೆ ಮಾಡಿ ತರಗತಿಯಿಂದ ಹೊರ ನಡೆದರು. ಅನ್ಯದಾರಿ ಕಾಣದೆ ನಾನು ಗುರುಗಳನ್ನು ಹಿಂಬಾಲಿಸಿದೆ.

                ಕನ್ನಡ ವಿಭಾಗದಲ್ಲಿ ಧಾರ್ಮಿಕ ಚಳುವಳಿಯ ಕಾರಣದಿಂದ ರಚನೆಗೊಂಡ ಸಾಹಿತ್ಯದ ಆಧಾರದಿಂದ “ಜೈನ ಸಾಹಿತ್ಯ”, “ವೀರಶೈವ ಸಾಹಿತ್ಯ”, “ವೈದಿಕ-ಸಾಹಿತ್ಯ” ಇತ್ಯಾದಿ ಶಾಖೆಗಳನ್ನು ಗುರುತಿಸಿದ್ದರು. ವಿವಿಧ ಶಾಖೆಗಳಿಗೆ ಪ್ರತ್ಯೇಕವಾದ ಪುಸ್ತಕ ಸಂಗ್ರಹ, ಅಧ್ಯಾಪಕರ ಕೋಣೆಗಳು ಇದ್ದವು. ಅವುಗಳನ್ನೆಲ್ಲ ಗುರುತಿಸುವಂತೆ ಎಲ್ಲ ಶಾಖೆಗಳ ವಿವರಗಳನ್ನು ಭಿತ್ತಿ ಪತ್ರದಲ್ಲಿ ಬರೆದು ಸಜ್ಜುಗೊಳಿಸುವ ಕಾರ್ಯಗಳನ್ನು ಕಲ್ಬುರ್ಗಿ ಸರ್ ಕೈಗೆತ್ತಿಕೊಂಡಿದ್ದರು.

                ನನ್ನನ್ನು ತಮ್ಮ ಕೋಣೆಗೆ ಕರೆದ ಕಲ್ಬುರ್ಗಿಯವರು ನಾನು ಬರೆದು ಸಿದ್ಧಪಡಿಸಬೇಕಾದ ಭಿತ್ತಿ ಪತ್ರಗಳ ವಿವರಗಳನ್ನು ನನಗೆ ನೀಡಿ, ಅದಕ್ಕೆ ಬೇಕಾದ ಡ್ರಾಯಿಂಗ್ ಪೇಪರ್ಸ  ,ಕಲರ್  ಮತ್ತು  ಬ್ರಶ್‌ಗಳನ್ನು ಪೂರೈಸಿ ನನಗಾಗಿ ಒಂದು ಪ್ರತ್ಯೇಕ ಕೋಣೆಯನ್ನು ಅಣಿಗೊಳಿಸಿ ಕಾರ್ಯಾರಂಭ ಮಾಡಲು ಅಪ್ಪಣೆ ಮಾಡಿದರು.

                ಮುಂದಿನವಾರದಲ್ಲಿ ಮಾನ್ಯ ಮಂತ್ರಿಗಳ ಆಗಮನದ ಮುನ್ನ ಎಲ್ಲವೂ ಸಿದ್ಧವಾಗಬೇಕೆಂಬ ಕರಾರಿನೊಂದಿಗೆ ನಾನು ಭಯ ಆತಂಕದಿಂದಲೇ ಭಿತ್ತಿ ಪತ್ರಗಳನ್ನು ಬರೆಯಲು ಆರಂಭಿಸಿದೆ. ಕಲ್ಬುರ್ಗಿ ಸರ್ ಸಮಯ ಸಿಕ್ಕಾಗ ನಡುನಡುವೆ ಬಂದು ಸಲಹೆ ಸೂಚನೆ ನೀಡಿ ಹೋಗುತ್ತಿದ್ದರು. ನಾನು ಬರೆದದ್ದು ಮೆಚ್ಚುಗೆಯಾದಾಗ ಇತರ ಅಧ್ಯಾಪಕರನ್ನೂ ಕರೆತಂದು ತೋರಿಸಿ ಅವರಿಂದಲೂ ಮೆಚ್ಚುಗೆ ಮತ್ತು ಅಗತ್ಯವಾದ ಸಲಹೆಯನ್ನು ಪಡೆಯುವ ಅವಕಾಶ ನನಗೆ ದೊರೆಯುವಂತೆ ನೋಡಿಕೊಳ್ಳುತ್ತಿದ್ದರು.

                ಊಟ ಉಪಹಾರಗಳನ್ನು ಹೊರತು ಪಡಿಸಿ ನಾನು ನನ್ನ ತರಗತಿಯ ಪಾಠಕ್ಕಾಗಿಯೂ ಮತ್ತೆ ಹೊರಗೆ ಹೋಗುವಂತೆ ಇರಲಿಲ್ಲ. ಸಂಜೆ ಕತ್ತಲಾಗುವ ಹೊತ್ತಿನಲ್ಲಿ ಗುರುಗಳು ಸ್ವತಃ ಬಂದು ನೋಡಿ ಅಂದು ಸಿದ್ಧಗೊಂಡ ಭಿತ್ತಿಪತ್ರಗಳನ್ನು ಪರಿಶೀಲಿಸಿ ಒಪ್ಪಿತವಾದ ಬಳಿಕವೇ ನಾನು ಹಾಸ್ಟೆಲ್ಲಿಗೆ ಹೋಗಲು ಅನುಮತಿ ನೀಡುತ್ತಿದ್ದರು.

                ಹೀಗೆಯೇ ಎರಡು ದಿನಗಳು ನಾನು ಭಿತ್ತಿ ಪತ್ರ ಬರಹದಲ್ಲಿ ಸಂಪೂರ್ಣವಾಗಿಯೇ ತೊಡಗಿಕೊಂಡಿದ್ದೆ.

                ಮೂರನೆಯದಿನ ನನ್ನ ವೈಯಕ್ತಿಕವಾದ ಸಮಸ್ಯೆಯೊಂದು ಎದುರಾಯಿತು. ಅದು ನನ್ನ ವಾರ್ಷಿಕ ಪರೀಕ್ಷೆಯ ಫಾರ್ಮ್ ತುಂಬಿ ನಿಗದಿತ ಶುಲ್ಕದೊಂದಿಗೆ ಪರೀಕ್ಷಾ ವಿಭಾಗಕ್ಕೆ ಸಲ್ಲಿಸಬೇಕಾದ ಕೊನೆಯದಿನ. ದಂಡ ಸಹಿತವಾಗಿ ಮತ್ತೆ ಕೆಲವು ದಿನಗಳ ಅವಕಾಶವಿದೆಯಾದರೂ ದಂಡದ ಹೊರೆ ಹೊರುವುದು ಬೇಡವೆಂದು ನಾನು ಅಂತಿಮ ದಿನದ ಕಾಲಾವಕಾಶದಲ್ಲಿ ಫಾರ್ಮ್ ತುಂಬಿಕೊಂಡು ಸಂಬಂಧಿಸಿದ ದಾಖಲೆಗಳೊಂದಿಗೆ ಫೀ ತುಂಬಲೆಂದು ಅಕೌಂಟ್ ಸೆಕ್ಶನ್ನಿನಲ್ಲಿ ಸರತಿಯ ಸಾಲಿನಲ್ಲಿ ಸೇರಿಕೊಂಡು ನಿಂತೆ.

                ಒಂದರ್ಧ ಗಂಟೆಯಲ್ಲಿ ಮುಗಿಸಬಹುದಾದ ಕೆಲಸವೆಂಬ ನಂಬಿಕೆಯಲ್ಲಿ ಗುರುಗಳಿಗಾಗಲೀ, ನನ್ನ ಸಹಪಾಠಿಗಳಿಗಾಗಲೀ ನಾನು ವಿಷಯ ತಿಳಿಸಿರಲಿಲ್ಲ. ಆದರೆ ನನ್ನ ದುರ್ದೈವದಿಂದ ನನ್ನಂತೆಯೇ ಕೊನೆಯ ದಿನವೇ ಈ ಕೆಲಸ ಪೂರೈಸಿಕೊಳ್ಳಲು ಬಂದ ವಿದ್ಯಾರ್ಥಿಗಳ ಸಂಖ್ಯೆಯೇ ಅಧಿಕವಾಗಿ ಸರತಿಯ ಸಾಲಿನಲ್ಲಿದ್ದ ನನಗೆ ಅವಕಾಶ ದೊರೆವ ಮುನ್ನವೇ ಮುಂಜಾನೆಯ ಕಾಲಾವಧಿ ಮುಗಿದು ಹೋಯಿತು!

                ಮಧ್ಯಾಹ್ನದ ಊಟದ ಬಿಡುವಿನ ಬಳಿಕ ಕೌಂಟರ್ ಮತ್ತೆ ಆರಂಭವಾಗುವ ಮುನ್ನ ಸರತಿಯಲ್ಲಿ ಸೇರಿಕೊಳ್ಳುವ ಉದ್ದೇಶದಿಂದ ಬೇಗ ಊಟ ಮುಗಿಸಿ ಬರಲೆಂದು ಸಮೀಪದ “ಮೆಸ್” ಕಡೆ ನಡೆಯತೊಡಗಿದೆ.

                ಅಷ್ಟರಲ್ಲೇ ಓಡೋಡಿ ಬಂದ ನನ್ನ ಸಹಪಾಠಿಗಳಿಬ್ಬರು ಆಚೀಚೆ ನಿಂತು ನನ್ನ ಕೈ ಹಿಡಿದುಕೊಳ್ಳುತ್ತ “ಏ ಮಹಾರಾಯ… ಇಲ್ಲಿದ್ದೀಯೇನ್ಲೆ….. ಮುಂಜಾನಿಂದ ಕಲ್ಬುರ್ಗಿ ಸರ್ ನಿನ್ನ ಹುಡುಕ್ಲಾಕ ಹತ್ಯಾರ ನಡೀಲೇ…” ಎನ್ನುತ್ತ ಅಕ್ಷರಶಃ ನನ್ನನ್ನು ಎಳೆದೊಯ್ಯುವವರಂತೆಯೇ ಕನ್ನಡ ವಿಭಾಗದತ್ತ ಕರೆದೊಯ್ದರು.

                ನಾನು ಯಾರಿಗೂ ತಿಳಿಸದೆ ಬಂದು ತಪ್ಪು ಮಾಡಿ ಈಗ ಸಿಕ್ಕಿಹಾಕಿಕೊಂಡಿದ್ದೆ. ಕಲ್ಬುರ್ಗಿ ಸರ್ ಮುಂಜಾನೆ ಹನ್ನೊಂದರಿಂದಲೇ ನನ್ನನ್ನು ಹುಡುಕಲು ಆರಂಭಿಸಿದ್ದಾರೆ. ಹಾಸ್ಟೆಲ್ ಕೋಣೆಯಲ್ಲೂ ನಾನಿಲ್ಲವೆಂಬುದು ತಿಳಿದ ಮೇಲೆ ಒಂದಿಬ್ಬರನ್ನು ಸಿನಿಮಾ ಟಾಕೀಸನತ್ತಲೂ ಕಳುಹಿಸಿ ಯಾವುದಾದರೂ ಸಿನಿಮಾ ನೋಡಲು ಹೋದನೇನೋ ಎಂದು ಪರಿಶೀಲನೆ ಮಾಡಿಸಿದ್ದಾರೆ. ಅಲ್ಲಿಯೂ ಕಾಣಸಿಕ್ಕದ ಬಳಿಕ ಸಹಜವಾಗಿಯೇ ಮತ್ತಿಬ್ಬರು ಕ್ಯಾಂಪಸ್ಸಿನಲ್ಲಿಯೇ ಬೇರೆ ಬೇರೆ ವಿಭಾಗಗಳತ್ತ ಅಲೆದಲೆದು ಹುಡುಕಿ ಬಂದಿದ್ದಾರೆ. ಕೊನೆಗೂ ನಾನು ವಿಶ್ವವಿದ್ಯಾಲಯದ ಅಕೌಂಟ್ ಸೆಕ್ಶನ್ನಿನಲ್ಲಿ ಇಬ್ಬರ ಕೈಗೆ ಸಿಕ್ಕು ಬಿದ್ದು ಗುರುಗಳ ಕೋಪವನ್ನು ಹೇಗೆ ಎದುರಿಸುವುದೆಂಬ ಆತಂಕದಲ್ಲಿ ಕನ್ನಡ ವಿಭಾಗದತ್ತ ಹೆಜ್ಜೆ ಹಾಕುತ್ತಿದ್ದೆ.

                ಕಲ್ಬುರ್ಗಿ ಸರ್ ಕೊಠಡಿಯನ್ನು ನಾನು ಪ್ರವೇಶಿಸಿದಾಗ ನಾನು ನಿರೀಕ್ಷಿಸಿದಂತೆ ಅವರು ನನ್ನ ಮೇಲೆ ಸಿಡಿಮಿಡಿಗೊಳ್ಳಲಿಲ್ಲ. ಶಾಂತರಾಗಿಯೇ ನನ್ನನ್ನು ವಿಚಾರಿಸಿಕೊಂಡರು. ನಾನು ಪರೀಕ್ಷೆಯ ಫೀ ಕಟ್ಟಲೆಂದು ‘ಕ್ಯೂ’ ನಿಂತ ವಿವರಗಳನ್ನು ಕೇಳಿದ ಬಳಿಕ “ನೀನು ನನಗೆ ತಿಳಿಸಿದ್ದರೆ ಅದಕ್ಕೆ ನಾನು ಬೇರೆ ವ್ಯವಸ್ಥೆ ಮಾಡುತ್ತಿದ್ದೇನಲ್ಲ….” ಎಂದಷ್ಟೇ ನುಡಿದು ಕೆಲಸ ಮುಂದುವರಿಸಿ ಆದಷ್ಟು ಬೇಗ ಮುಗಿಸುವಂತೆ ಸೂಚನೆ ನೀಡಿ ಕಳುಹಿಸಿದರು.

                ನಾನು ಮತ್ತದೇ ಕೊಠಡಿಗೆ ಹೊರಟು ಬರೆಯಲು ಆರಂಭಿಸಿದೆ. ಹಸಿವು ಹಿಂಸೆ ನೀಡುತ್ತಿತ್ತು. ಉಪಾಯ ಕಾಣದೆ ಕೆಲಸ ಮುಂದುವರಿಸಿದ್ದೆ. ಒಂದು ಅರ್ಧಗಂಟೆ ಕಳೆಯುವುದರಲ್ಲಿ ನನ್ನನ್ನು ಕ್ಯಾಂಪಸ್ಸಿನಲ್ಲಿ ಪತ್ತೆ ಹಚ್ಚಿ ಗುರುಗಳ ಬಳಿಗೆ ಕರೆತಂದ ನನ್ನ ಸಹಪಾಠಿಗಳಿಬ್ಬರೂ ನನಗಾಗಿ ಊಟ ತೆಗೆದುಕೊಂಡು ಬಂದರು. ಗುರುಗಳೇ ಈ ವ್ಯವಸ್ಥೆ ಮಾಡಿದ್ದು ತಿಳಿದು ಅಚ್ಚರಿಯಾಯಿತು.

                ಊಟ ಆರಂಭಿಸಿದೆ ಗುರುಗಳು ಕೊಠಡಿಗೆ ಬಂದರು. ನನ್ನ ಊಟ ಮುಗಿಯುವವರೆಗೂ ನಿಂತುಕೊಂಡೇ ಮಾತನಾಡಿದರು….

                ಅವರ ಮಾತಿನುದ್ದಕ್ಕೂ ಇದ್ದ ಉಪದೇಶವೆಂದರೆ, ಕರ್ತವ್ಯ ನಿಷ್ಠೆ ಮತ್ತು ಅದಕ್ಕಾಗಿ ನಾವು ಬೆಳೆಸಿಕೊಳ್ಳಬೇಕಾದ ಶೃದ್ಧೆಯ ಕುರಿತಾದ ವ್ಯಾಖ್ಯಾನಗಳು ಮಾತ್ರ!

                ಸಂದರ್ಭ ಸುಖ್ಯಾಂತವಾಗುವುದರೊಂದಿಗೆ ನನಗೆ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವಂಥ ದೃಷ್ಟಾಂತಗಳನ್ನು ಗುರುಗಳಿಂದ ಕೇಳಿದಾಗ ಇದು ನನಗೊದಗಿ ಬಂದ ಭಾಗ್ಯವೆಂದೇ ಭಾವಿಸಿದೆ.

                ಅಲ್ಲಿಂದ ಗುರುಗಳು ಹೊರಗೆ ಹೋದರೂ ನನ್ನ ಕಾರ್ಯಗಾರ ಕೊಠಡಿಗೆ ಹೊರಗಿನಿಂದ ಬೀಗ ಹಾಕುವ ಹೊಸ ವ್ಯವಸ್ಥೆ ಜಾರಿಯಾಯಿತು. ಮುಂದಿನ ಎರಡು ದಿನಗಳೂ ಇದೇ ವ್ಯವಸ್ಥೆ ಮುಂದುವರಿಯಿತು. ಕಾಲಕಾಲಕ್ಕೆ ನನ್ನ ಊಟ ತಿಂಡಿಯ ವ್ಯವಸ್ಥೆಯಾಗುತ್ತಿದ್ದರೂ ನಾನು ಬಯಸಿದಾಗ ಹೊರಗೆ ಹೋಗುವ ಸ್ವಾತಂತ್ರ್ಯವಿರಲಿಲ್ಲ.

                ಹೀಗೆ ಮತ್ತೆ  ಎರಡು ದಿನಗಳ ಕಾಲ ನಿಷ್ಠೆಯಿಂದ ಭಿತ್ತಿಪತ್ರ ಬರಹಳನ್ನು ಮುಗಿಸಿದೆ. ಕಲ್ಬುರ್ಗಿ ಗುರುಗಳು “ಅಂದು ಹಿಡಿದ ಕೆಲಸವನ್ನು ಬಿಡದೆ ಮಾಡಿ ಮುಗಿಸುವ” ಕಾಯಕ ನಿಷ್ಠೆಯ ಅರಿವು ಮೂಡಿಸಿದ ಪರಿ ಅದ್ಭುತವೆಂದೇ ಈಗಲೂ ಅನಿಸುತ್ತದೆ.

**********************************

ರಾಮಕೃಷ್ಣ ಗುಂದಿ

ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌
ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿ
ದೆ

6 thoughts on “

  1. ಸರ,
    ತಮ್ಮ ಧಾರವಾಡದ ವಿಶ್ವವಿದ್ಯಾಲಯದ ಅನುಭವ ಸುಂದರವಾಗಿದೆ. ಇನ್ನುಮುಂದೆ ತಮ್ಮ ಅನುಭವದ ನಿರೀಕ್ಷೆಯಲ್ಲಿ ಕಾಯುವುದು ವಿಶೇಶವಾಗಿರುತ್ತದೆ.

  2. ಸರ್ ಲೇಖನ ಇಷ್ಟವಾಯ್ತು. ನೀವು ಕರ್ತವ್ಯ ಪರತೆ ಬಗ್ಗೆ ಕಲಿತ ನಿಲುವು ಇಂದಿಗೂ ಹಾಗೇ ಇದೆ

  3. “ಅಂದು ಹಿಡಿದ ಕೆಲಸವನ್ನು ಬಿಡದೆ ಮಾಡಿ ಮುಗಿಸುವ” ಪರಿ ಚೆನ್ನಾಗಿ ಮೂಡಿ ಬಂದಿದೆ. ಧಾರವಾಡದ ಹಾಸ್ಟೆಲ್ ಊಟದ ಅನುಭವ ನಮ್ಮೆಲ್ಲರ ಅನುಭವದಂತೆಯೇ ಇದೆ.

Leave a Reply

Back To Top