ಲೇಖನ

ಗಜಲ್ ಪರಪಂಚ’ವೂ..!

ಕೆ.ಶಿವು.ಲಕ್ಕಣ್ಣವರ

ಗಜಲ್ ಕಾವ್ಯ ಪ್ರಕಾರ ಉರ್ದು ಸಾಹಿತ್ಯದ ಜನಪ್ರಿಯ ಪ್ರಮುಖ ಭಾಗವಾಗಿದೆ. ಜನಪ್ರಿಯ ಎಂದ ಕೂಡಲೇ ಗಂಭೀರ ಸಾಹಿತ್ಯದ ಭಾಗವಲ್ಲವೆಂಬ ಅಭಿಪ್ರಾಯ ಮೂಡುವುದು ಸಹಜ. ಆದರೆ ಉರ್ದು ಸಾಹಿತ್ಯದಲ್ಲಿ ಜನಪ್ರಿಯವಾಗಿರುವ ಗಜಲ್ ಗಂಭೀರ ಕಾವ್ಯವೂ ಹೌದು.

ಶೃಂಗಾರ, ಪ್ರೇಮ, ವಿರಹಗೀತೆಯೂ ಹೌದು. ಗಜಲ್‌ನ ಮೂಲ ಫಾರಸಿ ಜಾನಪದ ಕಾವ್ಯದಲ್ಲಿದೆ ಎಂಬ ಅಭಿಪ್ರಾಯವಿದೆ. ಗಜಲ್ ಅಂದರೆ ಫಾರಸಿ ಭಾಷೆಯಲ್ಲಿ ಜಿಂಕೆ ಎಂಬುದೇ ಆಗಿದೆ..!

ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡುವ ಈ ಜಿಂಕೆ ಸೆರೆಸಿಕ್ಕಾಗ ಹೊರಡಿಸುವ ಅರ್ತನಾದವೇ ಕರುಣಾರಸವನ್ನೊಳಗೊಂಡ `ಗಜಲ್ — ಎಂದು ಅರ್ಥೈಸುತ್ತಾರೆ ಬಲ್ಲವರು.

ಗಜಲ್ ಪದ್ಯಗಳಿಗೆ ಅರಸರ ಆಸ್ಥಾನದ ಹೊಗಳುಭಟ್ಟರ ಪ್ರಶಂಸೆಯ `ಖಾಸಿದಾ– ಎಂಬ 6ನೇ ಶತಮಾನದ ಅರಬಿ ಪದ್ಯಗಳು ಮೂಲ’ವೆಂದೂ ಮತ್ತೊಂದು ಹೇಳಿಕೆಯಿದೆ. ಸ್ವರೂಪದಲ್ಲಿ ಗಜಲ್ `ಷೇರ್ — ಎಂಬ ದ್ವಿಪದಿಯಲ್ಲಿದ್ದು, ಒಂದು ದ್ವಿಪದಿ ಇನ್ನೊಂದು ದ್ವಿಪದಿಯ ಸಾಲುಗಳೊಂದಿಗೆ ಸಂಬಂಧವಿಟ್ಟುಕೊಳ್ಳಬೇಕಾದ ನಿಯಮವಿಲ್ಲ. ಗಜಲ್‌ನ ದ್ವಿಪದಿಗಳು ಸ್ವತಂತ್ರವಾಗಿಯೂ ಇರಬಹುದು. ಒಂದು ಗಜಲ್‌ನಲ್ಲಿ ಸಾಧಾರಣವಾಗಿ 5 ರಿಂದ 21ರಷ್ಟು ದ್ವಿಪದಿಗಳಿರುತ್ತವೆ.

ಕನ್ನಡದ ಭಾವಗೀತೆಗಳಿಗೆ ಹೋಲಿಸಬಹುದಾದ ಗಜಲ್, ಸಂಕೇತಗಳ ಮೂಲಕ ವ್ಯಕ್ತಪಡಿಸುವ ಸೂಕ್ಷ್ಮ, ವಿವಶತೆಯ ದಿವ್ಯ ಭಾವತರಂಗಗಳು ಮತ್ತು ಕರುಣಾರಸ ಪ್ರಧಾನವಾದ ದ್ವಿಪದಿಗುಚ್ಛಗಳು. ಮತ್ಲಾ, ಕಾಫಿಯಾ, ರದೀಪ್ ಮತ್ತು ಮುಕ್ತಾ ಎಂಬ ಸೂತ್ರಗಳು ಗಜಲ್‌ನ ಮುಖ್ಯ ಲಕ್ಷಣಗಳಾಗಿವೆ.

ಉರ್ದು ಸಾಹಿತ್ಯ–

ಉರ್ದು ಭಾಷೆಯ ಸಾಹಿತ್ಯ ಭಾರತದಲ್ಲಿ 12 ನೆಯ ಶತಮಾನದಲ್ಲಿ ಹುಟ್ಟಿಕೊಂಡಿತೆಂಬ ಮಾಹಿತಿ ಸಿಗುತ್ತದೆ. ಕನ್ನಡ ಭಾಷೆಗಿರುವ ಹೆಚ್ಚುಕಮ್ಮಿ ಹದಿನೈದು ಶತಮಾನಗಳ ಹಿರಿತನದ, ಭವ್ಯ ಪರಂಪರೆಯ ಎದುರು ಉರ್ದು ತೀರ ಇತ್ತೀಚಿನ ಭಾಷೆಯಾದರೂ ಈ ಭಾಷೆಯ ಸಾಹಿತ್ಯದ ಬೆಳವಣಿಗೆ ಅದ್ಭುತ ರೀತಿಯದ್ದು.

ಉರ್ದು ಆಸ್ಥಾನದ ಆಡಳಿತ ಭಾಷೆಯಾಗುವ ಮುಂಚೆ ಫಾರಸಿ ಭಾಷೆ ದೆಹಲಿಯ ಸುಲ್ತಾನರ ಆಡಳಿತ ಭಾಷೆಯಾಗಿತ್ತು. ಉರ್ದು ಸಾಹಿತ್ಯಕ್ಕೆ ಇದರಿಂದಾಗಿ ಅರಸೊತ್ತಿಗೆಯ ಪ್ರೋತ್ಸಾಹವೂ ದೊರೆಯಿತು.

ಮುಖ್ಯವಾಗಿ ಉರ್ದು ಕಾವ್ಯಕ್ಕೆ ಆಸ್ಥಾನದ ಪ್ರೋತ್ಸಾಹದ ಸಿಂಹಪಾಲು ದೊರೆಯಿತು. ಭಾರತೀಯ, ಫಾರಸಿ, ಅರೆಬಿಕ್, ಈ ಮೂರು ಸಂಸ್ಕೃತಿಗಳ ಮಿಶ್ರ ಕಾವ್ಯಪ್ರಕಾರವೆನಿಸಿದ ಉರ್ದು ಗಜಲ್, ಇಸ್ಲಾಮಿಕ್ ದೇಶಗಳಿಗೆ ಮತ್ತು ಜಗತ್ತಿಗೆ ಭಾರತ ನೀಡಿದ ಅಮೂಲ್ಯ ಕೊಡುಗೆಯೆನಿಸಿದೆ.

ಅಮೀರ್ ಖುಸ್ರೋ–

ಉರ್ದು ಕಾವ್ಯ ಪ್ರಕಾರವನ್ನು ಆಸ್ಥಾನದಿಂದ ಮುಕ್ತಗೊಳಿಸಿ ಜನರೆಡೆಗೆ ತರುವುದರಲ್ಲಿ ಸೂಫಿ ಸಂತ ಕವಿಗಳ ಬಹುಮುಖ್ಯ ಕೊಡುಗೆಯಿದೆ. ಸರಳ ಗಜಲ್‌ಗಳ ಮೂಲಕ ಅಲೌಕಿಕ ಪ್ರೇಮ, ವಿರಹ, ತ್ಯಾಗ, ನಿಷ್ಕಲ್ಮಷ ಬದುಕಿನ ವಿವಿಧ ಆಯಾಮವನ್ನು, ಅಧ್ಯಾತ್ಮವನ್ನು ಜನರಿಗೆ ಮನಮುಟ್ಟುವಂತೆ ಹೇಳುವ ಮೂಲಕ ಈ ಪ್ರಕಾರವನ್ನು ಸೂಫಿ ಕವಿಗಳು ಜನಪ್ರಿಯಗೊಳಿಸಿದರು.

ಸೂಫಿಗಳಿಂದ ಮತ್ತು ರಾಜಮನೆತನದವರ ಪ್ರೋತ್ಸಾಹದಿಂದ ದಕ್ಷಿಣ ಏಷ್ಯಾದ ಅನೇಕ ದೇಶಗಳಲ್ಲಿ ಗಜಲ್ ಜನಪ್ರಿಯವಾಯಿತು. ಅಮೀರ್ ಖುಸ್ರೋ ಮತ್ತು ಮೀರ್ ತಖೀ ಮೀರ್, ಗಜಲ್‌ನ ಅದ್ಭುತ ಪ್ರತಿಭೆಯ ಸೂಫಿ ಕವಿಗಳೆನಿಸಿದರು.

ಅಮೀರ್ ಖುಸ್ರೋ ಉರ್ದು ಕಾವ್ಯಕ್ಕೆ, ಅದರಲ್ಲೂ ಮುಖ್ಯವಾಗಿ ಗಜಲ್ ಪ್ರಕಾರಕ್ಕೆ ಸಂಗೀತದ ಮೆರುಗನ್ನು ನೀಡಿದನಲ್ಲದೇ ಭಾರತದ ಹಿಂದೂಸ್ತಾನಿ ಸಂಗೀತಕ್ಕೆ ಖಯಾಲ್ — ತರಾನಾ — ಮುಂತಾದ ಅನೇಕ ರಾಗಗಳನ್ನು, ತಬ್ಲಾ, ಸಿತಾರ್ ಮುಂತಾದ ವಾದ್ಯಗಳನ್ನು ಪರಿಚಯಿಸಿದನು. ತನ್ನ ಪದ್ಯಗಳಲ್ಲಿ ಉತ್ಕಟ ದೇಶಾಭಿಮಾನ ಬೆಳೆಸಿದ ಖುಸ್ರೋ ಭಾರತವನ್ನು ಒಂದು ಸ್ವರ್ಗಸದೃಶ ದೇಶವೆಂದು ಹಾಡಿ ಹೊಗಳಿದ. ಅದಕ್ಕೆ ಕಾರಣಗಳನ್ನೂ ನೀಡಿದ.

ಸ್ವರ್ಗದ ಪಕ್ಷಿ ನವಿಲು ಈ ದೇಶದಲ್ಲಿ ಅಡ್ಡಾಡುತ್ತಿದೆ, ಈ ನೆಲದಲ್ಲಿ ದೊಡ್ಡ ದೊಡ್ಡ ನದಿಗಳು ಹರಿಯುತ್ತಿದೆ, ನಳನಳಿಸುವ ಹಸಿರಿನ ತೋಟಗಳು, ಉದ್ಯಾನಗಳು ಇಲ್ಲಿ ವಿಪುಲವಾಗಿವೆ, ಸ್ವರ್ಗದಲ್ಲಿರುವ ಬಂಗಾರ ವರ್ಣದ ಬಾಳೆಹಣ್ಣು ಇಲ್ಲಿ ಹೇರಳವಾಗಿದೆ ಎಂದೆಲ್ಲ ವಿವರಿಸಿದ. ಇವನ ಫಾರಸಿ ದ್ವಿಪದಿಯೊಂದು ಹೀಗಿದೆ.

ಅಗರ್ ಫಿರ್ದೌಸ್ ಖರ್ ರೂಹೆ ಜಮೀನ್,

ಹಮೀನ್ ಅಸ್ತ್, ಹಮೀನ್ ಅಸ್ತ್, ಹಮೀನ್ ಅಸ್ತ್.

(ಭೂಮಿಯ ಮೇಲೆ ಸ್ವರ್ಗ ಇರುವುದೆಂದಾದರೆ,

ಇಲ್ಲಿಯೇ ಇದೆ, ಇಲ್ಲಿಯೇ ಇದೆ, ಇಲ್ಲಿಯೇ ಇದೆ)

ಖುಸ್ರೋ ಹಿಂದವಿ (ಹಿಂದಿ/ಪಂಜಾಬಿಯ ಮೂಲ ಭಾಷೆ)ಯಲ್ಲಿ ಬರೆದ ಒಂದು ದ್ವಿಪದಿ ಹೀಗಿದೆ:

ಖುಸ್ರೊ ದರಿಯಾ ಪ್ರೇಮ್ ಕಾ ಉಲ್ಟಿ ವಾಕಿ ದಾರ್

ಜೋ ಉತ್‌ರಾ ಸೋ ಡೂಬ್ ಗಯಾ, ಜೋ ಡೂಬ್ ಗಯಾ ಸೋ ಪಾರ್

(ಹಿಂದಕ್ಕೆ ಹರಿಯುವ ಪ್ರೇಮ ನದಿ, ಖುಸ್ರೋ

ಹಾರಿದವನು ಮುಳುಗುವ, ಮುಳುಗಿದವನು ಪಾರಾಗುವ)

ಮೀರ್ ತಖೀ ಮೀರ್–

ಮೀರ್ ತಖೀ ಮೀರ್ ಉರ್ದು ಗಜಲ್ ಜಗತ್ತಿನ ಚಕ್ರವರ್ತಿಯೆನಿಸಿದ ಪ್ರತಿಭಾವಂತ (1723-1810) ಭಾರತೀಯ ಸಂಸ್ಕೃತಿಯ ಅಂತಃಕರಣ ಹೊಂದಿದ್ದರಿಂದ, ಫಾರಸಿ ಭಾಷೆಯ ಮೆರಗನ್ನು ಬಹು ಸೂಕ್ಷ್ಮ ರೀತಿಯಲ್ಲಿ ಬೆರೆಸಿದ. ಅದ್ವಿತೀಯ ಪ್ರತಿಭಾವಂತನೆನಿಸಿದ ಮಲಾಮತಿ ಪರಂಪರೆಯ ಈ ಸೂಫಿ ಕವಿಯ ಹೃದಯಾಂತರಾಳದ ದುಃಖ, ಸಂಕಷ್ಟಗಳು, ಸೂಕ್ಷ್ಮ ತುಡಿತಗಳು ಕಾವ್ಯಸೃಷ್ಟಿಯ ಮೂಲ.

ಮೀರ್‌ಕೆ ದೀನೆ ಮಜ್‌ಹಬ್ ಪೂಚ್‌ತೇ ಉನೇ ತೋ

ಕಶ್‌ಕೆ ಖೈಂಚಾ ದೇರ್‌ಮೇಂ ಬೈಟಾ, ಕಬ್‌ಕಾ ತರ್ಕ್ ಇಸ್ಲಾಮ್ ಕಿಯಾ

ಮೀರನ ಜಾತಿ ಧರ್ಮವನು ಏನು ಕೇಳುವನೋ ಅವನು?

ನಾಮ ಹಣೆಯಲಿ ಧರಿಸಿ ಕೂತಿಹನವನು ದೇವಸ್ಥಾನದಲಿ, ಎಂದೋ ದೂರವಿಟ್ಟು ಇಸ್ಲಾಮನು.

ಮಿರ್ಜಾ ಗಾಲಿಬ್–

ಉರ್ದು ಮತ್ತು ಫಾರಸಿಯಲ್ಲಿ ಬರೆಯುತ್ತಿದ್ದ ಇನ್ನೊಬ್ಬ ಬಹು ಮುಖ್ಯ ಕವಿ ಮಿರ್ಜಾ ಅಸದುಲ್ಲಾ ಖಾನ್ ಗಾಲಿಬ್ (1797-1869). ಗಾಲಿಬ್ ಗಜಲ್ ಪ್ರಕಾರಕ್ಕೆ ವಿಶಾಲವಾದ ಆಯಾಮವನ್ನು, ದಾರ್ಶನಿಕತೆಯನ್ನು, ವಸ್ತುವಿನಲ್ಲಿ ವೈಶಿಷ್ಟ್ಯವನ್ನು ನೀಡಿದ ಮಹತ್ವದ ಕವಿ.

ಗಾಲಿಬ್ ಗಜಲ್ ಕಾವ್ಯಸೃಷ್ಟಿಯಲ್ಲಿ ಎಷ್ಟು ಶ್ರೀಮಂತನೆಂದರೆ ಗಾಲಿಬ್‌ನಿಗೆ ಗಾಲಿಬನೇ ಹೋಲಿಕೆ ಎಂದು ವ್ಯಾಖ್ಯಾನವಿದೆ. ಇಂಥ ಅದ್ವಿತೀಯ ಒಂದಿಷ್ಟು ದ್ರಾಕ್ಷಾರಸವನ್ನು ಸೇವಿಸುವುದಕ್ಕಾಗಿ ಶರಾಬಿನ ಅಡ್ಡೆಯಲ್ಲಿ ಸಾಲ ಮಾಡಿ ತೀರಿಸಲಾಗದೇ ಜೈಲುವಾಸ ಅನುಭವಿಸಬೇಕಾಗಿ ಬಂದಿತ್ತು.

ಉರ್ದುವಿನ ಮಹಾಕವಿಯೆನಿಸಿದ ಗಾಲಿಬ್ ತನ್ನ ಬದುಕಿನಲ್ಲಿ ಅತ್ಯಂತ ದಾರುಣವಾಗಿ ಸಂಕಷ್ಟಗಳನ್ನು, ನೋವನ್ನು ಉಂಡವರು.

ಪಂಚಾಕ್ಷರಿ ಹಿರೇಮಠರವರು ಅನುವಾದಿಸಿದ ಗಾಲಿಬನ ಕೆಲವು ಗಜಲ್ ಸಾಲುಗಳು ಹೀಗಿವೆ–

ನಾನು ಮನುಷ್ಯ ಸ್ವಭಾವದವನಾಗಿದ್ದೇನೆ, ಮನುಷ್ಯನಾಗಿ ಹುಟ್ಟಿದ್ದೇನೆ

ನನಗೆಷ್ಟು ಸಾಧ್ಯವೋ ಅಷ್ಟು ಪಾಪ ಮಾಡಬಲ್ಲೆ ಎನ್ನುವ ಅಭಿಮಾನ ನನಗಿದೆ..!

                  *

ದ್ರಾಕ್ಷಾರಸದ ನನ್ನ ಪೂಜೆಯನ್ನು ನಾನೆಂದೂ ನಿಲ್ಲಿಸುವುದಿಲ್ಲ

ಭೋರಿಡುವ ಗಾಳಿಯ ಸುಳಿಯಲ್ಲಿ ನಾನು ಸದಾ ಜಿಗಿಯುತ್ತಿರುತ್ತೇನೆ.

                  *

ನನ್ನ ಗುಡಿಸಲಿನ ನರನರಗಳಲ್ಲಿ ಹೊರಹೊಮ್ಮುವ ಬಿಸಿಲತಾಪವ ಕೇಳದಿರು

ಈ ತಾಪಕ್ಕೆ ಹೆದರಿ ನಾನು ಆಕಾಶದಲ್ಲಿ ಹಾರಾಡುತ್ತಿಲ್ಲ.

                  * 

ಸೌಂದರ್ಯವೇ, ಒಮ್ಮೆ ಸಕಲ ವೈಭವದೊಡನೆ ನಿನ್ನ ನೋಡುವ ಆಸೆ

ಎಷ್ಟು ಕಾಲದ ವರೆಗೆ ಇಣಿಕಿ ನೋಡಲಿ ಮನದ ಕನ್ನಡಿಯ ಬಿಂಬಗಳ..?

ಅಸದ್ ಎಂಬ ಕಾವ್ಯನಾಮದೊಂದಿಗೆ ಗಾಲಿಬ್ ಬರೆದ ಉರ್ದು ಗಜಲ್‌ಗಳು ಇಂದಿಗೂ ಗಜಲ್ ಗಾಯಕರ ಆಕರ್ಷಣೆಯ ಕೇಂದ್ರವಾಗಿದೆ. ಈ ಗಜಲ್‌ಗಳು ವಿಶ್ವದ ಎಲ್ಲೆಡೆ ಬಹಳ ಜನಪ್ರಿಯವಾಗಿವೆ.

ಕವಿ ಇಕ್ಬಾಲ್ (1877-1938)–

1877ರ ನವೆಂಬರ್ 9ರಂದು (ಪಾಕಿಸ್ತಾನದ) ಪಂಜಾಬಿನ ‘ಸಿಯಾಲ್‌ ಕೋಟ್‌’ನಲ್ಲಿ ಜನಿಸಿದ ವಿಶ್ವವಿಖ್ಯಾತ ಫಾರಸಿ ಮತ್ತು ಉರ್ದು ಭಾಷೆಗಳ ತತ್ವಜ್ಞಾನಿ ಕವಿ, ಭಾರತದಲ್ಲಿ `ಸಾರೇ ಜಹಾಂಸೆ ಅಚ್ಛಾ’ ಕವಿ ಎಂದೇ ಪ್ರಖ್ಯಾತ.

`ವಿಪರ್ಯಾಸವೆಂದರೆ ರಾಜಕೀಯಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಈ ಕವಿಯ ಕಾವ್ಯಕ್ಕೆ ಮಹತ್ವ ನೀಡದೇ, ತಪ್ಪು ಕಲ್ಪನೆಗಳೇ ಹೆಚ್ಚು ಪ್ರಚಾರದಲ್ಲಿರುವುದು..! ಇಸ್ಲಾಮಿಗೆ ನಿಷ್ಠನಾಗಿದ್ದರೂ, ಗೀತೆಯ ಬಗ್ಗೆ ಆಕರ್ಷಿತನಾಗಿ ಸಂಸ್ಕೃತ ಕಲಿತು ವೇದಗಳನ್ನು ಅಭ್ಯಾಸ ಮಾಡಿದವನು.

ಒಂದೆಡೆ ಇಸ್ಲಾಮಿನ ಅಧ್ಯಾತ್ಮ ಮತ್ತು ದೇಶ ವಿಭಜನೆಯ ಪರವಾಗಿ ಈ ಕವಿ ಹೇಳಿದ ಮಾತುಗಳು ಧರ್ಮಾಂಧರ ಹೊಗಳಿಕೆ ಗಳಿಸಿದ್ದರೆ, ಇನ್ನೊಂದೆಡೆ ಶ್ರೀರಾಮನನ್ನು, ಬುದ್ಧನನ್ನು, ಗುರುನಾನಕನನ್ನು ಪ್ರಶಂಸೆ ಮಾಡಿದ್ದಕ್ಕೆ ಉಲೇಮಾಗಳ ಫತ್ವಾವನ್ನೂ ಈ ಕವಿ ಎದುರಿಸಿದ್ದ ಎನ್ನುತ್ತಾರೆ ಖ್ಯಾತ ಪತ್ರಕರ್ತ, ಸಾಹಿತಿ ಖುಷ್ವಂತ್ ಸಿಂಗ್.

ದೇಶವೆಂದರೇನು? ಹೇಗೆ ವಹಿಸುವೆ ನಾಯಕತ್ವ?

ಪಾಪ, ಮುಲ್ಲಾ! ಅದು ನಿಲುಕದು ಅವನ ಯೋಚನೆಗೆ.

ಸ್ವಂತಿಕೆ ಮತ್ತು ಸ್ವಾಭಿಮಾನವನ್ನು ತನ್ನ ದ್ವಿಪದಿಗಳ ಮೂಲಕ ವಿಶಿಷ್ಟವಾಗಿ ಹೃದಯ ತಟ್ಟುವ ರೀತಿಯಲ್ಲಿ ವ್ಯಕ್ತಪಡಿಸಿದ ಈ ಕವಿ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದವನು.

ಖುದೀ ಕೋ ಕರ್ ಬುಲಂದ್ ಇತ್‌ನಾ ಕೆ ಹರ್ ತಕ್‌ದೀರ್ ಸೆ ಪೆಹಲೇ

ಖುದಾ ಬಂದೇ ಸೆ ಖುದ್ ಪೂಚೆ, ಬತಾ ತೇರೀ ರಾ ಕ್ಯಾ ಹೈ?

ಸ್ವಂತಿಕೆಯನ್ನು ಬಲಗೊಳಿಸು ಸಾಕಷ್ಟು, ಪ್ರತಿಯೊಂದು ವಿಧಿಲೀಲೆಯ ಎದುರು

ದೇವರು ಕೇಳಬೇಕು ಮನುಜನನು ವಿವಶವಾಗಿ, `ಹೇಳು, ನಿನ್ನ ಇಚ್ಛೆ ಏನೆಂದು?

ಗಜಲ್‌ಗಳ ಮೂಲಕ ಪ್ರೇಮ ಸಂದೇಶವನ್ನು ಸಾರಿದ ಇಕ್ಬಾಲ್‌ರ ಅನೇಕ ಗಜಲ್‌ಗಳು ಜಗತ್ತಿನಾದ್ಯಂತ ಜನರ ಮನಸೂರೆಗೊಂಡಿವೆ. ಇವರ ಒಂದು ಗಜಲ್‌ನ ಕೆಲವು ಸಾಲುಗಳು ಹೀಗಿವೆ–

‘ಸಿತಾರೋಂಸೆ ಆಗೇ ಜಹಾಂ ಔರ್ ಭೀ ಹೈ    

ಅಭೀ ಇಶ್ಕ್ ಕೀ ಇಮ್ತಿಹಾಂ ಔರ್ ಭೀ ಹೈ. 

ತಹೀ ಜಿಂದಗೀ ಸೆ ನಹೀ ಏ ಫಿಯೇಂ

ಯಹಾಂ ಸೈಕಡೋಂ ಕಾರವಾಂ ಔರ್ ಭೀ ಹೈ

ಕನಾಹತ್ ನ ಕರ್ ಆಲಮೇ-ರಂಗೊ-ಬೂ ಪರ್

ಚಮನ್ ಔರ್ ಭಿ ಆಶಿಯಾಂ ಔರ್ ಭಿ ಹೈ

ತಾರೆಗಳ ಮುಂದೆ ಪ್ರಪಂಚ ಇನ್ನೂ ಇದೆ

ಇದೇ ಅಲ್ಲ, ಪ್ರೇಮದ ಪರೀಕ್ಷೆ ಇನ್ನೂ ಇದೆ.

ಖಾಲಿ ಬದುಕಿನಿಂದ ಇಲ್ಲ ಈ ವಾತಾವರಣ

ಇಲ್ಲಿ ಕೋಟ್ಯಾನುಕೋಟಿ ಸಾಲುಗಳು ಇನ್ನೂ ಇದೆ.

ತುಷ್ಟನಾಗದಿರು ಕಂಡು ಜಗದ ಬಣ್ಣ, ವಾಸನೆಯ ಮೇಲೆ

ಹೂದೋಟಗಳು, ಕನಸಿನ ಮನೆಗಳು ಇನ್ನೂ ಇದೆ’.

ಮೇಲೆ ಹೇಳಲಾದ ಉರ್ದು ಗಜಲ್ ಕಾವ್ಯ ಪ್ರಕಾರದ ದಿಗ್ಗಜರೆನಿಸಿದ ಕವಿಗಳಲ್ಲದೆ ಇನ್ನೂ ನೂರಾರು ಜಗತ್ಪ್ರಸಿದ್ಧ ಕವಿಗಳು ಇದ್ದಾರೆ. ಕರ್ನಾಟಕದಲ್ಲಿ ಕೂಡ ಉರ್ದು ಭಾಷೆಯ ಕವಿಗಳು ಇಂದಿಗೂ ನೂರಾರು ಮಂದಿ ಇದ್ದಾರೆ. ಇವರೆಲ್ಲರೂ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ, ಹಲವರು ಅಂತರರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿಯನ್ನು ಪಡೆದಿದ್ದಾರೆ.

ಇತರ ಭಾಷೆಗಳಲ್ಲಿ ಗಜಲ್–

ಗಜಲ್ ಕಾವ್ಯಪ್ರಕಾರ ಎಷ್ಟು ಜನಪ್ರಿಯವಾಯಿತೆಂದರೆ ಇವುಗಳ ಅನುವಾದ ಮಾತ್ರವಲ್ಲ, ಬಂಗಾಲಿ, ಕನ್ನಡ, ತೆಲುಗು, ಮರಾಠಿ, ಹಿಂದಿ ಭಾಷೆಗಳ ಕವಿಗಳು ಸ್ವತಂತ್ರವಾಗಿ ಗಜಲ್ ಬರೆಯತೊಡಗಿದರು.

ದೇಶವಿದೇಶಗಳಲ್ಲಿ ಮುಖ್ಯವಾಗಿ ಯುರೋಪ್ ಮತ್ತು ಅಮೆರಿಕಾದಲ್ಲಿ ಇಂಗ್ಲಿಷ್, ಟರ್ಕಿಷ್, ರಷ್ಯನ್, ಜರ್ಮನ್ ಭಾಷೆಗಳಿಗೆ ಉರ್ದು ಗಜಲ್‌ಗಳು ಅನುವಾದಗೊಂಡದ್ದು ಮಾತ್ರವಲ್ಲ, ಇಂಗ್ಲಿಷ್‌ನಂತಹ ಭಾಷೆಗಳಲ್ಲಿ ಸ್ವತಂತ್ರ ಗಜಲ್ ಕಾವ್ಯವನ್ನು ರಚಿಸಲು ಕವಿಗಳು ತೊಡಗಿದರು.

ಮುಖ್ಯವಾಗಿ ಜೇಮ್ಸ ಕ್ಲೆರೆನ್ಸ್, ಜೇಮ್ಸ ಎಜ್ರಾಯಿಲ್ ಫ್ಲೆಕ್ಕರ್, ಫಿಲ್ಲಿಸ್ ವೆಬ್ ಮುಂತಾದವರು ಗಜಲ್‌ನ ಸೂತ್ರಗಳಿಗೆ ಬದ್ಧವಾಗಿ ಮತ್ತು ಅರೆ ಬದ್ಧತೆಯಿಂದ ಪದ್ಯಗಳನ್ನು ಬರೆದರು.

ಅರೆಬದ್ಧತೆಯ ದ್ವಿಪದಿಗಳನ್ನು `ಬಾಸ್ಟರ್ಡ್ ಗಜಲ್ಸ್~ ಎಂದು ಗಜಲ್ ಪ್ರಿಯರು ಟೀಕಿಸಿ ಹೆಸರಿಸಿದರು. 1990ರ ಸುಮಾರಿಗೆ ಇಂಗ್ಲಿಷ್ ಗಜಲ್‌ಗಳಿಗೆ ಮಾನ್ಯತೆ ದೊರೆತು ಅಮೆರಿಕಾದ ಕವಿಗಳಾದ ಜಾನ್ ಹೋಲೆಂಡರ್, ಡಬ್ಲ್ಯೂ. ಎಸ್. ಮೆರ‌್ವಿನ್ ಮುಂತಾದವರು ಸೂತ್ರಬದ್ಧ ಗಜಲ್‌ಗಳನ್ನು ಬರೆದರು.

ಕಾಶ್ಮೀರಿ ಮೂಲದ ಅಮೆರಿಕನ್ ಕವಿ ಆಘಾ ಶಾಹೀದ್ ಅಲಿ ಈ ಇಂಗ್ಲಿಷ್ ಗಜಲ್‌ಗಳ ಬಗ್ಗೆ ವ್ಯಾಪಕ ಪ್ರಚಾರವನ್ನು ಮಾಡಿದ್ದಲ್ಲದೆ, 2000ದಲ್ಲಿ Ravishing Disunities- Real Ghazals in English  ಎಂಬ ಹೆಸರಿನಲ್ಲಿ ಸಂಪಾದಿಸಿ ಪುಸ್ತಕವನ್ನು ಪ್ರಕಟಿಸಿದರು.

ಕನ್ನಡ ಕಾವ್ಯಲೋಕದಲ್ಲಿ ಗಜಲ್‌ಗಳು–

ಕನ್ನಡದಲ್ಲಿ ಸ್ವತಂತ್ರವಾಗಿ ಮತ್ತು ಸೂತ್ರಬದ್ಧವಾಗಿ ಗಜಲ್‌ಗಳನ್ನು ಬರೆದವರಲ್ಲಿ ಪ್ರಥಮರೆಂದರೆ ಶಾಂತರಸರು. ಬೆಂಗಳೂರಿನ ಡಾ.ಕೆ.ಮುದ್ದಣ್ಣರವರು `ಮಂಜರ್ ಎಂಬ ಕಾವ್ಯನಾಮದಲ್ಲಿ ಸುಮಾರು 500 ರಷ್ಟು ಉರ್ದು ಗಜಲ್ ಬರೆದು ಖ್ಯಾತರಾಗಿದ್ದರಾದರು, ಇವರು ಅಲ್ಲಲ್ಲಿ `ಸತ್ಯಾನಂದ’ ಎಂಬ ಕಾವ್ಯನಾಮದಡಿಯಲ್ಲಿ ಕನ್ನಡ ಪದ್ಯಗಳು, ಉರ್ದು ಅನುವಾದಗಳನ್ನು ಬರೆದಿದ್ದರೇ ಹೊರತು ಸ್ವತಂತ್ರ ಗಜಲ್‌ಗಳನ್ನು ಕನ್ನಡದಲ್ಲಿ ಬರೆದದ್ದು ಕಮ್ಮಿ ಎನ್ನುವವರು ಕೆಲವರು.

ಕಾದಂಬರಿಕಾರ, ಕತೆಗಾರ, ಕವಿ ಶಾಂತರಸರು `ಉರ್ದು ಕಾವ್ಯದಲ್ಲಿ ಮದಿರೆ ಮತ್ತು ಯೌವನ– ಮುಂತಾದ ಅನುವಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಉರ್ದು ಗಜಲ್‌ಗಳನ್ನು ಅನುವಾದಿಸಿದ ಜೊತೆಗೇ ಗಜಲ್ ಕಾವ್ಯದ ಸೂತ್ರಗಳಿಗೆ ಬದ್ಧವಾಗಿ ಕನ್ನಡ ಗಜಲ್‌ಗಳನ್ನು ಬರೆದಿದ್ದಾರೆ.

`ಗಜಲ್ ಮತ್ತು ಬಿಡಿ ದ್ವಿಪದಿಗಳು’ — ಎಂಬುದು ಅವರ ಪ್ರಕಟಿತ ಕೃತಿ. ಇವರ ಕನ್ನಡ ಗಜಲ್‌ಗಳನ್ನು ಹಂಪಿ ವಿಶ್ವವಿದ್ಯಾಲಯ ಪ್ರಕಟಿಸಲು ಕೈಗೆತ್ತಿಕೊಂಡಿತು.

ಇವರ ಕೆಲವು ದ್ವಿಪದಿಗಳು ಗಜಲ್‌ಗಳು ಹೀಗಿವೆ–

ಅವಳ ಪೈಜಣದ ಧ್ವನಿ ಬರೆಯುತಿದೆ ಗಜಲ ಸಂಜೆಗೆಂಪಿನಲಿ

ಮಿಂದು ಮೆಲ್ಲನೆ ಬರುತಲಿದೆ ಅವಳ ಮೈಯ ಕಂಪಿನಲಿ.

                           *

ಏಸೋ ದಿನಗಳ ಬಳಿಕ ಓಲೆ ಬಂದಿದೆಯವಳ ಏನಿದೆಯೋ ಅಲ್ಲಿ

ಮುನಿಸೋ ಒಲವೋ ಅದನು ಸಹಿಸಲಿಕೆ ಬಟ್ಟಲವ ತುಂಬಿಕೊಡು ಸಾಕಿ.

ಶಾಂತರಸರು ಮೂಲತಃ ಪ್ರಯೋಗಶೀಲ ಕವಿ. ಸ್ವತಃ ಉರ್ದು ಸಾಹಿತ್ಯದ ಅಭಿಮಾನಿಯಾಗಿದ್ದ ಅವರು ಉರ್ದು ಕಾವ್ಯ ಪ್ರಕಾರಗಳಾದ ಗಜಲ್, ರುಬಾಯಿ, ನಜ್ಮ್, ಬಜ್ಮ್‌ಗಳನ್ನು ಅವುಗಳ ಕಾವ್ಯ ಲಕ್ಷಣಗಳನ್ನು ಕನ್ನಡದಲ್ಲಿ ಬಳಸಿ ಕಾವ್ಯರಚನೆ ಮಾಡುವ ಪ್ರಯೋಗವನ್ನು ಮಾಡಿದ್ದರು.

ಅವರು ಒಟ್ಟು ಇಂತಹ 46 ಗಜಲ್‌ಗಳನ್ನು `ಅರಸ~ ಎಂಬ ಕಾವ್ಯನಾಮದಲ್ಲಿ ಕನ್ನಡ ಸಾಹಿತ್ಯಲೋಕಕ್ಕೆ  ನೀಡಿದ್ದಾರೆ. ಇವರ ಗಜಲ್‌ಗಳ ಮಾಧುರ್ಯದ ಒಂದು ಮಾದರಿ ಹೀಗಿದೆ:

ಅರುವತ್ತು ತುಂಬಿದರೂ ಮಧುವುಂಟು ಪ್ರಿಯಳೇ ಮಾಧುರ‌್ಯವುಂಟು

ಮೊದಲ ಮಳೆ ಬಿದ್ದ ನೆಲದ ವಾಸನೆ ನಿನ್ನ ಅಂಗಾಂಗದಲಿ ಉಂಟು

ಮುಪ್ಪಿಲ್ಲ ಆಗಸಕೆ ಎಂದೆಂದು ಕುಂದಿಲ್ಲ ಚುಕ್ಕೆ ಚಂದ್ರರಿಗೆ

ಆಗಸದ ಸೌಂದರ್ಯ ಚುಕ್ಕೆ ಚಂದ್ರಾಮರ ಕಳೆ ನಿನಗುಂಟು

ಕೊರತೆ ಕಾಣದು ಬೆಳಕು ಕತ್ತಲೆಗೆ ಕೊಡೆಂಬುದಿಲ್ಲವೇ ಇಲ್ಲ

ತುಳುಕುತಿದೆ ಬೆಳಕು ಮೈಯಲಿ ಕಂಗಳಿಗೆ ಕತ್ತಲೆಯ ಕಾಡಿಗೆಯುಂಟು

ಸಂಜೆಗೆಂಪದರ ಜೊತೆ ಹುಣ್ಣಿಮೆಯ ಬೆಳದಿಂಗಳೇನು ಬಲು ಚಂದ

ಸಂಜೆಯನು ಉಡುವ ಹುಣ್ಣಿಮೆಯ ತೊಡುವ ಫಲವು ನಿನ್ನಲಿನ್ನೂ ಉಂಟು

ಜೀವನರ್ಥವ ಪ್ರೇಮದ ಮರ್ಮವ ತಿಳಿದವಳೆಂದರೆ ನೀನೇ

ಅಂತೆಯೇ ನಿನ್ನಲಿ ಚೆಲುವಿನ ತವರೆ ಯೌವನಕಿನ್ನೂ ಮೌನವೇ ಉಂಟು

ಬದುಕು ಒಂದು ದಿನ ಮುಗಿಯುವುದು ಮರ್ತ್ಯದ ಸೊಗಸೇ ಅಡಗಿಹುದಿರಲಿ

ಸಾವಿಗೆ ಜೀವನ ದೀಕ್ಷೆಯನೀಯುವ ಒಲವಿನ ಶಕ್ತಿ ನಿನಗುಂಟು.

ಶಾಂತರಸರು ತಮ್ಮ ಎಂದಿನ ಕವನಗಳಲ್ಲಿ ವ್ಯಕ್ತಪಡಿಸುವ ಪ್ರೇಮ, ಪ್ರಣಯದ ರೀತಿಗೂ, ತಮ್ಮ ಗಜಲ್‌ಗಳಲ್ಲಿ ವ್ಯಕ್ತಪಡಿಸುವ ರೀತಿಯೂ ಭಿನ್ನವಾಗಿದೆ. ನೈತಿಕ ಎಲ್ಲೆಯನ್ನು ಮೀರದ ಸಂಯಮದ ನಿರೂಪಣೆ ಇಲ್ಲಿ ಕಂಡುಬರುತ್ತದೆ.

ಕನ್ನಡದ ಕವಿ ಶಾಂತರಸರು ನಮ್ಮನ್ನು 2008 ರಲ್ಲಿ ಬಿಟ್ಟು ಅಗಲಿದರೂ, ಈ ಗಜಲ್ ಪರಂಪರೆಯನ್ನು ಮುಂದುವರಿಸಲು ಯುವ ಕವಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಈ ಮಾರ್ಗದಲ್ಲಿ ನಜೀರ್ ಚಂದಾವರ, ಎಚ್.ಎಸ್.ಮುಕ್ತಾಯಕ್ಕ, ಡಾ. ಬಸವರಾಜ ಸಬರದ, ಚಿದಾನಂದ ಸಾಲಿ, ಆರಿಫ್ ರಾಜಾ, ಶಾರದಾ ಮುಳ್ಳೂರು, ಡಾ. ದಸ್ತಗೀರ್ ಸಾಬ್ ದಿನ್ನಿ, ಹೇಮಲತಾ ವಸ್ತ್ರದ ಮತ್ತು ಇನ್ನೂ ಹಲವು ಕನ್ನಡದ ಕವಿಗಳು ಗಜಲ್ ಬರವಣಿಗೆಯನ್ನು ಮುಂದುವರಿಸಿದ್ದಾರೆ.

ಗಜಲ್ ಕಾವ್ಯ ಪರಂಪರೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಸಾಕಷ್ಟು ಅವಕಾಶಗಳಿವೆ, ಅಲ್ಲದೇ ಈ ಪ್ರಕಾರಕ್ಕೆ ಉಜ್ವಲ ಭವಿಷ್ಯವೂ ಕಾದಿದೆಯೆನ್ನಬಹುದು..!

***********************************

One thought on “

Leave a Reply

Back To Top