ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವನು..

ಸುಜಾತ ಲಕ್ಷ್ಮೀಪುರ.

ಅವನು ಸುಳಿಯುತ್ತಿಲ್ಲ.
ಈ ನೀರವ ಸಂಜೆಯಲಿ..ಬರೀ ಮಂಕು ಮಗ್ಗುಲಾಗುತ್ತಿದೆ
ಕತ್ತಲಾವರಿಸಿ ಆಗಸವೂ ಬಿಕ್ಕುತ್ತಿದೆ .

ಚಿಕ್ಕಿ ಚಂದ್ರಮರೂ ನಾಪತ್ತೆ
ಪಯಣ ಬೆಳೆಸಿರಬೇಕು
ಅವನ ಊರಿನ ಕಡೆಗೇ..
ಕಿಟಕಿಯಾಚೆ‌ ಮಳೆಮೋಡವೂ
ಕಣ್ಣಂಚಲಿ‌ ತೊಟ್ಟಿಕ್ಕಲು
ಹವಣಿಸುತಿದೆ

ಅರೆಗಳಿಗೆ ಅತ್ತುಬಿಡಲು ಅವಸರಿಸಿವೆ ನಯನಗಳು
ತಂಗಾಳಿಯೂ ತಂಪೀಯದೆ
ಸುಟ್ಟು ಬೂದಿಯೂ ಆಗಿಸದೆ
ಕಿಡಿ ತಾಗಿಸಿ ಮರೆಯಲಿ ಇಣುಕಿದೆ.

ನಿಟ್ಟುಸಿರ ಮೈದಡವಿ
ಮುದ್ದು ಮಾತುಗಳಲಿ ಒಲಿಸಿ
ಜೇನು ಸುರಿಸುವ ಕಣ್ಣಂಚಿನ ಪಿಸುಮಾತೂ ಕಾಣೆಯಾಗಿದೆ

ಬರಿದೆ ಹಂಬಲಿಕೆ‌ ಚಡಪಡಿಕೆ
ಮುಗಿಯದಾ ಕಾಲದ ಸಂಚು
ಸುಕ್ಕಾಗುತ್ತಿದೆ ನಿರೀಕ್ಷೆ.
ಅವನು ಸುಳಿಯುತ್ತಿಲ್ಲಾ..
ಬೆಳಗು ಬೈಗು ನೆನಪಿನ ಗಾಯ
ಒಳಗೊಳಗೇ ಹಸಿರಾಡುತ್ತಿದೆ.

ಬೇಸರದಿ ಆಸರೆಗೆ
ಕತ್ತಲಲ್ಲಿ ಕೈಚಾಚಿದ್ದೇನೆ
ಏಕಾಂತವೆಲ್ಲಾ‌ ಲೋಕಾಂತ
ಆಗಿಸುವ ಬಯಕೆ ಅವನು
ಮಾಯವಾಗಿದ್ದಾನೆ

*****************************

About The Author

3 thoughts on “ಕಾವ್ಯಯಾನ”

  1. ಸುಜಾತಾ ಲಕ್ಮನೆ

    ಚಂದದ ಕವಿತೆ. ವಿರಹ ಭಾವ..ಗಳ ಹೊತ್ತ ಕವಿತೆ..

Leave a Reply

You cannot copy content of this page

Scroll to Top