ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಓ, ಅವನೇ.. ಪೂರ್ಣಿಮಾ ಸುರೇಶ್ ಅವನನ್ನು ಇಷ್ಟ ಪಟ್ಟಿದ್ದು ಹೇಗೆ,ಯಾವಾಗ? ಪ್ರಶ್ನೆಯಾಗದಿರು ಒಳಗಿನವಳೇ.. ಅದೆಷ್ಟು ಬಾರಿ ಸಮಜಾಯಿಷಿ ನೀಡಿದ್ದೇನೆ ಕಿರಿಕಿರಿ ಮಾಡದಿರು ಹೀಗೆಲ್ಲ ಏನು-ಯಾಕೆಗಳನ್ನು ಎದುರಿಟ್ಟು ! ನಾನು ಬದುಕುತ್ತಿದ್ದೇನೆ ಎಂಬುದಷ್ಟೇ ಸತ್ಯ. ಆದರೆ ಅವಳಿಗದು ರುಚಿಸದು. ಮನಸ್ಸಿಗೆ ಪಾತಿ ಮಾಡಿದ್ದು, ನೆಟ್ಟ ಗಿಡ ಕುಡಿಯೊಡೆದದ್ದು.. ಮೊಗ್ಗು ಕಟ್ಟಿದ್ದು ನೆನಪಿಸುತ್ತಾಳೆ. ನನ್ನ ಅವಳ ಹಾದಿಗೆಳೆಯುತ್ತಾಳೆ ಬಲವಂತವಾಗಿ. “ಗೊತ್ತಿಲ್ಲ”- ಹಾರಿಕೆ ಉತ್ತರನೀಡಲಾರೆ. ನಾನು ನನ್ನ ದಾರಿಯಲ್ಲಿ ಅವನು ತನ್ನ ಗುರಿಯತ್ತ ನಡೆವಾಗ ಒಂದೊಂದು ತಿರುವಿನಲ್ಲೂ ಕಾಡಕುಸುಮ… -ಕೆಂಪಿನ ಕೇಪಳ, ಕಂಪಿನ ರೆಂಜೆ, ಬೇಲಿಯ ನೀಲಿಯ ಪುಟ್ಟಪುಟ್ಟ ಹೂಗಳನಿಟ್ಟವನ ತುಟಿಗಳಲಿ ದುಂಡುಮಲ್ಲಿಗೆ ! ಹೀಗೆ ಅಚಾನಕ ಎದುರಾದ ಹೂಗಳು ನನ್ನೊಳಗೆ ತಂತಾನೇ ಮಾಲೆಯಾದ ಸೋಜಿಗ ಇಂದಿಗೂ ಬಿಡಿಸಲಾಗಿಲ್ಲ! ಬೇಡ. ದೂರದಿರಿ.. ಅವನನ್ನು ಅವನಿಗೇನುಗೊತ್ತು.. ಪ್ರೀತಿ ಬೆಳೆಯುವ ಕಲೆ? ಗೊತ್ತಿದ್ದರೆ… ಬಿಡಿಸುತ್ತಿರಲಿಲ್ಲವೇ ಮಲ್ಲಿಗೆಯಚೆಂಡನ್ನೇ!? ನನ್ನುದ್ದಕ್ಕೂ ನಾ ಬಾಲ್ಯದಿಂದಲೂ ಆಸೆ ಪಟ್ಟ ಮಲ್ಲಿಗೆ. ನಿನ್ನ ಮಲ್ಲಿಗೆಯವನು ಘಮ ತರಲಿ ಎಂದು ಅವನು ನಿನ್ನ ರೆಂಜೆ, ಕೇಪಳಕೆ ದೇವಿ ಪ್ರಸನ್ನಳಾಗಲಿ ಎಂದು ನಾನು ಹಾರೈಸಿಕೊಂಡಿದ್ದೆವು ಪರಸ್ಪರ! ಅದೆಷ್ಟು ಕಾಲ ಬರಿನೆಲದಲ್ಲಿ ಯೋಗಿಯಂತೆ ಸಾಹಿತ್ಯ, ಸಮಾಜ, ಗಂಡು ಹೆಣ್ಣು ಎಂದು ಕಣ್ಣು ಕೂಡಿಸದೇ ನಿರ್ವಿಕಾರನಾಗಿ ಮಾತಿನೆಳೆಗಳನ್ನು ಆತ ಬಿಡಿಸುತ್ತಿದ್ದರೆ… ಅಲ್ಲಲ್ಲಿ ಅಲ್ಪವಿರಾಮ, ಪ್ರಶ್ನಾರ್ಥಕ, ಆಶ್ಚರ್ಯ ಚಿಹ್ನೆ ನಾನು. ಅವನ ಸಂಭ್ರಮಕ್ಕೆ ನನ್ನ ಭಾವ, ನನ್ನ ಪುಳಕಕ್ಕೆ ಅವನ ನಡೆ ತಗಲಿಕೊಂಡಿದ್ದು ಗಮನಕ್ಕೆ ಬಂದಾಗ ವಟವೃಕ್ಷ ಒಳಗೊಳಗೆ ಬೇರಿಳಿಸಿ ಅದರ ಬಿಳಲು ಹಿಡಿದು ನಾನು ಜೋಕಾಲಿ ಆಡುತ್ತಿದ್ಧೆ. ಬೆನ್ನ ಹಿಂದಿನ ಹಸ್ತ ಅವನದೇ ಇರಬೇಕು. ಜೀಕುವ, ತೂಗುವ ಸಂಭ್ರಮ.. ಅವನ ಕಣ್ಣಿನೊಳಗೆ ನನ್ನ ಆತ್ಮದ ಪ್ರತಿಫಲನ. ಓ ಇವನೇ.. ಜೋರಾಗಿ ಜೀಕಿ ಬಿಡು ಹೊರಗೆ ಆಕಾಶಕ್ಕೆ. ಸ್ವರ್ಗದ ಬಾಗಿಲಿಗೆ. ನಿನ್ನ ಸೆಳೆದು ನಾನು ಒಳಸೇರಿಬಿಡುವೆ. ಕಿರು ಪರಿಚಯ: ಪೂರ್ಣಿಮಾ ಸುರೇಶ್. ಉಡುಪಿ. ಕವಯತ್ರಿ ಹಾಗೂ ರಂಗನಟಿ. 3 ಕವನಸಂಕಲನಗಳು ಪ್ರಕಟಗೊಂಡಿವೆ. gss ಕಾವ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳು ದೊರಕಿವೆ. ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ- ಕೊಂಕಣಿ ಪದಕೋಶ ಸಂಗ್ರಹವು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಕಟಗೊಂಡಿವೆ . ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ,ಆಕಾಶವಾಣಿ ಕಲಾವಿದೆ. ವೃತ್ತಿ ಬಸ್ ಉದ್ಯಮ. ವ್ಯಕ್ತಿತ್ವ ವಿಕಸನದ ಸಂಪನ್ಮೂಲ ವ್ಯಕ್ತಿಯಾಗಿ ತರಬೇತು ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸ್ವಾತಿ ಮುತ್ತು ಮಧು ವಸ್ತ್ರದ್ ಬಾಲ್ಯದಾ ದಿನಗಳಲ್ಲಿ ತಾಯ್ತಂದೆ,ಅಣ್ಣಂದಿರ ಬೆಚ್ಚಗಿನಾ ಗೂಡಿನಲ್ಲಿ ನಲಿದಿದ್ದ ಮುಗ್ಧತೆಗೆ ಸಿಕ್ಕಿದ್ದು ವಾತ್ಸಲ್ಯದಮುತ್ತು ಶಾಲೆಯಾ ದಿನಗಳಲ್ಲಿ ವಿದ್ಯೆಯಾ ಕಲಿಯುವಲ್ಲಿ ಗುರುಗಳಿಂದ ಸಿಕ್ಕಿದ್ದು ಮಾರ್ಗದರ್ಶನದ ನುಡಿ ಮುತ್ತು.. ಹರಯದಾ ಬನದಲ್ಲಿ ಮುಂಜಾನೆಯ ಮಂಜಿನಲಿ ಚಿಗುರೆಲೆಯ ಅಂಚಿನಲಿ ನನ್ನ ನೋಡಿ ನಕ್ಕಿದ್ದು ಇಬ್ಬನಿಯಮುತ್ತು ಸಪ್ತಪದಿಯ ತುಳಿದಲ್ಲಿ ನವಜೀವನದ ಹೊಸಿಲಲ್ಲಿ ಮೊದಲರಾತ್ರಿಯ ಗುಂಗಿನಲ್ಲಿ ನಲ್ಲ ನನಗಿತ್ತಿದ್ದು ಒಲವಿನ ಮುತ್ತು ನವಮಾಸ ಮುಗಿಯುತಲಿ ತಾಯ್ತನದ ಮೋಡಿಯಲಿ ನನ್ನ ಮುದ್ದಿನ ಕರುಳಕುಡಿಗೆ ಕಣ್ಮುಚ್ಚಿ ನಾನಿತ್ತಿದ್ದು ಮಮತೆಯ ಮುತ್ತು ತುಂಬುಪ್ರೀತಿಯ ಬಾಳಿನಲ್ಲಿ ದಿವ್ಯಸಾರ್ಥಕತೆಯಲ್ಲಿ ಕಷ್ಟಸುಖಗಳ ಮೂಸೆಯಲ್ಲಿ ನಾನು ಗಳಿಸಿದ್ದು ಅನುಭವದ ಮುತ್ತು ಜೀವನದ ಹಾದಿಯಲ್ಲಿ ಕರ್ತವ್ಯಗಳ ಭರದಲ್ಲಿ ಅಡೆತಡೆಗಳು ಬಂದಾಗ ನಲ್ಲನಿಂದ ಸಿಕ್ಕಿದ್ದು ಭರವಸೆಯ ಮುತ್ತು ಈ ಬಾಳಿನ ಹಾದಿಯಲ್ಲಿ ನಲ್ಲನ ಒಲುಮೆಯಿದ್ದಲ್ಲಿ ಸ್ವಾತಿಮಳೆ ಇಲ್ಲದೆಯೂ ನಾನಾಗಬಲ್ಲೆನು ಸ್ವಾತಿ ಮುತ್ತು

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ. ಗೋವಿಂದ ಹೆಗಡೆ ಸುಳಿಬಾಳೆಯಂಥ ಹೆಣ್ಣು ನೀನು ತಿಳಿಯದ್ದು ನನ್ನ ತಪ್ಪು ಆಲಿಕಲ್ಲ ಮಳೆಯಂತೆ ಸುರಿದೆ, ಸುರಿದಿದ್ದು ನನ್ನ ತಪ್ಪು ಕನಸಿನ ಪುಟದಲ್ಲಿ ಬರೆದೊಂದು ಹಾಡಂತೆ ಕಂಡೆನೇ ನಿನ್ನ ಎತ್ತಿ ಅಪ್ಪಿದೆ ನೀ ಗರುಕೆಯೆಸಳ, ಹೆಚ್ಚು ಬಯಸಿದ್ದು ನನ್ನ ತಪ್ಪು ಎದೆ ಕೊರೆದ ದುಗುಡಕ್ಕೆ ಹೊರದಾರಿ ಬಯಸಿದವಳು ನೀನು ಕಿವಿಯಾದ ಮಾತ್ರಕ್ಕೆ ಆಸರೆ ನಾನೆಂದು ಉಬ್ಬಿದ್ದು ನನ್ನ ತಪ್ಪು ಫೋಲ್ ವಾಲ್ಟ್ ನಲ್ಲಿ ಜಿಗಿದು ದಾಟಿ ಕೋಲನ್ನು ಕೈ ಬಿಡುವರು ಮಣ್ಣಿಗೆಸೆದೆ ನೀನೆಂದು ಮರುಗುತ್ತ ಉಳಿದಿದ್ದು ನನ್ನ ತಪ್ಪು ದಾಟಿ ಹೋಗಿದ್ದೀ ನೀನು ಗೊತ್ತು,ಮರಳಿ ಹರಿಯದು ನದಿ ಬಿದ್ದ ಪಕಳೆಯನೆತ್ತಿ ಸಖೀ,ತುಟಿಗೊತ್ತಿ ಕಳಲಿದ್ದು ನನ್ನ ತಪ್ಪು

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬೆನ್ನ ಮೇಲೆ ಬರೆದ ಮುಳ್ಳಿನ ಚಿತ್ರ ಬಿದಲೋಟಿ ರಂಗನಾಥ್ ಮನುಷ್ಯತ್ವವನ್ನೇ ಗಾಳಿಗೆ ತೂರಿದ ನೀಚ ಮನಸೇ ಹೆಣದ ಮೇಲಿನ ಕಾಸಿಗೆ ನಾಲಿಗೆಯನ್ನೇಕೆ ಚಾಚಿದೆ ? ಜೀವ ಇರುವಾಗ ಇಲ್ಲದ ಹೆಸರಿನ ಮುಂದೆ ನಿನ್ನ ಹೆಸರನ್ನೇಕೆ ಜೋಡಿಸುತ್ತಿ? ನಿಷ್ಠೆ ಇಲ್ಲದ ಮನಸನು ಹೊತ್ತು ಹೊಲಸು ಆಗಿ ಕೆಸರು ರಸ್ತೆ ಚರಂಡಿಗಳಲ್ಲಿ ಉರುಳಿ ಕೈ ತೊಳೆಯದೇ ಹರಿವಿ ನೀರಿಗೆ ಕೈ ಅದ್ದುವ ನಿನ್ನ ನಡೆ ಎಂದಿಗೂ ಗಾಳಿಗೋಪುರ ಇದ್ದ ಸೀರೆಯನು ಉಡದೇ ಅಲ್ಲೆಲ್ಲೋ ಬೇಲಿ ಮೇಲಿರುವ ಸೀರೆಗೆ ಆಸೆ ಪಟ್ಟು ಮುಟ್ಟಲು ಹೋಗಿ ಜಾರಿ ಹಾರಿದ ಸೀರೆಯ ಬದುಕು ಮುರಾಬಟ್ಟೆ ! ನಂಬಿಕೆಯ ಎದೆಯ ಮೇಲೆ ಬೈರಿಗೆ ತಿರುವಿ ಹೋದ ಹೆಜ್ಜೆಯೇ ನಿನಗೂ ಕಾದಿದೆ ಬೆಂಕಿ ಬವಣೆ ಸುಖದ ಅಮಲಲಿ ತೇಲುವ ನೀನು ಕಮರಿ ಹೋಗುವ ಕಾಲ ದೂರವಿಲ್ಲ. ರೋಧಿಸುತ್ತಿರುವ ಮಣ್ಣಾದ ಮನಸಿನ ನೋವು ನಿನಗೆ ತಟ್ಟದಿರುವುದೆ? ಸುಳ್ಳಿನ ಪಾಯದ ಮೇಲೆ ಸತ್ಯದ ಗೋಪುರ ನಿಲ್ಲುವುದು ಕಷ್ಟ.! ಎಂದಿಗೂ. ನೀನಿಗ ಹಾರಾಡುವ ಹಕ್ಕಿಯಾಗಿರಬಹುದು ಆದರೆ ನೀನು ಎಷ್ಟೇ ಉಜ್ಜಿ ತೊಳೆದರು ನಿನ್ನ ಕೈಗೆ ಅಂಟಿದ ಪಾಪದ ಬಣ್ಣ ಎಂದೂ ಅಳಿಸದು ! ನೋವಿನಿಂದ ಹೋದ ಆ ಉಸಿರು ನಿನ್ನ ಬೆನ್ನ ಮೇಲೆ ಬರೆದ ಅಳಿಸಲಾಗದ ಮುಳ್ಳಿನ ಚಿತ್ರ ಕರುಳು ಕುಡಿಗಳಿಗೆ ಕೊಟ್ಟ ಅಪ್ಪನ ಉಸಿರಿಲ್ಲದ ಚಿತ್ರಪಟವನ್ನು ನೋಡಿದ ಪ್ರತಿಸಾರಿಯು ಅವು ಬಿಡುವ ನಿಟ್ಟುಸಿರು ನಿನ್ನ ಸುಡುತ್ತಲೇ ಇರುತ್ತದೆ ನೀನು ನರಳಿ ನರಳಿ ಸಾವಿನ ಮನೆಯ ತಟ್ಟುವಾಗ ನೀನು ಮಾಡಿದ ಮೋಸವನ್ನು ಉಂಡು ನೊಂದು ಬೆಂದು ತೊರೆದಿದ್ದ ಆ ಉಸಿರಿಗೆ ಬಹುಶಃ ರೆಕ್ಕೆ ಬಂದು ಮುಕ್ತಿಮಾರ್ಗದ ಕಡೆಗೆ ಹಾರಬಹುದು !

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅರಿವು ಬಿ.ಎಸ್.ಶ್ರೀನಿವಾಸ್ ಹೊತ್ತಾಯಿತು ಗೊತ್ತಾಯಿತು ಪಯಣ ಮುಗಿಯಲಿದೆಯೆಂದು ರವಿಯು ಮುಳುಗಿ ತಾರೆ ಮಿನುಗಿ ಶಶಿ ಆಗಸ ಬೆಳಗುವನೆಂದು ಹೊತ್ತಾಯಿತು ಗೊತ್ತಾಯಿತು ಗಳಿಸಿದ್ದು ಉಳಿಸಿದ್ದು ಚಿಟಿಕೆಯಷ್ಟೇ ಎಂದು ಅರಿಯುವುದು ಅಳಿಸುವುದು ಬೆಟ್ಟದಷ್ಟಿದೆಯೆಂದು ಹೊತ್ತಾಯಿತು ಗೊತ್ತಾಯಿತು ಬಾಳಲೆಕ್ಕಾಚಾರದಲಿ ಒಂದನೊಂದು ಕೂಡಿದರೆ ಎರಡೇ ಆಗಬೇಕಿಲ್ಲವೆಂದು ಶೂನ್ಯವೂ ಮೂಡಬಹುದೆಂದು ಹೊತ್ತಾಯಿತು ಗೊತ್ತಾಯಿತು ಭರದಿ ಹರಿದ ನದಿಯು ಧುಮುಕಿ ಕಡಲ ಸೇರಲಿದೆಯೆಂದು ತನ್ನತನವ ಕಳೆದುಕೊಂಡು ಅಲೆಅಲೆಯಲಿ ಸುಳಿಯುವುದೆಂದು ಹೊತ್ತಾಯಿತು ಗೊತ್ತಾಯಿತು ನನ್ನದೆಂಬುದೆಲ್ಲ ನನ್ನದೇ ಆಗಿರಬೇಕಿಲ್ಲವೆಂದು ಋಣಸಂದಾಯವಾಗದೆ ಬಿಡುಗಡೆಯು ಸಾಧ್ಯವೇ ಇಲ್ಲವೆಂದು ಕಿರುಪರಿಚಯ: ಹವ್ಯಾಸಿ ಬರಹಗಾರರು, ಎರಡು ಕವನಸಂಕಲನಗಳುಪ್ರಕಟವಾಗಿವೆ. ವೃತ್ತಿ-ಭಾರತೀಯ ಸ್ಟೇಟ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರು

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಡಾ.ಗೋವಿಂದ ಹೆಗಡೆಯವರ ಎರಡು ಪದ್ಯಗಳು ನಕ್ಕು ಬಿಡು. ಉಂಡ ಕಹಿಗುಳಿಗೆಗಳ ತಪಸೀಲು ಬೇಕಿಲ್ಲ ಸವೆಸಿದ ಕೊರಕಲು ದಿಣ್ಣೆ ದಾರಿಗಳಿಗೆ ಎಡವಿದ ಗಾಯ ನಟ್ಟ ಮುಳ್ಳುಗಳಿಗೆ ಪುರಾವೆಯಿಲ್ಲ ಹನಿಗೂಡಿದ ಕಣ್ಣುಗಳಲ್ಲಿ ತಿರುಗಿ ನೋಡಿ ಒಮ್ಮೆ ನಕ್ಕು ಬಿಡು, ಗೆಳತಿ! ಕೂಡಿ ನಡೆದ ದಾರಿಗಳು ಬೇರಾದ ಹೆಜ್ಜೆಗಳು ಏರು ದಾರಿಯ ಕುಂಟುನಡೆ-ಗೆ ಒದಗದ ಊರುಗೋಲುಗಳು ಬೆನ್ನಿಗೆರಗಿದ ಬಾರುಕೋಲುಗಳು ಎಲ್ಲ ಅನುಭವ ಸಂತೆಯಲ್ಲೊಮ್ಮೆ ನಿಂತು ಗೆಳತೀ, ನಕ್ಕುಬಿಡು ದಾರಿ ಹೂವಿನದಲ್ಲ ನೆರಳು- ನೀರು ಸಿಗುವ ಖಾತರಿಯಿಲ್ಲ ಮುಗಿವ ಮುನ್ನ ಹಗಲು ಸೇರುವುದು ಯಾವ ಮಜಲು ಕಾಲ ಕೆಳಗಿನ ಕಳ್ಳ ಹುದಿಲಲ್ಲೂ ನೇರ ನಡೆವ ಬಿಗಿ ನಿಲುವಿನ ಅವಡುಗಚ್ಚಿದ ಮುಖದಲ್ಲೂ ಒಮ್ಮೆ ಸಡಲಿಸಿ ಗಂಟು ಕುಸಿದಾಗ ಮಡಿಲೀವ ನೆಲದ ನಲುಮೆಗೆ ನಮಿಸಿ ಒಮ್ಮೆ- ನಕ್ಕುಬಿಡು! ಕುಲುಮೆ ಚಿನ್ನ ಸುಟ್ಟಾಗ ಶುದ್ಧವಾಗುತ್ತದೆ ಮಣ್ಣು ಇಟ್ಟಿಗೆಯಾಗುತ್ತದೆ ಕಟ್ಟಿಗೆ ಇಂಧನವಾಗುತ್ತದೆ ಯಾರದೋ ಹಸಿವೆಗೆ ಎದೆಯ ಕುಲುಮೆ ಉರಿಯುತ್ತಲೇ ಇದೆ ಏನನ್ನು ಉರಿಸುತ್ತದೆ ಪುಟಕ್ಕಿಡುತ್ತದೆ ಅಥವಾ ಸುಟ್ಟು ಬೂದಿಯಾಗಿಸುತ್ತದೆ ನೀನು ಅಲಕ್ಕಾಗಿ ಕೂತುಬಿಟ್ಟಿದ್ದೀ- ನೆನಪುಗಳೇ ಇಲ್ಲದ ಹಾಗೆ..

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೌನದ ಮಡುವಿನೊಳಗೆ ಸಂತೆಬೆನ್ನೂರು ಫೈಜ್ನಾಟ್ರಾಜ್ ಮನಸ್ಸು ನೀರಿಂದ ಹೊರಬಂದ ಮೀನು ಇಂದಿನಿಂದ ಅಲ್ಲ ಅಂದಿನಿಂದಲೂ…! ಕಾರಣವಲ್ಲದ ಕಾರಣಕ್ಕೆ ಸುಖಾ ಸುಮ್ಮನೆ ಮಾತಿಗೆ ಮಾತು ಬೆಳೆದು’ಮೌನ’ ತಾಳಿ ತಿಂಗಳ ಮೇಲೆ ಹನ್ನರೆಡು ದಿನಗಳಾದವು! ದಾಂಪತ್ಯ ಆದಾಗ್ಯೂ ನೂರಾರು ಕ್ಷಣಗಳನ್ನು ಹೇಗೆಂದರೆ ಹಾಗೆ ಎಲ್ಲೆಂದರೆ ಅಲ್ಲಿ ಸರಸದಿ ಹಾಡು ಹಳೆಯದಾದರೇನು ಎಂಬಂತೆ  ಕಳೆದಿದ್ದೂ ಒಂದು ‘ಮಾತು’ ನೂರು ಸುಖಗಳನ್ನು ಕೊಲ್ಲುತ್ತೆ ಅನ್ನೋದೆಷ್ಟು ಘಾಟು ಅಲ್ವಾ? ಜಗಳ ಆಡೋದು ಇಬ್ಬರಿಗೂ ಚಟ ಅಲ್ಲ, ಚಾಳೀನೂ ಇಲ್ಲ. ಒಣ ಅಹಂ ಇಷ್ಟು ಅಂತರ ತಂದಿರಿಸಿ ನಮಗೇ ಇರುಸು-ಮುರುಸು   ಆದಂತಾಗಿದೆ. ನಮ್ಮಗಳ ನಡುವಿನ ಸಂತಾನಗಳ ಸಂಧಾನವೂ ಈಗೀಗ ಸಫಲವಾಗದೇ’ಮೌನವೇ ಆಭರಣ…’ ಅಂದುಕೊಳ್ಳುತ್ತಲೇ  ಕಳ್ಳ ಮನಸ್ಸು ಕದ್ದು ಕೂಡಾ ಪರಸ್ಪರ ನೋಡಿಕೊಳ್ಳುತ್ತಿಲ್ಲ? ಒಲವೆಂಬ ಒಲವು   ಮಾತುಗಳಿಂದಲೇ ಶುರುವಾಗುತ್ತೆ ಅನ್ನುವಾಗಲೇ ಮೌನ-ಕಣಿವೆ ತೋರಿಸುತ್ತೆ ಅನ್ನೋದು ಈಗೀಗ ಈರ್ವರಿಗೂ ಪಥ್ಯವಾಗಿದೆ(?) ಮೊದಲೇ ಹೇಳಿದೆನಲ್ಲಾ ಅಹಂ ಅಡ್ಡ ಬಂದು ಒಂದು ಹಾಸಿಗೆಯ ಎರೆಡೆರಡಾಗಿ ಮಾಡಿ ಮಧ್ಯರಾತ್ರಿ ಕೂಡಾ ಮೈ-ಕೈ ತಾಕಿದರೂ ಬೆಚ್ಚಿಬೀಳೋ ತರಹ ಆಗಿದೆಯೆಂದರೆ ಮಾತುಗಳಿಗೆ ಅದೆಷ್ಟು ಶಕ್ತಿ ಅಲ್ವಾ? ಕಂಡೂ ಕಾಣದ ಪ್ರೀತಿಗೆ, ಕೇಳಿಯೂ ಕೇಳದ ಒಳ ಮಾತಿಗೆ ಇಬ್ಬರೂ ಕಿವಿ-ಮನ  ಕೊಡ್ತಾ ಇದ್ದೇವೆ. ಗಂಡೆಂಬ ಅಥವಾ ಹೆಣ್ಣೆಂಬ ಅಗೋಚರ ಅಹಮಿಕೆ ಅಡ್ಡಗೋಡೆ!    ಅದರ ಮೇಲಿನ ಪ್ರೀತಿ ದೀಪ ಉರಿಯುತಿದೆ ಸರಿ, ಅದರಡಿಯ ಕತ್ತಲು ನಮ್ಮ ನಡುವೆ ಕಣ್ಣ ಪಟ್ಟಿಯಾಗಿದೆ! ಒಂದೇ ಸೂರಿನಡಿ ಒಂದೇ ಮನಸ್ಸಿದೆಯಾದರೂ ಮಾತುಗಳು ಒಂದೇಆಗಿಲ್ಲ. ಮೌನ ರಾಜ್ಯದ ಒಳಗೆ ಪ್ರೀತಿ ಸೈನಿಕರೆಲ್ಲಾ ರೆಸ್ಟ್ ನಲ್ಲಿದ್ದಾರೆ ಏನು ಮಾಡುವುದು?

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಆರ್ಭಟ ಅವ್ಯಕ್ತ ದಿನಕರನ ಉದಯ, ಅಳಿವಿಲ್ಲದ ಅಂಧಾಕಾರವಾಗಿದೆ, ಶಶಿಧರನ ತಂಪು, ಕೋಲ್ಮಿಂಚಿನ ಧಗೆಯಾಗಿದೆ. ನೀಲಿ ಗಗನದಲಿ ಕಾರ್ಮೋಡ ಕವಿದು ನಿಂತಿದೆ, ತಂಪು ಗಾಳಿಯಲಿ ದುರ್ಗಂಧ ಪಸರುತ್ತಿದೆ, ತಿಳಿ ನೀರಿನಲಿ ವಿಷದ ತೊಟ್ಟೊಂದು ಸೇರಿದೆ, ಹಸಿರು ತುಂಬಿರಬೇಕಾದ ನೆಲ ಬಂಜರಾಗಿ ಹೋಗಿದೆ… ಸ್ತಬ್ಧ ಶಿಲೆಗಳ ಕಣ್ಣಂಚಿನಲ್ಲಿ ಒಂದು ಹನಿ ನೀರಿಲ್ಲ, ಯಾವ ರೋಧನೆಗೂ ಕಿವಿಯೊಂದು ಒಡೆಯಲಿಲ್ಲ, ಮಿಡಿವ ಕಲ್ಲು ಚೂರಾದರೂ ಮನಕೆ ನಾಟಲಿಲ್ಲ, ದೈತ್ಯಾಕಾರದ ಭುಜಗಳಿಗೆ ವ್ಯಾಘ್ರತ್ವದ ಅರಿವಿಲ್ಲ, ಆ ಭಯಂಕರ ಆಕ್ರಂದ! ಯಾವ ಪಾಪದ ಶಿಕ್ಷೆಯೋ ಇದು, ಕಣ್ಮನಗಳನ್ನು ಸುಡುವುದು, ಮುಗ್ಧತೆಯ ಪರಿಹಾರವಿದು, ಕಡುತಂಪಿನಲಿ ಮೈ ಬೆವರಿದೆ, ಮನೆ ಪುನಃ ಪುನಃ ಮರುಗಿದೆ, ಬಣ್ಣದ ಓಕುಳಿಯ ನಡುವಿನಲ್ಲಿ ಮನುಷ್ಯತ್ವ ಮಾಯವಾಗಿದೆ. ಅಮಾನುಷತೆ ಪ್ರತಿರೂಪ, ನೋಡಿಲ್ಲಿ ನಿಂತಿದೆ, ಪ್ರಾಣಿಗೂ ಮೀರಿದ ಕ್ರೌರ್ಯತೆ ಈಗಿಲ್ಲಿ ನಡೆದಿದೆ, ಮದವೇರಿದ ರಕ್ಕಸಮೃಗಕ್ಕೆ ಕಿತ್ತುತಿಂದ ಸಂತೃಪ್ತಿ ಇದೆ, ತೋಳಗಳ ನಡುವಿನಲಿ ಜಿಂಕೆಯೊಂದು ಅರೆಜೀವವಾಗಿದೆ. ಮರಿಯಾಗಿ ಅರಳಿ, ಕಿರಿಯಾಗಿ ಪ್ರೀತಿಸಿ, ಸಂಗಾತಿಯಾಗಿ ರಾಜಿಸಿ , ಮರವಾಗಿ ಸಲುಹಿ, ಗುರುವಾಗಿ ಬೋಧಿಸಿ, ಸ್ವತಂತ್ರವಾಗಿ ಗಗನಕ್ಕೇರೀ, ಆದರೆ…. ಆದರೆ… ಈಗ ಹೆಣ್ಣಾಗಿದ್ದಕ್ಕೆ ಮರುಗಿ…!!! ಛೆ ಹೀಗಾಯಿತೆ ಇವಳ ಬಾಳಿನ ನೌಕೆ, ದಡ ಸೇರುವ ಮುನ್ನವೇ ಮುರಿದು ಚೂರಾಗಿಹೋಯಿತೇ, ಎಂದು ಮರುಗಿದರೆ ಬರುವುದೇ ಸಫಲತೆ ??? ಇದು ಎಂದೆಂದಿಗೂ ಮುಗಿಯದ ಕತ್ತಲಿನ ಕಥೆ !!

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನಗಿಷ್ಟವಾದ ಕವಿತೆ ಕುರಿತು. ಕವಿತೆ ಕವಿಯಿತ್ರಿ-ಪ್ರೊ. ಗೀತಾ ವಸಂತ ಯೂಸ್ ಆಂಡ್ ಥ್ರೋ ಪೆನ್ನು ಬಂದಾಗ ಸಕತ್ತು ಸಂಭ್ರಮ. ಇಂಕು ತುಂಬುವ ರೇಜಿಗೆಯಿಲ್ಲ ನಿಬ್ಬು ಕೊರೆಯುವುದಿಲ್ಲ ಬಳಸು ಬಿಸಾಕು. ಬದುಕು ಎಷ್ಟು ಸರಾಗ.. ಆಮೇಲೆ ಬಂದೇ ಬಂದವು ಯೂಸ್ ಆಂಡ್ ಥ್ರೋ ಲೋಟ ತಟ್ಟೆ ಸಿರಿಂಜು ಹೆಂಡದ ಬಾಟಲು ಸ್ಯಾನಿಟರಿ ಪ್ಯಾಡು ಕಾಂಡೋಮು ಒಳಗೊಳಗೇ ಕೊಳೆತ ಸಂಬಂಧಗಳು ಬಣ್ಣ ಬಣ್ಣದ ರ್ಯಾಪರ್ ಹೊತ್ತವು.. ಪ್ರೇಮದ ನಶೆಯೇರಿಸಿದ್ದ ಅದೇ ಪೆನ್ನು ಲೆಕ್ಕವಿಲ್ಲದಷ್ಟು ಕವಿತೆಗಳ ತಿದ್ದಿ ತೀಡಿ ತಬ್ಬಿಕೊಂಡಾಗ ಎದೆಗೊದ್ದು ಖಾಲಿಯಾಯ್ತು ಕೊಟ್ಟ ಪೆಟ್ಟಿಗೆ ನೀಲಿಗಟ್ಟಿದ ಮೈಯ ಕಡೆಗಣ್ಣಲೂ ಕಾಣದೇ ನಿದ್ದೆಹೋಯ್ತು. ಎಷ್ಟು ಪರೀಕ್ಷೆಗಳ ಬರೆದಾಯ್ತು! ಸೋತಷ್ಟೂ ಎದ್ದುನಿಲ್ಲುವ ಹುಕಿಗೆ ಹಚ್ಚಿದ್ದು ಈ ಪೆನ್ನೇ.. ಆತ್ಮದಲಿ ಅದ್ದಿ ಬರೆದಕ್ಷರಗಳ ಅರಿಯದೇ ಹೋಯ್ತು. ಕೊನೆಯ ಅಕ್ಷರವೊಂದು ಕಲಸಿ ಕಣ್ಣೀರಲ್ಲಿ ಹಿಂಜಿಹೋಗುತ್ತಿರುವಾಗ ಹಾಡುತ್ತಲಿದ್ದಾನೆ ಕಸದ ಗಾಡಿಯವನು ಕರಗುವ ಕಸವ ತನ್ನಿ ಭೂಮಿಯ ಉಳಿಸಬನ್ನೀ.. ನಾ ಪೆನ್ನ ಬಳಸಿದೆನೋ ಪೆನ್ನು ಬಳಸಿತೋ ನನ್ನ! ಎಸೆಯಬಾರದ ಪೆನ್ನು ಚುಚ್ಚುತ್ತಿದೆ ಆತ್ಮಸಾಕ್ಷಿಯನು… ಕವಿಯತ್ರಿ : ಪ್ರೊ. ಗೀತಾ ವಸಂತ ಕವಿತೆ ಕುರಿತು:ಡಾ.ಸಂಗಮೇಶ ಎಸ್.ಗಣಿ ಪ್ರೊ. ಗೀತಾ ವಸಂತ ಅವರ ಈ ಮೇಲಿನ ಕವಿತೆ ಕುರಿತು ಒಂದಿಷ್ಟು…. ಭೌತಿಕ ವಸ್ತುಗಳನ್ನು ಬಳಸುವ ಮನುಷ್ಯ ಮೂಲತಃ ಭೋಗಜೀವಿ. ಈ ನಡುವೆಯೂ ಅವನು ತನ್ನ ಅಂತರಂಗ ಮತ್ತು ಆತ್ಮಶುದ್ಧಿಗೆ ಮಿಡಿಯುವುದೂ ಕೂಡ ಅಷ್ಟೇ ಆತ್ಯಂತಿಕ ಸತ್ಯ. ಲೌಕಿಕ ಮೋಹವನ್ನು ಮೀರುವ ಹಂಬಲ ಮನದೊಳಗೆ ಮೂಡಿ, ಕಾಡಿ ತುಡಿಯುತ್ತಲೇ ಇರುವುದು ಸಹಜವೇ. ಮನುಷ್ಯ ತನ್ನ ಅಂತಿಮ ಗಮ್ಯವನ್ನು ತಲುಪಲು ಆತುಕೊಳ್ಳುವ ಮಾಧ್ಯಮ ಮಾತ್ರ ಈ ಅಶಾಶ್ವತ ಕಾಯವೇ. ಆತ್ಮಿಕ ಆನಂದವನ್ನು ಅನುಭವಿಸಲು ಇಂದ್ರಿಯಗಳನ್ನು ನಿರಾಕರಿಸದ ಅಲ್ಲಮನ ತಾತ್ವಿಕತೆ  ಮನುಷ್ಯ ಬದುಕಿನುದ್ದಕ್ಕೂ ಕಾಡುವುದೂ ದಿಟವೇ ಆಗಿದೆ.  ಲೌಕಿಕ-ಅಲೌಕಿಕ, ಜೀವಾತ್ಮ-ಪರಮಾತ್ಮ,  ಭೋಗ- ತ್ಯಾಗ, ಯೋಗ, ಪಾಪ-ಪುಣ್ಯ, ಮೋಕ್ಷ ಇತ್ಯಾದಿ ತಾತ್ವಿಕ ಸಂಘರ್ಷಗಳ ಮಧ್ಯೆ ತೊಣೆಯುವ ಮನುಷ್ಯ ಭೌತಿಕತೆಗೆ ಆತುಕೊಳ್ಳುವುದು ಸಹಜ. ಮನುಷ್ಯ ಭೌತಿಕ ಸುಖವೇ ಜೀವನದ ಪರಮಸುಖ ಎಂಬ ಭ್ರಮೆಯಲ್ಲಿ ಬದುಕಲು ಶುರುಮಾಡಿದಾಗ ‘ಬಳಸು ಬಿಸಾಕು’ ಎಂಬ ನೆಲೆಗೆ ಬಂದು ತಲುಪಿದ. ಬಳಸಿ ಬಿಸಾಕುವಾಗ ಬದುಕು ಸರಳ ಮತ್ತು ಸುಂದರ ಅನ್ನಿಸಿತು. ಪರಿಕರಗಳನ್ನು ಉಪಯೋಗಿಸುತ್ತ ಸುಖಿಸುತ್ತ ನಡೆದ. ಸುಖ ಉಪಭೋಗಿಸುವ ವಸ್ತುಗಳಲ್ಲಿ ಇದೆ ಎಂದು ಬಲವಾಗಿ ನಂಬಿದ. ಮನಸ್ಸಿನ ಮಾತು ಕೇಳುತ್ತ ನಡೆದ ಮನುಷ್ಯ ಆತ್ಮದ ನುಡಿಗೆ ಕಿವುಡಾದ. ಇದು ಕೆಡಕು ಎಂದೂ ತಿಳಿಯದ ಭ್ರಮೆಯ ಸುಳಿಗೆ ಸಿಲುಕಿದ. ಜೀವನದಲ್ಲಿ ಕೆಲವೊಂದು ವಸ್ತುಗಳನ್ನು ಬಳಸುವುದು ಅವಶ್ಯ.  ಆದರೆ ಅವುಗಳನ್ನು ಬಳಸುವ ಕ್ರಮದಲ್ಲಿ ಎಚ್ಚರ ವಹಿಸುವುದೂ ತೀರ ಅತ್ಯವಶ್ಯ. ಈ ಹಿನ್ನೆಲೆಯಲ್ಲಿ ಸರಕು, ಸಂಬಂಧ, ಬದುಕು, ಲೇಖಕ, ಲೇಖನಿ, ಆತ್ಮಸಾಕ್ಷಿ ಹೀಗೆ ಬಹು ಆಯಾಮಗಳನ್ನು ಅನಾವರಣಗೊಳಿಸುವ ಪ್ರೊ. ಗೀತಾ ವಸಂತ ಅವರ ಕವಿತೆ ಗಮನಾರ್ಹ ಮತ್ತು ಮಹತ್ವದ್ದು ಅನ್ನಿಸಿತು.ಲೇಖಕನ ಆತ್ಮಸಾಕ್ಷಿಯನ್ನೇ ಮುಖ್ಯವಾಗಿಸಿಕೊಂಡ ಕವಿತೆ ಭೌತಿಕ ಸರಕುಗಳನ್ನು ಪ್ರಸ್ತಾಪಿಸುತ್ತ ಸಂಬಂಧಗಳ ಕೊಳಕುತನವನ್ನು ಕುರಿತು ಮಾತನಾಡುವುದು ವಿಶೇಷ ಎನಿಸುತ್ತದೆ. ಜೊತೆಗೆ ಆತ್ಮದ್ರೋಹದ ಕೆಲಸಗಳನ್ನು ಮಾಡುತ್ತಿರುವ ಸೂಕ್ಷ್ಮತೆಯನ್ನು ಕಾಣಿಸುವ ಕವಿತೆಯು ಬರೆಹಗಾರನ ಜವಾಬ್ದಾರಿಯನ್ನೂ ಹೇಳುವುದು ಗಮನಾರ್ಹ. ಪೆನ್ನು ಸೇರಿದಂತೆ ಲೋಟ, ತಟ್ಟೆ,ಸಿರಿಂಜು, ಹೆಂಡದ ಬಾಟಲು, ಸ್ಯಾನಟರಿ ಪ್ಯಾಡು, ಕಾಂಡೋಮು ಇತ್ಯಾದಿ ಬಳಸಿ ಬಿಸಾಕುವ ವಸ್ತುಗಳನ್ನು ಪ್ರತಿಮಿಸುವ ಕವಿತೆಯು, ಮನುಷ್ಯನ ಇಂದಿನ ಜೀವನದಲ್ಲಿ ಸಂಬಂಧಗಳು ತಲುಪಿದ ಕೊಳಕುತನವನ್ನು ಬಯಲು ಮಾಡುತ್ತದೆ. ಒಂದುಕಾಲಕ್ಕೆ ಪುರುಷ ಸಮಾಜದ ಭೋಗದ ವಸ್ತುವಾಗಿದ್ದ ಹೆಣ್ಣೂ ಬಳಸಿ ಬಿಸಾಕಲ್ಪಟ್ಟ ವಸ್ತುವಾಗಿ ಅನುಭವಿಸಿದ ತಪ್ತತೆಯೂ ಇಲ್ಲಿ  ಧ್ವನಿ ಪಡೆದಂತಿದೆ. ಜೀವನದಲ್ಲಿ ಪ್ರೇಮದ ನಶೆ ಏರಿಸಿದ ಪೆನ್ನು ಅಸಂಖ್ಯಾತ ಕವಿತೆಗಳನ್ನು ಹೊಸೆದು ತನ್ನ ತೆಕ್ಕೆಗೆ ಕರೆದುಕೊಳ್ಳುತ್ತದೆ ಎಂಬ ಭ್ರಮೆಯಲ್ಲಿರುವಾಗಲೇ ತನ್ನನ್ನು ಒದ್ದುಬಿಡುವ ಮೂಲಕ ಕವಿಗೆ ಭ್ರಮನಿರಶನ ಉಂಟುಮಾಡುತ್ತದೆ.ಈ ಬದುಕು ಅಕ್ಷರಶಃ ಪರೀಕ್ಷೆ. ಈ ಪರೀಕ್ಷೆಯಲ್ಲಿ ಸೋಲು, ನೋವು,ನಿರಾಶೆ, ಹತಾಶೆಯ  ಪ್ರಶ್ನೆಗಳಿಗೆ ಉತ್ತರಿಸಿ ಸೋತರೂ ಗೆಲುವಿನ, ಯಶಸ್ಸಿನ ಸರಿಯಾದ ಉತ್ತರಕ್ಕೆ ಹವಣಿಸುವ ಪೆನ್ನು ಬದುಕನ್ನು ಗೆಲ್ಲುವ ಜಿದ್ದಿಗೆ ಮನುಷ್ಯನನ್ನು ಈಡು ಮಾಡಿದ್ದೂ ಕೂಡ ಗಮನಾರ್ಹ. ಆತ್ಮರತಿಯಲ್ಲಿ ತೊಡಗಿಕೊಂಡ ಲೇಖಕನ ಆತ್ಮವಂಚನೆಯ ಆಯಾಮಗಳನ್ನು ದಾಖಲಿಸುವ ಕವಿತೆಯು, ಆತ್ಮದ ಅನುಭೂತಿಯನ್ನು ಅರ್ಥಮಾಡಿಕೊಂಡು ಲೇಖಿಸುವಲ್ಲಿ ಆತನ ಪೆನ್ನು ಸೋತಿರುವುದನ್ನು ಸೂಚಿಸುತ್ತದೆ. ಈ ಮೂಲಕ ಬರೆಹಗಾರನಾದವನು ಲೇಖನಿಯನ್ನು ಬಳಸುವಾಗ ಆತ್ಮದ್ರೋಹವನ್ನು ಮಾಡಿಕೊಳ್ಳಬಾರದೆಂಬ ಎಚ್ಚರಿಕೆಯೂ ಇದೆ. ಕೊನೆಯ ಅಕ್ಷರ ಕಣ್ಣೀರಲ್ಲಿ ಹಿಂಜಿಹೋಗುವಾಗ ಕಸದ ಗಾಡಿಯವನು ಕರಗುವ ಕಸವನ್ನು ಕೇಳುವುದರಲ್ಲಿ ಔಚಿತ್ಯವಿದೆ. ಆತ್ಮರತಿ, ಆತ್ಮದ್ರೋಹ ಮಾಡಿಕೊಳ್ಳುವ ಈ ಹಂತದಲ್ಲಿ ಉಪಭೋಗಿಸುವ ಭೌತಿಕ ಸರಕುಗಳೇ ಜೀವಕ್ಕೆ ಸರಳಗಳಾಗುವ ಅಪಾಯವನ್ನೂ  ಲೆಕ್ಕಿಸುವುದೊಳಿತು. ಅಷ್ಟಕ್ಕೂ ಪೆನ್ನನ್ನು ಬಳಸಿದ ಬರೆಹಗಾರ, ಬರೆಹಗಾರನನ್ನು ಬಳಸಿದ ಪೆನ್ನುಗಳ ನಡುವೆ ಒಂದು ತಾತ್ವಿಕ ದ್ವಂದ್ವ ಯಾವ ಕಾಲಕ್ಕೂ ಇದ್ದೇ ಇದೆ. ಈವರೆಗೂ ಆತ್ಮವಂಚಿತ ಬರೆಹಗಳನ್ನುಲೇಖಿಸಿದ ಪೆನ್ನು ಬದುಕಿನುದ್ದಕ್ಕೂ ಅವಶ್ಯವಿದೆ ಎಂಬ ಸತ್ಯವನ್ನು ಸಾರುವುದರ ಜೊತೆಗೆ ಅದನ್ನು ಆತ್ಮಸಾಕ್ಷಿಯ ವಿರುದ್ಧ ಬಳಸಬಾರದೆಂಬ ನಿಲುವೂ ಪ್ರತಿಪಾದಿತವಾಗಿದೆ.ಸಂಬಂಧಗಳು ಬಳಸಿ ಬಿಸಾಕುವ ಸರಕುಗಳಲ್ಲ. ಆತ್ಮಸಾಕ್ಷಿಯ ಸಂಬಂಧಗಳ ಅನುಭೂತಿಯನ್ನು ಲೇಖಿಸುವಲ್ಲಿ ಲೆಕ್ಕಣಿಕೆ ಧನ್ಯತೆ ಪಡೆಯಬೇಕು. ತನ್ಮೂಲಕ ಬರೆಹಗಾರನೂ ಮತ್ತು ಬರೆಹವೂ ಆತ್ಮಸಾಕ್ಷಿಯ ನೆಲೆಯಿಂದಲೇ ಅಭಿವ್ಯಕ್ತಿಗೊಳ್ಳಬೇಕು ಎಂಬುದೂ ಈ ಕವಿತೆಯ ಮುಖ್ಯ ಆಶಯ. ಬಳಸಲೇಬೇಕಾದ ಪೆನ್ನು ಆತ್ಮಸಾಕ್ಷಿಯನ್ನು ಚುಚ್ಚದಂತೆ ಇರಬೇಕಾದದ್ದೂ ವ್ಯಕ್ತಿ ಮತ್ತು ಸಮಷ್ಟಿ ದೃಷ್ಟಿಯಿಂದ ಹಿತವೂ ಉಚಿತವೂ ಆಗಿದೆ. ಆತ್ಮಸಾಕ್ಷಿಯನ್ನು ಧ್ವನಿಸುವುದೇ ಇಂದಿನ ಕಾವ್ಯದ ಒಟ್ಟು ಧೋರಣೆ ಆಗಿರಬೇಕೆಂಬುದು ಕವಿತೆಯ ಕೇಂದ್ರಕಾಳಜಿ. ವಿಶೇಷವಾದ ಕವಿತೆಯನ್ನು ಕಟ್ಟಿಕೊಟ್ಟ ಪ್ರೊ. ಗೀತಾ ವಸಂತ ಅವರ ಕವಿತೆಗಳು ಕನ್ನಡ ಕಾವ್ಯಲೋಕವನ್ನು ಇನ್ನಷ್ಟೂ ಅರ್ಥಪೂರ್ಣವಾಗಿ ವಿಸ್ತರಿಸುತ್ತಲಿರುವುದಕ್ಕೆ ಅವರನ್ನು ಅಭಿನಂದಿಸಲೇಬೇಕು.ಡಾ. ಸಂಗಮೇಶ ಎಸ್. ಗಣಿಕನ್ನಡ ಉಪನ್ಯಾಸಕರು,ಅಂಚೆ: ಸೂಳೇಬಾವಿತಾ : ಹುನಗುಂದಜಿ: ಬಾಗಲಕೋಟೆ 9743171324

ಕಾವ್ಯಯಾನ Read Post »

ಕಾವ್ಯಯಾನ

ಗಝಲ್

ಶಾಂತ ಜೆ ಅಳದಂಗಡಿ ನೀಡೆನಗೆ ನನ್ನೊಡೆಯ ನಿನ್ನೊಲುಮೆ ಬಾಳ ಪಥದಲಿ ಆಗಲೆನಗದು ಹಿರಿಮೆ ನಿನಗಾಗಿ ಮಿಡಿಯುತಿದೆ ಸಂತಸದೆ ನಾಡಿ ಬಾಳದಾರಿಯಲಿ ಅನುಕ್ಷಣ ಸಂತಸ ದೇವನಿತ್ತ ವರದೊಲುಮೆ ಬದುಕ ದಾರಿಯಲಿ ನೀ ಮಾರ್ಗಸೂಚಿ ಸಪ್ತನಾಡಿಗಳೂ ಅರಸುತಿವೆ ದಾರಿ ದೊರೆತರದುವೆ ಮನಕೆ ಸಂತಸ ನಿನ್ನೊಲವು ಜೀವಕದು ಗರಿಮೆ ಆಸೆ ಒಲೆ ಹೂಡಿ ಹಿಡಿದು ಅಗ್ನಿ ನಾಡಿ ಪ್ರೇಮ ಪ್ರೀತಿಯ ಪಾಕ ನಿನಗಾಗಿ ಅಟ್ಟಡಿಗೆ ಉಂಡರದುವೆನಗೆ ಸಂತಸ ಗಮ್ಯ ಸೇರಲು ಇದೆ ಪಯಣವೊಮ್ಮೆ ನಡೆವ ದಾರಿಗೆ ಚೆಲ್ಲುವೆ ಮಲ್ಲಿಗೆ ನಿನಗಾಗಿ ದೃಷ್ಟಿ ಸರಿಸದಿರು ಗೆಲುವ ನಾಡಿ ಮಿಡಿತವಿದು ಒಂದಾಗಿರಲು ಗಮ್ಯ ಸೇರೋ ಸಂತಸ

ಗಝಲ್ Read Post »

You cannot copy content of this page

Scroll to Top