ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಸಮಾಜಾರ್ಥಿಕ ಘಟಕಗಳು

ಪ್ರಗತಿಗಾಗಿ ಸ್ವಯಂ ಸ್ವಾವಲಂಬಿ ಸಮಾಜಾರ್ಥಿಕ ಘಟಕಗಳು ಗಣೇಶಭಟ್ ಶಿರಸಿ ಭಾರತದ ಆರ್ಥಿಕ ಸ್ಥಿತಿ ಆತಂಕಕಾರಿಯಾಗಿದೆಯೆಂಬುದನ್ನು ಸರ್ಕಾರ ಮತ್ತು ಅದರ ಹಿಂಬಾಲಕರು ಒಪ್ಪಲು ಸಿದ್ಧರಿಲ್ಲ.ಆದರೆ, ಕುಸಿಯುತ್ತಿರುವ ಉದ್ಯೋಗಾವಕಾಶಗಳು, ಕ್ಷೀಣಿಸುತ್ತಿರುವ ಖರೀದಿ ಶಕ್ತಿ, ಜನರನ್ನುಕಾಡುತ್ತಿರುವ ಅಭದ್ರತಾಭಾವ,ಏರುತ್ತಿರುವ ಬೆಲೆಗಳು, ಎಗ್ಗಿಲ್ಲದೇ ನಡೆಯುತ್ತಿರುವ ಬ್ಯಾಂಕ್ ವಂಚನೆಗಳು, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಗಳಿಂದ ದೇಶ ಬಾಧಿತವಾಗಿರುವುದನ್ನು ದೇಶ, ವಿದೇಶಗಳ ಸಾಮಾಜಿಕ-ಆರ್ಥಿಕ ತಜ್ಞರು ಗಮನಿಸುತ್ತಿದ್ದಾರೆ.ರಾಜಕಾರಣಿಗಳ ಪೊಳ್ಳು ಭರವಸೆಗಳನ್ನೇ ನಂಬಿರುವ ದೇಶದ ನಾಗರಿಕರು ಸಮಸ್ಯೆಗಳ ಪರಿಹಾರದ ನಿರೀಕ್ಷೆಯಲ್ಲಿ ದಿನದೂಡುತ್ತಿದ್ದಾರೆ. ಇಂದಿನ ಸಮಸ್ಯೆಗಳಿಗೆ ರಾಜಕೀಯ ಪಕ್ಷಗಳ ಬಳಿ ಯಾವುದೇ ಪರಿಹಾರವಿಲ್ಲ. ಪರಸ್ಪರರನ್ನು ದೂಷಿಸುವುದೇ ಸಮಸ್ಯೆಗೆ ಪರಿಹಾರವಲ್ಲವೆಂಬುದು ರಾಜಕೀಯ ಪಕ್ಷಗಳ ಧುರೀಣರಿಗೆ ತಿಳಿಯದ ವಿಷಯವಲ್ಲ; ಆದರೆ ಜನರಿಗೆ ಮಂಕುಬೂದಿ ಎರಚಲು ಇತರರನ್ನು ದೂರುವುದೇ ಅವರ ಬಳಿ ಇರುವ ಅಸ್ತ್ರ. ದೇಶದ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವ ಸಾಮಥ್ರ್ಯ ಮತ್ತು ಚಿಂತನೆಗಳು ಬಿಜೆಪಿಯ ಬಳಿ ಇಲ್ಲವೆಂಬುದನ್ನು ಆ ಪಕ್ಷದ ನಡೆಯೇ ಸಿದ್ಧಪಡಿಸುತ್ತದೆ. ಆರ್ಥಿಕ ಸಮಸ್ಯೆಗಳ ಕುರಿತು ಚರ್ಚಿಸುವ, ಸಲಹೆ ಪಡೆಯುವ ಬದಲಿಗೆ ಅನಗತ್ಯ ವಿಚಾರಗಳನ್ನು ಮುನ್ನೆಲೆಗೆ ತರುತ್ತಿರುವ ಬಿಜೆಪಿಯ ನಡೆ, ಅವರ ಚಿಂತನೆಗಳ ಮಿತಿಯನ್ನು ಹಾಗೂ ಸಮಸ್ಯೆಯನ್ನು ಎದುರಿಸಲಾಗದೇ ಓಡಿ ಹೋಗುವ ಮನಃಸ್ಥಿತಿಯನ್ನು ಪ್ರದರ್ಶಿಸುತ್ತಿದ್ದೆ. ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ತೊಂಬತ್ತರ ದಶಕದಲ್ಲಿ ಕಾಂಗ್ರೆಸ್ ಬಿತ್ತಿದ ಖಾಸಗೀಕರಣ, ಉದಾರೀಕರಣ, ಜಾಗತೀಕರಣಗಳೆಂಬ ವಿಷ ಬೀಜಗಳು ಇಂದು ಬಲಿತು, ಇಡೀ ಸಮಾಜವನ್ನೇ ಕಾಡಿಸುತ್ತಿವೆ. ಪ್ರತಿಯೊಂದು ಸಮಸ್ಯೆಗೂ ಕಾಂಗ್ರೆಸ್‍ನ್ನೇ ದೂಷಿಸುವ ಬಿಜೆಪಿ ಕಾಂಗ್ರೆಸ್ ಬಿತ್ತಿದ ವಿಷ ಬೀಜಗಳನ್ನೇ ನೀರು, ಗೊಬ್ಬರ ನೀಡಿ ಬೆಳೆಸುತ್ತಿದೆ. ಇವು ಕೇವಲ ಭಾರತಕ್ಕೆ ಮಾತ್ರವಲ್ಲ; ಇಡೀ ಜಗತ್ತಿನ ಆರ್ಥಿಕ ಪ್ರಗತಿಗೆ ಮಾರಕವಾಗಿವೆ. ಜಗತ್ತಿನಲ್ಲಿ ಆರ್ಥಿಕ ತಜ್ಞರಿಗೆ ಕೊರತೆಯಿಲ್ಲ. ಆದರೂ ಸಮಸ್ಯೆಗಳಿಗೆ ಪರಿಹಾರ ಕಾಣುತ್ತಿರಲಿಲ್ಲವೇಕೆ ಎಂಬುದೇ ಯಕ್ಷಪ್ರಶ್ನೆ. ಇದರ ಉತ್ತರ ತುಂಬಾ ಸರಳವಾದರೂ ಒಪ್ಪುವ ಮನಃಸ್ಥಿತಿಯನ್ನು ನಾವಿಂದು ಹೊಂದಿಲ್ಲ. ಕೆಲವೇ ವ್ಯಕ್ತಿ ಮತ್ತು ಸಂಸ್ಥೆಗಳ ಕೈಯಲ್ಲಿಯೇ ಸಂಪನ್ಮೂಗಳ ಹತೋಟಿ ಇರುವುದರಿಂದಲೇ ಸಂಪತ್ತಿನ ಕೇಂದ್ರೀಕರಣವಾಗುತ್ತಿದೆ ಹಾಗೂ ಅದರಿಂದಲೇ ಆರ್ಥಿಕ ಸಮಸ್ಯೆಗಳು ಪಾರಂಭವಾಗಿ ಮುಂದುವರಿಯುತ್ತದೆಯೆಂದು ಬಂಡವಾಳವಾದಿ ಚಿಂತಕರು ಒಪುತ್ತಿಲ್ಲ. ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳು, ಮಾನವ ಸಂಪನ್ಮೂಲ ಹಾಗೂ ಬಂಡವಾಳವನ್ನು ಬಳಸಿ ಉದ್ಯಮಿಗಳು ನಡೆಸುವ ಆರ್ಥಿಕ ಚಟುವಟಿಕೆಗಳಿಂದಾಗಿ ಆರ್ಥಿಕ ಪ್ರಗತಿಯಾಗುತ್ತದೆ ಎಂಬುದು ಬಂಡವಾಳವಾದಿ ಚಿಂತನೆ. ಸಂಪನ್ಮೂಲಗಳನ್ನು ಬಳಸುವ ಸಾಮಥ್ರ್ಯ ಎಲ್ಲರಿಗೂ ಇರುವುದಿಲ್ಲ, ಅದು ಕೆಲವರಿಗೆ ಮಾತ್ರ ಇರುತ್ತದೆಂದು ನಂಬಲಾಗುತ್ತದೆ. ಆದ್ದರಿಂದ ಸಂಪನ್ಮೂಲಗಳ ನಿಯಂತ್ರಣ ಮತ್ತು ಬಳಸುವ ಹಕ್ಕನ್ನು ಕೆಲವರಿಗೆ ಮಾತ್ರ ಮೀಸಲಿಡಲಾಗುತ್ತದೆ. ಇದರ ಪರಿಣಾಮವೆಂದರೆ ಲಾಭ ಗಳಿಕೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿರುವ ಉದ್ಯಮಿಗಳು, ಕೇಂದೀಕೃತÀ ಉತ್ಪಾದನೆಗೆ ಪ್ರಾಶಸ್ತ್ಯ ನೀಡಿ, ಉತ್ಪಾದನಾ ವೆಚ್ಚ ತಗ್ಗಿಸಲು ಬಯಸುತ್ತಾರೆ.. ಇಂತಹ ಸನ್ನಿವೇಶಗಳಲ್ಲಿ ಸ್ಥಳೀಯ ಸಂಪನ್ಮೂಲಗಳ ಬಳಕೆ ಮೂಲೆಗುಂಪಾಗಿ , ಕಚ್ಚಾವಸ್ತುಗಳೇ ಸಾವಿರಾರು ಕಿ.ಮೀಟರ್ ಪ್ರಯಾಣಿಸುವ ಪ್ರಸಂಗ ಎದುರಾಗುತ್ತದೆ. ಜಗತ್ತಿನ ಎಲ್ಲೆಡೆಯೂ ಸಂಪನ್ಮೂಲಗಳಿವೆ. ಅವುಗಳನ್ನು ಬಳಸುವ ಸಾಮಥ್ರ್ಯವು ಮಾನವರಿಗಿದೆ ಎಂದು ಬಂಡವಾಳವಾದಿ ಚಿಂತನೆ ನಂಬುವುದಿಲ್ಲ. ಇದರ ಪರಿಣಾಮವೆಂದರೆ ಕಚ್ಚಾ ವಸ್ತುಗಳನ್ನು, ಗುರ್ತಿಸುವಲ್ಲಿನ ವೈಫಲ್ಯ ಹಾಗೂ ಗುರ್ತಿಸಿದ ಸಂಪನ್ಮೂಲಗಳ ಅತಿಯಾದ ಬಳಕೆ. ಇಂತಹ ಸನ್ನಿವೇಶದ ಪರಿಣಾಮವೇ ಕೇಂದ್ರೀಕೃತ ಅರ್ಥವ್ಯವಸ್ಥೆ. ಮೇಲ್ಮಟ್ಟದಲ್ಲಿ ರೂಪುಗೊಂಡ ಯೋಜನೆಗಳು ತಳಮಟ್ಟಕ್ಕೆ ಹೇರಲ್ಪಡುತ್ತವೆ. ಕೇಂದ್ರೀಕೃತ ಅರ್ಥವ್ಯವಸ್ಥೆಯಲ್ಲಿ ಲಾಭ ಗಳಿಕೆಯ ಹೆಚ್ಚಳವೇ ಪ್ರಮುಖ ಉದ್ದೇಶವಾಗಿರುವದರಿಂದ,ಉತ್ಪಾದನೆಯೂ ಕೇಂದ್ರೀಕೃತಗೊಳ್ಳುತ್ತದೆ. ಇದರಿಂದಾಗಿ ನಗರೀಕರಣದ ಸಮಸ್ಯೆಗಳು, ಪರಿಸರ ಮಾಲಿನ್ಯ, ಸಾಮಾಜಿಕ ಸಂಘರ್ಷ, ಸಂಪನ್ಮೂಲಲಗಳ ಶೋಷಣೆ, ದುರುಪಯೋಗ ನಿರಂತರವಾಗಿ ನಡೆಯುತ್ತದೆ. ಇದಕ್ಕೆ ಆರ್ಥಿಕ ವಿಕೇಂದ್ರೀಕರಣವೇ ಪರಿಹಾರ. ಆರ್ಥಿಕ ಅಸಮಾನತೆಯ ವಿಷಯದಲ್ಲಿ ಭಾರತಕ್ಕೆ ಎರಡನೇ ಸ್ಥಾನವಿದೆ. ಮೊದಲ ಸ್ಥಾನ ರಷಿಯಾಕ್ಕೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕದ ಆಳ ಮತ್ತು ಅಗಲ ಹೆಚ್ಚಾಗುತ್ತಲೇ ಇದೆ. ಇದು ಬಂಡವಾಳವಾದಿ ವ್ಯವಸ್ಥೆಯ ಪ್ರಮುಖ ದೋಷವೂ ಹೌದು. ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ಅಳವಡಿಸಿಕೊಳ್ಳದಿದ್ದರೆ, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯೊಂದಿಗೆ ಹಲವು ಭಿನ್ನ ಆಯಾಮಗಳ ಅಸಮಾನತೆಯೂ ಜೋಡಣೆಯಾಗಿ ಸಾಮಾಜಿಕ ಸಂಘರ್ಷ, ಅಶಾಂತಿಗೆ ಕಾರಣವಾಗುತ್ತದೆ. ಯಾವುದೇ ದೇಶ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದರೆ, ದೇಶದ ಮೂಲೆ, ಮೂಲೆಯಲ್ಲೂ ಪ್ರಯೋಜನಕಾರಿ ಆರ್ಥಿಕ ಚಟುವಟಿಕೆ ಗರಿಗೆದರಬೇಕು. ಅಂದರೆ ಸ್ಥಳೀಯ ಸಂಪನ್ಮೂಲಗಳ ಲಭ್ಯತೆಯನ್ನು ಆಧರಿಸಿ ಕೃಷಿ, ಉದ್ಯಮ, ಸೇವಾಕ್ಷೇತ್ರಗಳು ರೂಪುಗೊಳ್ಳಬೇಕು. ಜಗತ್ತಿನ ಪ್ರತಿಯೊಂದು ಪ್ರದೇಶವೂ ಒಂದಿಲ್ಲೊಂದು ವಿಧದ ಸಂಪನ್ಮೂಲವನ್ನು ಹೊಂದಿದೆ. ಅದನ್ನು ಗುರ್ತಿಸುವ ಸಾಮಥ್ರ್ಯ ಮಾನವನಿಗಿದೆ. ಸಮರ್ಪಕವಾಗಿ ಬಳಸುವ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ. ಆರ್ಥಿಕವಾಗಿ ಭಾರತ ಸ್ವಾವಲಂಬಿಯಾಗಿರಬೇಕೆಂದು ಎಲ್ಲಾ ದೇಶಾಭಿಮಾನಿಗಳೂ ಬಯಸುತ್ತಾರೆ. ಘೋಷಣೆಗಳಿಂದ ಪಕ್ಕದ ದೇಶಗಳ ಕುರಿತು ದ್ವೇಷ ಬಿತ್ತನೆಯಿಂದ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುವುದಿಲ್ಲ. ಅದು ಕಾರ್ಯಸಾಧ್ಯವಾಗಲು ವ್ಯವಹಾರಿಕ ಯೋಜನೆಗಳು ಬೇಕು. ಹಲವು ವೈವಿದ್ಯತೆಗಳನ್ನು ಹೊಂದಿರುವ ಭಾರತದಲ್ಲಿ ಏಕರೂಪದ ಯೋಜನೆಯಿಂದ ಅಭಿವೃದ್ಧಿ ಮತ್ತು ಸ್ವಾವಲಂಬನೆ ಎರಡೂ ಸಾಧ್ಯವಿಲ್ಲ. ಪ್ರಾದೇಶಿಕ ಭಿನ್ನತೆ , ಪ್ರಾಕೃತಿಕ , ಭೌಗೋಳಿಕ ವೈಶಿಷ್ಟ್ಯತೆಗಳು ಹಾಗೂ ಸಾಮಾಜಿಕ ಅಂಶಗಳನ್ನು ಪರಿಗಣಿಸಿ ಆರ್ಥಿಕವಾಗಿ ಸ್ವಾವಲಂಬಿಯಾಗಬಲ್ಲ ಸಮಾಜಾರ್ಥಿಕ ಘಟಕಗಳನ್ನು ಗುರುತಿಸುವುದು ಅನಿವಾರ್ಯ. ಆರ್ಥಿಕ ಸ್ವಾವಲಂಬನೆ ಎಂದರೆ, ಯಾವುದೇ ಒಂದು ಪ್ರದೇಶದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ, ಆ ಪ್ರದೇಶದಲ್ಲಿ ವಾಸಿಸುವ ಪ್ರತಿಯೋರ್ವ ವ್ಯಕ್ತಿಗೂ ಫಲಪ್ರದವಾದ ಉದ್ಯೋಗ ಸೃಷ್ಟಿಸುವುದು. ದುಡಿಮೆಯ ಪ್ರತಿಫಲದಿಂದ ದುಡಿಮೆಗಾರ ಮತ್ತು ಅವರ ಅವಲಂಬಿತರ ಜೀವನದ ಕನಿಷ್ಠ ಅವಶ್ಯಕತೆಗಳಾದ ಆಹಾರ, ಬಟ್ಟೆ, ವಸತಿ, ಶಿಕ್ಷಣ ಮತ್ತು ಔಷದೋಪಚಾರ ಪಡೆಯುವ ಸಾಮಥ್ರ್ಯ ಇರುವಂತಾಗುವುದು ಹಾಗೂ ಜನರ ಜೀವನಮಟ್ಟ ನಿರಂತರವಾಗಿ ಏರುತ್ತಿರುವುದು. ಆ ಪ್ರದೇಶದ ಜನರ ದೈನಂದಿನ ಅವಶ್ಯಕತೆಗಳ ಪೂರೈಕೆ ಅಲ್ಲಿಯ ಸಂಪನ್ಮೂಲಗಳ ಬಳಕೆಯಿಂದಾಗಿಯೇ ಆಗಬೇಕಾದ ಸ್ಥಿತಿ. ಕೆಲವರು ಸ್ವಾವಲಂಬಿ ಗ್ರಾಮಗಳ ವ್ಯವಸ್ಥೆಯ ಕುರಿತು ಹೇಳುತ್ತಾರೆ. ಆದರೆ ಆಧುನಿಕ ಬದುಕಿನ ಅಗತ್ಯತೆಗಳನ್ನು ಹಾಗೂ ಗ್ರಾಮ ಮಟ್ಟದಲ್ಲಿ ಲಭ್ಯವಾಗುವ ಸಂಪನ್ಮೂಲಗಳ ಸೀಮಿತತೆಯ ಹಿನ್ನೆಲೆಯಲ್ಲಿ ಪ್ರತಿಯೊಂದು ಗ್ರಾಮವನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಲು ಸಾಧ್ಯವಿಲ್ಲ. ಲಭ್ಯ ಇರುವಷ್ಟನ್ನೇ ಉಂಡು, ಸಿಕ್ಕಿದ್ದನ್ನೇ ತೊಟ್ಟು, ಹೇಗಾದರೂ ಬದುಕುವುದನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ. ಗ್ರಾಮಗಳ ಮುಂದಿನ ಹಂತವೆಂದರೆ ತಾಲೂಕುಗಳು. ಇಂದು ಅಸ್ತಿತ್ವದಲ್ಲಿರುವ ತಾಲೂಕುಗಳು ರಾಜಕೀಯ ಘಟಕಗಳು. ಹೆಚ್ಚಿನ ತಾಲೂಕುಗಳÀಲ್ಲಿ ಲಭ್ಯವಿರುವ ಸಂಪನ್ಮೂಲಗಳಲ್ಲಿ ಸಾಮ್ಯತೆ ಇಲ್ಲ. ಆರ್ಥಿಕ ಸಮಸ್ಯೆಗಳು ಮತ್ತು ಅವಕಾಶಗಳಲ್ಲಿ ಏಕರೂಪತೆ ಇಲ್ಲದಿರುವುದರಿಂದ ವೈಜ್ಞಾನಿಕವಾಗಿ ಯೋಜನಾ ನಿರೂಪಣೆ ಸಾಧ್ಯವಾಗದು. ಇದಕ್ಕಾಗಿ ಇಂದಿನ ತಾಲೂಕುಗಳನ್ನು ಯೋಜನಾ ಬ್ಲಾಕ್‍ಗಳಾಗಿ ಮರುರೂಪಿಸುವ ಅಗತ್ಯವಿದೆ. ಭೌಗೋಳಿಕ ಅಂಶಗಳು, ಸಂಪನ್ಮೂಲಗಳ ಲಭ್ಯತೆ, ನದಿ, ಹಳ್ಳ, ಕೊಳ್ಳ , ಕೆರೆ, ಸಮಾನ ಆರ್ಥಿಕ ಸಮಸ್ಯೆಗಳು ಅವಕಾಶಗಳು ಮತ್ತು ಸಾಧ್ಯತೆಗಳನ್ನು ಆಧರಿಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದಾಗ, ಪ್ರತಿ ಬ್ಲಾಕ್‍ನ ಶೇಕಡಾ 80 ರಷ್ಟು ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸಬಹುದಾಗಿದೆ. ಜಿಲ್ಲಾ ಮಟ್ಟದಲ್ಲಿ ಕೂಡಾ ಇದೇ ರೀತಿಯ ಸಮಸ್ಯೆಗಳು ಇರುವುದರಿಂದ, ಅವು ಕೂಡಾ 100% ಸ್ವಾವಲಂಬಿ ಆರ್ಥಿಕ ಘಟಕಗಳಾಗಲಾರವು. ಆದರೆ, ವಿವಿಧ ಬ್ಲಾಕ್‍ಗಳ ನಡುವೆ ಸಮನ್ವಯತೆ ಸಾಧಿಸಲು ಜಿಲ್ಲಾಮಟ್ಟದಲ್ಲಿ ಯೋಜನೆಗಳು ಕ್ರೋಢೀಕೃತಗೊಳ್ಳಲೇಬೇಕು. ನಮ್ಮ ದೇಶದ ರಾಜ್ಯಗಳು ಭಾಷೆ ಮತ್ತು ರಾಜಕೀಯ ಅಂಶಗಳ ಆಧಾರದ ಮೇಲೆ ರೂಪುಗೊಂಡ ಆಡಳಿತ ಘಟಕಗಳು.ಕೆಲವೊಂದು ರಾಜ್ಯಗಳು ಬಹಳಷ್ಟು ದೊಡ್ಡದಾಗಿಯೂ , ವೈವಿದ್ಯಮಯವಾಗಿಯೂ ಇರುವುದರಿಂದ ಅಲ್ಲಿ ಕೂಡಾ ಆರ್ಥಿಕ ಸ್ವಾವಲಂಬನೆ ಸಾಧಿಸಲು ತೊಡಕುಗಳು ಬರುತ್ತವೆ. ಆಳವಾದ ಅಭ್ಯಾಸ, ಅಧ್ಯಯನ ಹಾಗೂ ವಿಶ್ಲೇಷಣೆಗಳಿಂದ ಭಾರತದಲ್ಲಿ 44 ಆರ್ಥಿಕವಾಗಿ ಸ್ವಾವಲಂಬಿಯಾಗಬಲ್ಲ ಪ್ರದೇಶಗಳನ್ನು ಅಂದರೆ ಸಮಾಜಾರ್ಥಿಕ ಘಟಕಗಳನ್ನು ಅರ್ಥಶಾಸ್ತ್ರಜ್ಞ ಶ್ರೀ ಪ್ರಭಾತ್ ರಂಜನ್ ಸರ್ಕಾರರು ಗುರ್ತಿಸಿದ್ದಾರೆ. ಇವುಗಳ ಕ್ಷೇತ್ರ ವ್ಯಾಪ್ತಿ ಕೆಲವೊಮ್ಮೆ ತೀರಾ ಚಿಕ್ಕದು ಅಥವಾ ದೊಡ್ಡದೂ ಆಗಿರಬಹುದು. ಕೆಲವು ಘಟಕಗಳು ಇಂದಿನ ರಾಜ್ಯದ ವ್ಯಾಪ್ತಿಯನ್ನು ಮೀರಿ ಪಕ್ಕದ ರಾಜ್ಯಕ್ಕೂ, ವಿಸ್ತರಿಸಿದರೆ ಕೆಲವು ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಅಂತಹ ಘಟಕಗಳಿವೆ. ಉದಾಹರಣೆಗಾಗಿಕರ್ನಾಟಕದಲ್ಲಿ ಮೂರು ಸಮಾಜಾರ್ಥಿಕ ಘಟಕಗಳನ್ನು ಗುರ್ತಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಜಿಲ್ಲೆಯ ಹೆಚ್ಚಿನ ಭಾಗ ಮತ್ತು ಪಕ್ಕದ ಕೊಡಗು ಜಿಲ್ಲೆಗಳನ್ನು ಸೇರಿಸಿ, ಸೂಕ್ತವಾದ ಅಭಿವೃದ್ಧಿಯ ಯೋಜನೆಯನ್ನು ರೂಪಿಸಿದಾಗ, ಇಷ್ಟೊಂದು ಚಿಕ್ಕ ಕ್ಷೇತ್ರ ( ಅದನ್ನು ತುಳುನಾಡು ಎನ್ನೋಣ) ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಲು ಸಾಧ್ಯವಿದೆ. ಉತ್ತರ ಕನ್ನಡದ ಕರಾವಳಿ ತಾಲೂಕುಗಳು , ಇಡೀ ಗೋವಾ ರಾಜ್ಯ ಮತ್ತು ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಿಗಾಗಿ ಒಂದೇ ವಿಧದ ಅಭಿವೃದ್ಧಿ ಯೋಜನೆಯನ್ನು ರೂಪಿಸಿದರೆ, ಆ ಪ್ರದೇಶವೂ ಸ್ವಯಂ ಸ್ವಾವಲಂಬಿ ಆರ್ಥಿಕ ಘಟಕವಾಗಿ ರೂಪುಗೊಳ್ಳಬಲ್ಲದು. ಉಳಿದಂತೆ ಇಡೀ ಕರ್ನಾಟಕ ಸ್ವಯಂ-ಸ್ವಾವಲಂಬಿ ಸಮಾಜಾರ್ಥಿಕ ಘಟಕವಾಗುವ ಸಾಮಥ್ರ್ಯ ಹೊಂದಿದೆ. ಸಮಾಜಾರ್ಥಿಕಘಟಕಗಳ ಅಸ್ತಿತ್ವವನ್ನು ಒಪ್ಪಿಕೊಳ್ಳುವುದೆಂದರೆ ರಾಜ್ಯಗಳ ಪುನರ್ವಿಂಗಡಣೆ ಮಾಡುವುದು ಅಥವಾ ಪ್ರತ್ಯೇಕತಾವಾದವನ್ನು ಪ್ರೇರೇಪಿಸುವುದು ಎಂಬುದಲ್ಲ; ಬದಲಿಗೆ ಇರುವ ವ್ಯವಸ್ಥೆಯಲ್ಲೇ ಪ್ರಾದೇಶಿಕ ವೈಶಿಷ್ಟ್ಯ ಆಧಾರಿತ ಯೋಜನಾ ನಿರೂಪಣಾ ವಿಧಾನವನ್ನು ಅಳವಡಿಸುವುದು. ಈಗ ಅನುಸರಿಸುತ್ತಿರುವ ಯೋಜನೆಗಳು ಕೇಂದ್ರೀಕೃತ ಮಾದರಿಯವು. ದೇಶ ಅಥವಾ ರಾಜ್ಯಮಟ್ಟದಲ್ಲಿ ರೂಪುಗೊಂಡು ಗ್ರಾಮಮಟ್ಟಕ್ಕೆ ಇಳಿದು ಬರುವಂತಹವು. ಶತಪ್ರತಿಶತ (100%) ಉದ್ಯೋಗಾವಕಾಶ ಸೃಷ್ಟಿಸುವ ಯೋಜನೆಯಾಗಲೀ, ಸ್ಥಳೀಯ ಸಂಪನ್ಮೂಲಗಳ ಬಳಕೆಯಿಂದ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಚಿಂತನೆಗಳಿಗಾಗಲೀ ಇಲ್ಲಿ ಆಸ್ಪದÀವೇ ಇಲ್ಲ. ತಳಮಟ್ಟದಲ್ಲಿ ಅಂದರೆ ಬ್ಲಾಕ್ ಮಟ್ಟದಲ್ಲಿ ರೂಪುಗೊಂಡು ಜಿಲ್ಲಾ ಮತ್ತು ಸಮಾಜಾರ್ಥಿಕ ಮಟ್ಟದಲ್ಲಿ ಕ್ರೋಢೀಕೃತಗೊಳ್ಳುವ ವಿಕೇಂದ್ರೀಕೃತ ಯೋಜನಾ ನಿರೂಪಣಾ ವಿಧಾನವನ್ನು ಅಳವಡಿಸಿದಾಗ ಆರ್ಥಿಕ ಪ್ರಗತಿಯ ವೇಗ ಹೆಚ್ಚುವುದು ಮಾತ್ರವಲ್ಲ, ಅದು ಎಲ್ಲರನ್ನೂ ಒಳಗೊಳ್ಳುತ್ತದೆ. ಸಮಾಜಾರ್ಥಿಕ ಘಟಕಗಳ ಸೀಮೆಯು ಶಾಶ್ವತವಲ್ಲ. ಅಕ್ಕಪಕ್ಕದ ಘಟಕಗಳು ಸ್ವಯಂ ಸ್ವಾವಲಂಬಿಗಳಾದ ನಂತರ ಅವು ಪರಸ್ಪರ ವಿಲೀನವಾಗಿ ತಮ್ಮ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳಬಹುದು.ಗ್ರಾಮದಲ್ಲಿರುವ ಪ್ರತಿಯೊಂದು ಕುಟುಂಬವೂ ಆರ್ಥಿಕವಾಗಿ ಸ್ವಾವಲಂಬಿ, ಸದೃಢವಾದಾಗ ಇಡೀ ಗ್ರಾಮ ಆರ್ಥಿಕವಾಗಿ ಪ್ರಗತಿ ಹೊಂದುವಂತೆ, ದೇಶದ ಎಲ್ಲಾ ಸಮಾಜಾರ್ಥಿಕ ಘಟಕಗಳೂ ಸ್ವಯಂಸ್ವಾವಲಂಬಿಯಾದಾಗÀ ಇಡೀ ದೇಶ ಆರ್ಥಿಕವಾಗಿ ಸ್ವಾವಲಂಬಿ ಹಾಗೂ ಬಲಿಷ್ಠವಾಗುತ್ತದೆ. ಲಾಭ ಗಳಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಯೋಜನೆಗಳನ್ನು ರೂಪಿಸುವ ಇಂದಿನ ಪದ್ಧತಿಗೆ ವಿದಾಯ ಹೇಳಿ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ, ಸ್ಥಳಿಯರೆಲ್ಲರಿಗೆ (100%) ಉದ್ಯೋಗ ಸೃಷ್ಟಿಸುವ ರೀತಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕಾಗಿದೆ. ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಬಲ್ಲ ಪ್ರದೇಶದಲ್ಲಿ ವಾಸಿಸುವವರನ್ನು ಸ್ಥಳೀಯರೆಂದು ಗುರ್ತಿಸಬೇಕು. ಉದಾಹರಣೆಗಾಗಿ ತುಳುನಾಡು, ಕನ್ನಡ ನಾಡು, ಆಂದ್ರಪ್ರದೇಶದ ರಾಯಲಸೀಮಾ ಪ್ರದೇಶ, ಮಹಾರಾಷ್ಟ್ರದ ವಿದರ್ಭ ಪ್ರದೇಶ, ತೆಲಂಗಾಣ ರಾಜ್ಯಗಳಿಗೂ ಸ್ವಯಂ ಸ್ವಾವಲಂಬಿ ಆರ್ಥಿಕ ಘಟಕವಾಗುವ ಸಾಮಥ್ರ್ಯವಿದೆ. ಕೃಷಿ, ಉದ್ದಿಮೆ, ವಿವಿಧ ಸೇವಾ ಕ್ಷೇತ್ರಗಳ ಮೇಲೆ ಅವಲಂಬಿತರಾಗಿರಬೇಕಾದ ಜನಸಂಖ್ಯೆಯ ಸ್ಥೂಲ ಪ್ರಮಾಣವನ್ನು ನಿರ್ಧರಿಸಿ, ಸಹಕಾರಿ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾÀಗೊಳಿಸಿದಾಗ ಆರ್ಥಿಕ ಪ್ರಗತಿ ನಿಶ್ಚಿತ. ಪ್ರಾದೇಶಿಕ ಭಿನ್ನತೆಯನ್ನು ಗುರ್ತಿಸಿ ಸಂಪನ್ಮೂಲಗಳ ಲಭ್ಯತೆಯನ್ನು ಆಧರಿಸಿ, ವಿಕೇಂದ್ರೀಕೃತ ಯೋಜನಾ ನಿರೂಪಣೆಯಿಂದಲೇ ಇಂದಿನ ಸಮಸ್ಯೆಗಳ ಪರಿಹಾರ ಸಾಧ್ಯ. ಟಾಂಗಾ ಕುದುರೆಯ ಕಣ್ಣಿಗೆ ಕಟ್ಟುವ ಅಡ್ಡಪಟ್ಟಿಯ ರೀತಿಯಲ್ಲೇ ಇಂದಿನ ಆರ್ಥಿಕ ತಜ್ಞರು, ತಮ್ಮ ಚಿಂತನೆಗಳನ್ನು ಬಂಡವಾಳವಾದದ ಚೌಕಟ್ಟಿಗೆ ಸೀಮಿತಗೊಳಿಸಿಕೊಂಡಿದ್ದಾರೆ. ಈ ಸಂಕುಚಿತತೆಯನ್ನು ಮೀರಿ ಯೋಚಿಸಿದಾಗ, ಇಂದಿನ ಗಂಭೀರ ಸಮಸ್ಯೆಗೆ ಅತಿ ಸರಳ ಪರಿಹಾರವಾದ ‘ವಿಶ್ವೈಕ್ಯ ದೃಷ್ಟಿಕೋನದ ಪ್ರಾದೇಶಿಕ ಅನ್ವಯಿಕತೆ’ ಅರ್ಥಾತ್ ‘ಜಾಗತಿಕವಾಗಿ ಯೋಚಿಸಿ, ಸ್ಥಳೀಯವಾಗಿಕಾರ್ಯನಿರ್ವಹಿಸುವ ವಿಧಾನಗಳು ಗೋಚರಿಸುತ್ತವೆ. ಸ್ಥಳೀಯ ಸಂಪನ್ಮೂಲಗಳ ಸಮರ್ಪಕ ಬಳಕೆಗಾಗಿ ಭಾಷೆ, ಸಂಸ್ಕøತಿ ಆಧಾರಿತ ಪ್ರಾದೇಶಿಕ ರಾಷ್ಟ್ರೀಯವಾದವೇ ಈ ಮಿಥ್ಯಾ ರಾಷ್ಟ್ರೀಯತೆಯನ್ನು ಹಿಮ್ಮೆಟ್ಟಿಸುವ ವಿಧಾನ. ಶಿಸ್ತುಬದ್ಧವಲ್ಲದ, ಗೊತ್ತುಗುರಿಯಿಲ್ಲದ ರೀತಿಯಲ್ಲಿ ಬಲಿಯುತ್ತಿರುವ ಪ್ರಾದೇಶಿಕತೆಯ ಭಾವವನ್ನು ಸ್ವಯಂ ಸಮೃದ್ಧ ಸಾಮಾಜಾರ್ಥಿಕ ಘಟಕಗಳನ್ನಾಗಿ ರೂಪಿಸುವಂತೆ ಪರಿವರ್ತಿಸುವುದೇ ಇಂದಿನ ಸಮಸ್ಯೆಗಳಿಗೆ ಪರಿಹಾರ. ಇದು ಅನಿವಾರ್ಯ ಕೂಡಾ. *******

ಸಮಾಜಾರ್ಥಿಕ ಘಟಕಗಳು Read Post »

ಇತರೆ

ನನಗೆ ಹೀಗನಿಸುತ್ತದೆ

ಕವಿತೆ ನನಗಿಷ್ಟ ಚಂದ್ರಪ್ರಭ ನನಗೆ ಹೀಗನಿಸುತ್ತದೆ…. ಕವಿತೆ ಬಗೆಗಿನ ಎಲ್ಲ ಆರಾಧನಾ ಭಾವಗಳಾಚೆ ಕವಿತೆ ಪುಸ್ತಕಗಳು ಅವಗಣನೆಗೆ ಒಳಗಾಗುವ ಸತ್ಯ ಬಹುಶಃ ಒಂದು ಕಾಲದ್ದಾಗಿಲ್ಲದಿರಬಹುದು. ಕವಿತೆ ಮೂಲತಃ ಒಂದು ಸಶಕ್ತ ಅಭಿವ್ಯಕ್ತಿ ಮಾಧ್ಯಮ. ಅದರ ಹರಿವಿನಗುಂಟ ಸಾಗುವಾಗ ಕೇಳಿಸುವ ಮೊರೆತವೂ ವಿಭಿನ್ನ. ಕವಿತೆ ನನಗೇಕೆ ಇಷ್ಟ ಎಂದೆನ್ನಿಸಿದ ಕ್ಷಣ ನನಗೆ ಹೀಗೆಲ್ಲ ತೋರಿತು… ಬಿಡುಗಡೆ ಗಾಗಿನ ಮನುಷ್ಯನ ಪ್ರಯತ್ನ ನಿರಂತರದ್ದು. ಒಂದಿಲ್ಲೊಂದು ಸಂಗತಿಯಿಂದ ಬಿಡುಗಡೆ ಹೊಂದುತ್ತ ಆಯುಷ್ಯವೇ ಕಳೆದು ಹೋಗುವುದು. ಯಾವುದರಿಂದ ಬಿಡುಗಡೆ, ಯಾರಿಂದ ಬಿಡುಗಡೆ, ಉಳಿದದ್ದು ಏನು, ಕಳಚಿಕೊಂಡದ್ದು ಏನನ್ನು ಎಂಬುದೆಲ್ಲ ಅಳವಿಗೆ ಸಿಗದೇ ಶೂನ್ಯತೆಯೊಂದು ಎದೆಯನ್ನು ಇರಿಯುವಾಗ.. ಎದೆಯಲ್ಲಿ ಉರಿಯುವಾಗ ಹನಿ ಹನಿ ಸಿಂಚನಗೈದು ಒಳಗಿನ ಆರ್ದ್ರತೆಯನ್ನು ಕಾಪಿಡುವ ಜೀವದಾಯಿನಿ ಕವಿತೆ. ಬದುಕಿನ ಬಗೆಗೆ ಭರವಸೆ ಉಳಿಯಲು ಇಷ್ಟು ಸಾಕಲ್ಲವೆ.. ಎಂಬ ಭಾವ ಮೂಡಿಸುವ ಸಂಗಾತಿ ಕವಿತೆ. ಹಿಂದೆಲ್ಲಾ ಎಷ್ಟು ನಿಧಾನವಾಗಿ ಬೆಳಗು ಆಗ್ತಿತ್ತು. ರಾತ್ರಿ ಕಳೆದು ಬೆಳಕಾಗುವಾಗ ಯುಗವೊಂದು ಸರಿದು ಹೋದ ಭಾವ ಮೂಡುವಷ್ಟು ನಿಧಾನ. ಬೆಳಕು ಹರಿದು ಮತ್ತೆ ಸಂಜೆಗತ್ತಲು ಕವಿಯುವಾಗಲೂ ಅಷ್ಟೇ, ಅಂದುಕೊಂಡ ಕೆಲಸಗಳೆಲ್ಲ ನೆರವೇರಿರುತ್ತಿದ್ದವು. ಈಗ ಹಾಗಿಲ್ಲ. ಓಡುತ್ತಿರುವುದು ಕಾಲುಗಳೊ ಕಾಲವೊ ಗೊತ್ತೇ ಆಗದ ವಿಚಿತ್ರ ಸನ್ನಿವೇಶ. ಸದಾ ಕಾಲವೂ ಮನಸ್ಸನ್ನು ಸತಾಯಿಸುವ ಎಂಥದೊ ಒಂದು ಪೀಡೆ, ಉದ್ವಿಗ್ನತೆ, ಅಶಾಂತಿ. ಯಾರಿಗೆ ಹೇಳಲಿ, ಏನು ಮಾಡಲಿ, ಹೊರಟುದೆಲ್ಲಿಗೆ, ದಾರಿ ಯಾವುದು ಎಂಬೆಲ್ಲ ಅಗಣಿತ ತುಂಡು ತುಂಡು ವಾಕ್ಯಗಳು. ಸಂತೆಯ ಸದ್ದಡಗಿ ಮೌನದೊಳು ಜಾರಿದ ಹೊತ್ತು ಸದ್ದೇ ಇಲ್ಲದೆ ಅರಳುವ ಪರಿಮಳ ಹೊತ್ತ ಮೊಗ್ಗು ಕವಿತೆ.. ಅಕ್ಷರಗಳು ಪದಗಳಾಗಿ ಪದಗಳು ಸಾಲುಗಳಾಗುವ ತಾಂತ್ರಿಕತೆಯೆಲ್ಲ ಮುಗಿವಾಗ ಆಂತರ್ಯದ‌ ಬೇಗುದಿ ಆವಿಯಾಗಿಯೊ ತೇವವಾಗಿಯೊ ಕರಗಿ ಹೋಗುವುದಿದೆಯಲ್ಲ ಅದು ಕವಿತೆಯ ಮೃದುವಾದ ಅಪ್ಪುಗೆ. ಹೀಗೆ ಹುಟ್ಟಿದ ಕವಿತೆ ಯಾರನ್ನೂ ಸೆಳೆಯಲಿಕ್ಕಿಲ್ಲ , ಅದನ್ನಾಲಿಸುವ ಕಿವಿಗಳು ಸಿಗಲಿಕ್ಕಿಲ್ಲ. ಆದರೆ‌ ತನ್ನೊಡನೆ ಏಕಾಂತವನ್ನು ಹಂಚಿಕೊಂಡ ಜೀವದ ಮೊರೆಯನ್ನು ನಿಶ್ಶಬ್ದವಾಗಿ ಆಲಿಸುತ್ತದೆ ಈ ಕವಿತೆ. ಬದುಕಿಗೆ ಬಣ್ಣ ತುಂಬದಿದ್ದರೂ ಬಣ್ಣ ಬಣ್ಣದ ಲೋಕದಲ್ಲಿ ಬದುಕು ಸಹ್ಯವಾಗುವಂತೆ ಮಾಡುತ್ತದೆ ಇದೇ ಕವಿತೆ. ಚೌಕಟ್ಟುಗಳನ್ನು ದಾಟುವುದನ್ನು, ಎಲ್ಲೆಗಳನ್ನು ಮೀರುವುದನ್ನು ಕಲಿಸುತ್ತದೆ ಈ ಕವಿತೆ. ನಾನು ಕರಗಿದಂತೆಲ್ಲ ಹುಟ್ಟುವ ವಿನಯದಿಂದ ಎಲ್ಲರೂ ನನ್ನವರು, ಎಲ್ಲವೂ ನನ್ನದು ಎಂಬ ಸರಳ ಸತ್ಯವನ್ನು ನುಡಿಯದೇ ನುಡಿದು ಬಿಡುತ್ತದೆ ಈ ಕವಿತೆ. ಮನುಷ್ಯರನ್ನು ಪರಿಚಯಿಸಿ ಮನುಷ್ಯನಾಗುವ ದಾರಿ ತೆರೆಯುತ್ತದೆ ಈ ಕವಿತೆ. ಯಾರಿಗೂ ಬೇಡವಾಗಿ ಪುಸ್ತಕದಲ್ಲೇ ಉಳಿದು ಬಿಡುವಾಗಲೂ ಕರೆದಾಕ್ಷಣ ಬಂದು ಬಿಡುವ, ಒದ್ದೆ ರೆಪ್ಪೆಗಳ ತೇವ ಸವರುವ ಸಖ/ಸಖಿ ಈ ಕವಿತೆ. ಮೌನವಾಗಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಲೇ ಸಾಗುವ ಸಹಪಥಿಕ ಕವಿತೆ. ಏನೊಂದನ್ನೂ ಮರು ನುಡಿಯದೆ ಬೆಳಗಿನ ಅರಿವಿನೆದುರು ಒಯ್ದು ನಿಲ್ಲಿಸಿ ಬಿಡುವ ಕವಿತೆ. ಮೌನ ಒಂದು ರಾಗವಾಗಿ, ಮೌನವೊಂದು ಗೀತೆಯಾಗಿ, ಮೌನ ಆಲಾಪವಾಗಿ ಮೌನವಾಗಿ ಬಿಡುವ ಆತ್ಮದ ಬೆಳಕು ಕವಿತೆ. ಆದ್ದರಿಂದ ಕವಿತೆ ನನಗಿಷ್ಟ…. *********

ನನಗೆ ಹೀಗನಿಸುತ್ತದೆ Read Post »

ಇತರೆ

ಜೀವನ್ಮುಖಿ

ಹೊಸ ವರ್ಷ ಹೊಸ ಹರ್ಷ ಜಯಲಕ್ಷ್ಮಿ ಕೆ. ಹೊಸ ವರ್ಷ -ತರಲಿ ಹರ್ಷ . “ಆದದ್ದು ಆಗಿ ಹೋಯ್ತು, ಮಣ್ಣಾಗಿ ಹೋದ ನನ್ನವರು ತಿರುಗಿ ಬರಲಾರರು. ಇರುವವನು ಇರುವಷ್ಟು ದಿನ ಬದುಕಬೇಕಲ್ಲ? ನನ್ನ ಗಾಡಿ, ನನ್ನ ಎತ್ತುಗಳೂ ಭೂಕಂಪದ ಅಂತರoಗ ಸೇರಿದ್ದರೆ ನನಗೆ ಕಷ್ಟವಾಗುತ್ತಿತ್ತು. ಪುಣ್ಯಕ್ಕೆ ಸ್ವಲ್ಪ ಹೊಲವೂ ಉಳಿದಿದೆ. ಬದುಕಬೇಕಾದ ನನ್ನ ಬದುಕಿಗೆ ಇಷ್ಟು ಸಾಕಲ್ಲ ….ಉಳಲು, ಬಿತ್ತಲು, ಮನೆಕಟ್ಟಲು …..” 1993 ರಲ್ಲಿ ಮಹಾರಾಷ್ಟ್ರದಲ್ಲಿ ಸಂಭವಿಸಿದ್ದ ಭಾರೀ ಭೂಕಂಪದಲ್ಲಿ ತನ್ನವರನ್ನೆಲ್ಲ ಕಳೆದುಕೊoಡಿದ್ದ ವೃದ್ದನೊಬ್ಬ ಪತ್ರಕರ್ತನ ಪ್ರಶ್ನೇಯೊoದಕ್ಕೆ ನೀಡಿದ ಉತ್ತರವಿದು. ಪ್ರಕೃತಿಯ ವಿಕೋಪಕ್ಕೆ ಬಲಿಯಾಗಿ ತತ್ತರಿಸಿ ಹೋಗಿದ್ದ ಲಾತೂರ್-ಉಸ್ಮಾನಾಬಾದ್ಗಳಲ್ಲಿ ಅಳಿದುಳಿದ ಜನರ ಸ್ಥಿತಿ -ಗತಿ ತಿಳಿದುಕೊಳ್ಳಲು ಹೋದ ಪತ್ರಕರ್ತನಿಗೆ ಎತ್ತಿನಗಾಡಿಯಲ್ಲಿ ಹೊಲದತ್ತ ಹೊರಟ ವೃದ್ದನೋರ್ವ ಕಣ್ಣಿಗೆ ಬಿದ್ದ. ತನ್ನ ಪ್ರಶ್ನೆಗಳಿಗೆ ಹತಾಶೆಯ ಶಿಖರದಿoದ ದುಃಖದ ಬುಗ್ಗೆಯನ್ನೇ ಚಿಮ್ಮಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಆತನಿಗೆ ಅಚ್ಚರಿಯಾಗಿತ್ತು! ಭೂತಕಾಲದ ನಶ್ವರತೆ -ಭವಿಷ್ಯದ ಬಗೆಗಿನ ವ್ಯರ್ಥ ಕಾಳಜಿ ಇವೆರಡನ್ನೂ ತೊರೆದು ವರ್ತಮಾನದಲ್ಲಿ ಬದುಕು ಸಾಗಿಸಬೇಕೆoಬ ಸತ್ವವನ್ನರುಹಿದ ಆ ವೃದ್ದ ಅವನಿಗೆ ತತ್ವಜ್ಞಾನಿಯoತೆ ಕಂಡಿದ್ದ. ” ನೆಲ ಕಚ್ಚಿ ನಿಲ್ಲು “ಎನ್ನುವ ಅಡಿಗರ ಸಾಲಿನ ಸಾರ ಇದುವೇ ಇರಬೇಕು. ಅದುವೇ ಜೀವನೋತ್ಸಾಹ. ಜೀವನ ಪ್ರೀತಿ ಅನ್ನೋದು ಒಂದು ಅಪರಾಜಿತ ಶಕ್ತಿ. ತನಗಾಗಿ ತಾನು ಬದುಕಬೇಕು ಎನ್ನುವ ವ್ಯಕ್ತಿಗೆ ಇರಲೇಬೇಕಾದ ಅಮೂಲ್ಯ ಆಸ್ತಿಯದು. ಈ ಉತ್ಸಾಹ-ಉಲ್ಲಾಸ ಅನ್ನೋದು ಎಲ್ಲಿoದಲೋ , ಯಾರಿಂದಲೋ ಪಡೆಯತಕ್ಕoತಹ ಅoಶವಲ್ಲ .ನಮ್ಮೊಳಗೇ ಸುಪ್ತವಾಗಿರುವ ಚೈತನ್ಯ. ಕೆಲವರು ಸದಾ ಕಾಲ ನಗುತ್ತಲೇ ಇರುತ್ತಾರೆ. ಹಾಗೆoದು ಅವರಿಗೆ ಸಮಸ್ಯೆಗಳೇ ಇಲ್ಲವೆoದಲ್ಲ ; ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಆಂತರಿಕ ಶಕ್ತಿ ಅವರಲ್ಲಿದೆ ಎಂದರ್ಥ. ಇನ್ನೈದು ನಿಮಿಷಗಳಲ್ಲಿ ಆಕಾಶವೇ ಕಳಚಿ ಬೀಳುತ್ತೆ ಎಂದರೆ ಆ ಐದು ನಿಮಿಷಗಳಲ್ಲಿ ಒಂದು ಕಪ್ ಕಾಫಿ ಹೀರಬಾರದೇಕೆ ..? ಎನ್ನುವ ಮನೋಭಾವದವರಿವರು. ಮಸಣದಲ್ಲೂ ಸಂತಸದ ಅಲೆಯನ್ನು ಹರಡಿದ “ನಗುವ ಬುದ್ಧ” ಅಥವಾ ಪು -ಟ್ಸೆ ಯ ವ್ಯಕ್ತಿತ್ವವನ್ನು ನಾವಿಲ್ಲಿ ನೆನೆಯಲೇಬೇಕು. ಝೆನ್ ಪದ್ಧತಿಯ ಶವ ಸಂಸ್ಕಾರಕ್ಕೆ ವಿರುದ್ಧವಾಗಿ “ನನ್ನ ಮೃತದೇಹವನ್ನು ಸುಡಬೇಕು ” ಎಂದು ಹೇಳಿದ್ದ ಈ “ನಗುವ ಬುದ್ಧ “ನ ಮಾತಿನಲ್ಲಿ ಒಂದು ವಿನೋದವಿತ್ತು. ಅದೇನೆoದರೆ, ಅವನು ತನ್ನ ಬಟ್ಟೆಯೊಳಗೆ ಪಟಾಕಿಗಳನ್ನು ತುoಬಿಕೊoಡಿದ್ದ. ಅವನ ದೇಹಕ್ಕೆ ಅಗ್ನಿ ಸ್ಪರ್ಶವಾಗುತ್ತಿದ್ದoತೆ ಸಿಡಿ ಮದ್ದು ಸಿಡಿಯಲಾರಂಭಿಸಿ ಸ್ಮಶಾನದಲ್ಲೂ ಹಬ್ಬದ ವಾತಾವಾರಣ ಸೃಷ್ಟಿಯಾಗಿತ್ತು. ಚಿಂದಿ ಬಟ್ಟೆಯ ಚೀಲ ಎನ್ನುವ ಅರ್ಥವನ್ನು ತನ್ನ ಹೆಸರಿನಲ್ಲಿ ಹುದುಗಿಸಿಕೊoಡಿದ್ದ ಪು -ಟ್ಸೆ ತಾನು ಹೋಗುವೆಡೆಗಳಿಗೆಲ್ಲ ಚೀಲ ತುoಬಾ ಸಿಹಿ ತಿoಡಿ ಒಯ್ದು, ಅವನ್ನೆಲ್ಲ ಮಕ್ಕಳಿಗೆ ಹಂಚಿ, ಚೀಲವನ್ನು ಆಗಸದೆತ್ತರಕ್ಕೆ ಎಸೆಯುತ್ತಾ ಜೋರಾಗಿ ನಗುತ್ತಿದ್ದ. ಅವನ ನಗುವಿನಲ್ಲಿ ಇತರರು ಪಾಲ್ಗೊಳ್ಳುವಷ್ಟರಲ್ಲಿ ತನ್ನ ಡೊಳ್ಳು ಹೊಟ್ಟೆಯ ಮೇಲೊಮ್ಮೆ ಕೈಯಾಡಿಸುತ್ತಾ ..ಸದ್ದಿಲ್ಲದೆ ನಗುತ್ತಾ ತನ್ನ ಚೀಲದೊoದಿಗೆ ಮತ್ತೊoದೂರಿಗೆ ಸಾಗುತ್ತಿದ್ದ. ಸಮಸ್ಯೆ ಎಂಬ ಚೀಲವನ್ನು ದೂರಕ್ಕೆಸೆದು ಸದಾ ನಗುತ್ತಿರಬೇಕು ಎನ್ನುವ ಆಶಯ ಅವನದಾಗಿತ್ತು.ತನ್ನ ವಿಚಿತ್ರ ರೂಪ -ವ್ಯಕ್ರಿತ್ವ ಬೇರೆಯವರಲ್ಲಿ ಯಾವ ಭಾವನೆ ಮೂಡಿಸೀತು ಎನ್ನುವ ಕಲ್ಪನೆ ಕೂಡಾ ಆತನಿಗಿರಲಿಲ್ಲ ..ಅದಕ್ಕೇ ಅವ ನಗುವ ಬುದ್ದನಾದ ! ಸೋಲಿಗೆ ಹತಾಶನಾಗದೆ, ಬದುಕಿನ ಏರಿಳಿತಗಳನ್ನು ಒಪ್ಪಿಕೊoಡು ನಡೆವ ವ್ಯಕ್ತಿ ಅನ್ಯರ ಹೊಗಳಿಕೆ -ತೆಗಳಿಕೆಗಳಲ್ಲಿ ತಾನು ಕಳೆದುಹೋಗುವುದಿಲ್ಲ.ಕಷ್ಟಗಳು ಬಂದರೂ ನಿವಾರಿಸಿಕೊoಡು ಮೈ ಕೊಡವಿ ನಿಲ್ಲುತ್ತಾನೆ.ಕೆಲವರು ತಮಗೆ ಬಂದ ಚಿಕ್ಕ -ಪುಟ್ಟ ಸಮಸ್ಯೆಗಳನ್ನೇ ಬೆಟ್ಟವಾಗಿಸಿಕೊoಡು ಅವರಿವರಿoದ ಪರಿಹಾರ ನಿರೀಕ್ಶಿಸುತ್ತಾರೆ. ತನ್ನೊಳಗೆ ತಾನು ಗಟ್ಟಿ ಇಲ್ಲದವನಿಗೆ ಯಾರ ಸಲಹೆಗಳೂ ಪರಿಹಾರವೆನಿಸದು. ಕೊಚ್ಚಿದಷ್ಟು ಹೆಚ್ಚಿ ಬರುವ ಪ್ರಕೃತಿಯoತೆ, ತುಳಿದ ಧೂಳು ಅವಮಾನವನ್ನು ಧಿಕ್ಕರಿಸಿ ನಮ್ಮ ಶಿರವೇರುವoತೆ, ಗೋಡೆಗೆಸೆದ ಚೆoಡು ಪುಟಿದು ಮತ್ತೆ ನಮ್ಮತ್ತ ಬರುವoತೆ ನಮ್ಮೆಲ್ಲರಲ್ಲೂ ಜೀವನೋತ್ಸಾಹ ಪುಟಿಯುತ್ತಿರಲಿ…ಹೊಸ ವರ್ಷ ಹರ್ಷದೊoದಿಗೆ ಆರoಭವಾಗಲಿ . *******

ಜೀವನ್ಮುಖಿ Read Post »

ಇತರೆ

ಬದುಕು

ಬದುಕು ತಂತಿಯ ಆಟ ಡಾ.ಗೋವಿಂದ ಹೆಗಡೆ ಮೊನ್ನೆ ೧೧ರಂದು ಅಪರಾತ್ರಿಯಲ್ಲಿ ಬೇಲೂರು ತಲುಪಿದ್ದು. ನಿನ್ನೆ ಬೆಳಿಗ್ಗೆ (೧೨/೧/೨೦) ಚೆನ್ನಕೇಶವನ ದರ್ಶನ ಮುಗಿಸಿ ಚಪ್ಪಲಿ ಸ್ಟ್ಯಾಂಡ್ ಗೆ ತೆರಳಿದೆ. ನಾಲ್ಕು ಹೆಜ್ಜೆ ಗಳ ದೂರದಲ್ಲಿ ಆ ವೃದ್ಧರು ಕೂತಿದ್ದರು. ಕೈಯಲ್ಲಿ ಮೇಲೆ ತೋರಿಸಿದ ಚಿತ್ರದ ತಂತಿಗಳ ಗೊಂಚಲು ‌‌. “ಯಜಮಾನರೇ ಏನಿದು” ಅಂದೆ. ಇವು ಪಜಲ್ಸ್ ಅಂದರು. ತಮ್ಮ ಕೈಯಲ್ಲಿ ಬಿಡಿಯಾಗಿ ಇರಿಸಿಕೊಂಡಿದ್ದ ತಂತಿಯ ಆಟಿಕೆಯನ್ನು ತೋರಿಸಿ “ನೋಡಿ ಈ ರಿಂಗ್ ಇದೆಯಲ್ಲ, ಇದನ್ನು ಹೊರತೆಗೆಯಬೇಕು” ಅಂತ ತೋರಿಸಿದರು. ಕುತೂಹಲದಿಂದ ಕೈಯಲ್ಲಿ ತೆಗೆದುಕೊಂಡು ನೋಡಿದೆ. ನಮ್ಮ ಬುದ್ಧಿಶಕ್ತಿಯನ್ನು ಕೆಣಕುವ ಸಾಧನಗಳು ಅವು. “ಅಜ್ಜಾ, ನೀವು ತಂದು ಮಾರತೀರಾ ಅಥವಾ ನೀವೇ ತಯಾರು ಮಾಡ್ತೀರಾ?” ಕೇಳಿದೆ.”ನಾನೇ ತಯಾರು ಮಾಡೋದು, ನಾನು ಫಜಲ್ ಮೇಕರ್” ಎಂದು ಉತ್ತರಿಸಿದರು. ಈಗ ಅವರನ್ನು ಮತ್ತಷ್ಟು ಗಮನಿಸಿದೆ. ಹಳೆಯದಾದರೂ ಶುಭ್ರವಾಗಿದ್ದ ಬಟ್ಟೆಗಳ, ಮಿಂಚು ಕಣ್ಣುಗಳ, ಎಪ್ಪತ್ತರ ಆಸುಪಾಸಿನ ವಯಸ್ಸಿನ ಈ ವೃದ್ಧರು ಜೀವನೋಪಾಯಕ್ಕಾಗಿ ಈ ಪಜಲ್ ಗಳನ್ನು ತಯಾರಿಸಿ ಹೀಗೆ ದೇಗುಲದ ಎದುರು ಬಿಸಿಲಿನಲ್ಲಿ ಕೂತು ಮಾರುವ ದೃಶ್ಯ… ಕರುಳು ಹಿಂಡಿತು. ಪ್ರಾಯಶಃ ಹೆಚ್ಚೇನೂ ಓದಿರದ ಅವರ ಬುದ್ಧಿಶಕ್ತಿ,ಕೌಶಲಗಳ ಬಗ್ಗೆ ಮೆಚ್ಚುಗೆ ಕೂಡ. “ಅಜ್ಜಾ, ಹೇಗೆ ಇವು” ಅಂದೆ. “ಒಂದಕ್ಕೆ ಇಪ್ಪತ್ತು ರೂಪಾಯಿ. ಹತ್ತರ ಗೊಂಚಲಿಗೆ ನೂರೈವತ್ತು” ಎಂದರು. ಆ ಗೊಂಚಲಿನ ಚಿತ್ರ ಇದು. ಬೇಲೂರಿಗೆ ಹೋದರೆ ನೀವು, ದೇಗುಲದ ಚಪ್ಪಲಿ ಸ್ಟ್ಯಾಂಡ್ ಬಳಿ ಅವರು ಸಿಕ್ಕರೂ ಸಿಗಬಹುದು. ಇಲ್ಲವೇ ಸ್ಟ್ಯಾಂಡ್ ನಲ್ಲಿನ ಅಶೋಕ್ ಅವರನ್ನು ಕೇಳಿ. ಅವರು ಕೃಷ್ಣಪ್ಪ,ಫಜಲ್ ಮೇಕರ್. ಅವರ ಬಳಿ ಫಜಲ್ ಕೊಂಡು ತನ್ನಿ. ನಿಮ್ಮ ಬುದ್ಧಿಶಕ್ತಿಯನ್ನು ಪರೀಕ್ಷಿಸಿಕೊಳ್ಳಿ. ಜೊತೆಗೆ ಈ ವಯಸ್ಸಿನಲ್ಲೂ ಸಕ್ರಿಯರಾಗಿರುವ ಅವರ ಕಾಯಕ ನಿಷ್ಠೆಗೆ,ಕೌಶಲಕ್ಕೆ, ನಿಮ್ಮದೂ ಒಂದು ಸೆಲ್ಯೂಟ್ ಇರಲಿ. ******* ಚಿತ್ರ-ಬರಹ : ಗೋವಿಂದ ಹೆಗಡೆ

ಬದುಕು Read Post »

ಇತರೆ

ಲಹರಿ

ಬೆಂಗಳೂರು ಬ್ಯಾಚುಲರ್ ಹುಡುಗರ ಡೇ ಡ್ರೀಮು ದೇವರಾಜ್ ಹೆಂಡ್ತಿ ಹೇಗಿರಬೇಕು…? ಹೆಂಡ್ತಿ ಆಗಿದ್ರೆ ಸಾಕ… ಜೀವನದ ಜೋಕಾಲಿಯಲ್ಲಿ ಮಗು ತರ ಇರ್ಬೇಕಲ್ವಾ. ಬ್ಯಾಚುಲರ್ ಜೀವನ ಒಂತರ ಬೋನ್ ಲೆಸ್ ಬೋಟಿ ಆಗೋಗಿದೆ .ಬ್ಯಾಚುಲರ್ ಅಂದ್ರೆ ಭಗವಂತ ಕೇರ್ ತಗೊಳಲ್ಲ. ಊರು ಮನೆ ಅಪ್ಪ ಅಮ್ಮ ತಂಗಿ ತಮ್ಮ ಅಕ್ಕ ನೆಂಟ್ರು ನಿಷ್ಠರು ಎಲ್ಲರನ್ನು ಬಿಟ್ಟು ಬಂದು ಬೆಂಗಳೂರಿನನಲ್ಲಿ ಬಂದು ಸಿಂಹದಂತೆ ಬದುಕವರು ಬ್ಯಾಚುಲರ್ ಹುಡುಗ್ರು. ತಿಂಗಳಿಗೊಂದು ಸಲ ಸಂಬಳ .ಮನೆ ರೆಂಟು ವಾಟರ್ ಬಿಲ್ಲು ಚೀಟಿ ಬಟ್ಟೆ ಅಂತ ನೂರಾರು ಖರ್ಚು .ಎದುರುಗಡೆ ಮನೆ ಆಂಟಿ ಮಗಳು. ಚುಡಾಯ್ಸಿದ್ರೆ ಹುಡ್ಗಿ ಕಡೆಯಿಂದ ಬಿಸಿ ಬಿಸಿ ಕಜ್ಜಾಯ. ಇದೆಲ್ಲ ಮಾಮೂಲು ಬೆಂಗಳೂರು ಅಂದ್ರೆ. ವಯಸ್ಸು ಮೀರುತ್ತ ಇರುತ್ತೆ ಮನೇಲಿ ಮದುವೆ ಮಾಡ್ಕೊ ಅಂತ ಒತ್ತಾಯ.ತಂಗಿ ಮದುವೆಗೂ ದುಡ್ಡು ಬೇಕು ಅಂತ ತಂದೆ ತಾಯಿ ಕೇಳೋದು ಮಾಮೂಲು. ಅದು ನಮ್ಮ ಧರ್ಮ.ಬರೋ ಸಂಬಳ ಕೈಗೆ ಸಿಗಲ್ಲ .ಏನೋ ಸಾಲ ಸೂಲ ಮಾಡಿ ತಂಗಿ ಮದುವೆ ಮಾಡ್ತಾರೆ..ಇನ್ನು ಇವನ ಮದುವೆಗೆ ಹಣಬೇಕು.ಸಾಲ ಮಾಡಲೇಬೇಕು ವಿಧಿ ಇಲ್ಲ.. ಮದುವೆ ಆಗೋ ಹುಡುಗಿ ಮೇಲೆ ಬಾನೆತ್ತರದ ಕನಸುಗಳು.ಬೊಂಬೆ ತರ ಇರ್ಬೇಕು .ಯಾವಾಗ್ಲೂ ನನ್ನ ಜೊತೆ ಇರ್ಬೇಕು. ಮದ್ವೆ ಛತ್ರದಲ್ಲೇ ಮಾಡ್ಕೋಬೇಕು. ಫ್ರೆಂಡ್ಸ್ಗೆಲ್ಲಾ ಪಾರ್ಟಿ ಕೊಡುಸ್ಬೇಕು. ಇದೆಲ್ಲ ಇದ್ದಿದ್ದೇ.ಮದುವೆ ಆದ್ಮೇಲೆ ಬೆಂಗಳೂರಿನಲ್ಲಿ ಚಿಕ್ಕ ಮನೆ ಲೀಜ್ ಹಾಕ್ಕೊಂಡು.ಹೆಂಡ್ತಿನ ಮನೇಲಿ ಇರುಸ್ಬೇಕು ಅಂತ ನೂರೆಂಟು ಚಿಂತನೆಗಳು. ಅತ್ತೆ ಮಗಳು ಆದ್ರೆ ಇರ್ಲಿ ಅಂತ.ಅತ್ತೆ ಮಗಳಿಗೆ ಮದ್ವೆ ಆಗೋಗಿದೆ ಬೇರೆ ಸಂಬಂದ ಆದ್ರು ಓಕೆ. ತೊಂದ್ರೆ ಇಲ್ಲ.ಹುಡ್ಗಿ ಚನಾಗಿ ಇದ್ರೆ ಸಾಕು. ವರದಕ್ಷಿಣೆ ಬೇಕಾದ್ರೆ ನಾವೇ ಕೊಟ್ಟು ಮಾಡ್ಕೊಂಡು ಬರೋಣ ಅಂತ ಹುಡುಗ್ರು.ಹುಡುಗ್ರು ಬಾನೆತ್ತರಕ್ಕೆ ಚಪ್ಪರ ಹಾಕ್ತಾರೆ ಅಂದ್ರೆ ಎರಡು ಮಾತಿಲ್ಲ .ಹು ಅನ್ಬೇಕು ಅಷ್ಟೇ…. ಮದ್ವೆ ಮಾಡ್ಕೊಂಡು ಬಂದ ಮೇಲೆ ಹೆಂಡ್ತಿನ ಮನೇಲಿ ಇರಸಿ ತಾನು ಕೆಲಸಕ್ಕೆ ಹೋಗೋದು… ಕೆಲ್ಸ ಮುಗ್ಸಿ ಬರ್ತಾ ಇದ್ದ ಹಾಗೆ ಒಂದು ಸಿಹಿ ಮುತ್ತು. ಬಿಸಿ ಬಿಸಿ ಕಾಫಿ .ಇಲ್ಲ ಅಂದ್ರೆ ತಣ್ಣನೆ ನೀರು… ಸಂಜೆ ಆದ್ಮೇಲೆ ಹೆಂಡ್ತಿಗೆ ಗೋಬಿ ಇಲ್ಲ ಅಂದ್ರೆ ಪಾನಿ ಪಾನಿಪುರಿ.ಇಲ್ಲ ಅಂದ್ರೆ ಹನಿಕೇಕ್ ಇಷ್ಟೇ ಸಾಕು. ರಾತ್ರಿ ಆದ್ರೆ ಊಟಕ್ಕೆ ಹಪ್ಪಳ ಜೊತೆಗೆ ಉಪ್ಪಿನಕಾಯಿ. ಪರಸ್ಪರವಾಗಿ ತುತ್ತು ತಿನಿಸೋದು. ಮಿಸ್ಸಾಗಿ ಒಂದು ಕಿಸ್ ಕೊಡೋದು ಇದೆಲ್ಲ ಮಾಮೂಲು. ವಾರಕ್ಕೊಂದು ಸಲ ಮಾಲು. ಹಬ್ಬ ಬಂದ್ರೆ ಊರಿಗೆ. ಆರು ತಿಂಗಳಿಗೊಮ್ಮೆ ಟ್ರಿಪ್. ವರುಶಕ್ಕೆ ಒಂದು ಮಗು ಹೆಣ್ಣು ಆದ್ರು ಸರಿ ಗಂಡು ಆದ್ರು ಸರಿ.ಅದರಲ್ಲಿ ವಾದ ಇಲ್ಲ.ದೇವರು ಕೊಟ್ಟ ವರ ಮಗು.ಆ ಮಗುನ ಜೋಕಾಲಿಯಲ್ಲಿ ಇಟ್ಟು ಅತ್ತಾಗ ಜೋಗುಳವಾಡಿ .ನಕ್ಕಾಗ ಮುತ್ತನಿಟ್ಟು ಪೋಷಿಸುವದು.ಸ್ವಲ್ಪ ದಿನದ ನಂತರ ಒಂದು ಚಿಕ್ಕ ಕಾರು.ಹಳ್ಳಿ ರೋಡಲ್ಲಿ ಅವ್ಳು .ಹೈವೇ ರೋಡಲ್ಲಿ ನಾವು ರೈಡ್ ಮಾಡೋದು .ಮಗುನ ಕಾರಿನಲ್ಲಿ ಜೋಕಾಲಿ ಕಟ್ಟಿ ಇಂಪಾದ ಹಾಡು ಹಾಕೋದು. ಅತ್ತಾಗ ಕೈನಲ್ಲಿ ಎತ್ತಿಕೊಂಡು ಮುದ್ಧಾಡೋದು. ಮಗುವಿಗೆ ಹೆಸರು ಸುಹಾಸ್ .ಮಗಳು ಹುಟ್ಟಿದ್ರೆ ಸುಹಾಸಿನಿ .ಬೇಡ ಅಂದ್ರೆ ಬೇರೆ ಹೆಸ್ರು .ಊರಲ್ಲಿ ಅಪ್ಪ ಅಮ್ಮನಿಗೆ ತಿಂಗಳಿಗೊಂದು ಸಲ ಮನೆ ಖರ್ಚಿಗೆ ಸ್ವಲ್ಪ ಹಣ ಕೊಡ್ಲೆಬೇಕು.ನಮ್ಮ ಧರ್ಮ. ಇನ್ನು ಏನೇನೋ ಕನಸುಗಳ ಹೊತ್ತ ಹುಡುಗ್ರು ಬೆಂಗಳೂರಿನಲ್ಲಿ ಬ್ಯಾಚುಲರ್ ಆಗಿ ಉಳಿದವ್ರೆ. *********

ಲಹರಿ Read Post »

ಇತರೆ

ಪ್ರಸ್ತುತ

ಕ್ಯಾಂಪಸ್ ಕೋಲಾಹಲ…… ಗಣೇಶ್ ಭಟ್ ಶಿರಸಿ ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ (ಜೆಎನ್‍ಯು) ಪುನಃ ಸುದ್ಧಿಯಲ್ಲಿದೆ. ವಿವಿಧ ಶುಲ್ಕಗಳ ಏರಿಕೆಯ ವಿರುದ್ಧ ಪ್ರತಿಭಟನೆ ನಡೆಸಿ, ಕೆಲವು ವಾರಗಳ ಹಿಂದೆ ಮಾಧ್ಯಮಗಳಿಗೆ ಆಹಾರವಾಗಿದ್ದ ಜೆಎನ್‍ಯುನಲ್ಲಿ ಮುಸುಕುಧಾರಿಗಳು ಪ್ರವೇಶಿಸಿ ವಿದ್ಯಾರ್ಥಿಗಳಿಗೆ ಹೊಡೆದು ಬಡಿದಿದ್ದಾರೆಂಬ ವಿಷಯ ಬಿತ್ತರವಾಗುತ್ತಿದೆ. ಕ್ಯಾಂಪಸ್‍ನಲ್ಲೇ ವಿದ್ಯಾರ್ಥಿಗಳಿಗೆ ರಕ್ಷಣೆ ಇಲ್ಲವೆಂಬ ವಿಷಯ ದೇಶದಾದ್ಯಂತ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಕೆರಳಿಸಿ, ಪ್ರತಿಭಟನೆ ನಡೆಸಲು ಕಾರಣವಾಗಿದೆ. ನಾಲ್ಕಾರು ದಶಕಗಳ ಹಿಂದೆ ವಿಶ್ವವಿದ್ಯಾಲಯಗಳಲ್ಲಿ ಸೈದ್ಧಾಂತಿಕ ಚರ್ಚೆಗಳು ಇರುತ್ತಿದ್ದವು. ಅಭಿಪ್ರಾಯ ಭೇದಗಳು ಇದ್ದವು. ಆದರೆ ಇಂದಿನ ರೀತಿಯ ಹೊಡೆದಾಟ, ಬಡಿದಾ ಟಗಳು ಇರುತ್ತಿರಲಿಲ್ಲ. ಅಂದು ಸೈದ್ಧಾಂತಿಕ ನಿಲುವುಗಳನ್ನು ತಳೆಯುವ ವೈಯಕ್ತಿಕ ಸ್ವಾತಂತ್ರ್ಯವನ್ನು ಯಾರೂ ಆಕ್ಷೇಪಾರ್ಹವೆಂದು ಪರಿಗಣಿಸುತ್ತಿರಲಿಲ್ಲ. ವಿದ್ಯಾರ್ಥಿಗಳ ನಡುವಿನ ವೈಯಕ್ತಿಕ ಸಂಬಂಧಕ್ಕೆ ಸೈದ್ಧಾಂತಿಕ ಅಭಿಪ್ರಾಯ ಭೇದಗಳು ತೊಡಕುಂಟು ಮಾಡುತ್ತಿರಲಿಲ್ಲ. ಯಾಕೆಂದರೆ ಇಂದಿನಂತೆ ರಾಜಕೀಯ ಪಕ್ಷಗಳು ಕ್ಯಾಂಪಸ್‍ನಲ್ಲಿ ಮೂಗು ತೂರಿಸಿರಲಿಲ್ಲ. ನನ್ನದೇ ಅನುಭವದಿಂದ ಈ ವಿಷಯವನ್ನು ಇಷ್ಟೊಂದು ದೃಢವಾಗಿ ಹೇಳಲು ಸಾಧ್ಯವಾಗುತ್ತಿದೆ. ಎಪ್ಪತ್ತರ ದಶಕದ ಪ್ರಾರಂಭದಲ್ಲಿ ನಾನು ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ ನಮ್ಮ ಕ್ಯಾಂಪಸ್‍ನಲ್ಲಿ ಪ್ರಮುಖವಾಗಿ ಮೂರು ಆರ್ಥಿಕ ಸಿದ್ಧಾಂತಗಳ ಕುರಿತು ಚರ್ಚೆ ನಡೆಯುತ್ತಿತ್ತು. ಬಂಡವಾಳವಾದವೇ ಶ್ರೇಷ್ಠ ಎಂದು ನಂಬಿದವರು, ಕಮ್ಯುನಿಸಂ ನಿಂದಲೇ ಸರ್ವ ಸಮಸ್ಯೆಗಳಿಗೂ ಪರಿಹಾರವೆಂದು ನಂಬಿದವರು ಹಾಗೂ ಇವೆರಡನ್ನೂ ಟೀಕಿಸುತ್ತಾ ವಿಕೇಂದ್ರಿಕೃತ ಸಹಕಾರಿ ಅರ್ಥ ನೀತಿಯಿಂದಲೇ ಅಭಿವೃದ್ಧಿಯೆಂದು ವಾದಿಸುವ ಪ್ರಉತವಾದಿಗಳು. ಪ್ರಗತಿಶೀಲ ಉಪಯೋಗ ತತ್ವ (ಪ್ರಉತ)ದನ್ವಯ ಬಂಡವಾಳವಾದ ಮತ್ತು ಕಮ್ಯುನಿಸಂಗಳೆರಡೂ ಒಂದೇ ನಾಣ್ಯದ ಎರಡು ಮುಖಗಳು. ಇವೆರಡೂ ಭೌತವಾದಿ ಸಿದ್ಧಾಂತಗಳು. ಮಾನವನ ಅಸ್ತಿತ್ವದ ಸಮಗ್ರತೆಯನ್ನು ಪರಿಗಣಿಸದ ಕೇಂದ್ರೀಕೃತ ಅರ್ಥವ್ಯವಸ್ಥೆಯ ಚಿಂತನೆಗಳು. ಕಮ್ಯುನಿಸಂ ಈ ಜಗತ್ತಿನಿಂದಲೇ ಮಾಯವಾಗಲಿದೆ (ಇದಾಗಲೇ ನಿಜವಾಗಿದೆ) ಬಂಡವಾಳವಾದವು ಪಟಾಕಿಯ ರೀತಿಯಲ್ಲಿ ಸಿಡಿದು ನಿಶ್ಯೇಷವಾಗಲಿದೆ (ನಿಜವಾಗುವ ದಾರಿಯಲ್ಲಿದೆ) ಎಂದು ಪ್ರಉತವಾದಿಗಳು ವಾದಿಸುತ್ತಿದ್ದರು. ಪ್ರಉತ ಎಂಬುದು ಆನಂದ ಮಾರ್ಗ ಸಿದ್ಧಾಂತದ ಒಂದು ಭಾಗ ಮಾತ್ರ. ಆನಂದ ಮಾರ್ಗದ ಕುರಿತು ಹಲವು ವಿಧದ ಅಪಪ್ರಚಾರಗಳು ತಾರಕಕ್ಕೇರಿದ ಸಂದರ್ಭವದು. ಕಾಲೇಜಿನ ಚರ್ಚಾಗೋಷ್ಠಿಗಳಲ್ಲಿ, ಹಾಸ್ಟೆಲ್‍ಗಳಲ್ಲಿ ನಡೆಯುತ್ತಿದ್ದ ಚರ್ಚೆಯ ಸಂದರ್ಭಗಳಲ್ಲಿ ಮೂರು ಸಿದ್ಧಾಂತಗಳ ಅನುಯಾಯಿಗಳು ಒಟ್ಟಿಗೇ ಕುಳಿತು ತಮ್ಮ ತಮ್ಮ ವಿಚಾರಧಾರೆಯನ್ನು ಪ್ರಕಟಿಸುತ್ತಿದ್ದರು. ಆಗಿನ್ನೂ ಪ್ರಾರಂಭವಾಗಿದ್ದ, ಕಮ್ಯುನಿಸಂನ ಉಗ್ರರೂಪವಾದ ನಕ್ಸಲ್‍ವಾದದ ಕುರಿತೂ ಬಹಿರಂಗ ಚರ್ಚೆಯಾಗುತ್ತಿತ್ತು. ಆದರೆ ಈ ಸೈದ್ಧಾಂತಿಕ ಒಲವುಗಳು, ವಿದ್ಯಾರ್ಥಿಗಳ ಅಧ್ಯಯನ ಅಥವಾ ವೈಯಕ್ತಿಕ ಸಂಬಂಧಗಳಿಗೆ ತೊಡಕಾಗಿದ್ದನ್ನು ನಾನು ಕಾಣಲಿಲ್ಲ. ಪ್ರಉತದ ಅನುಯಾಯಿಯಾಗಿದ್ದ ನನ್ನ ಸ್ನೇಹಿತರ ಬಳಗದಲ್ಲಿ ಕಟ್ಟಾ ಎಡಪಂಥೀಯರೂ ಇದ್ದರು. ಬಲಪಂಥೀಯರೂ ಇದ್ದರು. ಗುಂಪು ಅಧ್ಯಯನ ನಡೆಸುವಾಗ, ಗ್ರಂಥಾಲಯ ಬಳಸುವಾಗ ಪುಸ್ತಕ, ನೋಟ್ಸ್‍ಗಳನ್ನು ವಿನಿಮಯ ಮಾಡಿಕೊಳ್ಳುವಂತಹ ಯಾವ ಸಂದರ್ಭದಲ್ಲೂ ಈ ಸೈದ್ಧಾಂತಿಕ ಅಭಿಪ್ರಾಯ ಬೇಧ ನಮ್ಮನ್ನು ಕಾಡಲಿಲ್ಲ. ಅಂದಿನ ದಿನಗಳಲ್ಲಿ ಲಿಖಿತ ರೂಪದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಸೈಕ್ಲೋಸ್ಟೈಲ್ ಮಾಡಿ ಹಂಚುವುದೇ ಸುಲಭದ ದಾರಿಯಾಗಿತ್ತು. ಅವರವರ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ , ಹಾಸ್ಟೆಲ್ ವಾಸಿಗಳ ರೂಂಗಳಿಗೆ ತಲುಪಿಸಲಾಗಿತ್ತಿತ್ತು. ಇಷ್ಟ ಇದ್ದವರು ಓದುತ್ತಿದ್ದರು. ಆದರೆ ಯಾರದೂ ತಕರಾರು ಇರಲಿಲ್ಲ. ಇಂತಹುದೇ ಸನ್ನಿವೇಶ ಇತರ ಹಲವು ವಿಶ್ವವಿದ್ಯಾಲಯಗಳ ಕ್ಯಾಂಪಸ್‍ನಲ್ಲಿದ್ದವು. ಇದರರ್ಥ ಅಂದಿನ ವಿದ್ಯಾರ್ಥಿಗಳು ಪ್ರತಿಭಟಿಸುತ್ತಲೇ ಇರಲಿಲ್ಲವೆಂದಲ್ಲ. ಪ್ರತ್ಯೇಕ ತೆಲಂಗಾಣಕ್ಕಾಗಿ ನಡೆದ ಹೋರಾಟದಲ್ಲಿ ವಿದ್ಯಾರ್ಥಿಗಳು ಬಹುದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಿಂದಾಗಿ 1970-71 ರಲ್ಲಿ ಆಂಧ್ರಪ್ರದೇಶದ ಹಲವಾರು ಕಾಲೇಜುಗಳನ್ನು ಸುಮಾರು ಐದಾರು ತಿಂಗಳುಗಳ ಕಾಲ ಮುಚ್ಚಲಾಗಿತ್ತು. 1972-73 ರಲ್ಲಿ ಕೂಡಾ ಈ ಹೋರಾಟದ ಬಿಸಿಯನ್ನು ಮೂರು ತಿಂಗಳುಗಳ ಕಾಲ ವಿದ್ಯಾರ್ಥಿಗಳು ಅನುಭವಿಸಿದರು. ವಿಶೇಷವೆಂದರೆ, ಈ ಹೋರಾಟದಲ್ಲಿ ಧುಮಕಿದವರ ನಡುವಿನ ಸೈದ್ಧಾಂತಿಕ ನಿಲುವುಗಳು ಹೋರಾಟಕ್ಕೆ ಅಡ್ಡಿಯಾಗಲಿಲ್ಲ. ವಿದ್ಯಾರ್ಥಿಗಳ ನಡುವೆ ನಡೆಯುತ್ತಿದ್ದ ಸಂಘರ್ಷಗಳು ವೈಯಕ್ತಿಕ ನೆಲೆಯಲ್ಲಿ ಇರುತ್ತಿದ್ದವು. ಕಾಲೇಜು, ವಿಶ್ವವಿದ್ಯಾಲಯಗಳ ಚುನಾವಣೆಯಲ್ಲಿ ವ್ಯಕ್ತಿ ಕೇಂದ್ರಿತವಾಗಿದ್ದು, ರಾಜಕೀಯ ಪಕ್ಷಗಳ ಒಲವು, ಬೆಂಬಲ ಇರುತ್ತಲೇ ಇರಲಿಲ್ಲ. ಇಡೀ ಭಾರತದ ವಿದ್ಯಾರ್ಥಿಗಳು ದೊಡ್ಡ ಪ್ರಮಾಣದಲ್ಲಿ ಹೋರಾಟದಲ್ಲಿ ಪಾಲ್ಗೊಂಡಿದ್ದು 1974 ರ ಜೆ.ಪಿ.ಚಳುವಳಿಯಲ್ಲಿ. ಉತ್ತರ ಭಾರತದಲ್ಲಿ ತೀವ್ರವಾಗಿದ್ದ ಜೆಪಿ ಚಳುವಳಿಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಅಂದಿನ ರಾಜಕೀಯ ಧುರೀಣರ ಕಣ್ಣು ಕೆಂಪಗಾಗಿಸಲು ಕಾರಣವೆಂದರೆ ಅಧಿಕಾರದ ಗದ್ದುಗೆಯನ್ನು ಅಲುಗಾಡಿಸುವ, ಬದಲಿಸುವ ಹೋರಾಟ ಅದಾಗಿತ್ತು. ಇಂದಿನ ಬಹಳಷ್ಟು ರಾಜಕೀಯ ಧುರೀಣರು ವಿದ್ಯಾರ್ಥಿ ದಿಸೆಯಲ್ಲಿ ಅಂದಿನ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಜೆಪಿ ಆಂದೋಲನದ ಪರಿಣಾಮದಿಂದ 1975 ರ ತುರ್ತು ಪರಿಸ್ಥಿತಿ, 1977ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು ಈಗ ಇತಿಹಾಸ. ವಿದ್ಯಾರ್ಥಿ ಶಕ್ತಿಯನ್ನು ಗಮನಿಸಿದ ರಾಜಕೀಯ ಪಕ್ಷಗಳು, ಕ್ಯಾಂಪಸ್‍ನಲ್ಲಿ ಬೇರೂರುವ ಪ್ರಯತ್ನ ನಡೆಸಿದವು. ವಿದ್ಯಾರ್ಥಿ ಸಂಘದ ಚುನಾವಣೆಗಳಿಗೆ ರಾಜಕಾರಣಿಗಳ ಬೆಂಬಲ ದೊರಕತೊಡಗಿ, ಹಣದ ತೊರೆಯೂ ಹರಿಯ ತೊಡಗಿ, ವಿದ್ಯಾರ್ಥಿಗಳಿಗೂ ಭ್ರಷ್ಟಾಚಾರದ ರುಚಿ ತೋರಿಸುವ ಪ್ರಕ್ರಿಯೆ ಕಾಲೂರ ತೊಡಗಿತು. ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ನಡೆಯುತ್ತಿದ್ದ ಚರ್ಚೆಗಳ ಸ್ಥಾನವನ್ನು ರಾಜಕೀಯ ಪಕ್ಷಗಳ ಒಲವು ಆಕ್ರಮಿಸತೊಡಗಿತು. ವಿದ್ಯಾರ್ಥಿ ಸಂಘಟನೆಗಳು ನೇರವಾಗಿ ರಾಜಕೀಯ ಪಕ್ಷದೊಂದಿಗೆ ಗುರ್ತಿಸಿಕೊಳ್ಳತೊಡಗಿದವು. ಈ ಅಧಃಪತನಕ್ಕೆ ಯಾವುದೇ ಒಂದು ರಾಜಕೀಯ ಪಕ್ಷವನ್ನೂ ದೋಷಿಯಾಗಿಸುವುದು ಅಸಮಂಜಸ. ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಸಮಾನದೋಷಿಗಳು. ರಾಜಕಾರಣಿಗಳ ಅಧಿಕಾರ ದಾಹದ ದಾಳಕ್ಕೆ ವಿದ್ಯಾರ್ಥಿ ಸಮುದಾಯ ಕ್ರಮೇಣ ಬಲಿಯಾಗಿ ಇಂದಿಗೂ ಆ ಬಲೆಯಲ್ಲಿ ಸಿಲುಕಿದೆ. ಸಿದ್ಧಾಂತದ ಸ್ಥಾನವನ್ನು ಭಾವನಾತ್ಮಕ ಅಂಶಗಳು, ವಿನಾಕಾರಣದ ದ್ವೇಷ, ಅಸೂಯೆಗಳು ಆಕ್ರಮಿಸಿವೆ. ಎಡಪಂಥೀಯ ಚಿಂತನೆಯ ನೆಪದಲ್ಲಿ ವಿದ್ಯಾರ್ಥಿಗಳಲ್ಲಿ ದ್ವೇಷ ಹುಟ್ಟಿಸುವ ಕೆಲಸವನ್ನು ಕಮ್ಯುನಿಸ್ಟ್ ಪಕ್ಷಗಳು ಮಾಡುತ್ತಿವೆ. ಜಾತಿ, ಮತ, ಪಂಥ, ಹುಸಿ ದೇಶಾಭಿಮಾನಗಳನ್ನು ವಿದ್ಯಾರ್ಥಿಗಳ ಭಾವನೆ ಕೆರಳಿಸಲು ಬಲಪಂಥೀಯ ಪಕ್ಷಗಳು ಬಳಸುತ್ತಿವೆ. ವಿಶ್ವವಿದ್ಯಾಲಯಗಳು ಮಾತ್ರವಲ್ಲ, ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಕೂಡಾ ವಿಭಜಕ ಕ್ರಮಗಳು ಕಾಲೂರಿವೆ. ವಿದ್ಯಾರ್ಥಿ ಶಕ್ತಿಯ ಅರಿವುಳ್ಳ ಇಂದಿನ ರಾಜಕಾರಣಿಗಳು ತಮ್ಮ ಪಕ್ಷ ಅಥವಾ ತಮಗೆ ವಿದ್ಯಾಸಂಸ್ಥೆಗಳಲ್ಲಿ ಕಾಲೂರುವ ಅವಕಾಶ ಸಿಗದಿದ್ದಾಗ ಗುಂಡಾಗಿರಿಗೆ ಕುಮ್ಮಕ್ಕು ನೀಡುವ ನೀಚ ಕೆಲಸಕ್ಕೂ ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ಲೇಷಿಸಿದಾಗ ಜೆಎನ್‍ಯುದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಕಾರಣ ಸ್ಪಷ್ಟವಾಗುತ್ತದೆ. ಜಾಗತಿಕ ಪ್ರತಿಷ್ಠೆ ಪಡೆದಿರುವ ಭಾರತದ ಕೆಲವೇ ವಿಶ್ವವಿದ್ಯಾಲಯಗಳಲ್ಲಿ ಜೆಎನ್‍ಯು ಕೂಡಾ ಸೇರಿದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ, ಸಂಶೋಧನೆಯಲ್ಲಿ ಆಸಕ್ತಿ ಹುಟ್ಟಿಸುವಲ್ಲಿ ಜೆಎನ್‍ಯು ತನ್ನ ಛಾಪು ಮೂಡಿಸಿದೆ. ಮುಕ್ತ ಚಿಂತನೆಗೆ ಅಲ್ಲಿ ಸಾಕಷ್ಟು ಅವಕಾಶ ಇರುವುದರಿಂದ ಬಲಪಂಥೀಯರನ್ನು ಹಿಂದಿಕ್ಕಿ, ಎಡ ಪಂಥೀಯರು ವಿದ್ಯಾರ್ಥಿಗಳ ಒಲವು ಗಳಿಸುತ್ತಿದ್ದಾರೆ. ಅಭಿಪ್ರಾಯ ಭೇದ, ಭಿನ್ನ ಮತಗಳನ್ನು ಒಪ್ಪಲು ಸಿದ್ಧರಿಲ್ಲದ ಮತೀಯವಾದಿ ಬಲ ಪಂಥೀಯರಿಗೆ ಇದು ಸಹ್ಯವಾಗುತ್ತಿಲ್ಲ. ತಮ್ಮ ಅಭಿಪ್ರಾಯಗಳನ್ನು ಒಪ್ಪದವರನ್ನು ದೇಶದ್ರೋಹಿಗಳೆಂದು ಕರೆಯಲೂ ಹೇಸದ, ದ್ವೇಷದ ಗೋಡೆಗಳ ನಡುವೆ ತಮ್ಮ ಬುದ್ದಿಯನ್ನೇ ಬಂಧಿಸಿಟ್ಟಿರುವ ಜಡವಾದೀ ಚಿಂತಕರು ವಿಶ್ವವಿದ್ಯಾಲಯದಲ್ಲಿ ಪ್ರಾರಂಭವಾಗಿರುವ ಪ್ರತಿಭಟನೆಯನ್ನು ಹಿಂಸಾಚಾರಕ್ಕೆ ತಿರುಗಿಸುತ್ತಿದ್ದಾರೆ. ನಮ್ಮ ಶಿಕ್ಷಣ ಪದ್ಧತಿ, ಸಾಮಾಜಿಕ- ಆರ್ಥಿಕ ವ್ಯವಸ್ಥೆಗಳೂ ವಿಶ್ವವಿದ್ಯಾಲಯಗಳ ಇಂದಿನ ದುಃಸ್ಥಿತಿಯ ಕಾರಣಗಳು. ಪೂರ್ವ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರದವರೆಗೂ ವಿದ್ಯಾರ್ಥಿಗಳ ತಲೆಯಲ್ಲಿ ವಿಷಯಗಳನ್ನು ತುರುಕುವುದೇ ಇಂದಿನ ಶಿಕ್ಷಣ. ಕೆಲವೆಡೆ ತಾವು ಭಿನ್ನವಾಗಿ ಕಲಿಸುತ್ತಿದ್ದೇವೆಂದು ತೋರಿಸಿಕೊಳ್ಳುತ್ತಾರೆ. ಆದರೆ ಭಾರತದ ಇಂದಿನ ಶಿಕ್ಷಣ ವ್ಯವಸ್ಥೆ ಬ್ರಿಟಿಷರು ರೂಪಿಸಿದ ಗುಲಾಮಗಿರಿ ಶಿಕ್ಷಣದ ಮುಂದುವರಿಕೆಯೇ ಆಗಿದೆ. ಕಂದುಚರ್ಮದ ಭಾರತೀಯರಲ್ಲಿ ಒಂದಷ್ಟು ಮೇಲರಿಮೆ ಬೆಳೆಸಿ, ಜನಸಾಮಾನ್ಯರಿಂದ ಪ್ರತ್ಯೇಕಿಸಿ, ಬ್ರಿಟಿಷರ ಗುಲಾಮಗಿರಿ ಮಾಡುವುದನ್ನು ಅಂದು ಕಲಿಸಲಾಗುತ್ತಿತ್ತು. ಬ್ರಿಟಿಷರ ಸ್ಥಾನವನ್ನು ಬಂಡವಾಳಶಾಹಿಗಳಿಗೆ ನೀಡಿರುವುದಷ್ಟೇ ಇಂದಿನ ಬದಲಾವಣೆ. ವಿದ್ಯಾಭ್ಯಾಸ ಮಾಡುವ ಉದ್ದೇಶವೇ ನೌಕರಿ ಪಡೆಯುವುದು; ಬಂಡವಾಳಶಾಹಿಗಳೇ ಉದ್ಯೋಗದಾತರು, ಅವರಿಂದಲೇ ಉದ್ಯೋಗ ಸೃಷ್ಟಿಯೆಂಬ ಮಿಥ್ಯೆಯನ್ನು ವಿದ್ಯಾರ್ಥಿಗಳಲ್ಲಿ ತುಂಬಲಾಗುತ್ತಿದೆ. ಇದರಿಂದಾಗಿ ಪದವಿ ಪಡೆದೊಡನೆ ನೌಕರಿ ಸಿಗಬೇಕೆಂಬ ನಿರೀಕ್ಷೆ ವಿದ್ಯಾರ್ಥಿಗಳಲ್ಲಿದೆ. ಪದವಿ ಪಡೆದು ವರ್ಷಾನುಗಟ್ಟಲೇ ಕಾದರೂ ನೌಕರಿ ಸಿಗದಾಗ ಪದವೀಧರರಲ್ಲಿ ಮಾತ್ರವಲ್ಲ, ವಿದ್ಯಾರ್ಥಿಗಳಲ್ಲೂ ಸಿನಿಕತೆ ಬೆಳೆಯುತ್ತದೆ. ಇದರ ಪರಿಣಾಮವೇ ವಿದ್ಯಾರ್ಥಿ ಮತ್ತು ಯುವಕರಲ್ಲಿ ಅಶಿಸ್ತು , ನಿರಾಶಾವಾದ, ಉದ್ಯೋಗ ಅವಕಾಶ ದೊರಕಿದವರ ಕುರಿತಾದ ಅನಗತ್ಯ ದ್ವೇಷ ಬೆಳೆಯುತ್ತಿದೆ. ಇಂದಿನ ಬಹಳಷ್ಟು ವಿಶ್ವವಿದ್ಯಾಲಯಗಳ ಸಿಲೆಬಸ್‍ಗಳು ಉದ್ಯೋಗಾರ್ಹತೆಯನ್ನು ಬೆಳೆಸುವ ಬದಲಿಗೆ ಅದೇ ಹಳೆಯ ನಿರುಪಯುಕ್ತ ಪಾಠಗಳನ್ನು ಹೇಳುತ್ತಿವೆ. ಸರ್ಕಾರದ ಅನುದಾನಿತ ಶಾಲಾ, ಕಾಲೇಜುಗಳ ಶಿಕ್ಷಕರಲ್ಲಿ ಹೆಚ್ಚಿನವರಿಗೆ ಅಧ್ಯಾಪನ, ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಮೂಡಿಸುವದರಲ್ಲಿ ಆಸಕ್ತಿಯೇ ಇಲ್ಲವಾಗಿದೆ. ಅವರು ವಿದ್ಯಾರ್ಥಿಗಳಿದ್ದಾಗ ಕಲಿತ ವಿಷಯಗಳೇ ದಶಮಾನಗಳ ನಂತರವೂ ಇರುವುದರಿಂದ ತಮ್ಮ ಹಳೆಯ ಟಿಪ್ಪಣಿ, ನೋಟ್ಸ್‍ಗಳನ್ನೇ ಬಳಸಿ, ಕಾಟಾಚಾರದ ಪಾಠ ಮಾಡಿ ತೃಪ್ತರಾಗುತ್ತಾರೆ. ಯಾಕೆಂದರೆ ಅವರು ಮಾಡುವ ಪಾಠದ ಗುಣಮಟ್ಟ, ಅವರ ನಡತೆ, ವಿದ್ಯಾರ್ಥಿಗಳಿಗೆ ಅವರ ಬದುಕಿನ ಸಂದೇಶ ಏನೇ ಇದ್ದರೂ ಪ್ರತಿ ತಿಂಗಳು ಸಂಬಳ ತಪ್ಪುವುದಿಲ್ಲ. ವಿದ್ಯಾರ್ಥಿಗಳಲ್ಲಿ ಸ್ವಾವಲಂಬನಾ ಮನೋಭಾವ ಬೆಳೆಸುವ, ಇತರರ ಕುರಿತಾಗಿ ಪ್ರೀತಿ ಬೆಳೆಸುವ, ಸಹನೆ ಮೂಡಿಸುವ, ಶಿಕ್ಷಣ ವಿಧಾನವೇ ನಮ್ಮಲ್ಲಿ ಇಲ್ಲ. ಇದು ಸ್ಪರ್ಧಾತ್ಮಕ ಜಗತ್ತು ಎಂದೇ ವಿದ್ಯಾರ್ಥಿಗಳಲ್ಲಿ ತಲೆಯಲ್ಲಿ ತುಂಬುತ್ತಾರೆಯೇ ಹೊರತು ಇದು ಸಹಕಾರಾತ್ಮಕ ಜಗತ್ತು ಎಂಬುದನ್ನೇ ಕಲಿಸುವುದಿಲ್ಲ. ಇನ್ನೊಬ್ಬರನ್ನು ನಮ್ಮ ಅವಕಾಶಗಳನ್ನು ಕಸಿಯುವ ಪ್ರತಿಸ್ಪರ್ಧಿ ಎಂದೇ ಪರಿಗಣಿಸಲು ಕಲಿಸುತ್ತಿದ್ದೇನೆ. ವಿದ್ಯಾರ್ಥಿಗಳಲ್ಲಿ ಅಶಿಸ್ತನ್ನು ಗಮನಿಸಿ, ಪ್ರತಿಭಟನೆಗಳಲ್ಲಿ ಅವರು ಪಾಲ್ಗೊಳ್ಳುವುದನ್ನು ನೋಡಿದ ಹಲವರು ಶಿಕ್ಷಣಕ್ಕಾಗಿ ಸರ್ಕಾರ ವೆಚ್ಚ ಮಾಡುವುದನ್ನು ನಿಲ್ಲಿಸಬೇಕೆಂಬ ವಾದ ಮುಂದಿಡುತ್ತಾರೆ. ಅಮೇರಿಕಾ ಮತ್ತು ಇತರ ಹಲವು ದೇಶಗಳಲ್ಲಿ ಇರುವಂತೆ ಕಾಲೇಜು ಶಿಕ್ಷಣದ ವೆಚ್ಚವನ್ನು ವಿದ್ಯಾರ್ಥಿಯೇ ಭರಿಸುವ ಪದ್ಧತಿ ಬರಬೇಕೆಂದು ಸೂಚಿಸುತ್ತಾರೆ. ಆದರೆ ಇಂತಹ ವ್ಯವಸ್ಥೆ ಜಾರಿಗೆ ಬರುವ ಮೊದಲು, ಪಾಲಕರು ಅಥವಾ ವಿದ್ಯಾರ್ಥಿಗೆ ಉದ್ಯೋಗಾವಕಾಶದ ಭದ್ರತೆ ಇರಬೇಕೆಂದು ಅವರು ಯೋಚಿಸುವುದಿಲ್ಲ. ಬೌದ್ಧಿಕ ಶ್ರಮ ಮಾತ್ರ ಶ್ರೇಷ್ಠ, ದೈಹಿಕ ಶ್ರಮ ಕನಿಷ್ಠ ಎಂದು ತಪ್ಪಾಗಿ ಭಾವಿಸಿರುವ ನಮ್ಮ ಸಮಾಜದ ನಂಬಿಕೆ ಬದಲಾಗಬೇಕೆಂದು ಅವರಿಗೆ ಅನಿಸುವುದಿಲ್ಲ. ವ್ಯಕ್ತಿಯ ವಿದ್ಯಾಭ್ಯಾಸದ ಹೊಣೆಯನ್ನು ಸಮಾಜ ಅಥವಾ ಸರ್ಕಾರ ಹೊರದಿದ್ದರೆ, ಆ ವ್ಯಕ್ತಿಯಿಂದ ಸಾಮಾಜಿಕ ಹೊಣೆಗಾರಿಕೆಯನ್ನು ನಿರೀಕ್ಷಿಸುವ ಹಕ್ಕು ನಮಗೆ ಇದೆಯೇ? ಎಂದು ಚಿಂತಿಸಬೇಕಾಗುತ್ತದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಬಸ್ ಪಾಸ್ ನೀಡಿಕೆಯನ್ನು ನಾಗರಿಕರು ಅವಹೇಳನ ಮಾಡುವುದನ್ನು ಕಂಡಾಗ, ಬಸ್ ಕಂಡಕ್ಟರ್ (ಬಹುಶಃ ಅವರೂ ಇದರ ಲಾಭ ಪಡೆದಿರಬಹುದು) ಪಾಸ್ ಹೊಂದಿದ ವಿದ್ಯಾರ್ಥಿಗಳನ್ನು ತಿರಸ್ಕಾರದಿಂದ ನೋಡಿದಾಗ, ಸಮಾಜದ ಕುರಿತು ಒಳ್ಳೆಯ ಭಾವನೆ ಅವರಲ್ಲಿ ಮೂಡಲು ಸಾಧ್ಯವೇ? ಎಂಬ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವುದು ಉತ್ತಮ. ಅಧಿಕಾರ ಗಳಿಸುವುದು, ಅದರಿಂದ ಸಂಪತ್ತು ಗಳಿಸುವುದನ್ನೇ ಗುರಿಯಾಗಿಸಿಕೊಂಡಿರುವ ರಾಜಕಾರಣಿಗಳಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಪರಿವರ್ತನೆಯಾದೀತು, ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲೇ ತೊಡಗುವಂತಾದೀತೆಂದು ನಿರೀಕ್ಷಿಸುವುದು ವ್ಯರ್ಥ. ಸಮಾಜದ ಹಿತ ಚಿಂತಕರು , ಶಿಕ್ಷಣ ತಜ್ಞರು , ಮಾನವ ಪ್ರೇಮಿಗಳು ಮುಂದಾಗಿ ಒತ್ತಡ ಸೃಷ್ಟಿಸಿದಾಗ ಪರಿವರ್ತನೆಯ ಬೆಳಕು ಕಂಡೀತು. ಎಂತಹ ಶಿಕ್ಷಣ ಪದ್ಧತಿ ಬೇಕೆಂಬ ಕುರಿತು ಸಮರ್ಪಕ ತಿಳುವಳಿಕೆ ಇದ್ದಾಗ ಮಾತ್ರ ಸರಿಯಾದ ಶಿಕ್ಷಣ ಪದ್ಧತಿಯ ಅನುಷ್ಠಾನವಾಗುತ್ತದೆ. ತನ್ನನ್ನು ಈ ಬೃಹತ್ ವಿಶ್ವದ ಒಂದು ಭಾಗ, ಸಕಲ ಜೀವರಾಶಿಗಳ ಒಂದು ಕೊಂಡಿ ಎಂದು ಮಗು ಭಾವಿಸತೊಡಗಿದಾಗ ಜೀವನದ ದೃಷ್ಟಿಕೋನವೇ ಬದಲಾಗುತ್ತದೆ. ಪೂರ್ವ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಮನಸ್ಸನ್ನು ವಿಸ್ತಾರಗೊಳಿಸುವ ಶಿಕ್ಷಣ ನೀತಿಯನ್ನು ಪ್ರಾರಂಭಿಸುವುದು ಸೂಕ್ತ. ಯಾಕೆಂದರೆ ಆ ಹಂತದಲ್ಲಿಯೇ ಮಗು ಸರಿಯಾದ ರೀತಿಯಲ್ಲಿ ಯೋಚಿಸುವ ಸಾಮಥ್ರ್ಯ ಹೊಂದಿರುತ್ತದೆ. ಬಾಲ್ಯದಲ್ಲಿಯೇ ಯೋಗ, ಧ್ಯಾನಗಳನ್ನು ಕಲಿತ ಮಗು ಬೆಳೆದಾಗ ಜಾತಿ, ಮತ, ಪಂಥಗಳ ಸಂಕೋಲೆಯಲ್ಲಿ ಸಿಲುಕಿ ಬೀಳುವುದಿಲ್ಲ. ಈ ಪ್ರಪಂಚದಲ್ಲಿ ಎಲ್ಲರಿಗೂ ಬದುಕುವ ಅವಕಾಶವಿದೆ. ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳು ಎಲ್ಲರ ಬಳಕೆಗಾಗಿ ಇವೆ. ಇದು ಕೆಲವರದೇ ಸ್ವತ್ತಾಗುವುದು ನಿಸರ್ಗ ವಿರೋಧಿ ಕ್ರಮ; ಸಹಕಾರವೇ ಪ್ರಕೃತಿಯ

ಪ್ರಸ್ತುತ Read Post »

ಇತರೆ

ಶ್ರದ್ದಾಂಜಲಿ

ನಮ್ಮನ್ನಗಲಿದ ಸಾಹಿತಿ, ಸಂಶೋಧಕ, ಪ್ರೋ. ಎಂ.ಚಿದಾನಂದಮರ್ತಿ..! ಕೆ.ಶಿವು ಲಕ್ಕಣ್ಣವರ ಪ್ರೋ. ಎಂ.ಚಿದಾನಂದಮರ್ತಿ..! ಸಾಹಿತಿ, ಸಂಶೋಧಕ ಪ್ರೋ. ಎಂ.ಚಿದಾನಂದಮೂರ್ತಿ ಅವರ ಬಗೆಗೆ ಇತ್ತೀಚಿನ ಎಡಪಂಥೀಯರ ಏನೇ ತಕರಾರಿದ್ದರು. ಅದನ್ನೆಲ್ಲ ಬದಿಗಿರಿಸಿ ಅವರು ಕೊನೆ ಉಸಿರೆಳದ ಈ ಗಳಿಗೆಯಲ್ಲಿ ಅವರ ಕುರಿತು ಈ ಪುಟ್ಟ ಲೇಖನ ಸ್ಮರಣೆ… ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ಸಂಶೋಧಕ, ಪ್ರೋಫೆಸರ್​ ಚಿದಾನಂದ ಮೂರ್ತಿಯವರು ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇವತ್ತು ಬೆಳಗಿನ ಜಾವ 3.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು… ನಾಡಿನ ಹಿರಿಯ ಸಾಹಿತಿ, ಇತಿಹಾಸಜ್ಞ, ಹೋರಾಟಗಾರ, ವಿಶೇಷವಾಗಿ ಹಂಪೆಯ ಜೊತೆ ಬಹಳ ಆಪ್ತತೆ ಬೆಳೆಸಿಕೊಂಡಿದ್ದ, ಕನ್ನಡ ನಾಡಿನ ನೆಲ-ಜಲ-ಭಾಷೆ-ಸಂಸ್ಕೃತಿಯ ಕಾವಲುಗಾರನಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟದ್ದರು ಎಂ. ಚಿದಾನಂದಮೂರ್ತಿಯವರು… ಇಂದು ನಿಧನರಾದ ಹಿರಿಯ ಸಂಶೋಧಕ, ವಿದ್ವಾಂಸ, ಬರಹಗಾರ ಡಾ. ಎಂ.ಚಿದಾನಂದಮೂರ್ತಿ ಅವರು 1931ರ ಮೇ 10ರಂದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೆಕೋಗಲೂರಿನಲ್ಲಿ ಜನಿಸಿದ್ದರು. ಡಾ. ಎಂ.ಚಿದಾನಂದಮೂರ್ತಿ ಅವರು‌‌ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಕೋಗಲೂರು, ಸಂತೆಬೆನ್ನೂರಿನಲ್ಲಿ ಪಡೆದಿದ್ದರು. ಇಂಟರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 10ನೇ ಸ್ಥಾನಗಳಿಸಿದ್ದ ಅವರು, ಕನ್ನಡ ಆನರ್ಸ್ ಸೇರಿ 1953ರಲ್ಲಿ ಆಲ್ ಆನರ್ಸ್ ಚಿನ್ನದ ಪದಕ ಪಡೆದಿದ್ದರು… ಬಳಿಕ ಎರಡು ವರ್ಷ ಬೆಂಗಳೂರು, ತುಮಕೂರು, ಕೋಲಾರದ ಪದವಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. 1957ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿಯನ್ನು ಪ್ರಥಮ ಸ್ಥಾನದಲ್ಲಿ ಪಡೆದಿದ್ದರು… ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಮೇಲೆ ತೀ. ನಂ. ಶೀಕಂಠಯ್ಯನವರ ಮಾರ್ಗದರ್ಶನದಲ್ಲಿ 1964ರಲ್ಲಿ ಪಿ.ಎಚ್‌ಡಿ ಪದವಿ ಪಡೆದಿದ್ದರು… ವೃತ್ತಿಜೀವನದ ಆರಂಭದ ಕೆಲವು ವರ್ಷ ಪದವಿ ಕಾಲೇಜುಗಳ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಚಿದಾನಂದಮೂರ್ತಿಗಳು 1957ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. 1960ರ ಹೊತ್ತಿಗೆ ಮೈಸೂರಿನ ಮಾನಸಗಂಗೋತ್ರಿಯ ಸ್ನಾತಕೋತ್ತರ ಕನ್ನಡ ವಿಭಾಗದ ಪ್ರಾಧ್ಯಾಪಕರಾದರು. 1968ರವರೆಗೆ ಅಲ್ಲಿ ಪ್ರಾಧ್ಯಾಪಕರಾಗಿದ್ದರು. ಬಳಿಕ ಬೆಂಗಳೂರು ವಿಶ್ವವಿದ್ಯಾಲಯ ಸೇರಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. 1990ರ ಅಕ್ಟೋಬರ್ 10ರಂದು ಸ್ವಯಂ ನಿವೃತ್ತಿ ಪಡೆದಿದ್ದರು. ವೀರಶೈವ ಧರ್ಮ, ವಾಗರ್ಥ, ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ, ಪುರಾಣ ಸೂರ್ಯಗ್ರಹಣ ಸೇರಿ ಅನೇಕ ಕೃತಿಗಳನ್ನು ರಚಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಚಿದಾನಂದಮೂರ್ತಿ ಭಾಜನರಾಗಿದ್ದರು… ಹಂಪಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರದ್ದರು. ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕೆಂದು ಹೋರಾಟ ನಡೆಸಿದವರ ಪೈಕಿ ಚಿದಾನಂದಮೂರ್ತಿಯವರೂ ಪ್ರಮುಖರು. ಸುಮಾರು 1985ರ ಸಂದರ್ಭದಲ್ಲಿ ಸಾಹಿತಿಗಳ, ಕಲಾವಿದರ ಬಳಗದ ಮೂಲಕ ಆಗಿನ ಮುಖ್ಯಮಂತ್ರಿ, ಸಚಿವ ಸಂಪುಟ, ಶಾಸಕರ ಮೇಲೆ ಒತ್ತಡ ತಂದು ವಿಶ್ವವಿದ್ಯಾಲಯ ಸ್ಥಾಪನೆಗೆ ಓಡಾಡಿದ್ದರು… ಸಂಶೋಧನೆ, ಸಾಹಿತ್ಯ ಸೇವೆ ಜತೆ ಸಮಾಜ ಸೇವೆಯಲ್ಲೂ ಚಿದಾನಂದಮೂರ್ತಿ ಮುಂದಿದ್ದರು. ಬರ, ನೆರೆಯಂತಹ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ನೆರವಾಗಿದ್ದರು. ಉದಾಹರಣೆಗೆ, 2012ರಲ್ಲಿ ರಾಜ್ಯ ತೀವ್ರವಾಗಿ ಬರ ಎದುರಿಸಿದ್ದಾಗ ‘ಬರ ಪರಿಹಾರ ನಿಧಿ ಬಳಗ’ ಸ್ಥಾಪಿಸಿ ನೆರವಾಗಿದ್ದರು. ತೀವ್ರ ಬರಪೀಡಿತ ಪ್ರದೇಶಗಳಿಗೆ ಹೋಗಿ ಮೇವು ಧಾನ್ಯ ವಿತರಣೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು… ಹೀಗಿದ್ದ ಸಾಹಿತಿ ಎಂ.ಚಿದಾನಂದ ಮೂರ್ತಿ ಈಗ ನಮನ್ನು ಅಗಲಿದ್ದಾರೆ. ಅವರ ಬಗೆಗೆ ಎಡ ಪಂಥೀಯರ ಏನೇ ತಕರಾರು ಇದ್ದರೂ ನಮನ್ನು ಅಗಲಿದ ಎಂ.ಚಿದಾನಂದಮೂರ್ತಿಯವರಿಗಿದೋ ನಮನಗಳು… ***********

ಶ್ರದ್ದಾಂಜಲಿ Read Post »

ಇತರೆ

ಪ್ರಸ್ತುತ

16ನೇಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಕಲ್ಕುಳಿ ವಿಠಲ ಹೆಗಡೆಯವರ ಅಧ್ಯಕ್ಷ ಬಾಷಣ [15:50, 1/10/2020] H C. 2: ನಮ್ಮ ಶೃಂಗೇರಿಯ ಆದಿಕವಿ ಬಾಹುಬಲಿಯನ್ನು ಸ್ಮರಿಸುತ್ತಾ ನನ್ನ ಭಾಷಣವನ್ನು ಪ್ರಾರಂಭಿಸುತ್ತಿದ್ದೇನೆ. ಜಿಲ್ಲಾ ೧೬ನೇ ಕನ್ನಡ ಸಾ ಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪದವಿಯ ಈ ಗೌರವವನ್ನು ನಾನು ಬಯಸಿರಲಿಲ್ಲ; ನಿರೀಕ್ಷಿಸಿಯೂ ಇರಲಿಲ್ಲ. ಆದರೂ ನೀವೆಲ್ಲರೂ ಪ್ರೀತಿಯಿಂದ ಈ ಗೌರವ ನೀಡಿದ್ದೀರಿ. ಇದಕ್ಕಾಗಿ ನಾನು ನಿಮಗೆಲ್ಲರಿಗೂ ಅಭಾರಿಯಾಗಿದ್ದೇನೆ.. ನಾನು ಈ ಮೊದಲು ಸ್ಮರಿಸಿದ ಬಾಹುಬಲಿ ಎಂಬ ಜೈನ ಕವಿಯು, ಶೃಂಗೇರಿಯೂ ಆಡಳಿತಕ್ಕೊಳಪಟ್ಟಿದ್ದ ಕಾರ್ಕಳದ ದೊರೆ ಭೈರವೇಂದ್ರನ ಆಸ್ಥಾನದಲ್ಲಿ ಕವಿಯಾಗಿದ್ದನೆಂದು ಇತಿಹಾಸ ಹೇಳುತ್ತದೆ. ಈತನ ಗ್ರಂಥ ‘ನಾಗಕುಮಾರ ಚರಿತೆ’ಯಲ್ಲಿ ಮುಖ್ಯವಾಗಿ ಕರ್ಮಮಾರ್ಗದ ಪ್ರಸ್ತಾಪ ಬರುತ್ತದೆ. ನನ್ನದೂ ಕರ್ಮಮಾರ್ಗವೇ. ನಮ್ಮ ನೆಲ, ಜಲ ಮತ್ತು ನಮ್ಮ ಜನರಿಗೆ ಸರ್ಕಾರದಿಂದಲೇ ಆಗಲಿ, ಇನ್ಯಾರಿಂದಲೇ ಆಗಲಿ ಸಂಕಷ್ಟ ಬಂದಾಗಲೆ ಧ್ವನಿ ಎತ್ತುವ ಕಾಯಕ ಮಾಡಿದ್ದೇನೆ. ಅಗತ್ಯ ಬಿದ್ದಾಗ ಹೋರಾಟಕ್ಕಿಳಿದಿದ್ದೇನೆ. ಇದು ನನ್ನ ಕರ್ತವ್ಯವಾಗಿದೆ. ಈ ಅಧ್ಯ ಕ್ಷ ಸ್ಥಾನವು ಈ ಹಿಂದಿನ ನನ್ನೆ ಹೋರಾಟಕ್ಕೆ ಸಂದ ಗೌರವ ಎಂದು ಭಾವಿಸಿ ದ್ದೇನೆ . ನನ್ನ ಹೋರಾಟದ ಅನುಭವ ಮತ್ತು ಚಿಂತನೆಗಳು ನನ್ನ ಕೃತಿ, ಪ್ರಬಂಧ, ಲೇಖನಗಳಲ್ಲಿ ಅಭಿವ್ಯಕ್ತಗೊಂಡಿದ್ದು, ಅವೇ ಈ ವೇದಿಕೆಯನ್ನು ತಮ್ಮೆಲ್ಲರ ಅಭಿಮಾನದ ಮೇರೆಗೆ ದೊರಕಿಸಿಕೊಟ್ಟಿತ್ತೆಂದು ಕೊಳ್ಳುತ್ತೇನೆ. ನನ್ನನ್ನು ಆಯ್ಕೆಮಾಡಿದ ಜಿಲ್ಲ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯ ಕ್ಷರು, ಪದಾಧಿಕಾರಿಗಳಿಗೆ, ಅಭಿಮಾನಿಗಳಿಗೆ, ಸ್ನೇಹಿತರಿಗೆ, ಸಮಸ್ತರಿಗೆ ಮೊದಲಿಗೆ ಅಂತರಾಳದ ನಮಸ್ಕಾರ ತಿಳಿಸುತ್ತೇನೆ. ಶೃಂಗೇರಿ ಎಂದರೆ ಹಾವು ಗರ್ಭಿಣಿ ಕಪ್ಪೆಗೆ ನೆರಳು ನೀಡಿದ ಜಾಗ. ಸೌಹಾರ್ದತೆಯ ಪರಂಪರೆಗೆ ಇದಕ್ಕಿಂತ ದೊಡ್ಡ ಉದಾಹರಣೆ ನನಗಂತೂ ಸಿಕ್ಕಿಲ್ಲ. ಈ ಕಾರಣದಿಂದ ನನಗೆ ನನ್ನೂರಿನ ಬಗ್ಗೆ ಹೆಮ್ಮೆ ಎಲ್ಲರಿಗಿಂತಲೂ ಒಂದು ಹಿಡಿ ಹೆಚ್ಚು. ಇಂತಹ ನನ್ನೂರಿನಲ್ಲಿ ನಡೆಯುತ್ತಿರುವ ಈ ಕನ್ನಡ ಹಬ್ಬದಲ್ಲಿ ಈ ಗೌರವ ಪಡೆಯುತ್ತಿರುವುದರಿಂದ ಆಗುತ್ತಿರುವ ಸಂತೋಷವನ್ನು ಪದಗಳಲ್ಲಿ ಹೇಳಲಾರೆ. ಪ್ರಿಯ ಬಂಧುಗಳೇ, ಇದೊಂದು ಸಾಹಿತ್ಯ ಸಮ್ಮೇಳನ ಎಂಬುದಕ್ಕಿಂತ ಕನ್ನಡಿಗರ ಸ್ವಾಭಿಮಾನದ ಸಮಾವೇಶವಾಗಿ ಇತಿಹಾಸದಲ್ಲಿ ದಾಖಲಾಗಲಿದೆ. ಇದು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನವಾಗಿದ್ದರೂ, ಬುದ್ದಿಗೇಡಿಗಳಿಂದಾಗಿ ಅಖಿಲ ಕರ್ನಾಟಕ ಮಟ್ಟದಲ್ಲಿ ಸುದ್ದಿ ಮಾಡಿ ಪ್ರಚಾರ ಪಡೆದಿದೆ. ಎಷ್ಟೇ ಅಡೆ-ತಡೆಗಳು ಎದುರಾದರೂ ಇದರ ಯಶಸ್ಸಿಗಾಗಿ ಹಲವಾರು ಕನ್ನಡ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ದ್ದಾರೆ. ಅನೇಕರು ತಮ್ಮ ಕೈಯಲ್ಲಾದಷ್ಟು ಆರ್ಥಿಕ ನೆರವು ನೀಡಿದ್ದಾರೆ. ಆ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಎಸೆದ ಸವಾಲನ್ನು ದಿಟ್ಟವಾಗಿ ಎದುರಿಸಿದ್ದಾರೆ. ಇದು ನನ್ನಲ್ಲಿ ಹೋರಾಟದ ಕಾವನ್ನು ಇನ್ನಷ್ಟು ಹೆಚ್ಚಿಸಿದೆ ಎಂದಷ್ಟೇ ನಾನು ಈ ಸಂದರ್ಭದಲ್ಲಿ ಹೇಳಬ ಲ್ಲೆ. ನನ್ನನ್ನು ಈ ಸಮ್ಮೇಳನದ ಅಧ್ಯ ಕ್ಷ ರಾಗಿ ಆಯ್ಕೆ ಮಾಡಲಾಗಿದೆ ಎಂದು ಜಿ ಕಸಾಪ ಅಧ್ಯ ಕ್ಷ ರು ಮಾಹಿತಿ ನೀಡಿದ ಕೂಡಲೇ ನನ್ನ ನೆನಪಿಗೆ ಬಂದವರು, ಪರಂಪರೆಯ ಕಥೆಗಳನ್ನು ಮತ್ತು ಜೀವನಾನುಭವದ ಸಂಗತಿಗಳನ್ನು ಧಾರೆ ಎರೆದು ಪೋಷಿಸಿದ ನನ್ನ ಅಪ್ಪ-ಅಮ್ಮ, ಆನಂತರ ನನ್ನನ್ನು ಬೆಳೆಸಿದ ಪ್ರಗತಿಪರ ಚಳವಳಿ ಗಳು, ಸಾರ್ವಜನಿಕ ಬದುಕಿನ ಬವಣೆಗಳ ಮುಖಾಮುಖಿಗೆ ಬೆನ್ನೆಲುಬಾಗಿ ನಿಂತ ಕುಟುಂಬವರ್ಗ ಮತ್ತು ನನ್ನ ಸಂಗಾತಿಗಳು, ಸ್ನೇಹಿತರು. ಈ ಎಲ್ಲರಿಗೂ ನನ್ನ ನಮನಗಳು ಸಲ್ಲುತ್ತವೆ. ಈ ಆತಂಕದ ಸಂದರ್ಭದಲ್ಲಿಯೂ ದೂರ ದೂರದ ಊರಿನಿಂದ ಬಂದಿರುವ ಮತ್ತು ಇಲ್ಲಿಯ ಕನ್ನಡಾಭಿಮಾನಿಗಳಿಗೆ ನಾನು ಋಣಿ. ಏನನ್ನಾದರೂ ಬರೆದು ಓದಬೇಕೆಂದರೆ ನನಗೆ ಎಲ್ಲಿಲ್ಲದ ಹಿಂಜರಿಕೆ. ನಾನೆಂದೂ ಜನರೆದುರು ನಿಂತನಿಲುವಿನಲ್ಲಿ ಆಲೋಚಿಸುತ್ತಲೇ ಹೊಳೆದಂತೆ ಮಾತಾಡುವವನು. ಇಲ್ಲಿಯೂ ಹಾಗೆ ಮಾಡಬೇಕೆಂಬ ಆಸೆ ನನ್ನದಾಗಿತ್ತು. ಆದರೆ ಸತ್‌ಸಂಪ್ರದಾಯವನ್ನು ಮೀರಬಾರದೆಂಬ ಕಾರಣಕ್ಕೆ ಭಾಷಣವನ್ನು ಓದುತ್ತಿ ದ್ದೇನೆ. ಭಾಷಣ ಮಾಡುವುದಕ್ಕಿಂತ ಭಾಷಣ ಬರೆಯುವುದು ಹೆಚ್ಚು ತ್ರಾಸದ ಕೆಲಸವೆಂಬುದು ನನಗೆ ಕಳೆದ ಒಂದು ತಿಂಗಳಿನಲ್ಲಿ ಅರಿವಾಗಿದೆ. ನಾನು ಈ ಭಾಷಣವನ್ನು ನನ್ನೊಳಗೇ ಅಂದುಕೊಳ್ಳುತ್ತ, ತಿದ್ದಿಕೊಳ್ಳುತ್ತ, ಆಡಬೇಕೆಂದು ಅನ್ನಿಸುವ ಈ ನನ್ನ ಮಾತುಗಳು ಅವಶ್ಯಕವೇ? ಈಗಿನ ವಿದ್ಯಮಾನದಲ್ಲಿ ಎಷ್ಟು ಪ್ರಸ್ತುತವಾದೀತು ಎಂದು ಆಲೋಚಿಸುತ್ತ, ವಿಶ್ಲೇಷಿಸುತ್ತ ಕಾಲಕಳೆದಿ ದ್ದೇನೆ. ಅಧ್ಯ ಕ್ಷ ನಾಗಿ ಆಯ್ಕೆಯಾದದ್ದನ್ನು ತಿಳಿದ ದಿನದಿಂದಲೂ ಈಗ ಇಲ್ಲಿ ನಿಮ್ಮೆದುರು ಮಾತಾಡಲು ನಿಂತಿರುವ ಕ್ಷ ಣವನ್ನು ಆತಂಕದಿಂದ ಊಹಿಸಿಕೊಳ್ಳುತ್ತ ಕಳೆದಿ ದ್ದೇನೆ. ಈ ಹೊತ್ತಲ್ಲಿ ನಿಮ್ಮ ಮುಂದೆ ಆಡಲೇ ಬೇಕಾಗಿರುವ ಹಲವು ಮಾತುಗಳು ನನ್ನ ಮುಂದಿವೆ. ಅವುಗಳಲ್ಲಿ ಕೆಲವು ವಿಷಯಗಳನ್ನು ಮಾತ್ರ ನಾನಿಲ್ಲಿ ಪ್ರಸ್ತಾಪಿಸುತ್ತೇನೆ. ಆತ್ಮೀಯ ಕನ್ನಡ ಪ್ರೇಮಿಗಳೇ, ಸಾಹಿತ್ಯ ಸಮ್ಮೇಳನಗಳು ಕನ್ನಡ ನುಡಿ ಜಾತ್ರೆಗಳಾಗಿವೆಯೇ ಹೊರತು, ಕನ್ನಡಿಗರ ಧ್ವನಿಯಾದ ಉದಾಹರಣೆಗಳು ಬಹಳ ಕಡಿಮೆ. ಇನ್ನು ಸಮ್ಮೆಳನಾಧ್ಯ ಕ್ಷರ ಭಾಷಣದಲ್ಲಿನ ವಿಷಯಗಳನ್ನು ಮುಂದಿಟ್ಟುಕೊಂಡು ಗಂಭೀರ ಚರ್ಚೆ ನಡೆಸಿದ್ದಿಲ್ಲ. ಅಧ್ಯಕ್ಷೀಯ ಭಾಷಣದಲ್ಲಿನ ಬೇಡಿಕೆ, ಅಹವಾಲುಗಳಾಗಲೀ, ಅಥವಾ ಸಾವಿರಾರು ಕನ್ನಡಿಗರ ಸಮ್ಮುಖದಲ್ಲಿ ತೀರ್ಮಾನಿಸಿದ ನಿರ್ಣಯಗಳಾಗಲೀ, ಜಾರಿಗೆ ಬಂದಿದ್ದು, ನಾಡು-ನುಡಿಯ ಸಮಸ್ಯೆಗಳು ಬಗೆಹರಿದಿದ್ದು ಅಪರೂಪ. ನನ್ನ ಹೋರಾಟದ ಅನುಭವದಲ್ಲಿ ಹೇಳುವುದಾದರೆ ನಾನು ತುಮಕೂರಿನಲ್ಲಿ ಮತ್ತು ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ, ರಾಜ್ಯ ಮತ್ತು ಮಲೆನಾಡಿನ ವಿಷಯಗಳನ್ನು ಪ್ರಸ್ತಾಪಿಸಿ ದ್ದೇನೆ. ಇವುಗಳನ್ನು ಸಮ್ಮೇಳನದ ನಿರ್ಣಯಗಳಲ್ಲಿ ಸೇರಿಸಬೇಕೆಂದು ಒತ್ತಾಯ ಮಾಡಿ, ಪ್ರತಿಭಟನೆ ಕೂಡ ಮಾಡಿ, ಅದರಲ್ಲಿ ಯಶಸ್ವಿಯೂ ಆಗಿ ದ್ದೇನೆ. ಆದರೆ ಮುಖ್ಯಮಂತ್ರಿಗಳೇ ಭರವಸೆ ನೀಡಿದ್ದರೂ ಈ ನಿರ್ಣಯಗಳು ಕಾರ್ಯರೂಪಕ್ಕೆ ಬಂದಿಲ್ಲವೆಂಬ ಬಹುದೊಡ್ಡ ವಿಷಾದ ನನ್ನಲ್ಲಿದೆ. ಅಂದ ಮಾತ್ರಕ್ಕೆ ಈ ರೀತಿಯ ಸಮ್ಮೇಳನದಲ್ಲಿ ನ್ಯಾಯಯುತ ಬೇಡಿಕೆಗಳನ್ನು, ಸಮಾಜದ ಸಂಕಟಗಳನ್ನು ಪ್ರಸ್ತಾಪಿಸುವುದು ವ್ಯರ್ಥವೆಂಬುದು ನನ್ನ ಅಭಿಪ್ರಾಯವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತಮ್ಮ ಅಹವಾಲನ್ನು, ಬೇಡಿಕೆಗಳನ್ನು ಸಲ್ಲಿಸುವುದು ಸಂವಿಧಾನಾತ್ಮಕ ಹಕ್ಕು. ಜನ ಜಾಗೃತರಾದರೆ ಸರ್ಕಾರಗಳು ಇವುಗಳಿಗೆ ಬೆಲೆ ನೀಡಲೇಬೇಕಾಗುತ್ತದೆ. ಆ ದೃಷ್ಟಿಯಿಂದ ಇಂದು ನಾನಿಲ್ಲಿ ಪ್ರಸ್ತಾಪಿಸುವ ವಿಷಯಗಳು ನಾವೆಲ್ಲರೂ ಸೇರಿ ನೀಡುತ್ತಿರುವ ಆದೇಶವೆಂದೂ, ಇದು ನನ್ನ ಜವಾಬ್ದಾರಿಯೂ ಹೌದೆಂದು ತಿಳಿದು ಈ ಭಾಷಣವನ್ನು ಮುಂದುವರೆಸುತ್ತೇನೆ. ಈ ಸಾಹಿತ್ಯ ಸಮ್ಮೇಳನದಲ್ಲಿ ನಾನು ವಿನಮ್ರವಾಗಿ ಒಪ್ಪಿಕೊಳ್ಳುವುದೆಂದರೆ ನಾನು ಮೂಲತಃ ಸಾಹಿತ್ಯವನ್ನು ಶಾಸ್ತ್ರೀಯವಾಗಿ ಕಲಿತವನಲ್ಲ. ತಮಗೆಲ್ಲರಿಗೂ ಗೊತ್ತಿರುವಂತೆ ನಾನು ಪರಿಸರ ಮತ್ತು ಸಾಮಾಜಿಕ ಹೋರಾಟದ ಕಾರ್ಯಕರ್ತ. ಕಳೆದ ಭರ್ತಿ ನಾಲ್ಕು ದಶಕಗಳಿಂದ ಒಂದಿಂದು ಹೋರಾಟಗಳಲ್ಲಿ ತೊಡಗಿಸಿಕೊಂಡು ಬಂದಿದ್ದೇನೆ. ಹಾಗೆ ಹೇಳುವುದಾದರೆ ಯಾರಾದರೂ ನನ್ನ ಇತ್ತೀಚಿನ ಕೃತಿಗಳನ್ನು ಓದಿ ನನ್ನನ್ನು ಸಾಹಿತಿ ಎಂದು ಗುರುತಿಸುವುದಕ್ಕಿಂತ ಹೋರಾಟಗಾರನೆಂದರೆ ನನಗೆ ಹೆಚ್ಚು ಖುಷಿಯಾಗುತ್ತದೆ. ವಾಸ್ತವವೆಂದರೆ ರಾಜ್ಯದಾದ್ಯಂತ ನಡೆದ ಹೋರಾಟಗಳಲ್ಲಿ ಭಾಗವಹಿಸಿದ್ದರಿಂದ ನನಗೆ ಸಿಕ್ಕ ಸ್ನೇಹಿತರು, ಅಭಿಮಾನಿಗಳ ಬೆಂಬಲವೆಷ್ಟೋ ಅಷ್ಟೇ ನನ್ನ ಕೃತಿ ‘ಮಂಗನಬ್ಯಾಟೆ’ಗೂ ವಿಸ್ತತೃತವಾದ ಸ್ಪಂದನೆ ಸಿಕ್ಕಿದೆ. ಇದರ ಅರಿವೂ ನನಗಿದೆ. ಹೋರಾಟ ಸಾಹಿತ್ಯದಿಂದ ಹೊರತಲ್ಲ. ಸಾಹಿತ್ಯವೂ ಹೋರಾಟದಿಂದ ಹೊರತಲ್ಲ. ಅವು ಒಂದಕ್ಕೊಂದು ಪೂರಕವೇ. ಸೈದ್ಧಾಂತಿಕ ಪ್ರೇರಣೆಯಿಲ್ಲದ ಹೋರಾಟಗಳಾಗಲೀ; ಸಾಮಾಜಿಕ ಬದ್ಧತೆಯಿಲ್ಲದ ಸಾಹಿತ್ಯವಾಗಲೀ- ಎರಡೂ ಜೊಳ್ಳು. ಜನಸಮಾನ್ಯರ ಸಂಕಟಗಳನ್ನು ಪರಿಹರಿಸುವಲ್ಲಿ ಹೋರಾಟಗಳಿಗೆ ಎಷ್ಟು ಜವಾಬ್ದಾರಿ ಇರುತ್ತದೋ ಅಷ್ಟೇ ಜವಾಬ್ದಾರಿ ಸಾಹಿತ್ಯಕ್ಕೂ ಇರುತ್ತದೆ. ಮೌಲ್ಯಯುತ ಸಾಹಿತ್ಯ ಸಾಮಾಜಿಕ ಬದ್ಧತೆಯಿಂದ ಕೂಡಿರಬೇಕಾಗುತ್ತದೆ. ಈ ಬದ್ಧತೆಯ ವಿಷಯ ಬಂದಾಗ ನನ್ನ ಆತ್ಮೀಯರಾದ, ಖ್ಯಾತ ಚಿಂತಕ ಡಾ. ಬರಗೂರು ರಾಮಚಂದ್ರಪ್ಪ ಅವರ ಮಾತು ನೆನಪಿಗೆ ಬರುತ್ತದೆ, ಅವರು ‘ಸಾಹಿತ್ಯ ಮತ್ತು ಬದ್ಧತೆ’ ಲೇಖನದಲ್ಲಿ ಹೀಗೆ ಬರೆಯುತ್ತಾರೆ; ‘ಸಾಮಾಜಿಕ ಕಳಕಳಿಯ ಹಿನ್ನೆಲೆಯುಳ್ಳ ಬದ್ಧತೆ ಈ ಕಾಲದ ಅಗತ್ಯ. ಚರಿತ್ರೆ ಇಚ್ಛಿಸುವ ಸ್ಥಿತಿಯೆಂದರೆ ಸರಿಯಾದೀತು’. ಸಾಹಿತ್ಯ ಒಣ ಹರಟೆ, ಪುಂಡರ ಗೋಷ್ಠಿಯಲ್ಲ. ಅದು ಪ್ರತಿಪಾದಿಸುವುದೇನೆಂದರೆ ಮನುಷ್ಯನನ್ನು ಮನುಷ್ಯನನ್ನಾಗಿ ಕಾಣುವುದು, ಮನಸ್ಸನ್ನು ಅರಳಿಸುವುದು. ಅವನಲ್ಲಿ ಹುದುಗಿರುವ ದುರಾಸೆ, ಕ್ರೌರ್ಯ, ಅಸೂಯೆ, ಆಕ್ರಮಣ ಪ್ರವೃತ್ತಿಗಳನ್ನು ತೊಡೆದು ಉದಾತ್ತತೆಯಿಂದ, ಸುಂದರ ಸುಖಮಯ ನೆಮ್ಮದಿಯನ್ನು ಅಭಿವ್ಯಕ್ತಿಸುವುದು. ಹಾಗೆ ನೋಡಿದರೆ ಈ ಮನುಷ್ಯ ಸಮಾಜವನ್ನು ಆಳುತ್ತಿರುವುದು ಸಾಹಿತ್ಯದ ಮೂಲಕವೇ. ಗೀತೆ, ಬೈಬಲ, ಖುರಾನ್ ನಂತಹ ಮಹಾದ್ ಧರ್ಮಗ್ರಂಥಗಳು ಕೋಟಿ ಕೋಟಿ ಜನರನ್ನು ನಿಯಂತ್ರಿಸುತ್ತಿವೆ. ಒಂದು ಕಾಲದಲ್ಲಿ ಪ್ರಪಂಚದ ಮೂರನೇ ಎರಡರಷ್ಟು ಜನರನ್ನು ಮಾನವತಾವಾದಿ ಕಾರ್ಲ್ ಮಾರ್ಕ್ಸ್ ಸಮಾಜವಾದ ಸಿದ್ಧತಾಂತದ ಕಮ್ಯುನಿಸಂ (ಪ್ರಣಾಳಿಕೆ) ನಿಯಂತ್ರಿಸುತ್ತಿತ್ತು. ಧರ್ಮ- ಸಿದ್ಧಾಂತಗಳು ತಮ್ಮ ತಮ್ಮ ಅನುಯಾಯಿಗಳನ್ನಷ್ಟೇ ನಿಯಂತ್ರಿಸಿದರೆ ಸಾಹಿತ್ಯ ಸಮಾಜದ ಎಲ್ಲರೂ ಮಾನವಂತರಾಗಿ ಬದುಕಲು ಸಹಾಯ ಮಾಡುತ್ತದೆ. ಹುಟ್ಟಿದವರಿಗೆ ಸಾವಿದೆ; ಆದರೆ ಬರೆದ ಸಾಹಿತ್ಯಕ್ಕೆಂದೂ ಅಳಿವಿಲ್ಲ ಎಂಬ ಮಾತಿದೆ. ಈ ಮಾತಿಗೆ ಪುಷ್ಟಿದಾಯಕವಾದ ವಿಚಾರವೆಂದರೆ ಯುಗದಕವಿ, ಜಗದ ಕವಿ, ಮಲೆನಾಡಿನ ಕವಿ, ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ. ಕನ್ನಡ ಜೀವಂತವಿರುವವರೆಗೂ ನಮ್ಮ ಈ ಹೆಮ್ಮೆಯ ಕವಿಯ ಸಾಹಿತ್ಯ ಜೀವಂತವಾಗಿರುತ್ತದೆ. ಕುವೆಂಪು ಎಂದರೆ ಮಲೆನಾಡು. ಅವರು ಈ ನಮ್ಮ ಮಲೆನಾಡಿನ ಪರಿಸರವನ್ನು ರಮ್ಯವಾಗಿ ವರ್ಣಿಸಿ ವಿಜೃಂಭಿಸಿದರು. ‘ಹಕ್ಕಿ ಬಳಗ ಸುತ್ತ ಕೂಡಿ ಬೈಗಂ ಬೆಳಗು ಹಾಡಿ ಹಾಡಿ ಮಲೆನಾಡ ಸಗ್ಗ ಮಾಡಿ’ ಎನ್ನುತ್ತಾ ಅವರು ಬರೆದ ಕವಿತೆ-ಕಾದಂಬರಿಗಳು ನನ್ನನ್ನು, ನನ್ನಂತಹ ಅನೇಕರನ್ನು ಪರಿಸರವಾದಿಯಾಗಿ ರೂಪಿಸಿದೆ ಎಂದರೆ ಸಾಹಿತ್ಯದ ಶಕ್ತಿ ಅಪೂರ್ವವಾದದ್ದು ಎಂದೆನಿಸುವುದಿಲ್ಲವೇ? ನಾನು ಯಾವುದೇ ಸಾಹಿತ್ಯದ ಕೃತಿಯನ್ನಾದರೂ ವ್ಯಸನಕ್ಕಾಗಿಮಾತ್ರ ಓದುವುದಿಲ್ಲ, ಸಂಶೋಧನಾ ದೃಷ್ಟಿಯಿಂದಲೇ ಅಭ್ಯಾಸ ಮಾಡುತ್ತೇನೆ. ಆದ್ದರಿಂದ ನಾನು ಎಂದೆಂದೂ ಸಾಹಿತ್ಯದ ವಿದ್ಯಾರ್ಥಿಯೇ. ನನ್ನ ಹಾಗೂ ನನ್ನಂತಹ ಕೋಟ್ಯಂತರ ಜನರ ಅರಿವನ್ನು ಹೆಚ್ಚಿಸಿದ್ದು, ಹೆಚ್ಚಿಸುತ್ತಿರುವುದು ನಮ್ಮ ಭಾಷೆ ಕನ್ನಡ. ಕನ್ನಡ ಭಾಷೆಯೇ ನಮ್ಮ ಆಸ್ತಿ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಭಾಷೆಯ ಪರಂಪರೆಯೇ ಸೌಹಾದತೆ. ಹತ್ತನೇ ಶತಮಾನದಲ್ಲಿ ಆದಿಕವಿ ಪಂಪ ‘ಮಾನವ ಜಾತಿ ತಾನೊಂದೇ ವಲಂ’ ಎಂದು ಮಾನವತೆಯನ್ನು ಸಾರಿದ. ಸರ್ವಜೀವಿಗಳ ಆತ್ಮದಲ್ಲೂ ಪರಮಾತ್ಮನಿದ್ದಾನೆಂದು ಸಾರಿದ ಶಂಕರಾಚಾರ್ಯರು, ಚಾಂಡಾಲನಲ್ಲಿ ಈಶ್ವರನನ್ನು ಕಂಡರು. ಕನ್ನಡ ನೆಲದ, ವಿಶ್ವಮಾನ್ಯ ಧಾರ್ಮಿಕ ಹೋರಾಟಗಾರ ಬಸವಣ್ಣ ಮನುಷ್ಯ ಮನುಷ್ಯರಲ್ಲಿ ಬೇಧವು ಸಲ್ಲದು ಎನ್ನುವುದನ್ನು ಸರಳವಾಗಿ ಹೇಳಿದ್ದು ಹೀಗೆ; ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ ಇಂತಹ ಭವ್ಯ ಪರಂಪರೆ ಕನ್ನಡಕ್ಕಿದೆ. ಕುವೆಂಪು ಅವರ ವಿಶ್ವದೃಷ್ಠಿ, ವಿಶ್ವಮಾನವ ಸಂದೇಶದ ‘ಅನಿಕೇತನ’ ಕವನ ನಮ್ಮೆಲ್ಲರ ಮಂತ್ರವಾಗಬೇಕು. ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವವೆಲ್ಲ ಮೀರಿ, ನಿರ್ದಿಗಂತವಾಗಿ ಏರಿ, ಓ ನನ್ನ ಚೇತನ, ಆಗು ನೀ ಅನಿಕೇತನ ಈ ಕವನದ ಸಾಲುಗಳು ನಮಗೆ ಬೇಕಾದುದು ಆ ಮತ, ಈ ಮತ ಅಲ್ಲ, ಮನುಜಮತ. ಆ ಪಥ ಈ ಪಥ ಅಲ್ಲ, ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ. ಸರ್ವದ ಸರ್ವಸ್ತರ ಉದಯ ಎಂದು ಸಾರುತ್ತವೆ. ಇದು ಎಂದೆಂದಿಗೂ ಸರ್ವಕಾಲಿಕ ಪ್ರೇರಣೆಯಾಗಿದೆ. “ಕುವೆಂಪು ಅವರು ವಿಶ್ವಮಾನವನಾಗಲು ನಾವು ಸಾಧಿಸಲೇಬೇಕಾದ ಮೂಲಭೂತ ಸ್ವರೂಪದ ತತ್ತ್ವ ಪ್ರಣಾಳಿಕೆಯನ್ನು ಈ ಕವನದಲ್ಲಿ ಕೊಟ್ಟಿ ದ್ದಾರೆ” ಎಂದು ನಮ್ಮ ತಾಲೂಕಿನವರೇ ಆದ ಖ್ಯಾತ ಕವಿ ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟ (ಎಸ.ವಿ. ಪರಮೇಶ್ವರ ಭಟ್ಟ) ಹೇಳಿರುವುದನ್ನು ನಾನಿಲ್ಲಿ (ಕೃತಿ: ರಸಋಷಿ ಕುವೆಂಪು) ನೆನಪಿಸುತ್ತೇನೆ. ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದ ನಮ್ಮ ತಾಲೂಕಿನ ಈ ಹೆಮ್ಮೆಯ ಸಾಹಿತಿಯನ್ನು ಸ್ಮರಿಸುತ್ತೇನೆ. ಕುವೆಂಪು ಅವರು ‘ಹೋಗುವೆನು ನಾ’ ಕವನದಲ್ಲಿ; ಅಲ್ಲಿ ಇಂತಿರಬೇಕು, ಇಂತಿರಬಾರದೆಂಬುವುದಿಲ್ಲವೈ; ಅಲ್ಲಿ ಹೊರೆ ಹೊಣೆಯಿಲ್ಲ; ಶಾಸ್ತ್ರದ ವಿಧಿ ನಿಷೇಧಗಳಿಲ್ಲವೈ; ಜಾತಿಗೀತಿಯ ವೇದಭೇದದ ಕಟ್ಟುಕಟ್ಟಳೆ ನಿಲ್ಲದೈ: ಅಲ್ಲಿ ಪ್ರೀತಿಯೆ ನೀತಿ; ಧರ್ಮಕೆ ಬೇರೆ

ಪ್ರಸ್ತುತ Read Post »

ಇತರೆ

ಕುಮಾರವ್ಯಾಸ ಜಯಂತಿ

ಕನ್ನಡ ಸಾಹಿತ್ಯದ ದಿಗ್ಗಜ ಕುಮಾರವ್ಯಾಸ..! ಕೆ.ಶಿವು ಲಕ್ಕಣ್ಣವರ ದಿನಾಂಕ ೯ ಕುಮಾರವ್ಯಾಸನ ಜಯಂತಿ. ಆ ನಿಮಿತ್ತವಾಗಿ ಕುಮಾರವ್ಯಾಸ ಕುರಿತು ಈ ಲೇಖನ… ಕುಮಾರವ್ಯಾಸ (ಕ್ರಿ.ಶ. ೧೩೫೦-೧೪೦೦) ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಾಯಣಪ್ಪ. “ಗದುಗಿನ ನಾರಾಯಣಪ್ಪ” ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ… ಕುಮಾರವ್ಯಾಸನ ಕಾಲದ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ಆದರೂ ಕವಿ ಚರಿತಾಕಾರರು ಕೆಲವು ಸಾಹಿತ್ಯದ ಹಿನ್ನೆಲೆಯಿಂದ ಕುಮಾರವ್ಯಾಸನ ಕಾಲವನ್ನು ನಿರ್ಣಯಿಸಲು ಪ್ರಯತ್ನಿಸಿದ್ದಾರೆ. ಕುಮಾರವ್ಯಾಸನ ಹೆಸರು ಹೇಳುವ ಉತ್ತರಕಾಲೀನ ಕವಿಗಳಲ್ಲಿ ಮೊದಲಿಗ ತಿಮ್ಮಣ್ಣ ಕವಿ. ಇವನ ಕಾಲ ಸುಮಾರು ಕ್ರಿ.ಶ. ೧೫೧೦. ಇವನು ವಿಜಯನಗರದ ಶ್ರೀಕೃಷ್ಣದೇವರಾಯನ(ಕ್ರಿ.ಶ.೧೫೦೯ ರಿಂದ ೧೫೨೯ರವರೆಗೆ) ಆಜ್ಞಾನುಸಾರ ‘ಕೃಷ್ಣರಾಜ ಭಾರತ’ಎಂಬ ಕೃತಿಯನ್ನು ರಚಿಸಿದ್ದಾನೆ. ಸುಮಾರು ಕ್ರಿ.ಶ. ೧೫೦೦ ರಲ್ಲಿದ್ದ ‘ತೊರವೆ ರಾಮಾಯಣ’ ಬರೆದ ಕುಮಾರ ವಾಲ್ಮೀಕಿ ಅಥವಾ ತೊರವೆ ನರಹರಿ ಮತ್ತು ‘ಕೃಷ್ಣರಾಯ ಭಾರತ’ ಬರೆದ ತಿಮ್ಮಣ್ಣ ಕವಿ ಕುಮಾರವ್ಯಾಸನನ್ನು ಹೊಗಳಿರುವುದರಿಂದ ಕುಮಾರವ್ಯಾಸನು ಆ ಕಾಲಕ್ಕಿಂತ ಹಿಂದಿನವನೆಂದು ಸಿದ್ಧವಾಗಿದೆ. ಜೀವಂಧರ ಚರಿತೆ ಬರೆದ ಕ್ರಿ.ಶ. ೧೪೨೪ ರಲ್ಲಿದ್ದ ಭಾಸ್ಕರ ಕವಿಯು ಕುಮಾರವ್ಯಾಸನ ಅನೇಕ ನುಡಿಕಟ್ಟುಗಳನ್ನು ಬಳಸಿ ಅವನಿಂದ ಪ್ರಭಾವಿತನಾಗಿರುವುದರಿಂದ, ಕುಮಾರವ್ಯಾಸನು ಅವನಿಗಿಂತ ಹಿಂದಿನವನೆಂದು ಸಂಶೋಧಕರು ನಿರ್ಧರಿಸಿದ್ದಾರೆ… ಕುಮಾರವ್ಯಾಸನ ಹೆಸರಿರುವ ಒಂದು ಶಾಸನ ಗದುಗಿನ ವೀರನಾರಾಯಣ ದೇವಸ್ಥಾನಕ್ಕೆ ಸೇರಿದ ಬಾವಿಯ ಎಡ ಮಗ್ಗುಲ ಗೋಡೆಯ ಮೇಲಿದೆ. ಇದರ ಕಾಲ ಸುಮಾರು ಕ್ರಿ.ಶ. ೨೬-೮-೧೫೩೯ ರಲ್ಲಿ ಬರೆದ ಶಾಸನದಲ್ಲಿ ಕವಿ ಕುಮಾರವ್ಯಾಸನಿಗೆ ಪ್ರಸನ್ನನಾದ ಗದುಗಿನ ವೀರ ನಾರಾಯಣನ ಸನ್ನಿಧಿಯಲ್ಲಿ. ಎಂದು ಕುಮಾರವ್ಯಾಸನ ಹೆಸರನ್ನು ಉಲ್ಲೇಖಿಸಿರುವುದರಿಂದ ಅವನು ಅದಕ್ಕಿಂತ ಹಿಂದಿನವನೆಂದು ಸ್ಪಷ್ಟವಾಗಿದೆ. ಕುಮಾರವ್ಯಾಸ ಶ್ರೀಕೃಷ್ಣದೇವರಾಯನ ಆಳ್ವಿಕೆಯಲ್ಲಿದ್ದವನೆಂದೂ, ‘ಪ್ರಭುಲಿಂಗಲೀಲೆ’ ಬರೆದ ಚಾಮರಸನ ತಂಗಿಯ ಗಂಡನೆಂದೂ, ಇದರ ಪ್ರಕಾರ ಇವನ ಕಾಲ ಸುಮಾರು ೧೪೩೯ ಆಗುತ್ತದೆಂದು ಕವಿಚರಿತಾಕಾರರು ಅಭಿಪ್ರಾಯ ಪಟ್ಟಿದ್ದಾರೆ… ಆದ್ದರಿಂದ ಅವನ-ಕುಮಾರವ್ಯಾಸನ ಕಾಲವನ್ನು ಕ್ರಿ.ಶ. ೧೩೫೦-೧೪೦೦ ಎಂದು ನಿರ್ಣಯಿಸಿರುತ್ತಾರೆ. (ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ : ಕುಮಾರವ್ಯಾಸ ಭಾರತ ಸಂಗ್ರಹ ಪ್ರ : ಬಿ.ಎಂ.ಶ್ರೀ. ಪ್ರತಿಷ್ಠಾನ)… ಕುಮಾರವ್ಯಾಸನು ‘ಕರ್ಣಾಟ ಭಾರತ ಕಥಾಮಂಜರಿ’ ರಚಿಸಿ, ವ್ಯಾಸರಾಯರಿಗೆ ತೋರಿಸಿದನೆಂಬ ಐತಿಹ್ಯವಿದೆಯೆಂದು ತಿಳಿಸಿರುವ ಪಂಚಮುಖಿ ಎಂಬ ವಿದ್ವಾಂಸರು- “ಹರಿ ಶರಣರೆನ್ನ ಮನೆಯ ಮೆಟ್ಟಲು ಮನೆ ಪರಮಪಾವನವಾಯಿತು” ಎಂಬ ಸುಳಾದಿಯಲ್ಲಿ ಪುರಂದರದಾಸರು ತಮ್ಮ ಮನೆಗೆ ಕುಮಾರವ್ಯಾಸ ಬಂದುದನ್ನು, ಆತ ತನ್ನ ಕೃತಿಗೆ ಶ್ರೀಕೃಷ್ಣನೇ ಕಥಾನಾಯಕನೆಂದು ಶಾಸ್ತ್ರ ಸಮ್ಮತವಾಗಿ ಹೇಳಿದನೆನ್ನಲಾಗಿದೆ… ಈ ದಿಶೆಯಲ್ಲಿ ಕುಮಾರವ್ಯಾಸ ಅತಿ ಪ್ರಾಚೀನನೂ ಅಲ್ಲ, ಅರ್ವಾಚೀನನೂ ಅಲ್ಲ. ಮಧ್ಯಕಾಲದವನೆಂದೂ, ಅವನ ಭಾಷಾಶೈಲಿಯ ದೃಷ್ಠಿಯಿಂದ ನಿರ್ವಿವಾದವಾಗಿ ಹೇಳಬಹುದು… ಹುಟ್ಟೂರು ಹುಬ್ಬಳ್ಳಿಯ ಕುಂದಗೋಳ ತಾಲ್ಲೂಕಿನ ಕೋಳಿವಾಡವೆಂಬ ಗ್ರಾಮವೆಂದೂ ಅವನ ವಂಶಸ್ಥರು ಈಗಲೂ ಅಲ್ಲಿ ವಾಸಿಸುತ್ತಾರೆಂದೂ ಹೇಳಲಾಗಿದೆ. ಈ ಬಗ್ಗೆ ಸಂಶೋಧನೆ ಮಾಡಿದ ಶ್ರೀ ಎ.ವಿ.ಪ್ರಸನ್ನ, ಕೆ.ಎ.ಎಸ್. ಅವರು ಅವರ ಮನೆಗೆ ಹೋಗಿ ವಿಚಾರ ವಿನಿಮಯ ಮಾಡಿ ಅವರಲ್ಲಿರುವ ಕಾಗದ ಪತ್ರಗಳನ್ನೂ ಕುಮಾರವ್ಯಾಸ ಭಾರತದ ಓಲೆಗರಿ ಪ್ರತಿಗಳನ್ನೂ ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ಪತ್ರಗಳ ಆಧಾರದ ಮೇಲೆ ಕವಿಯ ವಂಶಸ್ಥರು ತಮ್ಮ ವಂಶದ ಚರಿತ್ರೆಯನ್ನು ಈ ರೀತಿ ತಿಳಿಸುತ್ತಾರೆ… ಕುಮಾರವ್ಯಾಸನ ಪೂರ್ವಿಕರಾದ ಚಿನ್ನದ ಕೈ ಮಾಧವರಸಯ್ಯನು ಹಿರೇಹಂದಿಗೋಳ ಗ್ರಾಮದವನಾಗಿದ್ದು ಕೋಳೀವಾಡ ಗ್ರಾಮವನ್ನು ಕ್ರಯಕ್ಕೆ ಪಡೆದು, ಕೋಳೀವಾಡದಲ್ಲಿಯೇ ನೆಲಸಿದ. ಅವರು ಅದ್ವೈತಿಗಳಾಗಿದ್ದು ಹರಿ-ಹರರಲ್ಲಿ ಅಬೇಧವನ್ನು ಕಾಣುವವರು. ಇವರು ಅಗಸ್ತ್ಯ ಗೋತ್ರಕ್ಕೆ ಸೇರಿದವರು. ಈ ಬಗ್ಗೆ ಗದುಗಿನ ಕುಮಾರವ್ಯಾಸ ಸಂಘದ ಅಧ್ಯಕ್ಷರೂ ಆದ ಶ್ರೀ ಎಂ.ಎಚ್ ಹರಿದಾಸ ಅವರು ರಚಿಸಿರುವ ಮಹಾಕವಿ ಕುಮಾರವ್ಯಾಸ (ಪ್ರ.ವಿಕ್ರಮ ಪ್ರಕಾಶನ ಗದಗ) ಕಿರು ಹೊತ್ತಿಗೆಯಲ್ಲಿ ಹೆಚ್ಚಿನ ವಿಷಯವಿದೆ… ಅವನ ವಂಶಸ್ಥರಾದ ದತ್ತಾತ್ರೇಯ ಪಾಟೀಲರು ಶ್ರೀ ಎ.ವಿ.ಪ್ರಸನ್ನ ಅವರಿಗೆ ಕೊಟ್ಟ ಕುಮಾರವ್ಯಾಸನ ವಂಶಾವಳಿಯನ್ನು ಗಮಕ ಸಂಪದ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಒಟ್ಟಿನಲ್ಲಿ ಕವಿ ನಾರಾಯಣಪ್ಪ ಕೋಳಿವಾಡದ ಶಾನುಭೋಗ. ಗದುಗಿನ ವೀರನಾರಾಯಣ ಇವನ ಆರಾಧ್ಯ ದೈವ. ಇವನಿಗೆ ವೇದವ್ಯಾಸ ಮತ್ತು ಅಶ್ವತ್ಥಾಮರ ಅನುಗ್ರಹವಾಗಿತ್ತೆಂದು ಹೇಳಲಾಗುತ್ತದೆ… ಈ ವಂಶಾವಳಿಯಂತೆ, ವೀರನಾರಾಯಣರೆಂಬ ಹೆಸರಿನವರು ಐದು ಜನ ಬರುತ್ತಾರೆ. ಅದರಲ್ಲಿ ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ನಂತರ ನಾಲ್ಕನೆಯವನಿಗೆ ೧ ನೇ ವೀರನಾರಾಯಣ ಗೌಡ ಎಂದಿದೆ. ಅವನೇ ಕುಮಾರವ್ಯಾಸನೆಂದು ನಿರ್ಧರಿಸಿದ್ದಾರೆ… ಇಲ್ಲಿ ಗೌಡ ಎಂಬ ಪದ ಜಾತಿ ಸೂಚಕವಲ್ಲ. ಅದು ಗ್ರಾಮ ವೃದ್ಧ ಗಾಮುಂಡ ಗೌಡ ಎಂದು ನಿರ್ಣಯಿಸಿದ್ದಾರೆ. ಆನಂತರ ಕೆಲವು ಅದೇ ಮನೆತನದವರು ಅಯ್ಯ, ಪಾಟೀಲ ಎಂದು ತಮ್ಮ ಹೆಸರಿನ ಕೊನೆಗೆ ಸೇರಿಸಿ ಕೊಂಡಿದ್ದಾರೆ. ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ಕಾಲ ಕ್ರಿ.ಶ. ೧೧೪೮. ಇವನ ನಂತರದ ನಾಲ್ಕನೆಯ ತಲೆಮಾರಿನ ಕುಮಾರವ್ಯಾಸ. ಪ್ರತಿ ತಲೆಮಾರಿಗೆ ೨೫ ವರ್ಷವೆಂದು ಹಿಡಿದರೆ, ಕುಮಾರವ್ಯಾಸನ ಕಾಲ ಕ್ರಿ.ಶ. ೧೨೪೮. ಅವನು ಸುಮಾರು ೭೦ ವರ್ಷ ಬದುಕಿದ್ದನೆಂದು ಭಾವಿಸಿದರೂ ಕ್ರಿ.ಶ. ೧೨೪೮ ರಿಂದ ೧೩೧೮ ಎಂದರೆ ೩೦-೪೦ ವರ್ಷ ವ್ಯತ್ಯಾಸ ಬರುತ್ತದೆ… ೧.ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯ. ೨.ತಿರುಮಲಯ್ಯ. ೩.ಲಕ್ಕರಸಯ್ಯ. ೪.ವೀರನಾರಾಯಣ ಗೌಡ.; ಕೃಷ್ಣರಸಯ್ಯ ; ತಂಕರಸಯ್ಯ ; ತಿರುಮಲಯ್ಯ. ಅಶ್ಯತ್ಥಯ್ಯ. ೪-೧ ನೇ ವೀರನಾರಾಯಣನೇ ಕುಮಾರವ್ಯಾಸ ನಂತರ ೧೯೪೧ ಕ್ಕೆ ೧೯ ತಲೆಮಾರಿನ ಪಟ್ಟಿ ಇದೆ… ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟಕ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೇ ಕುಮಾರವ್ಯಾಸ ತನ್ನ ಕಾವ್ಯ ಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಮೇರು ಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೪೭ ಸಂಧಿ, ೭೯೭೧ ಪದ್ಯಗಳನ್ನು ಒಳಗೊಂಡಿದೆ. (ತಿದ್ದುಪಡಿ:೧೫೨ ಸಂಧಿಗಳು, 8244ಪದ್ಯಗಳು) ‘ಕುಮಾರವ್ಯಾಸ ಭಾರತ’ದ ಭಾಷೆ ನಡುಗನ್ನಡ. (ಕುಮಾರವ್ಯಾಸ ಭಾರತ-ಆದಿಪರ್ವ)… ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗು ಬಡಿಸುತ್ತದೆ. ಅವನ ಕಾವ್ಯ ಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸನ ಹೆಸರು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದೆ… “ಬವರವಾದರೆ ಹರನ ವದನಕೆ ಬೆವರ ತಹೆನು” (ಅಭಿಮನ್ಯುವಿನ ವೀರೋಕ್ತಿ!) “ನರಶರದ ಜುಂಜುವೊಳೆಯಲಿ ಜಾರುವನೆ ಜಾಹ್ನವೀಧರ” (ಕಿರಾತಾರ್ಜುನೀಯ ಪ್ರಸಂಗದಲ್ಲಿ) “ಜವನ ಮೀಸೆಯ ಮುರಿದನೋ” (ಉತ್ತರನ ಪೌರುಷದಲ್ಲಿ) “ಅರಿವಿನ ಸೆರಗು ಹಾರಿತು” ರೂಪಕಗಳೊಂದಿಗೆ ಕುಮಾರವ್ಯಾಸನ ಇನ್ನೊಂದು ಸಾಮರ್ಥ್ಯ ಮಾನವ ಪ್ರಕೃತಿಯ ವರ್ಣನೆ… ಕುಮಾರವ್ಯಾಸನ ಪಾತ್ರಗಳು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟ. ಅವನ ಎಲ್ಲ ಪಾತ್ರಗಳು ಅವರವರದೇ ರೀತಿಯಲ್ಲಿ ಮಾತನಾಡುತ್ತಾರೆ, ಬೈಯುತ್ತಾರೆ, ನಗುತ್ತಾರೆ, ಹಾಗೂ ಅಳುತ್ತಾರೆ ಸಹ. ಕುಮಾರವ್ಯಾಸ ಅಷ್ಟೇ ಆಳವಾದ ದೈವಭಕ್ತ ಸಹ. ಶ್ರೀ ಕೃಷ್ಣನ ವರ್ಣನೆ ಅವನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಒಂದು. (“ತಿಳಿಯ ಹೇಳುವೆ ಕೃ‍ಷ್ಣ ಕಥೆಯನು”) ಅವನ ಮಹಾಭಾರತ ಕಥೆ ಕೃಷ್ಣನ ಸುತ್ತಲೂ ಸುತ್ತುತ್ತದೆ. ಕುಮಾರವ್ಯಾಸ ಕೃಷ್ಣನ ಭಕ್ತ. ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತರ (ಗದಾಪರ್ವ) ವರೆಗೆ. ಬರೆದು ದುರ್ಯೋಧನನ ಅವಸಾನದ ನಂತರ, ಕುಮಾರವ್ಯಾಸನು ಮುಂದೆ ಸಂಕ್ಷಿಪ್ತವಾಗಿ, ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ… ಕುಮಾರವ್ಯಾಸನ ಪ್ರತಿಭೆಗೆ ಕನ್ನಡಿಯಾಗಿ ಹಿಡಿದ ಕುವೆಂಪುರವರ ಈ ಸಾಲುಗಳನ್ನು ನೋಡಿ– “ಕುಮಾರ ವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿವುದು! ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು!” ಕುಮಾರವ್ಯಾಸನ ಇನ್ನೊಂದು ಕೃತಿ ಐರಾವತ. ಇದು ಅಷ್ಟಾಗಿ ಪ್ರಸಿದ್ಧವಾಗಿಲ್ಲ… ಕುಮಾರವ್ಯಾಸ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾನೆ. ಕುಮಾರವ್ಯಾಸ ಭಾರತವನ್ನು ಇಂದಿಗೂ ಸಹ ಕರ್ನಾಟಕದಲ್ಲಿ ಓದಲಾಗುತ್ತದೆ, ವ್ಯಾಖ್ಯಾನ ಮಾಡಲಾಗುತ್ತದೆ. ಕುಮಾರವ್ಯಾಸ ಭಾರತವನ್ನು ಓದುವ ಒಂದು ವಿಶಿಷ್ಟ ಶೈಲಿಯಾದ ಗಮಕ ಕಲೆ ಸಾಕಷ್ಟು ಪ್ರಸಿದ್ಧವಾಗಿದೆ… “ಹಲಗೆ ಬಳಪವ ಪಿಡಿಯದೊಂದ ಗ್ಗಳಿಕೆ ಪದವಿಟ್ಟಳುಪದೊಂದ ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ ಬಳಸಿ ಬರೆಯಲು ಕಂಠಪತ್ರದ ವುಲುಹುಗೆಡದಗ್ಗಳಿಕೆಯೆಂಬೀ ಬಲುಹು ವೀರನಾರಾಯಣನ ಕಿಂಕರಗೆ” “ವೀರನಾರಾಯಣನೆ ಕವಿ ಲಿಪಿ ಕಾರ ಕುಮಾರವ್ಯಾಸ ಕೇಳುವ ಸೂರಿಗಳು ಸನಕಾದಿಗಳು ಜಂಗಮ ಜನಾರ್ಧನರು ಚಾರು ಕವಿತೆಯ ಬಳಕೆಯಲ್ಲ ವಿ ಚಾರಿಸುವಡಳವಲ್ಲ ಚಿತ್ತವ ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ” ಕುಮಾರವ್ಯಾಸನು ತನ್ನ ಕಾವ್ಯದಲ್ಲಿ ಕೆಲವು ಒಗಟು ಪದ್ಯಗಳನ್ನು ಬಳಸಿದ್ದಾನೆ. ಅವಕ್ಕೆ ಮಂಡಿಗೆಗಳೆಂದು ಕರೆಯುತ್ತಾರೆ ಅವು ವ್ಯಾಖ್ಯಾನ ಮಾಡುವವರಿಲ್ಲದಿದ್ದರೆ ಅರ್ಥವಾಗುವುದು ಕಷ್ಟ..! ************

ಕುಮಾರವ್ಯಾಸ ಜಯಂತಿ Read Post »

ಇತರೆ

ವಿಶ್ಲೇಷಣೆ

ಶಬ್ದ-ಅರ್ಥಗಳ ಅನುಸಂಧಾನದಲ್ಲಿ “ಶಬ್ದವೇಧಿ” ಡಾ.ಗೋವಿಂದ ಹೆಗಡೆ ಶಬ್ದ-ಅರ್ಥಗಳ ಅನುಸಂಧಾನದಲ್ಲಿ “ಶಬ್ದವೇಧಿ” ವಸ್ತುವೈವಿಧ್ಯ,ಲಯ-ಛಂದೋ ವೈವಿಧ್ಯಗಳನ್ನು ವಿಪುಲವಾಗಿ ತಮ್ಮ ಕಾವ್ಯ ಕ್ರಿಯೆಯಲ್ಲಿ ತಂದ ನಮ್ಮ ಕವಿಗಳಲ್ಲಿ ಡಾ. ಎಚ್ಎಸ್ ವೆಂಕಟೇಶಮೂರ್ತಿ ಅವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಪರಂಪರೆಯೊಡನೆ ಅನುಸಂಧಾನದ ರೀತಿ ಅವರದು ಎನ್ನುವ ಕೆ ವಿ ತಿರುಮಲೇಶ್ “ಅವರು ಕನ್ನಡದ ಕಾವ್ಯ ಧಾತುವಿಗೆ ಅಂಟಿಕೊಂಡಿರುವ ಕವಿ” ಎಂದು ಗುರುತಿಸುತ್ತಾರೆ. ‘ಈ ಅನುಸಂಧಾನದ ಒಂದು ಎಳೆ ಎಂದರೆ ಛಂದಸ್ಸಿನ ಬಗ್ಗೆ ಅವರಿಗಿರುವ ಮೋಹ.. ಅವರು ಛಂದೋಬದ್ಧವಾಗಿ ಬರೆಯದಿದ್ದರೂ ಛಂದಸ್ಸನ್ನು ಧಿಕ್ಕರಿಸಿಯೂ ಬರೆದಿಲ್ಲ’ ಎಂಬುದು ತಿರುಮಲೇಶರ ಮಾತು. ಸಾನೆಟ್ ಗೆ ಬರೋಣ. ಕನ್ನಡದಲ್ಲಿ ಸಾನೆಟ್ಟನ್ನು ಬಳಸಿ, ಬೆಳೆಸಿದವರಲ್ಲಿ ಮಾಸ್ತಿ ,ಬೇಂದ್ರೆ ,ಕುವೆಂಪು, ಪುತಿನ, ಕಣವಿ ಮೊದಲಾದವರಿದ್ದಾರೆ. ಸಾನೆಟ್ ಅನ್ನು ತಮ್ಮ ಅಭಿವ್ಯಕ್ತಿಯ ಒಂದು ಮಾಧ್ಯಮವಾಗಿಸಿಕೊಂಡು, ಈಗಲೂ ಬರೆಯುತ್ತಿರುವವರಲ್ಲಿ ಎಚ್ಚೆಸ್ವಿ ಪ್ರಮುಖರು.ಹಲವಾರು ವ್ಯಕ್ತಿಚಿತ್ರಗಳನ್ನು ಅಲ್ಲದೆ ಅನೇಕ ಸುಂದರ ನುಡಿಚಿತ್ರಗಳನ್ನು ಅವರು ಸಾನೆಟ್ ಮೂಲಕ ಕಟ್ಟಿಕೊಟ್ಟಿದ್ದಾರೆ. ಕಾವ್ಯದ ಬಗ್ಗೆ ಕಾವ್ಯ ಕ್ರಿಯೆಯ ನಿಗೂಢತೆ ಅದರ ಮಾಂತ್ರಿಕತೆಯ ಬಗ್ಗೆ ಹಲವು ಕವಿಗಳು ಬರೆದಿದ್ದಾರೆ. ಪ್ರತಿಯೊಂದು ಕವನವೂ ಭರವಸೆಯ ವ್ಯವಸಾಯ ಅಜ್ಞಾತದ ತಳಕ್ಕಿಳಿದು ಬಂದವನ ಭಾಗ್ಯ ಎಂದ ರಾಮಚಂದ್ರ ಶರ್ಮರ ಸಾಲುಗಳು(ಕವನ), ಈ ಮುಖೋದ್ಗತ ನಿನ್ನ ಹೃದ್ಗತವೆ ಆದ ದಿನ ಸುದಿನ. ಆವರೆಗು ಇದು ತಕ್ಕ ಮಣ್ಣಿನ ತೇವಕಾಗಿ ಕಾದೇ ಇರುವ ಬೀಜ. ಎಂದ ಗಂಗಾಧರ ಚಿತ್ತಾಲರ (ಕವನ) ಮಾತುಗಳು ಈ ಕ್ಷಣದಲ್ಲಿ ನೆನಪಿಗೆ ಬರುವ ಉದಾಹರಣೆಗಳು. ಶಬ್ದವೇಧಿ ಈ ಸಾಲಿಗೆ ಸೇರುತ್ತದೆ. ಇದೊಂದು ಸುನೀತ (ಸಾನೆಟ್). ೪-೪-೪-೨ ಸಾಲುಗಳ ಇಂಗ್ಲಿಷ್/ಶೇಕ್ ಸ್ಪಿಯರ್ ನ ಸಾನೆಟ್ ಗಳ ಮಾದರಿಯದು. “ಆಲಿಬಾಬನ ಗವಿ”-ಒಳಗೆ ನಿಧಿಯಿದೆ- ನಾವು ಕೇಳಿರುವ ಕಥೆ. ಕವಿ ಇಲ್ಲಿ ಅದನ್ನು ಒಂದು ರೂಪಕವಾಗಿ ಬಳಸಿದ್ದಾರೆ. “ಅಲಿಬಾಬಾನ ಗವಿಯ ಮುಂದೆ ನಿಂತಿರುವವರು ನಾವು” ಎಂದು ಆರಂಭವಾಗುವ ಕವಿತೆ ಗವಿಗೆ ‘ ಹೆಬ್ಬಂಡೆ ಬಾಗಿಲು’ಎನ್ನುತ್ತದೆ. ಗವಿಯ ಒಳಗಿದೆಯಂತೆ ಕೊಪ್ಪರಿಗೆ ತುಂಬ ನಿಧಿ. ‘ಇದೆಯಂತೆ’ ಯಾಕೆಂದರೆ ನಾವು ಇನ್ನೂ ಅದನ್ನು ಕಂಡಿಲ್ಲ. ಯಾರೋ ಕಂಡವರು ಹೇಳಿದ್ದಾರೆ. ನಮ್ಮ ದುರ್ದೈವ-‘ಹೊರಗೆ ಉರಿಬಿಸಿಲು, ಬಿರುಗಾಳಿ’ಈ ಮಾತು ಗವಿಯ ಹೊರಗಿನ ಸ್ಥಿತಿಯನ್ನು ಸಹಜವಾಗಿ ಚಿತ್ರಿಸಿದರೂ ಶಕ್ತಿಯುತ ಸಂಕೇತವೂ ಹೌದು. ಕವಿತೆಯ ನಿಧಿ ಸಿಗದ ನಮ್ಮ ವಿಧಿ ದುರ್ವಿಧಿ. ಅದರ ಹೊರಗೆ ಉಳಿದವರಿಗೆ ಇರುವುದು ಉರಿಬಿಸಿಲು ಮತ್ತು ಬಿರುಗಾಳಿ ಮಾತ್ರ. ಅಲಿಬಾಬಾನ ಗವಿಯ ರೂಪಕ ಮುಂದುವರೆಯುತ್ತದೆ. ಬಾಗಿಲು ತೆಗೆಯಲು ಸಂಕೇತ ಪದ ಬೇಕು. ನಮ್ಮ ಸ್ಥಿತಿ ಬೇರೆ. ಸಂಕೇತ ಪದ ಮರೆತು, ಬೇರೇನನ್ನೋ ಬಡಬಡಿಸಿ, ಶಬ್ದಕೋಶ ಹಿಡಿದು,ಹಲವು ಪದಗಳನ್ನು ಜಪಿಸಿ ನೋಡುತ್ತಿದ್ದೇವೆ.’ಕಲ್ಲು ಕರಗುವ ಸಮಯ ಕಾಯುತ್ತ ಕಾಯುತ್ತ’ಈ ಕಾಯುವಿಕೆಯ ತಪಸ್ಸನ್ನು ಗಮನಿಸಿ. ಇಂದಲ್ಲ ನಾಳೆ ಬಾಗಿಲು ತೆರೆದೀತೆನ್ನುವ ಆಶಾಭಾವ ಕಾಯುವಿಕೆಯನ್ನು ಮುಂದುವರಿಸಿದೆ. ಬಾಗಿಲಿದೆ. ಬಾಗಿಲಾಚೆಯ ಗವಿಯಲ್ಲಿ ಅರ್ಥವೂ ಇರಬಹುದು. ‘ಅರ್ಥ’ ಪದದ ಶ್ಲೇಷೆ ತುಂಬ ಸಹಜವಾಗಿ, ಸೊಗಸಾಗಿ ಬಂದಿದೆ.ಅಲಿಬಾಬಾನ ಗವಿಯ ರೂಪಕದಿಂದ ಅರ್ಥಕ್ಕೆ ‘ಸಂಪತ್ತು’ ಎಂಬ ಅರ್ಥ, ಅಭಿಪ್ರಾಯ ತಾನಾಗಿ ಒದಗಿ ಬರುತ್ತದೆ. ಒಳಗೆ ಅರ್ಥವಿರಬಹುದು,ಶಬ್ದಗಳು ಹೊರಗಿವೆ ಎನ್ನುತ್ತದೆ, ಕವಿತೆ. ಇವೆರಡರ ಜೋಡಣೆ-ವಾಗರ್ಥಗಳ “ಪ್ರತಿಪತ್ತಿ”-ಹೇಗೆ? ಒಂದೊಂದು ಪದವನ್ನು ಇಟ್ಟು ಅರ್ಥದ ಬಾಗಿಲನ್ನು ತಟ್ಟುವುದು… ಅದು, ಅಷ್ಟು ಮಾತ್ರ ಸಾಧ್ಯ! “ಏಕಾಗ್ರ ನಿಷ್ಠೆಯಲಿ”ಮತ್ತೆ ತಪದ ಮಾತು. ಯಾವುದು ಈ ಪದವಿಟ್ಟು ಅರ್ಥದ ಅಂತರಂಗವನ್ನು ತೆರೆಯಿಸುವ ಕಾರ್ಯವನ್ನು, ಆ ಪ್ರಯತ್ನವನ್ನು ಬಿಡದೆ ನಡೆಸುವುದು? ಸುನೀತದ ಕೊನೆಯ ಕಪ್ಲೆಟ್, ದ್ವಿಪದಿ, ಯಾವುದನ್ನು ಅಡಿಗ, ಶರ್ಮರು “ಭರತವಾಕ್ಯ” ವನ್ನಾಗಿ ನಿಲ್ಲಿಸುತ್ತಾರೆಂದು ತಿರುಮಲೇಶರು ಹಾಸ್ಯ ಮಾಡುತ್ತಾರೋ ಅಂತಹ ಶಕ್ತಿಯುತ ಜೋಡಿಸಾಲು ಈಗ. ಈ ನಿರಂತರ ಶ್ರಮದ ಹಿಂದೆ ಒಂದೇ ಕೆಚ್ಚು: ನಮ್ಮ ಭಾಷೆಯ ಬಗ್ಗೆ ನಮ್ಮ ಆಳದ ನಚ್ಚು! ಈ ಕೊನೆಯ ಸಾಲು ನನಗೆ ಬೆರಗನ್ನು ತಂದಿದ್ದು. ನಿಜ ಭಾಷೆಯಲ್ಲಿ ಎಲ್ಲ ಕಾವ್ಯ ವ್ಯಾಪಾರ. ಅದು ಅರ್ಥ ನೆಲೆಯ ಅರಿವಿನ ನಿಧಿಯ ಬಾಗಿಲನ್ನು ತೆರೆದೇ ತೆರೆಯುತ್ತದೆ-ಈ ದೃಢನಂಬಿಕೆ ಒಂದೇ ಕೆಲಸವನ್ನು ಮಾಡಲು ಮರಳಿ ಯತ್ನವ ಮಾಡಲು ಹಚ್ಚುವುದು. ಆ ನಚ್ಙು ಇದ್ದವ ಮಾತ್ರ ಕವಿಯಾಗುತ್ತಾನೆ. ಶಬ್ದವನ್ನು ನೆಮ್ಮಿ ಅರ್ಥ ಲಾಭ ಪಡೆಯಲು ಕತ್ತಲಲ್ಲೂ ಬಾಣಪ್ರಯೋಗ ಮಾಡುತ್ತಾನೆ. ತುಂಬ ಎಚ್ಚರದಿಂದ, ನಿಷ್ಣಾತ ಶಿಲ್ಪಿಯ ಮಗ್ನತೆಯಿಂದ ತಮ್ಮ ಕವಿತೆಗಳ ಶರೀರ, ಶಾರೀರಗಳನ್ನು ರೂಪಿಸುವ ಕವಿ ಎಚ್ಎಸ್ವಿ. ನಮ್ಮ ಅರಿವನ್ನು, ಸಂವೇದನೆಯನ್ನು ತಣ್ಣಗೆ ವಿಸ್ತರಿಸುವ,ಎತ್ತರಿಸುವ,ಭಾವಪುಷ್ಟಿಯೊದಗಿಸುವ ಕವಿತೆಗಳು ಅವರವು.ಭಾವೋದ್ರೇಕ ಅವರ ರೀತಿಯಲ್ಲ. ‘ಶಬ್ದವೇಧಿ’ ಅಂಥದೊಂದು ಕವಿತೆ. ಎಚ್ಚೆಸ್ವಿಯವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವನ್ನು ಅಲಂಕರಿಸುತ್ತಿರುವ ಈ ಶುಭ ಅವಸರದಲ್ಲಿ,ಅವರು ಶಬ್ದ ,ಸಂಕೇತಗಳನ್ನು ಬಳಸಿ, ಬೆಳೆಸಿ, ಅರ್ಥದ ಬಾಗಿಲುಗಳನ್ನು ತೆರೆಸುತ್ತಲೇ ಇರಲಿ ಎಂದು ಹಾರೈಸುತ್ತೇನೆ. ======

ವಿಶ್ಲೇಷಣೆ Read Post »

You cannot copy content of this page

Scroll to Top