ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ದಿಕ್ಸೂಚಿ

ದಿಕ್ಸೂಚಿ

ಸೋಲಿನ ಸುಳಿಯಲ್ಲೇ ಗೆಲುವಿನ ತುದಿಯಿದೆ! ಎಷ್ಟೆಲ್ಲ ಅನುಭವಗಳ ಮೂಟೆಯನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗಿದರೂ ಗೆಲುವು ಮಿಂಚಿನಂತೆ ಅರೆಗಳಿಗೆ ಮಿಂಚಿ ಮಾಯವಾಗುತ್ತದೆ.ಇಲ್ಲಿ ಎಲ್ಲದರಲ್ಲೂ ಒತ್ತಡ. ಯಾವುದೂ ಸರಳ ರೇಖೆಯಲ್ಲಿ ಸಿಗುವುದಿಲ್ಲ. ಎಲ್ಲವನ್ನೂ ವಕ್ರ ರೇಖೆಯ ಕಾಣದ ತಿರುವುಗಳಲ್ಲಿ  ಶ್ರಮ ಹಾಕಿಯೇ ಪಡೆಯಬೇಕು.ಕೆಲವೊಮ್ಮೆ ಶ್ರಮ ಹಾಕಿದರೂ ಮುಖ ಎತ್ತಿಯೂ ನೋಡದೇ, ಬೆನ್ನು ತೋರಿಸಿ ನಗುತ್ತದೆ. ಕೈಗೆ ಸಿಗದೇ ಓಡಿ ಬಿಡುತ್ತದೆ ಗೆಲುವು! ಒಮ್ಮೊಮ್ಮೆ ನನಗೇ ತಿಳಿಯದಂತೆ ಮೇಲಕ್ಕೆತ್ತರಿಸಿ ಕೂರಿಸುತ್ತದೆ. ಮತ್ತೊಮ್ಮೆ ನಿರೀಕ್ಷಿಸಿದರೂ ಕೈಗೆ ಸಿಗದೇ ಕೆಳಕ್ಕೆ ಎಸೆದು ಬಿಡುತ್ತದೆ. ಹೆದರಿಸಿ  ಬೆನ್ನಲ್ಲಿ ಬೆವರಿಳಿಸಿದ ಸೋಲಿನ ಘಟನೆಗಳನ್ನು ನೆನದಾಗಲೊಮ್ಮೆ ಗೆಲುವಿನ ರುಚಿಯ ಆಸೆಯೇ ಬೇಡ ಎಂದೆನಿಸಿ ಬಿಡುತ್ತದೆ.ಸೋಲಿನ ಸಹವಾಸ ಸಾಕಾಗಿ ಒಮ್ಮೆ ಸರಿದು ನಿಂತು ಬದುಕಿನ ಕಪಾಳಕ್ಕೆ ಬಾರಿಸಲೇ ಎನಿಸುವಷ್ಟು ಕೋಪ ನೆತ್ತಿಗೇರುತ್ತದೆ. ಆದರೆ, ಎಷ್ಟೇ ಆಗಲಿ ಬದುಕು ನನ್ನದೇ ಅಲ್ಲವೇ? ಅದಕ್ಕೆ ನೋವಾದರೆ ಮರಳಿ ನನಗೂ ನೋವಾಗುವುದಲ್ಲವೇ? ಎನ್ನುತ್ತ ಹಲ್ಲು ಕಿತ್ತ ಹಾವಿನಂತೆ ಬಲಹೀನನಾಗಿ ಬಿಡುತ್ತೇನೆ. ಸೋಲಿನ ಮಡುವಿನಲ್ಲಿ ಬಿದ್ದು ಒದ್ದಾಡುವಾಗ ಈ ಕ್ಷಣವೇ ನನ್ನನ್ನು ನನ್ನ ಬಂಧು ಬಾಂಧವರು ಶವ ಪೆಟ್ಟಿಗೆಯಲ್ಲಿಟ್ಟು ಕೈ ತೊಳೆದುಕೊಳ್ಳಬಾರದೇ ಎಂದೆನಿಸದೇ ಇರದು. ಸೋಲು ಕಂಡಾಗ ಜೊತೆಗಿದ್ದವರು ದೂರವಾಗುವರು.ಕೆಲಸಕ್ಕೆ ಬಾರದವನು, ಕೈಲಾಗದವನು,ಎಂದು ಚುಚ್ಚು ಮಾತುಗಳಲ್ಲೇ ಚುಚ್ಚುವರು. ಇದೆಲ್ಲ ಏನು ಅಂತಿರೇನು? ಸಾಲು ಸಾಲು ಸೋಲುಂಡ ಜೀವಿಗಳ ಸ್ವಗತ. ಅಷ್ಟಕ್ಕೂ ಗೆಲುವು ಎಂದರೇನು? ಸೋಲಿನ ಸುಳಿಯಲ್ಲೇ ಇರುವ ಗೆಲುವಿನ ತುದಿ ಹಿಡಿಯಲು ಕುತೂಹಲ ಅಲ್ಲವೇ? ಹಾಗಾದರೆ ಮುಂದಿನ ಸಾಲುಗಳಿಗೆ ಕಣ್ಣು ಹಾಯಿಸಿ. ಗೆಲುವು ಎಂದರೇನು? ಗೆಲುವನ್ನು ವ್ಯಾಖ್ಯಾನಿಸುವುದು ಜೀವನವನ್ನು ಪುಟವೊಂದರಲ್ಲಿ ಹಿಡಿದಿಟ್ಟಷ್ಟೇ ಕಠಿಣ. ಹಾಗೆ ನೋಡಿದರೆ ಗೆಲುವು ಅನ್ನೋದು ಅವರವರ ಭಾವಕ್ಕೆ ಬಿಟ್ಟದ್ದು. ಕೆಲವರಿಗೆ ಹಣದೊಡೆಯರಾಗುವುದು ಗೆಲುವಾದರೆ, ಇನ್ನೂ ಕೆಲವರಿಗೆ ಆಟೋಟಗಳಲ್ಲಿ ಚಾಂಪಿಯನ್ ಆಗುವುದು. ತಾವು ದಾಖಲಿಸಿದ ದಾಖಲೆಗಳನ್ನು ತಾವೇ ಮುರಿಯುವುದು. ಇತರರ ಹೆಸರಲ್ಲಿರುವ ದಾಖಲೆಯನ್ನು ಸರಿಗಟ್ಟುವುದು.ಉದ್ಯಮಿಯಾಗುವುದು, ಸ್ವ ಉದ್ಯೋಗ, ಸರಕಾರಿ ನೌಕರಿ ಇನ್ನೂ ಹತ್ತು ಹಲವು.ಈಗ ನಮ್ಮ ಹತ್ತಿರ ಏನಿದೆಯೋ [ಮನೆ, ಶಿಕ್ಷಣ, ಹಣ, ಉದ್ಯೋಗ] ಅಷ್ಟನ್ನು ಪಡೆಯುವ ಕನಸು ಕಾಣುತ್ತಿರುವವರಿಗೆ ಅವುಗಳನ್ನೆಲ್ಲ ಪಡೆಯುವುದೇ ಗೆಲುವು.ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಗೆಲುವು ಎಲ್ಲ ಕಾಲಕ್ಕೂ ಎಲ್ಲರಿಗೂ ಸಾಮಾನ್ಯವಾಗಿರುವುದಲ್ಲ. ವಯೋಮಾನ ಸ್ಥಿತಿ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವಂಥದು. ಅರ್ಲ್ ನೈಟಿಂಗೇಲ್‌ರ ಪ್ರಕಾರ  ‘ಅರ್ಹ ಅಥವಾ ಯೋಗ್ಯವಾದ ಗುರಿಯನ್ನು ಪ್ರಗತಿಪೂರ್ವಕವಾಗಿ ಸಾಧಿಸುವ ಪರಿಯೇ ಯಶಸ್ಸು’ ನೂರಾರು ಚಿಂತೆ ಕೋಟಲೆಗಳ ಮೀರಿ ಎದ್ದು ನಿಲ್ಲುವುದು ಯಶಸ್ಸು. ದೊಡ್ಡ ದೊಡ್ಡ ಕನಸು ಕಾಣುವುದು ಗೆಲುವಲ್ಲ. ಅವುಗಳು ನನಸಾಗುವವರೆಗೆ ಬೆನ್ನು ಹತ್ತುವುದು ಗೆಲುವು. ಅಂದ ಹಾಗೆ ಸೋಲಿನ ಸುಳಿಯಲ್ಲೇ ಗೆಲುವಿದೆ. ಅದ್ಹೇಗೆ ಅಂತಿರೇನು? ಸೋಲಿನ ಸಹವಾಸವೇ ಸಾಕಪ್ಪಾ ಎಂದು ಸೋಲನ್ನಪ್ಪಿಕೊಳ್ಳುವಾಗ ಎರಡು ಹೆಜ್ಜೆ ಮುಂದಿಟ್ಟರೆ ಸಾಕು ಗೆಲುವು  ತಾನಾಗಿಯೇ ನಮ್ಮ ಕೈ ಹಿಡಿಯುತ್ತದೆ. ಬನ್ನಿ ಸೋಲಿನ ಸುಳಿಯಲ್ಲಿ ಗೆಲುವು ಹೇಗೆ ಅಡಗಿದೆ ನೋಡೋಣ. ಬೇರು ಕಿತ್ತೊಗೆಯಿರಿ ಸೋಲನ್ನು, ಬೇಡ ಬೇಡವೆಂದರೂ ಕಾಲಿಗೆ ತೊಡರಿಸಿಕೊಳ್ಳುವ ಕಸದ ಬಳ್ಳಿಯೆಂದು ತಿಳಿಯುವುದು ತಪ್ಪು.    ಉಪಾಯವಿಲ್ಲದೇ ತಂತ್ರಗಳಿಲ್ಲದೇ ಕೈ ಹಾಕಿದರೆ, ಕೈ ಹಾಕಿದ ಕೆಲಸ ಕೈಗೂಡುವುದಿಲ್ಲ.ಸೋಲಿನ ಎದೆಯೊಳಗೆ ಇಣುಕಿ ನೋಡಬೇಕು. ಆಗ ಅದು ತನ್ನ ಅಂತರಾಳದ ನೋವನ್ನು ಬಿಚ್ಚಿಡುತ್ತದೆ.ಇತರರ ಗೆಲುವು ಕಂಡು ಹೊಟ್ಟೆ ಕಿಚ್ಚು ಹೆಚ್ಚಾಯಿತೇ ಹೊರತು ನಿನ್ನ ಗುರಿಯ ಕಿಚ್ಚು ಹೆಚ್ಚಾಗಲಿಲ್ಲ ಎಂದು ಅಳುತ್ತದೆ. ಸೋತೆನೆಂದು ನಿರಾಸೆಯಿಂದ ಕೈ ಚೆಲ್ಲಿ ಕುಳಿತಿಯೇ ಹೊರತು ನಾ ಹೊತ್ತು ತಂದ ಪಾಠವನ್ನು ಆಸೆಯಿಂದ ಸ್ವೀಕರಿಸಲೇ ಇಲ್ಲ. ಕೊರತೆ ಇರುವುದು ನಿನ್ನಲ್ಲಿಯೇ ಹೊರತು ನನ್ನಲ್ಲಲ್ಲ ಎಂದು ಬಿಕ್ಕುತ್ತದೆ. ಹಾಗಾದರೆ ನಾವು ಸೋಲು ತನ್ನ ಬೆನ್ನ ಮೇಲೆ ಹೊತ್ತು ತಂದಿರುವ ಪಾಠವನ್ನು ಅರ್ಥೈಸಿಕೊಳ್ಳಲು ಮುಂದಾಗಬೇಕು ಎಂದಂತಾಯಿತು. ಸೋಲಿನ ಕುರಿತಾಗಿರುವ ಹತಾಶೆ ನಿರಾಶೆಯ ಬೇರುಗಳನ್ನು ಹುಡುಕಿ ಅವುಗಳನ್ನು ಬೇರು ಸಮೇತ ಕಿತ್ತೊಗೆಯಬೇಕು. ಸೋಲೇ ಗೆಲುವಿನ ಸೋಪಾನವೆಂದು  ಯಾವ ಅಂಶಗಳ ಕೊರತೆಯಿಂದ ಸೋತೆ ಎಂದು ಆತ್ಮಾವಲೋಕನ ಮಾಡಿಕೊಂಡು ಮುನ್ನುಗ್ಗಬೇಕು.ಆಗ ಗೆಲುವು ಒಂದು ಹೆಜ್ಜೆ ಸನಿಹ ಬರುವುದು. ತಪ್ಪುಗಳ ಪಟ್ಟಿ ಮಾಡಿ  ‘ಮಾನವ ಯಶಸ್ಸಿನಿಂದ ಕಡಿಮೆ ಕಲಿಯುತ್ತಾನೆ. ವೈಫಲ್ಯತೆಯಿಂದ ಹೆಚ್ಚು ಕಲಿಯುತ್ತಾನೆ.’ಎನ್ನುತ್ತಾರೆ ಪ್ರಾಜ್ಞರು. ಕಂಡ ಸೋಲಿನಲ್ಲಿ ಮಾಡಿದ ಮುಖ್ಯ ತಪ್ಪುಗಳನ್ನು ಪಟ್ಟಿ ಮಾಡಿ ಒಂದು ವರದಿಯನ್ನು ಹೆಣೆಯಬೇಕು. ಅದನ್ನು ಸ್ಪಷ್ಟವಾಗಿ ಒಂದೆಡೆ ಬರೆದು ಮುಂದಿನ ಸಲ ಈ ತಪ್ಪುಗಳಾಗದಂತೆ ಜಾಗರೂಕತೆ ವಹಿಸಬೇಕು. ಹೊಸ ತಪ್ಪುಗಳಾದರೆ ಗಾಬರಿಯಿಂದ ಪ್ರಯತ್ನಿಸುವುದನ್ನು ಅರ್ಧಕ್ಕೆ ನಿಲ್ಲಿಸುವಂತಿಲ್ಲ. ಇನ್ನೂ ಚೆನ್ನಾಗಿ ಮಾಡುವುದಾದರೆ ಹೇಗೆ ಮಾಡಬಹುದು ಎನ್ನುವ ಯೋಜನೆ ಹಾಕಿಕೊಂಡು ಮುನ್ನುಗ್ಗಬೇಕು. ಸಣ್ಣ ತೊರೆಗಳು ಮಹಾನ ಸಮುದ್ರಗಳಾಗುತ್ತವೆ. ತಪ್ಪುಗಳನ್ನು ಮರುಕಳಿಸದಂತೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡರೆ ಗೆಲುವಿನ ಇತಿಹಾಸ ನಿರ್ಮಾಣವಾಗುತ್ತದೆ. ಗುರಿಗೆ ಗುರಿ ಇಡಿ ಮಂಡಿಯೂರಿ ಕುಳಿತು ದೇವರನ್ನು ಬೇಡಿದರೆ ಸಿಗುವುದಿಲ್ಲ ಗೆಲುವು.ಯಾರ‍್ಯಾರನ್ನೋ ಒಲಿಸಿಕೊಳ್ಳಲು ಹೋಗುವುದರಲ್ಲಿಲ್ಲ. ಎಲ್ಲರಿಗೂ ಬೇಕಾದ ವ್ಯಕ್ತಿ ನಾ ಆದರೆ ಅದೇ ಗೆಲುವೆಂದು ಎಲ್ಲರನ್ನೂ ತೃಪ್ತಿ ಪಡಿಸಲು ನೋಡಿದರೆ ಸೋಲಿನ ಸುಳಿಯಿಂದ ಹೊರ ಬರಲಾಗುವುದಿಲ್ಲ. ಇದನ್ನೇ ಬಿಲ್ ಕಾಸ್ಟಿ ಹೀಗೆ ಹೇಳಿದ್ದಾನೆ.”ಯಶಸ್ಸಿನ ಕೀಲಿ ಕೈ ಯಾವುದೋ ನನಗೆ ತಿಳಿಯದು. ಆದರೆ ಎಲ್ಲರನ್ನೂ ತೃಪ್ತಿ ಪಡಿಸಲು ಯತ್ನಿಸುವುದು ವಿಫಲತೆಯ ಕೀಲಿಕೈ ಎಂಬುದನ್ನು ಮಾತ್ರ ನಾನು ಚೆನ್ನಾಗಿ ಬಲ್ಲೆ.” ಇಟ್ಟುಕೊಂಡ ಗುರಿಗೆ ಗುರಿ ಇಟ್ಟು ಹೊಡೆದರೆ, ಸೋಲು ನಿಮ್ಮನ್ನು ಬಿಟ್ಟು ಹೋಗಲು ಬೇಸರಿಸಿಕೊಳ್ಳುವುದಿಲ್ಲ. ಗುರಿಗೆ ಬೇಕಾದ ಕೆಲಸ ಕಾರ್ಯಗಳ ಯೋಜನೆ ರೂಪಿಸಿ ಮಾಡಲೇ ಬೇಕೆಂದು ಮನಸ್ಸಿಗೆ ಹಟ ಹಿಡಿಯುವಂತೆ ಮಾಡಿ.ಇಲ್ಲದಿದ್ದರೆ ಮನಸ್ಸು ಅನಗತ್ಯ ಕೆಲಸಗಳ ಸುತ್ತುವರೆದು ಅಗತ್ಯವಾದುದನ್ನು ಮಾಡಲು ಅಡಚಣೆ ಉಂಟು ಮಾಡುತ್ತದೆ. ಮನದ ತುಡಿತವು ಇಲಿಯನ್ನೂ ಹುಲಿಯಾಗಿಸಬಲ್ಲದು. ನಿರಂತರ ಪ್ರಯತ್ನಿಸಿ ಸೋತಾಗ ಹಗಲು ರಾತ್ರಿ ಸಾಲು ಸಾಲು ಸೋಲುಗಳನ್ನು ಅವುಚಿ ಹಿಡಿದುಕೊಂಡು ಕಣ್ಣೀರಿಡುವಾಗ ಗೆಲುವಿನ ಮೇಲೆ ನಂಬಿಕೆ ಹೊರಟು ಹೋಗುತ್ತದೆ. ಮೃತ ಮೀನುಗಳು ಮಾತ್ರ ನೀರು ಹರಿಯುವ ದಿಕ್ಕಿನಲ್ಲಿ ಚಲಿಸುತ್ತವೆ ಎನ್ನುವುದನ್ನು ಮರೆಯಬಾರದು.ಹೇಳದಿದ್ದರೂ ಮಾಡುವವರು ಹೆಚ್ಚಿನ ಸಂಬಳ ಪಡೆಯುತ್ತಾರೆ ಎಂಬುವುದನ್ನು ನೆನಪಿಡಬೇಕು. ಪ್ರಯತ್ನಕ್ಕೆ ಸರಿಯಾದ ಪ್ರತಿಫಲ ಸಿಕ್ಕೇ ಸಿಗುತ್ತದೆ. ಸಿಗುವ ಸಮಯ ಹೆಚ್ಚು ಕಡಿಮೆ ತಡವಾಗಬಹದು. ಒಂದೊಂದು ಸೋಲಿನಿಂದಲೂ ಮಾರಕವಾದ ಅಂಶಗಳನ್ನು ತ್ಯಜಿಸಬೇಕು. ಪೂರಕ ಅಂಶಗಳತ್ತ ಚಿತ್ತ ದೃಢವಾಗಿಸಿ, ಬಿಡದೇ ಪ್ರಯತ್ನಿಸಬೇಕು. ಆಕಾಶದೆತ್ತರಕ್ಕೆ ಬೆಳೆದು ನಿಂತ ಹೆಮ್ಮರಗಳನ್ನು ಸಹ ಅನೇಕ ಹೊಡೆತಗಳಿಂದ ನೆಲಕ್ಕೆ ಉರಳಿಸಬಹುದು.ಅಂದರೆ ಯಶಸ್ಸಿಗೆ ಒಂದರ ಮೇಲೊಂದರಂತೆ ಪ್ರಯತ್ನಗಳು ಬೇಕಾಗುತ್ತವೆ. “ಬಹುತೇಕ ಜನರು ಯಶಸ್ಸಿನ ಬಾಗಿಲವರೆಗೆ ಬಂದು, ತಮ್ಮ ಪ್ರಯತ್ನ ಬಿಟ್ಟು ಬಿಡುತ್ತಾರೆ. ಹೌದು, ವಿಜಯದ ಗುರಿ ಒಂದು ಗಜ ದೂರವಿರುವಾಗ, ಕೇವಲ ಒಂದು ಅಡಿ ಇರುವಾಗ ಯತ್ನ ಬಿಟ್ಟು ಬಿಡುತ್ತಾರೆ.’ಎನ್ನುತ್ತಾರೆ ಎಚ್. ರಾಸ್. ಪೆರಾಟ್. ಕೊನೆಯ ಹೆಜ್ಜೆಯವರೆಗೂ ಪ್ರಯತ್ನಿಸಿ ಸೋಲಿನ ಸುಳಿಯಲ್ಲೇ ಅಡಗಿದ ಗೆಲುವು ತಂತಾನೇ ಹರಿದು ಬರುತ್ತದೆ. ************************************ ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

ದಿಕ್ಸೂಚಿ Read Post »

ಅಂಕಣ ಸಂಗಾತಿ, ಮುಖಾಮುಖಿ

ಮುಖಾಮುಖಿ

“ಏಕತಾನತೆಗೆ ಬೇಸತ್ತಾಗ ಕವಿತೆ ಕೈಹಿಡಿಯುತ್ತದೆ” “ಪೋಯಟ್ರಿ ಇಸ್ ಅನ್ ಎಸ್ಕೇಪ್ ಪ್ರಾಮ್ ಪರ್ಸನಾಲಿಟಿ” ನಾಗರೇಖಾ ಗಾಂವಕರ್ ನಾಗರೇಖಾ ಗಾಂವ್ಕರ್ ಅಂಕೋಲಾ ತಾಲೂಕಿನ ಆಡ್ಲೂರು ಗ್ರಾಮದವರು. ನಾಗರೇಖಾ ಅವರು ದಾಂಡೇಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲಾಭಾಷಾ ಉಪನ್ಯಾಸಕಿ. ಏಣಿ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪಾಶ್ಚಿಮಾತ್ಯ ಸಾಹಿತ್ಯ ಲೋಕ ಭಾಗ-೧,೨ ನ್ನು ಸಹ ಪ್ರಕಟಿಸಿದ್ದಾರೆ. ಕತೆಗಳನ್ನು ಸಹ ಬರೆಯುವ ಇವರು, ಕೆಲ ಕತಗಳಿಗೆ ಬಹುಮಾನ ಸಹ ಪಡೆದಿದ್ದಾರೆ. ಕನ್ನಡ ಕವಿಗಳ ಕವಿತೆಗಳನ್ನು ಆಂಗ್ಲಭಾಷೆಗೆ ತರ್ಜಿಮೆ ಮಾಡುವಲ್ಲಿ ಸಹ ಈಚೆಗೆ ತೊಡಗಿಕೊಂಡಿದ್ದಾರೆ. ಕನ್ನಡ ಕಾವ್ಯ ಜನಪರವಾಗಿ, ಮಹಿಳಾ ಜಗತ್ತಿನ ಕುರಿತು ಸ್ಪಂದಿಸುತ್ತಲೇ ಬಂದಿದೆ. ಸಮಾಜದ ಪ್ರತಿಬಿಂಬವೇ ಆಗಿರುವ ಸಾಹಿತ್ಯ, ನೋವಿಗೆ ಸಾಂತ್ವಾನ ಹೇಳಿದೆ. ದುಃಖಕ್ಕೆ ಮಿಡಿದಿದೆ. ಅನ್ಯಾಯವನ್ನು ಪ್ರತಿಭಟಿಸಿದೆ. ತಾಯಿಯಂತೆ ಪ್ರೀತಿ,ವಾತ್ಯಲ್ಯಗಳನ್ನು ನೀಡಿದೆ. ಕಾವ್ಯ ಅಮೃತಕ್ಕೆ ಹಾರುವ ಗರುಡ ಎಂಬ ಮಾತಿದೆ. ಕಾವ್ಯದ ದಿಕ್ಕು ದಿಶೆಗಳನ್ನು ಕನ್ನಡ ಕಾವ್ಯ ಜಗತ್ತು ನಿರಂತರವಾಗಿ ತನ್ನ ದಾರಿಯನ್ನು ಹುಡುಕುತ್ತಾ ಸಾಗಿದೆ. ಈ ಸಲ ಸಂಗಾತಿ ವೆಬ್ ನೊಂದಿಗೆ ನಾಗರಾಜ್ ಹರಪನಹಳ್ಳಿ ಅವರ ಜೊತೆ ಮುಖಾಮುಖಿಯಾಗಿದ್ದಾರೆ ಕವಯಿತ್ರಿ ನಾಗರೇಖಾ ಗಾಂವ್ಕರ್. …… ಪ್ರಶ್ನೆ : ಕವಿತೆ ಏಕೆ ಬರೆಯುತ್ತೀರಿ? ಉತ್ತರ : ಬದುಕಿಗೆ ಜೀವಂತಿಕೆಯನ್ನು ತುಂಬುವಂತಹ ಎಷ್ಟೆಷ್ಟೋ ಪ್ರಯತ್ನಗಳಿವೆ. ಭಾವ ಜೀವಿಯಾದವ ಸಂವೇದನೆಗಳ ತಾಕಲಾಟದಲ್ಲಿ ವೈಯಕ್ತಿಕ ದರ್ಶನಗಳ ಕಂಡುಕೊಳ್ಳುವತ್ತ ಹಾಗೂ ಅದನ್ನು ಒಡಮೂಡಿಸುವಲ್ಲಿ ಇದೊಂದು ಮಾರ್ಗ ಹಿಡಿಯುವುದಿದೆ. ಹಾಗಾಗಿ ಕವಿತೆ ನನ್ನನ್ನು ಜೀವಂತವಾಗಿಡುವಲ್ಲಿ ಸಹಕರಿಸುತ್ತದೆ. ಯಾಂತ್ರಿಕ ಬದುಕಿನ ಏಕತಾನತೆಗೆ ಬೇಸತ್ತಾಗ ಕವಿತೆ ಕೈಹಿಡಿಯುತ್ತದೆ. ನಾನು ಯಾರಿಗಾಗಿ ಬರೆಯುತ್ತೇನೆ ಅಂತಾ ಟಾಲಸ್ಟಾಯ್ ಬಹಳ ವಿಷಾದದಿಂದ ಕೇಳಿಕೊಂಡಿದ್ದನಂತೆ. ಅಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಹಾಗಾಗಿ ಈ ಸಂದರ್ಭದಲ್ಲಿ ನಾನು ಹೇಳಬಯಸುವುದಿಷ್ಟೇ! ದ್ವಂದ್ವಗಳನ್ನು ಮೀರಲು, ನನ್ನ ನಾನು ಕಳೆದುಕೊಳ್ಳಲು, ನಿರಾಳವಾಗಲು ಕವಿತೆಗಳನ್ನು ಬರೆದದ್ದು ಇದೆ. ಬರೆಯುತ್ತಿರುವೆ. ಕವಿತೆ ಹುಟ್ಟುವ ಕ್ಷಣ ಯಾವುದು? ಕವಿತೆ ಹುಟ್ಟುವುದು ಕೂಡಾ ಅತೀವ ವಿಷಾದದ ನೆರಳಲ್ಲಿ, ದುಃಖದ ಪರಮಾವಧಿಯಲ್ಲಿ ಇಲ್ಲವೇ ಸಂತೋಷದ ಉತ್ತುಂಗದಲ್ಲಿ. ಅದು ವೈಯಕ್ತಿಕ ಸಂದರ್ಭವೇ ಆಗಿರಬಹುದು ಇಲ್ಲ ಸಾಮಾಜಿಕ ಸಾಂಸ್ಕೃತಿಕ ನೆಲೆಗಳಲ್ಲಿ ಉಂಟಾದ ವಿಪ್ಲವದ ಸಂದರ್ಭವೇ ಆಗಿರಬಹುದು. ಪ್ರಕೃತಿಯಲ್ಲಿ ಮೈ ಮರೆತಾಗ,ಅನ್ಯಾಯ ಕಂಡಾಗ, ಅಸಹಾಯಕತೆ ಉಂಟಾದಾಗ, ಪ್ರೀತಿ ಎಂಬ ಜೀವಾಮೃತಕ್ಕೆ ಹಂಬಲಿಸುವಾಗ, ಕವಿತೆ ಹುಟ್ಟುತ್ತದೆ. ಕವಿತೆಗಳ ವಸ್ತು, ವ್ಯಾಪ್ತಿ, ಹೆಚ್ಚಾಗಿ ಯಾವುದು? ಕವಿತೆ ಆ ಸಮಯದ ಫಲ. ಆದರೂ ಬಾಲ್ಯದ ನೆನಪುಗಳು ನನ್ನ ಬಹಳ ಕಾಡಿವೆ. ಸಮೃದ್ಧವಾದ ಜೀವನಾನುಭವ ಕೊಟ್ಟ ದಿನಗಳವು ಅವು. ಹಾಗಾಗಿ ಆ ನೆನಪುಗಳು ಮಧ್ಯ ವಯಸ್ಸಿನಲ್ಲಿ ನಿಂತು ನೋಡಿದಾಗ ಅಲ್ಲಿಗೂ ಇಲ್ಲಿಗೂ ಇರುವ ಅಗಾಧ ವ್ಯತ್ಯಾಸ, ದೃಷ್ಟಿಕೋನಗಳ ವೈರುಧ್ಯಗಳು ಅನುಭವಗಳು ಎಲ್ಲ ಭಿನ್ನ ವಿಭಿನ್ನವಾಗಿ ಕವಿತೆಗಳಲ್ಲಿ ಮೂಡಿದ್ದಿದೆ. ಹಾಗೇ ಸುತ್ತಲಿನ ಸಮಾಜದ ಓರೆಕೋರೆಗಳು ಅನ್ಯಾಯದ ನಡೆಗಳು, ಬಂಡಾಯವನ್ನು ಮನದಲ್ಲಿ ಮೂಡಿಸಿದಾಗ, ಹೆಣ್ಣಿನ ಮೇಲಿನ ದೌರ್ಜನ್ಯ, ಶೋಷಣೆ ಸಂಗತಿಗಳು ಕವಿತೆಯ ವಸ್ತುವಾಗಿವೆ. ಸಮಕಾಲೀನ ಜೀವನದಲ್ಲಿ ದೌರ್ಜನ್ಯವನ್ನು, ನೋವನ್ನು ವ್ಯಕ್ತಪಡಿಸುವುದು ಮಹಿಳಾ ಕವಿತೆಗಳ ಗುರಿಯಾಗಿರದೇ ಸಮಾನ ಗುಣಮಟ್ಟದ ಕಾವ್ಯ ಕಟ್ಟುವ ದಿಶೆಯಲ್ಲಿ ನನ್ನ ಒಲವಿದೆ. ಪ್ರೀತಿಯ ಕವಿತೆಗಳು, ಪ್ರಕೃತಿಯ ಕುರಿತಾದ ಕವಿತೆಗಳು, ಸಾಮಾಜಿಕ ಅಸಮಾನತೆಯ ಕುರಿತಾಗಿ ಕೆಲವು ಕವಿತೆಗಳ ಬರೆದಿರುವೆ. ಕವಿತೆಗಳಲ್ಲಿ ಬಾಲ್ಯ ಇಣುಕಿದೆಯಾ? ಬಾಲ್ಯದ ನೆನೆಪುಗಳು, ಅದು ಎದೆಯೊಳಗೆ ಎಂದೂ ಮಾಸದ ನೆನೆಪುಗಳ ಮಾಲೆಯಾಗಿ ಇದ್ದದ್ದು, ಕಳೆದುಕೊಂಡ ಹೆತ್ತವರ ನೆನೆಪು, ಅವರುಂಡ ನೋವಿನ ದಿನಗಳ ನೆನಪು ನನ್ನ ಕವಿತೆಗಳಿಗೆ ವಸ್ತುವಾಗಿದೆ. ಆದರೆ ಬದುಕನ್ನು ಒಳಗೊಳ್ಳುವ ಸಾರ್ವಕಾಲಿಕ ಜೀವನ ಸತ್ಯಗಳ ಬಿಂಬಿಸುವ ಕವಿತೆಗಳ ಹುಟ್ಟಿಗೂ, ತುರ್ತು ಕಾಲಕ್ಕೆ, ಆ ಕ್ಷಣದ ತೀವ್ರತೆಗೆ ಹುಟ್ಟುವ ಕವಿತೆಗಳಿಗೂ ಒಂದು ಅವ್ಯಕ್ತ ಭಾವದ ತುಡಿತ ಇದ್ದೇ ಇರುತ್ತದೆ. ಹಾಗಾಗಿ ನನ್ನ ಕವಿತೆಗಳು ನಿರ್ದಿಷ್ಟ ಪ್ರಕಾರದಲ್ಲಿ ಗುರುತಿಸಿಕೊಳ್ಳುವಲ್ಲಿ ಸೋತಿವೆ ಎಂಬ ಬೇಸರವಿದೆ ನನಗೆ. ಆದರೂ ಬದುಕು ಎಲ್ಲ ಅನುಭವಗಳ ಮೂಲಕವೇ ಸಾಗುವುದರಿಂದ ಅನುಭವ ಜನ್ಯ ಅಭಿವ್ಯಕ್ತಿಯಾಗಿ ಕವಿತೆ ಹುಟ್ಟಿದೆ. ಆದರೆ ಅದು ಕೇವಲ ಅನುಭವವನ್ನು ಮಾತ್ರ ಕಡೆಯುವ ಕೋಲಲ್ಲ. ಅದರೊಳಗೆ ನಿಗೂಢತೆಗೆ ತೆರೆದುಕೊಳ್ಳಬೇಕು. ವಸ್ತು, ಅರ್ಥವನ್ನು ದಾಟಿ ಅಗಮ್ಯದೆಡೆಗೆ ಸಾಗಬೇಕು. ಅಂತಹ ಕೆಲವೇ ಕೆಲವು ಕ್ಷಣಗಳ ನಾನು ಅನುಭವಿಸಿದ್ದೇನೆ. ಮತ್ತು ಏಲಿಯಟ್ ಹೇಳುವ “ಪೋಯಟ್ರಿ ಇಸ್ ಅನ್ ಎಸ್ಕೇಪ್ ಪ್ರಾಮ್ ಪರ್ಸನಾಲಿಟಿ” ಈ ಮಾತನ್ನು ನಾನು ಬಹಳವಾಗಿ ಒಪ್ಪುವೆ. ಎಲ್ಲ ಕವಿತೆಗಳ ವಸ್ತುವು ನನ್ನ ಅನುಭವವೇ ಆಗಬೇಕೆಂದಿಲ್ಲ. ಪ್ರಸ್ತುತ ರಾಜಕಾರಣದ ಬಗ್ಗೆ ? ನೋಡಿ ರಾಜಕಾರಣ ಪದಕ್ಕೆ ಎಷ್ಟು ಅನರ್ಥ ಬಂದಿದೆ, ಅದು ಅಪಭ್ರಂéಶಕ್ಕೆ ಒಳಗಾಗಿದೆ. ಇವತ್ತು ಸಾಮಾನ್ಯ ಭಾಷೆಯಲ್ಲಿ ಅವನು ಬಹಳ ರಾಜಕಾರಣ ಮಾಡುತ್ತಾನೆ ಎಂದು ಯಾರಾದರೂ ಹೇಳಿದರೆ ಅವನೇನೋ ಕುತಂತ್ರ ಮಾಡುತ್ತಿದ್ದಾನೆ ಎಂದು ಅರ್ಥೈಸಿಕೊಳ್ಳಲಾಗುತ್ತದೆ.. ಹಾಗಾಗಿ ನನಗೆ ರಾಜಕೀಯ ಅದರ ದೊಂಬರಾಟಗಳ ಬಗ್ಗೆ ತೀವ್ರ ನಿರಾಸಕ್ತಿ, ಅಷ್ಟೇ ಅಲ್ಲ ಜಿಗುಪ್ಸೆ ಕೂಡಾ. ದೇಶದ ಒಳಿತನ್ನು ಉದ್ಧಾರವನ್ನು ಮೂಲಧ್ಯೇಯವಾಗಿಸಿಕೊಂಡ ರಾಜಕೀಯ ನಾಯಕರು ಇಂದು ವಿರಳಾತೀವಿರಳ. ಭಾರತದಲ್ಲಿ ಸ್ವಜನ ಹಿತಾಸಕ್ತಿಯೇ ನಾಯಕರ ಮುಖ್ಯ ಧ್ಯೇಯ. ಅದೂ ಪಕ್ಷಾತೀತವಾದ ಪರಂಪರೆಯಾಗಿ ನಮ್ಮಲ್ಲಿದೆ. ಕೊಳೆತು ನಾರುತ್ತಿರುವ ರಾಜಕಾರಣದ ಬಗ್ಗೆ ಕವಿತೆ ಕಟ್ಟಿ ಅದನ್ನು ವಿಡಂಬಿಸುವ ಕವಿತೆಗಳು ಪುಂಖಾನುಪುಂಖವಾಗಿ ಬರುತ್ತಿವೆ. ಆದರೂ ಪದಗಳು ಸೋತಿವೆ. ಹಾಗಿದ್ದೂ ಅಂತಹ ಕವಿತೆಗಳು ತುತರ್ುಕಾಲದ ಕವಿತೆಗಳಾಗಿ ನಾನೂ ಬರೆದಿದ್ದಿದೆ, ಧರ್ಮ ದೇವರು ವಿಚಾರದಲ್ಲಿ ನಿಲುವು ? ವಿಗ್ರಹ ಆರಾಧನೆ, ನಂಬಿಕೆ, ನಾಮಸ್ಮರಣೆ, ಭಯ ಇವು ಯಾವುದೂ ಇಲ್ಲದಂತೆ ಮನಸ್ಸು ಸ್ವಚ್ಛವಾಗಿದ್ದಾಗ ಕಾಲಾತೀತವಾದ, ಶಾಶ್ವತವಾದ ದೇವರೆಂದು ಕರೆಯಬಹುದಾದ ಸತ್ಯ ಕಾಣಿಸುತ್ತದೆ. ಇದನ್ನು ಕಾಣಲು ಅಪಾರವಾದ ಒಳನೋಟ, ತಿಳುವಳಿಕೆ, ತಾಳ್ಮೆ ಬೇಕು. ಧರ್ಮವೆಂದರೆ ಏನು ಎಂದು ಅನ್ವೇಷಿಸುವವರು ದಿನದಿನವೂ ಅನ್ವೇಷಿಸುತ್ತಲೇ ಇರುವವರು ಮಾತ್ರ ನಿಜದ ಧರ್ಮ ಅರಿಯಬಲ್ಲರು ಎಂದು ಜಿಡ್ಡು ಕೃಷ್ಣಮೂರ್ತಿ ಹೇಳುತ್ತಾರೆ. ಆದರೆ ಅಂತಹ ಒಳನೋಟ ಇನ್ನು ಪಡೆಯದ ನಾನು ಆಸ್ತಿಕ ಮನಸ್ಥಿತಿಯಲ್ಲಿ ಸಂಸ್ಕೃತಿಯ ನೆರಳಲ್ಲಿ ಇದ್ದು, ಸಾರ್ಥಕ ಬದುಕಿಗೆ ಬೇಕಾದ ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುವಂತಹ ಆಚರಣೆಗಳಲ್ಲಿ ಒಲವಳ್ಳವಳು. ಅಲ್ಲದೇ ನಮ್ಮದೇ ಆದ ಒಂದು ಸಂಸ್ಕೃತಿಯ ಉಳಿವು ಬೇಕೆನ್ನುವ ನಿಟ್ಟಿನಲ್ಲಿ ಪರಂಪರೆಯನ್ನು ಬೆಳೆಸಿಕೊಂಡು ಹೋಗುವುದು ಉತ್ತಮ. ನಕಾರಾತ್ಮಕ ಧೋರಣೆ ವೈಚಾರಿಕತೆ ಆಗುವುದಿಲ್ಲ. ಆದರೆ ಮೌಢ್ಯದಿಂದ ಕೂಡಿದ ಸಂಪ್ರದಾಯಗಳಿಗೆ ನನ್ನ ವಿರೋಧವಿದೆ. ಇಂತಹುಗಳೆಲ್ಲ ಹೆಚ್ಚಾಗಿ ರೂಢಿಗತವಾಗಿ ಬಂದ ಸಂಪ್ರದಾಯಗಳು. ಪರಂಪರೆಗೂ ಸಂಪ್ರದಾಯಕ್ಕೂ ವ್ಯತ್ಯಾಸಗಳು ಬಹಳ ಇವೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮ್ಮ ಪ್ರತಿಕ್ರಿಯೆ? ನಮ್ಮಲ್ಲಿ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆ ಇದೆ. ನಮ್ಮದೇ ಆದ ಜೀವನ ವಿಧಾನವಿದೆ. ಆದರೂ ಇನ್ನೊಂದು ಬಗೆಯಲ್ಲಿ ಪ್ರಕ್ಷುಬ್ಧ ಸಾಂಸ್ಕೃತಿಕ ವಾತಾವರಣವನ್ನು ಅನುಭವಿಸುತ್ತಿದ್ದೇವೆ. ಆದರೂ ವಿವಿಧತೆ ಇದ್ದಲ್ಲಿ ಸಹಜವಾದ ಭಿನ್ನತೆ ಇದು. ಏಕಮುಖ ಸಂಚಲನೆಯನ್ನು ಕಂಡುಕೊಳ್ಳಲಾಗದ, ಭಿನ್ನತೆಯಲ್ಲಿಯೇ ಏಕತೆಯನ್ನು ಹೊಂದಬೇಕಾದ ರೀತಿಯನ್ನ ಪ್ರತಿಪಾದಿಸುವತ್ತ ನಾವೆಲ್ಲ ಮನಸ್ಸು ಮಾಡಬೇಕಾಗಿದೆ. ಸಾಹಿತ್ಯ ವಲಯದ ರಾಜಕಾರಣ ಹೇಗಿದೆ? ಇತ್ತೀಚೆಗೆ ಸಾಹಿತ್ಯ ವಲಯದ ರಾಜಕಾರಣ ರಾಜಕೀಯದ ರಾಜಕಾರಣಕ್ಕಿಂತ ತೀರಾ ಕೆಳಮಟ್ಟದ್ದು ಮತ್ತು ಅಪಾಯಕಾರಿ ನಿಲುವಿನದು. ಸಮಾನತೆ ಸಹಬಾಳ್ವೆಯ ಸ್ವಸ್ಥ ಸಮಾಜ ನಿಮರ್ಾಣ ಮಾಡಬೇಕಾದ ಜವಾಬ್ದಾರಿ ಮರೆತು ಪಂಥಗಳಲ್ಲಿ ಮೈಮರೆತು, ಪರಸ್ಪರ ಕೆರಚಾಟ, ಕೆಸರಾಟದಲ್ಲಿ ತೊಡಗಿದಂತಿದೆ. ಜಾತಿ ಪಂಥಗಳ ಮೇಲಾಟ ಇಲ್ಲೂ ಢಾಳಾಗಿ ಕಾಣುತ್ತಿದೆ. ದೇಶದ ಚಲನೆಯ ಬಗ್ಗೆ ಏನನಿಸುತ್ತದೆ…? ಈ ದೇಶ ಹಿಂದೆಯೂ ಇತ್ತು. ಮುಂದೆಯೂ ಇರುತ್ತದೆ. ಆದರೆ ದೇಶದ ಆಡಳಿತದ ಚುಕ್ಕಾಣಿ ಹಿಡಿದವರು ಸದೃಢ ಸಮಾಜವನ್ನು, ಪ್ರಜಾಪ್ರಭುತ್ವದ ಬುನಾದಿ ಮೇಲೆ ನಿಂತ ಆಡಳಿತ ವ್ಯವಸ್ಥೆಯನ್ನು ಪೋಷಿಸುವ ಅಗತ್ಯವಿದೆ. ನೆಚ್ಚಿನ ಕವಿಗಳು ಕನ್ನಡ ಮತ್ತು ಇಂಗ್ಲೀಷನಲ್ಲಿ? ನನ್ನ ಇಷ್ಟದ ಕವಿ ಕುವೆಂಪು, ನವೋದಯದ ಕಾಲದಲ್ಲೂ ಬಂಡಾಯದ ದನಿ, ಹಾಗೇ ಕವಿ ಸುಬ್ರಾಯ ಚೊಕ್ಕಾಡಿಯವರು, ಮಹಿಳಾ ಕವಯತ್ರಿಯರಲ್ಲಿ ಮಾಲತಿ ಪಟ್ಟಣಶೆಟ್ಟಿ, ವೈದೇಹಿ, ಲಲಿತಾ ಸಿದ್ದಬಸವಯ್ಯ ಇವರೆಲ್ಲರ ಕವಿತೆಗಳು ಇಷ್ಟ.ಇಂಗ್ಲೀಷ ಸಾಹಿತ್ಯದಲ್ಲಿ ನನ್ನ ಮೆಚ್ಚಿನ ಕವಯತ್ರಿ ಎಮಿಲಿ ಡಿಕನ್ಸನ್- ಬದುಕಿನುದ್ದಕ್ಕೂ ಮುಂಚೂಣಿಗೆ ಬರೆದೇ ಎಲೆಮರೆಯ ಕಾಯಾಗಿಯೇ ಕಾವ್ಯ ಕಟ್ಟಿದ ಆಕೆ ಸತ್ತ ನಂತರ ಇಂದಿನ ಬಹುತೇಕ ಯುವ ಮನಸ್ಸುಗಳ ಮನಸ್ಸನ್ನು ಸೆರೆಹಿಡಿದದ್ದು. ಸಾವನ್ನು ಸಂಭ್ರಮಿಸಿದವಳು ಆಕೆ. ಹಾಗೇ ಜಾನ್ ಕೀಟ್ಸ್, ಡಿ ಎಚ್ ಲಾರೆನ್ಸ್ ಮತ್ತು ಡಬ್ಲೂ ಬಿ ಯೇಟ್ಸ್ ಕೂಡಾ ನೆಚ್ಚಿನ ಕವಿಗಳು ಸಾಹಿತ್ಯದ ಬಗ್ಗೆ ಕನಸುಗಳೇನು? ಸಾಹಿತ್ಯ ಬದುಕಿನ ಹಾದಿಗೆ ಒಂದಿಷ್ಟು ಬಲವನ್ನು ನೀಡುವಂತದ್ದು, ಶೋಷಿತ ವರ್ಗದ ದನಿ ಹಾಗೂ ಮಹಿಳಾ ದನಿ ಸಾಹಿತ್ಯದಲ್ಲಿ ಗಟ್ಟಿಯಾಗಲಿ, ಅದಕ್ಕೆ ತಕ್ಕ ಬೆಂಬಲ ಸಿಗಲಿ. ಇನ್ನು ನನ್ನ ಮಟ್ಟಿಗೆ ಅಂತರಂಗದ ತುಮುಲಗಳ ಇಡಿಯಾಗಿ ತೆರೆದುಕೊಳ್ಳಲು, ನಿಸೂರಾಗಲು ಇರುವ ಸಾಧನವಾಗಿ, ಸ್ನೇಹಿತೆಯಾಗಿ, ಕವಿತೆ ಕೈಹಿಡಿದಿದೆ. ಬರೆದದ್ದೆಲ್ಲ ಬೆಲ್ಲವೇ ಆಗಿಲ್ಲ. ಆದರೆ ಬದುಕನ್ನು ವಿಕಸನಗೊಳಿಸಿದೆ. ಜೀವನವನ್ನು ಸಂಭ್ರಮಿಸಲು ಕಲಿಸಿದೆ. ನೋವಿಗೆ ಮುಲಾಮಾಗಿದೆ. ಕನಸಿಗೆ ತೈಲವನ್ನೆರೆದಿದೆ. ರಾಗದ್ವೇಷಗಳಿಗೆ ಶಾಯಿಯಾಗಿದೆ.ಕವಿತೆಯಲ್ಲಿ ನನಗೆ ವಿಶ್ವಾಸವಿದೆ. ಈಚೆಗೆ ಓದಿದ ಕೃತಿಗಳ ಬಗ್ಗೆ ಹೇಳಿ ಎಚ್ ಎಸ್ ರಾಘವೇಂದ್ರರಾವ್ ಅನುವಾದಿಸಿರುವ ಜಿಡ್ಡು ಕೃಷ್ಣಮೂರ್ತಿಯ ಸಂಸ್ಕೃತಿ ಸಂಗತಿ. ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ಕನ್ನಡಕ್ಕೆ ಅನುವಾದಿಸಿರುವ ಮರಾಠಿ ಸಾಹಿತಿ ವಿ.ಸ ಖಾಂಡೇಕರರ ಆತ್ಮಕಥನ ಒಂದು ಪುಟದ ಕಥೆ ಹಾಗೂ ಪ್ರತಿಭಾ ನಂದಕುಮಾರರ ಅನುದಿನದ ಅಂತರಗಂಗೆ ಇದಿಷ್ಟು ಇತ್ತೀಚೆಗೆ ಓದಿದ ಕೃತಿಗಳು. ನಿಮಗೆ ಇಷ್ಟದ ಕೆಲಸ ಓದು ಬರಹದ ಜೊತೆಗೆ ಹೊಲಗದ್ದೆಗಳಲ್ಲಿ ಕೆಲಸ ಮಾಡುವುದು, ಬಾಲ್ಯದಲ್ಲಿ ತೋಟ ಗದ್ದೆ ಹಳ್ಳ ಕೊಳ್ಳ ಇಲ್ಲಿಯೇ ನನ್ನ ಬದುಕಿನ ಕನಸುಗಳು ಚಿಗುರಿದ್ದು. ಹಾಗೇ ಅಡುಗೆ ಮಾಡುವುದು, ಮನೆಯನ್ನು ಒಪ್ಪ ಓರಣಗೊಳಿಸುವುದು. ನಿಮ್ಮ ಇಷ್ಟದ ಸಿನೇಮಾ ? ಇದೇ ಅಂತ ಹೇಗೆ ಹೇಳಲಿ. ಕುಬಿ ಮತ್ತು ಇಯಾಲ್, ಸರಕಾರಿ ಪ್ರಾಥಮಿಕ ಶಾಲೆ ಕಾಸರಗೋಡು, ಹೀಗೇ ಸುಮಾರು ಇವೆ. ಮರೆಯಲಾಗದ ಘಟನೆ ಮೊದಲ ಬಾರಿ ಊರು ಬಿಟ್ಟು ನೌಕರಿಗೆ ಹೋದಾಗ ಹೊಸ ಸ್ಥಳದಲ್ಲಿ ಕಂಡ ಕಸದ ತೊಟ್ಟಿಯಲ್ಲಿ ಎಸೆದ ನವಜಾತ ಹೆಣ್ಣು ಶಿಶುವನ್ನು ನೋಡಿದ್ದು, ಸುತ್ತಮುತ್ತ ಹತ್ತಾರು ದೌರ್ಜನ್ಯಗಳ ಕಂಡಿದ್ದಿದೆ. ಹೆತ್ತವರ ಸಾವನ್ನು ನೋಡಿದ್ದಿದೆ. ಸಂಬಂಧಿಗಳ ಅಕಾಲ ಮರಣ ನೆನಪಾದರೆ ನೋವು ಮಡುಗಟ್ಟುತ್ತದೆ ಇವೆಲ್ಲ ಸದಾ ನೆನಪಿನಲ್ಲಿ ಉಳಿಯುವಂತಹವು. ******************************************* ********************************************* ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

ಮುಖಾಮುಖಿ Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಕಬ್ಬಿಗರ ಅಬ್ಬಿ – ಸಂಚಿಕೆ -7 ಕಾವ್ಯ, ವಾಸ್ತವ ಮತ್ತು ‌ವಿಜ್ಞಾನಗಳು ಮುಖಾಮುಖಿಯಾದಾಗ ಕಾವ್ಯ, ವಾಸ್ತವ ಮತ್ತು ‌ವಿಜ್ಞಾನಗಳು  ಮುಖಾಮುಖಿಯಾದಾಗ ಓಹ್! ನಮಸ್ಕಾರ ಸಾರ್!.. ಬನ್ನಿ..ಬನ್ನಿ.. ಹೀಗೆ ಬನ್ನಿ! ಇದೇ ನೋಡಿ! ನಮ್ಮ ಕವಿಗಳ ಮನೆಯ ಡ್ರಾಯಿಂಗ್ ರೂಂ,  ಎಷ್ಟು ವಿಶಾಲವಾಗಿದೆ ಅಲ್ವಾ. ಕೆಲವೇ ಕೆಲವು ಪೀಠೋಪಕರಣಗಳು, ಅವರಿವರು ಬಂದಾಗ, ಮುಖಕ್ಕೆ ಮುಖ ಕೊಟ್ಟು ಮಾತಾಡಲು, ಕೆಲವೊಮ್ಮೆ ಮುಖವಾಡ ತೊಟ್ಟು ಮಾತಾಡಲೂ. ಸ್ವರಗಳು ಕಂಪಿಸುವ ಮಾತುಗಳು, ಸ್ವರಗಳು ಸರೀಸೃಪದ ಹಾಗೆ ಹರಿದಾಡುವ ಮಾತುಗಳು, ಹಾವಿನಂತೆ ಬುಸುಗುಟ್ಟುವ ಮಾತುಗಳು, ಏರು ಸ್ವರ, ತಗ್ಗು ಸ್ವರದ ಬೆನ್ನೇರಿ ಥಳತಳಿಸುವ ಮಾತುಗಳು ಸಾಮಾನ್ಯವೇ. ಮಾತುಗಳು,  ಮಾತುಗಳು ಖಡ್ಗ ಹಿಡಿದು ಕಾದಿ ಮಾತು ಮಾತನ್ನು ತುಂಡರಿಸಿ ತುಂಡು ತುಂಡಾಗಿ ಮಾತುಗಳು ಕಸದ ಬುಟ್ಟಿ ಸೇರಿಯೋ ಅಥವಾ ಕಣ್ಣೀರಾಗಿ ಹರಿದೋ, ಕೊನೆಗೆ ಒಂದೇ ದೊಡ್ಡ ಮಾತು ಉಳಿದಂತೆ ಭಾಸವಾಗುತ್ತದೆ. ಮಾತುಗಳು ಮುಖಾಮುಖಿಯಾದವೆಂದರೆ, ಅಲ್ಲಿ ಯುದ್ಧವೇ ನಡೆಯಬೇಕೆಂದಿಲ್ಲ. ಮಾತುಗಳು ಪ್ರಣಯೋನ್ಮತ್ತ ಕಾಳಿಂಗಸರ್ಪಗಳ ಹಾಗೆ ಒಂದಕ್ಕೊಂದು ಸುತ್ತಿ  ಆಟವಾಡಿ, ಶಾಂತವಾಗಿ ಮಾತುಗಳು ಮೊಟ್ಟೆಯಿಟ್ಟು, ಕಾವು ಕೊಟ್ಟು ಹತ್ತಾರು ಮರಿಗಳಾಗಿ ಹರಿದಾಡುತ್ತವೆ. ಕೆಲವೊಮ್ಮೆ ಮಾತುಗಳು ಗಂಟಲೊಳಗೇ ಇಂಗಿ, ಮೌನ ಮೌನಕ್ಕೇ ಮುಖವಾಗುವುದೂ ಇದೆ. ಈ ಡ್ರಾಯಿಂಗ್ ರೂಂ ನಲ್ಲಿ, ಒಂದು ಕುರ್ಚಿ, ಟೇಬಲ್ಲು. ಆ ಕುರ್ಚಿಯಲ್ಲಿ ಕುಳಿತು, ರಾತ್ರೆ –  ಜಗತ್ತು ಮಲಗಿದಾಗ,  ಕಿಟಿಕಿಯಲ್ಲಿ ಇಣುಕುವ ಆಗಸದತ್ತ  ಕಣ್ಣು ನೆಟ್ಟರೆ, ಕೆಲವೊಮ್ಮೆ ತಾರೆಗಳ ಮಾತುಗಳು ಇಳಿದು ಬಂದು, ಮನಸ್ಸೊಳಗೆ ಆವಿಷ್ಕರಿಸುತ್ತವೆ. ಕೆ. ವಿ. ತಿರುಮಲೇಶ್ ಅವರ “ಮುಖಾಮುಖಿ” ಕವಿತೆಯಲ್ಲಿ ಒಂದು ದಷ್ಟ ಪುಷ್ಟ ಬೆಕ್ಕು,ಕವಿಯ ಡ್ರಾಯಿಂಗ್ ರೂಮ್ ಗೆ ನುಗ್ಗುತ್ತೆ.  ಅವರದ್ದೇ ಸಾಲುಗಳು ಹೀಗಿವೆ. “ಪುಷ್ಟವಾದ ಒಂದು ಬೆಕ್ಕು ನನ್ನ ಮನೆಯ ಡ್ರಾಯಿಂಗ್ ರೂಮಿನಲ್ಲಿ ಬಂದು ನನ್ನನ್ನು ಕಂಡು ಹಠಾತ್ತನೆ ನಿಂತಿತು.  ಅಲ್ಲಿ ಅದು ನನ್ನನ್ನು ನಿರೀಕ್ಷಿಸಿರಲಾರದು. ಇಲ್ಲ, ಸೋಮವಾರ ಎಲ್ಲರೂ ಅವರವರ ಆಫೀಸಿಗೆ ಹೋಗಿರುವ ಅಪರಾಹ್ನವಂತೂ ಖಂಡಿತ ಇಲ್ಲ. ತುಸು ಅಸಮಾಧಾನದಿಂದ ನನ್ನ ಕಡೆ ನೋಡಿತು. ನಮ್ಮ ಕಣ್ಣುಗಳು ಪರಸ್ಪರ ನಟ್ಟು ಯಾರು ಮೊದಲು ಮುಖ ತಿರುಗಿಸುವುದು ಎಂಬ ಒಂದು ವಿಧ ಅಘೋಷಿತ ಯುದ್ಧದಲ್ಲಿ ಇಬ್ಬರೂ ತೊಡಗಿದೆವು. ಒಂದು ಬೆಕ್ಕಿನ ಕಣ್ಣುಗಳು ಇಷ್ಟು ನಿಶ್ಚಲವಾಗಿರುತ್ತವೆ ಎಂದು ನನಗೆ ಗೊತ್ತಿರಲಿಲ್ಲ.” ಬಂದದ್ದು ಬೆಕ್ಕು.‌ ಪೀಚು ಪೀಚು ಬೆಕ್ಕಲ್ಲ,  ದಷ್ಟಪುಷ್ಟ ಬೆಕ್ಕು. ಅದು ಮನುಷ್ಯನ ಡ್ರಾಯಿಂಗ್ ರೂಂಗೆ ಬಂದದ್ದು ಪ್ರಾಣಿ ಮನುಷ್ಯನ ಮುಖಾಮುಖಿ ಎಂಬುದು ನೇರವಾದ ಅರ್ಥ. ಆಮೇಲೆ ಮನುಷ್ಯ ಮತ್ತು ಪ್ರಾಣಿಯ ಅಘೋಷಿತ ದೃಷ್ಟಿಯುದ್ಧ,ಕವಿತೆಯುದ್ದಕ್ಕೂ. ಈ ಕವಿತೆಯಲ್ಲಿ ಬಂದದ್ದು ನಿಜವಾದ ಬೆಕ್ಕು ಎಂದೇ ಅದರ ಅರ್ಥವೇ?. ಮನುಷ್ಯನ ಡ್ರಾಯಿಂಗ್ ರೂಂ, ಮನುಷ್ಯನ ಮನಸ್ಸು. ಆ ಮನಸ್ಸೊಳಗೆ ಒಂದು ಪ್ರಾಣಿ ಪ್ರಜ್ಞೆಯಿದೆ. ಮನುಷ್ಯ ಮೂಲತಃ ಪ್ರಾಣಿಯೇ ಆದ್ದರಿಂದ, ಅದು ದಷ್ಟಪುಷ್ಟ ಪ್ರಾಣಿ ಪ್ರಜ್ಞೆ.  ಮನುಷ್ಯನ ಮನಸ್ಸೊಳಗೆ, ವಿಕಸಿತ,ಚಿಂತನಶೀಲ, ವಿವೇಚನಾಶೀಲ ಪ್ರಜ್ಞೆಯೂ ಇದೆ. ಅದು ಕವಿ. ಈ ಎರಡೂ ಪ್ರಜ್ಞೆಯೊಳಗೆ ನಡೆಯುವ ದೃಷ್ಟಿ ಯುದ್ಧ ಈ ಕವಿತೆಯಾಗಬಹುದು. ಮೂರನೆಯದಾಗಿ, ಡ್ರಾಯಿಂಗ್ ರೂಂ, ಹೆಸರೇ ಹೇಳುವಂತೆ ಹೊಸ ಹೊಸ ಡ್ರಾಯಿಂಗ್ ಬರೆಯಲು ಉಪಯೋಗಿಸುವ ಕೋಣೆ. ಯಾವುದೇ ಹೊಸತನ್ನು ಬರೆಯುವಾಗ, ಹಳೆಯ, ವಿಚಾರಗಳು,ಹೊಸತನ್ನು ವಿರೋಧಿಸುತ್ತವೆ. ಬೆಕ್ಕು,ಪ್ರಾಣಿ, ಅದು ಮನುಷ್ಯನ ಹಳತು. ಡ್ರಾಯಿಂಗ್ ರೂಂ ನಲ್ಲಿ ಹೊಸತರ ಅನ್ವೇಷಣೆಯಲ್ಲಿ ತೊಡಗಿದಾಗ ದಷ್ಟ ಪುಷ್ಟವಾದ ( well established) ಬೆಕ್ಕು, ಹೊಸ ಡ್ರಾಯಿಂಗ್ ನ್ನು (ಚಿತ್ರ ಬಿಡಿಸುವುದನ್ನು) ವಿರೋಧಿಸುತ್ತೆ. ಹಾಗೆ ನಡೆಯುವುದು ದೃಷ್ಟಿಯುದ್ಧ. ವಿಚಾರಗಳ ಒಂದಕ್ಕೊಂದು ಮುಖಾಮುಖಿ, ವರ್ತಮಾನ ಸಂಧಿಯಲ್ಲಿ, ಭೂತ ಭವಿಷ್ಯಗಳ ಮುಖಾಮುಖಿ. ಇನ್ನೂ ಹತ್ತು ಹಲವು ದೃಷ್ಟಿಯುದ್ಧ ನಮಗೆ ದಿನಾಲೂ ಅನುಭವಗ್ರಾಹ್ಯವಾಗುತ್ತೆ. “ಒಂದು ಬೆಕ್ಕಿನ ಕಣ್ಣುಗಳು ಇಷ್ಟು ನಿಶ್ಚಲವಾಗಿರುತ್ತವೆ ಎಂದು ನನಗೆ ಗೊತ್ತಿರಲಿಲ್ಲ.” ಮುಖಾಮುಖಿಯ ಮುಖ್ಯ ಅಂಗ, ಕಣ್ಣು. ಕಣ್ಣು ಎಂದರೆ, ನೋಟ, ಒಳನೋಟ. ಕಣ್ಣಿನ ಮೂಲಕ ನಾವು ನೋಡುವುದು ಎಂದರೆ, ನಮ್ಮ ಬದುಕಿನಲ್ಲಿ ನಂಬಿದ, ಅಳವಡಿಸಿದ ಸಿದ್ಧಾಂತದ,ಸಂಪ್ರದಾಯದ ಮೂಲಕ ನೋಡುವುದು ತಾನೇ. ಮುಖಾಮುಖಿಯಾದ ಬೆಕ್ಕಿನ ಕಣ್ಣು, ನಿಶ್ಚಲವಾಗಿ ದೃಷ್ಟಿಯುದ್ಧಕ್ಕೆ ಅಣಿಯಾಗಿ ನಿಂತಾಗ, ಆ ಕಣ್ಣುಗಳು ಸ್ಥಿರವಾದ, ಅಚಲಾಗಿ ನಂಬಿದ, ಬದಲಾಗಲು ನಿರಾಕರಿಸುವ ಸಿದ್ಧಾಂತವೇ?. ತಿರುಮಲೇಶ್ ಅವರ ಅನನ್ಯ ಕವಿತೆ ಮುಖಾಮುಖಿಯ ಹಂದರ, ಕವಿಯ ಡ್ರಾಯಿಂಗ್ ರೂಂ ನೊಳಗೆ ನಡೆಯುವ ಬೆಕ್ಕು ಮತ್ತು ವ್ಯಕ್ತಿಯ ನಡುವಿನ ದೃಷ್ಟಿಯುದ್ಧ.  ಹಾಗಂತ, ಈ ಮುಖಾಮುಖಿಯನ್ನು ಪ್ರಾಣಿ ಮತ್ತು ಮನುಷ್ಯನ ನಡುವೆ ನಡೆಯುವ ಡೈನಾಮಿಕ್ಸ್ ಗೆ ಮಾತ್ರ ಸೀಮಿತ ಗೊಳಿಸಿದರೆ, ನಮ್ಮ ಕಣ್ಣು ಕೂಡಾ, ಕವಿ ಹೇಳಿದ, ಬೆಕ್ಕಿನ ನಿಶ್ಚಲ ಕಣ್ಣುಗಳ ಹಾಗೆ ಸ್ಥಿರವೂ, ಸೀಮಿತವೂ ಆಗುತ್ತವೆ. ಮುಖಾಮುಖಿ ಎಂಬ ಒಂದು ಸಹಜಕ್ರಿಯೆ, ನಮ್ಮ ಮನಸ್ಸೊಳಗೆ, ಮನಸ್ಸು ಮನಸ್ಸುಗಳ ನಡುವೆ, ಹಳೆ-ಹೊಸ ಜನರೇಶನ್ ಗಳ ನಡುವೆ, ಸಿದ್ಧಾಂತಗಳ ನಡುವೆ, ಕ್ರಿಯೆ-ಪ್ರತಿಕ್ರಿಯೆಗಳ ನಡುವೆ, ವೈರಸ್ಸು ಮತ್ತು ಬಿಳಿ ರಕ್ತ ಕಣಗಳ ನಡುವೆ, ಮಿಸೈಲು-ಮಿಸೈಲುಗಳ ನಡುವೆ, ತಾರೆಯೊಳಗೆ ನಿರಂತರ ನಡೆಯುವ ಗುರುತ್ವಾಕರ್ಷಣ ಶಕ್ತಿ ಮತ್ತು ಪರಮಾಣು ಸಂಯೋಗದಿಂದ ಉತ್ಪನ್ನವಾದ ಉಷ್ಣಚೈತನ್ಯದ ನಡುವೆ, ಮತ್ತು ನನ್ನ ಅರಿವಿಗೆ ಮೀರಿದ ನೂರಾರು ಪ್ರಕ್ರಿಯೆಗಳಲ್ಲಿ ನಡೆಯುತ್ತಲೇ ಇರುತ್ತೆ.  ಹೈದರಾಬಾದ್ ನ ಕನ್ನಡ ಕವಿ, ಪ್ರಹ್ಲಾದ ಜೋಶಿಯವರ ಕವನ, ” ಕವಿ – ಕವಿಪತ್ನಿ ಯರ ಸಂವಾದ ” ಇಂತಹ ಒಂದು ಸಾತ್ವಿಕ ಮುಖಾಮುಖಿಯ, ಕಣ್ಣಿಗೆ ಕಣ್ಣಿಟ್ಟು ನೋಡುವ,ಅವಲೋಕಿಸುವ ಕವನ. ಈ ಕವಿತೆಯಲ್ಲಿ, ಕವಿ ಮತ್ತು ಕವಿ ಪತ್ನಿಯರ ಸಂಭಾಷಣೆಯೇ ಕವಿತೆಯ ತಂತ್ರ. ಕವಿತೆಯಲ್ಲಿ  ಮನೆಯಾಕೆ, ಮನೆಗೆ ಬೇಕಾದ ಅವಶ್ಯಕ ವಸ್ತುಗಳನ್ನು ತರಲು ಕವಿಯನ್ನು ಮಾರ್ಕೆಟ್ ಗೆ ಕಳುಹಿಸುತ್ತಾಳೆ. ಕವಿ ಮಾರ್ಕೆಟ್ ನಿಂದ ವಾಪಸ್ ಬಂದಾಗ, ಕವಿ ತೊಟ್ಟ ಬಿಳಿ ಬಟ್ಟೆ ಪೂರಾ ಮಣ್ಣು ಮಣ್ಣಾಗಿದ್ದನ್ನು ನೋಡಿ ತನ್ನ ಸಾತ್ವಿಕ ಅಸಹನೆಯನ್ನು ಪ್ರಕಟಿಸುವುದೇ ಮೊದಲ ಪ್ಯಾರಾ. ” ಕವಿಯ ಪತ್ನಿ : ಏನಾಗ್ಯದ ನೋಡರ‍್ಯಾ ಸ್ವಲ್ಪನ ಅದನ ಮೈಮ್ಯಾಲೆ ಖಬರ ಬಿಳಿ ಬಟ್ಟಿ ಒಗೆದಿದ್ದೆ ಹಚ್ಚಿ ಎಷ್ಟೋ ಸಾಬೂಣೂ ಬಾರಾ ಹಿಂಗ್ಯಾಕ ರಮರಾಡಿ ಮಾಡ್ಕೊಂಡು ಬಂದ್ರಿ ಎಲ್ಲಾ ನನ್ನ ಹಣೇಬಾರಾ ಗೊತ್ತಾಯ್ತು ನನಗ ಖಯಾಲಿಯೊಳಗ ಇದ್ದಿರಬೇಕು ನೆಲ ನೋಡದ ಆಕಾಶ ನೋಡ್ತಿರಬಹುದು ಅಥವಾ ಯಾವುದರ ಹೂವು ಕಂಡಿರಬೇಕು ಪಕಳೆಗಳ ನೋಡುತ್ತ ಮೈಮರೆತು ನಿಂತಿರಬೇಕು ತೆರೆದು ಕಲ್ಪನಾಲೋಕ ಹೊಕ್ಕು ಅದ್ರೊಳಗ ನೀವು ವಿಹಾರ ಮಾಡಿರಬೇಕು ನಾ ಕೊಟ್ಟ ಸಾಮಾನಿನ ಪಟ್ಟಿ ಥಟ್ಟನೆ ನೆನಪಾಗಿ ಸರ‍್ರನೆ ನೀವು ಭೂಮಿಗೆ ಇಳಿದಿರಬೇಕು ಸಿಗದೆ ಕಕ್ಕಾಬಿಕ್ಕಿಯಾಗಿ ರಾಡಿಯೊಳಗ ಜಾರಿ ಬಿದ್ದಿರಬೇಕು ಏನು ಮಾಡಲಿ ಎಲ್ಲ ನನ್ನ ಹಣೇಬಾರಾ ಎಷ್ಟು ಹಚ್ಚಿದ್ದೆ ಸಾಬೂಣು ಬಾರಾ” ಇಲ್ಲಿ ಕವಿ ಪತ್ನಿ , ನೆಲ ಕಚ್ಚಿ ನಿಂತು, ಮನೆ ನಡೆಸುವ, ಜವಾಬ್ದಾರಿ ಹೊತ್ತವಳು. ಹಸಿವೆಯಾದರೆ, ಊಟ ಬಡಿಸಬೇಕು ತಾನೇ. ಕವಿತೆ, ಹಾಡು, ಭಾವನೆ ಬಡಿಸಿದರೆ ಹೊಟ್ಟೆ ತುಂಬಲಾರದು. ಆಕೆ ಒಂದು,ಸಾತ್ವಿಕ, ಸಾಂಸಾರಿಕ,  ಭೌತಿಕ ಪ್ರಜ್ಞೆಗೆ ಪ್ರತಿಮೆ. “ಸ್ವಲ್ಪನ ಅದನ ಮೈಮ್ಯಾಲೆ ಖಬರ ಬಿಳಿ ಬಟ್ಟಿ ಒಗೆದಿದ್ದೆ ಹಚ್ಚಿ ಎಷ್ಟೋ ಸಾಬೂಣೂ ಬಾರಾ ಹಿಂಗ್ಯಾಕ ರಮರಾಡಿ ಮಾಡ್ಕೊಂಡು ಬಂದ್ರಿ ಎಲ್ಲಾ ನನ್ನ ಹಣೇಬಾರಾ” ಎಂತಹ ಸಾತ್ವಿಕ, ಸಾಂಸಾರಿಕ, ವಾಸ್ತವ ಪ್ರಜ್ಞೆ. ಗಂಡನ ಬಟ್ಟೆ,ಸಾಬೂನು ಹಚ್ಚೀ ಹಚ್ಚೀ ತಿಕ್ಕಿ ತೊಳೆದು ಗಂಡನ ರೂಪಕ್ಕೆ ಸ್ವಚ್ಛತೆಯನ್ನು ಹೊಳಪನ್ನೂ ಕೊಟ್ಟರೆ, ಆತ ಮಣ್ಣು ಮೆತ್ತಿ ರಮರಾಡಿ ಮಾಡ್ಕೊಂಡು ಬರಬೇಕೇ. ಎಲ್ಲಾ ನನ್ನ ಹಣೇಬರಹ ಎನ್ನುವ ಆಕೆ ಹಳ್ಳಿಯ,ಮುಗ್ಧ ಪ್ರಜ್ಞೆ. “ಗೊತ್ತಾಯ್ತು ನನಗ ಖಯಾಲಿಯೊಳಗ ಇದ್ದಿರಬೇಕು ನೆಲ ನೋಡದ ಆಕಾಶ ನೋಡ್ತಿರಬಹುದು ಅಥವಾ ಯಾವುದರ ಹೂವು ಕಂಡಿರಬೇಕು ಪಕಳೆಗಳ ನೋಡುತ್ತ ಮೈಮರೆತು ನಿಂತಿರಬೇಕು ತೆರೆದು ಕಲ್ಪನಾಲೋಕ ಹೊಕ್ಕು ಅದ್ರೊಳಗ ನೀವು ವಿಹಾರ ಮಾಡಿರಬೇಕು” ಆಕೆ, ಕವಿಯ ಕಲ್ಪನಾ ಸಾಮ್ರಾಜ್ಯದ ಪರಿಚಯ ಕೊಡುವ ಸಾಲುಗಳಿವು. ಈ ಸಾಲುಗಳಲ್ಲಿ ಕವಿಯ ಪ್ರಜ್ಞೆ ನೆಲೆ ನಿಂತಿರುವ, ಭಾವ ಜಗತ್ತು, ಕಲ್ಪನಾ ಜಗತ್ತು ಆಕೆಯ ಮಾತುಗಳಲ್ಲಿ ಪ್ರಕಟವಾಗುತ್ತೆ. ಅದು ನಿಜವೂ ತಾನೇ. “ಸರ‍್ರನೆ ನೀವು ಭೂಮಿಗೆ ಇಳಿದಿರಬೇಕು ಸಿಗದೆ ಕಕ್ಕಾಬಿಕ್ಕಿಯಾಗಿ ರಾಡಿಯೊಳಗ ಜಾರಿ ಬಿದ್ದಿರಬೇಕು” ಕವಿಯ ಕಾವ್ಯಜಗತ್ತಿನಿಂದ ವಾಸ್ತವ ಜಗತ್ತಿಗೆ ಆತ ಜಾರಿ ಬಿದ್ದು ಅಂಗಿ ಕೊಳೆಯಾಗಿರಬಹುದು ಎಂದು ಆಕೆಯ ಅಂಬೋಣ. ಈ ಪ್ಯಾರಾದಲ್ಲಿ, ಕವಿ ಪತ್ನಿಯ, ವಾಸ್ತವ,ಸಾಂಸಾರಿಕ,ಭೌತಿಕ ಪ್ರಜ್ಞೆ ಮತ್ತು ಕವಿಯ ಭಾವನಾತ್ಮಕ, ಕಲ್ಪನಾ ಪ್ರಜ್ಞೆಗಳ ನಡುವೆ ಮುಖಾಮುಖಿ ಸಂಭವಿಸಿದೆ. ಈ ಸಂವಾದದಲ್ಲಿ ಈ ಎರಡೂ ಪ್ರಜ್ಞೆಗಳು,ಅತ್ಯಂತ ಸಾತ್ವಿಕವಾಗಿ ತಾಕಲಾಡುತ್ತವೆ. ಆಕೆ ಕವಿಯನ್ನು ಭಾವನೆಯ ಲೋಕದಿಂದ ಸಾಬೂನು ಹಾಕಿ ತೊಳೆದು ಪುನಃ ವಾಸ್ತವಕ್ಕೆ  ತರುವ ಪ್ರಯತ್ನ ಮಾಡುತ್ತಲೇ, ಮಾಡುತ್ತಲೇ ಇರುತ್ತಾಳೆ. ಮುಂದಿನ ಪ್ಯಾರಾದಲ್ಲಿ ಕವಿ, ಸಾಮಾನು ತರಲು ಹೋದಾಗ ರಸ್ತೆಯಲ್ಲಿ,  ತನ್ನ ಮತ್ತು  ನೀಲ್ ಆರ್ಮ್‌ಸ್ಟ್ರಾಂಗ್ ನ ( ಚಂದ್ರನ ಮೇಲೆ ಮೊದಲು ಕಾಲಿಟ್ಟ ವ್ಯೋಮಯಾತ್ರಿ) ನಡುವಿನ  ಸಂಭಾಷಣೆಯನ್ನು ಹೆಂಡತಿಗೆ ವಿವರಿಸುತ್ತಾನೆ. ಚಂದ್ರನ ಬಗ್ಗೆ ಕವಿಗಳ ವರ್ಣನೆ ಕೇಳಿ ಚಂದಿರನ ಮೇಲೆ ಕಾಲಿಟ್ಟ ವ್ಯೋಮಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಗೆ  ಅಲ್ಲಿ ,ಬರೇ ಮಣ್ಣು ಕಂಡು ಭ್ರಮನಿರಸನವಾದಾಗ ಆತನ ಪ್ರತಿಕ್ರಿಯೆ, ಕವಿಯತ್ತ, ಹೇಗಿರಬಹುದು?  ಕವಿತೆಯ ಸಾಲುಗಳು ಹೀಗಿವೆ. “ಕವಿ: ಸುಮ್ಮನಾಗು ಮಾರಾಯ್ತಿ, ಗುಟ್ಟಾಗಿ ಹೇಳ್ತೀನಿ ರಟ್ಟಾದರ ನಮ್ಮರ‍್ಯಾದಿ ಪ್ರಷ್ನಿ ಹೊಂಟಿದ್ದೆ ಹಿಡಿದು ನಂದಾರಿ ನೀನಂದದ್ದು ನೆನಪಿನೊಳಗಿಟ್ಟು ಕವಿತೆ ರಚಿಸುವ ಗೀಳು ಬಿಟ್ಟು ಸೀದಾ ರಸ್ತೆ ಮ್ಯಾಲೆ ನನ್ನ ಕಣ್ಣು ನೆಟ್ಟು ಮಾಡಲಿಲ್ಲ ಕವಿತೆಗೆ ವಿಷಯ ಹುಡುಕೊ ಉಸಾಬರಿ ಅರಳಿದರೆ ಅರಳಲಿ ಎಂದೆ ಹೂವು ಕೆರಳಿದರೆ ಕೆರಳಲಿ ಭಾವ ಇದ್ದರೆ ಇರಲಿ ರಮ್ಯ ಸೂರ‍್ಯಾಸ್ತ ಇಂದಿನದೇನಲ್ಲ ಅದು ನಾಳೆ ಇಲ್ಲವೆಂದಿಲ್ಲ ಮುಗಿಯಲಿ ಮೊದಲು ಬಂದ ಕೆಲಸ ಅಂತ ಸಾಗಿದ್ದೆ ಆಗ ಎಲ್ಲಿಂದಲೋ ಬಂದ ತುಂಟ ಪೋರ ಬಿರ ಬಿರ ನಡೆದರೂ ಬಂದ ಹತ್ತಿರ ಬಂದವನೆ ಎಸೆದ ತನ್ನ ಮುಷ್ಠಿಯೊಳಗಿನ ಮಣ್ಣು ನಂಬಲಾರದಾದವು ನನ್ನ ಕಣ್ಣು ತಬ್ಬಿಬಾಗಿ ಕೇಳಿದೆ ಪೋರನ ನಾನೇನು ಮಾಡಿದೆ ಎಂದು ಕೊಳೆ ಮಾಡಿದಿ ನಾ ಧರಿಸಿದ ಉಡುಪು ಏನು ಹೇಳಲಿ ನನ್ನ ಮನೆಯಾಕೆಗೆ ಸಾಬೂನಿನ ಜೊತೆ ಶುಭ್ರ ಪ್ರೀತಿಯನು ಹಚ್ಚಿ ಹೇಗೆ ಹೋಗಬೇಕು ಕಲೆ ಅಂದರ ಏನನಬೇಕು ತುಂಟ ಪೋರ “ಇರಲಿ ಕಡೀತನ ಈ ಕಲೆ ಕವಿ ಅಲ್ಲವೆ ನೀವು – ಕಲ್ಪನೆಯ ಕುದುರೆಯನೇರಿ ಇಲ್ಲದನು ಬಣ್ಣಿಸುವ ಕಲೆ ಅಲ್ಲವೆ ನಿಮಗೆ ಕರಗತ ಹೊಗಳಲಿಲ್ಲವೆ ನೀವು ಚಂದಿರನ ಸತತ ಸುಂದರಿಯರ ನೋಡಿ ಇಂದುಮುಖಿ ಎಂದಿರಿ ಕಾವ್ಯಗಳ ಪುಟಗಳಲಿ ತುಂಬಿಸಿದಿರಿ ಚಂದಿರ ಬೆಳದಿಂಗಳು ಕರ್ನೈದಿಲೆಗಳಿಂದ ನೀವು ಹೇಳಿದ್ದು ಕೇಳಿ ಬಾಯಾಗ ನೀರೂರಿ ಹೋದೆ ಅಲ್ಲೀತನಕ ಆಸ್ವಾದಿಸಲು ಸೌಂದರ್ಯ ಆದರ ಅಲ್ಲಿ ಸಿಕ್ಕಿದ್ದೇನು ನಿನ್ನ ಮ್ಯಾಲೆ ಎಸೆದ ಮಣ್ಣು” ಅಂತ ಅನಬೇಕ ಬಿಡಲಿಲ್ಲ ನಾನು, ಕೇಳಿದೆ ನೀ ಇರೋದು ಎಲ್ಲೆ ನಿನ್ನ ಹೆಸರೇನು ಅಂದರ “ ನನ್ನ ಹೆಸರು ನೀಲ್  ಆರ್ಮ್‌ಸ್ಟ್ರಾಂಗ್” ಅಂತ ಹೇಳಿ ಓಡ ಬೇಕ ಮಿಂಚಿನ ವೇಗದಾಗ ಸಿಗದ್ಹಾಂಗ ಕೈಗೆ ಆದದ್ದು ಹೇಳ ಬ್ಯಾಡ ಮಾರಾಯ್ತಿ ಯಾರಿಗೂ ಮನಸಿನಾಗೇ ಇಟ್ಕೋ ಮರ‍್ಯಾದಿ ಪ್ರಷ್ನಿ” ,ಇಲ್ಲಿ ನಮಗೆ ಕವಿಯ,ಕಾವ್ಯಪ್ರಜ್ಞೆ ಮತ್ತು, ವ್ಯೋಮಯಾತ್ರಿಯ ಭೌತಿಕ ವೈಜ್ಞಾನಿಕ ಪ್ರಜ್ಞೆಯ ನಡುವಿನ ಮುಖಾಮುಖಿ

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಹೆಣ್ಣೊಡಲಾಳದ ನೋವಿನ ದನಿಗಳು ಅಂಕಣ ಬರಹ ಊರ ಒಳಗಣ ಬಯಲುಲೇಖಕಿ-ವಿನಯಾಪ್ರಕಾಶಕರು- ಛಂದ ಪುಸ್ತಕಬೆಲೆ-೪೦/-              ನಮ್ಮ ಮನೆಯಿಂದ ಒಂದುವರೆ ಕಿ.ಮಿ ಹೋದರೆ ಗಂಗಾವಳಿ ನದಿ ಸಮುದ್ರಕ್ಕೆ ಸೇರುವ ಸ್ಥಳ ಬರುತ್ತದೆ. ಅಲ್ಲಿಯೇ ಸ್ವಲ್ಪ ಹಿಂದೆ ಗಂಗಾವಳಿ ನದಿಯನ್ನು ದಾಟಿಸುವ ಸ್ಥಳವಿದೆ. ಮೊದಲೆಲ್ಲ ದೋಣಿಯಲ್ಲಿ ದಾಟಿಸುತ್ತಿದ್ದರು. ಈಗ ದೊಡ್ಡದೊಂದು ಬಾರ್ಜು ಬಂದಿದೆ. ಮಕ್ಕಳಿಗೆ ಒಂದು ಚಂದದ ಅನುಭವವಾಗಲೆಂದು ಕೆಲವೊಮ್ಮೆ ಅಲ್ಲಿಂದ ಬಾರ್ಜಿನಲ್ಲಿ ದಾಟಿ ಸಮೀಪದ ಮಾಸ್ಕೇರಿ ಎಂಬ ಊರಿಗೆ ಹೋಗಿ ಬರುವುದೂ ಇದೆ. ಕೆಲವೊಮ್ಮೆ ಅಲ್ಲಿಂದ ಒಂದೆರಡು ಕಿ.ಮಿ ದೂರ ಇರುವ ಗೋಕರ್ಣಕ್ಕೂ ಹೋಗಿ ಬರುವುದಿದೆ. ಮೊದಲ ಕಥೆಯನ್ನು ಓದುತ್ತಲೇ ಮತ್ತೆ ಇದೆಲ್ಲವನ್ನೂ ನೆನಪಿಸಿ, ಒಮ್ಮೆ ಮಾಸ್ಕೇರಿಗೆ ಹೋಗಬೇಕು ಎನ್ನುವ ಭಾವ ಹುಟ್ಟಿಸಿದ ಪುಸ್ತಕ ವಿನಯಾ ಒಕ್ಕುಂದರವರ ಊರೊಳಗಣ ಬಯಲು ಎನ್ನುವ ಕಥಾ ಸಂಕಲನ. ಮೊದಲ ಕಥೆ ಒಬ್ಬ ಹುಡುಗಿ ತನ್ನದೇನೂ ತಪ್ಪಿಲ್ಲದೇ ಹುಡುಗನ ಬರೀ ಬಾಯಿ ಮಾತಿನ ತೆವಲಿಗೆ ಬಲಿಯಾಗಿ ಇಡೀ ಹದಿಹರೆಯ ಹಾಗು ಯೌವ್ವನದ ದಿನಗಳನ್ನು ಅಂಜುತ್ತ, ಉಳಿದವರ ಅನುಮಾನದ ದೃಷ್ಟಿಗೆ ಪಕ್ಕಾಗಿ ನೋಯುತ್ತ ನವೆದ ಕಥೆಯಿದೆ. ಹದಿಮೂರು ವರ್ಷದ ಹುಡುಗಿಯನ್ನು ಅದಾವ ಕಾರಣಕ್ಕಾಗಿ ತನ್ನ ಪ್ರಿಯತಮೆ ಎಂದು ಸುದ್ದಿ ಹಬ್ಬಿಸಿದ ಎಂಬುದು ಕೊನೆಗೂ ಅರ್ಥವಾಗುವುದಿಲ್ಲ. ಅದೆಷ್ಟೋ ವರ್ಷಗಳ ನಂತರ ಪುನಃ ದೋಣಿ ದಾಟಲು ಬಂದವಳು ಅಕಸ್ಮಾತಾಗಿ ಅವನನ್ನು ಕಂಡು ಹಳೆಯದ್ದನ್ನೆಲ್ಲ ನೆನಪಿಸಿಕೊಂಡು ಬರೆಯುವ ಪತ್ರ ಈ ಕಥೆ. ಇಲ್ಲಿ ಬರುವ ಹಲವಾರು ಮನೆಗಳ ಹೆಸರುಗಳು ಅದೆಷ್ಟು ಆಪ್ತವೆಂದರೆ ನಾನೇ ಆ ಜಾಗದಲ್ಲಿ ಇದ್ದೆನೇನೋ ಎಂಬ ಭಾವ. ಗಾಂವಕರ ಮನೆಯ ಯಾರು ಹೀಗೆ ಮಾಡಿದ್ದು ಎಂಬ ಊಹೆ, ಒಟ್ಟಿನಲ್ಲಿ ಕಥೆ ಎಂಬುದು ಕಥೆಯಾಗಷ್ಟೇ ಉಳಿಯದೇ ಇದು ನನ್ನದೇ ಬದುಕಿನ ಒಂದುಚಭಾಗ ಎನ್ನಿಸುವಂತಾಗಿದ್ದಕ್ಕೆ ಕಾರಣವೂ ಇದೆ. ಮಾಸ್ಕೇರಿಯ ಗಾಂವಕರ ಮನೆತನ ಒಂದು ಪ್ರತಿಷ್ಟೆಯ ಮನೆತನವಷ್ಟೇ ಅಲ್ಲ ಅದು ನನ್ನ ಅಪ್ಪನ ಅಜ್ಜಿ ಮನೆಯೂ ಹೌದು. ನನ್ನ ಅಜ್ಜಿಯನ್ನು ಮದುವೆಯ ಸಮಯದಲ್ಲಿ ಪಲ್ಲಕ್ಕಿಯಲ್ಲಿ ಕುಳ್ಳರಿಸಿ ಕರೆತಂದಿದ್ದರಂತೆ ಎಂದು ಅಪ್ಪ ಹೇಳುತ್ತಿದ್ದುದನ್ನು ಕೇಳಿದ್ದೇನೆ. ಹೀಗಾಗಿ ಇಲ್ಲಿ ಬರುವ ಪಾತ್ರಗಳೆಲ್ಲ ನನಗೆ ಹತ್ತಿರದ್ದು ಎಂದು ಅನ್ನಿಸಲು ಪ್ರಾರಂಭವಾಗಿದ್ದು. ಅಷ್ಟೇ ಅಲ್ಲ, ನನ್ನ ಚಿಕ್ಕಪ್ಪನ ಮಗಳು ಭಾರತಿಗೂ ಇದು ಅಜ್ಜಿ ಮನೆಯಾದ್ದರಿಂದ ನಮ್ಮಿಬ್ಬರ ಅಡೆತಡೆಯಿಲ್ಲದ ಅದೆಷ್ಟೋ ಮಾತುಗಳಲ್ಲಿ ಮಾಸ್ಕೇರಿಯ ವಿಷಯ ಆಗಾಗ ಬಂದು ಹೋಗುತ್ತಿರುತ್ತದೆ. ಆ ಕಾಲದಲ್ಲೇ ಕಾಶಿ ವಿದ್ಯಾಪೀಠದಲ್ಲಿ ಓದಿ ಶಾಸ್ತ್ರಿ ಪದವಿ ಪಡೆದ ಅಪರೂಪದ ಮಹಾನುಭಾವರಲ್ಲಿ ಆಕೆಯ ಅಜ್ಜ ಕೂಡ ಒಬ್ಬರು. ಇದೆಲ್ಲವೂ ಈ ಕಥೆಯನ್ನು ಓದಿದ ನಂತರ ನೆನಪು ಮರುಕಳಿಸಿ ಕಥೆ ಓದುತ್ತಿದ್ದೇನೆಯೋ ಅಥವಾ ಸಿನೇಮಾ ನೋಡುತ್ತಿದ್ದೇನೆಯೋ ಎಂಬ ಭಾವ ಹುಟ್ಟಿಸಿದ್ದು ಸುಳ್ಳಲ್ಲ.     ಅಮ್ಮನ ಕವನ ಸಂಕಲನ ಬಿಡುಗಡೆಗೆ ಬಾ ಎಂದ ವಿನಯರವರು ನನಗೆ ಈಗಲೂ ನೆನಪಾಗುತ್ತಾರೆ. ನಮ್ಮೂರ ಕಡೆಗಳಲ್ಲಿ ಗೌರಮ್ಮ ಅಕ್ಕೋರೆಂದರೆ ಕರಕುಶಲವಸ್ತುಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರು ಎಂದೇ ಪರಿಚಿತ. ಅವರ ಮನೆಗೆ ಹೋದವಳು ಹುಲ್ಲಿನಲ್ಲಿ ಮಾಡಿದ ಬೀಸಣಿಗೆಯನ್ನು ನನಗೆ ಬೇಕು ಎನ್ನುತ್ತ ತೆಗೆದುಕೊಂಡು ಬಂದಿದ್ದೆ. ಈಗಲೂ ಮನೆಯ ಬಾಗಿಲಿನಲ್ಲಿರುವ ಆ ಬೀಸಣಿಕೆ ನೋಡಿದಾಗಲೆಲ್ಲ ಗೌರಮ್ಮಕ್ಕನ ನೆನಪು ಮತ್ತು ಅದರ ಜೊತೆಜೊತೆಯಾಗಿಯೇ ಬರುವ ವಿನಯಾ ನೆನಪು.          ಹದಿಮೂರು ವರ್ಷದ ಹುಡುಗಿಯನ್ನು ತನ್ನ ಪ್ರಿಯತಮೆ ಎಂದು ಬಿಂಬಿಸಲು ಹೊರಟವನು ತನ್ನ ಅದೇ ವಯಸ್ಸಿನ ತಮ್ಮನನ್ನು ಪುಟ್ಟ ಮಗುವಂತೆ ನೋಡಿಕೊಳ್ಳುತ್ತ, ಬಸ್ ಹತ್ತಿಸಿ ಶಾಲೆಗೆ ಬಿಡುತ್ತಾನೆ. ಹೆಣ್ಣಾದರೆ ಆಕೆ ಹದಿಮೂರಕ್ಕೇ ದೊಡ್ಡವಳಾದ ಲೆಕ್ಕವೇ ಎಂದು ಕೇಳುವ ಪ್ರಶ್ನೆ ಇಂದಿನ ಜಗತ್ತಿಗೆ ಹಿಡಿದ ಕೈಗನ್ನಡಿಯಂತಿದೆ. ಹತ್ತು ಹನ್ನೆರಡು ವಯಸ್ಸಿಗೆ ಮೈನೆರೆದು ಬಿಡುವ ಇಂದಿನ ಹುಡುಗಿಯರು ಸಹಜವಾಗಿಯೇ ತಮ್ಮ ಬಾಲ್ಯವನ್ನು ಕಳೆದುಕೊಂಡು ಬಿಡುವ ಕ್ರೂರ ನೆನಪುಗಳ ಮಾಲೆಯೂ ಇಲ್ಲಿದೆ. ಯಾಕೆಂದರೆ ತನಗೆ ಗೊತ್ತಿಲ್ಲದ ಪ್ರೇಮಿಯೊಬ್ಬ ತನ್ನ ಮನೆಯೆದುರು ಸುಳಿದಾಡುವಾಗ ಚಿಕ್ಕಪ್ಪ ಎನ್ನಿಸಿಕೊಂಡವನೂ ಕೂಡ ಏನಿರಬಹುದು ಎಂಬುದನ್ನು ಇವಳ ಬಳಿಯೂ ಕೇಳದೆ, ಯೋಚಿಸುವ ವ್ಯವಧಾನವೂ ಇಲ್ಲದಂತೆ ಸಾರಾಸಗಟಾಗಿ ‘ತೀಟೆಯಿದ್ದರೆ ನನ್ನ ಸಂಗಡ ಬಾರೆ’ ಎಂದು ಬಿಡುವುದು ಅದೆಷ್ಟು ಅಸಹ್ಯದ ಪರಮಾವಧಿ, ಆಡಾಡುತ್ತಲೇ ಹೇಳಿದ ಮಾತಿರಬಹುದು ಎಂದು ಸಮಾಧಾನ ಹೇಳಿಕೊಳ್ಳಬಹುದಾಗಿದ್ದರೂ ವರಸೆಯಲ್ಲಿ ಮಗಳೇ ಆಗಬೇಕಿದ್ದವಳಿಗೆ ಆಡುವ ಮಾತೇ ಇದು ಎಂದು ನಿಬ್ಬೆರಗಾಗುವಂತೆ ಮಾಡುತ್ತದೆ. ಗಂಡಸರ ಕಾಮವಾಂಛೆಗೆ ಯಾರಾದರೇನು ಎಂಬ ಮಾತಿಗೆ ಪುರಾವೆ ನೀಡುವಂತಿದೆ.   ಎರಡನೆಯ ಕಥೆ ಊರ ಒಳಗಣ ಬಯಲು ಕೂಡ ಮಾಸ್ಕೇರಿಯ ಆವರಣದ್ದೇ. ಊರು ಬಿಟ್ಟು ಹೋಗಿ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾದ ಕಥಾನಾಯಕ ತನ್ನ ತಂದೆ ಪಾಂಡುರಂಗ ಗಾಂವಕರರ ಹೆದರಿಕೆಯಿಂದಾಗಿ ಊರಿಗೆ ಬಂದರೂ ಮನೆಗೆ ಹೋಗಲಾಗದೇ ಹಿಂದಿರುಗುವ ಕಥೆಯಿದ್ದರೂ ಅದು ಒಂದು ಊರು ನಿಧಾನವಾಗಿ ತನ್ನ ಹಳೆಯ ಬಾಂಧವ್ಯವನ್ನು ಮರೆಯುವ ಕಥೆಯನ್ನು ಹೇಳುತ್ತಲೇ, ಅಂದು ಜಾತಿ ಕಾರಣಕ್ಕಾಗಿ ಮಾಪಿಳ್ಳೆಯರ ಹುಡುಗಿಯನ್ನು ಬೆನ್ನಟ್ಟಿ ಹೋಗಿದ್ದನ್ನು ವಿರೋಧಿಸಿ ಜಗಳವಾಡಿದ್ದ ಊರಿನ ಹಿಂದಿನ ಗುನಗನ ಮಗನಾಗಿದ್ದವ, ಪ್ರಸ್ತುತ ಶಾಂತಿಕಾ ಪರಮೇಶ್ವರಿಯ ಗುನಗ ‘ಹಿರೀ ಸೊಸೆಯನ್ನು ಮನೆ ತುಂಬಿಸಿಕೊಳ್ಳದೇ ಕಿರಿ ಸೊಸೆಯನ್ನು ತುಂಬಿಸಲಾಗದು ಎಂದು ದೇವಿಯ ಅಪ್ಪಣೆ’ ಕೊಡಿಸುವುದಾಗಿ ಹೇಳುವುದು, ದೋಣಿ ದಾಟಿಸುವವನೂ ಕೂಡ ಪಾಂಡೊಡೆದಿರು ಮಗನನ್ನು ಒಪ್ಪಿ ಕೊಂಡರೇನೋ, ಹಂಗಾದ್ರೆ ಸಾಕು ಎಂದು ಹಾರೈಸುವುದು ಇನ್ನೂ ಉಳಿದಿರುವ ಮಾನವೀಯತೆಯ ಪ್ರೀತಿಯನ್ನು ನೆನಪಿಸುತ್ತದೆ. ಮನೆ ಎಂದರೆ ಅದು ಕೇವಲ ತನ್ನೊಬ್ಬನ ಮನೆಯಲ್ಲ, ಇಡೀ ಊರನ್ನೂ ಒಳಗೊಂಡಿದ್ದು ಎನ್ನುವ ಮಾತು ಒಮ್ಮೆ ಎದೆಯನ್ನು ಹಸಿಯಾಗಿಸುತ್ತದೆ.    ಮೂರನೆಯ ಕಥೆ ಕಡಿತನಕ ಕಾಯುವ ಅಭಿಮಾನದಲ್ಲಿ ಹೆಣ್ಣು ಅನುಭವಿಸುವ ಅಸ್ಥಿರತೆಯನ್ನು ತೀರಾ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಅತ್ತೆ, ಸೊಸೆ ಗಂಗಮ್ಮ, ಹಾಗೂ ಅವಳ ಮಗಳು ಕರಿಶ್ಮಾ ಆದ ಕರಿಯಮ್ಮ ಹೀಗೆ ಮೂರು ತಲೆಮಾರಿನ ಹೆಣ್ಣುಗಳು ಅನುಭವಿಸುವ ಯಾತನೆಯನ್ನು ಕಾಣಬಹುದು. ಮಾವ ಸ್ವಾತಂತ್ರ್ಯ ಹೋರಾಟದ ಹೆಸರಿನಲ್ಲಿ ತನ್ನೆಲ್ಲ ಗದ್ದೆಯನ್ನೂ ಮಾರಿ, ಅತ್ತೆಯ  ಬಂಗಾರವನ್ನೂ ಊರಿನ ವೇಶ್ಯೆಗೆ ಸುರಿದವನು. ಅವನೆಲ್ಲ ಆಟಾಟೋಪವನ್ನು ಸೋದರ ಸೊಸೆಯಾಗಿ ಕಣ್ಣಾರೆ ಕಂಡವಳು, ನಂತರ ಅವನ ಮಗನನ್ನು ಮದುವೆಯಾಗಿ ತಾನೂ ಜವಾಬ್ಧಾರಿ ಇಲ್ಲದ ಗಂಡನನ್ನು ನಿಭಾಯಿಸಿದವಳು. ಬೆಳದಿಂಗಳಿಂದ ಕಡ ತಂದಂತಹ ದಂತದ ಗೊಂಬೆ ಮಗಳನ್ನು ಓದಿಸಿ ಮದುವೆ ಮಾಡಿ ನಿಶ್ಚಿಂತಳಾಗಿರುವ ಗಂಗಕ್ಕ, ಮಗಳು ಅಲ್ಲಿಯೂ ಮನೆಯೊಳಗಿನ ಕೈದಿ. ಹುಟ್ಟಿದ ಮಗನನ್ನು ಓದಿಸಿ, ಈಗಿನ ಟ್ರೆಂಡ್‌ಗೆ ತಯಾರು ಮಾಡಲೆಂದು ದೂರದ ಡೆಹರಾಡೂನ್ ಸ್ಕೂಲ್‌ಗೆ ಹಾಕಿ ಅಮ್ಮ ಮಗನ ಬಾಂಧವ್ಯವನ್ನೇ ಕಸಿದು ಬಿಡುವ ಅಪ್ಪ, ನಂತರ ಟ್ಯೂಷನ್‌ಗೆಂದು ಬರುವು ಹುಡುಗರ ಮೇಲೂ ಅನುಮಾನ ಪಟ್ಟು, ಆಕೆ ಪ್ರಾಣ ಕಳೆದುಕೊಳ್ಳುವಂತೆ ಮಾಡುತ್ತಾನೆ.    ನಾಲ್ಕನೆಯ ಕಥೆಯಂತೂ ತೀರಾ ತಿಳಿಯದ ಆಳಕ್ಕೆ ನನ್ನನ್ನು ನೂಕಿದ ಕಥೆ ಎಲ್ಲ ಆರಾಮ. ಹೇಳಲಾಗದ ಅದೆಂತಹುದ್ದೋ ಬಾಲ್ಯದ ನೆನಪುಗಳನ್ನೆಲ್ಲ ಗಬರಾಡಿ ಎದುರಿಗಿಟ್ಟ ಕಥೆಯಿದು. ಸಾವಿತ್ರಿ ಟೀಚರ್ ಯಾಕೆ ತಮ್ಮ ಸಹೋದ್ಯೋಗಿ ಪ ನಾ ಮಾಗೋಡರಿಗೆ ಎಲ್ ಐ ಸಿ ನಾಮಿನೇಟ್ ಮಾಡಿದರು? ಆಯಿ ಎಂದು ಕರೆಯುತ್ತಿದ್ದ ಹುಡುಗ ಯಾರು? ಮೇದಾರ ಸರ್ ಯಾರು ಎಂಬೆಲ್ಲ ಪ್ರಶ್ನೆಗಳು ಬಗೆಹರಿಯುವುದೇ ಇಲ್ಲ. ನಮ್ಮ ಬಾಲ್ಯದಲ್ಲೂ ಇಂತಹ ಹತ್ತಾರು ಪ್ರಶ್ನೆಗಳು ಹುಟ್ಟಿ ಈಗಲೂ ಕಾಡುತ್ತಿರುವ ವಿಷಯಗಳು ಹಾಗೆಯೇ ಇದ್ದಿರಬಹುದು, ಅದು ಶಿಕ್ಷಕರಾಗಿರಬಹುದು, ಸುತ್ತ ಮುತ್ತಲಿನ ಯಾರೋ ಸಂಬಂಧಿಗಳಾಗಿರಬಹುದು, ನೆರೆಹೊರೆಯವರಾಗಿರಬಹುದು, ದೂರದಲ್ಲಿ ಕೇಳಿದ ಯಾರದ್ದೋ ಕತೆಯೇ ಆಗಿರಬಹುದು,  ಇಂತಹ ಹಲವಾರು ಪ್ರಶ್ನೆಗಳು ನಮ್ಮೆದೆಯ ಒಂದು ಮೂಲೆಯಲ್ಲಿ ಹಾಗಿಯೇ ಬೆಚ್ಚಗೆ ಮಲಗಿರುತ್ತದೆ. ಅಂತಹ ಪ್ರಶ್ನೆಗಳೆಲ್ಲ ನನ್ನೆದುರಿಗೂ ಧುತ್ತನೆ ಎದುರು ನಿಂತಂತಾಗಿ ತಲ್ಲಣಿಸುವಂತಾಗಿದ್ದು ಸುಳ್ಳಲ್ಲ. ನೋಯದವರೆತ್ತ ಬಲ್ಲರೋ ಎನ್ನುವ ಕಥೆಯ ತವರು ಮನೆಯನ್ನು ಅಚ್ಚು ಕಟ್ಟಾಗಿ ನಿಭಾಯಿಸಿದ ಅಂಜನಿ ಆಸ್ತಿಯನ್ನೆಲ್ಲ ಕೊಡುತ್ತೇನೆಂದರೆ ನಿರಾಕರಿಸಿ ಸಾವನ್ನಪ್ಪುವ ಬಗೆ ಒಂದು ಕ್ಷಣ ಕೊರಳು ಹಿಡಿದಂತಾಗುತ್ತದೆ. ಅಂಜನಿಯನ್ನು ಮದುವೆಯಾಗಬೇಕಾಗಿದ್ದ ಅನಿಲ, ‘ಮೋಸ ಮಾಡುಕೆ ನಾ ಏನ ಅದರ ಮೈ ಮುಟ್ಟಿನೆ’ ಎಂದು ಒಂದಿಷ್ಟೂ ಅಳುಕಿಲ್ಲದೇ ಹೇಳಿ, ಮೈ ಮುಟ್ಟಿದರೆ ಮಾತ್ರ ತಪ್ಪು ಎಂಬಂತೆ ನಡೆದುಕೊಳ್ಳುವ ಭಾವ ಮತ್ತೊಮ್ಮೆ ಈ ಸಮಾಜz, ಇಲ್ಲಿನ ಗಂಡಸರ ರೀತಿನೀತಿಯ ಬಗ್ಗೆ, ಅವರು ಯೋಚಿಸುವ ಬಗೆಯ ಕುರಿತು ತಿರಸ್ಕಾರ ಹುಟ್ಟುವಂತೆ ಮಾಡಿ ಬಿಡುತ್ತದೆ. ದಣಿವು ಕಾಡುವ ಹೊತ್ತು ಕಥೆಯಲ್ಲಿ ಒಂದಿಷ್ಟು ಗೊಂದಲ ಕಾಣಿಸುತ್ತದೆ. ಕಥೆಯ ಮೊದಮೊದಲು ಯಾರಿಗೆ ಏನಾಗಿದ್ದು ಎಂಬುದು ತಿಳಿಯದೇ ಕೊನೆಗೆ ಹೆಡ್ಮಾಸ್ತರರ ಹೆಂಡತಿ ತೀರಿ ಹೋಗಿದ್ದು, ಇತ್ತ ಗಂಡ ಯಾರು ಸತ್ತರೇನು ಉಳಿದವು ಆತನನ್ನು ಬದುಕಿಸುತ್ತವೆ ಎಂಬಂತೆ ಮಾತನಾಡಿದ್ದು ಎಲ್ಲವೂ ಬದುಕು ಇಷ್ಟೇನೇ ಎಂಬಂತೆ ಮಾಡಿಬಿಡುತ್ತದೆ. ಸ್ವಯ ಕಥೆಯಲ್ಲಿ ಯಾವುದೋ ಗರ್ಜಿಗೆ ದೂರಾದ ಗಂಡ ಹೆಂಡಿರ ಮನದ ಮಾತುಗಳಿವೆ. ಊರೆಲ್ಲ ಸುತ್ತುವ ಗಂಡಸಿಗೆ ಮನೆಯ ಹೆಂಡತಿ ನೆನಪಾಗುವುದು ತಾನು ಹಾಸಿಗೆ ಹಿಡಿದಾUಲೇ. ಆದೇ ಹೆಣ್ಣು ತಿರಸ್ಕಾರವ ನುಂಗಿ, ಗಂಡ ಹಾರಿದ ಬೇಲಿ ಎದುರಿಗೇ ಇದ್ದರೂ ಮಾತನಾಡದವಳು. ಎಲ್ಲಿಯೂ ಉಳಿದ ಹೆಂಗಸರಂತೆ ನಮ್ಮವರು ಎನ್ನದೇ, ನಿಮ್ಮನ್ನೋರು ಎನ್ನುತ್ತ ಕೊನೆಗೆ ತನ್ನ ಗಂಡ ಹೋಗುತ್ತಿದ್ದ ಮನೆಯವಳಿಗೂ ನಿಮ್ಮಣ್ಣೋರು ಎಂದು ಹೇಳಿ ನಕ್ಕುಬಿಡುವ ಪರಿ  ಸಾಧಾರಣಕ್ಕೆ ದಕ್ಕುವಂತಹುದ್ದಲ್ಲ. ಇಬ್ಬರ ಮನದ ಮಾತು ನಮ್ಮೊಳಗಿನ ಆಳವನ್ನು ಕೆದರಿ ಗಾಯವಾಗಿಸುತ್ತದೆ. ಕ್ಷಮೆಯಿರಲಿ ಕಂದಾ ಕಥೆಯಲ್ಲಿ ಶಿಕ್ಷಕಿಯೊಬ್ಬಳು ಎದುರಿಸಿದ ಸಾಮಾಜಿಕ ಬಂಧದ ಕಥೆಯಿದೆ. ಮಕ್ಕಳಂತೆ ಕಾಣುವ ವಿದ್ಯಾರ್ಥಿಗಳಲ್ಲಿ ಈ ಸಮಾಜ ಜಾತಿ ವಿಷಬೀಜವನ್ನು ಬಿತ್ತುವಾಗ,  ಆ ಮಕ್ಕಳ ಕುರಿತು ಶಿಕ್ಷಕಿಯ ಮೇಲೇ ಇಲ್ಲ ಸಲ್ಲದ ಸಂಬಂಧದ ಆರೋಪ ಹೊರಿಸುವಾಗ ಶಿಕ್ಷಕಿ ಅಸಹಾಯಕಳಾದ ಕಥೆ ಇಲ್ಲಿದೆ. ಜಾಣೆಯಾಗಿರು ಮಲ್ಲಿಗೆ ಕಥೆಯಲ್ಲಿ ದೊಡ್ಡವಳಾಗುವ ಮಗಳ ವೇದನೆಯಿದೆ. ಅಲ್ಲಿ ಬರುವ ಕಥೆ ಕೂಡ ತೀರಾ ರೂಪಕದಲ್ಲಿದ್ದು ಕಪ್ಪು ಬಣ್ಣದ ಕಾಲುವೆ ಹರಿದು ಬಾವಿಯಾಗುವಂತೆ ಹೇಳುತ್ತದೆ. ಕೊನೆಯ ಕಥೆ ಹತ್ತು ವರ್ಷದ ಹಿಂದೆ ಮತ್ತೂರ ತೇರಿನಲಿ ಕಥೆಯಲ್ಲಿ ‘ನೋಡಿದರೆ ತನ್ನಂತೆ ಕಾಣುವ ಮೊಬೈಲ್ ಸೆಟ್ ಎಂದು ತಂದೆ’ ಎಂದಿದ್ದು ನಂತರ ಅದು ಬೇಸರವಾಗಿದೆ ಬದಲಾಯಿಸುವೆ ಎಂದಾಗ ತನ್ನನ್ನೇ ಬದಲಾಯಿಸುವೆ ಎಂದಂತಾಗಿ ಅವಳು ನಡುಗುವುದು, ಮತ್ತು ಆತ ಹೇಳಿದ ಮಾತಿಗೆ ಅರ್ಥ ಹಚ್ಚುತ್ತ ಸಮಾಧಾನ ಮಾಡಿಕೊಳ್ಳುವ ಕೆಲಸದಲ್ಲಿ ಅವಳು ತಲ್ಲೀನಳಾಗುವುದು ಎಲ್ಲರ ಮನೆಯ ಕಥೆಯನ್ನೇ ನೆನಪಿಸುತ್ತದೆ.    ಇಲ್ಲಿರುವ ಹೆಚ್ಚಿನ ಕಥೆಗಳು ನನಗೆ ತೀರಾ ಆಪ್ತವಾಗುವುದಕ್ಕೆ ಕಾರಣ ಅದು ನಮ್ಮೂರಿನ ಸುತ್ತ ಮುತ್ತಲ ಹಳ್ಳಿಗಳ ಹೆಸರನ್ನು ಒಳಗೊಂಡಿದ್ದು. ಮಾಸ್ಕೇರಿ, ಹೊನ್ನೆಬೈಲು, ಅಗಸೂರು, ದೇವರಭಾವಿ, ಸಗಡಗೇರಿ, ತೊರ್ಕೆಗಳು ನನ್ನದೇ ಅವಿಭಾಜ್ಯ ಅಂಗಗಳಾಗಿರುವ ಊರುಗಳು. ಇನ್ನು ಹೆಚ್ಚಿನ ಕಥೆಗಳ ಭಾಷೆಗಳಂತೂ ನನ್ನದೇ ಆಡುಭಾಷೆ. ಹೀಗಾಗಿ ಈ ಕಥೆಗಳಲ್ಲೆಲ್ಲ ನಾನೇ ಭಾಗವಾಗಿದ್ದೇನೆ ಎಂದುಕೊಳ್ಳುತ್ತಲೇ ಓದಿದ್ದೇನೆ.    ಅಂದಹಾಗೆ ಇಡೀ ಕಥೆ ಹೆಣ್ಣಿನ ಸುತ್ತ ಸುತ್ತುತ್ತದೆ. ಹೆಣ್ಣಿನ ಜೀವನದ ಆಗುಹೋಗುಗಳು ಇಲ್ಲಿನ ಪ್ರಧಾನ ವಿಷಯಗಳು. ಹೆಣ್ಣಿನ ಕಷ್ಟಗಳ ಅರಿವು ಅವಳಿಗಷ್ಟೇ ಇರಲು ಸಾಧ್ಯ. ಇಡೀ ಸಂಕಲನ ಹೆಣ್ತನದ ಮೂಸೆಯಲ್ಲಿ ಅದ್ದಿ ತೆಗೆದಂತಿದೆ. ಜೀವನದ ಹತ್ತಾರು ಅನುಭವಗಳು, ನೋವು ನಲಿವುಗಳನ್ನು ಹೆಣ್ಣಿನ ದೃಷ್ಟಿಯಲ್ಲಿ ನೋಡುವುದನ್ನು ಇಲ್ಲಿನ ಕಥೆಗಳು ನಮಗೆ ಕಲಿಸಿಕೊಡುತ್ತವೆ. ಹತ್ತಿರದವರು ಎಂದುಕೊಂಡವರೇ ಹೆಣ್ಣನ್ನು ಬಳಸಿಕೊಳ್ಳುವ ಪರಿ ಮೈ ನಡುಗಿಸುತ್ತದೆ. ಮೊದಲ ಕಥೆಯ ಸುಧಾಕರನಂತೆ ಇದೇ ಎಂದು ನಿಖರವಾಗಿ ತೋರಿಸಲಾಗದ ಆದರೆ ಜೀವಮಾನವಿಡೀ ನೋವನುಭವಿಸುವ ಹಾನಿಯನ್ನು ಮಾಡಿ

Read Post »

ಸಂಪ್ರೋಕ್ಷಣ

ಅಂಕಣ ಬರಹ ಹೂವು ಹೊರಳುವ ಹಾದಿ ಬಾಲ್ಕನಿ ಎಂದಾಗಲೆಲ್ಲ ನನಗೆ ಹೂವಿನ ಕುಂಡಗಳು ನೆನಪಾಗುತ್ತವೆ. ಪುಟ್ಟಪುಟ್ಟ ಕುಂಡಗಳ ಕೆಂಪು ಗುಲಾಬಿ, ಗುಲಾಬಿ ಬಣ್ಣದ ನುಣುಪಾದ ಕುಂಡಗಳಲ್ಲರಳಿದ ದುಂಡು ಮಲ್ಲಿಗೆ, ದುಂಡನೆಯ ಕುಂಡದಲ್ಲೊಂದು ಹಸುಗೂಸಿನಂಥ ಮೊಳಕೆ, ಮೊಳಕೆಯೊಂದು ಮೊಗ್ಗಾಗುವ ಪ್ರಕ್ರಿಯೆ ಹೀಗೆ ಹೂಗಳ ದೊಡ್ಡದೊಂದು ಪ್ರಪಂಚವೇ ಪುಟ್ಟ ಬಾಲ್ಕನಿಯಲ್ಲಿ ಎದುರಾಗುತ್ತದೆ. ಅರಳಿಯೂ ಅರಳದಂತಿರುವ ಕೆಂಪು ದಾಸವಾಳ ಬೆಳಗನ್ನು ಸ್ವಾಗತಿಸಿದರೆ, ಮುಳುಗುವ ಸೂರ್ಯನನ್ನು ಮಲ್ಲಿಗೆಯ ಪರಿಮಳ ಬೀಳ್ಕೊಡುತ್ತದೆ; ಮಧ್ಯರಾತ್ರಿಯಲ್ಲಿ ಅರಳಿದ ಬ್ರಹ್ಮಕಮಲಗಳೆಲ್ಲ ಚಂದಿರನಿಗೆ ಜೊತೆಯಾಗುತ್ತವೆ. ಸಮಯ ಸಿಕ್ಕಾಗ ಹೂಬಿಡುವ ನಾಗದಾಳಿ, ಡೇರೆಗಳೆಲ್ಲ ನಿತ್ಯವೂ ಅರಳುವ ನಿತ್ಯಪುಷ್ಪದೊಂದಿಗೆ ಸ್ನೇಹ ಬೆಳೆಸುತ್ತವೆ. ಹೀಗೆ ಎಲ್ಲೆಗಳನ್ನೆಲ್ಲ ಮೀರಿದ ಬಣ್ಣಬಣ್ಣದ ಸ್ನೇಹಲೋಕವೊಂದು ನಮ್ಮೆದುರು ತೆರೆದುಕೊಳ್ಳುತ್ತದೆ.           ಸ್ನೇಹ ಎನ್ನುವುದೊಂದು ಸುಂದರ ಸಂಜೆಯಂಥ ಅನುಭವ. ಹಸಿರು ಹುಲ್ಲಿನ ಬೆಟ್ಟಗಳ ಅಂಚಿನಲ್ಲಿ, ಉದ್ದಗಲಕ್ಕೂ ಹರಡಿಕೊಂಡ ಸಮುದ್ರದ ಮಧ್ಯದಲ್ಲಿ, ಆಗಸಕ್ಕೆ ಅಂಟಿಕೊಂಡಂತಿರುವ ಅಪಾರ್ಟ್ಮೆಂಟಿನ ಹೆಲಿಪ್ಯಾಡ್ ಪಕ್ಕದಲ್ಲಿ, ಕಾಫಿಯ ಘಮಕ್ಕೆ ಜೊತೆಯಾಗುವ ಕಾದಂಬರಿಯ ಸಂಜೆಯ ವರ್ಣನೆಯಲ್ಲಿ, ಮೊಬೈಲಿನ ಗ್ಯಾಲರಿಯ ಸನ್ ಸೆಟ್ ವಿಡಿಯೋಗಳಲ್ಲಿ ಇಂಚಿಂಚೇ ಮರೆಯಾಗುವ ಸೂರ್ಯನ ಸೌಂದರ್ಯವೇ ಸ್ನೇಹಕ್ಕೂ ಲಭ್ಯವಾಗಿದೆ. ಸೂರ್ಯ ಹುಟ್ಟುವ, ಮುಳುಗುವ ಪ್ರಕ್ರಿಯೆಗಳೆಲ್ಲ ಕಲ್ಪನೆಗಳಲ್ಲಿ ಬಗೆಬಗೆಯ ರೂಪ ಪಡೆಯುವಂತೆ ಸ್ನೇಹದ ಭಾವನೆಯೂ ಅವರವರ ಕಲ್ಪನೆಗಳಿಗನುಸಾರವಾಗಿ ವಿಸ್ತರವಾಗುತ್ತ ಹೋಗುತ್ತದೆ. ಇಂಗುಗುಂಡಿಗಳ ನಿಂತ ನೀರಿನೊಂದಿಗೆ ಕಪ್ಪೆಯ ಸಂಸಾರ ಸ್ನೇಹ ಬೆಳಸಿಕೊಂಡರೆ, ಏಲಕ್ಕಿಯ ಸುಳಿಗಳ ನಡುವಿನಲ್ಲೊಂದು ಹಸಿರುಹಾವು ಸದ್ದುಮಾಡದೆ ಸರಿದಾಡುತ್ತದೆ; ನಂದಾದೀಪದ ಬತ್ತಿಯೊಂದು ಎಣ್ಣೆಯೊಂದಿಗೆ ಸ್ನೇಹವನ್ನು ಬೆಳಸಿದರೆ, ತೀರ್ಥದ ತಟ್ಟೆಯಲ್ಲೊಂದು ತುಳಸಿದಳ ತಣ್ಣಗೆ ತೇಲುತ್ತಿರುತ್ತದೆ; ಸ್ನೇಹದಿನದ ಮೆಸೇಜೊಂದು ಮೊಬೈಲ್ ತಲುಪುವ ವೇಳೆ, ನೆನಪಿನ್ನಲ್ಲಷ್ಟೇ ಉಳಿದುಹೋದ ಸ್ನೇಹವೊಂದು ಮುಗುಳ್ನಗೆಯನ್ನು ಅರಳಿಸುತ್ತದೆ; ಎರೆಹುಳುವಿನೊಂದಿಗಿನ ಹೂವಿನ ಸ್ನೇಹ ನೀರಿನ ಸಖ್ಯದಲ್ಲಿ ಜೀವಂತವಾಗಿರುತ್ತದೆ.           ಈ ಜೀವಂತಿಕೆಯ ಪರಿಕಲ್ಪನೆಯಲ್ಲಿ ಹೂವಿಗೊಂದು ವಿಶೇಷ ಮಹತ್ವ ಪ್ರಾಪ್ತಿಯಾಗಿದೆ. ದೇವರ ತಲೆಯಿಂದುದುರಿ ಪ್ರಸಾದದ ರೂಪ ಪಡೆದುಕೊಳ್ಳುವ ಹೂವಿನಿಂದ ಹಿಡಿದು ಪಬ್ಬಿನ ರಿಸೆಪ್ಷನ್ನಿನ ಹೂದಾನಿಗಳವರೆಗೂ ಬಗೆಬಗೆಯಾಗಿ ಹರಡಿಕೊಳ್ಳುವ ಹೂವುಗಳು ಸ್ನೇಹ ಪ್ರೇಮ ಸೌಂದರ್ಯಗಳ ಜೀವಂತಿಕೆಯಲ್ಲಿ, ಧಾರ್ಮಿಕತೆಯ ಭಾವನೆಗಳಲ್ಲಿ, ಆಧುನಿಕತೆಯ ಮನಸ್ಥಿತಿಯಲ್ಲಿ ತಮ್ಮದೇ ಮಹತ್ವವನ್ನು ಉಳಿಸಿಕೊಂಡಿವೆ. ಸ್ನೇಹಿತೆಯೊಬ್ಬಳು ತನ್ನ ಮನೆಯಂಗಳದಲ್ಲಿ ಅರಳಿದ ಹೂವಿನ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸುವ ಹೊತ್ತು, ಪ್ರೇಮಿಯ ಹೃದಯದಲ್ಲೊಂದು ಕೆಂಪು ಗುಲಾಬಿ ಅರಳುತ್ತದೆ; ಹೆಣ್ಣನ್ನು ವರ್ಣಿಸಲು ಪದಗಳೇ ಸಿಗದ ಕವಿಯೊಬ್ಬ ಹೂವಿನೊಂದಿಗೆ ಹೋಲಿಸಿ, ಅವರವರ ಭಾವಕ್ಕೆ ತಕ್ಕ ಸೌಂದರ್ಯದ ಪರಿಕಲ್ಪನೆಗಳನ್ನು ಹುಟ್ಟುಹಾಕುತ್ತಾನೆ; ಕೆಸರಿನಲ್ಲಿ ಅರಳಿದ ಕಮಲವೊಂದು ಸಾರ್ಥಕತೆಯ ಭಾವದಲ್ಲಿ ದೇವರ ಮುಡಿಗೇರುತ್ತದೆ; ಬರ್ಥ್ ಡೇ ಪಾರ್ಟಿಗಳ ಉಡುಗೊರೆಗಳೊಂದಿಗೆ ಹೂಗುಚ್ಛಗಳು ನಳನಳಿಸುತ್ತವೆ. ಹೀಗೆ ಹೂವು ಎನ್ನುವ ಸುಂದರ ಸೃಷ್ಟಿ ಎಲ್ಲರ ಭಾವ-ಭಕ್ತಿಗಳಿಗೆ ನಿಲುಕುತ್ತ, ಸಂಬಂಧಗಳಿಗೆ ಹೊಸ ಆಯಾಮವನ್ನು ಒದಗಿಸುತ್ತ, ಸುಂದರವಾದ ನೆನಪುಗಳನ್ನು ಹುಟ್ಟುಹಾಕುತ್ತದೆ.           ಆ ನೆನಪುಗಳಲ್ಲಿ ಕನ್ನಡ ಶಾಲೆಯ ಉದ್ದ ಜಡೆಯ ಅಕ್ಕೋರಿನ ನೆನಪೂ ಸೇರಿಕೊಂಡಿದೆ. ಪ್ರೈಮರಿ ಸ್ಕೂಲಿನ ಟೀಚರನ್ನು ಮಕ್ಕಳಷ್ಟೇ ಅಲ್ಲದೇ ಊರಿನವರೆಲ್ಲ ಅಕ್ಕೋರು ಎಂದೇ ಕರೆಯುತ್ತಿದ್ದರು. ಟೀಚರುಗಳ ಹೆಸರಿನ ಮುಂದೆ ಅಕ್ಕೋರು ಎಂದು ಸೇರಿಸಿದರೆ ಅವರು ಆ ಭಾಗದ ಪ್ರೈಮರಿ ಟೀಚರೆನ್ನುವುದು ಎಲ್ಲರಿಗೂ ಅರ್ಥವಾಗುತ್ತಿತ್ತು. ಶಾಲೆಯಿಂದ ಸ್ವಲ್ಪ ದೂರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಮ್ಮ ಉದ್ದ ಜಡೆಯ ಅಕ್ಕೋರು ಕಾಲ್ನಡಿಗೆಯಲ್ಲೇ ಶಾಲೆಗೆ ಬರುತ್ತಿದ್ದರು. ಅವರು ಬರುವ ಸಮಯಕ್ಕೆ ಸರಿಯಾಗಿ ಅವರನ್ನು ಸೇರಿಕೊಳ್ಳುತ್ತಿದ್ದ ನಾವೆಲ್ಲ ಜಡೆಯನ್ನು ನೋಡಲೆಂದೇ ಅವರಿಂದ ನಾಲ್ಕು ಹೆಜ್ಜೆ ಹಿಂದೆಯೇ ಉಳಿಯುತ್ತಿದ್ದೆವು. ಸೀರೆಯ ಬಣ್ಣಕ್ಕೆ ಹೊಂದುವಂತಹ ರಬ್ಬರ್ ಬ್ಯಾಂಡನ್ನೋ, ಲವ್ ಇನ್ ಟೋಕಿಯೋ ಹೇರ್ ಬ್ಯಾಂಡನ್ನೋ ಧರಿಸುತ್ತಿದ್ದ ಅವರ ಜಡೆಯ ಸೌಂದರ್ಯದ ಚರ್ಚೆ ಊರಿನ ಮನೆಮನೆಗಳಲ್ಲಿಯೂ ಆಗುತ್ತಿತ್ತು.           ಪ್ರತಿದಿನ ಬೆಳಿಗ್ಗೆ ಅಮ್ಮ ತೆಂಗಿನೆಣ್ಣೆಯನ್ನು ಹಚ್ಚಿ ತಲೆ ಬಾಚಿ ಎರಡೂ ಜಡೆಗಳನ್ನು ರಿಬ್ಬನ್ನಿನಿಂದ ಮಡಚಿ ಕಟ್ಟಿ, ಆಯಾ ಸೀಸನ್ನಿನಲ್ಲಿ ಅರಳುತ್ತಿದ್ದ ಹೂವನ್ನು ಮುಡಿಸುತ್ತಿದ್ದಳು. ಹಾಗೆ ಅಮ್ಮ ನನಗಾಗಿ ಹೂ ಕೊಯ್ಯುವಾಗಲೆಲ್ಲ ನಾನು ಅಕ್ಕೋರ ಸಲುವಾಗಿಯೂ ಹೂವೊಂದನ್ನು ಎತ್ತಿಟ್ಟುಕೊಳ್ಳುತ್ತಿದ್ದೆ. ಮಳೆಗಾಲದ ಡೇರೆ-ನಾಗದಾಳಿಗಳು, ಮಳೆಗಾಲ ಮುಗಿಯುತ್ತಿದ್ದಂತೆ ಅರಳಲು ಆರಂಭವಾಗುತ್ತಿದ್ದ ಗುಲಾಬಿ-ಸೇವಂತಿಗೆಗಳು ಹೀಗೆ ಎಲ್ಲ ಹೂವಿನ ಗಿಡಗಳ ಮೇಲೂ ಅಕ್ಕೋರ ಹೆಸರು ಕೂಡಾ ಬರೆದಿರುತ್ತಿತ್ತು. ಹಾಗೆ ಅಕ್ಕೋರ ಹೆಸರು ಹೊತ್ತ ಹೂವನ್ನು ಗಾಳಿ-ಮಳೆಗಳಿಂದ ಜೋಪಾನ ಮಾಡಿ, ಪ್ರೀತಿಯಿಂದ ಶಾಲೆಗೆ ಒಯ್ದು ಅವರ ಕೈಗೆ ಕೊಡುತ್ತಿದ್ದೆ. ನಗುನಗುತ್ತಾ ಅವರು ಅದನ್ನು ಸ್ವೀಕರಿಸುವ ಹೊತ್ತು ಒಂದು ರೀತಿಯ ವಿಚಿತ್ರವಾದ ಧನ್ಯತೆಯ ಭಾವ ಮನಸ್ಸನ್ನು ಆವರಿಸುತ್ತಿತ್ತು. ನನ್ನಂತೆಯೇ ದಿನಕ್ಕೆ ನಾಲ್ಕೈದು ಮಕ್ಕಳಾದರೂ ತಂದುಕೊಡುತ್ತಿದ್ದ ಹೂವುಗಳು ಅಕ್ಕೋರಿನ ಗುಂಗುರು ಕೂದಲ ಜಡೆಯನ್ನು ಅಲಂಕರಿಸುತ್ತಿದ್ದವು. ಮಳೆಗಾಲದಲ್ಲಂತೂ ಅವರ ಮೇಜಿನ ಮೇಲೆ ಬಣ್ಣಬಣ್ಣದ ಡೇರೆ ಹೂವುಗಳು ತುಂಬಿಹೋಗಿರುತ್ತಿದ್ದವು. ಸಂಜೆ ಶಾಲೆ ಮುಗಿದಮೇಲೆ ಅವರು ತಪ್ಪದೇ ಅವುಗಳನ್ನೆಲ್ಲ ನೀಟಾಗಿ ಜೋಡಿಸಿಕೊಂಡು ಪ್ರೀತಿಯಿಂದ ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರು. ಈಗಲೂ ಬಾಲ್ಕನಿಯಲ್ಲಿ ಗುಲಾಬಿಯೊಂದು ಅರಳಿದರೆ ಅಕ್ಕೋರಿನ ನಗು, ಆ ನಗು ನನ್ನಲ್ಲಿ ಮೂಡಿಸುತ್ತಿದ್ದ ಧನ್ಯತೆಯ ಭಾವ, ಅವರು ಹೂಗಳನ್ನು ಕೈಯಲ್ಲಿ ಹಿಡಿದು ಮನೆಗೆ ಹೋಗುವಾಗ ಸೆರಗಿನೊಂದಿಗೆ ಸ್ಪರ್ಧೆಗಿಳಿದಂತೆ ತೂಗಾಡುತ್ತಿದ್ದ ಉದ್ದನೆಯ ಜಡೆ ಎಲ್ಲವೂ ನೆನಪಾಗುತ್ತವೆ. ಚಿಕ್ಕಪುಟ್ಟ ಸಂಗತಿಗಳಲ್ಲೂ ಸಂಭ್ರಮ-ಸಾರ್ಥಕತೆಗಳನ್ನು ಕಾಣುತ್ತಿದ್ದ ಬಾಲ್ಯದ ನೆನಪುಗಳನ್ನು ಬಾಲ್ಕನಿಯ ಹೂಗಿಡಗಳೊಂದಿಗೆ ಜೋಪಾನ ಮಾಡಿ ನೀರೆರೆಯುತ್ತೇನೆ.           ಹಾಗೆ ನೀರೆರೆದು ಪೋಷಿಸುವ ನೆನಪುಗಳಲ್ಲಿ ದಿನಕ್ಕೊಂದು ಹೊಸ ಬಗೆಯ ಹೂವುಗಳು ಅರಳುತ್ತಲೇ ಇರುತ್ತವೆ. ತಾನು ಪ್ರೀತಿಯಿಂದ ಬೆಳಸಿದ ಗುಲಾಬಿ ಗಿಡಗಳಲ್ಲಿ ಅರಳುತ್ತಿದ್ದ ಹೂವುಗಳನ್ನು ಕಿತ್ತು ನನ್ನ ಮುಡಿಗೆ ಮುಡಿಸುತ್ತಿದ್ದ ಪಕ್ಕದ ಮನೆಯ ಅಕ್ಕ, ತೋಟದಲ್ಲಿ ಹಬ್ಬಿದ್ದ ಮಲ್ಲಿಗೆ ಬಳ್ಳಿಯ ಸುತ್ತ ನೆರೆಯುತ್ತಿದ್ದ ಹೆಣ್ಣುಮಕ್ಕಳ ದೊಡ್ಡ ಗುಂಪು, ದೇವರ ಕಾರ್ಯದ ದಿನ ಬೆಳಿಗ್ಗೆ ಬೇಗ ಎದ್ದು ಹೂಮಾಲೆ ಕಟ್ಟುತ್ತ ಸುಪ್ರಭಾತ ಹಾಡುತ್ತಿದ್ದ ಅತ್ತೆ, ಕೇರಿಯ ಮಕ್ಕಳು-ಗಂಡಸರೆಲ್ಲ ಸೇರಿ ಬೆಟ್ಟ-ಗುಡ್ಡಗಳನ್ನು ಅಲೆದು ಗೌರಿ ಹೂವನ್ನು ತಂದು ಮಂಟಪ ಕಟ್ಟುತ್ತಿದ್ದ ಚೌತಿಹಬ್ಬದ ಸಂಭ್ರಮ ಹೀಗೆ ಹೂವಿನೊಂದಿಗೆ ಪರಿಮಳದಂತೆ ಬೆರೆತುಹೋದ ನೆನಪುಗಳು ಯಾವತ್ತಿಗೂ ಬಾಡುವುದಿಲ್ಲ. ಕಾಲೇಜಿನ ಹುಡುಗ ಕೊಟ್ಟಿದ್ದ ಕೆಂಪು ಗುಲಾಬಿಯ ಒಣಗಿದ ಎಸಳುಗಳು ಕೀರ್ತನೆಯ ಪುಸ್ತಕದೊಳಗೋ, ರಂಗೋಲಿ ಪಟ್ಟಿಯೊಳಗೋ ಈಗಲೂ ಇರಬಹುದು; ಮಲ್ಲಿಗೆಯ ಮಾಲೆ ಮುಡಿದಿದ್ದ ಉದ್ದ ಜಡೆಯ ಫೋಟೋಗಳು ಹಳೆಯ ಆಲ್ಬಮ್ ಗಳಲ್ಲಿ ಬೆಚ್ಚಗೆ ಕುಳಿತಿರಬಹುದು; ಮೈತುಂಬ ಹೂವಿರುವ ಸೀರೆ ಉಟ್ಟ ಹೂವಿನಂಥ ನಾಯಕಿಯ ಹಾಡೊಂದು ಹೈವೇ ಪಕ್ಕದ ಡಾಬಾದಲ್ಲಿ ಪ್ಲೇ ಆಗುತ್ತಿರಬಹುದು; ರಸ್ತೆಯಂಚಿನ ಸಂಪಿಗೆ ಮರದಲ್ಲಿ ಅರಳಿದ ಹೂಗಳ ಪರಿಮಳ ಮುಚ್ಚಿದ ಬಾಗಿಲುಗಳು ತೆರೆಯುವುದನ್ನೇ ಕಾಯುತ್ತಿರಬಹುದು. ******* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು

“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು ಫೇಸ್ಬುಕ್ಕಿನ ತುಂಬ ಹರಡುವ ಪದ್ಯದ ಘಮಲಿಗೆ ತಮ್ಮ ದನಿಯನ್ನೂ ಸೇರಿಸಲು ಹಾತೊರೆಯುತ್ತಿರುವ ಅಸಂಖ್ಯ ಕವಿ ಮನಸ್ಸುಗಳ ನಡುವೆ ಕೊಟ್ರೇಶ್ ತಂಬ್ರಳ್ಳಿ ಅಮರಗೋಳಮಠ ಅವರದು ಗಮನಿಸಲೇಬೇಕಾದ ಹೆಸರು. ಸ್ವಲ್ಪ ಹದವೆನ್ನಿಸುವ ಯಾರದೇ ಕವಿತೆಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡುವ ಕೊಟ್ರೇಶ್ ಆಗೀಗ ತಮ್ಮ ರಚನೆಗಳನ್ನೂ ಈ ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟು ಪ್ರತಿಕ್ರಿಯೆಗೆ ಕಾಯುತ್ತಾರೆ. ನಿಜಕ್ಕೂ ಚಂದ ಇರುವ ಅವರ ನಿಜದ ರಚನೆಗಳಿಗಿಂತ ತಕ್ಷಣಕ್ಕೆ ಕೋಪ ತರಿಸುವ, ಸ್ವಲ್ಪ ಒರಟೇ ಎನ್ನಿಸುವ ಅವರ ಪ್ರತಿಕ್ರಿಯೆ ಹೆಚ್ಚು ಸ್ಪೇಸ್ ಪಡೆಯುವದನ್ನು ಗಮನಿಸುತ್ತಲೇ ಇದ್ದೇನೆ. ಮೂಲತಃ ಲಂಕೇಶರ ಅಪ್ಪಟ ಅನುಯಾಯಿಯಾದ ಅವರು ಮಾತು ಮಾತಿಗೆ ಲಂಕೇಶರನ್ನು ಅವರು ಈಗ ಇದ್ದಿದ್ದರೆ ಹೇಗೆ ಪ್ರತಿಕ್ರಯಿಸುತ್ತಿದ್ದರು ಎಂದೆಲ್ಲ ಹೇಳುವಾಗ ಹೆಚ್ಚು ವಿದ್ಯಾಭ್ಯಾಸ ಮಾಡದೆಯೂ ಸಾಹಿತ್ಯದ ನಮ್ರ ವಿದ್ಯಾರ್ಥಿಯಾದ ಅವರ ಬಗ್ಗೆ ಹೆಮ್ಮೆ ಮತ್ತು ಪ್ರೀತಿ ಹುಟ್ಟುತ್ತದೆ. ನಿಜಕ್ಕೂ ಕವಿತೆ ಎಂದರೇನು? ಇದು ಯಾವತ್ತಿಗೂ ಸ್ಪಷ್ಟ ಉತ್ತರ ಸಿಕ್ಕದ ಮತ್ತು ನಿಯಮಿತ ಡೆಫಿನಿಶನ್ ಮೀರಿದ ಸಾರ್ಥಕ ಸಾಲುಗಳು ಎನ್ನುವುದೇ ನನ್ನ ನಮ್ರ ಉತ್ತರ. ಏಕೆಂದರೆ ಕವಿತೆಯನ್ನೂ ಮತ್ತು ಕವಿತೆ ಕಟ್ಟಿ ಕೊಡುವ ಹಿತವನ್ನೂ ಬರೆದ ಕವಿಗಿಂತಲೂ ಆ ಕವಿತೆಯನ್ನು ಓದಿದ ಓದುಗ ಅನುಭವಿಸಬೇಕು. ಕವಿ ತನ್ನ ಕವಿತೆಯಲ್ಲಿ ಹೇಳ ಹೊರಟ ಸಂಗತಿಗಿಂತಲೂ ಮುಖ್ಯವಾದದ್ದು ಓದುಗನಿಗೆ ಹೊಳೆಯಬೇಕು ಮತ್ತು ಆ ಅನ್ನಿಸಿಕೆಯೇ ಆ ಕವಿಯನ್ನೂ ಆ ಕವಿತೆಯನ್ನೂ ಸಾಹಿತ್ಯ ಚರಿತ್ರೆಯ ಮುಂದಣ ಪಯಣದ ಹೆಜ್ಜೆಯಾಗಿ ಕಾಣಬೇಕು. ಆದರೆ ಇವತ್ತು ಧಂಡಿ ಧಂಡಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿರುವ     ಕವಿತೆಗಳ ರೂಪದಲ್ಲಿರುವ ಗದ್ಯದ ಸಾಲುಗಳು ಆ ಅಂಥ ನಿಕಷಕ್ಕೆ ಒಳಗೊಳ್ಳುತ್ತಿವೆಯೇ? ಓದುಗ ಅವನ್ನು ಸೀರಿಯಸ್ ಆಗಿ ಓದಿದ್ದಾನೆಯೇ? ಎಂದು ಪರಿಶೀಲಿಸ ಹೋದರೆ ನಿರಾಸೆ ಕಾಡುತ್ತದೆ. ಏಕೆಂದರೆ ಸ್ವಂತಿಯ ಪಟಗಳಲ್ಲಿ, ಅನಿಷ್ಟದ ರಾಜಕೀಯ ನಿಲುವುಗಳಲ್ಲಿ, ಎಡಬಲದ ಹೊಯ್ ಕೈಗಳಲ್ಲಿ ನಿಜಕ್ಕೂ ನಿಲ್ಲಬಲ್ಲ ಕವಿತೆಗಳು ಕೇವಲ ಲೈಕುಗಳಲ್ಲಿ ಹೆಚ್ಚೆಂದರೆ ನಗುವ/ ಅಳುವ/ ಲವ್ ಸಿಂಬಲಿನ ಈಮೋಜಿಗಳಲ್ಲೇ ತಮ್ಮ ಆಯಸ್ಸು ಮುಗಿಸುತ್ತಿವೆ. ಅಲ್ಲದೇ ದಿನಕ್ಕೆ/ಗಂಟೆಗೆ ಹೊಳೆದ ಸಾಲನ್ನೇ ಕವಿತೆಯೆಂದು ತೇಲಿಬಿಡುವ ಉಮೇದಿನಲ್ಲಿ ಆ ಸಾಲುಗಳು ಪಕ್ವವಾಗಿ ಹದಗೊಂಡು ಸುಖ ಪ್ರಸವ ಕಾಣದೇ ಸಮಯ ನೋಡಿಕೊಂಡು ಹೆರಿಗೆ ಮಾಡಿಸಿದ ಸಿಸೇರಿಯನ್ ಶಿಶುಗಳಂತೆ ಕಾಣುವ ಪ್ರಮೇಯಗಳೇ ಹೆಚ್ಚು. ಕವಿಯಾದವನು ಸಾಹಿತ್ಯ ಚರಿತ್ರೆಯನ್ನು ಅರಿತಿರಬೇಕು, ಪೂರ್ವ ಸೂರಿಗಳನ್ನು ಓದಿರಲೇಬೇಕು, ಕವಿತೆಯ ರಚನೆಗೆ ಸಾಹಿತ್ಯ ವಿಭಾಗೀಕರಣದ ಹಿನ್ನೆಲೆ ಮುನ್ನೆಲೆ ಗೊತ್ತಿರಬೇಕು,ಸಾಹಿತ್ಯ ಕೃಷಿಯಲ್ಲಿ ಈಗಾಗಲೇ ತೊಡಗಿ ಕೊಂಡವರ ನಡುವೆ ಗುರ್ತಿಸಿಕೊಂಡಿರಬೇಕು ….. ಇತ್ಯಾದಿ ಇತ್ಯಾದಿಗಳೆ ಮಾನದಂಡಗಳಾದರೆ, ಪಾಪ ಕೊಟ್ರೇಶ್ ಯಾವತ್ತಿಗೂ ಕವಿ ಎನ್ನಿಸಿಕೊಳ್ಳಲಾರರು. ತಮ್ಮ ಬದುಕಿಗೆ ಸಣ್ಣದೊಂದು ಹೋಟೆಲ್ ನಡೆಸುತ್ತಿರುವ ಅವರ ಸಾಹಿತ್ಯದ ಪ್ರೀತಿ ಮತ್ತು ಪುಸ್ತಕದ ಹುಚ್ಚು ಎಂಥೆಂಥ ಶ್ರೀಮಂತರಲ್ಲೂ ವಿದ್ಯಾವಂತರಲ್ಲೂ ಇರದುದು ನನಗೆ ಗೊತ್ತಿರುವ ಅಪ್ಪಟ ಸತ್ಯ. ಆಗೀಗ ನನ್ನಂಥವರ  ಬಲವಂತಕ್ಕೆ ಕನ್ನಡದ ಪೂರ್ವ ಸೂರಿಗಳನ್ನು ಓದುವ ಸಂಕಲ್ಪ ಮಾಡುತ್ತಾರಾದರೂ ಅವರ ನಿತ್ಯದ ಜಂಜಡದಲ್ಲಿ ಅದು ಸಾಧ್ಯವಿಲ್ಲದ ಸಂಗತಿ. ಆದರೂ ಅವರ ಛಲ ಮತ್ತು ತಿಳಿಯಲೇ ಬೇಕೆನ್ನುವ ಉಮೇದು ಅವರು ನಿತ್ಯ ಸ್ತುತಿಸುವ ಲಂಕೇಶರ ಓದಿನಿಂದ ಅವರು ಪಡೆದಿದ್ದಾರೆ. ಲಂಕೇಶ್ ಯೂನಿವರ್ಸಿಟಿ ಸೃಷ್ಟಿಸಿದ ಅಸಂಖ್ಯಾತ ಪದವೀಧರರಲ್ಲಿ ಕೊಟ್ರೇಶ್ ರ್ಯಾಂಕ್ ಪಡೆದ ಮೇಧಾವಿ. ಜೊತೆಗೇ ಗೆಳೆಯ ಸ್ವಭಾವ ಕೋಳಗುಂದ ಅವರ ಜೊತೆಯಲ್ಲಿ ಬಿಡುವಾದಾಗಲೆಲ್ಲ “ಕುರಿತೋದದೆಯುಂ” ಎನ್ನುವ ಸಾಹಿತ್ಯ ಸಂಬಂಧೀ ಚಟುವಟಿಕೆ, ಕನ್ನಡದ ಪೂರ್ವ ಸೂರಿಗಳನ್ನೂ ಸಮಕಾಲೀನ ಕೃತಿಗಳ ಪರಾಮರ್ಶೆಯ ತರಗತಿಗಳನ್ನೂ ಆಯೋಜನೆ ಮಾಡುವ ಅವರ ಗುಣ ಗ್ರಾಹೀ ಚಿಂತನೆಯ ದ್ಯೋತಕ. ಕೊಟ್ರೇಶರ ಕವಿತೆಗಳನ್ನು ಕುರಿತು ಹೇಳಬೇಕಾದ ಈ ಮಾತುಗಳಲ್ಲಿ ಅವರ ವೈಯುಕ್ತಿಕ ವಿವರ ಕುರಿತ ಪರಿಚಯದ ಮಾತುಗಳ ಅವಶ್ಯಕತೆ ಏಕೆಂದರೆ ಇವತ್ತು ಬರೆಯುತ್ತಿರುವ ಹಲವು ಖ್ಯಾತ ನಾಮರ ಹಿಂದೆ ಅವರ ವಿದ್ಯಾಭ್ಯಾಸ, ಅವರ ಕೆಲಸ, ಮಾಧ್ಯಮ ಮತ್ತು ಮಾಧ್ಯಮ ಮಿತ್ರರುಗಳ ಜೊತೆಗಿನ ಒಡನಾಟವೇ ಕವಿಯ ರಚನೆಗಳಿಗಿಂತ ಮುಖ್ಯವಾಗುತ್ತಿರುವ ಕಾಲ ಘಟ್ಟದಲ್ಲಿ ಈ ಯಾವುದರ ಸಂಪರ್ಕವೂ ಸಾಧ್ಯತೆಗಳೂ ಇಲ್ಲದ ನಿರ್ವಾತದಲ್ಲಿ ತನಗನಿಸಿದ್ದನ್ನು ನಿರ್ಭಿಡೆಯಿಂದ ಬರೆಯುವ ಕೊಟ್ರೇಶ್ ಮುಖ್ಯರಾಗುತ್ತಾರೆ. ಇಲ್ಲಿನ ಪದ್ಯಗಳಿಗೂ ಫೇಸ್ಬುಕ್ ಎಂಬ ಸಾಮಾಜಿಕ ಜಾಲತಾಣ ಜಾಗ ಕೊಟ್ಟು ಸಲಹಿದೆ. ಆದರೆ ಸಾಮಾನ್ಯವಾಗಿ ಫೇಸ್ಬುಕ್ ಸಲಹುತ್ತಿರುವ ಲೈಕುಗಳಿಂದಲೂ ಮತ್ತು ಓದುವ ಮೊದಲೇ ಒತ್ತಿಬಿಡುವ ಇಮೋಜಿಯ ಸಿದ್ಧ ಚಿತ್ರಗಳಿಂದಲೂ ಈ ಪದ್ಯಗಳು ಪಾರಾಗಿವೆ. ಅಂದರೆ ಬಲವಂತ ಬಸಿರು ಮತ್ತು ಅನಿವಾರ್ಯ ಹೆರಿಗೆಗಳಿಂದ ಈ ಪದ್ಯಗಳು ಬಚಾವಾಗಿವೆ. ಸಹಜತೆ ಮತ್ತು ಕವಿಸಮಯ ಇಲ್ಲಿನ ಬಹುತೇಕ ಕವಿತೆಗಳ ಹಿಂದೆ ಇರುವುದು ಶೃತವಾಗುವ ಅಂಶ. ಅದಕ್ಕಾಗಿ ಕೊಟ್ರೇಶ್ ಅವರನ್ನು ಅಭಿನಂದಿಸುತ್ತೇನೆ. ಬಹುತೇಕ ಪದ್ಯಗಳ ಮೊದಲ ಸಾಲು ಅಥವ ಶೀರ್ಷಿಕೆಗಳು ಈ ಕವಿಯ ವಿಸ್ತಾರವಲ್ಲದಿದ್ದರೂ ಮೇಲ್ನೋಟದ ಪೂರ್ವ ಸೂರಿಗಳ ಓದನ್ನು ದಾಖಲಿಸಿವೆ. ಯಾರನ್ನೂ ಓದದೆ ತಮಗೆ ತೋಚಿದ್ದೇ ಪ್ರಪಂಚ ಅನ್ನುವವರ ನಡುವೆ ಈ ಕವಿ ಭರವಸೆ ಹುಟ್ಟಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಕವಿತೆಗಳಲ್ಲಿ ದೌರ್ಬಲ್ಯ ಇಲ್ಲವೇ ಇಲ್ಲ ಎಂದು ಅರ್ಥವಲ್ಲ. ಭವಸಾರ ಅನ್ನುವ ಪದ್ಯ ಹೀಗೆ ಮೊದಲಾಗುತ್ತೆ. ” ನಕ್ಷತ್ರಗಳ ಮೋಹದಲ್ಲಿ ಹಗಲನ್ನು ಮರೆತು ಬಿಟ್ಟೆ..” ಆರಂಭವೇನೋ ಕುತೂಹಲ ಹುಟ್ಟಿಸುತ್ತದೆ, ನಿಜ. ಆದರೆ ಅದನ್ನು ಪದ್ಯದುದ್ದಕ್ಕೂ ವಿಸ್ತರಿಸುವುದರಲ್ಲಿ ಏನ್ನೆಲ್ಲ ಪುರಾಣ ಇತಿಹಾಸದ ಪ್ರತಿಮೆಗಳ ಮೆರವಣಿಗೆ ಇದ್ದೂ ಒಂದರ್ಥದಲ್ಲಿ ಬದುಕಿನ ಮಿತಿಯನ್ನು ಇದು ಹೇಳುತ್ತಿದ್ದರೂ ಒಟ್ಟೂ ರಚನೆ ಸಮಗ್ರೀಕರಣದ ಹಂತದಲ್ಲಿ ಇನ್ನೂ ಪಕ್ವವಾಗಬೇಕೆನ್ನಿಸುತ್ತದೆ. “ಹಣತೆ ಮತ್ತು ನನ್ನ ದಾರಿ” ಎನ್ನುವ ಕವಿತೆ ಮೇಲ್ನೋಟಕ್ಕೆ ಜಿ.ಎಸ್.ಎಸ್ ಅವರ ಬಹು ಚರ್ಚಿತ ಹಣತೆ ಹಚ್ಚುತ್ತೇನೆ ನಾನು…ಕವಿತೆಯ ನೆರಳಲ್ಲಿ ನಡೆದರೂ ಕವಿ ತನ್ನ ಮೇಲೆ ತಾನೇ ಇಟ್ಟುಕೊಂಡಿರುವ ಭರವಸೆಯ ಬೆಳಕು. ” ಮಗಳು ಮತ್ತು ಮಳೆ” ಆಕಾರದಲ್ಲಿ ಸಣ್ಣದಿದ್ದರೂ ಆಶಯದಲ್ಲಿ ದೊಡ್ಡದು. ಮಳೆಯ ಮುದದಿಂದ ಪ್ರೇರಿತ ಕವಿ ಕವಿತೆಯ ಹುನ್ನಾರದಲ್ಲಿ ಇರುವಾಗ ಕವಿಯ ಮಗಳು ಅವನ ತೊಡೆಯೇರಿ ಕೂರುತ್ತಾಳೆ. “ಬರೆಯುವ ಹಾಳೆ ಬೋರಲಾಯಿತು ಆದರೆ ಕವಿತೆಗೆ ಮಳೆಯಂತಹ ಜೀವ ತಂದಳು” ಎಂದು ಮುಕ್ತಾಯವಾಗುವ ಈ ರಚನೆ ನನಗೆ ತುಂಬ ಇಷ್ಟವಾಯಿತು. ಆದರೆ ಇಂಥದೇ ನಿರೀಕ್ಷೆಯಲ್ಲೇ “ಮಳೆಯ ಮಾರನೆ ದಿನ” ಶೀರ್ಷಿಕೆಯ ಪದ್ಯವನ್ನು ಸೀರಿಯಸ್ ಆಗಿ ಓದಿದರೆ ತಲೆ ಬರಹದಿಂದ ಆಕರ್ಷಿಸಿದರೂ ಸುಮ್ಮ ಸುಮ್ಮನೇ ತುರುಕಿದ ಪ್ರತಿಮೆಗಳ ಭಾರದಲ್ಲಿ ಕುಸಿದಿದೆ. “ಕೂಡಲ ಸಂಗಮದಲ್ಲಿ ಕೃಷ್ಣ ಮಲಪ್ರಭೆಯರು ಹರಿಯುತ್ತಿಲ್ಲ ಅಳುತ್ತಿದ್ದಾರೆ” ಎಂದು ಆರಂಭವಾಗುವ “ಅಣ್ಣಾ” ಎನ್ನುವ ರಚನೆ ಮೇಲ್ನೋಟಕ್ಕೆ ಹೊಸ ಆಶಯ ಮತ್ತು ಬಂಡಾಯದ ಚಿಂತನೆಯ ಹೊಳಹು ಅನ್ನಿಸುತ್ತದೆಯಾದರೂ ಒಟ್ಟೂ ಕವಿತೆ ಇನ್ನೂ ಮಾಗಿಸಿದ್ದಿದ್ದರೆ……ಅನ್ನಿಸುವುದು ಸತ್ಯ. ಸುಮ್ಮನೇ ಮೂಡಿಸಿದ ಆದರೆ ಬೇಕೆಂತಲೇ ತಂದು ಹೇರಿದ ಸಂಗತಿಗಳ “ರಾತ್ರಿ ಮೂರರ ಮಳೆ” ಟ್ಯಾಬ್ಲಾಯಿಡ್ ಪತ್ರಿಕೆಗಳು ಪ್ರಕಟಿಸುವ ಕಾವ್ಯ ಎಂದು ಅವು ಬಿಂಬಿಸುವ ಲಕ್ಷಣವುಳ್ಳ ರಚನೆ. ಕೃಷ್ಣನನ್ನು ನೆಪವಾಗಿಸಿಕೊಂಡು ರಾಧೆಯ ಅಳಲೆಂದು ಬಿಂಬಿಸಿದ ರಚನೆಗಳ ನಡುವೆ ಈ ಕವಿಯ “ಪ್ರಿಯೇ” ಎನ್ನುವ ಕವಿತೆ ಕುತೂಹಲ ಹುಟ್ಟಿಸುತ್ತದೆ. ನೀಲಾಕಾಶದ ಸಾಕ್ಷಿಯಲ್ಲಿ ಕೃಷ್ಣನ ಮುಗಿಯದ ಪ್ರೇಮದ ಪುಟಗಳಲ್ಲಿ ಒಂದಾಗೋಣ ಅನ್ನುವ ಕವಿಯ ನಿಲುವು ಒಪ್ಪಿತವೇ! ಅಯ್ಯಪ್ಪನ ದೇಗುಲಕ್ಕೆ ಹೆಣ್ಣು ಮಕ್ಕಳ ಪ್ರವೇಶ ನಿರಾಕರಣೆಯನ್ನು ಬಲವಾಗಿ ವಿರೋಧಿಸುವ ಶಕ್ತಿ          ” ಇರುಮುಡಿಯ ಸಹಜತೆ” ಕವಿತೆಯದು. ಆದರೆ ಬರಿಯ ಘೋಷಣೆ ಕವಿತೆಯಾಗದು ಎನ್ನುವ ಲೋಕೋತ್ತರದ ವಿಮರ್ಶೆ ಕೂಡ ಈ ರಚನೆಯ ಸಮಗ್ರತೆಯ ದೃಷ್ಟಿಯಿಂದ ಪರಿಶೀಲಿಸಿದರೆ ಉಳಿಯುವುದು ಮತ್ತದೇ ಗಿರಿಗೆ ಕೇಳಿಸದ ನರಿಯ ಕೂಗು. “ನೀಲಿ” ಶೀರ್ಷಿಕೆಯ ಪದ್ಯ ಕೃಷ್ಣನನ್ನು ಕುರಿತ ಚಿಂತನೆಯ ಜೊತೆಜೊತೆಗೇ ಕವಿ ಸ್ವಂತದ ಬದುಕಿನ ರಿಂಗಣಗಳನ್ನು ತುಲನೆ ಮಾಡಿಕೊಳ್ಳುತ್ತಲೇ ಮತ್ತೊಂದು ಹೊರಳಿಗೆ ತಯಾರಾಗುವ ಪರಿ ಆಕರ್ಷಣೀಯ. “ರಂಗ” ಎನ್ನುವ ಕವಿತೆಯಲ್ಲಿ ಕವಿ ಧ್ಯಾನಿಸುವುದು ದೇವರನ್ನೋ ಅವನ ಅಸ್ತಿತ್ವವನ್ನೋ ಅಥವ ಬದುಕಿನ ರಂಗ ಸ್ಥಳದ ಪರಿಕರವಾಗಿಯೇ ಬಳಸಲಾಗುವ ದೇವರ ಅಥವ ಸೃಷ್ಟಿಯ ಮಾಯಾ ಲೋಕವನ್ನೋ? ಅದು ಆ ಕ್ಷಣ ಓದುಗನಿಗೆ ನಿಲುಕುವ ಬೌದ್ಧಿಕತೆಯ ಮಟ್ಟದ್ದು. ನಿಜಕ್ಕೂ ಇಂಥ ರಚನೆಗಳೇ ಕಡಿಮೆಯಾಗುತ್ತಿರುವ ಹೊತ್ತಲ್ಲಿ ಈ ಕವಿಯ ಈ ರಚನೆ ನನಗಂತೂ ಹೆಚ್ಚು ಆಪ್ತವಾಗಿಸಿದ ಕವಿತೆಗಳಲ್ಲೊಂದು. ಮುಂದುವರೆದ ಕವಿ “ಓಂಕಾರ” ಪದ್ಯದಲ್ಲಿ ಹೇಳ ಹೊರಟದ್ದು ಏನು ಅನ್ನುವುದಕ್ಕೆ ಪದ್ಯದ ಕಡೆಯ ಸಾಲು “ಓಂಕಾರ…. ಓಂಕಾರ/ ಶ್ರೀಕಾರಕೆ ಜಯಕಾರ” ಓದಿದರೆ ಅವರ ನಿಲುವು ಸ್ಪಷ್ಟವಾಗುತ್ತದೆ. “ಹತ್ತನೇ ಕ್ಲಾಸಿನ ಹುಡುಗ” ವರ್ತಮಾನದ ವಿದ್ಯಾಭ್ಯಾಸ ಕ್ರಮವನ್ನು ಲೇವಡಿ ಮಾಡುತ್ತಿದ್ದರೂ ಅದಕ್ಕೆ ಪರ್ಯಾಯ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿ ಬರಿಯ ಹೇಳಿಕೆಯೇ ಆಗಿ ಉಳಿಯುವುದು ವಿಷಾದಕರ. ಇವರ ಪದ್ಯಗಳಲ್ಲಿ ನನ್ನನ್ನು  ಹೆಚ್ಚು ಕಾಡಿದ್ದು ಮತ್ತು ನಿಜದ ಪದ್ಯದ ಗಂಧ ಪೂಸಿದ್ದು “ಹಕ್ಕಿ-ಹಿಕ್ಕೆ”. ಈ ಕವಿ ಉಪನಿಷತ್ತುಗಳನ್ನು ಓದಿದ್ದಾರೋ ಇಲ್ಲವೋ ಅರಿಯೆ. ಆದರೆ ಉಪನಿಷತ್ತುಗಳ ರೀತಿಯಲ್ಲಿ ಸಣ್ಣದೊಂದು ವಿಚಾರದ ಮೂಲಕ ಮಹತ್ತಾದುದನ್ನು ಕಾಣಿಸುವ ಪ್ರಯತ್ನ ಈ ಕವಿತೆಯಲ್ಲಿದೆ. ಅಲ್ಲಿರುವ ಯಾವುದೋ ಸಾಲನ್ನು ಇಲ್ಲಿ ಉದ್ಧರಿಸಿ ಭೇಷ್ ಅನ್ನುವುದಕ್ಕಿಂತ ಇಡೀ ಪದ್ಯವನ್ನು ಮತ್ತೊಮ್ಮೆ ಮಗದೊಮ್ಮೆ ಓದುವುದು ಸೂಕ್ತ ಎನ್ನಿಸುತ್ತದೆ. ಆದರೂ ಪದ್ಯದ ನಡುವೆ ಹೇಗೋ ನುಸುಳಿರುವ ” ಉಗಿ ಮುಖಕ್ಕೆ” ಅನ್ನುವ ಥರದ ಪ್ರಯೋಗಗಳು ಕಾವ್ಯ ರಚನೆಯ ಅಲಂಕೃತ ಕರ್ಮಕ್ಕೆ ಲಕ್ಷಣವೆನ್ನಿಸುವುದಿಲ್ಲ. ಅದೊಂದು ಸಾಲು ಇಲ್ಲದಿದ್ದರೂ ಕವಿತೆ ಬದುಕ ಭಂಗುರತೆಯ ಮುಖಕ್ಕೆ ಉಗಿಯುತ್ತದೆ!  “ನಗ್ನ” ಪದ್ಯ ಕೂಡ ಈ ಕವಿಯು ಪ್ರಾಯಶಃ ನಿತ್ಯ ಅಲೋಚನೆಯ ಆವಿರ್ಭಾವ. “ನಿನ್ನ ಧ್ಯಾನದ ಯೋಗದಲಿ ನನ್ನಿರವನ್ನು ನಾನೇ ಮರೆ ತು ಹಟ ಮುನಿಯಂತೆ ಇಲ್ಲಿ ನಗ್ನನಾಗಿದ್ದೇನೆ” ಎಂದು ಆರಂಭವಾಗುವ ಕವಿತೆ, “ತೀಡಿದಂತೆಲ್ಲ ಘಮ ಘಮಿಸುವ ಗಂಧದ ಕೊರಡು ನಾನು” ಅನ್ನುವ ಸ್ವ ವಿಮರ್ಶೆಗೆ ಒಡ್ಡಿಕೊಳ್ಳುತ್ತ ಕಡೆಗೆ “ಇಲ್ಲಿ ನಿನ್ನದೇ ಗಂಧ, ಅಂದ ಆನಂದ ಪ್ರೇಮಾನಂದವು ನಿನ್ನ ಕಾಯುತ್ತ ಕುಳಿತಿದೆ” ಎಂದು ಕೊನೆಯಾಗುವಾಗ ಈ ಕವಿ ಇಷ್ಟೂ ಹೊತ್ತು ಧ್ಯಾನಿಸಿದ್ದು ಏನು? ಯಾಕಾಗಿ ಈ ಕನಲಿಕೆ ಎನ್ನುವುದರ ಸ್ಪಷ್ಟತೆ ದಕ್ಕುತ್ತದೆ. “ಪ್ರಾರ್ಥನೆ” ಹೆಸರಿನ ಈ ಕವಿಯ ಪದ್ಯಕ್ಕೂ ಅಡಿಗರ ಇದೇ ಹೆಸರಿನ ಬಹು ಖ್ಯಾತಿಯಾದ ಪದ್ಯಕ್ಕೂ ಹೆಸರಿನ ಕಾರಣದಿಂದ ಸಾಮ್ಯತೆ ಇದೆ. ಎರಡೂ ಪದ್ಯಗಳಲ್ಲಿ ಕವಿ ತನ್ನ ಮಿತಿಯನ್ನು ಹೇಳಿಕೊಳ್ಳುತ್ತಲೇ ಮಹತ್ತಾದುದನ್ನು ದಕ್ಕಿಸಿಕೊಳ್ಳುವ ಆರ್ತತೆಯನ್ನು ಯಶಸ್ವಿಯಾಗಿ ಹೇಳಿವೆ ಅನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೂ ಈ ಕವಿ ನಮ್ಮ ಪೂರ್ವ ಸೂರಿಗಳನ್ನು ಮತ್ತೆ ಮತ್ತೆ ಅಭ್ಯಾಸ ಮಾಡಿದರೆ ಇನ್ನೂ ನಿಕಷಕ್ಕೆ ಒಡ್ಡಿ ಕೊಳ್ಳಬಹುದು ಅನ್ನುವುದು ಸಹಜ ಆಶಯ. “ರಾತ್ರಿ ತುಂಬಾ ನೆನಪುಗಳು ಬಣ್ಣ ಬಣ್ಣ ತುಂಬಿದ ಸಿನಿಮಾ ಕಪ್ಪು ರಾತ್ರಿ, ಕೆಂಪು ಲೈಟು” (ಬಾರೆ ಕಟ್ಟು) ಪದ್ಯದಲ್ಲಿ ಇವರು ಧ್ಯಾನಿಸುವ ವಸ್ತು ವಿಶೇಷಗಳ, ವ್ಯಕ್ತಿ ಸಂಬಂಧಗಳ ತುಲನೆ ಬಹುತೇಕ ಇವರ ಇತರ ರಚನೆಗಳಲ್ಲೂ ಹಾಸು ಹೊಕ್ಕಾಗಿ ಬರುವ ಸಾಮಾನ್ಯ ಪರಿಕರಗಳು. ಸಾಮಾನ್ಯ ಸಂಗತಿಗಳ ಮೂಲಕವೇ ಅಸಾಮಾನ್ಯವಾದುದನ್ನು ಕಲ್ಪಿಸುವ ರಮಿಸುವ ಮತ್ತು ತನ್ನ ಆಲೋಚನಾ ಕ್ರಮದ ಮುನ್ನಡೆ. ಪ್ರಾಯಶಃ ಈ ಇದೇ ಕಾರಣಕ್ಕೇ ಇಂಥ ಅಸಾಮಾನ್ಯ ಚಿಂತನೆಯ ಮಾರ್ಗಕ್ಕೆ ಈ ಕವಿ ಹೆಚ್ಚು ಇಷ್ಟವಾಗುತ್ತಾರೆ. ಪ್ರಸ್ತುತ ಪದ್ಯ ಕೊನೆಯಾಗುವ ರೀತಿಯನ್ನು ಗಮನಿಸಿ; “ದನ ಕಾಯುವ ಹುಡುಗನೊಬ್ಬ ದಿನವೂ ಗೂಳಿ ಹತ್ತುವುದನ್ನು ನೋಡುತ್ತಾನೆ ಅಲ್ಲಿ; ಅವನಿಗೆ ಅದು ಬದುಕು:

“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು Read Post »

ಅಂಕಣ ಸಂಗಾತಿ, ದಿಕ್ಸೂಚಿ

ಅಂಕಣ

ಆಗದು ಎಂದು ಹೇಳಲು ಕಲಿಯಿರಿ ಕಲಿಸಿರಿ ಎಲ್ಲದಕ್ಕೂ ಹೂಂ ಎನ್ನುವ ಸ್ವಭಾವ ಬಹಳ ಜನರಲ್ಲಿ ಬೇ ರೂರಿದೆ. ಹೀಗಾಗಿ ಅವರೆಲ್ಲ ಹೌದಪ್ಪಗಳಾಗಿದ್ದಾರೆ.ಪ್ರತಿ ಯೊಂದು ಕೆಲಸಕ್ಕೂ ಹೂಂ ಎಂದು ಒತ್ತಡ ಆತಂಕವನ್ನು ಅನಾಯಾಸವಾಗಿ ತಾವೇ ಮೈ ಮೇಲೆ ಎಳೆದು ಕೊಳ್ಳುತ್ತಾ ರೆ.ಯಾವುದಕ್ಕೂ ಇಲ್ಲ ಎಂದು ಹೇಳಿ ರೂಢಿಯೇ ಇಲ್ಲ. ಇಲ್ಲ ಎಂದು ಹೇಳುವುದು ಅಗೌರವ ಎಂದೇ ಭಾವಿಸಿದ್ದೇ ವೆ.ನನಗೀಗ ತಾವು ಹೇಳಿದ ಕೆಲಸ ಮಾಡಲಾಗುವುದಿಲ್ಲ. ನಾನು ಬೇರೊಂದು ಕಾರ್ಯದಲ್ಲಿ ಮಗ್ನನಾಗಿದ್ದೇನೆ ಎಂದು ಎದುರಿಗಿನವರು ನಮ್ಮನ್ನು ತಪ್ಪಾಗಿ ತಿಳಿಯುತ್ತಾರೆಂದು ನಾವೇ ತಪ್ಪಾಗಿ ಅರ್ಥೈಸಿಕೊಂಡು ಬಿಡುತ್ತೇವೆ. ಹೂಂ  ಎಂದು ಎಲ್ಲ ಕಾರ್ಯಗಳನ್ನು ಒಪ್ಪಿಕೊಳ್ಳುವುದು ಸೌಜನ್ಯತೆಯ ಲಕ್ಷಣ. ಆಂಗ್ಲ ನುಡಿಯಂತೆ ಸೌಜನ್ಯವು ಶತ್ರುವನ್ನು ಗೆಲ್ಲುತ್ತದೆ ಎಂಬುದೇನೋ ನಿಜ.ಮ್ಯಾಂಟಿಗೋ ಹೇಳುವಂತೆ ಸೌಜನ್ಯಕ್ಕೆ ವೆಚ್ಚವೇನೂ ಹಿಡಿಯುವುದಿಲ್ಲ, ಆದರೆ ಸೌಜನ್ಯವು ಎಲ್ಲವನ್ನೂ ಕೊಂಡುಕೊಳ್ಳುತ್ತದೆಂಬ ಮಾತು ಅಷ್ಟೇ ದಿಟ. ಅಪಮಾನಕರ ಸಂಗತಿ ಅಲ್ಲ.ಒಲ್ಲೆ ಬೇಡ ಎಂದು ಹೇಳುವುದು ಅಪಮಾನಕರ ಎಂಬ ಹುರು ಳಿಲ್ಲದ ನಂಬಿಕೆಯಲ್ಲಿ ಬಿದ್ದು ನರಳುವವರನ್ನು ನೋಡುತ್ತೇ ವೆ ಅವರಿಂದ ಪಾಠ ಕಲಿಯದೇ ನಾವೂ ಅದೇ ಬಲೆಯಲ್ಲಿ ಬೀಳಲು ಹವಣಿಸುತ್ತೇವೆ.ದಾಕ್ಷಿಣ್ಯಕ್ಕೆ ಬಿದ್ದು ಬೇಡ ಒಲ್ಲೆ ಎನ್ನದೇ ಒಪ್ಪಿಕೊಂಡ ಸಂಗತಿಗಳು ನುಂಗಲಾರದ ತುತ್ತಾಗಿ ಪರಿಣಮಿಸುತ್ತವೆ.ಎಂಬುದು ಅನುಭವಿಸಿದವರಿಗೆ ಗೊತ್ತು ಬಲವಂತಕ್ಕೆ ಬಲಿಪಶುಗಳಾಗುವುದಕ್ಕಿಂತ ನಿರ್ದಾಕ್ಷಿಣ್ಯದಿಂ ದ ಮಾತನಾಡುವುದು ಒಳಿತು. ದಾಕ್ಷಿಣ್ಯಕ್ಕೆ ಒತ್ತು ಕೊಟ್ಟರೆ ಬಲಿಯಾಗುವಿರಿ. ಆಲಿವರ್ ಗೋಲ್ಡ್ ಸ್ಮಿತ್ ಹೇಳಿದಂತೆ ಸಹೃದಯತೆ ಕರುಣೆ ಹೊಂದಿದ ವ್ಯಕ್ತಿಯನ್ನು ಸಮಾಜ ಸದಾ ಗುರುತಿಸುತ್ತದೆ. ಹೀಗಾಗಿ ಸಹೃದಯತೆಯನ್ನು ಮೆರೆಯಿರಿ ಹೊರತು ದಾಕ್ಷಿ ಣ್ಯದ ಹೊರೆ ಹೊತ್ತು ಬೇಸರಿಸಿಕೊಂಡು,ನಿಮ್ಮ ಮನದ ಪ್ರಶಾಂತತೆಯನ್ನು ಕಳೆದುಕೊಳ್ಳದಿರಿ.ಹೌದಪ್ಪಗಳಾಗಬೇಡಿ  ಪ್ರತಿಯೊಂದಕ್ಕೂ ಹೂಂ ಎನ್ನುವ ಹೌದು ಎಂದು ಗೋಣು ಅಲ್ಲಾಡಿಸಿ ಹೌದಪ್ಪ (ಎಸ್ ಮ್ಯಾನ್)ಗಳಾಗಲು ಕಾರಣಗ ಳು ಅನೇಕ.ಅವುಗಳಲ್ಲಿ ಧೈರ್ಯವಿಲ್ಲದಿರುವುದೂ ಒಂದು ನಮಗ್ಯಾಕೆ ಉಸಾಬರಿ? ಹೂಂ ಎಂದರೆ ಬೀಸೋ ದೊಣ್ಣೆ ಯಿಂದ ತಪ್ಪಿಸಿಕೊಂಡಂತೆ ಎಂಬ ಜಾಯಮಾನ. ಒಲ್ಲೆ ಇಲ್ಲ ಬೇಡ ಎಂದರೆ ಗುಂಪಿನಿಂದ ಹೊರ ಹೋಗಬೇಕಾಗು ತ್ತೆ. ಎಲ್ಲರೊಂದಿಗೆ ಗೋವಿಂದ ಅಂದರೆ ಮುಗಿದು ಹೋ ಯಿತು. ಅತಿ ಮುಖ್ಯ ಕಾರಣವೆಂದರೆ ಎಲ್ಲರಲ್ಲಿಯೂ ತಾ ನು ವಿಭಿನ್ನ ವಿಶಿಷ್ಟ ಎಂದು ಗುರುತಿಸಿಕೊಳ್ಳಲು ಹೇಳುವ ಎಲ್ಲ ಕೆಲಸಗಳನ್ನು ಒಪ್ಪಿಕೊಳ್ಳುವುದು.ಯಾವ ಕೆಲಸವನ್ನು ಪೂರ್ಣಗೊಳಿಸದೇ ಒದ್ದಾಡುವುದು.ಒಂದು ಸಂಗತಿ ನೆನ ಪಿರಲಿ ಎಲ್ಲವನ್ನೂ ಮಾಡಲು ಹೋದರೆ ಯಾವುದನ್ನೂ ಪೂರ್ಣ ಮಾಡಲಾಗುವುದಿಲ್ಲ. ಯಶಸ್ವಿ ವ್ಯಕ್ತಿ ಎಂದು ಕರೆಸಿಕೊಳ್ಳಲು ಪ್ರಯತ್ನಿಸಿ ಅಪ ಮಾನಕ್ಕೀಡಾಗುವ ಪ್ರಸಂಗಗಳೇ ಹೆಚ್ಚಾಗುವವು.ಇಂಥವ ರನ್ನು ಕಂಡೇ “ಯಶಸ್ವಿಯಾಗಲು ಪ್ರಯತ್ನಿಸಬೇಡಿ, ಅದಕ್ಕೆ ಬದಲು ಮೌಲ್ಯವುಳ್ಳ ಘನತೆ ವ್ಯಕ್ತಿಯಾಗಲು ಪ್ರಯತ್ನಿಸಿ.” ಎಂದು ಅಲ್ಬರ್ಟ್  ಐನ್ ಸ್ಟೀನ್ ಹೇಳಿರಬಹುದು.ನಯ ವಾಗಿ ನಿರಾಕರಿಸಿ.ನೀವು ನಿಗದಿತ ಸಮಯದಲ್ಲಿ ಮಾಡ ಲೇಬೇಕಾದ ಕಾರ್ಯದಲ್ಲಿ ಮಗ್ನರಾದಾಗ ಬೇರೆಯವರು ತಮ್ಮ ಯಾವುದೇ ಕೆಲಸ ಹೇಳಿದರೆ ನನ್ನಿಂದ ಈಗ ತಾವು ಹೇಳಿದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲವೆಂದು ನಯವಾಗಿ ನಿರಾಕರಿಸಿ. ಊಟ ತಿಂಡಿ ವಿಷಯಗಳಲ್ಲೂ ನಿಮಗೆ ಬಲವಂತ ಮಾಡಿ ಬಡಿಸುವಾಗ, ಮತ್ತಷ್ಟು ತಿನ್ನುವಂತೆ ಒತ್ತಾಯಿಸಿದಾಗ, ಹೊಟ್ಟೆ ತುಂಬಿದೆ ಸಾಕು ಎಂದು ನಿರಾಕರಿಸಿ.ಪಾರ್ಟಿಗಳಲ್ಲಿ ನಿಮ್ಮ ಗೆಳೆಯ/ತಿಯರು ನಿಮ್ಮ ಅಭಿರುಚಿಗೆ ಹೊಂದದ ಆಹಾರಗಳನ್ನು ಪೇಯಗಳನ್ನು ತಿನ್ನಲು ಆಗ್ರಹ ಪಡಿಸಿದರೆ ನಿರ್ಭಿಡೆಯಿಂದ ನಾನು ಒಲ್ಲೆ ಎಂದು ಹೇಳಿ.ನಿಮ್ಮತನವ ನ್ನು ಕಾಪಾಡಿಕೊಳ್ಳಿ.ಯಾರದೋ ಇಷ್ಟಕ್ಕೆ ನಿಮ್ಮ ಇಷ್ಟದ ವಿರುದ್ಧ ನಡೆದುಕೊಳ್ಳಬೇಡಿ.ನಿರ್ದಾಕ್ಷಿಣ್ಯವಾಗಿ ವರ್ತಿಸಿ. ನೇರ ಮಾತುಗಾರರಿಗೆ ಗೆಳೆಯರು ಕಡಿಮೆ. ನೇರವಾಗಿ ಮುಚ್ಚು ಮರೆಯಿಲ್ಲದೇ ಮಾತನಾಡುವವರಿಂದ ಬಹಳ ಜನ ದೂರವಿರಲು ಬಯಸುತ್ತಾರೆ.ಅವರೊಂದಿಗೆ ಇರುವು ದರಿಂದ ಯಾವಾಗ ಮಾನ ಹರಾಜು ಹಾಕುತ್ತಾರೋ ಎನ್ನುವ ಭಯ ಕಾಡುತ್ತದೆ. ಕಡ್ಡಿ ತುಂಡು ಮಾಡಿದಂತೆ ಮಾತನಾಡುವವರೊಂದಿಗೆ ಸ್ನೇಹದ ಹಸ್ತ ಚಾಚುವುದು ವಿರಳ.ನಿದಾಕ್ಷಿಣ್ಯವಾಗಿ ಮಾತ ನಾಡಿಯೂ ಸ್ನೇಹಿತರನ್ನು ಉಳಿಸಿಕೊಳ್ಳಬಹುದು ಗಳಿಸಿ ಕೊಳ್ಳಬಹುದು. ಅದು ನೀವು ಉಪಯೋಗಿಸುವ ಪದಗ ಳು ಮಾತನಾಡುವ ದಾಟಿ ಮತ್ತು  ತೋರುವ ಕಾಳಜಿಯ ಮೇಲೆ ಅವಲಂಬಿತವಾಗಿರುತ್ತದೆ.ಇಲ್ಲಿ ಬಹಳ ಮುಖ್ಯವಾ ದ ವ್ಯತ್ಯಾಸವೆಂದರೆ ಭಾವನಾತ್ಮಕ ವ್ಯತ್ಯಾಸ. ವರ್ಚಸ್ಸು ಹೆಚ್ಚಿಸಿಕೊಳ್ಳಿ.ಬಂಧು ಬಾಂಧವರಲ್ಲಿ ಸಮಾಜದಲ್ಲಿ ನನ್ನ ವರ್ಚಸ್ಸು ತುಂಬಾ ಚೆನ್ನಾಗಿದೆ. ಯಾರೂ ಯಾವುದೂ ಸಹಾಯ ಕೇಳಿದರೂ ಇಲ್ಲ, ಆಗದು ಎಂದು ಹೇಳಿದರೆ ನನ್ನ ವರ್ಚಸ್ಸಿಗೆ ದಕ್ಕೆ ಬರುತ್ತದೆ. ಇಲ್ಲ ಎಂದು ಹೇಳಿದರೆ ಅವರಿಗೆಲ್ಲ ಅತೃಪ್ತಿಯಾಗುತ್ತದೆ. ಆಗಲ್ಲ ಎಂದರೆ ಅವರಿಗೆ ಕೋಪ ಬರುತ್ತದೆ ಎಂದೆಲ್ಲ ನೀವೇ ಭಾವಿಸಿ ನನ್ನಿಂದಾಗದು ಇಲ್ಲ ಎಂದು ಮನಸ್ಸು ಕೂಗಿ ಹೇಳಿದರೂ ಅದರ ಮಾತಿಗೆ ಸೊಪ್ಪು ಹಾಕದೇ ಸಂಕೋಚ ಪಟ್ಟು ಕೊಂಡು ಕೋಲೆತ್ತಿನ ತರಹ ಗೋಣು ಹಾಕಿ ಬಿಡುತ್ತೀರಿ. ನಂತರ ನಿನ್ನಿಂದ  ಅವ ರಿಗೆಲ್ಲ ಸಂಪೂರ್ಣ ನೆರವು ಪೂರೈಸಲಾಗದೇ ಗೋಳಾಡು ವ ಪ್ರಸಂಗ ಎದುರಾಗುತ್ತದೆ. ಸಹಾಯ ನಿರೀಕ್ಷಿಸಿದವರಿಗೆ ನಿರಾಸೆ ಉಂಟಾಗಿ ನಿಮ್ಮನ್ನು ಹಾಡಿ ಹರಿಸುತ್ತಾರೆ. ಇದೆಲ್ಲ ಕ್ಕಿಂತ ಇಲ್ಲ- ಆಗದು- ನಾನು ಒಲ್ಲೆ ಎಂದು ನೇರವಾಗಿ ಹೇ ಳಿದರೆ ನಿಮ್ಮ ವ್ಯಕ್ತಿತ್ವದ ವರ್ಚಸ್ಸು ಇನ್ನಷ್ಟು ಹೆಚ್ಚಾಗುತ್ತದೆ. ನಿಸ್ಸಂಕೋಚವಾಗಿ ತಿಳಿಸಿ ಹತ್ತು ಜನರೊಂದಿಗಿದ್ದಾಗ ಅವ ರ ಹಾಗೆ ನಡೆದುಕೊಳ್ಳದಿದ್ದರೆ ಸಾಮರಸ್ಯತೆ ಇಲ್ಲ ಸಮನ್ವತೆ ಕೊರತೆ ಇದೆ ಎಂದುಕೊಳ್ಳುತ್ತಾರೆ ಎಂದು ಅವರ ಮುಲಾ ಜಿಗೆ ಒಳಗಾಗಿ ಕುಡಿಯುವುದು ತಿನ್ನುವುದು ಸೇದುವುದಕ್ಕೆ ಹೂಂ ಎನ್ನದಿರಿ. ಕೂಡಿ ನಡೆಯುವಾಗ ಬಾಳುವಾಗ ಸಾ ಮರಸ್ಯತೆ ಸಮನ್ವತೆ ಮುಖ್ಯ ನಿಜ. ಹಾಗಂತ ನಿಮ್ಮ ವ್ಯಕ್ತಿ ತ್ವಕ್ಕೆ ದಕ್ಕೆ ತರುವಂಥ ದುಷ್ಕೃತ್ಯಗಳಿಗೆ ಗಟ್ಟಿಯಾಗಿ ಒಲ್ಲೆ ಎಂದು ಹೇಳಿ. ಇಂಥ ಜನರಿಗೆ ತಪ್ಪು ಅಭಿಪ್ರಾಯಗಳಿಗೆ ಎಡೆ ಮಾಡಿಕೊಡದಂತೆ ಸ್ಪಷ್ಟವಾಗಿ ನಿಸ್ಸಂಕೋಚವಾಗಿ ತಿ ಳಿಸಿ ಬಿಡಿ. ಇದರಿಂದ ಬೇರೆಯವರೂ ತಮ್ಮ ತಪ್ಪನ್ನು ತಿದ್ದಿ ಕೊಳ್ಳುವ ಸಾಧ್ಯತೆ ಇದೆ.ಇತರರೊಂದಿಗೆ ಕೆಲಸ ಮಾಡುವಾ ಗ ಸ್ನೇಹ ಸ್ಪೂರ್ತಿ ಸಮನ್ವತೆಗಳಿಂದ ಸೇರಿಕೊಳ್ಳಿ.ನೀವು ಸ್ನೇಹಪರ ಭಾವನೆಗಳನ್ನು ವ್ಯಕ್ತ ಪಡಿಸುವ ರೀತಿಯಲ್ಲಿ ಎದುರಿಗಿನವರು ಅರ್ಥ ಮಾಡಿಕೊಳ್ಳುತ್ತಾರೆ. ಮನೆಯಲ್ಲಿ ನಿಮ್ಮ ಸಹೋದರ/ರಿಗೆ ಚಿಕ್ಕ ಮಕ್ಕಳಿಗೂ ಖಚಿತವಾಗಿ ನಿರ್ಧಿಷ್ಟವಾಗಿ ನಿರ್ದಾಕ್ಷಿಣ್ಯವಾಗಿ ಬೇಡ ಎಂದು ಹೇಳಲು ಕಲಿಸಿ ಮಾರ್ಗದರ್ಶನ ನೀಡಿ. ಹೀಗೆ ಕಲಿಸಿಕೊಡುವುದರಿಂ ದ ಮುಂದಾಗುವ ನೋವುಗಳು ತಪ್ಪುತ್ತವೆ.  ಇಲ್ಲ ಆಗದು ನಾನು ಒಲ್ಲೆ ಎಂದು ಹೇಳದಿರುವುದು ಸಣ್ಣ ತಪ್ಪು ಎಂದು ನಿರ್ಲಕ್ಷಿಸಬೇಡಿ. ದೊಡ್ಡ ಹಡಗನ್ನು ಸಣ್ಣ ರಂಧ್ರವೇ ಮುಳುಗಿಸುತ್ತದೆ. ಬುದ್ಧಿವಂತಿಕೆಯಿದ್ದರೆ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ.ಇತರರು ನಿನಗೆ ಇಲ್ಲ-ಆಗದು ಎಂದು ಹೇಳಿದಾಗಲೂ ಒಪ್ಪಿಕೊಳ್ಳುವ ಗುಣ ಬೆಳೆಸಿಕೊಳ್ಳಿ. ಎಲ್ಲದಕ್ಕೂ ಇಲ್ಲ ಆಗದು ಎಂಬುದನ್ನು ಕಲಿಯಬೇಡಿ.ಇಲ್ಲ ಎಂದು ಹೇಳುವುದು ಮತ್ತು ನಕಾರಾತ್ಮಕವಾಗಿ ಸ್ಪಂದಿಸುವುದು ಎರಡೂ ಒಂದೇ ಅಲ್ಲ ಎಂಬುದು ನೆನಪಿನಲ್ಲಿರಲಿ.ಅಗತ್ಯತೆ ಬಿದ್ದಾಗ ಇತರರ ನೆರವಿಗೆ ಧಾವಿಸಿ. ಸಂಕಷ್ಟದಲ್ಲಿರುವವರ ಮೊರೆಗೆ ಕಿವಿಗೊಡುವುದನ್ನು ಮರೆಯದಿರಿ. ******************************** ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

ಅಂಕಣ Read Post »

ಅಂಕಣ ಸಂಗಾತಿ, ಮುಖಾಮುಖಿ

ಮುಖಾಮುಖಿ

ಅಂಕಣ ಬರಹ ಮುಖಾಮುಖಿಯಲ್ಲಿ ರೇಖಾಭಟ್ ನಮ್ಮೊಳಗಿನ ಪ್ರೀತಿ, ಕರುಣೆ, ಮಮತೆಗಳೇ ದೇವರು ರೇಖಾ ಗಜಾನನ ಭಟ್ಟ ವಜ್ರಳ್ಳಿ ಹತ್ತಿರದ ಹೊನ್ನಗದ್ದೆಯವರು. ಯಲ್ಲಾಪುರದ ಕುಂದೂರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಇವರ ಪತಿ ಹೈಸ್ಕೂಲ್ ಶಿಕ್ಷಕರು. ಗಾಯನ ಮತ್ತು ಬರವಣಿಗೆ ಇವರ ಹವ್ಯಾಸಗಳು. ಗಜಲ್ ಬರೆಯುವುದರ ಮೂಲಕ ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದ್ದಾರೆ. ಇವರ ಚೊಚ್ಚಿಲ ಕೃತಿಯನ್ನು ಮಡಿಲ ನಕ್ಷತ್ರವನ್ನು ಅದಿತಿ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಪ್ರಕಟಣೆಗೆ ಕನ್ನಡ ಪುಸ್ತಕ ಪ್ರಾಧಿಕಾರ ಧನ ಸಹಾಯ ಮಾಡಿದೆ. ಕನ್ನಡದಲ್ಲಿ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಪರಂಪರೆ ಇದೆ. ಆ ಸಾಲಿನಲ್ಲಿ ಈ ವರ್ಷ ಉತ್ತರ ಕನ್ನಡದಿಂದ ಆಯ್ಕೆಯಾದವರು ರೇಖಾ ಭಟ್ಟ. ವಚನಗಳನ್ನು, ದಾಸ ಸಾಹಿತ್ಯವನ್ನು ಇಷ್ಟಪಟ್ಟು ಓದುವ ರೇಖಾ ಭಟ್ಟ ಕನ್ನಡದ ಬೇಂದ್ರೆ ಮತ್ತು ಎಚ್.ಎಸ್.ವೆಂಕಟೇಶ ಮೂರ್ತಿ ಅವರ ಕವಿತೆಗಳನ್ನು ಇಷ್ಟಪಡುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ ನಾನಿನ್ನು ಎಳಸು ಎಂಬ ವಿನಯ ಸಹ ಅವರಲ್ಲಿದೆ. ವೈಚಾರಿಕ ಸಾಹಿತ್ಯ ಮತ್ತು ಪ್ರಗತಿಪರ ಧೋರಣೆಗಳನ್ನು ಗ್ರಹಿಸುವ ಮನಸ್ಸು ಸಹ ಅವರಲ್ಲಿದೆ. `ನಿನ್ನ ಮಾತುಗಳ ಧ್ವನಿಸಲೆಂದು ನಾ ಮೌನವನ್ನು ತಬ್ಬಿಕೊಂಡೆ, ನಿನ್ನ ಕನಸುಗಳು ಅರಳಲೆಂದು ನನ್ನ ಬಯಕೆಗಳ ಬಸಿದು ಕೊಂಡೆ’ ಎನ್ನುವ ರೇಖಾ ಅವರ ಗಜಲ್ ಗಳಲ್ಲಿ ಹೊಸತನದ ಹುಟುಕಾಟವೂ ಇದೆ. ಬಿಡುಗಡೆಯ ಹಂಬಲವೂ ಇದೆ. `ನಿನ್ನ ನೆನಪುಗಳ ಹೊರತಾಗಿ ಬೇರೇನೂ ಉಳಿದಿಲ್ಲ ಗೆಳೆಯಾ ದಹಿಸುತಿರುವ ವಿರಹದುರಿಯು ಏನನ್ನೂ ಉಳಿಸಿಲ್ಲ ಗೆಳೆಯಾ ‘ ಹೂಬನದಲಿ ಬರೀ ಮುಳ್ಳುಗಳೇ ಕಣ್ಣುಗಳ ಇರಿಯುತಿವೆ ಯಾಕೆ ವಿಷಾದದಲಿ ಬೆಂದ ಮನದಂತೆ ನೆಟ್ಟ ನೋಟವೂ ನೆಟ್ಟಗಿಲ್ಲ ಗೆಳೆಯಾ ಗಜಲ್ ಪ್ರಕಾರ ವಿರಹವನ್ನು ಪ್ರೇಮದ ಉತ್ಕಟತೆಯನ್ನು ಹೇಳಲು ಸಮರ್ಥವಾದ ಅಭಿವ್ಯಕ್ತಿಯ ಒಂದು ಪ್ರಕಾರ. ಈಚೆಗೆ ಗಜಲ್‌ನಲ್ಲಿ ವಿರಹ ಮತ್ತು ಪ್ರೇಮವೈಫಲ್ಯವನ್ನು ಮೀರಿ ಬದುಕಿನ ನಾನಾ ಬವಣೆಗಳನ್ನು, ಖುಷಿಯನ್ನು ಸಹ ಹೇಳಲು ಬಳಕೆಯಾಗುತ್ತಿದೆ. ರೇಖಾ ಅವರ ಮಡಿಲ ನಕ್ಷತ್ರದಲ್ಲಿ ಗಜಲ್ ಪ್ರಕಾರ ಹಳೆಯ ನೆನಪುಗಳ ಜೊತೆಗೆ ಸಮಾಜದ ಅನೇಕ ಸಂಗತಿಗಳ ವಿಮರ್ಶೆಯ ಒಳನೋಟವೂ ಇದೆ. ನನ್ನ ಗೆಳೆಯರಾದ ಕೋಲಾರದ  ದೊಡ್ಡಕಲ್ಲಹಳ್ಳಿ ನಾರಾಯಣಪ್ಪ , ಶಿರಸಿ ತಾಲೂಕು ಹೊಸ್ಮನೆ ಗ್ರಾಮದ ಗಣೇಶ್ ಹೆಗಡೆ ಹೊಸ್ಮನೆ ಸಹ ಗಜಲ್ ಗಳನ್ನು ಬರೆಯುವಾಗ ಭಿನ್ನ ಧೋರಣೆ ತಾಳಿ ಅದ್ಭುತ ಪ್ರತಿಮೆಗಳನ್ನು ಗಜಲ್ ಪ್ರಕಾರದಲ್ಲಿ ತಂದರು ಎಂಬುದು ಇಲ್ಲಿ ಸ್ಮರಣೀಯ. ಚೊಚ್ಚಲ ಕೃತಿಯಲ್ಲಿ ರೇಖಾ ಅವರು ಒಂದು ಸರಳ ರೇಖೆ ಎಳೆದಿದ್ದಾರೆ. ಅವರ ಬರಹ ಚೆಂದದ ರಂಗೋಲಿಯಾಗಲಿ ಎಂದು ಹಾರೈಸೋಣ. ನ.೧೪ ರಂದು ಅವರ ಮಡಿಲ ನಕ್ಷತ್ರ ಬೆಂಗಳೂರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಿಡುಗಡೆ ಸಹ ಆಗಿದೆ. ಕನ್ನಡದ ೨೩ ಜನ ಯುವ ಬರಹಗಾರರ ಸಾಲಿನಲ್ಲಿ ನಮ್ಮ ಜಿಲ್ಲೆಯ ರೇಖಾ ಭಟ್ ಸಹ ಸೇರಿರುವುದು ನಮಗೆ ಸಂತೋಷ ತಂದಿದೆ. ………………………………………………………………………………………………………………………….. ಪ್ರಶ್ನೆ : ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಉತ್ತರ : ನನ್ನೊಳಗಿನ ನನ್ನ ಹಗುರಾಗಿಸಿಕೊಳ್ಳಲು ನಾ ಕವಿತೆ ಬರೆಯುತ್ತೇನೆ ಪ್ರಶ್ನೆ : ಕವಿತೆ ಹುಟ್ಟುವ ಕ್ಷಣ ಯಾವುದು ? ಉತ್ತರ : ಆ ಕ್ಷಣವನ್ನು ಕವಿಸಮಯ ಎಂದಿದ್ದಾರೆ ಹಿರಿಯರು ಪ್ರಶ್ನೆ : ನಿಮ್ಮ ಕವಿತೆಗಳ ವಸ್ತು ಯಾವುದು ,ಈ ವರೆಗೆ  ಬರೆದ ಕವಿತೆಗಳ ದೃಷ್ಟಿಯಿಂದ ?  ಉತ್ತರ : ಅದಮ್ಯ ಸ್ಪೂರ್ತಿ, ನವಿರಾದ  ಪ್ರೀತಿ,  ಹೊರ ಭರವಸೆಗಳಿಂದ, ನೋವುಗಳ ಸರಿಸಿ , ನೆಮ್ಮದಿಯ ಅರಸಿ, ಹೊಸ ಆಶಯಗಳನ್ನು ಹೊತ್ತು, ಹೊಸಬೆಳಕಿನತ್ತ ಪಯಣ, ಪ್ರಶ್ನೆ : ಕವಿತೆಗಳಲ್ಲಿ ಬಾಲ್ಯ ಇಣುಕಿದೆಯೇ ? ಉತ್ತರ : ನಾನು ಬರೆದ ಗಜಲ್ ಗಳಲ್ಲಿ ಬಾಲ್ಯದ ಛಾಯೆ ಅಷ್ಟಾಗಿ ಇಣುಕಿಲ್ಲ. ಮಕ್ಕಳಿಗೆಂದೇ ಬರೆದ ಪದ್ಯಗಳಲ್ಲಿ ನನ್ನ ಬಾಲ್ಯದ ಅನುಭವಗಳನ್ನು ಬಿಂಬಿಸುವ ಯತ್ನ ಮಾಡಿದ್ದೇನೆ ಪ್ರಶ್ನೆ : ಕಾವ್ಯದ ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ : ಕಾವ್ಯ ವ್ಯೆಯಕ್ತಿಕವಾಗಿ ಬಿಂಬಿಸಲ್ಪಟ್ಟು ಓದುಗನ ಮನಸ್ಸಿನಲ್ಲಿ ಬೇರೂರಿದರೂ , ಅದು ಸಮಾಜಮುಖಿಯಾಗಬೇಕು. ಕಾವ್ಯ  ಓದುಗನಲ್ಲಿ  ಹೊಸ ಚಿಂತನೆಯ ಬೀಜವನ್ನು ಬಿತ್ತಬೇಕು ಪ್ರಶ್ನೆ :  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ರಾಜಕೀಯದಲ್ಲಿ ದಕ್ಷ ನಾಯಕರು ಇರುತ್ತಾರೆ. ಅಸಮರ್ಥ ನಾಯಕರು ಇರುತ್ತಾರೆ .. ಜನನಾಯಕರು ಜನರಿಗಾಗಿ, ರಾಜ್ಯಕ್ಕಾಗಿ,ದೇಶಕ್ಕಾಗಿ ಶ್ರಮಿಸಬೇಕೆ ವಿನಹ ಸ್ವಲಾಭಕ್ಕಾಗಿ ರಾಜಕಾರಣ ಮಾಡಬಾರದು. ಪ್ರಶ್ನೆ :  ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ಮಾನವೀಯತೆಯೇ ಧರ್ಮ.. ನಮ್ಮೊಳಗಿನ ಪ್ರೀತಿ, ಕರುಣೆ, ಮಮತೆಗಳೇ ದೇವರು.. ಪ್ರಶ್ನೆ :  ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ : ಸಾಂಸ್ಕೃತಿಕವಾಗಿ ಬೆಳೆಯಲು ಬೆರೆಯಲು ಈಗ ಸಾಕಷ್ಟು ವಿಪುಲ ಅವಕಾಶಗಳಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಸ್ಕೃತಿಯನ್ನು ಎತ್ತಿ ಹಿಡಿದು ನಮ್ಮ ಮೂಲ ಪರಂಪರೆಗಳನ್ನು ಮುನ್ನೆಡಸಬೇಕು… ಪ್ರಶ್ನೆ :  ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? . ಉತ್ತರ : ನಾನಿನ್ನು ಸಾಹಿತ್ಯ ಕ್ಷೇತ್ರದಲ್ಲಿ ಎಳಸು ಎಂಬ ಭಾವ ನನ್ನದು. ಬರೆಹ ನನಗೆ ಮತ್ತು ಓದುಗರಿಗೆ ಸಮಾಧಾನ ನೀಡಿದರೆ ಸಾಕಲ್ಲವೇ…  ಹಿರಿಯರ ಬರೆಹಗಳನ್ನು ಆಸಕ್ತಿಯಿಂದ ಓದುತ್ತೇನೆ. ಗೌರವಿಸುತ್ತೇನೆ.  ಇಲ್ಲಿನ ರಾಜಕೀಯದಿಂದ ದೂರವೇ ಉಳಿದಿದ್ದೇನೆ..ಈಗ ತ.ರಾ.ಸು. ಅವರ ದುರ್ಗಾಸ್ತಮಾನ ಓದುತ್ತಿದ್ದೆನೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ ನನ್ನ ಮುಂದಿನ ಓದು. ಪ್ರಶ್ನೆ :  ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ : ಕಾಲಕ್ಕೆ ತಕ್ಕಂತೆ ಬದಲಾಗುವುದು ಜಗದ ನಿಯಮ. ಅಂತೆಯೇ ನಮ್ಮ ದೇಶವು ಪ್ರಗತಿಯತ್ತ ಮುನ್ನೆಡೆಯುತ್ತಿದೆ. ಸಾಕಷ್ಟು ಅಭಿವೃದ್ಧಿಗಳಾಗುತ್ತಿವೆ. ಈ ಜಾತ್ಯಾತೀತ ರಾಷ್ಟ್ರದ ಒಳಬಾಂಧವ್ಯ ಇನ್ನಷ್ಟು ಗಟ್ಟಿ ಮಾಡುವ ಕೆಲಸಗಳು ಈಗಿನ ಬರೆಹಗಾರದಿಂದಲೂ ಆಗುತ್ತಿದೆ ಹಾಗೂ ಆಗಬೇಕಾಗಿದೆ.  ಪ್ರಶ್ನೆ :  ಸಾಹಿತ್ಯದ  ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ : ನಾನೂ ಮೊದಲು ಸಾಕಷ್ಟು ಓದಬೇಕಿದೆ .. ಸಾಹಿತ್ಯವೆಂಬ ಸಾಗರದ ಗುಟುಕು ಕುಡಿದು, ನಂತರ ಹೊಸಹೊಸ ಬೀಜಗಳನ್ನು ಬಿತ್ತನೆ ಮಾಡಿ, ಸಾಹಿತ್ಯ ಕೃಷಿಯನ್ನು ಶ್ರೀಮಂತಗೊಳಿಸುವ ಕನಸು ನನ್ನದು.. ನನ್ನ ಶಾಲೆಯ ಮಕ್ಕಳಲ್ಲೂ ಸಾಹಿತ್ಯ ಪ್ರೀತಿ ಹೆಚ್ಚಿಸಿ, ಕನ್ನಡ ಸಾಹಿತ್ಯದೆಡೆಗೆ ಅವರಲ್ಲಿ ಒಲವು ಮೂಡಿಸುವ ಹಂಬಲವಿದೆ. ಪ್ರಶ್ನೆ : ಕನ್ನಡ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ ಯಾರು ? ಉತ್ತರ : ದ.ರಾ. ಬೇಂದ್ರೆ. ಹಾಗೂ ಎಚ್ ಎಸ್,ವೆಂಕಟೇಶ ಮೂರ್ತಿಯವರ ಭಾವಗೀತೆಗಳು. ………

ಮುಖಾಮುಖಿ Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಗೆಳೆಯನ ಮಕ್ಕಳು

ಗೆಳೆಯನ ಮಕ್ಕಳು ಅಂಕಣ ಬರಹ ಎಷ್ಟೊ ವರ್ಷಗಳ ಬಳಿಕ ಗೆಳೆಯನ ಮನೆಗೆ ಹೋಗಬೇಕಾಯಿತು. ಅವನೂ ಅವನ ಹೆಂಡತಿಯೂ ಪ್ರೀತಿಯಿಂದ ಬರಮಾಡಿಕೊಂಡರು. ನಾನು ಅವರ ಮನೆ ಹೊಕ್ಕಾಗ ಎಂಟು ವರ್ಷದ ಮಗಳು ಬೊಂಬೆಗೆ ಸೀರೆಯುಡಿಸುತ್ತಿದ್ದಳು. ಹನ್ನೆರಡು ವರುಷದ ಮಗ ಸೋಫಾದಲ್ಲಿ ಮೈಚೆಲ್ಲಿ ಕಾಲನ್ನು ಆಗಸಕ್ಕೆ ಚಾಚಿ ಲ್ಯಾಪ್‍ಟಾಪಿನಲ್ಲಿ ವಿಡಿಯೊ ಗೇಂ ಆಡುತ್ತಿದ್ದ. ಮನೆಗೆ ಬಂದು ಹೋದವರ ಬಗ್ಗೆ ಖಬರಿಲ್ಲದಷ್ಟು ತನ್ಮಯನಾಗಿದ್ದ. ನನ್ನ ಗೆಳೆಯ `ಅಪ್ಪಿ ನೋಡೊ. ನನ್ನ ಕ್ಲಾಸ್‍ಮೇಟ್ ಬಂದಾನ. ಅಂಕಲ್‍ಗೆ ನಮಸ್ಕಾರ ಮಾಡು’ ಎಂದರೂ ಕಣ್ಣೆತ್ತಿ ನೋಡಲಿಲ್ಲ. ನಾನೊಯ್ದ ತಿಂಡಿಯನ್ನು ಹದ್ದುಗಣ್ಣಿನಿಂದ ಗಮನಿಸಿದ್ದನೆಂದು ಕಾಣುತ್ತದೆ, ಲಕ್ಕನೆ ಎತ್ತಿಕೊಂಡು ಪ್ಯಾಕು ಹರಿದು ಮುಕ್ಕತೊಡಗಿದ. ಲ್ಯಾಪ್‍ಟಾಪ್ ಆಟ ಮುಗಿದ ಬಳಿಕ ಕಾರ್ಟೂನು ಸಿನಿಮಾ ಟಿವಿಯಲ್ಲಿ ಹಾಕಿಕೊಂಡು ಕುಳಿತ. ನನಗೆ ಅವನ ಜತೆಗೆ ಮಾತಾಡಲೇಬೇಕೆಂದು ಹಠ ಹುಟ್ಟಿತು. ಆತ ನನ್ನ ಪ್ರಶ್ನೆಗಳಿಗೆ ನನ್ನತ್ತ ನೋಡದೆ ಜವಾಬುಕೊಡುತ್ತಿದ್ದ. ಗಮನಿಸಿದೆ: ಅವನ ಕನ್ನಡದಲ್ಲಿ ಬಣ್ಣಕ್ಕೆ ಮತ್ತು ಅಂಕಿಗಳಿಗೆ ಮನೆಮಾತಿನಲ್ಲಿ ಗುರುತಿಸುವ ಶಬ್ದಗಳಿರಲಿಲ್ಲ. ಮಕ್ಕಳನ್ನು ನಮ್ಮಿಚ್ಛೆಯಂತೆ ರೂಪಿಸಬೇಕಾಗಿಲ್ಲ. ಅವು ತಮ್ಮಿಚ್ಛೆಯಂತೆಯೇ ರೂಪುಗೊಳ್ಳಲಿ. ಸಾಧ್ಯವಾದರೆ ನಾವು ಅವುಗಳಿಂದ ಕಲಿಯೋಣ ಎಂದ ಚಿಂತಕ ಖಲೀಲ್ ಗಿಬ್ರಾನನ ಹಿತನುಡಿ ಚರ್ಚಾಸ್ಪದ ಅನಿಸಿತು. ನನ್ನ ಮುಖವನ್ನೇ ಗಮನಿಸುತ್ತಿದ್ದ ಗೆಳೆಯ ತುಸುನಗುತ್ತ ಹೇಳಿದ: `ದೋಸ್ತಾ, ನೋಡಿದೆಯಾ ಕಾಲ ಹೆಂಗ ಚೇಂಜಾಗದ? ನಾವು ಸಣ್ಣೋರಿದ್ದಾಗ ಗೋಲಿ ಚೆಂಡು ಚಿನ್ನಿದಾಂಡು ಆಡ್ತಿದ್ದೆವು. ಈಗಿನವಕ್ಕೆ ಆಡೋಕೆ ಲ್ಯಾಪ್‍ಟಾಪೇ ಬೇಕು’.ಅವನ ದನಿಯಲ್ಲಿ ಹೊಸ ತಲೆಮಾರಿನ ಮಕ್ಕಳ ಅಭಿರುಚಿ ಬದಲಾದ ಬಗ್ಗೆ ಸಣ್ಣಗಿನ ವಿಷಾದವಿತ್ತು. ಅದರೊಳಗೆ `ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ಬೆಳೆಸಿದ್ದೇನೆ’ ಎಂಬ ಹಮ್ಮೂ ಕೂಡಿದಂತಿತ್ತು. ಭಾರತದ ಬಹುತೇಕ ಪ್ರಜೆಗಳ ಕೈಗೀಗ ಮೊಬೈಲು ಬಂದಿವೆ. ಹಲವರಿಗೆ ಕಂಪ್ಯೂಟರ್ ಲ್ಯಾಪ್‍ಟಾಪು ಟ್ಯಾಬುಗಳೂ ಸಿಕ್ಕಿವೆ. ಈ ತಂತ್ರಜ್ಞಾನ ಚಾಲಿತ ಸರಕುಗಳ ಆಗಮನದಿಂದ ಬಾಳಿನ ಗತಿಯಲ್ಲಿ ವಿಚಿತ್ರ ವೇಗ ಬಂದಿದೆ. ಮನೆಗೆಲಸ ಮಾಡುವ ಮಹಿಳೆಯಿಂದ ಹಿಡಿದು ದಿನಗೂಲಿ ಹುಡುಕುವವರ ತನಕ, ವ್ಯಾಪಾರಿಯಿಂದ ರೈತರ ತನಕ ಅನೇಕರ ಕಸುಬಿನಲ್ಲಿ ಸಂಚಲನ ಮೂಡಿದೆ; ಬರೆಹಗಾರರ, ಅಧ್ಯಾಪಕರ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯವವರ ಹಾಗೂ ಪತ್ರಕರ್ತರ ಬದುಕಿನಲ್ಲಿ ಹೊಸ ನೆಗೆತ ಸಿಕ್ಕಿದೆ. ಇದೊಂದು ಕ್ರಾಂತಿಕಾರಿ ಪಲ್ಲಟವೇ ಸೈ. ಆದರೆ ಈ ಸಂಚಲನೆ-ಪಲ್ಲಟಗಳ ಜತೆಗೆ ಈ ಸರಕು-ಸಲಕರಣೆಗಳಿಂದ, ಮಕ್ಕಳ ಮತ್ತು ತರುಣರ ವರ್ತನೆಯಲ್ಲಿ ಒಂದು ಬದಲಾವಣೆಯಾಗಿದೆ. ಅವರು ಮನುಷ್ಯ ಸಂಪರ್ಕವೇ ಇಲ್ಲದೆ ಅತಿದೀರ್ಘವಾದ ಕಾಲವನ್ನೂ ಏಕಾಂಗಿಯಾಗಿ ಕಳೆಯಬಲ್ಲವರಾಗಿದ್ದಾರೆ. ಪಕ್ಕದಲ್ಲಿ ಎದುರುಗಡೆ ಯಾರಿದ್ದಾರೆ ಎಂಬ ಖಬರಿಲ್ಲದೆ, ಮೈಕ್ರೊಫೋನ್ ಬೆಂಡೋಲೆಯನ್ನು ಕಿವಿಗೆ ತುರುಕಿಕೊಂಡು ಹಾಡುಕೇಳುತ್ತ ಧ್ಯಾನಸ್ಥರಾಗಿ ತಮ್ಮ ಜಗತ್ತನ್ನು ಸೃಷ್ಟಿಸಿಕೊಂಡು ಮುಳುಗಬಲ್ಲವರಾಗಿದ್ದಾರೆ; ಮೊಬೈಲ್ ಪರದೆಯ ಮೇಲೆ ಬೆರಳಾಡಲು ಬಿಟ್ಟು ಕಣ್ಣನ್ನು ಅಂಟಿಸಿ ಕಾಲಕಳೆವವರಾಗಿದ್ದಾರೆ; ಹೊರಗಿಂದ ಕರೆ ಬರಲಿ ಬಾರದಿರಲಿ, ಅಲ್ಲಾವುದ್ದೀನನು ಮಾಯಾದೀಪವನ್ನು ಕೈಸೆರೆ ಮಾಡಿಕೊಂಡಿರುವಂತೆ ಅವರ ಅಂಗೈಗಳು ಮೊಬೈಲುಧಾರಿಯಾಗಿವೆ. ಕೆಲವರ ಮನೆಯಲ್ಲಿ ಚಿಕ್ಕಮಕ್ಕಳು ಅತಿಥಿಗಳ ಮೇಲುಬಿದ್ದು ಸ್ನೇಹ ಮಾಡಿಕೊಂಡು, ಉಪಾಯವಾಗಿ ಮೊಬೈಲನ್ನೆಗರಿಸಿ ಗೇಮನ್ನಾಡಲು ಆರಂಭಿಸುವುದುಂಟು. ಆನೆ ಕೋತಿಯ ಬೊಂಬೆಗಳ ಜಾಗದಲ್ಲಿ ಗನ್ನುಹಿಡಿದ ಸೈನಿಕರು ಟ್ಯಾಂಕುಗಳು ಬಂದಿದ್ದವು-ಅಮೆರಿಕದ ಕೆಟ್ಟ ಯುದ್ಧಸಂಸ್ಕತಿಯ ಅನುಕರಣೆಯಾಗಿ. ಈಗ ಮೊಬೈಲಾಟಿಕೆ ಬಂದಿವೆ. ಎಳೆಕೂಸಿಗೂ ನಿಜವಾದ ಮತ್ತು ಆಟಿಕೆಯ ಮೊಬಲುಗಳ ವ್ಯತ್ಯಾಸ ಗೊತ್ತಿದೆ. ಇನ್ನೊಬ್ಬ ಮಿತ್ರ ಹೇಳುತ್ತಿದ್ದ: `ನನ್ನ ಮಗ ಎಷ್ಟೇ ಅಳುವಿನಲ್ಲಿರಲಿ, ಮೊಬೈಲು ಕೊಟ್ಟರೆ ಗಪ್‍ಆಗ್ತಾನ.’ ರೈಲಿನಲ್ಲೊ ಬಸ್ಸಿನಲ್ಲೊ ಅಕ್ಕಪಕ್ಕ ಕೂತವರು, ಹತ್ತು ನಿಮಿಷದಲ್ಲಿ ಮುಗುಳುನಗು ವಿನಿಮಯ ಮಾಡಿಕೊಂಡು ಎಲ್ಲಿಗೆ ಹೊರಟಿದ್ದೀರಿ ಯಾಕೆ ಎಂದು ಸುರುಮಾಡಿ, ತಮ್ಮ ಸ್ಟೇಶನ್ ಬರುವ ಹೊತ್ತಿಗೆ ಎಷ್ಟೆಲ್ಲ ಹಂಚಿಕೊಳ್ಳುವ ಪದ್ಧತಿ ಹಿಂದಿನಿಂದಿತ್ತು. ಇದು ಅನಗತ್ಯವಾಗಿ ಗುದ್ದಲಿ ಹಿಡಿದು ವೈಯಕ್ತಿಕ ವಿಷಯದ ಹೊಲವನ್ನು ಅಗೆಯುವ ಕುತೂಹಲಿಗಳ ಕಾಟಕ್ಕೂ ಕಾರಣವಾಗಿತ್ತು. ಆದರೆ ಮೊಬೈಲುಗಳಲ್ಲಿ ಮುಳುಗಿದ ಸಹಪಯಣಿಗರಿಂದ ಈಗ ಮಾತುಕತೆಯೇ ನಿಂತಿದೆ. ದೂರದಲ್ಲಿದ್ದ ಜನರನ್ನು ಪರಸ್ಪರ ಸಂಪರ್ಕಿಸಲು ಹುಟ್ಟಿದ ತಂತ್ರಜ್ಞಾನ, ಪರಸ್ಪರ ಜನರ ಸಂಪರ್ಕವನ್ನೇ ಕಡಿದುಹಾಕಿದೆ.ಕೇಳುವ ಓದುವ ಕ್ರಿಯೆಗಿಂತ ನೋಡುವ ಮಾಧ್ಯಮದ ಶಕ್ತಿ ಪ್ರಚಂಡ. ಅದಕ್ಕೆ ತಂತ್ರಜ್ಞಾನ ಸೇರಿಕೊಂಡು ಮತ್ತಷ್ಟು ವಶೀಕರಣ ಮಾಡಿದೆ. ಹೊಸ ತಲೆಮಾರು ತಂತ್ರಜ್ಞಾನವನ್ನು ಬೇಗ ತನ್ನದಾಗಿಸಿಕೊಳ್ಳುತ್ತದೆ. ಪ್ರಶ್ನೆಯೆಂದರೆ, ಕೇಡು ಸಂಭವಿಸಿದರೆ ಕಾರಣ ತಂತ್ರಜ್ಞಾನವೊ, ತಂತ್ರಜ್ಞಾನ ಬಳಸುತ್ತಿರುವ ಮನೋಧರ್ಮವೊ? ತಂತ್ರಜ್ಞಾನ ಸಾಮಾನ್ಯವಾಗಿ ಮೌಲ್ಯನಿರ್ಲಿಪ್ತ. ಯಾರು ಯಾತಕ್ಕಾಗಿ ಬಳಸುತ್ತಿದ್ದಾರೆ ಎನ್ನುವುದರ ಮೇಲೆ ದೋಷಪೂರ್ಣವೊ ಉಪಯುಕ್ತವೊ ಅನಾಹುತಕಾರಿಯೊ ಆಗುತ್ತದೆ. ಅದೊಂದು ಇಬ್ಬಾಯ ಕತ್ತಿ. ಬುಲ್ಡೋಜರನ್ನು ದಿಬ್ಬಕಡಿದು ರಸ್ತೆ ಮಾಡಲು, ಕಬ್ಬಿಣದ ಅದಿರನ್ನು ಅಕ್ರಮವಾಗಿ ಅಗಿಯಲು, ಹೆಣಗಳ ಸಾಮೂಹಿಕ ಸಂಸ್ಕಾರ ಮಾಡಲು ಅಥವಾ ತಮ್ಮ ಭೂಮಿ ಬಿಟ್ಟುಕೊಡದ ರೈತರ ಮನೆಕೆಡವಿ ಒಕ್ಕಲೆಬ್ಬಿಸಲು ಬಳಸಬಹುದು. ಭಾಷೆ ವಿಷಯದಲ್ಲೂ ಅಷ್ಟೆ. ತನಗೆ ತಾನೇ ಇಂಗ್ಲೀಶು ಕೆಡುಕೂ ಅಲ್ಲ ಒಳಿತೂ ಅಲ್ಲ. ಸಮಾಜ ಬಳಸುವ ವಿಧಾನದಿಂದ ಅದರ ಪರಿಣಾಮ ನಿಶ್ಚಿತವಾಗುತ್ತದೆ. ಹೀಗಾಗಿ ಸಮಸ್ಯೆ ಇರುವುದು ತಂತ್ರಜ್ಞಾನದಲ್ಲಲ್ಲ. ಅದನ್ನೊಂದು ಬದುಕಿನ ಭಾಗ್ಯವೆಂದು ಭಾವಿಸಿ ಸಂಭ್ರಮಿಸುತ್ತಿರುವ, ಅದರಿಂದ ಫರಿಣಾಮ ಏನಾಗುತ್ತಿದೆ ಎಂದು ಪರೀಕ್ಷಿಸಿಕೊಳ್ಳದ ಸಾಮಾಜಿಕ ಮನೋಭಾವದಲ್ಲಿ. ನಮ್ಮ ಮಕ್ಕಳು ಕಂಪ್ಯೂಟರ್‍ನಲ್ಲಿ ಆಟವಾಡುತ್ತವೆ, ಇಂಗ್ಲೀಶ್ ಮೀಡಿಯಂನಲ್ಲಿ ಓದುತ್ತಿವೆ, ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಹಿಡಿದಿವೆ, ವಿದೇಶದಲ್ಲಿವೆ, ನಾವು ನಿವೃತ್ತಿಯಾಗುವಾಗ ಪಡೆದ ಸಂಬಳವನ್ನು ಈಗಲೇ ಗಳಿಸುತ್ತಿವೆ-ಮುಂತಾದ ಗರಿಗಳನ್ನು ತಲೆಗೆ ಸಿಕ್ಕಿಸಿಕೊಂಡು ತಿರುಗಾಡುವ ಮಧ್ಯಮವರ್ಗದ ತಂದೆತಾಯಿಗಳಿದ್ದಾರೆ. ಈ ಸಾಧನೆಗಳ ಫಲವಾಗಿ ಏನೆಲ್ಲ ಕಳೆದುಹೋಗಿದೆ ಎಂಬುದರ ಲೆಕ್ಕವನ್ನೇ ಅವರು ಮಾಡಿದಂತಿಲ್ಲ ಅಥವಾ ಈಗ ಮಾಡಲಾರಂಭಿಸಿದ್ದಾರೆ. ಅವರು ಕಂಡ ಕನಸು ನಿಜವಾಗಿರಬಹುದು. ಅದಕ್ಕಾಗಿ ದೊಡ್ಡಮನೆಗಳಲ್ಲಿ ಒಂಟಿ ಬದುಕನ್ನು ದೂಡುವ ಬೆಲೆಯನ್ನೂ ಅವರು ತೆರಬೇಕಾಗಿದೆ. ಈ ಅನಾಥಪ್ರಜ್ಞೆಗೆ ಅವರು ಮಾತ್ರವಲ್ಲ, ಅವರನ್ನು ಸೆಳೆದಿರುವ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯೂ ಕಾರಣ. ಯಾರೋ ಹೇಳಿದ ಮಾತು ನೆನಪಾಗುತ್ತಿದೆ: `ಎಸೆಲ್ಸಿ ಫೇಲಾದ ದಡ್ಡಮಗ ಇದ್ದಿದ್ದರೆ ನಾವು ಬಹುಶಃ ಕೊನೆಗಾಲದಲ್ಲಿ ಒಂಟಿಯಾಗಿರುತ್ತಿರಲಿಲ್ಲ’. ದಡ್ಡಮಕ್ಕಳ ತಂದೆತಾಯಂದಿರೂ ಬೇರೆ ಕಾರಣದಿಂದ ಒಂಟಿಯಾಗಿರುವ ನಿದರ್ಶನಗಳಿವೆ. ಆದರೆ ಬೇಕೆಂದಾಗ ನೋಡಲು ಆಗದಷ್ಟು ಮಕ್ಕಳನ್ನು ಮತ್ತು ತಾಯ್ತಂದೆಯರನ್ನು ದೂರ ಮಾಡಿರುವ ಒಂಟಿತನದ ಸ್ವರೂಪವೇ ಬೇರೆ. ದೇಶಗಳ ದೂರವೀಗ ದೊಡ್ಡ ಸಮಸ್ಯೆಯಲ್ಲ. ಆದರೆ ಭೌತಿಕವಾದ ಅದು ಮಾನಸಿಕ ದೂರವೂ ಸಾಂಸ್ಕøತಿಕ ವಿಚ್ಛೇದನವೂ ಆಗುತ್ತಿರುವುದು ಸಮಸ್ಯೆಯಾಗಿದೆ.ಹೊಸತಲೆಮಾರು ಅಪ್ಪಅಜ್ಜಂದಿರ ಹಾಗೆ ಬದುಕಬೇಕು ಎಂದು ಯಾರೂ ನಿರೀಕ್ಷಿಸಬಾರದು. ಹಾಗೆ ಬದುಕುವುದು ಯಾವ ತಲೆಮಾರಿಗೂ ಸಾಧ್ಯವಿಲ್ಲ. ಪ್ರತಿ ತಲೆಮಾರು ತನ್ನದೇ ಲೋಕದೃಷ್ಟಿಯನ್ನು ಜೀವನ ನಡೆಸುವ ಕ್ರಮವನ್ನೂ ವೈಯಕ್ತಿಕ ಅಭಿರುಚಿಯಿಂದಲೊ ಪರಿಸರದ ಒತ್ತಡದಿಂದಲೊ ಪಡೆದುಕೊಳ್ಳುತ್ತದೆ. ಅದು ಅದರ ಹಕ್ಕು ಕೂಡ. ಹಳೆಯ ಮತ್ತು ಹೊಸ ತಲೆಮಾರುಗಳ ನಡುವೆ ಮೌಲ್ಯಗಳ ತಿಕ್ಕಾಟವನ್ನೇ ಕನ್ನಡದ ಕತೆ ಕಾದಂಬರಿಗಳು ಚಿತ್ರಿಸುತ್ತ ಬಂದಿವೆ- `ಇಂದಿರಾಬಾಯಿ’ಯಿಂದ ಹಿಡಿದು `ತೇರು’ `ಗಾಂಧಿಬಂದ’ `ಹಳ್ಳಬಂತು ಹಳ್ಳ’ತನಕ. ಸಮಸ್ಯೆಯೆಂದರೆ, ಹೊಸ ತಲೆಮಾರು ತನ್ನ ಬದುಕನ್ನು ಸ್ವಂತ ವಿವೇಚನೆ ಮತ್ತು ನಿರ್ಧಾರದಿಂದ ರೂಪಿಸಿಕೊಳ್ಳುತ್ತಿದೆಯೇ? ಬೇರೆ ಯಾವ್ಯಾವೊ ಬಲಾಢ್ಯ ಶಕ್ತಿಗಳು ಅದನ್ನು ರೂಪಿಸುತ್ತಿಲ್ಲವೇ? ಮಾರುಕಟ್ಟೆ ನಮ್ಮ ಶಿಕ್ಷಣವನ್ನು, ಅದರಿಬೇಕಾದ ಮಾಧ್ಯಮವನ್ನು, ನಾವಾಡುವ ಭಾಷೆಯನ್ನು, ಮಾಡುವ ಉದ್ಯೋಗವನ್ನು ಅಷ್ಟೇಕೆ ನಮ್ಮ ಆಲೋಚನೆ ವರ್ತನೆಗಳನ್ನು ಸಹ ಪ್ರಭಾವಿಸುತ್ತಿದೆ. ಇಲ್ಲಿ ಸ್ಪರ್ಧೆ, ಗೆಲುವು, ಯಶಸ್ಸು, ವ್ಯಕ್ತಿವಾದಗಳು ಹೊಸ ಮೌಲ್ಯಗಳಾಗುತ್ತಿವೆ; ಬೇರಿಲ್ಲದ ಹೊಸತಲೆಮಾರು ಮತ್ತು ಅನಾಥಪ್ರಜ್ಞೆಯ ಹಳೆಯ ತಲೆಮಾರು ನಿರ್ಮಾಣವಾಗುತ್ತಿವೆಯೇ? ವಿಚಾರ ಮಾಡಬೇಕು. ವಿಜ್ಞಾನ ತಂತ್ರಜ್ಞಾನ ಪ್ರಧಾನವಾದ ಶಿಕ್ಷಣ ಪಡೆದು ದೇಶಾಂತರ ಚಲನೆ ಪಡೆದಿರುವ ಮಕ್ಕಳ ಸೀಮೋಲ್ಲಂಘನೆಯ ಬಗ್ಗೆ, ಸರೀಕರ ಎದುರು ಬಡಾಯಿ ಕೊಚ್ಚಿಕೊಳ್ಳುವ ತಂದೆತಾಯಿಗಳು, ಏಕಾಂತದಲ್ಲಿ ಚಡಪಡಿಸುತ್ತಿರುತ್ತಾರೆ. ಮಕ್ಕಳಿಗೆ ಲ್ಯಾಪ್‍ಟಾಪು ಕೊಡಿಸುವಾಗ, ಶಾಲೆಗೆ ಹೋಗಲು ಅಂಗಿಯಿಲ್ಲದ ಚಪ್ಪಲಿಯಿಲ್ಲದ ಮಕ್ಕಳು ಬೀದಿಯ ತುದಿಗಿವೆ ಎಂಬುದನ್ನು ಅವರು ಯೋಚಿಸಲಿಲ್ಲ; ನೀಲಿ ಯೂನಿಫಾರ್ಮ್ ಹಾಕಿಕೊಂಡು ಬರಿಗಾಲಲ್ಲಿ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳು ಹಾಗಿರಲು ವ್ಯವಸ್ಥೆ ಮಾತ್ರವಲ್ಲ, ಮಧ್ಯಮವರ್ಗದವರ ಸ್ವಕೇಂದ್ರಿತ ಆಲೋಚನ ಕ್ರಮವೂ ಕಾರಣವೆಂದು ಅವರಿಗೆ ಹೊಳೆಯಲಿಲ್ಲ; ಸುತ್ತಲಿನ ಪರಿಸರದ ಬಗ್ಗೆ ಮಕ್ಕಳನ್ನು ಸೆನ್ಸಿಟೈಜ್ ಮಾಡಲು ಯತ್ನಿಸಲಿಲ್ಲ. ಮಕ್ಕಳನ್ನು ಹೆರುವ ಜೈವಿಕ ಕ್ರಿಯೆ ಸುಲಭ. ಅವನ್ನು ಪರಿಸರದ ಬಗ್ಗೆ ಪ್ರೀತಿ ಕಾಳಜಿ ಕಲಿಸಿ ಸೂಕ್ಷ್ಮಸಂವೇದಿ ಮನುಷ್ಯರನ್ನಾಗಿ ಮಾಡುವುದು ಕಷ್ಟದ ಕೆಲಸ. ಸಮಸ್ಯೆ ಆಧುನಿಕತೆ ವಿಜ್ಞಾನ ತಂತ್ರಜ್ಞಾನಗಳಲ್ಲಿಲ್ಲ. ಅದರಲ್ಲಿ ಅಳವಟ್ಟಿರುವ ವ್ಯಕ್ತಿವಾದಿ ಲಾಭಕೋರ ಮೌಲ್ಯಪ್ರಜ್ಞೆಗಳಲ್ಲಿದೆ. ಬದಲಾಗಿರುವ ಯುಗಧರ್ಮವನ್ನು ಅರ್ಥಮಾಡಿಕೊಳ್ಳುವಲ್ಲಿ ಅಥವಾ ಅದಕ್ಕೆ ಹೊಂದಿಕೊಳ್ಳುವಲ್ಲಿ ಸೋತಿರುವುದರಿಂದ ನನ್ನೊಳಗೆ ಈ ಭಾವುಕ ಗೊಣಗಾಟಗಳು ಹುಟ್ಟುತ್ತಿವೆಯೆ? ನನ್ನ ಗೆಳೆಯ ಮಗನನ್ನು ಇನ್ಸೆನ್ಸಿಟಿವ್ ಮಾಡುತ್ತ ಕೊನೆಗಾಲದಲ್ಲಿ ಅನಾಥನಾಗುವ ಹಾದಿಯಲ್ಲಿ ಹೊರಟಿರಬಹುದೇ? ನಿರ್ಣಯಕ್ಕೆ ಬರದೆ ಮನಸ್ಸು ಹೊಯ್ದಾಡಿತು.ಬೀಳ್ಕೊಡುವಾಗ ಮಂಕು ಕವಿದಂತಿದ್ದ ಗೆಳೆಯನ ಮುಖವನ್ನು ಮರುಕದಿಂದ ನಿಟ್ಟಿಸಿದೆ. ಅದು ನನ್ನ ಮುಖದಂತೆಯೇ ಕಂಡಿತು. ಅವನ ಕೈಯನ್ನು ಹಿಸುಕಿ ನನ್ನ ಅನುಭೂತಿಯನ್ನು ಬಿಸುಪಿನಲ್ಲಿ ದಾಟಿಸಲು ಯತ್ನಿಸಿದೆ. ನಾನೊಬ್ಬನೇ ಅಲ್ಲ ಪಯಣಿಗ ಎಂಬಂತೆ ಅವನ ತುಟಿಯ ಬಿರುಕಿನಲ್ಲಿ ನಗೆ ತುಳುಕಿತು. ************************ ಲೇಖಕರ ಬಗ್ಗೆ: ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

ಗೆಳೆಯನ ಮಕ್ಕಳು Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಬಾನ್ಸುರಿ ಮತ್ತು ರಾಧೆ

ಕಬ್ಬಿಗರ ಅಬ್ಬಿ – ಸಂಚಿಕೆ -6 ಭೂಪೇಶ್ವರೀ ರಾಗದ ಆಲಾಪದ ಮಂದ್ರಸ್ಥಾಯಿಯ ಸ್ವರಗಳು, ಸಾಯಂಕಾಲದ ಸಾಂದ್ರತೆಯನ್ನು ಜೇನಿನಂತಾಗಿಸಿ, ಧಾರೆಯೆಷ್ಟು ಎಳೆಯಾದರೂ ಕಡಿಯದಂತೆ, ವಾತಾವರಣವನ್ನು ಆರ್ದ್ರವಾಗಿಸಿತ್ತು. ಗಾಯಕನ ( ಒ ಎಸ್. ಅರುಣ್‌) ನಾಭಿಯಿಂದ ಹೊರಟ ಸ್ವರಕಂಪನದ ತರಂಗ, ಎದೆಯನ್ನು ಹೊಕ್ಕು, ಭಾವ ಹೀರಿ, ಕಂಠದಿಂದ ಹೊರಹರಿಯುವಾಗ,  ಆಗಷ್ಟೇ ಸೋನೆ ಮಳೆ ನಿಂತು, ವಾತಾವರಣದ ತಂಪೊಳಗೂ ಆರ್ದ್ರ ಭಾವ. ಬಾನ್ಸುರಿಯ ದಪ್ಪ ಬಿದಿರಿನ ರಂಧ್ರಗಳಿಂದ ಸ್ವಾತಂತ್ರ್ಯ ಪಡೆದ ನಾದಸೆಲೆ ಅಂತರಂಗದ ಅಂತರ್ನಾದವೇ ಆಗಿತ್ತು. ತಬಲಾದ ಮೇಲೆ ಹೂಪಕಳೆಗಳು ತಡವಿದಂತೆ ವಾದಕನ ಬೆರಳುಗಳು, ಎದೆಗೆ ಎದೆ ಸೇರಿ ಅನುರಣಿಸಿದ ಸ್ಪಂದನವಾಗಿತ್ತು.  ಈ ರಾಗವೂ ಹಾಗೇ, ಇದರಲ್ಲಿ ಕೋಮಲ ಧೈವತದ ಸ್ಪರ್ಶ, ದೈವಿಕ ವಿರಹಸ್ವನವನ್ನು ಮನಸ್ಸಿನ ಕೋಣೆಯೊಳಗೆ ತುಂಬಿ, ನಿಧಾನವಾಗಿ ಮುಚ್ಚಿ ಆಸ್ವಾದಿಸುವಾಗ, ಕಣ್ರೆಪ್ಪೆಗಳು ತೆರೆಯಲಾಗದಷ್ಟು, ಹಿತಭಾರವೆನಿಸಿ, ಮಾನಸ ಲೋಕದೊಳಗಿದ್ದೆ. ಜಯದೇವ ಕವಿ, ‘ಗೀತಗೋವಿಂದ’ ಎದೆಗಿಳಿಸುವಾಗ, ಬಹುದಿನದಿಂದ ಮಿಲನ ಕಾಣದೆ ನೊಂದ,ರಾಧೆಯನ್ನು, ಕೃಷ್ಣ, ಹೃದಯತುಂಬಿ ಆರ್ತ ದನಿಯಲ್ಲಿ ಸಲ್ಲಪಿಸಿ ಆಕೆಯ ಕೋಮಲ ಪ್ರೀತಿಯ ನೋವನ್ನು ಹರಿಸುವ ಸಾಲುಗಳು, “ಪ್ರಿಯೇ… ಚಾರುಶೀಲೆ.. ಮುಂಚ ಮಯಿ ಮಾನಮ್ ಅನಿದಾನಮ್ ಸಪದಿ ಮದನಾಲಲೋ ದಹತಿ ಮಮ ಮಾನಸಮ್ ದೇಹಿ ಮುಖಕಮಲಮಧುಪಾನಮ್” (ಚಾರುಶೀಲೇ..ಮನಸ್ಸನ್ನು ದಹಿಸುತ್ತಿರುವನು ಮದನ!, ಪ್ರಿಯೇ, ದೇಹಿ! ಮುಖಕಮಲ ಮಧುಪಾನಮ್!) ಈ ಸಾಲುಗಳು ಸಂಗೀತಸ್ವರಗಳಿಗೆ ಹೊತ್ತೊಯ್ಯಲಾಗದಷ್ಟು ಭಾರವಾಗಿ, ಮನತುಂಬುವಾಗ, ಭಾವ ಜೊಂಪು ಎದೆಗಿಳಿದು ವಿರಹದ  ನೋವು ಅದೆಷ್ಟು ಹಿತಕರ ಅನುಭೂತಿ, ಅಲ್ಲವೇ!. ಜಯದೇವ ಈ ಅನುಭವ ಸಾಂದ್ರತೆಯಲ್ಲಿ ಬರೆಯುತ್ತಾನೆ! “ಸ್ಮರಗರಲ ಖಂಡನಮ್ ಮಮ ಶಿರಸಿ ಮಂಡನಮ್ ದೇಹಿ ಪದ ಪಲ್ಲವಮುದಾರಮ್’ ಜ್ವಲತಿ ಮಯಿ ದಾರುಣೋ ಮದನ ಕದನಾನಲೋ ಹರತು ತಪುದಾಹಿತ ವಿಕಾರಮ್” “ರಾಧೇ! ಚಾರುಶೀಲೇ, ನಿನ್ನ ಪಾದಗಳನ್ನು, ನನ್ನ ಶಿರಸ್ಸಿನ ಮೇಲಿರಿಸಿ,  ನನ್ನನ್ನು ಜ್ವಲಿಸುತ್ತಿರುವ ಮದನನನ್ನು ತಂಪಾಗಿಸು!”  ಎಂದು ಅಂಗಲಾಚುವ ಕೃಷ್ಣ!, ಜಯದೇವನಿಗೆ, ‘ಈ ಸಾಲುಗಳನ್ನು, ತಾನು ಹೇಗೆ ಬರೆದೆ?. ಕೃಷ್ಣ, ದೇವರಲ್ಲವೇ, ಆತನ ತಲೆಯೆಷ್ಟು ಪವಿತ್ರ, ಅದರ ಮೇಲೆ ರಾಧೆಯ ಪಾದ.. ಛೇ,ಇಂತಹ ಆಲೋಚನೆ ನನಗೆ ಹೇಗಾದರೂ ಬಂತು? ‘ ಎಂದು ದುಃಖವಾಗಿ, ಬರೆದ ಸಾಲುಗಳನ್ನು ಅಳಿಸಿ, ಹಾಳೆಗಳನ್ನು, ಪತ್ನಿ, ಪದ್ಮಾವತಿಯ ಕೈಗಿತ್ತು, ಮೀಯಲು ಹೋದನಂತೆ. ನದಿಯ ತಂಪು ನೀರಿಗನ ಹರಿವಿಗೆ ಮೈಯೊಡ್ಡಿ, ಒಳಹೊರಗೆ ಶುಚಿಯಾಗಿ ಪುನಃ ಬರೆಯಲು ಕುಳಿತರೆ, ಅಳಿಸಿ ಹೋದ ಅಕ್ಷರಗಳು ಹಾಳೆಗಳಲ್ಲಿ ಪುನಃ ಮೊದಲಿನ ಹಾಗೆಯೇ ಬರೆಯಲ್ಪಟ್ಟಿವೆ. “ಪದ್ಮಾವತೀ!, ಪ್ರಿಯೇ!, ಏನಿದಚ್ಚರಿ..ಈಗ ಅಳಿಸಿ ಹೋಗಿ, ಮಿಂದು ಬರುವಾಗ, ಪುನಃ ಅದೇ ಸಾಲುಗಳು!” ಪದ್ಮಾವತಿ ಉಲಿಯುತ್ತಾಳೆ,  “ಸ್ವಾಮೀ, ನೀವೇ ಮಧ್ಯದಲ್ಲಿ ಬಂದು, ಆ ಸಾಲುಗಳನ್ನು ಬರೆದು, ಹೀಗೇ ಇರಲಿ! ಎಂದು ಮೀಯಲು ಹೋದಿರಲ್ಲಾ!” ಕೃಷ್ಣನೇ ಬಂದು ಅಳಿಸಿದ ಅದೇ ಸಾಲುಗಳನ್ನು, ಬದಲಿಸದೆ ಬರೆದದ್ದು ಮನಸ್ಸಿಗಿಳಿದಾಗ, ಜಯದೇವ, ಭಾವೋತ್ಕರ್ಷ ಅನುಭವಿಸಿ, ಕೃಷ್ಣದರ್ಶನ ಪಡೆದ ಹೆಂಡತಿಯ ಕಾಲು ಮುಟ್ಟಿ ನಮಸ್ಕರಿಸಿ,  ಆ ಕಾವ್ಯಭಾಗದಲ್ಲಿ, ಪದ್ಮಾವತೀರಮಣ ಎಂಬ ಅಂಕಿತವನ್ನೂ ಹಾಕುತ್ತಾನೆ. ಕೃಷ್ಣ ಬದುಕನ್ನು, ಇತರರನ್ನು ತಲಪಿದ ರೀತಿಯೇ ಹಾಗೆ. ರಾಧೆಯ ಪಾದಸ್ಪರ್ಶ ಕೃಷ್ಣನ ತಲೆಯ ಮೇಲೆ, ಆತನನ್ನು ಸಣ್ಣದಾಗಿಸುವುದಿಲ್ಲ. ಆತನ ಆತ್ಮಾನುಯಾಯಿ, ಜಯದೇವ, ತನ್ನ ಹೆಂಡತಿಯ ಪಾದಮುಟ್ಟಿ ನಮಸ್ಕರಿಸಿದ್ದೂ ಆಶ್ಚರ್ಯವೇ?. ಈ ಅನುಭೂತಿ, ಪ್ರೀತಿ ದೇಹದ ಗಡಿ ದಾಟಿ,ಆತ್ಮಸಂಬಂಧಗಳಿಗೆ ಸ್ವರಸಂಯೋಜನೆ ಮಾಡೋವಾಗ, ಅದರಲ್ಲಿ ತುರೀಯಾವಸ್ತೆಯನ್ನು ಅನುಭವಿಸುವಾಗ, ಪಾದ, ಶಿರಸ್ಸು, ಇತ್ಯಾದಿಗಳು,ಕಾವ್ಯದ ಅಕ್ಷರಗಳಾಗಿ ಮಾತ್ರ ಉಳಿಯುತ್ತವೆ. ಭಕ್ತಿಯ ಮೂಲದಲ್ಲಿ, ಸಮರ್ಪಣೆಯಿದೆ. ಅದು ಒಂದು  ಚಿಂತನಾ ಮನೋಸ್ಥಿತಿಯಿಂದಲೂ ಉನ್ನತ ಮಟ್ಟದ್ದು. ರಾಧೆಯ ಪ್ರೀತಿ, ಪಾತ್ರವಿರದ ತೊರೆ! ಅಂತ ಬರೆಯುವ ಹೆಚ್. ಎಸ್ ವೆಂಕಟೇಶ ಮೂರ್ತಿ ಅವರ ಸಾಲುಗಳನ್ನು ನೋಡಿ. ” ಮಹಾ ಪ್ರವಾಹ ಮಹಾ ಪ್ರವಾಹ ತಡೆಯುವರಿಲ್ಲ, ಪಾತ್ರವಿರದ ತೊರೆ ಪ್ರೀತಿ ತೊರೆದರು ತನ್ನ ತೊರೆಯದು ಪ್ರಿಯನ, ರಾಧೆಯ ಪ್ರೀತಿಯ ರೀತಿ “ ರಾಧೆಯ ಪ್ರೀತಿ, ಅದು,ಉಕ್ಕಿ ಹರಿಯುವ ಪ್ರವಾಹ. ಅದರ ಹರಿವಿಗೆ ಸಾಧಾರಣ ನದಿಗಳಿಗೆ ಇರುವಂತೆ, ದಡಗಳಿಲ್ಲ, ನದೀಪಾತ್ರವಿಲ್ಲ. ಉಕ್ಕಿ, ಬೇಕಾದಂತೆ ಹರಿಯುವ, ತಡೆಕಟ್ಟು ಇಲ್ಲದ, ಶಕ್ತಿ ಪ್ರೀತಿಗೆ. ಎಲ್ಲವನ್ನೂ ತನ್ನೊಳಗೆ ಮುಳುಗಿಸಿ, ಆವರಿಸಿ, ಹರಿಯುವ ಮಹಾ ಪ್ರವಾಹ ಅದು. ಈ ಕವಿತೆಯ ಮೊದಲ ಸಾಲುಗಳಲ್ಲಿ, ಹೆಚ್.ಎಸ್.ವಿ ಅವರು, ರಾಧೆ ಮತ್ತು ಕೃಷ್ಣನ ಪ್ರೀತಿಯ ಬಗ್ಗೆ ಹೀಗೆ ಬರೆಯುತ್ತಾರೆ. ” ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು” ಲೋಕದ ಕಣ್ಣು, ಲೌಕಿಕ ಕಣ್ಣು, ಭೌತಿಕ ವ್ಯಾಪಾರೀ ಜಗತ್ತಿನ ಕಣ್ಣಿಗೆ, ರಾಧೆ, ಬರೇ ಒಬ್ಬ ಹೆಣ್ಣು. ಆದರೆ, ಕವಿಗೆ, ಈ ರಾಧೆ, ಪ್ರೀತಿಯ ಕಣ್ಣು. ಕೃಷ್ಣನ ತೋರುವ, ಪ್ರೀತಿಯು ನೀಡಿದ ಕಣ್ಣು. ಪ್ರೀತಿಯಲ್ಲಿ ಸ್ವಾರ್ಥ ಇರಲ್ಲ. ಪ್ರೀತಿಯಲ್ಲಿ ಕೊಡು ಕೊಳ್ಳುವಿಕೆಯ ಅರ್ಥಶಾಸ್ತ್ರ ಇರಲ್ಲ. ಪ್ರೀತಿಯಲ್ಲಿ ಪ್ರತಿಫಲದ ನಿರೀಕ್ಷೆ ಇರಲ್ಲ. ಶುದ್ಧಾಂತಃಕರಣದ ಅನಿರ್ವಚನೀಯ ಅನುಭೂತಿ ಅದು. ಸಂಪೂರ್ಣ ಸಮರ್ಪಣಾ ಭಾವದ ಅನುಭೂತಿ. ಅಂತಹ ಪ್ರೀತಿಯೇ ಕೃಷ್ಣದರ್ಶನ. ಆ ದರ್ಶನ,ಆ ಕಣ್ಣು, ಆ ಪ್ರೀತಿ ಯೇ , ರಾಧೆ ಅಂತ ಕವಿ ಹೇಳುವುದು, ಎಷ್ಟು ಗಹನವಾದದ್ದು ಅಲ್ಲವೇ. ” ನಾನು ನನ್ನದು ನನ್ನವರೆನ್ನುವ ಹಲವು ತೊಡಕುಗಳ ಮೀರಿ ಧಾವಿಸಿ ಸೇರಲು ಬೃಂದಾವನವ ರಾಧೆ ತೋರುವಳು ದಾರಿ “ ನಾನು, ನನ್ನವರು, ಎನ್ನುವ ತೊಡಕುಗಳನ್ನು ತೊರೆದು, ಪ್ರೀತಿಸುವ ದಾರಿ ರಾಧೆಯದ್ದು. ಇಲ್ಲಿ, ನಾನು, ನನ್ನವರನ್ನು ತೊರೆಯುವುದು,ಎಂದರೆ ಸರ್ವಸಂಗ ಪರಿತ್ಯಾಗಿಯಾಗಿ ಸನ್ಯಾಸಿಯಾಗುವುದಲ್ಲ. ನಾನು, ಎಂಬ, ನನ್ನವರು ಎಂಬ ಐಡೆಂಟಿಟಿ, ತೊರೆದಾಗ, ಎಲ್ಲವನ್ನೂ, ತಾನಾಗಿ ಕಾಣುವ ದೃಷ್ಟಿ ಪ್ರಾಪ್ತವಾಗುತ್ತೆ, ಎಲ್ಲವನ್ನೂ ಅನ್ ಕಂಡಿಶನಲ್ ಆಗಿ ಪ್ರೀತಿಸುವ ಸಾಧ್ಯತೆ ತೆರೆಯುತ್ತೆ. ಬದುಕನ್ನು ಅರ್ಥಪೂರ್ಣವಾಗಿಸಲು ಇದು ರಾಧೆ ತೋರುವ ದಾರಿ. ಹೆಚ್ ಎಸ್ ವಿ ಅವರು ಕೃಷ್ಣ,ರಾಧೆಯರ ಬಗ್ಗೆ ಇನ್ನೊಂದು ಇಂಪು ಇಂಚರದ ಹಾಡು ಬರೆದಿದ್ದಾರೆ. “ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವ ತನ್ನನಿತ್ತ ಕೊಳಲಿಗೆ ರಾಗ ತೆತ್ತ ಮಾಧವ “ ರಾಧೆ, ಪ್ರೀತಿಯನ್ನು ಸಂಪೂರ್ಣ ಸಮರ್ಪಣಾ ಭಾವದಿಂದ ಕೊಟ್ಟಾಗ, ಆತ,ಆಕೆಗಿತ್ತ ಭಾಷೆಯಾಗುತ್ತಾನೆ. ರಾಧೆ ಎಂಬ ಕೊಳಲು, ತನ್ನನ್ನು ತಾನೇ ಅರ್ಪಿಸಿ ಕೊಂಡಾಗ, ಕೃಷ್ಣ, ಆ ಕೊಳಲಿನ ದನಿಯಾಗುತ್ತಾನೆ, ರಾಗವಾಗುತ್ತಾನೆ. ಕೊಳಲು ಯಾವುದು, ಸ್ವರ ಯಾವುದು ಎಂಬ ಬೇಧವಿಲ್ಲದ ಸಂಯೋಗ ಅದು. ಇಲ್ಲಿ, ಇನ್ನೊಂದು ಸುಪ್ತ ಅರ್ಥವಿದೆ. ಕೊಳಲು,ಇಲ್ಲದೆ ರಾಗ ಹೊರಡುವುದೇ?. ಕೃಷ್ಣನೂ ಎಷ್ಟು ಸಮರ್ಪಿತ ಎಂದರೆ, ರಾಧೆಯಿಲ್ಲದೆ, ಪ್ರೀತಿಯಿಲ್ಲದೆ ಕೃಷ್ಣನೂ ಇಲ್ಲ. ಜಯದೇವ ಕವಿಯ ಅಷ್ಟಪದಿಯ ಕೃಷ್ಣ, ರಾಧೆಯ ಪಾದವನ್ನು ತನ್ನ ಶಿರಸ್ಸಿನ ಮೇಲಿರಿಸಿ, ರಾಧೆಯ ಪ್ರೀತಿಗೆ ಸಮರ್ಪಣೆಯಾಗುವ ಕ್ರಿಯೆಯೂ, ಹೆಚ್.ಎಸ್.ವಿ. ಅವರ ಕವಿತೆಯಲ್ಲಿ, ರಾಧೆಯೆಂಬ ಕೊಳಲಿಗೆ, ರಾಗವಾಗಿ ಯುನಿಫಿಕೇಷನ್ ಅನುಭವಿಸುವ  ಕೃಷ್ಣನ ಕ್ರಿಯೆಗೂ ವ್ಯತ್ಯಾಸವಿಲ್ಲ. ****************************** ಲೇಖಕರ ಬಗ್ಗೆ: ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ.

ಬಾನ್ಸುರಿ ಮತ್ತು ರಾಧೆ Read Post »

You cannot copy content of this page

Scroll to Top