ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಗಂಗಾವತಿಯ `ಜಜ್ಬ್’ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಉರ್ದು ಪಂಡಿತರ ಪಡೆಯೊಂದು ಈಚಿನವರೆಗೂ ಇತ್ತು. ನಿಜಾಂ ಸಂಸ್ಥಾನದಲ್ಲಿ ಉರ್ದು ಆಡಳಿತ ಹಾಗೂ ಶಿಕ್ಷಣದ ಭಾಷೆಯಾಗಿದ್ದು, ಸಹಜವಾಗಿಯೇ ಈ ಭಾಗದ ಎಲ್ಲ ಜಾತಿಮತಗಳ ಜನ ಉರ್ದುವಿನಲ್ಲಿ ಶಿಕ್ಷಣ ಪಡೆದರು. ಅವರಲ್ಲಿ ಕೆಲವರು ಆಡಳಿತಾತ್ಮಕ ಉರ್ದುವಿನಲ್ಲಿ ವಿಶೇಷ ಪರಿಣತಿ ಪಡೆದುಕೊಂಡರು. 1948ರಲ್ಲಿ ಸಂಸ್ಥಾನವು ಭಾರತ ಒಕ್ಕೂಟದಲ್ಲಿ ವಿಲೀನಗೊಂಡಿತು. ಹಳೇ ಗುಲಬರ್ಗ ಬೀದರ್ ರಾಯಚೂರು ಜಿಲ್ಲೆಗಳು ಏಕೀಕೃತ ಕರ್ನಾಟಕದ ನಕ್ಷೆಯೊಳಗೆ ಬಂದವು. ಈ ರಾಜಕೀಯ ಪಲ್ಲಟವು ಉರ್ದು ಪಂಡಿತರನ್ನು ಇದ್ದಕ್ಕಿದ್ದಂತೆ ಅಪ್ರಸ್ತುತಗೊಳಿಸಿತು-ಪವರ್‍ಲೂಮ್ ಬಂದೊಡನೆ ಕೈಮಗ್ಗದ ಕೈಮುರಿದಂತೆ. ಇದರಿಂದ ಉರ್ದು ಲೇಖಕರು ಅಪ್ರಸ್ತುತಗೊಳ್ಳಲಿಲ್ಲ. ಬದಲಿಗೆ ಎರಡು ಭಾಷೆಗಳ ನಡುವಿನ ಸಾಹಿತ್ಯಕ ಮತ್ತು ಸಾಂಸ್ಕøತಿಕ ಆದಾನ ಪ್ರದಾನ ಮುಂದುವರೆಸಿದರು. ಶಾಂತರಸ, ದೇವೇಂದ್ರಕುಮಾರ ಹಕಾರಿ, ಸಿದ್ಧಯ್ಯ ಪುರಾಣಿಕ, ಚನ್ನಬಸವಪ್ಪ ಬೆಟದೂರು, ಮುದ್ದಣ ಮಂಜರ್, ಡಿ.ಕೆ.ಭೀಮಸೇನರಾವ್, ಜಂಬಣ್ಣ ಅಮರಚಿಂತ, ಚಂದ್ರಕಾಂತ ಕುಸನೂರು, ಪಂಚಾಕ್ಷರಿ ಹಿರೇಮಠ-ಇದನ್ನು ಮಾಡಿದರು. ಇವರಲ್ಲಿ ಭೀಮಸೇನರನ್ನು ಬಿಟ್ಟು ಉಳಿದವರ ಜತೆ ಒಡನಾಟ ಮಾಡುವ ಅವಕಾಶ ನನಗೆ ಸಿಕ್ಕಿತು. ಉರ್ದುನಲ್ಲಿ ಕವಿತೆ ಬರೆಯುತ್ತಿದ್ದ, ಇಕ್ಬಾಲರ ಕಾವ್ಯವನ್ನು ಅನುವಾದಿಸಿದ್ದ ಮುದ್ದಣ್ಣ `ಮಂಜರ್’ ಅವರ ಜತೆ, ಉರ್ದು-ಕನ್ನಡ ಅನುವಾದ ಕಮ್ಮಟದಲ್ಲಿ (1985) ಒಡನಾಡಿದ ನೆನಪು ಬರುತ್ತಿದೆ. ಶಾಂತರಸ, ಹಕಾರಿ, ಬೆಟದೂರರು ಕೂಡಿದಾಗ ಉರ್ದುವಿನಲ್ಲೇ ಹರಟುತ್ತಿದ್ದರು. ಶಾಂತರಸರು `ಉಮ್ರಾವ್‍ಜಾನ್’ ಕಾದಂಬರಿ ಅನುವಾದಿಸಿದರು; ಗಜಲುಗಳ ಬಗ್ಗೆ ವಿದ್ವತ್‍ಪೂರ್ಣ ಲೇಖನ ಬರೆದರು. ಕರಾವಳಿ ಭಾಗದಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಮೂಲಕ ಹೊಮ್ಮಿದ ಕನ್ನಡ ಪಂಡಿತ ಪರಂಪರೆಯಿದ್ದಂತೆ, ಹೈದರಾಬಾದ್ ಕರ್ನಾಟಕದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಂದ ಉರ್ದು ಪಂಡಿತ ಪರಂಪರೆ, ಕರ್ನಾಟಕ ಸಂಸ್ಕøತಿಗೆ ಕಸುವನ್ನು ಕೂಡಿಸಿತು. ಈ ಪರಂಪರೆಯ ಲೇಖಕರಲ್ಲಿ ಗಂಗಾವತಿಯ ರಾಘವೇಂದ್ರರಾವ್ ಜಜ್ಬ್ ಸಹ ಒಬ್ಬರು. ಇವರು ತಮ್ಮ ಪರಿಚಯವನ್ನು ಬರೆದುಕೊಂಡಿರುವ ರೀತಿ ಸ್ವಾರಸ್ಯಕರವಾಗಿದೆ: “ರಾಘವೇಂದ್ರ ನಾಮ. `ಜಜ್ಬ್’ ಅಂಕಿತ. ರಾಯಚೂರು ಜಿಲ್ಲೆಗೆ ಸೇರಿದ ಗಂಗಾವತಿ ಜನ್ಮಸ್ಥಳ. ದತ್ತಪುತ್ರನಾಗಿ ಆಲಂಪುರದಲ್ಲಿ ಬೆಳೆದನು. 20ರ ಏಪ್ರಿಲ್ 1898 ಇವನ ಜನ್ಮದಿನ. ಮಾತೃಭಾಷೆ ಕನ್ನಡ. ಪ್ರಾಂತೀಯ ಭಾಷೆ ತೆಲುಗು. ರಾಜಭಾಷೆ ಉರ್ದು. ಅರಬ್ಬಿ ಫಾರಸಿ ಭಾಷೆಯಲ್ಲಿ ಕಿಂಚಿತ್ ಶಿಕ್ಷಣವಾಗಿದೆ. ಅಲ್ಪಸ್ವಲ್ಪ ಸಂಸ್ಕøತ ಪರಿಚಯವೂ ಇದೆ. ವಕೀಲಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ 18-20 ವರ್ಷ ಪ್ರಾಕ್ಟೀಸ್ ಮಾಡಿ ಬಿಟ್ಟುಕೊಟ್ಟನು. ವಿದ್ಯಾರ್ಥಿಯಾಗಿರುವಾಗಲೇ ಕವಿತ್ವದ ಕಡೆಗೆ ಲಕ್ಷ್ಯವಿತ್ತು. ಎಲ್ಲ ವಿಧದ ಕವನಗಳನ್ನೂ ಬರೆದಿದ್ದಾನೆ. ರುಬಾಯಿ ರಚನೆಯಲ್ಲಿ ಅಭಿರುಚಿ ವಿಶೇಷವಿದೆ. ಅನೇಕ ಸಂಸ್ಕøತ ಕನ್ನಡ ತೆಲುಗು ಗ್ರಂಥಗಳ ಪದ್ಯಾನುವಾದ ಮಾಡಿದ್ದಾನೆ. ಎರಡು ಭಾಗಗಳಲ್ಲಿ ರುಬಾಯಿಯಾತ್ ಪ್ರಕಟವಾಗಿದೆ. ಅಖಿಲ ಆಂಧ್ರ ಮಜಲಿಸ್ಸಿನವರು `ಖಯ್ಯಾಮ ಎ ಆಂಧ್ರ’ ಎಂಬ ಬಿರುದನ್ನು ದಯಪಾಲಿಸಿದ್ದಾರೆ. ಕನ್ನಡ-ಕನ್ನಡ-ಉರ್ದುಕೋಶವನ್ನು ಬರೆದಿದ್ದಾನೆ.’’ ಸಂಕೋಚ ಮತ್ತು ನಮ್ರ ಪ್ರವೃತ್ತಿಯ ವ್ಯಕ್ತಿಗಳು ಮಾತ್ರ ಹೀಗೆ ಪರಿಚಯಿಸಿಕೊಳ್ಳಬಲ್ಲರು. ಅತಿರಂಜಿತ ಬಯೊಡೇಟವನ್ನು ಬ್ಯಾಗಿನಲ್ಲಿಟ್ಟುಕೊಂಡು ಅಧಿಕಾರಸ್ಥರ ಹಿಂದೆಮುಂದೆ ಸುತ್ತುವವರು ಈ ನೀರಸ ಶೈಲಿಗೆ ನಗಬಹುದು. ಜಜ್ಬ್ ಹುಟ್ಟಿದ ವರ್ಷವೇನೊ ಸಿಗುತ್ತಿದೆ. ತೀರಿಕೊಂಡ ತೇದಿ ತಿಳಿಯುತ್ತಿಲ್ಲ. ಅವರ ಮನೆತನದವರು ಎಲ್ಲಿದ್ದಾರೊ ತಿಳಿಯದು. ಅವರ ಚಿತ್ರಪಟವಾದರೂ ಸಿಕ್ಕರೆ ನೋಡಲು ಸಾಧ್ಯವಾಗಬಹುದೆಂದು ಆಸೆ ಇರಿಸಿಕೊಂಡಿರುವೆ. `ಜಜ್ಬ್’ ಹೆಸರು ನನ್ನ ನಜರಿಗೆ ಬಿದ್ದಿದ್ದು `ಉರ್ದು ಮತ್ತು ಫಾರಸಿ ಸಾಹಿತ್ಯ’ ಎಂಬ ಪುಸ್ತಕದ ಮೂಲಕ. ಹಳದಿ ರಂಗಿನ ಸಾದಾರಟ್ಟಿನ ಈ ಪುಸ್ತಕದ ಮುಖಬೆಲೆ 3 ರೂ 75 ಪೈಸೆ. ಮೈಸೂರಲ್ಲಿ ಕಲಿಯುತ್ತಿದ್ದ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕೊಡಮಾಡುವ ಅರ್ಧಬೆಲೆಗೆ ಅದನ್ನು ಅಷ್ಟೊಂದು ಉಪಯುಕ್ತ ಪುಸ್ತಕವೆಂಬ ಖಬರಿಲ್ಲದೆ ಖರೀದಿಸಿದ್ದೆ. ಅದು ಮತ್ತೆಮತ್ತೆ ಬಳಸುತ್ತಿರುವ ಅಪರೂಪದ ಪುಸ್ತಕಗಳಲ್ಲಿ ಒಂದಾಯಿತು. ಈ ಪುಸ್ತಕ ಪ್ರಕಟವಾಗಿದ್ದು ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸ ಮಾಲೆಯಲ್ಲಿ. ಸಾಮಾನ್ಯ ಜನರಿಗೆ ಲೋಕದ ವಿಷಯಗಳ ಮೇಲೆ ಕನ್ನಡದಲ್ಲಿ ತಿಳುವಳಿಕೆ ಕೊಡುವುದು ವಿಶ್ವವಿದ್ಯಾಲಯದ ವಿದ್ವಾಂಸರ ಕರ್ತವ್ಯ ಎಂಬ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಅನಿಸಿತು. ಅವರಾಶಯಕ್ಕೆ ಅನುಗುಣವಾಗಿ, ಬಿ.ಎಂ. ಶ್ರೀಕಂಠಯ್ಯನವರ ಕಾಲದಲ್ಲಿ ವಿಶ್ವವಿದ್ಯಾನಿಲಯ ಸದರಿ ಯೋಜನೆ ಆರಂಭಿಸಿತು. ವಿದ್ವಾಂಸರು ತಮಗೆ ಪಾಂಡಿತ್ಯವಿರುವ ಕ್ಷೇತ್ರದಲ್ಲಿ ಯಾವುದಾದರೂ ವಿಷಯ ಆರಿಸಿಕೊಂಡು, ಒಂದು ಊರಿನಲ್ಲಿ ಉಪನ್ಯಾಸ ಮಾಡಬೇಕು. ನಂತರ ಪುಸ್ತಕ ರೂಪದಲ್ಲಿ ಬರೆದುಕೊಡಬೇಕು. ಈ ಯೋಜನೆಯಲ್ಲಿ ಜಜ್ಬ್ ಉರ್ದು ಮತ್ತು ಫಾರಸಿ ಸಾಹಿತ್ಯ ಪರಿಚಯಿಸುವ ಉಪನ್ಯಾಸ ಮಾಡಿದರು. ಅದು ಪುಸಕ್ತವಾಗಿ 1964ರಲ್ಲಿ ಹೊರಬಂದಿತು. ಇದರಲ್ಲಿ ಉರ್ದು ಭಾಷೆಯ ಹುಟ್ಟು, ಅದರ ಹುಟ್ಟಿನಲ್ಲಿ ದಕ್ಷಿಣ ಭಾರತದ ಪಾತ್ರ, ಅದರ ಬೆಳವಣಿಗೆ, ಅದರಲ್ಲಿ ಹುಟ್ಟಿದ ಸಾಹಿತ್ಯ, ಫಾರಸಿಯ ಮುಖ್ಯ ಕವಿಗಳು-ಹೀಗೆ ವಿಭಿನ್ನ ನಮೂದುಗಳ ಮೇಲೆ ಅಧ್ಯಾಯಗಳಿವೆ. ಇದರ ವಿಶೇಷವೆಂದರೆ- ಉರ್ದು ಕವಿತೆಗಳನ್ನು ಕನ್ನಡ ಲಿಪಿಯಲ್ಲಿ ಮುದ್ರಿಸಿ ಅವಕ್ಕೆ ತರ್ಜುಮೆ ಕೊಟ್ಟಿರುವುದು; ಭಾರತ ಮತ್ತು ಕರ್ನಾಟಕದ ಉರ್ದು ಕವಿಗಳ ಪರಿಚಯ ಕೊಟ್ಟಿರುವುದು. ಈ ಕವಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಇಸಮು ಮುಸ್ಲಿಮರಲ್ಲ. ಉರ್ದು ಮುಸ್ಲಿಮರ ಭಾಷೆಯೆಂಬ ಅರೆಸತ್ಯದ ತಿಳುವಳಿಕೆ ಕಲಿತವರಲ್ಲಿದೆ. ಆದರೆ ಅದರ ಪ್ರಥಮ ಜ್ಞಾನಪೀಠ ಪ್ರಶಸ್ತಿ ಬಂದಿದ್ದು ಗೋರಖಪುರದ ರಘುಪತಿ `ಫಿರಾಕ್’ ಅವರಿಗೆ. ಉರ್ದುವನ್ನು ಮತಾತೀತ ಭಾಷೆಯನ್ನಾಗಿ ನೋಡಬೇಕೆಂದು ಜಜ್ಬರ ಆಶಯವಾಗಿತ್ತು. ಕೃತಿಯ ಅಖೈರಿನಲ್ಲಿ “ಮುಸ್ಲಿಮರು ಉರ್ದುವನ್ನು ತಮ್ಮದೆಂದು ಹಕ್ಕುಸಾಧಿಸುತ್ತ ಅದಕ್ಕೊಂದು ಧಾರ್ಮಿಕತೆ ಕಲ್ಪಿಸಿದರು. ಅದು ಮುಸ್ಲಿಮರದೆಂದು ಉಳಿದವರು ಅದನ್ನು ದೂರವಿಟ್ಟು ಹಿಂದಿಯನ್ನು ಅಪ್ಪಿಕೊಂಡರು. ಇವೆರಡನ್ನೂ ಒಳಗೊಂಡ ಹಿಂದೂಸ್ತಾನಿ ಭಾರತದ ಭಾಷೆಯಾಗಬೇಕೆಂದು ಗಾಂಧಿ ಬಯಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಅದು ಸಾಧ್ಯವಾಗಿದ್ದರೆ ಉರ್ದುವಿಗೆ ಈ ಸ್ಥಿತಿ ಬರುತ್ತಿರಲಿಲ್ಲ’’ ಎಂದು ವಿಷಾದದಿಂದ ಜಜ್ಬ್ ವ್ಯಾಖ್ಯಾನಿಸುತ್ತಾರೆ. ಹೈದರಾಬಾದ್ ಕರ್ನಾಟಕದಲ್ಲಿ ಜಜ್ಬ್ ‍ರಂತಹ ಉರ್ದು ವಿದ್ವಾಂಸರು ನೂರಾರಿದ್ದರು. ಎಲ್ಲರೂ ಒಬ್ಬೊಬ್ಬರಾಗಿ ಕಣ್ಮರೆಯಾದರು. ಕೆಲವು ಹಿರಿಯರು ತಮ್ಮ ಬಾಳಿನ ಕೊನೆಯಂಚಿಗಿದ್ದಾರೆ. ಈ ಭಾಗದ ಹಿಂದಿನ ರೆವಿನ್ಯೊ ದಾಖಲೆಗಳೆಲ್ಲ ಉರ್ದುವಿನಲ್ಲಿದ್ದು, ಈಗಲೂ ತಹಸಿಲ್ದಾರರು-ಜಿಲ್ಲಾಧಿಕಾರಿಗಳು ಅಗತ್ಯ ಬಿದ್ದಾಗ ಈ ಪಂಡಿತರನ್ನು ಕರೆದು ನೆರವನ್ನು ಪಡೆವುದುಂಟು. ಹೆಚ್ಚಿನವರು ಪ್ರಭುತ್ವದ ಭಾಷೆಯಾಗಿದ್ದ ಉರ್ದುವನ್ನು ಹೊಟ್ಟೆಪಾಡಿಗಾಗಿ ಕಲಿತರೆ; ಜಜ್ಬ್ ರಂತಹ ಕೆಲವರು ಉರ್ದುವಿನಲ್ಲಿರುವ ಸಾಹಿತ್ಯದ ರುಚಿಗಾಗಿ ಕಲಿತರು. ಸ್ವತಃ ಉರ್ದುವಿನಲ್ಲಿ ಸಾಹಿತ್ಯ ರಚನೆ ಮಾಡಿದರು.ಜಜ್ಬ್ ಉರ್ದುವಿಗೆ ಸಂಸ್ಕøತದಲ್ಲಿದ್ದ ಭರ್ತೃಹರಿಯ ಶತಕಗಳನ್ನೂ ಕನ್ನಡದ ಸೋಮೇಶ್ವರ ಶತಕವನ್ನೂ ಅನುವಾದಿಸಿದರು. ಶತಕದ “ಪೊಡೆಯಲ್ ತುಂಬಿರೆ ಪಂಕ ಮೇಲೆ ತೊಳೆಯಲ್ ತಾಂ ಶುದ್ದನೇನಪ್ಪನೇ!’ ಚರಣ ಅವರಲ್ಲಿ “ಸಫಾಯೀಕೇ ಲಿಯೇ ಧೋಯಾ ಕೋ ಅಪ್ನಾ ತನೇ ಖಾಖೀ, ಮಗರ್ ಇಸಸೇ ನಹೀ ಹೋತೀ ಹೈ ದಿಲ್ ಕಿ ದೂರ ನಾಪಾಕೀ’’ ಎಂದಾಗುತ್ತದೆ. ಜಜ್ಬ್ ತಮ್ಮ ಜೀವಿತ ಕಾಲದಲ್ಲಿ ಅಖಿಲ ಭಾರತ ಮಟ್ಟದ ಮುಶಾಯಿರಗಳಲ್ಲಿ ಭಾಗವಹಿಸುತ್ತಿದ್ದರು. ಅವರ ರುಬಾಯಿಗಳನ್ನು ಕವಿಗಳಾದ ಪಂಡಿತ ದತ್ತಾತ್ರೇಯ ಕೈಫಿ, ಮೋಹನ್ ಸಿಂಗ್ ದೀವಾನಾ, ಮುಲ್ಲಾರ ಮೂಜಿ, ಶಾಹಿದ್ ಸಿದ್ದಿಕಿ ಮುಂತಾದವರು ಹೊಗಳಿದ್ದಾರೆ. ಈ ರುಬಾಯಿಗಳನ್ನು (ಚೌಪದಿ) ಉರ್ದು ಅಕಾಡೆಮಿ ಮರುಮುದ್ರಿಸಬೇಕು. `ಉರ್ದು ಮತ್ತು ಫಾರಸಿ ಸಾಹಿತ್ಯ’ ಕೃತಿಯದೂ ಮರುಮುದ್ರಣ ಆಗಬೇಕು. ಜಜ್ಬ್ ಉರ್ದುಪಂಡಿತ ಮಾತ್ರ ಆಗಿರಲಿಲ್ಲ. ಮಾನವತಾವಾದಿ ಕವಿಯೂ ಆಗಿದ್ದವರು; ಕನ್ನಡ-ಉರ್ದು ಪಾಂಡಿತ್ಯ ಪರಂಪರೆಯ ಕೊಂಡಿಗಳಲ್ಲಿ ಒಂದಾಗಿದ್ದವರು; ಮುಖ್ಯವಾಗಿ ಎರಡು ಧಾರ್ಮಿಕ ಸಮುದಾಯಗಳ ನಡುವೆ ಸೇತುವಿನಂತಿದ್ದವರು. ಈಗಂತೂ ಸೇತುವೆ ಕೊಂಡಿಗಳದ್ದೇ ಕೊರತೆ. ಅವರ ರುಬಾಯಿಯೊಂದು ಹೀಗಿದೆ: ಯಾರಬ್ ಕೋಯಿ ಚಾಹೇ ತೊ ಹುಕೂಮತ್ ದೇದೇಚಾಹೇ ಜೊ ಕೋಯೀ ತೊ ಮಾಲ್ ವ ದೌಲತ್ ದೇದೇಜಿನ್‍ಜಿನ್‍ಕಿ ಜೋ ಖಾಹಿಷ್ ಹೋ ಅತಾಕರ್ ವಹ್‍ಸಬ್ಲೇಖಿನ್ ಮುಝೆ ಸಿರ್ಫ್ ಅದಮಿಯ್ಯತ್ ದೇದೇ( `ಓ ದೇವರೇ, ಯಾರಾದರೂ ಅಧಿಕಾರ ಬೇಡಿದರೆ ಕೊಡು, ಧನ ಬೇಡಿದವರಿಗೆ ಧನಕೊಡು, ಯಾರೇನು ಬೇಡುವರೊ ಅವರಿಗದನ್ನು ಕೊಡು, ನನಗೆ ಮಾತ್ರ ಮನುಷ್ಯತ್ವವನ್ನು ನೀಡು.’) ಕನ್ನಡ ಮತ್ತು ಉರ್ದು ಸಾಹಿತ್ಯದಲ್ಲಿ ಜಜ್ಬ್ ಶ್ರೇಷ್ಠ ಲೇಖಕ ಇರಲಿಕ್ಕಿಲ್ಲ. ಆದರೆ ಕೆಲವು ಹೆಸರಾಂತ ಲೇಖಕರು ಚರಿತ್ರೆಯಿಂದ ಕಹಿಯನ್ನೇ ಹೆಕ್ಕಿತೆಗೆದು ಮಂಡಿಸುವ ಸಾಹಿತ್ಯ ರಚಿಸುತ್ತಿರುವಾಗ, ಜಜ್ಬರ ಮನುಷ್ಯತ್ವದ ಹಂಬಲ ಅಪೂರ್ವವಾಗಿ ಕಾಣುತ್ತದೆ. ಕಲೆಗಾರಿಕೆ ಮತ್ತು ಜೀವನದೃಷ್ಟಿಕೋನ ಇವುಗಳ ನಡುವೆ ನಮ್ಮ ಪ್ರಥಮ ಆಯ್ಕೆ ಯಾವುದು? ಪ್ರತಿಯೊಂದು ಆಯ್ಕೆಯನ್ನು ಆಯಾ ಕಾಲ ದೇಶ ಸನ್ನಿವೇಶ ಮತ್ತು ವ್ಯಕ್ತಿಯ ತುರ್ತುಗಳು ನಿರ್ಧರಿಸುತ್ತವೆ. ಭಾರತದ ಸಾಂಸ್ಕøತಿಕ ಸಮೃದ್ಧಿಗೆ ಜಜ್ಬರಂತಹ ಪಂಡಿತರು; ನಜರುಲ್ ಇಸ್ಲಾಮರಂತಹ ಬಂಗಾಳಿ ಕವಿಗಳು; ಗಂಗೆ-ಕಾಶಿಗಳ ಜತೆ ಆಪ್ತಸಂಬಂಧವಿದ್ದ ಬಿಸ್ಮಿಲ್ಲಾಖಾನರಂತಹ ಸಂಗೀತಗಾರರು ಕಾರಣರು. ಇಂತಹ ಕೂಡುಸಂಸ್ಕøತಿಯ ಅರಿವೇ ಇರದ, ಇದ್ದರೂ ಸಮ್ಮತಿಸಿದ ಸಾಂಸ್ಕøತಿಕ ಅನಕ್ಷರತೆ ವ್ಯಾಪಕವಾಗಿ ಹಬ್ಬುತ್ತಿರುವಾಗ, ಜಜ್ಬರಂತಹ ಪಂಡಿತರ ಚಿತ್ರಗಳು ಚರಿತ್ರೆಯ ವಿಸ್ಮøತಿಗೆ ಸೇರಿದರೆ ಸೋಜಿಗವಿಲ್ಲ. (ನೇಹಿಗರೇ, ಪಂಡಿತ ರಾಮಭಾವು ಬಿಜಾಪುರೆ ಅವರ ಬಗ್ಗೆ ನಾನು ಹಿಂದೆ ಬರೆದ ಟಿಪ್ಪಣಿಯನ್ನು `ಫೇಸ್‍ಬುಕ್ಕಿನಲ್ಲಿ ಹಂಚಿಕೊಳ್ಳಲು ಸಾಧ್ಯವೇ? ಎಂದು ಕವಿ ಕವಿತಾ ಕುಸುಗಲ್ ಕೇಳಿದರು. ಇದೊಂದು ಬರೆಹ ಪ್ರಕಟಿಸುವ ತಾಣವೂ ಆಗಿದೆ ಎಂದು ಗೊತ್ತಾಗಿದ್ದು ಆಗಲೇ. ಕಷ್ಟಪಟ್ಟು ಬಲಿಪಶು ಹುಡುಕುತ್ತಿದ್ದ ಚಿರತೆಗೆ ಕಾಲ್ನಡೆ ತುಂಬಿದ ಕೊಟ್ಟಿಗೆಗೆ ಬಿಟ್ಟಂತಾಯಿತು. ಅಂದಿನಿಂದ ಹೊಸ ಪುಸ್ತಕಕ್ಕಾಗಿ ಸಿದ್ಧಪಡಿಸಿದ ಹಳೆಯ ಟಿಪ್ಪಣಿಗಳನ್ನು ಹಾಕುತ್ತ ನಿಮ್ಮ ಮೇಲೆ ಎರಗುತ್ತಿರುವೆ. ಸಿಗುತ್ತಿರುವ ಮೆಚ್ಚು ಕಸುವು ತುಂಬುತ್ತಿದೆ; ಟೀಕೆಗಳು ತಿದ್ದಿ ನೇರ್ಪಡಿಸುತ್ತಿವೆ. ಪುಸ್ತಕ ಪ್ರಕಟವಾಗುವವರೆಗೂ ನಿಮಗೆ ಈ ಕಾಟದಿಂದ ಮುಕ್ತಿಯಿಲ್ಲವೆಂದು ಕಾಣುತ್ತದೆ. ಸ್ನೇಹದ ತರೀಕೆರೆ) ********************************************* ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ–12  ಬಸರೀಕಟ್ಟೆ ಮತ್ತು ಬೂದಿಕಟ್ಟೆ ನಡುವಿನ ಈ ವಿಸ್ಮಯ ಆ ಇಬ್ಬರು ಆಗಲೇ ೨೭೦೦೦ ಅಡಿಗಳಷ್ಟು ಎತ್ತರ ಏರಿದ್ದರು. ಅದುವರೆಗೂ ಯಾರೂ ಏರದ ಎತ್ತರ ಅದು. ಹಿಮದ ಗಡ್ಡೆಗಳ ಇಳಿಜಾರು ಒಂದು ಕಡೆ, ದೂರ ದೂರದತ್ತ ಕಣ್ಣು ಹಾಯಿಸಿದರೆ ಕಾಣುವುದು ಬರೇ ಬಿಳಿ ಬಿಳೀ ಹಿಮ. ಅದರಡಿಯಲ್ಲಿ ಅದೆಷ್ಟು ಸಾಹಸೀ ದೇಹಗಳು ದಫನವಾಗಿವೆ ಎಂದು ಯೋಚಿಸಿ ಆತ ನಡುಗುತ್ತಾನೆ. ಬದುಕೇ ಹಾಗೆ, ಕಾಣದ ಕಾಣ್ಕೆಗೆ ಹಂಬಲಿಸುತ್ತೆ. ಎತ್ತರೆತ್ತರ ಏರಲು, ಏನೋ ಹೊಸತು..ಹೊಸ ದಿಕ್ಕು, ಹೊಸ ಗಮ್ಯದತ್ತ ಗಮನ. ಐದಡಿ ಎತ್ತರದ ಆ ಯುವಕ ಬರೇ ತನ್ನ ಹೊರೆ ಮಾತ್ರವಲ್ಲ, ತನಗೆ ಸಂಬಳ ಕೊಡುವ ಒಡೆಯನದ್ದೂ, ಪಾತ್ರೆ ಪಗಡಿ, ಆಹಾರ ಅಷ್ಟನ್ನೂ ಹೊತ್ತು ಇನ್ನೂ ಎತ್ತರಕ್ಕೆ, ಪರ್ವತದ ತುದಿಗೆ ಏರುವ ಕನಸು. ಇನ್ನೊಂದು ದಿನ ನಡೆದರೆ ಜಗತ್ತಿನ ಅತ್ಯಂತ ಎತ್ತರದ ಶಿಖರ ಹತ್ತಿದ ಖ್ಯಾತಿ ಅವರಿಗೆ. ರಾತ್ರಿಯಿಡೀ ಗೌರೀ ಶಂಕರ ಶಿಖರದ ಕನಸು. ಬಾಲ್ಯದಲ್ಲಿ ಅಮ್ಮ ಕಂಡ ಕನಸಿನ ನೆನಪು.  ಹೌದು ! ಆತನ ಹೆಸರು ತೇನ್ ಸಿಂಗ್ !  ತೇನ್ ಸಿಂಗ್ ನೋರ್ಗೆ. ವಾತಾವರಣ ವಿಪರೀತವಾದರೆ ಹತ್ತಲೂ ಕಷ್ಟ,ಇಳಿಯಲೂ ಕಷ್ಟ. ಆದರೆ ಆ ಬೆಳಗ್ಗೆ  ಆಕಾಶ ಶುಭ್ರವಾಗಿತ್ತು. ನೀಲಾಕಾಶ ಕೊಡುವ ಹುರುಪು ಜಗತ್ತಿನ ಇನ್ನಾವುದೂ ಕೊಡದು. ಶುದ್ಧವಾದ ಹಿಮಗಡ್ಡೆ ಕರಗಿಸಿ,ಚಹಾ ಮಾಡಿ ಒಡೆಯ ಎಡ್ಮಂಡ್ ಹಿಲರಿಗೆ ಬ್ರೆಡ್ ಜತೆಗೆ ಕುಡಿಸಿ, ತಾನೂ ಸೇವಿಸಿ, ಪುನಃ ಒಂದೊಂದಾಗಿ ಹೆಜ್ಜೆಯಿಡುತ್ತಾ ಸಾಗಬೇಕು. ಆಕ್ಸೀಜನ್ ನ ಕೊರತೆಯಿಂದ ಅರ್ಧ ಹೆಜ್ಜೆಗೇ ಏದುಸಿರು ಬರುತ್ತೆ. ಮಧ್ಯಾಹ್ನದ ಹೊತ್ತಿಗೆ ಒಂದು ಎತ್ತರದ ಹಿಮದ ಕೋಡುಗಲ್ಲು ಶಿಖರದ ತುದಿಗೆ ಅಡ್ಡವಾಗಿ. ತೇನ್ ಸಿಂಗ್ ಕೊಡಲಿಯಿಂದ ಅದರಲ್ಲಿ ಮೆಟ್ಟಿಲು ಕಡಿಯುತ್ತಾನೆ. ಕೊನೆಯ ಒಂದಾಳೆತ್ತರದ ಏರು ಮೆಟ್ಟಿಲು ಕಡಿಯಲಾಗದಷ್ಟು ಕಡಿದಾಗಿತ್ತು . ತೇನ್ ಸಿಂಗ್, ತನ್ನ ಭುಜವನ್ನೇ ಮೆಟ್ಟಿಲಾಗಿಸಿ ನಿಲ್ಲುತ್ತಾನೆ. ಹಿಲರಿ ಹೆಗಲಿಗೆ ಪಾದ ಇಟ್ಟು ಮೇಲೆ ಹತ್ತಿ ಕೇಕೇ ಹಾಕುತ್ತಾನೆ. ತೇನ್ ಸಿಂಗ್ ನನ್ನು ಕೈ ಹಿಡಿದು ಮೇಲೆ ಹತ್ತಲು ಸಹಾಯ ಮಾಡುತ್ತಾನೆ. ಅದುವರೆಗೆ ಯಾರೂ ಮಾಡದ ಸಾಹಸ ಅವರಿಬ್ಬರೂ ಮಾಡಿದ್ದರು! ಅದು ತುದಿಯ ತುದಿ. ಜಗತ್ತಿನ ಸಹಸ್ರಾರ ಚಕ್ರ. ನಂಬಲಾಗದ ಸಾಧನೆಯ ಶಿಖರ ಏರಿದ ಕ್ಷಣವದು. ತೇನ್ ಸಿಂಗ್ ನ ಮೊದಲ ಪ್ರಯತ್ನವೇ ಅದು?. ಅಲ್ಲ. ಅದು ಆತನ ಹನ್ನೊಂದನೇ ಪ್ರಯತ್ನ. ಯಾಕೆ ಮನುಷ್ಯ ಹೀಗೇ ಸೋತು,ಪುನಃ ಸೋತು, ಮತ್ತೆ ಸೋತು,ಛಲ ಬಿಡದೆ ಪ್ರಯತ್ನ ಮಾಡುತ್ತಾನೆ?. ಬದುಕಲ್ಲಿ ಏನಿದೆ? ಬದುಕು ಎಂದರೆ ಏನು?. ಆ ರಾಜಕುಮಾರರು ಇಬ್ಬರೂ ಹಲವು ದಿನಗಳ ಕಾಲ ಕಾದಿದರು, ಇಬ್ಬರೂ ಭರತ ಭೂಖಂಡ ಕಂಡ ಅತ್ಯಂತ ಶಕ್ತಿಶಾಲಿ, ನಿಪುಣ ಯೋಧರು. ಮಲ್ಲ ಯುದ್ಧದಿಂದ ಹಿಡಿದು, ದೃಷ್ಟಿ ಯುದ್ಧದ ವರೆಗೆ. ದಿನಗಳು ತಿಂಗಳುಗಳು ಕಳೆದವು.  ಯುದ್ಧ ಮುಗಿದಾಗ, ಬಾಹುಬಲಿ ಎಲ್ಲಾ ಯುದ್ಧದಲ್ಲೂ ಗೆದ್ದಿದ್ದ. ಅಣ್ಣ ಭರತ,ಸೋತಿದ್ದ. ಇನ್ನೇನು ಸಿಂಹಾಸನದಲ್ಲಿ ಕೂರಬೇಕು ಅನ್ನುವಾಗ,ಆತ ಕೊನೆಯದೊಂದು ಯುದ್ಧ ಮಾಡಿದ. ಆ ಯುದ್ಧ ತನ್ನೊಳಗಿನ ಯುದ್ದ. ಅದರಲ್ಲಿ ಆತ ಗೆದ್ದು, ತನ್ನ ರಾಜ ಪೋಷಾಕು,ಕಿರೀಟಗಳನ್ನು ಕಳಚಿ ರಾಜಮಹಲಿನಿಂದ ಗೋಮಟನಾಗಿ ಹೊರನಡೆದ. ಆತನನ್ನು ಗೋಮಟೇಶ್ವರ ಅಂತ ಕರೆದರು. ಆತ ಇಂದಿಗೂ ಲಕ್ಷ ಮನಸ್ಸುಗಳ ರಾಜ್ಯವನ್ನು ಆಳುತ್ತಾನೆ! ಯಾಕೆ ನಡೆದ ಹೀಗೆ?. ಬದುಕು ಎಂದರೆ ಹೀಗಾ? ರಾಮೇಶ್ವರದ ಜಲಾಲುದ್ದೀನ್ ನ ಮಗ ಅಬ್ದುಲ್ ಕಲಾಂ, ಕಠಿಣ ಪರಿಶ್ರಮ ಮಾಡಿ, ಎಂಜಿನಿಯರ್ ಆಗಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಯಾದಾಗ, ಅಮ್ಮ ಕರೆದು ಹೇಳುತ್ತಾರೆ, “ಮಗನೇ, ನಿನಗೆ ಮದುವೆ ಮಾಡೋಣವೇ?”  ಕಲಾಂ,ಒಪ್ಪದೇ,ವಿಜ್ಞಾನ ಮತ್ತು ಸಂಶೋಧನೆಗೆ ಜೀವನವನ್ನು ಅರ್ಪಿಸುತ್ತಾರೆ. ಇದು ಬದುಕಿನ ಯಾವ ಆಯಾಮ?. ಅದು ಎಪ್ರಿಲ್ ತಿಂಗಳು. ಕಾರ್ಗಿಲ್ ಶಿಖರಗಳ ತುದಿಯಲ್ಲಿ ಪಾಕಿಸ್ತಾನದ ಸೈನಿಕರು ಡೇರೆ ಹೊಡೆದು ಗನ್ ಹಿಡಿದು ನಿಂತ ಹೊತ್ತು, ಕರ್ನಾಟಕದ ವೀರ ಯೋಧ, ಮೇಜರ್ ಅಶೋಕ್, ಹುಟ್ಟೂರಿನಿಂದ ೩೦೦೦ ಕಿಲೋಮೀಟರ್ ದೂರ ತನ್ನ ಸೈನಿಕ ಟುಕಡಿಯ ಜತೆಗೆ ಅಂತಹ ಒಂದು ಶಿಖರವನ್ನು ಹತ್ತುವ ಸಾಹಸ ಮಾಡುತ್ತಾರೆ. ಸೇನೆಯಲ್ಲಿ ಒಂದು ನಿಯಮವಿದೆ. ತಂಡವನ್ನು ಮುನ್ನಡೆಸುವಾಗ, ನಾಯಕ ಮುಂಚೂಣಿಯಲ್ಲಿರಬೇಕು. ಹಾಗೆಯೇ ಮೇಜರ್ ಅಶೋಕ್ ಮುಂದೆ,ಸಿಪಾಯಿಗಳು ಹಿಂದೆ, ಶಿಖರದ ಕಲ್ಲು ಬಂಡೆಗಳನ್ನು ಏರುವಾಗ,ಪಾಕಿಸ್ತಾನದ ಸೈನಿಕರ ಕಣ್ಣು ತಪ್ಪಿಸಿ ಏರ ಬೇಕು. ಅದೂ ರಾತ್ರೆಯ ಕತ್ತಲಲ್ಲಿ. ನಾವೆಲ್ಲಾ, ಎ.ಸಿ. ರೂಂ ನಲ್ಲಿ ಬೆಚ್ಚಗೆ ನಿದ್ರಿಸುವಾಗ, ಅಶೋಕ್, ಕಲ್ಲುಗಳ ತರಚುಗಾಯದಿಂದ ಸೋರುವ ನೆತ್ತರು, ಲೆಕ್ಕಿಸದೆ ಎದೆಯೂರಿ, ಹಲ್ಲಿಯಂತೆ ಪರ್ವತದ ಎಲ್ಲೆಗೆ ಕಚ್ಚಿಹಿಡಿದ ಹಲ್ಲಿಯಂತೆ ಹತ್ತಿದರು. ಮೇಲೇರಿ, ಮುಖಕ್ಕೆ ಮುಖ ಕೊಟ್ಟ ಯುದ್ಧದಲ್ಲಿ ತನ್ನ ತಂಡದ ಹಲವು ಸೈನಿಕರನ್ನು ಕಳೆದು ಕೊಂಡರೂ ಧೈರ್ಯದಿಂದ ಕಾದಿ, ವೈರಿ ಸೈನಿಕರನ್ನು ಸದೆಬಡಿದು ಭಾರತದ ಪತಾಕೆಯನ್ನು ಹಾರಿಸುತ್ತಾರೆ.  ಬದುಕು ಹೀಗಿರಬೇಕು ಎಂಬ ವಜ್ರಕಠೋರ ಸಂಕಲ್ಪದ ಬದುಕು ಅದು. ದೇಶ ಮತ್ತು ದೇಶದ ಪ್ರಜೆಗಳಾದ ನಮ್ಮ ನಿಮ್ಮ ರಕ್ಷಣೆಗೋಸುಗ ತನ್ನ ಪ್ರಾಣ ತ್ಯಾಗ ಮಾಡುವ ಅತ್ಯಂತ ಕಠಿಣ ನಿರ್ಧಾರದ ಬದುಕು. ಹಾಗಿದ್ದರೆ ಬದುಕಿನ ವ್ಯಾಖ್ಯೆ ಏನು?. ಬೇಂದ್ರೆ ಅವರು ಬದುಕು ಮಾಯೆಯ ಮಾಟ ಅಂತ ಹೀಗೆ ಬರೀತಾರೆ. “ಬದುಕು ಮಾಯೆಯ ಮಾಟ ಮಾತು ನೊರೆ-ತೆರೆಯಾಟ ಜೀವ ಮೌನದ ತುಂಬ ಗುಂಬ ಮುನ್ನೀರು ಕರುಣೋದಯದ ಕೂಡ ಅರುಣೋದಯವು ಇರಲು ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು” ಕವಯಿತ್ರಿ ವಿಜಯಲಕ್ಷ್ಮಿ ಅವರ ಕವಿತೆ ಬದುಕಿನ ಇಂತಹ ಗಹನ ವಿಷಯದತ್ತ ತೆರೆಯುತ್ತಾ ನಮ್ಮನ್ನು ಚಿಂತನೆಗೆ ಹಚ್ಚುತ್ತೆ. ***    ***   ****  ಬದುಕು ಕಲೆ ಬದುಕೇ ಒಂದು ಪಾಠ. ಬದುಕುವುದೇ ಒಂದು ಕಲೆ. ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು ಓದಿ ಕಲಿಯುವ ಕಲೆಯೇ…. ಬದುಕು? ನಡೆದರೆ ಓಡುವುದ… ಓಡಿದರೆ ಜಿಗಿಯುವುದ… ಜಿಗಿದರೆ ಹಾರುವುದ… ಕಲಿಸುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು ಜಡತ್ವಕ್ಕೆ ಕ್ರಿಯಾಶೀಲತೆ…. ಕ್ರಿಯಾಶೀಲತೆಗೆ ದಿಶೆ….. ದಿಶೆಗೆ ಗುರಿಯತ್ತ… ಸಾಗಿಸುವುದು ಬದುಕು. ಬದುಕುತ್ತಾ ಹೋದಂತೆ ಬದುಕುವುದ ಕಳಿಸುವುದು ಬದುಕು ತೊಡರುಗಳಲ್ಲಿ ಚೇತರಿಕೆ.. ಏರುಪೇರುಗಳಲ್ಲಿ ಎಚ್ಚರಿಕೆ.. ಆಲಸ್ಯಕ್ಕೆ ಬೆದರಿಕೆ ನೀಡುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು ದೇಹಕ್ಕೆ ಕರ್ಮದ ಬೆಲೆ.. ಮೋಹಕ್ಕೆ ಭಕ್ತಿಯ ಅಲೆ.. ಸ್ನೇಹಕ್ಕೆ ನಿಸ್ವಾರ್ಥತೆಯ ಸೆಲೆ ಚಿಮ್ಮಿಸುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು  ಮೌನದಲಿ ಅಡಗಿದ ಪ್ರೀತಿಯ ಸದ್ದು ‘ಮಾಡು ಇಲ್ಲ ಮಡಿ’ ಎಂಬ ಸಾಧಕನ ಜಿದ್ದು ಹಿತ್ತಲ ಗಿಡದಲ್ಲಿ ಅಡಗಿದ ಮದ್ದು ಗುರುತಿಸುವುದ ಕಲಿಸುವುದು ಬದುಕು ಬದುಕುತ್ತಾ ಹೋದಂತೆ ಬದುಕು ವುದ ಕಲಿಸುವುದು ಬದುಕು . ಜನ-ಜನದಲಿ ಜನಾರ್ಧನನ, ಕಣ-ಕಣದಲಿ ಮುಕ್ಕಣ್ಣನ, ಕ್ಷಣ-ಕ್ಷಣದಲಿ ಕ್ಷೀಣಿಸುವುದಿದು ಎಂದು ಕಣ್ತೆರೆಸುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು. ಓದಿ ಕಲಿಯುವ ಕಲೆಯೇ..ಬದುಕು? **     ***     *** ನಿತ್ಯಸತ್ಯದ ಪಾಠವೇ ಬದುಕು ಎನ್ನುವಾಗ, ಕ್ಷಣಕ್ಷಣಗಳೂ ಅನುಭವ ಮೇಷ್ಟ್ರಾಗಿ, ಕಲಿಸುತ್ತವೆ. ಬದುಕುವುದು ಕಲೆ ಎನ್ನುವಾಗ, ಮನುಷ್ಯನ ಕ್ರಿಯೇಟಿವಿಟಿ ಮತ್ತು ರಾಚನಿಕ ಸೌಂದರ್ಯದತ್ತ ಮನಸ್ಸು ಕೇಂದ್ರಿಸುತ್ತೆ. ‘ಬದುಕುತ್ತಾ ಹೋದಂತೆ ಬದುಕ ಕಲಿಸುವುದು ಬದುಕು’ ! ಬದುಕು ಅನುಭವವೂ ಹೌದು, ಆ ಅನುಭವ ಭವಿಷ್ಯದ ದಾರಿದೀಪವೂ ಹೌದು.ವರ್ತಮಾನದಲ್ಲಿ ನಿಂತಾಗ, ಭೂತಕಾಲದ ಬದುಕು ಜ್ಞಾನ, ಭವಿಷ್ಯಕಾಲಕ್ಕೆ ಅದೇ ದಿಗ್ದರ್ಶಕ. ವಿಜಯಲಕ್ಷ್ಮಿ ಅವರ ಈ ಕವಿತೆ ಒಂದು ತತ್ವ ಪದದಂತಹ ಕವಿತೆ. ತತ್ವಶಾಸ್ತ್ರದ ಬಿಂದುಗಳನ್ನು ಒಂದೊಂದಾಗಿ ಅಳುವ ಮಗುವಿನ ನಾಲಿಗೆಗೆ ಹಚ್ಚುವ ಜೇನಿನಂತೆ ಹೇಳ್ತಾ ಹೋಗುತ್ತಾರೆ.  ಓದಿ ಕಲಿಯುವ ಕಲೆಯೇ ಬದುಕು? ಎಂಬುದು ಪ್ರಶ್ನೆ ಅಂತ ಅನಿಸುವುದಿಲ್ಲ. ಅದು ಕವಯಿತ್ರಿಯ ಧೃಡವಾದ ನುಡಿ. “ಆ ಬಸರೀಕಟ್ಟೆಯಲ್ಲಿ ಹುಟ್ಟಿ, ಬೂದಿಕಟ್ಟೆಯಲ್ಲಿ ಮುಗಿಯುವ ಮೊದಲು, ನಾವು ಓಡಾಡಿಕೊಂಡಿರುವ ಕಟ್ಟೆ ಬಾಳಿನ ಕಟ್ಟೆಯಲ್ಲವೇ? “ “ಬಾಳ್ವೆ ಇರುವುದು ಕಲಿಯುವುದಕ್ಕೆ, ಕಲಿತು ತಿದ್ದಿಕೊಳ್ಳುವುದಕ್ಕೆ, ತಿದ್ದಿ ತೃಪ್ತಿ ಪಡುವುದಕ್ಕೆ. ಬಾಳ್ವೆ ಇರುವುದು ಬದುಕುವುದಕ್ಕಾಗಿ, ಬದುಕಿನಿಂದ ಬೆಳೆಯುವುದಕ್ಕಾಗಿ.” ( ಶಿವರಾಮ ಕಾರಂತ) ಹೀಗೆ, ಬದುಕಿನ ಬಗ್ಗೆ ಶಿವರಾಮ ಕಾರಂತರು ಹೇಳುವ ಮಾತೂ ಈ ಕವಿತೆಯ ಆಶಯಕ್ಕೆ ಪೂರಕ. “ನಡೆದರೆ ಓಡುವುದ… ಓಡಿದರೆ ಜಿಗಿಯುವುದ… ಜಿಗಿದರೆ ಹಾರುವುದ… ಕಲಿಸುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು “ ನಡೆ, ಓಡು, ಜಿಗಿ, ಹಾರು, ಇವುಗಳೆಲ್ಲ ಕ್ರೊನೊಲಾಜಿಕಲ್ ಕ್ರಿಯೆಗಳು. ಒಂದರ ಕಲಿಕೆ ನಂತರದ್ದಕ್ಕೆ ಆವಶ್ಯಕ. ಮೊದಲ ಪ್ಯಾರಾದ ಬದುಕು ಕಲಿಸುವ ಬದುಕು ಎಂಬ ಕಲಿಕೆಯ ನಿರಂತರತೆಯನ್ನು ಇಲ್ಲಿ ಉದಾಹರಣೆ ಕೊಟ್ಟು ಪಾಠ ಮಾಡಿದ್ದಾರೆ, ಕವಯಿತ್ರಿ ಟೀಚರ್.  ಗೋಪಾಲಕೃಷ್ಣ ಅಡಿಗರು ತಮ್ಮ ‘ಯಾವ ಮೋಹನ ಮುರಳಿ ಕರೆಯಿತೋ’ ಕವಿತೆಯ ಪ್ರಸಿದ್ಧ ಸಾಲುಗಳಿವು ” ವಿವಶವಾಯಿತು ಪ್ರಾಣ; ಹಾ ಪರವಶವು ನಿನ್ನೀ ಚೇತನ; ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?” ಮನುಷ್ಯ ಪ್ರಜ್ಞೆಗೆ a exploration ಅನ್ನುವುದು ಮೂಲಸ್ವಭಾವ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?’  ಅನ್ನುವಾಗ ಬದುಕಿನ ದಿಶೆ ನಿರ್ಧರಿಸುವ ಚಾಲಕಶಕ್ತಿಯನ್ನು ಅವರು ದರ್ಶಿಸುತ್ತಾರೆ. ಪುನಃ ಕವಿತೆಗೆ ಬರೋಣ. ” ಜಡತ್ವಕ್ಕೆ ಕ್ರಿಯಾಶೀಲತೆ…. ಕ್ರಿಯಾಶೀಲತೆಗೆ ದಿಶೆ….. ದಿಶೆಗೆ ಗುರಿಯತ್ತ… ಸಾಗಿಸುವುದು ಬದುಕು”. ದಿಶೆ ಮತ್ತು ಗುರಿಯನ್ನೂ ದಾರಿಯಲ್ಲಿ ತಂದಿರಿಸುವಾಗ, ಅನುಭವದ ಜತೆಗೇ ವ್ಯವಸ್ಥಿತ ಚಿಂತನೆ ಮತ್ತು ಪ್ಲಾನಿಂಗ್, ಭವಿಷ್ಯದತ್ತ ಮನಸ್ಸಿನ ಪ್ರೊಜೆಕ್ಷನ್ ಗಳ ಜತೆಯಾಟ ಕಾಣುತ್ತೇವೆ. ಮನುಷ್ಯನ ಯುನಿಕ್ ಸಾಮರ್ಥ್ಯ ಇದು. ಬದುಕು ಕಲಿಸುವ ಬದುಕಿನಲ್ಲಿ, ಸಮಯಪ್ರಜ್ಞೆಯಿಂದ ಬದುಕಿನ ಭವಿಷ್ಯದ ಪ್ರತೀ ಹೆಜ್ಜೆಯನ್ನೂ, ಭೂತಕಾಲದ ಹೆಜ್ಜೆಗಳು ಅನಾವರಣಗೊಳಿಸಿದ ಅರಿವಿನ ಮಾರ್ಗದರ್ಶನದಲ್ಲಿ ಇಡಬೇಕೆಂಬ ಈ ಸಾಲುಗಳನ್ನು ಗಮನಿಸಿ ” ತೊಡರುಗಳಲ್ಲಿ ಚೇತರಿಕೆ.. ಏರುಪೇರುಗಳಲ್ಲಿ ಎಚ್ಚರಿಕೆ.. ಆಲಸ್ಯಕ್ಕೆ ಬೆದರಿಕೆ ನೀಡುವುದು ಬದುಕು “ ಕ್ಷಣ ಕ್ಷಣವೂ ಅರಿವನ್ನು ಎಚ್ಚರದಲ್ಲಿ ಇರಿಸಬೇಕು ( being aware every moment) ಅಂತಲೂ ಭಾವವಿದೆ. ” ದೇಹಕ್ಕೆ ಕರ್ಮದ ಬೆಲೆ.. ಮೋಹಕ್ಕೆ ಭಕ್ತಿಯ ಅಲೆ.. ಸ್ನೇಹಕ್ಕೆ ನಿಸ್ವಾರ್ಥತೆಯ ಸೆಲೆ ಚಿಮ್ಮಿಸುವುದು ಬದುಕು” ಕರ್ಮ ಯೋಗದ ಪ್ರಕಾರ, ನಿಷ್ಕಾಮ ಕರ್ಮವೂ ಮೋಕ್ಷ ಸಾಧನ ಅನ್ನುತ್ತಾನೆ ಕೃಷ್ಣ. ಸಾಮಾನ್ಯವಾಗಿ ನೋಡಿದರೆ, ದೇಹ,ಕೆಲಸ ಮಾಡುತ್ತಾ ಕಲಿಯುತ್ತೆ. ಜಡತ್ವದಿಂದ ದೇಹ ಹೊರಬರಲು ಸದಾ ದೇಹವನ್ನು ಕ್ರಿಯಾಶೀಲ ವಾಗಿರಿಸುವುದು ಅಗತ್ಯ ಅನ್ನುವ ಧ್ವನಿ ಕವಿತೆಯದ್ದು. ಮೋಹಕ್ಕೆ ಭಕ್ತಿಯ ಅಲೆ ಅನ್ನುತ್ತಾ ಕವಯಿತ್ರಿ, .  ಮೋಹ ಒಂದು ದ್ರವದ ಹಾಗೆ. ಸ್ವತಂತ್ರವಾಗಿ ಬಿಟ್ಟರೆ ದಿಕ್ಕು ದೆಸೆಯಿಲ್ಲದೆ ಹರಿಯುತ್ತೆ. ಅನಿಯಂತ್ರಿತವಾಗಿ ಹರಿಯುತ್ತೆ. ಮೋಹವನ್ನು ಭಕ್ತಿಯಾಗಿ ಚಾನಲೈಸ್ ಮಾಡಿದರೆ ಅದು ಏಕಮುಖಿಯಾಗಿ ಪಾಠ ಕಲಿಸುತ್ತೆ ಅನ್ಸುತ್ತೆ. “ಮೌನದಲಿ ಅಡಗಿದ ಪ್ರೀತಿಯ ಸದ್ದು ‘ಮಾಡು ಇಲ್ಲ ಮಡಿ’ ಎಂಬ ಸಾಧಕನ ಜಿದ್ದು ಹಿತ್ತಲ ಗಿಡದಲ್ಲಿ ಅಡಗಿದ ಮದ್ದು ಗುರುತಿಸುವುದ ಕಲಿಸುವುದು ಬದುಕು “ ಪ್ರೀತಿ, ಬದುಕಿನ ಪುಟಗಳಿಗೆ ಬಣ್ಣ ತುಂಬಿದರೆ,  ಜಿದ್ದು, ಸೋಲಿನಿಂದ ಪುನಃ ಪ್ರಯತ್ನದತ್ತ ಗುರುವಾಗುತ್ತೆ. ಹಿತ್ತಲ ಗಿಡದಲ್ಲೂ ಮದ್ದು ಹುಡುಕುವ ಸಂಶೋಧನಾ ಮನೋಭಾವ ಬದುಕಿನ ಬಹುಮುಖ್ಯ ಮೇಷ್ಟ್ರು. ತತ್ವ ಶಾಸ್ತ್ರ ಅಧ್ಯಾತ್ಮ ದಲ್ಲಿ ಕೊನೆಯಾಗುವ ಮುಂದಿನ ಸಾಲುಗಳನ್ನು ನೋಡಿ ” ಜನ-ಜನದಲಿ ಜನಾರ್ಧನನ, ಕಣ-ಕಣದಲಿ ಮುಕ್ಕಣ್ಣನ, ಕ್ಷಣ-ಕ್ಷಣದಲಿ ಕ್ಷೀಣಿಸುವುದಿದು ಎಂದು ಕಣ್ತೆರೆಸುವುದು ಬದುಕು” ದೇಹ,ಬದುಕು ನಶ್ವರ, ಈಶ್ವರ ಜ್ಞಾನವೇ

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಹಲವು ಭಾವಗಳನ್ನು ಒಟ್ಟಿಗೆ ಸೆರೆಹಿಡಿಯುವ ರೂಪಕಗಳು ಸೂಜಿ ಕಣ್ಣಿಂದ ತೂರಿದದಾರಕ್ಕೆ ಒಳಗಿಲ್ಲ ಹೊರಗಿಲ್ಲ ಈ ಒಂದು ಸಾಲಲ್ಲಿಯೇ ತನ್ನ ಇಡೀ ಕಾವ್ಯದ ಸತ್ವವನ್ನು ನಮ್ಮೆದುರಿಗೆ ತೆರೆದಿಟ್ಟ ಕೃಷ್ಣ ಗಿಳಿಯಾರ ಎಂಬ ವೈದ್ಯರ ಪರಿಚಯ ಯಾರಿಗಿಲ್ಲ ಹೇಳಿ. ವೃತ್ತಿಯಲ್ಲಿ ವೈದ್ಯರಾದರೂ ನವಿರು ಗೆರೆಗಳು ಅವರ ಭಾವಾಭಿವ್ಯಕ್ತಿಯ ಪ್ರತಿರೂಪ. ಭಟ್ಕಳದಲ್ಲಿ ವೈದ್ಯರಾಗಿ ಕಾರ್‍ಯ ನಿರ್ವಹಿಸುತ್ತಿರುವ ಕೃಷ್ಣ ಗಿಳಿಯಾರರ ಕ್ಯಾಮರಾಕ್ಕೆ ಫೋಸ್ ನೀಡಲೆಂದೇ ಬಹಳಷ್ಟು ಹೂವುಗಳು ಅರಳುತ್ತವೆ. ಹೆಚ್ಚಿನ ಪಕ್ಷಿಗಳು ಅವರೆದುರು ಹೊಸ ಮದುವಣಗಿತ್ತಿಯಂತೆ ನುಲಿಯುತ್ತ ನಡೆಯುತ್ತವೆ. ಸೂರ್‍ಯ ಬಳಕುತ್ತ ತನ್ನದೊಂದು ಫೋಟೊ ತೆಗೆಯಲು ಹೇಳಿದರೆ, ಕಡಲಗುಂಟ ಹಾಸಿದಂತೆ ಕವುಚಿ ಮಲಗಿರುವ ಸಹ್ಯಾದ್ರಿ ಪರ್ವತ ಶ್ರೇಣಿಗೂ ಅದೇನೋ ವಯ್ಯಾರ. ಇದೆಲ್ಲದ್ದಕ್ಕೂ ಹೆಚ್ಚಾಗಿ ಈ ಪ್ರಾಣಿ ಪಕ್ಷಿಗಳು, ಕಡಲು, ಪಶ್ಚಿಮ ಘಟ್ಟದ ಮಂಜು, ಆಗಸದ ಸೂರ್‍ಯ, ಚಂದ್ರ, ನಕ್ಷತ್ರಗಳಿಗೆ ಇವರ ಬಳಕುವ ರೇಖೆಗಳಲ್ಲಿ ಅಡಗಿಕೊಳ್ಳುವ ಹುಮ್ಮಸ್ಸು.  ಇಂತಹ ಕೃಷ್ಣ ಎಂಬ ಬಹುಮುಖಿ ಪ್ರತಿಭೆಯ ವೈದ್ಯ ಕವಿತೆ ಬರೆಯುತ್ತೇನೆಂದರೆ ಸಾಲುಗಳಿಗೂ ಹೊಸ ಉತ್ಸಾಹ ಬರದೇ ಉಳಿದೀತೆ? ಅದಕ್ಕೆಂದೇ ಕವಿತೆಗೂ ಇಲ್ಲಿ ನವಿರು ಗೆರೆಗಳಂತೆ ಒಂದೊಂದೇ ರೇಖೆಯ ಸಾಲಿನಲ್ಲಿ ಅದೆಷ್ಟು ಅರ್ಥವನ್ನು ಹೊಮ್ಮಿಸುತ್ತಿವೆ. ಆದರೆ ಈ ಸಾಲುಗಳೂ ಕೂಡ ಕೃಷ್ಣರಂತೆ ಅವರದ್ದೇ ಭಾವ ಲಹರಿಯಲ್ಲಿ ಇರುತ್ತವೆ ಎಂಬುದನ್ನು ಈ ಸಾಲು ಓದಿ ತಿಳಿದುಕೊಳ್ಳಿ ಗೆಲ್ಲಬೇಕೆಂಬ ಆಸೆಸೋಲೆಂದರೇನೆಂದು ತಿಳಿಯದಪ್ರತಿಸ್ಪರ್ಧಿಗಳ ಜೊತೆ ಎನ್ನುತ್ತಾರೆ ಕವಿ. ಈ ಸಾಲು ಅರ್ಥವಾಗಬೇಕೆಂದರೆ ಒಮ್ಮೆ ಕೃಷ್ಣರನ್ನು ಮುಖಾಮುಖಿಯಾಗಬೇಕು. ಯಾವ ಉದ್ವೇಗಕ್ಕೂ ಎಡೆಯಿಲ್ಲದ, ಮುಖದಲ್ಲಿನ ನಗು ಎಂದಿಗೂ ಬಾಡದ, ಎದುರಿಗಿದ್ದವರನ್ನೂ ನಿರಾಳವಾಗಿಸುವ ವ್ಯಕ್ತಿತ್ವ ಇವರದ್ದು. ಹೀಗಾಗಿಯೇ ಪ್ರಕೃತಿಯಲ್ಲಿ ಅರಳುವ ಹೂವು, ನದಿ, ಬಿಸಿಲು ಮುಂತಾದ ಸೋಲೆಂದರೇನೂ ಎಂದು ತಿಳಿಯದ ಪ್ರತಿಸ್ಪರ್ಧಿಗಳ ಜೊತೆ ಗೆಲ್ಲುವ ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾರೆ. ಅವುಗಳನ್ನು ಗೆಲ್ಲುವುದೆಂದರೆ ನಮ್ಮನ್ನು ನಾವೇ ಗೆದ್ದಂತೆ. ಹೀಗಾಗಿಯೇ ಕೃಷ್ಣ ಯೋಚಿಸಿ ಪ್ರತಿಸ್ಪರ್ಧಿಗಳನ್ನು ಆಯ್ದುಕೊಳ್ಳುವ ಪರಿ ಕುತೂಹಲಕರವಾದ್ದದ್ದು. ಹೀಗಾಗಿ ತಮ್ಮ ಅಂದು..ಇಂದು.. ಎನ್ನುವ ಕವನದಲ್ಲಿ ರಾತ್ರಿ ಮನೆಯ ಚಾವಡಿಯಂಚಿನಲ್ಲಿ ದೇವರ ಹೆಸರನ್ನು ಸ್ಮರಣೆ ಮಾಡುತ್ತಿರುವ ಅಜ್ಜಯ್ಯ, ಉಸಿರಾಟದ ದನಿಯಿಂದ ಮಾತ್ರ ಜೀವವಿದೆ ಎಂದು ಗುರುತಿಸಬಹುದಾದ ಅಜ್ಜಿ, ಮಲಗಿದ್ದಾಳೋ ಅಥವಾ ಕುಳಿತಿದ್ದಾಳೆಯೋ ಎಂದೇ ಗೊತ್ತಾಗದ ಅಮ್ಮ, ಹೊಗೆ ಸೂಸುವ ಚಿಮಣಿ ಬೆಳಕು, ಕೊಟ್ಟಿಗೆಯಲ್ಲಿನ ಚಟಪಟ ಸದ್ದು, ಯಾವ ಕ್ಷಣದಲ್ಲಾದರೂ ಒಂದೆರಗಬಹುದಾದ ಕೆಟ್ಟಸುದ್ದಿಯ ನಿರೀಕ್ಷೆಯಲ್ಲೂ ಸೊಳ್ಳೆ ಕಚ್ಚಿದ್ದೂ ಗೊತ್ತಾಗದಂತೆ ನಿದ್ದೆ ಮಾಡುತ್ತಿದ್ದ ಕವಿ ಆಗ ಮಾತ್ರ ತಾನು ಸುಖವಾಗಿದ್ದೆ ಎನ್ನುತ್ತಾರೆ.   ಎಳವೆಯಲ್ಲೇ ಅಗಲಿದ ಅಪ್ಪಗೋಡೆ ಮೇಲೆ ರಾರಾಜಿಸುವಚಿತ್ರವೂ ಆಗಲಿಲ್ಲಅಸ್ಪಷ್ಟವಾಗಿಯೂಕಣ್ಣಭಿತ್ತಿಗೆ ಅಂಟಿ ಕೂರಲಿಲ್ಲಇಷ್ಟಾದರೂ ಮೊದಲ ಕವಿತೆಯಲ್ಲೇ ವಿಷಾದದ ಎಳೆಯೊಂದು ಇಣುಕುತ್ತದೆ. ಎಲ್ಲ ಮಕ್ಕಳಂತೆ ಪ್ರೀತಿಸುತ್ತ, ಗೆದ್ದಾಗ ಹೆಗಲಿಗೇರಿಸಿಕೊಂಡು, ನೌಕರಿ ಮಾಡುವಾಗ ದನಿ ಏರಿಸಿ ಖುಷಿ ತೋರಿಸುವ ಅಪ್ಪ ಇಲ್ಲವೆಂಬ ಭಾವವೇ ನೋವು ಕೊಡುವಾಗ, ಹಾಗೆ ಇಲ್ಲದ ಅಪ್ಪನ ಅಸ್ಪಷ್ಟ ಚಿತ್ರಣವೂ ಕೂಡ ಉಳಿಯದಷ್ಟು ಚಿಕ್ಕವರಿದ್ದಾಗಲೇ ತಂದೆ ತೀರಿ ಕೊಂಡಿದ್ದು ಎಂಬುದು ಇನ್ನೂ ಹೆಚ್ಚು ನೋವು ನೀಡುತ್ತದೆ. ಇದಕ್ಕೂ ಮೀರಿ ಅಪ್ಪ ಗೋಡೆಯ ಮೇಲಿನ ಫೋಟೋವಾಗಿ ಕೂಡ ಉಳಿಯದ ವೇದನೆಯೂ ಇಲ್ಲಿ ಸೇರಿದೆ. ನಾನು ಹುಟ್ಟುವುದಕ್ಕೆ ಐದು ದಿನ ಮೊದಲು ತೀರಿಕೊಂಡ ಅಜ್ಜಿ ಹಾಗೂ ನನಗೆ ವರ್ಷ ತುಂಬುವ ಮೊದಲೇ ಅಜ್ಜಿಯ ಜೊತೆಗೂಡುತ್ತೇನೆ ಎಂದು ಹೋದ ಅಜ್ಜನ ಫೋಟೋಕ್ಕಾಗಿ ನಾನು ದೊಡ್ಡವಳಾದ ಮೇಲೆ ನನ್ನ ಅಪ್ಪ ಹುಡುಕಾಡಿದ್ದು ನನಗೆ ನೆನಪಿದೆ. ಕೊನೆಗೂ ಅತ್ತೆಯ ಬಳಿ ಸಿಕ್ಕ ಚಿಕ್ಕ ಫೋಟೊವೊಂದರಲ್ಲಿ ಅಜ್ಜನಿದ್ದ. ಆದರೆ ಇಂದಿಗೂ ಅಜ್ಜಿಯ ಒಂದು ಫೋಟೋ ಕೂಡ ಇಲ್ಲ. ಆಗಲೆಲ್ಲ ಅಪ್ಪ ಒಂದು ಫೋಟೋ ತೆಗೆಸಿಕೊಳ್ಳಲೂ ಆಗದಷ್ಟು ಬಡತನವಿತ್ತು ಎಂದು ಆಗಾಗ ಹನಿಗಣ್ಣಾಗುತ್ತಾರೆ. ಇಲ್ಲಿಯೂ ಕೂಡ ಅಪ್ಪ ಗೋಡೆಯ ಫೋಟೋ ಆಗಾದರೂ ಇದ್ದಿದ್ದರೆ, ನೋಡಿದ ನೆನಪಿಲ್ಲವಾದರೂ ಮನದಲ್ಲೊಂದು ಆಕೃತಿಯಾದರೂ ಇದ್ದಿರುತ್ತಿತ್ತು ಎಂಬ ನೋವು ಇಲ್ಲಿ ಮಡುವುಗಟ್ಟಿದೆ. ಈ ಅಪ್ಪಂತ ಅಪ್ಪತನಕಾಲಿಗೆ ತಿಕ್ಕುತ್ತಸಂಕೋಚದಿಂದ ನಿಧಾನ-ವಾಗಿಜಾಗ ಮಾಡಿಕೊಂಡುಬೆಚ್ಚಗಾಗುವ ಬೆಕ್ಕು ಹಾಗಾದರೆ ಅಪ್ಪತನ, ಅಂದರೆ ತಾಯ್ತನ ಎನ್ನುವ ಹಾಗೆ ತಂದೆತನವೂ ಒಮದು ಅನುಭೂತಿಯೇ ಅಲ್ಲವೇ ಎಂದು ಕವಿ ಕೇಳುತ್ತಲೇ ಈ ಅಪ್ಪತನ ಎಂಬುದು ನಿಧಾನವಾಗಿ ಬೆಕ್ಕು ಬೆಚ್ಚಗಿನ ಜಾಗ ಹುಡುಕಿ ಹೋಗಿ ದಕ್ಕಿಸಿಕೊಳ್ಳುವಂತೆ ದಕ್ಕಿಸಿಕೊಳ್ಳಬೇಕಿದೆ ಎನ್ನುತ್ತಾರೆ. ತಾಯಿ ಎನ್ನುವುದು ಸತ್ಯ, ತಂದೆ ಎಂಬುದು ನಂಬಿಕೆ ಎನ್ನುವ ಮಾತು ಇಲ್ಲಿ ನೆನಪಾಗುತ್ತದೆ. ಆದರೆ ತಾಯ್ತನ ಹಾಗಲ್ಲ. ಅದಕ್ಕೊಂದು ನಿರ್ದಿಷ್ಟತೆ ಇದೆ. ಲೋಕ ಗರ್ಭದೊಳಗೆ ಬೀಜ ಮೊಳೆತ ದಿನದಿಂದಲೇ ತಾಯ್ತನವನ್ನು ಗುರುತಿಸುತ್ತದೆ.  ಆದರೂ ತಾಯ್ತನವನ್ನು ಗುರುತಿಸುವ ಹಾದಿ ಕೂಡ ನಾವು ಗುರುತಿಸಿ ಇದೇ ಎಂದು ಬೆರಳು ಮಾಡಿ ತೋರುವಷ್ಟು ಸುಲಭದಲ್ಲ. ಲೋಕೋತ್ತರ ಕವಿತೆ ಇಂತಹ ಎಲ್ಲ ಸಾಧ್ಯತೆಗಳನ್ನೂ ಹೇಳುತ್ತಲೇ ನಮ್ಮನ್ನು ನಯವಾದ ಮಾತಿನೊಳಗೇ ಬೆಚ್ಚಿ ಬೀಳುವಂತೆ ಮಾಡುತ್ತದೆ. ನೀನು ಹುಟ್ಟಿ ಬೆಳೆದಿದ್ದು ಆಳಿದ್ದುಇಲ್ಲೇ ಇರಬಹುದುಆದರೆ ನೀನು ಪ್ರವೇಶಿಸಿ ವಶಪಡಿಸಿಕೊಳ್ಳಬೇಕಾದ  ಲೋಕ ನಾನಲ್ಲ ಎನ್ನುತ್ತಾರೆ. ಈ ಸಾಲುಗಲಲ್ಲಿನ ಪ್ರಖರತೆ ಇಡೀ ಲೋಕವನ್ನು ಗಡಗಡನೆ ನಡುಗಿಸುವಮತಿದೆ. ಗಮಡಸುಕುಲ ಹುಡುಕುವ ಸುಖದ ಮೂಲವನ್ನು ಇಲ್ಲಿ ಕೆಲವೇ ಸಾಲುಗಳಲ್ಲಿ ಹಿಡಿದಿಟ್ಟು, ಭೂ ತಾಯಿ ಸಹನೆಯುಲ್ಳ ಹೆಣ್ಣು ತೋರುವ ದಾರಿಯನ್ನು ಅರಹುತ್ತದೆ. ಸಾವಿರ ಸೂರ್‍ಯರು ಕಣ್ಣಾಗಿರುವಸಾವಿರ ಕಡಲುಗಳು ಮೈಯಾಗಿರುವಲೋಕವಿದೆ ನೋಡುಅದರ ಕಿಂಡಿಯಷ್ಟೇ ನನ್ನ ಮೈಮೇಲಿದೆಸಾವಿರ ಸೂರ್‍ಯರು ಕೋರೈಸುವ ಅನುಭೂತಿ, ಸಾವಿರ ಕಡಲು ಆರ್ಭಟಿಸುವ ಸುಖದ ಮೊರೆತವನ್ನು ತಾಯಿ ತನ್ನ ಮೈಯ್ಯಿನ ಒಂದು ಕಿಂಡಿ ಎನ್ನುವ ಮಾತು ಇಡೀ ಗಂಡಸು ಕುಲವನ್ನೇ ನಡುಗಿಸುವಂತೆ ಮಾಡಬಲ್ಲದು.ಇಷ್ಟೆಲ್ಲ ಹೇಳುತ್ತಲೇ ಬಂಧ ಮುಕ್ತ ಎನ್ನುವ ಕವನದಲ್ಲಿ ಮನುಜನ ಜನ್ಮದ ಕುರಿತು ಹೇಳುತ್ತಾರೆ. ಒಂಬತ್ತು ತಿಂಗಳು ಕತ್ತಲ ಕೋಣೆಯಲ್ಲಿ ಕೂಡಿಹಾಕಿ, ಅಲ್ಲಿಯೇ ಮಲಮೂತ್ರ ಮಾಡಿಸಿ, ಸರಿಯಾದ ಜಾಗವೂ ಇರದೇ ಕವುಚಿಕೊಂಡ ಸ್ಥಿತಿಯಲ್ಲಿರುವ ಮನುಷ್ಯ ಹೊರಬಂದ ಕೂಡಲೇ ತನ್ನ ಒಂಬತ್ತು ತಿಂಗಳ ವಾಸಕ್ಕೆ ಬಾಯಿ ಬಾಯಿ ಬಡಿದುಕೊಳ್ಳದೇ ಇರುತ್ತಾನೆಯೇ ಎನ್ನುತ್ತಾರೆ. ಮಗು ಹುಟ್ಟಿದ ಕೂಡಲೇ ಅಳುವುದಕ್ಕೆ ಕವಿ ಕೊಡುವ ಕಾರಣ ಅವರ ವೈದ್ಯ ವೃತ್ತಿಗೆ ಅನುಗುಣವಾಗಿಯೇ ಇದೆ.   ಆದರೆ ಬದುಕು ನಾವು ಅಂದುಕೊಮಡಷ್ಟು ನಿರಾಳವಲ್ಲ. ಅದರ ಲೆಕ್ಕಾಚಾರವೇ ಬೇರೆ ಇರುತ್ತದೆ. ಯಾವುದೋ ಲೆಕ್ಕದಲ್ಲಿ ನಾವೊಂದು ಬಗೆದರೆ ಪ್ರಕೃತಿ ಇನ್ನೊಂದನ್ನೇ ಕಲಿಸುತ್ತದೆ.ತಾನು ಕೂರಿಸಿದ ಹನಿ ಮಂಜುಯಾವ ಗಳಿಗೆಯಲಿ  ಆವಿಯಾಯಿತು ಎಂದು ಕಣ್ಣು ಕಣ್ಣು ಬಿಡುವಂತಾಗುತ್ತದೆ. ಬದುಕೆಂಬ ಯಕ್ಷಗಾನದ ಬಯಲಿನಲ್ಲಿ ಅಥವಾ ಜೀವನವೆಂಬ ನಾಟಕಶಾಲೆಯಲ್ಲಿ ಅದೆಷ್ಟೋ ಮಂದಿ ನಾಟಕ ನೋಡಿ ಶೇಂಗಾ ತಿಂದು, ಸಿಳ್ಳೆ ಹೊಡೆದು ಮಜಾ ಮಾಡಲೆಂದೇ ಬಂದಿರುತ್ತಾರೆ. ಆದರೆ ಬೆಳಗೆದ್ದು ನೋಡಿದರೆ ಬಾಯಿಗೆ ಹೊಡೆಯುವಾಗ ಕೈ ತಪ್ಪಿ ಕೆಳಗೆ ಬಿದ್ದು ಹೋದ ಶೇಂಗಾ ಕಾಳನ್ನು ಆರಿಸಲೆಂದು ಬಂದಿರುವವರನ್ನು ನಾವಿಲ್ಲಿ ಕಾಣುತ್ತೇವೆ. ಬೆಳಿಗ್ಗೆಶಾಲೆಗೆ ಹೋಗುವಾಗಹರಿದಂಗಿ ರವಿಕೆತೊಟ್ಟ ಮಂದಿಆಟದ ಅಂಗಳಸಂದುಗೊಂದಿಯಲ್ಲಿಬಿದ್ದ ಕಾಳುಗಳಿಗಾಗಿಹುಡುಕಾಟ ನಡೆಸಿದ್ದವುಹೀಗಾಗಿ ಬದುಕು ನಾವೆಂದುಕೊಂಡಷ್ಟು ಸರಳವೂ ಅಲ್ಲ. ಸುಲಲಿತವೂ ಅಲ್ಲ. ಅದಕ್ಕೆ ಅದರದ್ದೇ ಆದ ಗತಿಯಿದೆ. ಅದರದ್ದೇ ಆದ ಚಾರಣವಿದೆ. ಇಲ್ಲಿ ಎಲ್ಲರೂ ಸಭ್ಯರೇ ಅವರೊಳಗಿನ ಹುಳುಕು ಹೊರಬೀಳುವವರೆಗೆ. ಹೀಗಾಗಿ ತನ್ನ ನೋವನ್ನು ತೋಡಿಕೊಳ್ಳುವುದಾದರೂ ಯಾರಲ್ಲಿ ಎಂಬ ಆತಂಕ ಎಲ್ಲರಿಗಿರುವಂತೆ ಕವಿಗೂ ಇದೆ.ಯಾರ್‍ಯಾರಹುಡುಕುತ್ತ ಹೋಗಲಿ?ಒಬ್ಬರನೇ ಆತುಕೊಂಡರೆನನ್ನ ಅನಂತ ದುಃಖಕ್ಕೆಅವರು ದಣಿದಾರುನಮ್ಮ ನೋವನ್ನು ಇನ್ನೊಬ್ಬರ ಹೆಗಲಿಗೆ ಹೊರೆಸುತ್ತ ಹೋದರೆ ಅವರ ಭುಜವೂ ದಣಿದೀತು ಎಂಬ ಭಯವೂ ಕವಿಗಿದೆ. ಆದರೆ ದಣಿದರೂ ಪರಸ್ಪರ ಸಹಾಯ ಮಾಡುವುದನ್ನು ನೆಚ್ಚಿಕೊಂಡವರು ನಿಲ್ಲಿಸಲಾರರು ತಾವೂ ಅಂತಹುದ್ದೇ ಸ್ಥಿತಿ ಹೀಗಾಗಿ ಕವಿ ‘ನಾ ಬಂದ ದಾರಿಯಲೆ ಬಂದವರು’ ಎಂಬ ಕವಿತೆಯಲ್ಲಿ ಬಹು ದೂರದಿಂದ ನಡೆದು ಅಂಗಾಲನ್ನು ಸುಟ್ಟುಕೊಂಡು, ನಿರ್ಜಲಿಕರಣಗೊಂಡು ಮೈಚಾಚಿ ಮಲಗಿದಾಗ ಆರೈಕೆ ಮಾಡಿದವರು ತಮ್ಮ ಪಾದಗಳನ್ನು ತೋರಿಸಲಿಲ್ಲ ಎನ್ನುತ್ತಾರೆ.  ಬದುಕಿನಲ್ಲಿ ಅಂತಹುದ್ದೇ ನೋವು ಅನುಭವಿಸಿ ಜೊತೆಗೆ ಹೆಚ್ಚೆ ಇಟ್ಟವರಷ್ಟೇ ಅಂತಹ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲರು. ಹೀಗಾಗಿಯೇ ಬಳ್ಳಿ ಮತ್ತು ಮರದ ಉದಾಹರಣೆಯನ್ನು ನಮ್ಮ ಎದುರಿಗೆ ಇಡುತ್ತಾರೆ ಕವಿ. ಬಳ್ಳಿಯ ಮೃದುತ್ವ ಹಾಗು ಮರದ ತೊಗಟೆಯ ಒರಟುತನವನ್ನು ವಿವರಿಸುತ್ತಾರೆ. ಬಳ್ಳಿಯಲ್ಲಾದ ಹೂವಿನ ಗಂಧವನ್ನು ಅನುಭವಿಸಿ ಮತ್ತೆ ಚಿಗುರುವ ಹುಮ್ಮಸ್ಸು ತೋರುತ್ತದೆ ಮರ. ಬದುಕೇ ಹೀಗೆ. ಮುಗಿದೇ ಹೋಯಿತು ಎನ್ನುವಾಗಲೇ ಅರಿವಾಗದ ಯಾವುದೋ ಒಂದು ಅನುಭವ ಮತ್ತಿಷ್ಟು ಬದುಕನ್ನು ಬದುಕಲಿ ಪ್ರೇರೇಪಿಸುತ್ತದೆ. ಮತ್ತು ಹಾಗೆ ಪರಸ್ಪರರ ಬದುಕನ್ನು ಪ್ರೋತ್ಸಾಹಿಸಲೇಬೇಕು. ಬದುಕೆಂದರೆ ನಮ್ಮ ಹೆಗಲ ಮೇಲೆ ನಾವೆ ತಲೆಯಿಟ್ಟುಕೊಂಡು ಅಳುವ ಏಕಪಾತ್ರಾಭಿನಯ ಅಲ್ಲವಲ್ಲ? ಸ್ವಾತಂತ್ರದಲ್ಲಿ ‘ಪಾಲು’ ಕೇಳುವ ರಾಜನ ಕಥೆಯೂ ಇಲ್ಲಿದೆ. ಕೈದಿ ತಾನೇಕೆ ಬಂಧಿ ಎಂದರೆ ಮಹಾರಾಜ ಅವನ ಸ್ವಾತಂತ್ರ್ಯದಲ್ಲಿ ಪಾಲು ಕೇಳುತ್ತಾನೆ. ಕೊನೆಗೆ ಕೈದಿ ಹೊರನಡೆದರೆ ರಾಜ ಒಳಗೆ ಬಂಧಿಯಾಗುತ್ತಾನೆ. ಇನ್ನೂ ಅಂಗಡಿಗೆ ಜಾಗವನ್ನೇ ನೋಡದೇ ಅಂಗಡಿಯಲ್ಲಿ ಬೆಳಗೆದ್ದು ಏನೇನು ಮಾಡಬೇಕು ಎಂಬುದನ್ನು ಕನಸುವ ಈ ಕಥೆ ತಾನು ಮಹಾರಾಜನಾದರೆ ಎನ್ನುವ ತಿರುಕನ ಕನಸನ್ನು ನೆನಪಿಸುವಂತಿದೆ.ಮಂತ್ರ ಎಂಬ ಕವನವನ್ನು ಕವನಾಸಕ್ತರೆಲ್ಲರೂ ಓದಿ ನೋಡಬೇಕು. ಇಲ್ಲಿ ಕಾಡುವುದು ಮನದ ಬಯಕೆಯೋ, ಕವನದ ಹಂಬಲವೋ?  ಒಟ್ಟಿನಲ್ಲಿ ಕವನವೂ ಮೈ ಬಿಸಿ ಏರಿಸುವ ಒಂದು ಅದ್ಭುತ. ಬಿಳಿ ಹಾಳೆಗಳ ಮೇಲೆ ಉದುರಿದ ಅಕ್ಷರ ಹನಿಗಳು ಒಂದಕ್ಕೊಂದು ಸೇರಿ ಚಕ್ರವ್ಯೂಹವಾಗುವ ಹೊತ್ತಿನಲ್ಲಿ ಏನೂ ಬರೆಯದೇ ಕೈ ಸ್ಥಬ್ಧವಾಗಬಹುದು, ಆದರೆ ಕೊನೆಗೆ ಅಕ್ಷರಗಳೆಲ್ಲ ಮಂಗಮಾಯವಾಗಿ ತುಟಿ ಉಸಿರಿದ ಮಂತ್ರ ಇಬ್ಬರಿಗಷ್ಟೇ ಕೇಳುವ ಚೋದ್ಯವಿದೆಯಲ್ಲ ಅದು ನಿಜಕ್ಕೂ ಅನುಭವಿಸಿಯೇ ತಿಳಿಯಬೇಕಾದ್ದು.       ಇದರ ನಡುವೆ ಕವಿ ಹೇಳುವ ಒಂದು ಕವನ ನನಗೆ ನಾನೇ ಹೇಳಿಕೊಂಡಂತಿದೆ. ನನಗೆ ಇಷ್ಟವಾದ ಕವನ ಕೂಡ ಇದು. ಕವನ ಬರೆಯುವ ಪ್ರೊಸೆಸ್‌ನ್ನು ಕವಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದು ಸಲ ಕವನ ಬರೆದು ಬಿಟ್ಟರೆ ಸಾಲದು, ಅದನ್ನು ಕುಳಿತು ತಿದ್ದಬೇಕು ಎನ್ನುತ್ತಾರೆ ತಿಳಿದವರು, ಅತವಾ ಹಿರಿಯ ಕವಿಗಳು. ಒಮ್ಮೆ ಬರೆದದ್ದನ್ನು ಮತ್ತೆರಡು ದಿನಬಿಟ್ಟು ನೋಡಿ ಪುನಃ ತೀಡಬೇಕು. ಥೇಟ್ ಮಗು ಹುಟ್ಟಿದನಂತರ ಹೊಕ್ಕಳ ಬಳ್ಳಿ ಕತ್ತರಿಸಿ, ಸ್ನಾನ ಮಾಡಿಸಿ, ಪೌಡರ್ ಲೇಪಿಸಿ ಮಗುವನ್ನು ಅಂದಗಾಣಿಸುವ ಅಮ್ಮಂದಿರ ಹಾಗೆ ಕವಿತೆಯನ್ನೂ ಆಗಾಗ ತಿದ್ದಿ ಬೇಡದ್ದನ್ನು ತೆಗೆದು ಹಾಕಿ, ಬಲಸಿದ ಪದಗಳಿಗೆ ಇನ್ನಷ್ಟು ಮೆರಗು ಬರುವಂತೆ ಮಾಡಿ ಚಂದಗಾನಿಸಬೇಕು. ಇದೆಲ್ಲ ನಿಜ. ಆದರೆ ನನ್ನಂಥಹ ಆಲಸಿಗಲಿಗೆ ಅದೆಲ್ಲ ಹೇಗೆ ಸಾಧ್ಯ? ಒಮ್ಮೆ ಕವನ ಬರೆಯುವುದೆಂದರೆ ಒಂಬತ್ತು ತಿಂಗಳು ಹೊತ್ತುಕೊಂಡ ಹೊರೆಯನ್ನು ಒಮ್ಮೆ ಇಳಿಸಿ ನಿರಾಳವಾದಂತೆ ಎಂದುಕೊಳ್ಳುವ ನನಗೆ ಕವನಗಳೂ ಅಷ್ಟೇ. ನನ್ನ ಎರಡನೇ ಮಗ ಹುಟ್ಟಿದಾಗ ಹೆಣ್ಣು ಮಗುವಲ್ಲ, ಇದೂ ಗಂಡೇ ಎಂದು ನನಗೆ ಬೇಡ ಎಂದು ಮುಖ ತಿರುವಿದ್ದೆ, ಸುಮಾರು ಒಂದಿಡೀ ದಿನ ಆ ಮಗು ಅದರ ಅಪ್ಪನ ಕೈಯ್ಯಲ್ಲೇ ಇತ್ತು. ನಂತರ ಅಳತೊಡಗಿದಾಗಷ್ಟೇ ಮಗುವನ್ನು ಹತ್ತಿರ ತಂದುಕೊಂಡಿದ್ದೆ. ನನ್ನ ಕವಿತೆಗಳೂ ಅಷ್ಟೇ. ಒಮ್ಮೆ ಬರೆದು ಎತ್ತಿಟ್ಟುಬಿಟ್ಟರೆ ಮತ್ತೆ ಅದನ್ನು ನೋಡುವುದು ಸಂಕಲನಕ್ಕೆ ಕವನಗಳಿವೆಯೇ ಎಂದು ಹುಡುಕುವಾಗಲೇ. ಇಲ್ಲಿ ಕವಿ ಕೂಡ ಇದೇ ಮಾತನ್ನು ಹೇಳುತ್ತಾರೆ. ಕವಿತೆ ಹಾಗೆಯೇ ಬೆತ್ತಲಾಗಿಯೇ ಇರಬೇಕು ಎಂದು ಸಮರ್ಥಿಸಿಕೊಳ್ಳುತ್ತಾರೆ. ತಿದ್ದಾಟದ ಒದ್ದಾಟದ ಮುಖವಾಡವನ್ನು ಧರಿಸಲು ಸಿದ್ಧರಿಲ್ಲದ ಈ ನಿಲುವು ನನ್ನದೇ ನಿಲುವೆನಿಸಿ ಆಪ್ತವಾಗಿದ್ದಂತು ಹೌದು.   ಮೂರು ಆಯಾಮಗಳು ಎನ್ನುವ ಕವಿತೆ ಕ್ಷೌರದ ಬಗ್ಗೆ ಹೇಳುತ್ತ ಹೋಗುತ್ತದೆಯಾದರೂ ಮನುಷ್ಯ ಜೀವನದ ಮೂರು ಅವಸ್ಥೆಗಳನ್ನು ಚಿತ್ರಿಸುತ್ತದೆ. ಬಾಲ್ಯದಲ್ಲಿ ಎಲ್ಲಾ ಮಕ್ಕಳೂ ಕ್ಷೌರಿಕನಿಗೆ ಹೆದರುವವರೇ. ಆತ ಕತ್ತರಿ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಪಾಲಿಸೋ ಹೂವ ನಾನು ಚಿಕ್ಕವಳಿದ್ದಾಗ ಊರಿನ ಆಂಜನೇಯ ದೇವಸ್ಥಾನದ ದೇವರ ಪಲ್ಲಕ್ಕಿ ವರುಷಕ್ಕೊಮ್ಮೆ ನಮ್ಮ ಮನೆಗೆ ಬರುತ್ತಿತ್ತು. ಮನೆಯ ಹಿರಿಯರೆಲ್ಲರೂ ಭಯ-ಭಕ್ತಿಗಳಿಂದ ದೇವರನ್ನು ಸ್ವಾಗತಿಸಲು ಸಿದ್ಧರಾದರೆ, ನನ್ನ ಮನಸ್ಸಿನಲ್ಲೊಂದು ವಿಚಿತ್ರವಾದ ಸಡಗರ ತುಂಬಿಕೊಳ್ಳುತ್ತಿತ್ತು. ಕಲ್ಲು-ಮುಳ್ಳು ಬಿಸಿಲು ಯಾವುದನ್ನೂ ಲೆಕ್ಕಿಸದೆ ಮಡಿಬಟ್ಟೆಯಲ್ಲಿ ಪಲ್ಲಕ್ಕಿ ಹೊರುತ್ತಿದ್ದ ಗಂಡಸರು, ಅವರ ಕಾಲುಗಳನ್ನು ತಣ್ಣೀರಿನಿಂದ ತೊಳೆದು ಹಳೆಹಾಡುಗಳನ್ನು ಹಾಡುತ್ತ ಪಲ್ಲಕ್ಕಿಯನ್ನು ಸ್ವಾಗತಿಸುತ್ತಿದ್ದ ಹೆಂಗಸರು, ದೇವರು-ಶಾಸ್ತ್ರ ಯಾವುದರ ಬಗ್ಗೆಯೂ ಸ್ಪಷ್ಟ ಕಲ್ಪನೆಯಿಲ್ಲದೆ ದೇವರ ಆಗಮನವನ್ನು ನೆಂಟರು ಬಂದಂತೆ ಸಂಭ್ರಮಿಸುತ್ತಿದ್ದ ಮಕ್ಕಳು ಹೀಗೆ ಬಿಡಿಬಿಡಿಯಾದ ಪ್ರಪಂಚಗಳನ್ನು ಜೋಡಿಸುವ ಕೆಲಸವನ್ನು ಪಲ್ಲಕ್ಕಿ ಮಾಡುತ್ತಿತ್ತು. ಅದು ನಮ್ಮನೆಯಲ್ಲಿದ್ದಷ್ಟೂ ದಿನ ಸೊಸೈಟಿಯ ಸಾಲವಾಗಲೀ, ವಯಸ್ಸಾದವರ ಸೊಂಟದ ನೋವಾಗಲೀ, ನ್ಯೂಸ್ ಪೇಪರಿನ ರಾಜಕೀಯವಾಗಲೀ ಮನೆಯ ಯಾವ ಚರ್ಚೆಯಲ್ಲೂ ಭಾಗವಹಿಸುತ್ತಿರಲಿಲ್ಲ. ಮನೆಯವರೆಲ್ಲರ ಗಮನ ಪಲ್ಲಕ್ಕಿಯ ಮೇಲೆ ಕೇಂದ್ರೀಕೃತವಾಗಿ, ಮನೆಯಲ್ಲೊಂದು ವಿಶಿಷ್ಟವಾದ ಸಂತೋಷ-ಸಮಾಧಾನಗಳ ವಾತಾವರಣ ಸೃಷ್ಟಿಯಾಗುತ್ತಿತ್ತು. ಅಂತಹ ಯಾವುದೋ ಒಂದು ಸಂದರ್ಭದಲ್ಲಿಯೇ ಈ ದೇವರು ಎನ್ನುವುದೊಂದು ಸಮಾಧಾನ ತರುವ ಸಂಗತಿಯೆನ್ನುವ ನಂಬಿಕೆ ನನ್ನಲ್ಲಿ ಹುಟ್ಟಿಕೊಂಡಿದ್ದಿರಬೇಕು!           ಈ ಸಮಾಧಾನ-ನೆಮ್ಮದಿಗಳ ವ್ಯಾಖ್ಯಾನ ಒಮ್ಮೆ ಆಧ್ಯಾತ್ಮದ ವಿವರಣೆಗೆ, ಇನ್ನೊಮ್ಮೆ ಸಂಬಂಧಗಳ ಕ್ಲಿಷ್ಟಕರವಾದ ನಿರೂಪಣೆಗೆ, ಒಮ್ಮೊಮ್ಮೆ ಮನೋವಿಜ್ಞಾನದ ಸಮಾಲೋಚನೆಗಳಿಗೂ ಸಿಲುಕಿ ಸಂಕೀರ್ಣವಾಗಿಹೋಗುವುದುಂಟು. ಸರಳವಾಗಿ ಯೋಚಿಸಿದರೆ ಸಮಾಧಾನವೆನ್ನುವುದು ಮೂಲಂಗಿ ಸೊಪ್ಪಿನ ಪಲ್ಯವಿದ್ದಂತೆ. ಮೂಲಂಗಿಯ ವಾಸನೆಗೆ ಮೂಗುಮುರಿಯುವವರಿಗೆ ಮೂಲಂಗಿಯೊಂದಿಗೆ ಮೂಲಂಗಿಯ ಸೊಪ್ಪನ್ನೂ ಸೇರಿಸಿ ಪಲ್ಯ ಮಾಡಿ ಬಡಿಸಿದರೆ, ವಾಸನೆಯನ್ನು ಮರೆತು ತಕರಾರಿಲ್ಲದೆ ಊಟ ಮಾಡಿ ಕೈ ತೊಳೆಯುತ್ತಾರೆ. ಮೂಲಂಗಿಯೆಡೆಗಿನ ನಿರಾಕರಣೆಯನ್ನು ಅದರದೇ ಭಾಗವಾದ ಎಲೆಗಳು ನಿರಾಯಾಸವಾಗಿ ದೂರ ಮಾಡುತ್ತವೆ. ಆ ಒಗ್ಗಿಕೊಳ್ಳುವಿಕೆಯ ಭಾಗವಾಗಿ ಸಮಾಧಾನದ ಹರಿವು ತನ್ನದೇ ಆದ ಜಾಗವನ್ನು ಗುರುತಿಸಿಕೊಳ್ಳುತ್ತ ಹೋಗುತ್ತದೆ. ಆ ಜಾಗದ ಮಧ್ಯದಲ್ಲಿಯೇ ಎಲ್ಲಿಯೋ ಒಂದು ಕಡೆ ದೇವರು ಎನ್ನುವ ಪರಿಕಲ್ಪನೆ ತನ್ನ ಅಸ್ತಿತ್ವವನ್ನು ಜೋಡಿಸಿಕೊಂಡು ಜೀವಜಗತ್ತಿನ ಪ್ರವಹಿಸುವಿಕೆಯ ಮೂಲವಾಗಿ ಹೊರಹೊಮ್ಮುತ್ತದೆ. ಹಾಗೆ ಒಡಮೂಡಿದ ಒರತೆಯೇ ಅಂಗಾಲುಗಳನ್ನು ಸೋಕಿ, ಹೊಸತನದ ಸಾಕ್ಷಾತ್ಕಾರದೊಂದಿಗೆ ಜೀವಜಲವಾಗಿ ಪ್ರವಹಿಸುತ್ತದೆ.           ಹೊಸತನದ ಅನುಭೂತಿಯೂ ದೇವರೊಂದಿಗೆ ಒಂದು ಅನುಪಮವಾದ ಸಾಮರಸ್ಯವನ್ನು ಬೆಳಸಿಕೊಂಡಿದೆ. ವರುಷಕ್ಕೊಮ್ಮೆ ಮಾತ್ರವೇ ಮನೆಗೆ ಆಗಮಿಸುತ್ತಿದ್ದ ಹೊಸಬಟ್ಟೆಯನ್ನು ತೊಟ್ಟು ದೇವರಿಗೆ ದೀಪ ಹಚ್ಚಿದ್ದು, ಹೈಸ್ಕೂಲಿಗೆ ಸೇರಿದ ಮೊದಲ ದಿನ ಹೆಡ್ ಮಾಷ್ಟ್ರ ಕಾಲಿಗೆ ನಮಸ್ಕಾರ ಮಾಡಿದ್ದು, ದೀಪಾವಳಿಯ ದಿನ ಹೊಸ ಚಿಗುರನ್ನು ತಂದು ಮನೆಯ ಹೊಸ್ತಿಲ ಮೇಲಿಟ್ಟು ನಮಸ್ಕರಿಸಿದ್ದು ಈ ಯಾವ ಕ್ರಿಯೆಗಳೂ ಆಧುನಿಕತೆಯ ಹೆಸರಿನಲ್ಲಿ ಹಳತಾಗುವುದಿಲ್ಲ. ಹೊಸಬಟ್ಟೆಯ ಸಂಭ್ರಮ ದೀಪವಾಗಿ ಉರಿದು ಮನಸ್ಸುಗಳನ್ನು ಬೆಸೆದು ನೆನಪಿನ ಟ್ರಂಕಿನಲ್ಲಿ ಸದಾಕಾಲ ಹೊಸದಾಗಿಯೇ ಉಳಿದುಕೊಳ್ಳುತ್ತದೆ; ಹೈಸ್ಕೂಲಿನ ಹೆಡ್ ಮಾಷ್ಟ್ರು ತೋರಿಸಿದ ದಾರಿಯಲ್ಲಿ ಉಸಿರು ಬಿಗಿಹಿಡಿದು ನಡೆದ ಬದುಕು ಮಾರ್ಕ್ಸ್ ಕಾರ್ಡಿನ ಹುಟ್ಟಿದದಿನದ ದಾಖಲೆಯಾಗಿ ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತದೆ; ಬಾಗಿಲಪಟ್ಟಿಯ ಮೇಲಿನ ಹೊಸ ಚಿಗುರಿನ ಭತ್ತದ ಕಾಳು ಪ್ರತಿದಿನದ ಅನ್ನವಾಗಿ ಜೀವತುಂಬುತ್ತದೆ. ವಾರಾಂತ್ಯದ ಶಾಪಿಂಗುಗಳಲ್ಲಿ ಕ್ರೆಡಿಟ್ ಕಾರ್ಡಾಗಿ, ಹೊಸ ಕೆಲಸದ ಹುಡುಕಾಟದಲ್ಲಿ ಮಾರ್ಕ್ಸ್ ಕಾರ್ಡಾಗಿ, ಬಿರಿಯಾನಿಯ ಬಾಸುಮತಿ ಅಕ್ಕಿಯಾಗಿ ದೇವರೆನ್ನುವ ಸಾಂಗತ್ಯ ಹೊಸ ಸ್ವರೂಪಗಳಲ್ಲಿ ಕೈಹಿಡಿದು ನಡೆಸುತ್ತಲೇ ಇರುತ್ತದೆ.          ಆ ಸಹಜಸ್ಥಿತಿಯ ಇರುವಿಕೆಯಲ್ಲಿ ಶಾಪಿಂಗ್ ಮಾಲ್ ನ ಬಟ್ಟೆ ಅಂಗಡಿಯ ಕ್ಯಾಶ್ ಕೌಂಟರಿನಲ್ಲೊಬ್ಬ ಕಿವಿ ಕೇಳಿಸದ ಹುಡುಗ ತುಟಿಗಳ ಚಲನೆಯಿಂದಲೇ ಪ್ರಶ್ನೆಗಳನ್ನು ಅರಿತು ಹಣಕಾಸಿನ ವ್ಯವಹಾರಗಳನ್ನು ತಪ್ಪಿಲ್ಲದೇ ನಿರ್ವಹಿಸುತ್ತಾನೆ; ಬೀದಿಬದಿಯಲ್ಲೊಬ್ಬಳು ಹೂ ಮಾರುವ ಹುಡುಗಿ ಏರುದನಿಯಲ್ಲಿ ದರಗಳನ್ನು ಕಿವಿಗಳಿಗೆ ತಲುಪಿಸಿ, ಹೂವಿನ ಬದುಕನ್ನು ಮಾರುಗಳಲ್ಲಿ ಲೆಕ್ಕ ಹಾಕುತ್ತಾಳೆ; ರಿಸರ್ವ್ ಫಾರೆಸ್ಟಿನಲ್ಲೊಬ್ಬ ಜೀಪು ಚಲಿಸುವವ ನಿಶ್ಯಬ್ದದ ದಾರಿಯಲ್ಲಿ ಹುಲಿಯ ಹೆಜ್ಜೆಗಳನ್ನು ಹಿಂಬಾಲಿಸುತ್ತಾನೆ; ಏರ್ ಪೋರ್ಟಿನ ಕೆಂದುಟಿಯ ಚೆಲುವೆ ನಗುವನ್ನೇ ಬದುಕಾಗಿಸಿಕೊಂಡು ದೇಶಗಳ ನಡುವಿನ ಅಂತರವನ್ನು ಇಲ್ಲವಾಗಿಸುತ್ತಾಳೆ. ಹೀಗೆ ದೇವರೆನ್ನುವ ಅಸ್ತಿತ್ವ ಒಮ್ಮೆ ಮೌನವಾಗಿ, ಮತ್ತೊಮ್ಮೆ ಧ್ವನಿಯಾಗಿ, ನಿಶ್ಯಬ್ದವೂ ಆಗಿ ಬದುಕಿನ ಚಲನೆಯ ಉದ್ದೇಶಗಳನ್ನು ಕೆಡದಂತೆ ಕಾಪಾಡುತ್ತದೆ. ರೂಪ-ಆಕಾರಗಳ ಬಂಧನವನ್ನು ಮೀರಿದ ಆ ಅಸ್ತಿತ್ವವೇ ಆ ಕ್ಷಣದ ಬದುಕುಗಳ ಸಮಾಧಾನವನ್ನು ನಿರ್ಧರಿಸುತ್ತಿರುತ್ತದೆ. ಆ ಸಮಾಧಾನದ ಕ್ಷಣಗಳಲ್ಲಿ ಬ್ಯಾಂಕಿನೊಂದಿಗಿನ ನಂಬಿಕೆಯ ಸಂಬಂಧ ಕ್ಯಾಶ್ ಕೌಂಟರಿನಲ್ಲಿ ಬಲಗೊಂಡರೆ, ರೈತನೊಬ್ಬನ ಬೆವರಿನಲ್ಲಿ ಮೂಡಿದ ಮೊಗ್ಗು ರಸ್ತೆಬದಿಯಲ್ಲಿ ಹೂ ಮಾರುವವಳ ಧ್ವನಿಯಲ್ಲಿ ಅರಳುತ್ತದೆ; ಜೀಪಿನಲ್ಲಿ ಕುಳಿತವನ ಕ್ಯಾಮರಾ ಕಣ್ಣುಗಳು ಡ್ರೈವರಿನ ನಡೆಯನ್ನು ನಂಬಿಕೊಂಡರೆ, ನಗುಮೊಗದ ಚೆಲುವೆ ಒತ್ತುವ ಸೀಲು ದೇಶ ಬಿಡುವವನ ದುಗುಡವನ್ನು ಕಡಿಮೆ ಮಾಡುತ್ತದೆ. ಹಾಗೆ ಆ ಕ್ಷಣದಲ್ಲಿ ಹುಟ್ಟಿಕೊಂಡ ನಂಬಿಕೆಯೇ ದೇವರಾಗಿ ಸಕಲ ರೂಪಗಳಲ್ಲೂ ಸಂಧಿಸಿ, ಮಧ್ಯರಾತ್ರಿಯ ನೀರವತೆಯಲ್ಲಿ ದೂರದ ಹೈವೆಯಲ್ಲೆಲ್ಲೋ ಚಲಿಸುವ ಲಾರಿಗಳ ಸದ್ದಿನಂತೆ ದಿನಚರಿಯ ಭಾಗವಾಗಿ ಬೆರೆತುಹೋಗುತ್ತದೆ.           ಹಾಗೆ ಬದುಕಿನ ಚಲನೆಗಳೊಂದಿಗೆ ಅನುಸಂಧಾನಗೊಳ್ಳುವ ದೇವರೆನ್ನುವ ಪರಿಕಲ್ಪನೆಯ ಪರಿಧಿಯಲ್ಲಿ ಅಜ್ಜಿ ಮಾಡುತ್ತಿದ್ದ ಬಾಳೆಹಣ್ಣಿನ ರೊಟ್ಟಿಯ ಮೇಲಿನ ಗಟ್ಟಿತುಪ್ಪ ಪ್ರೀತಿಯ ಹನಿಯಾಗಿ ಕರಗಿ ನೆನಪಾಗಿ ಬೆರಳಿಗಂಟಿಕೊಳ್ಳುತ್ತದೆ; ದೂರದ ಹೊಳೆಯಿಂದ ನೀರು ತಂದು ಅಮ್ಮ ನೆಟ್ಟು ಬೆಳಸಿದ ಹಲಸಿನಮರದ ಬುಡದಲ್ಲಿ ಹಸುವೊಂದು ಮಲಗಿ ದಣಿವಾರಿಸಿಕೊಳ್ಳುತ್ತದೆ; ಅಪರಿಚಿತ ರಸ್ತೆಗಳ ಬೀದಿದೀಪಗಳನ್ನು ಒಂದೊಂದಾಗಿ ದಾಟುವ ರಾತ್ರಿಬಸ್ಸಿನ ಕನಸುಗಳು ನಿಶ್ಚಿಂತೆಯಿಂದ ಊರು ತಲುಪುತ್ತವೆ; ಹಸಿರು ಬಣ್ಣದ ಶರ್ಟು ತೊಟ್ಟ ಹುಡುಗನ ನಿಶ್ಚಲ ಕಣ್ಣುಗಳು ಮಳೆಗಾಲದ ಒಂದು ಸಂಜೆಯ ಏಕಾಂತಕ್ಕೆ ಜೊತೆಯಾಗುತ್ತವೆ. ಅಜ್ಜಿಯ ಪ್ರೇಮ, ಅಮ್ಮನ ನಂಬಿಕೆ, ಕಣ್ಣಂಚಿನ ಕನಸುಗಳು, ಹಸಿರಂಗಿಯ ಸಾಂಗತ್ಯಗಳೆಲ್ಲವೂ ಹೆಗಲನ್ನೇರಿ ಬದುಕಿನ ಪಲ್ಲಕ್ಕಿಯ ಭಾರವನ್ನು ಕಡಿಮೆ ಮಾಡುತ್ತವೆ. ಅಲ್ಲೊಂದು ಮೋಹ, ಇಲ್ಲೊಂದು ಸ್ನೇಹ, ಇನ್ನೆಲ್ಲೋ ಒಂದು ಪ್ರೀತಿಯ ಒರತೆ ಎಲ್ಲವೂ ಪೂರ್ವನಿರ್ಧರಿತವಾದಂತೆ ಭಾಸವಾಗುವ ಪಥಗಳಲ್ಲಿ ನಡೆದು ನೆಮ್ಮದಿಯ ನೆಲೆಯನ್ನು ಕಂಡುಕೊಳ್ಳುತ್ತವೆ. ಆ ನೆಲೆಯಂಗಳದಲ್ಲಿ ಅರಳುತ್ತಿರುವ ಹೂವಿನ ಗೊಂಚಲುಗಳು ಭರವಸೆಯ ಬೆಳಕಿನೆಡೆಗೆ ಹೊರಳುತ್ತವೆ. ****************************************************************** – ಅಂಜನಾ ಹೆಗಡೆ ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಜುಮ್ಮಾ- ಕಥಾ ಸಂಕಲನ ಜುಮ್ಮಾ- ಕಥಾ ಸಂಕಲನತೆಲುಗು ಮೂಲ: ವೇಂಪಲ್ಲಿ ಶರೀಫ್ಕನ್ನಡಕ್ಕೆ:ಸೃಜನ್ಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೭೫ಪುಟಗಳು : ೯೬ ಮುಸ್ಲಿಂ ಸಂವೇದನೆಗಳಿಗೆ ಧ್ವನಿ ನೀಡುವ ಮತ್ತು ಓದುಗರ ಮನಮಿಡಿಯುವಂತೆ ಮಾಡುವ ೧೩ ಹೃದಯಸ್ಪರ್ಶಿ ಕಥೆಗಳ ಸಂಕಲನವಿದು. ಮುಖ್ಯವಾಗಿ ಗ್ರಾಮೀಣ ತಳ ಸಮುದಾಯದವರ ಕುರಿತಾದ ಕಥೆಗಳು ಇಲ್ಲಿವೆ. ಬದುಕಿನಲ್ಲಿ ಸುಖವೆಂದರೇನೆಂದೇ ತಿಳಿಯದ ಅಸ್ತಿತ್ವಕ್ಕಾಗಿ ಹೆಣಗಾಡುವ ಮಂದಿ ಇಲ್ಲಿದ್ದಾರೆ.  ಲೇಖಕರಾದ ವೇಂಪಲ್ಲಿ ಶರೀಫ್ ತಮ್ಮ ಸುತ್ತಮುತ್ತ ತಾವು ಕಂಡ ಜಗತ್ತನ್ನು ಸ್ವಲ್ಪವೂ ಉತ್ಪ್ರೇಕ್ಷೆಯಿಲ್ಲದೆ ನಿರುದ್ವಿಗ್ನತೆಯಿಂದ ದಾಖಲಿಸುತ್ತಾ ಹೋಗುತ್ತಾರೆ.  ತಮ್ಮ ಅನುಭವಗಳನ್ನು ತಾರ್ಕಿಕ ವಿಶ್ಲೇಷಣೆಗೆ ಒಳಪಡಿಸಿ ನಿರೂಪಿಸುತ್ತ ಹೋಗುತ್ತಾರೆ.  ಇಲ್ಲಿನ ಪ್ರತಿಯೊಂದು ಕಥೆಯೂ ದಮನಿತರ ಹದಗೆಟ್ಟ ಬದುಕು ಮತ್ತು ವ್ಯವಸ್ಥೆಯ ಹುಳುಕನ್ನು ಪ್ರತಿಫಲಿಸುತ್ತ ಓದುಗರ ಕಣ್ಣುಗಳನ್ನು ಹನಿಗೂಡಿಸುತ್ತವೆ. ದುಃಖವು ಈ ಕಥೆಗಳ ಸ್ಥಾಯೀಭಾವ.            ‘ಪರದೆ’ ಅನ್ನುವ ಕಥೆಯಲ್ಲಿ ಪರದೆ ಅನ್ನುವುದು ಧಾರ್ಮಿಕತೆಯ ದ್ಯೋತಕವಾದರೂ  ಅದು ಹೇಗೆ ಮನುಷ್ಯ ಸಂಬಂಧಗಳ ನಡುವೆ ಗೋಡೆ ನಿರ್ಮಿಸುತ್ತದೆ ಮತ್ತು ಬದುಕನ್ನು ಹೇಗೆ ಕೃತಕಗೊಳಿಸುತ್ತದೆ ಎನ್ನುವ ಸತ್ಯವನ್ನು ಕಥೆ ಬಯಲಿಗೆಳೆಯುತ್ತದೆ. ‘ಜುಮ್ಮಾ’ ಎಂಬ ಕಥೆಯಲ್ಲಿ ಧಾರ್ಮಿಕ ಶ್ರದ್ಧೆಯ ಹೆಸರಿನಲ್ಲಿ ಶುಕ್ರವಾರ ನಮಾಜು ಮಾಡಲು ಮಸೀದಿಗೆ ಹೋಗಲೇ ಬೇಕೆಂದು ಒತ್ತಾಯಿಸುವ ಅಮ್ಮ  ಕೊನೆಯಲ್ಲಿ ಅಷ್ಟು ಭವ್ಯವಾದ ಮಸೀದಿಯೊಳಗೆ  ಸ್ಫೋಟ ಸಂಭವಿಸಿದ ಸುದ್ದಿ ಕೇಳಿ  ತನ್ನ ನಂಬಿಕೆಯಿಂದಲೇ ಕಳಚಿಕೊಳ್ಳುವುದು ಬದುಕು ಹೇಗೆ ಮತೀಯ ನಂಬಿಕೆಗಿಂತ ದೊಡ್ಡದು ಅನ್ನುವ ಸತ್ಯವನ್ನು ನಿರೂಪಿಸುತ್ತದೆ.  ‘ಜೀಪು ಬಂತು’ ಎಂಬ ಕಥೆ ಬಡತನದ ಕುರಿತಾದದ್ದು. ಜೀವನೋಪಾಯಕ್ಕಾಗಿ ಹೊಲದಲ್ಲಿ ಬೆವರು ಸುರಿಸುವ ರೈತ ಮಳೆಯಿಲ್ಲದೆ ಅಸಹಾಯಕನಾಗಿ ಬೋರ್ ಹಾಕಿಸಿದರೆ  ವಿದ್ಯುತ್ ಇಲಾಖೆಯ ಅಧಿಕಾರಿಗಳು ಬಂದು ಹಣ ಕಟ್ಟಲಿಲ್ಲವೆಂದು ಅವನ ಜತೆಗೆ ನಿರ್ದಯವಾಗಿ ನಡೆದುಕೊಳ್ಳುವುದು  ಅಧಿಕಾರಶಾಹಿಯ ಕ್ರೌರ್ಯವನ್ನು  ಬಿಂಬಿಸುತ್ತದೆ.  ‘ಪಚ್ಚೆ ರಂಗೋಲಿ’ ಕಥಾನಾಯಕನ ಅಕ್ಕ ಹಿಂದೂ ಸಂಸ್ಕೃತಿಯಾದ ರಂಗೋಲಿಯ ಮೇಲಿನ ಪ್ರೀತಿಯಿಂದಾಗಿ ತನ್ನ ಕಣ್ಣುಗಳನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಹೋಗುವುದು, ಮುಂದೆ ತನ್ನ ಆ ಆಸೆಯನ್ನು ಮೆಹಂದಿ ವಿನ್ಯಾಸದ ಮೂಲಕ ಪೂರೈಸಿಕೊಳ್ಳುವುದು-ಚಿಕ್ಕ ಚಿಕ್ಕ ವಿಷಯಗಳೂ ಹೇಗೆ ಧಾರ್ಮಿಕ ಸಂಘರ್ಷಗಳಿಗೆ ಕಾರಣವಾಗುತ್ತವೆ ಎಂಬುದನ್ನು ಹೇಳುತ್ತದೆ.      ಹೀಗೆ ಇಲ್ಲಿನ ಎಲ್ಲ ಕಥೆಗಳೂ ಮತೀಯ ಪೂರ್ವಾಗ್ರಹದಿಂದ ಮುಕ್ತವಾದ ಸೌಹಾರ್ದದ ಆಶಯವನ್ನು ವ್ಯಕ್ತಪಡಿಸುತ್ತಾನೆ. ಮೂಲಕಥೆಗಳ ವಸ್ತು, ಭಾಷೆ, ನಿರೂಪಣಾ ತಂತ್ರ ಎಲ್ಲವೂ ಸೊಗಸಾಗಿವೆ. ಅನುವಾದದ ಶೈಲಿ ಬಹಳ ಸುಂದರವಾಗಿದೆ. ************************************************ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಘೋಷಣೆಗಳ ನಡುವೆ ರೂಪಕಗಳಿಗೂ ಕಾತರಿಸುವ ಕಲ್ಮೇಶ ತೋಟದ್  ಕವಿತೆಗಳು ಕಲ್ಮೇಶ ತೋಟದ್ . ಮೂರು ಗೇಣಿನಷ್ಟೇ ಅಂತರ ಭಾಸವಾಗುತ್ತಿದ್ದ ಬಾನಹಂದರ ನೋಡಲದೆಷ್ಟು ಸುಂದರ ಆಕಾಶ ಭೂಮಿ ಮಂದಾರ ಅಪ್ಪನ ಹೆಗಲದು ಸುಂದರ ಇಂಥ ಭಾವುಕ ಸಾಲುಗಳಲ್ಲಿ ಅಪ್ಪನ ಹೆಗಲನ್ನು ವರ್ಣಿಸಿ ಅಪ್ಪನನ್ನು ಕುರಿತಂತೆ ಈವರೆಗೂ ಇದ್ದ ಇಮೇಜುಗಳಿಗೆ ಮತ್ತೊಂದು ಹೊಸ ರೂಪಕವನ್ನು ಕೊಡಮಾಡಿರುವ ೨೬ರ ಹರಯದ ಯುವ ಕವಿ ಕಲ್ಮೇಶ ತೋಟದ ಅವರ ಕವಿತೆಗಳನ್ನು ಪರಿಚಯಿಸುವುದಕ್ಕೆ ಸಂತೋಷ ಮತ್ತು ಸಂಭ್ರಮಗಳು ಮೇಳೈಸುತ್ತವೆ.  “ಕೌದಿ” ಶೀರ್ಷಿಕೆಯಲ್ಲಿ ಈಗಾಗಲೇ ಒಂದು ಸಂಕಲನ ಪ್ರಕಟಿಸಿರುವ ಈ ಕವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದ ಸ್ನಾತಕೋತ್ತರ ಪದವಿ ಪಡೆದು ಸದ್ಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಕಲ್ಮೇಶ ತೋಟದ ತಮ್ಮ ಕವನ ಸಂಕಲನಕ್ಕೆ ಕವಿಯ ಮಾತು ಬರೆಯುವಾಗ ಹೀಗೆ ಟಿಪ್ಪಣಿಸುತ್ತಾರೆ; “ಅವ್ವ ಹಸಿದ ಬೆಕ್ಕಿನ ಮರಿಯೊಂದು ಕಂಡರೆ ಹಿಂದೆ ಮುಂದೆ ನೋಡದೆ ಒಂದಷ್ಟು ಹಾಲು ಹಾಕುತ್ತಾಳೆ. ನಾಯಿ ಕಂಡರೆ ಅನ್ನ ಹಾಕುತ್ತಾಳೆ. ಹಸು ಕಂಡರೆ ಒಂದು ರೊಟ್ಟಿ ಕೊಟ್ಟು ಬೆನ್ನು ಸವರುತ್ತಾಳೆ‌. ಪಕ್ಷಿಗಳಿಗೆ ಕಂಪೌಂಡ್ ಮೇಲೆ ಹಸನು ಮಾಡಿ ಉಳಿದ ಕಾಳು ಕಡ್ಡಿ ಚಲ್ಲುತ್ತಾಳೆ. ತುಳಸಿ ಗಿಡದ ಕುಂಡಲಿ ಪಕ್ಕ ಇರುವೆಗಳಿಗೆ ಸಕ್ಕರೆ ಹರವುತ್ತಾಳೆ. ಕೂದಲು, ಪಿನ್ನು ಮಾರಲು ಬರುವ ಮಹಿಳೆಯರಿಗೆ ತಾನಾಗಿಯೇ ಕುಡಿಯಲು ನೀರು ಬೇಕೆ ಎಂದು ಕೇಳಿ ನೀರು ಕೊಡುತ್ತಾಳೆ. ಇಷ್ಟೆಲ್ಲ ಮಾಡಿದ್ದಕ್ಕೆ ಆಕೆ ಫೋಟೋ ಕ್ಲಿಕ್ಕಿಸಿಕೊಂಡೋ, ಸೆಲ್ಫಿ ತೆಗೆದುಕೊಂಡು ಸಾಕ್ಷಿ ನೀಡುವುದಿಲ್ಲ. ಏನೂ ಮಾಡಿಯೇ ಇಲ್ಲವೆಂಬಂತೆ ಎಲ್ಲವನ್ನು ಮರೆತು ಮತ್ತೆ ನಾಳೆಗೆ ಸಿದ್ಧಳಾಗುತ್ತಾಳೆ”. ಫೇಸ್ಬುಕ್ ಪುಟ ತೆರೆದರೆ ಸಾಕು, ಸುಮ್ಮ ಸುಮ್ಮನೇ ಪಟ ಬದಲಿಸುವ, ಸಣ್ಣ ಪುಟ್ಟ ಸಂಗತಿಗಳನ್ನೂ ಎಂಥದೋ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುವ ಸೆಲ್ಫಿ ಹುಚ್ಚಿನವರು ಗಮನಿಸಲೇ ಬೇಕಾದ ಮತ್ತು ಅನುಸರಿಸಲೇ ಬೇಕಾದ ಸಾಲುಗಳು ಇವು. ತಮ್ಮ ಪಾಡಿಗೆ ತಾವು ಮಾನವೀಯ ಕೆಲಸಗಳನ್ನು ಮಾಡುತ್ತಿದ್ದರೂ ತೋರಿಸಿಕೊಳ್ಳದೇ ಹೇಳಿಕೊಳ್ಳದೇ ತಮ್ಮಲ್ಲೇ ಸುಖ ಕಾಣುತ್ತಿರುವವರನ್ನು ನಮ್ಮ ಫೇಸ್ಬುಕ್ಕಿಗರು ಗಮನಿಸದೇ ಇರುವುದು ಇದಕ್ಕೆ ಕಾರಣ. ಕವಿಯೆಂದು ಬೀಗುತ್ತಿರುವ ಹಲವರು ಮೊದಲು ತಮ್ಮ ಸುತ್ತ ಇರುವ ಜನ ಹೇಗೆ ಯಾವುದಕ್ಕೆ ಪ್ರತಿಕ್ರಯಿಸುತ್ತಾರೆ ಎನ್ನುವುದನ್ನು ಕಂಡುಕೊಳ್ಳದೇ ಅಂದು ಕೊಂಡದ್ದನ್ನೇ ಕಾವ್ಯ ಎಂದು ಬರೆಯುವಾಗ ಈ ಕವಿಯ ಈ “ನೋಟ” ಅವರ ಕವಿತೆಗಳಲ್ಲೂ ಚಾಚಿವೆ. “ಸರ್ಕಾರಿ ಬಸ್ಸಿನ ಕೊನೆಯ ಗಿರಾಕಿ” ಕವಿತೆ ಕೂಡ ಇಂಥದೇ ಬೆರಗಿನ ನೋಟದಲ್ಲೇ ಅರಳುತ್ತದೆ ಮತ್ತು ನಾವೆಲ್ಲರೂ ನೋಡಿ ಗಮನಿಸದೇ, ಗಮನಿಸಿದ್ದರೂ ತುಲನೆ ಮಾಡದ ಸಂಗತಿಗಳನ್ನು ಚಿತ್ರಿಸುತ್ತದೆ. ಕಣ್ಣಿಗೆ ಕಂಡದ್ದನ್ನು ಕಂಡಹಾಗೆ ಬರೆಯುತ್ತಿದ್ದ ಕವಿ ಒಮ್ಮೆಲೇ “ಅಜ್ಜನ ದೋತ್ರಕ್ಕೆ ಎಷ್ಟೊಂದು ನೆರಿಗೆಗಳು ಥೇಟ್ ಅವನ ಮುಖದ ಮೇಲಿನಂತೆ” ಎಂದು ಹೇಳುತ್ತ ರೂಪಕದ ಸಾಧ್ಯತೆಯನ್ನು ತೋರುತ್ತಾರಲ್ಲ, ಈ ಇಂಥ ಯತ್ನಗಳೇ ನಾಳೆಯ ಇವರ ಕವಿತೆಗಳನ್ನು ಎದುರು ನೋಡಲು ಪ್ರೇರೇಪಿಸುತ್ತದೆ. “ರಾಮನಾದರೂ ದಕ್ಕಲಿ, ರಹೀಮನಾದರೂ ದಕ್ಕಲಿ ಬಿಕ್ಕಿ ಅಳುವ ಕಂದನ , ಕಣ್ಣೀರು ಕೊಂಚ ಒರೆಸಲಿ” “ದೇವರು ತುಂಬ ದೊಡ್ಡವನು” ಹೆಸರಿನ ಕವಿತೆಯ ಆಶಯ ಮಾನವೀಯ ಗುಣ ಇಲ್ಲದವರಿಗೆ ಸುಲಭಕ್ಕೆ ದಕ್ಕದ್ದು ಮತ್ತು ಸಿದ್ಧಿಸದ್ದು ಕೂಡ. ಏಕೆಂದರೆ ತಮ್ಮ ತಮ್ಮ ದೇವರು ಧರ್ಮ ಜಾತಿಗಳನ್ನೇ ದೊಡ್ಡದೆಂದು ಭಾವಿಸುವವರ ನಡುವೆ ಇಂಥ ಔದಾರ್ಯ ಮತ್ತು ಆತ್ಮ ನಿರ್ಭರತೆ ಇಲ್ಲದ ಯಾರೂ ಕವಿಯೆಂದು ಹೇಳಿಕೊಂಡ ಮಾತ್ರಕ್ಕೇ ಕವಿಯಾಗುವುದಿಲ್ಲ, ಅನ್ಯರ ಕಷ್ಟವನ್ನೂ ತನ್ನದೆಂದು ಭಾವಿಸದವನು ಕವಿಯಾಗುವುದು ಆಗದ ಮಾತು. ಆದರೆ ಇಷ್ಟು ಚಂದದ ದಾರಿಯಲ್ಲಿ ನಡೆದಿದ್ದ ಈ ಕವಿತೆ ಅಂತ್ಯದಲ್ಲಿ ಹೇಳಿಕೆಯಾಗಿ ಬದಲಾಗುತ್ತದೆ; “ಕಟ್ಟುವುದೇ ಆದರೆ ಒಂದು ಶಾಲೆಯನ್ನೊ, ಶೌಚಗೃಹವನ್ನೊ ಕಟ್ಟೋಣ ಹಸಿವು, ಅಜ್ಞಾನ, ಮಾನದ ಮುಂದೆ ಯಾವ ದೇವರೂ ದೊಡ್ಡವನಲ್ಲ ಅಲ್ಲವೆ…” ಇಂಥ ಹೇಳಿಕೆಗಳು ಮತ್ತು ಘೋಷಣೆಗಳು ಒಂದು ವರ್ಗದ ಮನಸ್ಥಿತಿ ಇದ್ದವರಿಗೆ “ಹಿತ” ಅನ್ನಿಸುವದರಿಂದ ಮತ್ತು ಫೇಸ್ಬುಕ್ ಪುಟಗಳ ತುಂಬ ಅಂಥವರದೇ ಲೈಕು ಕಮೆಂಟುಗಳು ತುಂಬಿಕೊಳ್ಳುವುದರಿಂದ ಯುವ ಕವಿಗಳು ಕ್ಷಣದ ಹೊಗಳಿಕೆಗಾಗಿ ಹೇಳಿಕೆಗಳಲ್ಲೋ ಘೋಷಣೆಗಳಲ್ಲೋ ಕವಿತೆಯನ್ನು ಧ್ವನಿಸದೇ ಪ್ರತಿಮೆ ರೂಪಕಗಳ ಮೂಲಕವೇ ತಮ್ಮ ಅಭಿವ್ಯಕ್ತಿಯನ್ನು ಪ್ರಚುರಗೊಳಿಸುವ ಅಗತ್ಯತೆ ಇದೆ. “ಒಂದರೆಘಳಿಗೆಯ ನಿದ್ದೆ” ಕವಿತೆ ಕೂಡ ಮೇಲ್ನೋಟಕ್ಕೆ ರಿಯಲ್ ಮತ್ತು ವರ್ಚ್ಯುಯಲ್ ಪ್ರಪಂಚಗಳ ಡಿಸೆಕ್ಷನ್ ಥರ ಕಂಡರೂ ಆ ಡಿಸೆಕ್ಷನ್ನಿಗೆ ಬೇಕಾದ ಪರಿಕರಗಳನ್ನು ಇಟ್ಟುಕೊಳ್ಳದೇ ಥಟ್ಟನೇ ಹೊಳೆದ ಜನ ಮನ್ನಣೆಗೆ ಬರೆದ ಸಾಲುಗಳಾಗಿ ಬದಲಾಗಿವೆ. ಈ ಎರಡೂ ಕವಿತೆಗಳ ಆತ್ಮವನ್ನು ಬೆಳಗಿ ದೈಹಿಕ ನ್ಯೂನತೆಗಳನ್ನು ಸರಿಪಡಿಸಿದರೆ ಎರಡೂ ಕೂಡ ಉತ್ತಮ ರಚನೆಗಳಾಗುವ ವಸ್ತು ಹೊಂದಿವೆ. “ಸಾವು ಅಂತಿಮ ಎನಿಸಿದಾಗ ನೀನೊಮ್ಮೆ” ಎಂಬ ಸಾಲುಗಳನ್ನು ಪ್ರತಿ ಅನುಪಲ್ಲವಿಯಲ್ಲಿ ಮತ್ತೆ ಮತ್ತೆ ಧೇನಿಸುವ ಕವಿತೆ ಅದ್ಭುತ ಚಿತ್ರಗಳನ್ನು ಚಿತ್ರಿಸುತ್ತಲೇ ನಿಜಕ್ಕೂ ಬದುಕಿಗೆ ಬೇಕಾದ ಪರಿಕರಗಳನ್ನು, ಜರೂರು ಬೇಕಿರುವ ಆತ್ಮ ಸಾಂಗತ್ಯದ ಅನಿವಾರ್ಯಗಳನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತಲೇ ಬದುಕಿದ್ದಷ್ಟೂ ದಿನ ಅರ್ಥ ಪೂರ್ಣವಾಗಿ ಬದುಕಬೇಕಿರುವ ಹೃದಯವಂತಿಕೆಯ ಚಿತ್ರಣವಾಗಿದೆ. ಆದರೆ ಈ ಕವಿ ಏಕೋ ಘೋಷಣೆಗೋ ಅಥವ ಹೇಳಿಕೆಗೋ ಹೆಚ್ಚು ಮಹತ್ವ ಕೊಟ್ಟ ಕಾರಣಕ್ಕೆ ಕಡೆಯ ಸಾಲುಗಳಲ್ಲಿ ಕವಿತೆ ತಟಸ್ಥವಾಗಿ ಬಿಡುತ್ತದೆ. “ಜಿನುಗುವ ಮಳೆಯಲ್ಲಿ ಬಿಕ್ಕುವ ಹಳೆ ನೆನಪುಗಳ ಕೆಣಕಬೇಡ ಸಖಿ” ಎಂದು ಆರಂಭವಾಗುವ ತಲೆ ಬರಹವಿಲ್ಲದ ಪದ್ಯದ ಆಶಯ ಮಹತ್ವದ್ದು. ಘೋಷಣೆ ಅಥವ ಹೇಳಿಕೆಗಳಿಲ್ಲದ ನಿಜದ ಮಾತುಗಳೇ ತುಂಬಿರುವ ಪದ್ಯ ಹರೆಯದ ಹುಡುಗರು ಸಾಮಾನ್ಯ ಸೃಷ್ಟಿಸುವ ಪ್ರೀತಿ, ಪ್ರೇಮಗಳ ಕುರಿತಾದ ಅಂಶಗಳಿದ್ದರೂ ಭೋರ್ಗರೆತ ಮತ್ತು ಸುಳಿ ತಿರುವುಗಳ ಚಿತ್ರಣವಿಲ್ಲದೆಯೂ ಸರಾಗ ಹರಿದು ಕಡಲು ಸೇರುವ ನದಿಯ ಹರಿವಂತೆ ಭಾಸವಾಗುತ್ತದೆ. “ಹುಡುಕುತ್ತಲೇ ಇದ್ದಾಳೆ ಅವ್ವ ಕುಂಕುಮದ ಬಟ್ಟಲಲ್ಲಿ, ಅರಿಶಿಣದ ಬೇರಿನಲ್ಲಿ ಮಲ್ಲಿಗೆ ಹೂ ದಾರದಲ್ಲಿ ಬಳೆಯ ಸದ್ದಿನ ಗುಂಗಿನಲ್ಲಿ ಗೆಜ್ಜೆನಾದದ ಸದ್ದಿನಲ್ಲಿ…..” ಇಲ್ಲವಾದ ಅಪ್ಪನನ್ನು ಸಾರ್ಥಕವಾಗಿ ಚಿತ್ರಿಸಿದ ಸಾಲು ಇಷ್ಟವಾಗುತ್ತದೆ. ಆದರೆ ಇನ್ನೂ ಬೆಳಸಬಹುದಾಗಿದ್ದ ಈ ಪದ್ಯ ಅವಸರದಲ್ಲಿ ಬರೆದಂತೆ ಕಾಣುತ್ತದೆ. “ಎರೆಮಣ್ಣ ನೆಲದಲ್ಲಿ ತರತರದ ಸೊಬಗಲ್ಲಿ ಮೂಡಗಾಳಿಯ ಎದುರು, ಮಸಡಿ ಬಿರಿತರು ಕೂಡ ಬನ್ನಿಗಿಡದಡಿಯ ಕಲ್ಲು ಪಾಂಡವರಿಗೆ ಕೈ ಮುಗಿದು ದೆವ್ವದ ಗಾಳಿಗೆ ಎದೆಯೊಡ್ಡಿ ನಿಂತ ಭೂತಾಯಿ ಇವಳು ಜನಕರಾಜನ ಮಗಳು..” ಎನ್ನುವ ಸಾಲುಗಳನ್ನು ಓದುತ್ತಿದ್ದಾಗ ಯಾಕೋ ಲಂಕೇಶರ ಅವ್ವ ಪದ್ಯ ಬೇಡ ಬೇಡ ಎಂದರೂ ನೆನಪಾಗುತ್ತದೆ. ಕನ್ನಡದ ಕವಿತೆಗಳೇ ಹಾಗೆ, ಒಂದರ ನೆರಳು ಮತ್ತೊಂದರ ತಲೆಗೆ ತಾಕುತ್ತದೆ, ಮಗದೊಂದು ತೋರಿದ ಝಳಕ್ಕೆ ಎಗ್ಗು ಸಿಗ್ಗಿಲ್ಲದೇ ಅರಳಿಕೊಳ್ಳುತ್ತದೆ, ಹೊರಳಿಕೊಳ್ಳುತ್ತದೆ. ಶ್ರೀ ಕಲ್ಮೇಶ ತೋಟದ ಈಗಿನ್ನೂ ೨೬ರ ಹರಯದ ಯುವಕ. ಅವರು ಸಾಗಬೇಕಿರುವ ದಾರಿ ಮತ್ತು ಮುಟ್ಟ ಬೇಕಿರುವ ಗುರಿ ಬಹಳ ದೊಡ್ಡದಿದೆ. ಆತ್ಮ ಸಂಗಾತಕ್ಕೆ ಅನುಭವದ ಹಾದಿಯ ಎಡರು ತೊಡರುಗಳನ್ನು ಬಳಸುತ್ತಲೇ ಅವನ್ನೇ ಕವಿತೆಯ ರೂಪಕಗಳನ್ನಾಗಿ ಬಳಸುವ ಜಾಣ್ಮೆ ಮತ್ತು ಕಲೆ ಅವರು ಸಿದ್ಧಿಸಿಕೊಳ್ಳುತ್ತ ಇದ್ದಾರೆ ಎನ್ನುವುದು ಅವರ ರಚನೆಗಳ ಮೇಲ್ನೋಟದ ಓದಿನ ಫಲಶೃತಿ. ಇಂಥ ಕವಿಗಳು ಅವರಿವರು ಬೆನ್ನು ತಟ್ಟಿದರೆಂಬ ಖುಷಿಯಲ್ಲಿ, ಮೈ ಮರೆಯದೇ ತಮ್ಮ ಅನುಭವಕ್ಕೆ ಬಂದ ಸಂಗತಿಗಳತ್ತಲೇ ಕಿವಿ ಮೂಗು ಕಣ್ಣುಗಳನ್ನು ಕೀಲಿಸಿದರೆ ಮಾತ್ರ ಹೇಳಿಕೆಗಳಿಂದಲೂ ಘೋಷಣೆಗಳಿಂದಲೂ ಮುಕ್ತರಾಗಬಲ್ಲರು. ಆ ಅಂಥ ಶಕ್ತಿ ಇರುವ ಈ ಯುವಕವಿ ತಕ್ಷಣಕ್ಕಲ್ಲವಾದರೂ ನಿಧಾನದ ಓದಿನಿಂದ, ಪೂರ್ವ ಸೂರಿಗಳ ಒಡನಾಟದಿಂದ ಪಡೆಯಲಿ, ಪಡೆಯುತ್ತಾರೆ ಎನ್ನುವ ಹಾರೈಕೆಯ ಜೊತೆಗೇ ಅವರ ಆಯ್ದ ಐದು ಕವಿತೆಗಳನ್ನು ಕಾವ್ಯಾಸಕ್ತರ ಓದಿಗೆ ಶಿಫಾರಸು ಮಾಡುತ್ತಿದ್ದೇನೆ; ಕಲ್ಮೇಶ ತೋಟದ್ ಕವಿತೆಗಳು 1.ಸರ್ಕಾರಿ ಬಸ್ಸಿನ ಕೊನೆಯ ಗಿರಾಕಿ ಕಿಕ್ಕಿರಿದು ತುಂಬಿದ ವಾ.ಕ.ರ.ಸಾ.ಸಂ ಬಸ್ಸಿನಲ್ಲಿ ಎಷ್ಟೊಂದು ಮುದ್ರಣಗೊಳ್ಳದ ಬದುಕುಗಳಿವೆ ಬಸ್ಸು ತನ್ನ ಪಾಡಿಗೆ ತಾ ಹೊರಟಿರುತ್ತದಷ್ಟೆ ಒಳಗೆ ಅಲ್ಲಲ್ಲಿ ಒಂದಿಷ್ಟು ಗುಂಪುಗಳು ಮಾತಿಗಿಳಿದಿರುತ್ತವೆ ಎಷ್ಟೊಂದು ರಾದ್ಧಾಂತದ ಬದುಕು  ಪ್ರತಿಯೊಬ್ಬರು ಇನ್ನೊಬ್ಬರನ್ನು ದೂಷಿಸುವುದರಲ್ಲಿಯೇ ಮಗ್ನರಾಗಿದ್ದಾರೆ ಅಲ್ಲೊಂದು ಹಿರಿಯ ನಾಗರಿಕರಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತ ಹುಡುಗರಿಗೆ ಕಾಲೇಜಿನ ಗೌಜು ಗದ್ದಲದ ಚಿಂತೆ ಅಲ್ಲೆ ಮುಂದೆ ಸೀಟು ಸಿಗದೆ ನಿಂತ ಮುದುಕನೊಬ್ಬ ಎಡಗಾಲನ್ನೊಮ್ಮೆ, ಬಲಗಾಲನ್ನೊಮ್ಮೆ ಬದಲಿಸುತ್ತ ದೇಹದ ಭಾರ ನಿಭಾಯಿಸುತ್ತಾನೆ ಅಜ್ಜನ ದೋತ್ರಕ್ಕೆ ಎಷ್ಟೊಂದು ನೆರಿಗೆಗಳು ಥೇಟ್ ಅವನ ಮುಖದ ಮೇಲಿನಂತೆ ಹಿಂದೆ ಯಾರದ್ದೊ ಮೊಬೈಲಿನಲಿ ಹಳೆ ಟ್ಯಾಕ್ಟರ್ ಜಾನಪದದ ಹಾಡು ಎಗ್ಗಿಲ್ಲದೆ ಬಡಿದುಕೊಳ್ಳುತ್ತಲೆ ಇದೆ ಚಿಲ್ಲರೆ ಕೇಳಿ ಕೇಳಿ ಸುಸ್ತಾದ ಕಂಡಕ್ಟರ್ ಕೂಡಾ ಸಾರ್ವಜನಿಕರಿಗೆ ಮನದಲ್ಲೆ ಬೈಯುತ್ತ ಟಿಕೆಟ್ ಹರಿಯುತ್ತಿದ್ದಾನೆ ಬಸ್ಸು ತಗ್ಗು ದಿಬ್ಬಿನ ರಸ್ತೆಯೊಡನೆ ಎಷ್ಟೊಂದು ಆತ್ಮೀಯವಾಗಿದೆ ಎದ್ದರೂ, ಬಿದ್ದರೂ ಮುಗ್ಗರಿಸದೆ ಮುನ್ನಡೆಯುತ್ತದೆ ಬಸ್ಸಿನ ಕಂಬಗಳೆಲ್ಲವೂ ಈಗ ಅನಾಥ ಎಲ್ಲರೂ ಮೊಬೈಲ್ ಹಿಡಿದು ಕುಳಿತವರೆ ನಾನು ಬಸ್ಸಿಗೆ ಹೊಸಬನೊ ಅಥವಾ ಬಸ್ಸು ನನಗೆ ಹೊಸದೊ, ಥೋ… ಗೊತ್ತಿಲ್ಲ ಒಂದೊಂದೆ ನಿಲ್ದಾಣ ಬಂದಂತೆಲ್ಲಾ ಬಸ್ಸು ಬರಿದಾಗತ್ತಲೆ ಇದೆ ಈಗೋ ಕಂಡಕ್ಟರ್ ನ ಅಂತಿಮ ಪ್ರಕಟಣೆ ‘ಲಾಸ್ಟ್ ಸ್ಟಾಪ್ ಯಾರ ನೋಡ್ರಿ ಇಳಕೊಳ್ಳೊರು ಇಳಕೊಳ್ರಿ’ 2. ದೇವರು ತುಂಬ ದೊಡ್ಡವನು ರಾಮನಾದರೂ ದಕ್ಕಲಿ, ರಹೀಮನಾದರೂ ದಕ್ಕಲಿ ಬಿಕ್ಕಿ ಅಳುವ ಕಂದನ , ಕಣ್ಣೀರು ಕೊಂಚ ಒರೆಸಲಿ ಬಣ್ಣದ ಬಾವುಟಗಳು ಒಂದಿಷ್ಟು ಶಾಂತವಾಗಲಿ ಬದುಕೆ ಇಲ್ಲದೆ ಕೊರಗುವವರಿಗೆ ಒಂದಿಷ್ಟು ರಂಗು ದೊರೆಯಲಿ ಧರ್ಮ ಶ್ರೇಷ್ಠತೆಯ ಬೊಬ್ಬೆಯಿಡು ನೀನು ನಾನು ಮಾತ್ರ ಹಸಿದವರಿಗೆ ಒಂದು ತುತ್ತು ಅಣ್ಣ ಕಲಸಿ, ಕೈತುತ್ತನ್ನಷ್ಟೆ ನೀಡಬಲ್ಲೆ ಅಲಿಸಾಬ್ ಕಾಕಾನೊಂದಿಗೆ ವ್ಯವಹಾರ ನಡೆಸುತ್ತಿದ್ದ ದೊಡ್ಡಪ್ಪ ಎಂದಿಗೂ ಧರ್ಮ-ಜಾತಿಗಳ ಲೆಕ್ಕ ಹಾಕಿದ್ದು ಕಂಡಿಲ್ಲ ಇಷ್ಟ್ಯಾಕೆ ಕಚ್ಚಾಡಿ, ಕಷ್ಟಪಡುತ್ತೀರಿ ದೇವರು ತುಂಬ ದೊಡ್ಡವನು ನಿವ್ಯಾಕೆ ಬೀದಿಗಿಳಿದು ಚಿಕ್ಕವರಾಗುತ್ತೀರಿ ಗೋಡೆಯಾದರೂ ಉರುಳಲಿ, ಗುಮ್ಮಟವಾದರೂ ಉರುಳಲಿ ಹಸಿವಿನ ಕಟ್ಟೆ ಒಡೆಯದಿರಲಿ ಕಟ್ಟುವುದೇ ಆದರೆ ಒಂದು ಶಾಲೆಯನ್ನೊ, ಶೌಚಗೃಹವನ್ನೊ ಕಟ್ಟೋಣ ಹಸಿವು, ಅಜ್ಞಾನ, ಮಾನದ ಮುಂದೆ ಯಾವ ದೇವರೂ ದೊಡ್ಡವನಲ್ಲ ಅಲ್ಲವೆ… 3. ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ಪಾರಿಜಾತದ ಹೂ ನೋಡಬೇಕಿತ್ತು ಕೊಂಡಿ ಕಳಚಿದಾಗಲೂ ಅದು ನಗುತ್ತಲೆ ನೆಲಕ್ಕುದುರುವ ಪರಿ ಹೇಳುತ್ತಿತ್ತು ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ನವಿಲು ಗರಿಯನ್ನ ಮಾತಿಗೆಳೆಯಬೇಕಿತ್ತು ಮೈ ಕೊಡವಿದಾಗ ದೇಹದಿಂದ ಬೇರ್ಪಟ್ಟರು ಅದು ನಗುವ ಪರಿ ಹೇಳುತ್ತಿತ್ತು ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ಕಡಲ ಚಿಪ್ಪನ್ನು ಕಂಡು ಬರಬೇಕಿತ್ತು ತಲೆ ಒಡೆಸಿಕೊಂಡಾಗ ಮುತ್ತು ನೀಡಿದ ಘಳಿಗೆಯ ನೆನದು ಅದು ಸಾಂತ್ವನ ಹೇಳುತ್ತಿತ್ತು ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ಹೆತ್ತವ್ವನ ಒಡಲಲ್ಲಿ ಸುಮ್ಮನೆ ತಲೆಯಿಟ್ಟು ಮಲಗಬೇಕಿತ್ತು ಕರುಳಬಳ್ಳಿ ಕತ್ತರಿಸಿ, ಕೋಡಿ ನೆತ್ತರ ಹರಿಸಿದಾಗಲೇ ನೀ ಹುಟ್ಟಿದ್ದನ್ನು ಕಿವಿ ಹಿಂಡಿ  ಹೇಳುತ್ತಿತ್ತು ಸಾವೇ ಅಂತಿಮ ಎನಿಸಿದಾಗ ನೀನೊಮ್ಮೆ ನಿನ್ನಾತ್ಮದೊಂದಿಗೆ ಸಂವಾದಕ್ಕಿಳಿಯಬೇಕಿತ್ತು ಕೊನೆ ಪಕ್ಷ ಇದ್ದು ಮಾಡಬೇಕಾದ ಜರೂರತ್ತುಗಳನ್ನ ನೆನಪಿಸುತ್ತಿತ್ತು ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ಮೌನ ಮುರಿದು ಮಾತಾಗಬೇಕಿತ್ತು ನಾನು ಹೆಗಲುಕೊಟ್ಟು ದುಃಖಕ್ಕೆ ಜೊತೆಯಾಗುತ್ತಿದ್ದೆ ನೀ ಇದ್ದರೂ, ಇಲ್ಲದಿದ್ದರೂ ಇಲ್ಲಿ ಯಾವುದು ನಿಲ್ಲುವುದಿಲ್ಲ ಈಗ ಎಲ್ಲವೂ ಮೀರಿ ಹೋಗಿದೆ ಅಷ್ಟೆ ನಿನ್ನ ಬಿತ್ತಿದ ನೆಲವೂ ಉಬ್ಬಿ ನಿಂತಿದೆ ಹೂಗಳ ಹೊತ್ತು ಸನ್ಮಾನವೆಂದು ಭ್ರಮಿಸಿ ನೀನಷ್ಟೆ ಕುಗ್ಗಿ ಮಣ್ಣಾಗಿ ಹೋದವ ಮೂರ್ಖ 4. ಜಿನುಗುವ ಮಳೆಯಲ್ಲಿ ಬಿಕ್ಕುವ ಹಳೆ ನೆನಪುಗಳ ಕೆಣಕಬೇಡ ಸಖಿ ಸುಕ್ಕುಗಟ್ಟಿದ ಮನಸ್ಸಲ್ಲಿ ಮತ್ತೆ ಮುಂಗಾರು ಮಳೆ ಸುರಿದು ಒಲವ ಹೂ

Read Post »

ಅಂಕಣ ಸಂಗಾತಿ, ದಿಕ್ಸೂಚಿ

ಮರೆವಿಗೆ ಇಲ್ಲಿದೆ ರಾಮಬಾಣ           ಹಗಲು ರಾತ್ರಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಓದ್ತಿನಿ.ಆದರೂ ಬೇಕೆಂದಾಗ ನೆನಪಿಗೆ ಬರುವುದೇ ಇಲ್ಲ. ಅದೂ ಪರೀಕ್ಷೆ ಸಮಯದಲ್ಲಂತೂ ಸರಿಯಾಗಿ ಕೈ ಕೊಡುತ್ತದೆ ಏನು ಮಾಡಬೇಕು ತಿಳಿಯುತ್ತಿಲ್ಲ. ಎನ್ನುವುದು ಬಹಳಷ್ಟು ಪರೀಕ್ಷಾರ್ಥಿಗಳ ದೊಡ್ಡ ಸಮಸ್ಯೆ. ನನ್ನ ಮಕ್ಕಳು ಓದಲ್ಲ ಅಂತಿಲ್ಲ. ಎಲ್ಲವನ್ನೂ ಓದ್ತಾರೆ.ಆದರೆ ಅವರಿಗೆ ಜ್ಞಾಪಕ ಶಕ್ತಿದೇ ಸಮಸ್ಯೆ. ಪರೀಕ್ಷೆಯಲ್ಲಿ ಓದಿದ್ದು ಚೆನ್ನಾಗಿ ನೆನಪಿಗೆ ಬರಲಿಲ್ಲ ಅದಕ್ಕೆ ಅಂಕ ಕಡಿಮೆ ಬಂದಿದೆ ಎಂದು ಕಣ್ಣಿರಿಡುತ್ತಾರೆ ನಮಗೇನು ಮಾಡಬೇಕು ಅಂತ ಹೊಳಿತಿಲ್ಲ ಎನ್ನುವುದು ಹಲವು ಹೆತ್ತವರ ಗೋಳು. ಈ ಸಮಸ್ಯೆಗೆ ಅವರಿವರ ಜೊತೆ ಚರ್ಚಿಸಿ ಕೆಲ ಟಿಪ್ಸ್ ಸಿಕ್ಕರೂ ಅವು ಅಷ್ಟೊಂದು ಫಲ ನೀಡುತ್ತಿಲ್ಲ ಅನ್ನೋದು ಕೆಲವು ಪಾಲಕರ ಚಿಂತೆ. ಮರೆವು ಎನ್ನುವುದು ಒಂದು ರೋಗವೇ? ಇದಕ್ಕೆ ಮದ್ದು ಇಲ್ಲವೇ? ನನಗೆ ಜ್ಞಾಪಕ ಶಕ್ತಿ ಕಡಿಮೆ ಎಂಬ ಭ್ರಮೆ ತಲೆಯಲ್ಲಿ ಪ್ರ್ರಾರಂಭವಾದರೆ  ಅದನ್ನು ಹೋಗಲಾಡಿಸುವುದು ಕಷ್ಟ ಸಾಧ್ಯ.ಮರೆವು ಒಂದು ವರವೂ ಹೌದು. ಮರೆವು ಇರದಿದ್ದರೆ ಕಹಿ ಘಟನೆಗಳನ್ನು ದುಃಖದ ಸಂಗತಿಗಳನ್ನು ಮರೆಯಲು ಸಾಧ್ಯವಾಗದೇ ಬಾಳು ನಿತ್ಯ ನರಕವಾಗುತ್ತಿತ್ತು. ಪ್ರಮುಖ ವಿಷಯಗಳನ್ನು ಮರೆಯದೇ ನೆನಪಿÀಡಬೇಕೆ? ಹಾಗಾದರೆ ಇಲ್ಲಿದೆ ಅದಕ್ಕೆ ರಾಮಬಾಣ.  ಅಟೋ ಸಜೇಷನ್  ಸಾಮಾನ್ಯವಾಗಿ ಜ್ಞಾಪಕ ಶಕ್ತಿ ಎಲ್ಲರಲ್ಲೂ ಒಂದೇ ರೀತಿಯಲ್ಲಿರುತ್ತದೆ. ಇದನ್ನು ದಿನ ನಿತ್ಯ ಮೊಂಡಾದ ಚಾಕು ಹರಿತಗೊಳಿಸುವಂತೆ, ಪರಿಶ್ರಮದಿಂದ ವೃದ್ಧಿಸಿಕೊಳ್ಳುತ್ತಾರೆ. ಗೆಲುವು ಸಾಧಿಸುತ್ತಾರೆ. ಇನ್ನೂ ಕೆಲವರು ತಮ್ಮಲ್ಲಿ ಜ್ಞಾಪಕ ಶಕ್ತಿಯ ಪ್ರಮಾಣವೇ ಕಡಿಮೆ ಇದೆ ಎಂಬ ಭ್ರಮೆಗೆ ಜೋತು ಬಿದ್ದು ವಿಫಲರಾಗುತ್ತಾರೆ. ಕೆಲ ಜನರು ತೀರಾ ಅನಗತ್ಯವೆನಿಸುವ ವಿಷಯಗಳನ್ನು ಪ್ರಮುಖವೆಂದು ಭಾವಿಸಿ ಆ ಸಂಗತಿಗಳು ತಮ್ಮ ತಲೆಯಲ್ಲಿ ಉಳಿಯುವುದಿಲ್ಲ ಎಂದು ಚಿಂತಿಸುತ್ತಾರೆ. ನಿಜ ಹೇಳಬೇಕೆಂದರೆ ಚಿಕ್ಕ ಪುಟ್ಟ ವಿಷಯಗಳಿಗೆ ಹೆಚ್ಚು ಸಮಯ ವ್ಯರ್ಥ ಮಾಡುತ್ತಿಲ್ಲ ಎಂದು ಖುಷಿ ¥ಡಬೇಕು ನೀವು ಪುಸ್ತಕ ಪೆನ್ನು ಇತ್ಯಾದಿ . ದಿನ ನಿತ್ಯ ಇಡುವ ಜಾಗದಲ್ಲಿ ಇಡದೇ ಬೇರೆ ಜಾಗದಲ್ಲಿಟ್ಟು ಹುಡುಕುತ್ತ ಇತ್ತೀಚಿಗೆ ನನಗೆ ಮರೆವು ಹೆಚ್ಚಾಗ್ತಿದೆ ಎಂದು ಬೇಸರಿಸಿಕೊಂಡರೆ ಅದೊಂದು ರೀತಿಯ ಮೂರ್ಖತನವೇ ಅಲ್ಲವೇ? ಎಲ್ಲೋ ಇಟ್ಟು ಎಲ್ಲೋ ಹುಡುಕಿದರೆ ಸಿಗುವುದಾದರೂ ಹೇಗೆ? ನನಗೆ ಜ್ಞಾಪಕ ಶಕ್ತಿ ಕಡಿಮೆ ಮರೆವು ಜಾಸ್ತಿ ಎಂದು ಪದೇ ಪದೇ ಹೇಳಬೇಡಿ. ಈ ಸಂಗತಿ  ಮೆದುಳಲ್ಲಿ ಪ್ರತಿಷ್ಟಾಪಿಸಿದರೆ ಅಪಾಯಕಾರಿ. ನನಗೆ ಅದ್ಭುತ ಜ್ಞಾಪಕ ಶಕ್ತಿ ಇದೆ ಎಂದು ಅಟೋ ಸಜೆಷನ್ (ಸ್ವ ಸಲಹೆ) ಕೊಟ್ಟುಕೊಳ್ಳಿ ಪರಿಣಾಮವೂ ಅದ್ಭುತವಾಗಿರುತ್ತದೆ. ಆಸಕ್ತಿ ವಲಯ ಬದಲಿಸಿ ನಿಮಗೆ ಕ್ರಿಕೆಟ್ ನಲ್ಲಿ ಆಸಕ್ತಿ ಇದ್ದರೆ ಯಾರು ಎಷ್ಟು ಶತಕ ಬಾರಿಸಿದರು? ಭಾರತ ಯಾವಾಗ ವಿಶ್ವ ಕಪ್ ಗೆದ್ದಿತು? ಯಾರು  ಬ್ಯಾಟಿಂಗ್  ದಾಖಲೆ ಸಾಧಿಸಿದ್ದಾರೆ ಎನ್ನುವ ಪ್ರಶ್ನೆಗಳಿಗೆ ನಿರಾಯಾಸವಾಗಿ ಉತ್ತರಿಸುತ್ತೀರಿ. ಒಂದು ವೇಳೆ ಸಿನಿಮಾದಲ್ಲಿ ಆಸಕ್ತಿ ಇದ್ದರೆ ಯಾವ ಸಿನಿಮಾದಲ್ಲಿ ಯಾರು ಹೀರೋ? ನಿರ್ದೇಶನ ಯಾರದು ಎಂಬಿತ್ಯಾದಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುತ್ತೀರಿ. ಸಂಗೀತದಲ್ಲಿ ಆಸಕ್ತಿ ಇದ್ದರೆ ಗೀತೆ ರಚನೆಕಾರರು ಯಾರು? ಹಾಡಿದವರು ಯಾರು? ಎನ್ನುವ ಪ್ರಶ್ನೆಗಳಿಗೆ ಅರೆ ಕ್ಷಣ ಯೋಚಿಸದೇ ಫಟಾ ಫಟ್ ಉತ್ತರಿಸಿ ಬಿಡುತ್ತಿರಿ. ಇಷ್ಟವಾದ ವಿಷಯಗಳನ್ನು ನೆನಪಿಡಲು ಕಷ್ಟವೆನಿಸುವುದಿಲ್ಲ. ಆದರೆ ಇಷ್ಟ ಇಲ್ಲದ ವಿಷಯ ಬಂದಾಗ ಮರೆವು ಜಾಸ್ತಿ ಇದೆ ಎನ್ನುವ ದೂರು ನೀಡುವ ನಿಮಗೆ ಇದೆಲ್ಲ ಉತ್ತರಿಸೋಕೆ ಹೇಗೆ ಸಾಧ್ಯ? ಎಂಬ ಪ್ರಶ್ನೆ ಭ್ರಮೆಯಲ್ಲಿರುವವರಿಗೆ ಹೆಚ್ಚಾಗಿ ಮೂಡುವುದಿಲ್ಲ. ಒಮ್ಮೆ ಪ್ರಶ್ನಿಸಿಕೊಂಡು ನೋಡಿ ಹೌದು ನನ್ನಲ್ಲಿ ಜ್ಞಾಪಕ ಶಕ್ತಿ ಅಗಾಧವಾಗಿದೆ. ಆದರೆ ನನ್ನ ಆಸಕ್ತಿ ವಲಯ ಬದಲಿಸಿದರೆ ನಾನು ಓದಿಗೆ ಸಂಬಂಧಿಸಿದ ಅಥವಾ ನನಗೆ ಬೇಕಾದ ವಿಷಯ ನೆನಪಿನಲ್ಲಿಟ್ಟುಕೊಳ್ಳಬಲ್ಲೆ ಎಂಬುದು ಸ್ಪಷ್ಟವಾಗುವುದು. ಪುನರಾವಲೋಕನ  ನೀವು ಓದಿದ ವಿಷಯಗಳನ್ನು ಮೇಲಿಂದ ಮೇಲೆ ಪುನರಾವಲೋಕನ ಮಾಡಿಕೊಳ್ಳುತ್ತಿರಬೇಕು  ಪುನರಾವರ್ತನೆಗೊಳ್ಳುವ ವಿಷಯಗಳನ್ನು ಮೆದುಳು ಅಷ್ಟು ಸಲೀಸಾಗಿ ಮರೆಯಲು ಸಾಧ್ಯವಿಲ್ಲ. ಪರೀಕ್ಷೆ ಬರೆಯುವಾಗ ಈ ವಿಷಯಗಳು ಖಂಡಿತ ನೆನಪಿಗೆ ಬರುವವು. ಒಮ್ಮೆ ಮನೆಯಲ್ಲಿ ಪ್ರಶ್ನೆ ಪತ್ರಿಕೆ ಬಿಡಿಸಿ ಪರೀಕ್ಷಿಸಿ ನೋಡಿ. ನಿಮಗೆ ಅಚ್ಚರಿ ಎನಿಸುತ್ತದೆ. ಪುನರಾವಲೋಕನ ಮನೋಬರಲವನ್ನು ಹೆಚ್ಚಿಸಿ ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ. ಅರಿಯದೇ ನೋಡದೇ ಯೋಚಿಸದೇ ಕಾರ್ಯ ಮಾಡಬಾರದು ಎಂದು ವಿಷ್ಣು ಶರ್ಮ ಹೆಳಿದ್ದಾನೆ. ಅಂತೆಯೇ ಓದಿದ ವಿಷಯಗಳನ್ನು ಅರ್ಥೈಸಿಕೊಂಡು ಪುನರಾವಲೋಕನ ಮಾಡಿಕೊಳ್ಳಿ. ಅಕ್ರೋನಿಮ್ಸ್ ಬಳಸಿ ಹತ್ತು ಹಲವು ಅಂಶಗಳುಳ್ಳ ದೊಡ್ಡ ದೊಡ್ಡ ಉತ್ತರಗಳನ್ನು ನೆನಪಿನಲ್ಲಿಕೊಟ್ಟುಕೊಳ್ಳುವುದು ತುಂಬಾ ಕಷ್ಟ ಎನಿಸುವುದು ಸಹಜ. ಕಂಠ ಪಾಠ ಮಾಡುವ ಪದ್ದತಿ ಇಲ್ಲಿ ಉಪಯೋಗಕ್ಕೆ ಬಾರದು. ಶ್ಲೋಕಗಳು ಪದ್ಯಗಳು ಸುಭಾಷಿತಗಳನ್ನು ನೆನಪಿಡಲು ಮಾತ್ರ ಕಂಠ ಪಾಠ ಸೂಕ್ತ. ಕಾಮನಬಿಲ್ಲಿನಲ್ಲಿರುವ ಏಳು ಬಣ್ಣಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ವಿಬ್ಗಾರ್ ಎಂದು ಅಕ್ಷರ ಮುದ್ರಿಕೆಯನ್ನು ಉಪಯೋಗಿಸುತ್ತಾರೆ.  ದೊಡ್ಡ ಉತ್ತರಗಳ ಅಂಶಗಳ ಮೊದಲ ಅಕ್ಷರಗಳನ್ನು ಒಟ್ಟುಗೂಡಿಸಿದರೆ ಅಕ್ಷರ ಮುದ್ರಿಕೆ (ಸಣ್ಣ ಪದಗಳು) ಅಬ್ರಿವೇಶನ್ಸ್ನಂತೆ  ಆಗುತ್ತದೆ. ನೆನಪಿಟ್ಟುಕೊಳ್ಳಲು ಅನುಕೂಲವಾಗುವಂತೆ ವಾಕ್ಯವನ್ನು ರಚಿಸಿಕೊಳ್ಳಬಹುದು.ಅದೂ ಪರಿಣಾಮಾಕಾರಿ ಆಗಿರುತ್ತದೆ. . ಬೇಡ ಒತ್ತಡ ಕೇಳಿದ ಓದಿದ ನೋಡಿದ ವಿಷಯಗಳು ಮನದಲ್ಲಿ ಅಚ್ಚೊತ್ತಿದಮತೆ ಉಳಿಯಬೇಕೆಂದರೆ ಮನಸ್ಸು ಪ್ರಫುಲ್ಲವಾಗಿರಬೇಕು. ಒತ್ತಡದಿಂದ ಕೂಡಿದ್ದರೆ ಸಣ್ಣ ಸಂಗತಿಗಳನ್ನು ನೆನಪಿಲ್ಲಿಡಲು ಸಾಧ್ಯವಾಗುವುದಿಲ್ಲ. ಪ್ರಶಾಂತ ವಾತಾವರಣದಲ್ಲಿ ನಿಮ್ಮ ಓದು ಬರಹ ಸಾಗಲಿ. ದಿನ ನಿತ್ಯ ಕಲಿತ ಹೊಸ ಸಂಗತಿಗಳನ್ನು ಪುರ್ನಮನನ ಮಾಡಿಕೊಳ್ಳಿ. ಶ್ರೀರಂಗರು ಹೇಳಿದಂತೆ ಮಾನವರಿಗೆ ವಿಚಾರಕ್ಕಿಂತ ಆಚಾರದ ಮಹತ್ವವಿದೆ. ಬುದ್ಧಿಗಿಂತ ಶ್ರದ್ಧೆಗೆ ಮಹತ್ವವಿದೆ. ಹೀಗಾಗಿ ನೆನಪಿನ ಶಕ್ತಿಗೆ ಶ್ರದ್ಧೆ ಅತಿ ಮುಖ್ಯವಾದುದು. ಏಕಾಗ್ರತೆ ವಿವೇಕಾನಂದರು ನುಡಿವಂತೆ ಇಂದ್ರೀಯಗಳು ಪ್ರತಿಕ್ಷಣದಲ್ಲೂ ನಮ್ಮನ್ನು ಮೋಸಪಡಿಸುತ್ತಿರುತ್ತವೆ.ನಮ್ಮೆಲ್ಲ ಇಂದ್ರೀಯಗಳನ್ನು ನಿಗ್ರಹಗೊಳಿಸಿ ಒಂದೇ ಕಡೆ ಚಿತ್ತದ ಗಮನ ಹರಿಸುವುದೇ ಏಕಾಗ್ರತೆ. ಇಂದ್ರೀಯಗಳು ಯಾವಾಗಲೂ ಪರತಂತ್ರವಾಗಿವೆ. ಹೊರಗಣ ತಂತ್ರಗಳನ್ನು ಅವಲಂಬಿಸಿವೆ. ಹೀಗಾಗಿ ಯಾವುದೇ ಕೆಲಸ ಕಾರ್ಯದಲ್ಲಿ ತೊಡಗಿರುವಾಗ ಅದರಾಚಿಗಿನ ವಿಷಯವನ್ನು ಎಂದಿಗೂ ಯೋಚಿಸಬಾರದು. ವರ್ತಮಾನದಲ್ಲಿ ಮಾತ್ರ ಚಿತ್ತ ಮುಳಗಿರಬೇಕು. ಅಡುಗೆಗೆ ಉಪ್ಪು ಹೇಗೋ ಹಾಗೆ ಜ್ಞಾಪಕ ಶಕ್ತಿಯ ವೃದ್ಧಿಗೆ ಏಕಾಗ್ರತೆ. ಏಕಾಗ್ರತೆ ಇಲ್ಲದೇ ಸಣ್ಣ ಸಂಗತಿಯನ್ನು ಮೆದುಳಿನಲ್ಲಿ ದಾಖಲಿಸಲಾಗುವುದಿಲ್ಲ.  ಮನೆ ಮದ್ದು ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುವ ಮನೆ ಮದ್ದುಗಳನ್ನು ಬಳಸಿ. ಸರಿಯಾದ ಸಮಯಕ್ಕೆ  ಸಮತೋಲಿತ ಆಹಾರ, ನೀರಿನ ಸೇವನೆ ವ್ಯಾಯಾಮ ನಿದ್ದೆ ಮೆದುಳಿಗೆ ಕಸರತ್ತು ನೀಡುವ ಮೆಮರಿ ಗೇಮ್ಸ್ಗಳನ್ನು ಆಡಿ ಅವು ಮೆದುಳನ್ನು ಬಲಪಡಿಸುತ್ತವೆ ಅದರೊಂದಿಗೆ ಈ ಎಲ್ಲವೂ ಜ್ಞಾಪಕ ಶಕ್ತಿಗೆ ಪರೋಕ್ಷವಾಗಿ ಪುಷ್ಟಿ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಜ್ಞಾನಿಗಳು ಮತ್ತು ಮಾನಸಿಕ ತಜ್ಞರು ಜ್ಞಾಪಕ ಶಕ್ತಿ ಹೆಚ್ಚಿಸಲು ಅನೇಕ ವಿಧಾನಗಳನ್ನು ಕಂಡು ಹಿಡಿದಿದ್ದಾರೆ. ಅವುಗಳನ್ನು ತಿಳಿದು ಅಳವಡಿಸಿಕೊಳ್ಳಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಮರೆವಿಗೆ ಮದ್ದು ನೀಡುವ ಪುಸ್ತಕಗಳನ್ನು ಓದಿ. ಜ್ಞಾಪಕ ಸಕ್ತಿ ಹೆಚ್ಚಿಸಿಕೊಂಡು ಗೆಲುವಿನ ನಗೆ ಬೀರಿ. ********** ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

ಅಂಕಣ ಸಂಗಾತಿ, ಮುಖಾಮುಖಿ

ಹೆತ್ತಿರುವ ತಾಯಿ, ನಮ್ಮನ್ನು ಹೊತ್ತಿರುವ ಭೂಮಿಗಿಂತ ದೊಡ್ಡ ಧರ್ಮವಿಲ್ಲ’ ಫಾಲ್ಗುಣ ಗೌಡ ತಣ್ಣಗಿನ ವ್ಯಕ್ತಿತ್ವದ ಸರಳ ಮನುಷ್ಯ ನಮ್ಮ ಫಾಲ್ಗುಣ ಗೌಡ. ಹುಟ್ಟಿದ್ದು ಅಂಕೋಲಾ ತಾಲೂಕಿನ ಅಚವೆ. ಕಾಲೇಜು ಹಂತದಲ್ಲಿ ಬರವಣಿಗೆ ಪ್ರಾರಂಭಿಸಿದರು. ಜಿ.ಸಿ .ಕಾಲೇಜಿನ ಭಿತ್ತಿ ಪತ್ರ ವಿಭಾಗದಿಂದ ಕವಿತೆ ಬರೆಯಲು ಪ್ರಾರಂಭ.  ಬೆಂಗಳೂರಿನ ಕ್ರೈಸ್ಟ್ ಕಾಲೇಜು ಏರ್ಪಡಿಸಿದ ಬೇಂದ್ರೆ ಸ್ಮ್ರತಿ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಸತತ ಎರಡು ಸಲ ಬಹುಮಾನ ಪಡೆದರು ಪಾಲ್ಗುಣ.  ಬೆಂಗಳೂರಿನ ಸಾಂಸ್ಕೃತಿಕ ಪತ್ರಿಕೆ  `ಸಂಚಯ’ ನಡೆಸುವ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಸತತ ಐದು ಬಾರಿ ಬಹುಮಾನ ಪಡೆದಿದ್ದಾರೆ. ಕಾರವಾರ, ಧಾರವಾಡ, ಭದ್ರಾವತಿ  ಆಕಾಶವಾಣಿ ಕೇಂದ್ರಗಳಲ್ಲಿ ಕತೆ, ಕವಿತೆ ಪ್ರಸಾರವಾಗಿವೆ. ಗೋವಾದಲ್ಲಿ ನಡೆದ ಅಂತರರಾಜ್ಯ ಕವಿಗೋಷ್ಟಿ ಸೇರಿದಂತೆ ತಾಲ್ಲೂಕು, ಜಿಲ್ಲಾ ಮಟ್ಟದ ಕವಿಗೋಷ್ಟಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇವರ ಮೊದಲ ಕವನ ಸಂಕಲನ `ಮಾಮೂಲಿ ಮಳೆಯಲ್ಲ’ ಪ್ರಕಟಿಸಿದೆ. ` ಅಶಾಂತ ಕಡಲು ಪ್ರಶಾಂತ ಮುಗಿಲು’ ಎಂಬ ಪ್ರಬಂಧ ಸಂಕಲನ ಪ್ರಕಟವಾಗಿದೆ. ಚೌಕಿಮನೆ(ಕವನ ಸಂಕಲನ), ಬಕ್ಕೆಮರ (ಕಥಾ ಸಂಕಲನ) ಸಿದ್ದತೆಯಲ್ಲಿದ್ದಾರೆ.  ದಾಂಡೇಲಿಯ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ `ಯುವ ಕವಿ ಪ್ರಶಸ್ತಿ’ ನೀಡಿ ಗೌರವಿಸಿದೆ.ಕಾರವಾರದ ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ಕೆಲಸ ಮಾಡುತ್ತ ನಗರದ ದಿವೇಕರ ವಾಣಿಜ್ಯ ವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಸದ್ಯ ಅಂಕೋಲೆಯ ಪಿ.ಎಂ.ಸಂಯುಕ್ತ ಪ.ಪೂ.ಕಾಲೇಜಿನಲ್ಲಿ  ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. …………………………………  ಕತೆ, ಕವಿತೆ ಯಾಕೆ ಬರೆಯುತ್ತೀರಿ? ಎಲ್ಲೋ ಕಂಡ ಸನ್ನಿವೇಶಗಳು, ಸಂದರ್ಭಗಳು ನನ್ನ ಮನಸ್ಸನ್ನು ತಟ್ಟಿದರೆ ತಕ್ಷಣ ಬರೆಯಲು ತೊಡಗುತ್ತೇನೆ. ಕೆಲವು ಪಾತ್ರಗಳು ನನ್ನನ್ನು ಕಾಡಿದರೆ ಅದೇ ವಸ್ತುವಾಗಿ ಒಂದು ಕಥೆಯಾಗಬಹುದು. ಯಾವುದೋ ಒಂದು ಸನ್ನಿವೇಶ ನನ್ನದೆಯ ಭಾವನೆಗಳನ್ನು ಉಕ್ಕಿಸಿದರೆ ಅದು ಕವಿತೆಯಾಗುತ್ತದೆ. ಯಾವುದಕ್ಕೂ ಸ್ಫೂರ್ತಿ ಬೇಕೇ ಬೇಕು. ಸ್ಫೂರ್ತಿ ಸಿಕ್ಕರೆ ಅದನ್ನು ಕಥೆ, ಕವಿತೆಯಾಗಿಸುವುದಕ್ಕೆ ಪ್ರತಿಭೆ ಕೂಡಾ ಬೇಕಾಗುತ್ತದೆ. ಬರೆಯುವುದಕ್ಕೆ ಶುರು ಮಾಡಿದರೆ ಮಾತ್ರ ಮನಸ್ಸಿನ ಕದ ತೆರೆದು ಭಾವನೆಗಳನ್ನು ಉದ್ದೀಪನಗೊಳಿಸುತ್ತದೆ. ತನಗೆ ತಾನೇ ಹೇಗೆ ಬರೆಯಬೇಕೆಂದು ನಿರ್ದೇಶಿಸುತ್ತದೆ. ನನ್ನ ಪ್ರೀತಿಯ ಚಿತ್ತಾಲರು ಹೇಳಿದ ಹಾಗೆ ‘ನಾನು ತಿಳಿದದ್ದನ್ನು ಬರೆಯುವುದಲ್ಲ, ಬರೆಯುವುದರ ಮೂಲಕ ತಿಳಿದುಕೊಳ್ಳಲು ಬಯಸುತ್ತೇನೆ’. ಈ ಹೇಳಿಕೆ ನನಗೆ ತುಂಬಾ ಇಷ್ಟ. ಆಗಲೇ ಹೇಳಿದಂತೆ ನನಗೆ ಕಾಡಿದ ಪಾತ್ರಗಳು, ಸನ್ನಿವೇಶಗಳು ಕಾಡಿದ್ದರಿಂದಲೇ ನಾನು ಬರೆಯುವುದಕ್ಕೆ ತೊಡಗುತ್ತೇನೆ. ಕತೆ, ಕವಿತೆ ಹುಟ್ಟುವ ಕ್ಷಣ ಯಾವುದು?  ಅಕಾರಣ ಭಾವವೊಂದು ಸ್ಪೂರ್ತಿಯ ಬಿಂದುವಿನಲ್ಲಿ ಲೀನವಾದಾಗ ಮೂರ್ತರೂಪ ಪಡೆದು ಕೆಲವೇ ಸಾಲುಗಳಲ್ಲಿ ಬರೆದರೆ ಅದು ಕವಿತೆ. ಅದು ವಿಸ್ತಾರ ಪಡೆದರೆ ಕಥೆಯಾಗುತ್ತದೆ. ಆ ಕ್ಷಣ ಲೌಕಿಕವಾದ್ದು. ಅದು ಅಕಾರಣ ಪ್ರೀತಿಯಂತೆ. ನಾವು ಅನುಭವಿಸಿದ ನೋವುಗಳು ಕೂಡ ಕಥೆ, ಕವಿತೆಯ ರೂಪ ಪಡೆಯುತ್ತದೆ. ಕವಿಯಾದವ ಆ ಕ್ಷಣಕ್ಕಾಗಿ ಕಾಯಬೇಕಾಗುತ್ತದೆ. ಕವಿತೆಯ ಭಾವವೋ ಕಥೆಯ ಪಾತ್ರವೋ, ವಸ್ತುವೋ ಮನಸ್ಸಿನ ತುಂಬ ತುಂಬಿ ಅದು ಬರವಣಿಗೆ ರೂಪ ಪಡೆದಾಗಲೇ ಮನಸ್ಸು ನಿರಾಳತೆ ಅನುಭವಿಸುವುದು. ಹೆಣ್ಣು ಅನುಭವಿಸುವ ಹೆರಿಗೆ ನೋವನ್ನು ಒಬ್ಬ ಕವಿ, ಕಥೆಗಾರನೂ ಅನುಭವಿಸುತ್ತಾನೆ.  ನಿಮ್ಮ ಕಥೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಸಾಮಾನ್ಯವಾಗಿ ದುರ್ಬಲ ವರ್ಗದವರ ಮೇಲೆ ಮಾಡುವ ಉಳ್ಳವರ ಶೋಷಣೆ ಪ್ರೀತಿಯ ಅಗಾಧತೆ ಸಮಾಜವನ್ನು ನಡೆಯುವ ಘಟನೆಗಳು ಉದ್ಯೋಗಸ್ತರ ಮಾನಸಿಕ ತಾಕಲಾಟಗಳು, ದ್ವೇಷ ತುಂಬಿದ ವ್ಯಕ್ತಿತ್ವಗಳ ಮನೋಧರ್ಮಗಳು ಕಥೆಯಾಗುವಲ್ಲಿ ಕಾರಣವಾಗಿವೆ. ನನಗೆ ತುಂಬಾ ಕಾಡುವ ವಿಷಯವೆಂದರೆ ಪ್ರಾಮಾಣಿಕತೆ, ನಿಷ್ಠೆಗೆ ಈಗ ಕವಡೆ ಕಾಸಿನ ಕಿಮ್ಮತ್ತಿಲ್ಲದಿರುವುದು. ಅಸೂಯೆ ತುಂಬಿದ ಸಣ್ಣತನದ ವ್ಯಕ್ತಿತ್ವಗಳು, ಹೆದ್ದಾರಿಯಲ್ಲಿ ಹೂಮಾರಿ ಶಾಲೆಗೆ ಹೋಗುವ ಹುಡುಗಿಯರು, ಹತ್ತಾರು ಕೀಲೋಮೀಟರ್ ಬೆಟ್ಟ ಸುತ್ತಿ ಸೌದೆ ತಂದು, ಮತ್ತೆ ಅಷ್ಟೇ ಕೀಲೋ ಮೀಟರ್ ಸೌದೆ ಹೊತ್ತು ಅದನ್ನು ಕಡಿಮೆ ದುಡ್ಡಿಗೆ ಮಾರಿ ಮನೆಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಮನೆ ಮುನ್ನಡೆಸುವ ‘ಲಂಕೇಶರ ಅವ್ವ’ನಂತ ನನ್ನ ಜನಾಂಗದ ಮಹಿಳೆಯರು. ಮನುಷ್ಯನಲ್ಲಿ ಮಾನವೀಯತೆ ಕಳಕೊಂಡಾಗ ಪ್ರಾಣಿಗಳಲ್ಲಿ ಅದು ವ್ಯಕ್ತವಾಗುತ್ತದಲ್ಲ ಅದು ನನ್ನನ್ನು ತುಂಬಾ ಕಾಡುತ್ತದೆ. ವಿಕಲಚೇತನ ವ್ಯಕ್ತಿ ಇರುವ ಒಂದೇ ಅದೂ ಸೊಟ್ಟಗಾಗಿರುವ ಕಾಲಿನಲ್ಲಿ ಚಿತ್ರ ಬಿಡಿಸಿ, ಬಣ್ಣ ತುಂಬಿ ಅದನ್ನು ದಾರಿಹೋಕರಿಗೆ ಮಾರಿ ಮನೆಯಲ್ಲಿರುವ ತಾಯಿ ತಂಗಿಯನ್ನು ಸಾಕುವ ಬೆಂಗಳೂರಿನ ಒಬ್ಬ ವ್ಯಕ್ತಿಯೊಬ್ಬ ನನ್ನನ್ನು ತುಂಬಾ ಕಾಡುತ್ತಾನೆ.  ಕಥೆ, ಕವಿತೆಗಳಲ್ಲಿ ಬಾಲ್ಯ ಇಣುಕಿದೆಯೇ? ಹೌದು. ಬಾಲ್ಯವಿಲ್ಲದೆ ಯಾವುದು ಇಲ್ಲ. ನಾನು ಬರೆಯುವ ಕಥೆ ಮತ್ತು ಕವಿತೆಗಳಲ್ಲಿ ಬಾಲ್ಯದ ಅನುಭವಗಳೇ ಜಾಸ್ತಿಯಾಗಿವೆ. ಬಾಲ್ಯ ಅನುಭವಿಸದೆ ಹರೆಯಕ್ಕೆ ಅರ್ಥವಿಲ್ಲ. ಈಗ ಮಕ್ಕಳ ಬಾಲ್ಯವೆಲ್ಲಾ ಹೋಮ್ ವರ್ಕ, ರಿಯಾಲಿಟಿ ಶೋಗಳ ತಯಾರಿ, ಮೊಬೈಲಿನ ವಿಡಿಯೋ ಗೇಮ್‌ಗಳಲ್ಲಿ. ಮಕ್ಕಳ ಪ್ರತಿಭಾ ಪ್ರದರ್ಶನದ ಹೆಸರಿನಲ್ಲಿ, ಪ್ರಖ್ಯಾತಿಯ ಹುಚ್ಚಿನ ಪಾಲಕರು ಮಕ್ಕಳಿಗೆ ಉಂಟು ಮಾಡುವ ಒತ್ತಡ ಕಂಡಾಗ ಅಚ್ಚರಿಯೆನಿಸುತ್ತದೆ. ಬಾಲ್ಯದ ಮುಗ್ಧತೆ ಅನುಭವಿಸುವುದನ್ನು ಪಾಲಕರು ನೋಡಬೇಕು. ಆ ನಂತರ ಪ್ರತಿಭಾ ಪ್ರದರ್ಶನ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು.  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ‘ಸೇವೆ’ ಎನ್ನುವುದು ಅರ್ಥ ಕಳೆದು ಕೊಂಡಿದೆ ಪ್ರಸ್ತುತ ರಾಜಕೀಯ ಅವಕಾಶವಾದಿ ರಾಜಕಾರಣವಾಗಿದೆ. ಮೌಲ್ಯಾಧಾರಿತ ರಾಜಕಾರಣ ಎಂದೋ ಕಳೆದು ಹೋಗಿದೆ. ವಿರೋಧ ಪಕ್ಷ ಇದ್ದು ಇಲ್ಲದಂತಾದ ಎಂಬತ್ತರ ದಶಕದಲ್ಲಿ ಲಂಕೇಶರ ‘ಲಂಕೇಶ ಪತ್ರಿಕೆ’ ಪ್ರಬಲ ವಿರೋಧ ಪಕ್ಷದಂತೆ ಕೆಲಸ ಮಾಡುತ್ತಿತ್ತು. ಅದು ದೇಶಕ್ಕೇ ಮಾದರಿ. ಯಾವ ಜಾಹಿರಾತಿಲ್ಲದೇ ಪತ್ರಿಕೆ ನಡೆಸಿ ರಾಜಕೀಯ ಪಕ್ಷಗಳನ್ನು, ಸರ್ಕಾರವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋದದ್ದು ಎಲ್ಲಾ ತರದ ಪತ್ರಿಕೆಗಳಿಗೆ ಮಾದರಿ. ಪತ್ರಿಕೆಗಳೂ ಕೂಡಾ ಪಕ್ಷಗಳ ಮುಖವಾಣಿಯಾಗಬಾರದು. ನಮ್ಮ ದಿನಕರ ದೇಸಾಯಿಯಂತವರು ಸೇವೆಗಾಗಿ ರಾಜಕೀಯ ಪ್ರವೇಶ ಮಾಡಿದರು. ಅವರು ಕಟ್ಟಿದ ಶಿಕ್ಷಣ ಸಂಸ್ಥೆ ಇಡೀ ಜಿಲ್ಲೆಯನ್ನು ಆವರಿಸಿದೆ. ಶಿಕ್ಷಣ, ರೈತ ಹೋರಾಟ, ದುರ್ಬಲ ವರ್ಗದವರ ಅಭ್ಯುದಯ ಅವರ ನಿಸ್ವಾರ್ಥ ಸೇವೆಯನ್ನು ಹೇಳುತ್ತದೆ. ಆಗಿನ ಅವರ ರೈತ ಹೋರಾಟ ಕರ್ನಾಟಕದ ಮೊದಲ ರೈತ ಹೋರಾಟ ಎಂದು ಲಂಕೇಶ ಕರೆದಿದ್ದರು. ಕಾಗೋಡ ಹೋರಾಟದ ಭರಾಟೆಯಲ್ಲಿ ದೇಸಾಯಿಯವರ ರೈತ ಹೋರಾಟಕ್ಕೆ ಅಷ್ಟು ಪ್ರಭಾವ ಸಿಗಲಿಲ್ಲವೆನ್ನಬೇಕು. ಈಗಲೂ ಕೂಡ ಉತ್ತಮ ರಾಜಕಾರಣಿಗಳು ಖಂಡಿತಾ ಇದ್ದಾರೆ. ಅಂತವರಿಂದಲೇ ನಾಡಿನ ಅಭಿವೃದ್ಧಿಯನ್ನು ನೀರಿಕ್ಷಿಸಬಹುದು. ಹಣ, ಅಧಿಕಾರದ ದುರಾಸೆ ಇಲ್ಲದ ಯುವಕರು ಕಾರಣಕ್ಕೆ ಬರಬೇಕು. ಮತ ಕೂಡ ಮಾರಾಟದ ಸರಕಾಗಿರುವುದು ಪ್ರಜಾಪ್ರಭುತ್ವದ ದೌರ್ಭಾಗ್ಯ. ರಾಮಕೃಷ್ಣ ಹೆಗಡೆ, ದಿನಕರ ದೇಸಾಯಿ, ಹೆಚ್ಚೇನು ಕೈಗಾ ಅಣುಸ್ಥಾವರ ಸ್ಥಳಾಂತರ ಮಾಡಲು ಚುನಾವಣೆಗೆ ನಿಂತ ಕಾರಂತರನ್ನು ಸೋಲಿಸಿದ ಜಿಲ್ಲೆ ನಮ್ಮದು.  ಧರ್ಮ ದೇವರು ವಿಷಯದಲ್ಲಿ ನಿಮ್ಮ ನಿಲುವೇನು?  ಧರ್ಮದ ಬಗ್ಗೆ ಮಾತಾಡುವುದೇ ಕಷ್ಟ. ಅದೊಂದು ಧರ್ಮ ಸೂಕ್ಷ್ಮ. ದಯವೇ ಧರ್ಮದ ಮೂಲವೆಂದರು ಬಸವಣ್ಣನವರು. ಮನುಷ್ಯ ಮಾನವೀಯವಾಗುವುದೇ ಧರ್ಮವೆನ್ನುವುದು ನನ್ನ ಭಾವನೆ. ನಮ್ಮ ಆಚಾರ ವಿಚಾರಗಳು ಸಕಲ ಜೀವಿಗಳ ಬಗ್ಗೆ ಪ್ರೀತಿ ತೋರುವುದೇ ನಿಜವಾದ ಧರ್ಮ ಮತ್ತೆ ‘ನಮ್ಮನ್ನು ಹೆತ್ತಿರುವ ತಾಯಿ, ನಮ್ಮನ್ನು ಹೊತ್ತಿರುವ ಭೂಮಿತಾಯಿಗಿಂತ ದೊಡ್ಡ ಧರ್ಮವಿಲ್ಲ’ವೆಂದು ನನಗನಿಸುತ್ತದೆ. ಈ ಸೃಷ್ಠಿಯ ಹಿಂದೆ ಒಂದು ಕಾಣದ ಕೈ ಕೆಲಸ ಮಾಡುತ್ತಿದೆ. ಅದೇ ದೇವರು. ಅದಕ್ಕೆ ಮನುಷ್ಯ ಹಲವು ಹೆಸರುಗಳನ್ನಿಟ್ಟು ಪೂಜಿಸುತ್ತಿರುವದು. ಅದು ಅವರವರ ನಂಬಿಕೆಗೆ ಬಿದ್ದದ್ದು. ಯಾಕೆಂದರೆ ನಮ್ಮ ಬದುಕು ನಿಂತಿರುವುದೇ ಪ್ರೀತಿ, ವಿಶ್ವಾಸ, ನಂಬಿಕೆಗಳ ಆಧಾರದ ಮೇಲೆ. ಅಲ್ಲವೇ? ಅದರ ಸಾಕ್ಷಾತ್ಕಾರ ಆದವರಿಗೆ ಅದರ ಬಗ್ಗೆ ನಂಬಿಕೆ ಇರುತ್ತದೆ. ರಾಜಕುಮಾರ ಹೇಳ್ತಾರೆ. “ಮಕ್ಕಳೇ ದೇವರು, ದೇವರು ಒಂದು ಮಗು” ಅಂತ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನಿಸುತ್ತದೆ?  ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣ ಸದಾ ನಡೆಯುತ್ತಿದ್ದರೆ ಭಾಷೆ ಮತ್ತು ಸಂಸ್ಕೃತಿಯ ಕುರಿತು ಜನಗಳಿಗೆ ಜಾಗೃತಿ ಮೂಡಿಸಿದಂತಾಗುತ್ತದೆ. ಜಾಗತೀಕರಣದ ಮಾರಿ ನಮ್ಮ ಭಾಷೆ, ಸಂಸ್ಕೃತಿಯನ್ನು ಹೊಸಕಿ ಹಾಕುತ್ತಿದೆ. ಜಾಗತೀಕರಣ ಎಂಬ ವಿಷಕನ್ಯೆ ಮನೆ ಬಾಗಿಲಿಗೆ ಬಂದು ನಿಂತಿದೆ. ಅದರ ಕಬಂಧ ಬಾಹುಗಳ ಆಲಿಂಗನದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಆದರೆ ಅದಕ್ಕೆ ಸಮನಾಗಿ ನಮ್ಮ ಭಾಷೆಯನ್ನು ಉಳಿಸುವ, ಸಂಸ್ಕೃತಿಯನ್ನು ಪೋಷಿಸುವ ಕೆಲಸ ನಿರಂತರ ನಡೆಯಬೇಕು. ನಮ್ಮ ಜನಪದರ ಹಾಡುಗಳು, ಗುಮಟೆ ಪಾಂಗ್, ಸುಗ್ಗಿ ಕುಣಿತ, ತರ‍್ಲೆ, ಪುಗಡಿ ಜೊತೆಗೆ ಬಹುತೇಕ ಜನಾಂಗಗಳಲ್ಲಿ ಉಳಿದಿರುವ ಜನಪದ ಪ್ರಕಾರಗಳನ್ನು ಗುರುತಿಸಿ ಕಲಾವಿದರಿಗೆ ವೇದಿಕೆ, ಗೌರವಧನ ನೀಡಿ ಪ್ರೋತ್ಸಾಹಿಸಬೇಕು. ಅವರಿಗೆ ಸರ್ಕಾರ ಪಿಂಚಣಿ ನೀಡುವ ವ್ಯವಸ್ಥೆ ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆಯ ಕರಾವಳಿ ಉತ್ಸವ, ಹಂಪಿ ಉತ್ಸವ, ನಮ್ಮ ಜಿಲ್ಲೆಯಲ್ಲಿ ನಡೆಯುವ ಉತ್ಸವಗಳ ಕಾರ್ಯ ಖಂಡಿತಾ ಶ್ಲಾಘನೀಯ. ಜಿಲ್ಲೆಯ ಕಲಾವಿದರಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಯಾಕೆಂದರೆ ನಿಜವಾಗಿಯೂ ಭಾಷೆ ಸಂಸ್ಕೃತಿ ಉಳಿದಿರುವುದು ಹಳ್ಳಿಗಳಲ್ಲಿ. ಬೆಂಗಳೂರು ತುಮಕೂರಿನವರೆಗೆ ವಿಸ್ತಾರ ಪಡೆದರೆ ಅದು ಅಭಿವೃದ್ಧಿಯಲ್ಲ ; ನಾಡಿನ ಬೆಳವಣಿಗೆಯ ಮೂಲ ಹಳ್ಳಿಗಳಲ್ಲಿದೆ ಎಂದು ಮಹಾತ್ಮ ಗಾಂದೀಜಿ ಹೇಳ್ತಾರೆ. ಹಳ್ಳಿಯ ಕಲಾವಿದರನ್ನು ಗೌರವಿಸುವ ಕೆಲಸ ಮಾಡಿದರೆ ಹಾಗೆಯೇ ಅವರ ನಂತರದ ಪೀಳಿಗೆಯನ್ನು ಪ್ರೋತ್ಸಾಹಿಸಿದರೆ ಸಂಸ್ಕೃತಿ ಉಳಿಯುತ್ತದೆ. ಈಗ ಬೆಳಂಬಾರದ ಸುಗ್ಗಿ ಜನಪದ ಪ್ರಕಾರಕ್ಕೆ ಯಾವ ಜಾಗತೀಕರಣದ ಬಿಸಿ ಇನ್ನೂ ತಟ್ಟಿಸಿಕೊಂಡಿಲ್ಲ. ಒಂದೊಂದು ತುರಾಯಿ ಮಾಡಿಸಲು ಸಾವಿರಗಟ್ಟಲೆ ಖರ್ಚು ಮಾಡುವ ಆ ಹಾಲಕ್ಕಿಗಳಿಗೆ ಸರ್ಕಾರ ಇಲಾಖೆಗಳು ಪ್ರೋತ್ಸಾಹಿಸಬೇಕು. ನಮ್ಮ ಅಂಕೋಲಾ, ಕಾರವಾರ ಮತ್ತು ಜಿಲ್ಲೆಯ ಜನಸ್ಪಂದಿ ಪತ್ರಕರ್ತರು ಇಲಾಖೆಗಳ ಗಮನ ಸೆಳೆಯಬೇಕು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?  ಸಾಹಿತ್ಯದ ರಾಜಕಾರಣದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಪಕ್ಷ ಪಂಗಡಗಳನ್ನು ಬಿಟ್ಟು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಗಬೇಕು. ನಿಜವಾದ ಸಾಹಿತ್ಯಕ್ಕೆ ಕೃತಿಗೆ ಮನ್ನಣೆ ಸಿಗಬೇಕು. ಸುಮ್ಮನೆ ಕೂತು ಬರೆಯುವುದು, ಪ್ರಶಸ್ತಿ ಪುರಸ್ಕಾರಗಳ ಹಿಂದೆ ಬೀಳದೆ ಬರೆಯುವುದು. ಬರೆಯುವುದರ ಮೂಲಕ ತಿಳಿದುಕೊಳ್ಳಲು ಬಯಸುವುದು, ಆರೋಗ್ಯಕರ ಸಮಾಜವನ್ನು ಕಾಪಾಡಿಕೊಂಡು ಹೋಗುವಂತಹ ಬರಹಗಳನ್ನು ಬರೆಯುವುದು ಒಬ್ಬ ಬರಹಗಾರನ ಜವಾಬ್ದಾರಿಯಾಗಬೇಕು. ‘ನಾನು ತಿಳಿದಿದ್ದನ್ನು ಬರೆಯಲು ಪ್ರಯತ್ನಿಸುವುದಿಲ್ಲ. ಬರೆಯುವುದರ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದು ನನ್ನ ಪ್ರೀತಿಯ ಚಿತ್ತಾಲರು ಹೇಳುತ್ತಾರೆ. ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತಿದೆ? ಈ ಬಗ್ಗೆ ನಾನು ಏನನ್ನೂ ಪ್ರತಿಕ್ರಿಯಿಸುವುದಿಲ್ಲ.  ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಸದ್ಯ ಕಾವ್ಯ ಬರೆಯುತ್ತಿರುವೆ. ಕಥೆ ಬರೆಯುವುದು ನನ್ನದೇ ಒತ್ತಡಗಳ ಮಧ್ಯೆ ನಿಂತು ಹೋಗಿದೆ. ಮತ್ತೆ ಬಿಡುವು ಮಾಡಿಕೊಂಡು ಸುಮ್ಮನೆ ಬರೆಯಬೇಕು. ಇನ್ನು ತುಂಬಾ ಓದಬೇಕು. ಕವಿತೆ, ಕಥಾ ಸಂಕಲನ ಪ್ರಕಟಿಸಬೇಕು. ಒಂದು ಕಾದಂಬರಿ ಬರೆಯುವ ಇರಾದೆ ಇದೆ. ಜಯಂತ ಸರ್ ಕಾದಂಬರಿ ಬರೆ ಎಂದು ಹೇಳುತ್ತಿರುತ್ತಾರೆ. ಅವರ ಕಾದಂಬರಿ ನೀರಿಕ್ಷೆಯಲ್ಲಿ ನಾವಿದ್ದೇವೆ. ಇನ್ನು ನನ್ನ ನೆಚ್ಚಿನ ಮತ್ತು ಕಾಡಿದ ಸಾಹಿತಿಗಳು ಹಲವಾರು ಜನ ಇದ್ದಾರೆ. ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ಇಷ್ಟವಾಗುತ್ತಾರೆ. ಜಯಂತ್ ಸರ್ ಹೇಳಿದಂತೆ ಅವರನ್ನು ಇಷ್ಟ ದೇವತೆಗಳು ಎನ್ನುತ್ತೇವೆ. ಶಿವರಾಮ ಕಾರಂತ, ತೇಜಸ್ವಿ, ಲಂಕೇಶ, ಅನಂತಮೂರ್ತಿ, ಚಿತ್ತಾಲ, ಬರಗೂರು, ಜಯಂತ ಕಾಯ್ಕಿಣಿ, ಎಸ್. ಮಂಜುನಾಥ ಮುಂತಾದವರು ನನಗೆ ಬಹಳ ಇಷ್ಟ. ಶಿವರಾಮ ಕಾರಂತರ ಬಗ್ಗೆ ಅವರ ಪರಿಸರ ಪ್ರೀತಿಯ ಕಾರಣಕ್ಕೆ ಬಹಳ ಗೌರವ. ಚಿತ್ತಾಲರ ‘ಸೆರೆ’ ಕಥೆ ನನ್ನನ್ನು ಕಥೆಗಾರನನ್ನಾಗಿ ಮಾಡಿತ್ತು. ಅವರ ಶೈಲಿಯ

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಶತಮಾನದ ಕವಿ ಯೇಟ್ಸ್

ಅಂಕಣ ಬರಹ ಶತಮಾನದ ಕವಿ ಯೇಟ್ಸ್ ಅನುವಾದ :ಡಾ. ಯು.ಆರ್.ಅನಂತಮೂರ್ತಿಪ್ರ : ಅಭಿನವ ಪ್ರಕಾಶನಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೭೫಻ಪುಟಗಳು : ೧೨೮ ಜಗತ್ಪ್ರಸಿದ್ಧ ಇಂಗ್ಲಿಷ್ ಕವಿ ಡಬ್ಲಿಯೂ.ಬಿ.ಯೇಟ್ಸ್ನ ಮಹ ತ್ವದ ೧೭ ಕವನಗಳ ಅನುವಾದ ಈ ಸಂಕಲನದಲ್ಲಿದೆ.  ಜೊತೆಗೆ ಕವಿ-ಕಾವ್ಯ ಪರಿಚಯ,ಪ್ರವೇಶಿಕೆ ಮತ್ತು ವಿಶ್ಲೇಷ ಣೆಗಳೂ ಇವೆ. ಕಾವ್ಯ ರಚನೆಯ ಹಿಂದಿನ ಶ್ರಮ ಮತ್ತು  ಗಂಡು-ಹೆಣ್ಣು ಪರಸ್ಪರ ತಮ್ಮೊಳಗೆ ಹುಟ್ಟಿಕೊಳ್ಳುವ ಪ್ರೀತಿ ಯನ್ನು ತೆರೆದು ಹೇಳಿಕೊಳ್ಳಲು ಪಡುವ ಒದ್ದಾಟಗಳ ಕುರಿ ತು ‘ಆದಮ್ಮಿನ ಶಾಪ’ ಹೇಳಿದರೆ,ಮುಂದಿನ ಕವನ. ‘ಓ  ಬಹುಕಾಲ ಪ್ರೀತಿಸಬೇಡ’ ಪ್ರೀತಿಯ ಬಗೆಗೇ ಇದೆ.  ‘ಈಸ್ಟರ್ ೧೯೧೬’ ಐರ್ಲ್ಯಾಂಡಿನ ಸ್ವಾತಂತ್ರ್ಯ ಹೋರಾಟದ ಲ್ಲಿ  ಅಸುನೀಗಿದ ಹುತಾತ್ಮರ ಕುರಿತು ಸಾಂದರ್ಭಿಕವಾಗಿ ಬರೆದ ಕವನವಾದರೂ ಯೇಟ್ಸನ ರಾಜಕೀಯ ಚಿಂತನೆ, ಕಲಾತ್ಮಕ ದೃಷ್ಟಿಕೋನ,ಮತ್ತು ವೈಯಕ್ತಿಕ ಭಾವನಾತ್ಮಕ ಬೆಸುಗೆಗಳ ಸುಂದರ ಬೆಸುಗೆ ಇಲ್ಲಿದೆ. ಬದುಕಿನ ಅಗ್ನಿ ದಿವ್ಯ ದಲ್ಲಿ ಸುಟ್ಟು ಪುಟಗೊಳ್ಳುವ ಕವಿಯ ಆಸೆಯನ್ನು ‘ಬೈಝಾಂಟಿಯಮ್ಮಿಗೆ ಯಾನ’ ವ್ಯಕ್ತ ಪಡಿಸು ತ್ತದೆ.ಕವಿಯ ದೃಷ್ಟಿಯಲ್ಲಿ ದೇಹವೆಂದರೆ ಮದದಿಂದ ಕೊ ಬ್ಬುವ,ಆದರೆ ಮುದಿತನದಲ್ಲಿ ಬೆದರುಗೊಂಬೆಯಂತೆ ಸು ಕ್ಕಿ ಸೊರಗುವ ಪಶು.ಇಲ್ಲಿ ಕವಿ ಜೈವಿಕವಾದ ಹಾಡುವ ಶಕ್ತಿ ಎಂದೆಂದಿಗೂ ಸೊರಗದೆ ಉಳಿಯುವ ಬಂಗಾರದ ಪಕ್ಷಿ ಯಾಗಲು ಪ್ರಯತ್ನಿಸುತ್ತಾನೆ.  ‘ಜೀವ-ಆತ್ಮರ ನಡುವೆ ಸಂವಾದ’ ಎಂಬ ಕವನವೂ ದೇಹ ಮತ್ತು ಆತ್ಮಗಳ ನಡುವಣ ದ್ವಂದ್ವ-ತಾಕಲಾಟಗಳ ಕುರಿತು ಚರ್ಚಿಸುತ್ತದೆ. ಇಲ್ಲಿ ದೇಹಕ್ಕೆ ಎದುರಾಗಿ ನಿಲ್ಲುವ ಆತ್ಮದ ಮಾತು ತಾತ್ವಿಕವಾದದ್ದು.ಆದರೆ ಕೊನೆಯಲ್ಲಿ ಕವಿ ಜೀವ ಪರವಾಗಿ ಮಾತನಾಡುತ್ತಾನೆ.ಎಲ್ಲ ಸಂಕೋಚಗಳನ್ನು ಗಾ ಳಿಗೆ ಚೆಲ್ಲಿ ಮುಕ್ತನಾದ ಜೀವಿಯಷ್ಟೇ ಶುಭ್ರನಾಗುತ್ತಾನೆ.  ವೃದ್ಧಾಪ್ಯದಲ್ಲಿ ವೈರಾಗ್ಯದತ್ತ ವಾಲಿದ್ದ ಯೇಟ್ಸ್ ಕೊನೆಗಾಲ ದಲ್ಲಿ  ಕಾಮವನ್ನು ಹತ್ತಿಕ್ಕಲಾಗದೆ ಬರೆದ ‘ಹುಚ್ಚು ಕವನ’ ಗಳಲ್ಲಿ ಒಂದಾದ ‘ಮರುಳಿ ಜೇನ್ ಪಾದ್ರಿಗೆ’ ಕಾಮವನ್ನು ಮುಕ್ತವಾಗಿ ಅನುಭವಿಸಿದ  ಓರ್ವ ವೇಶ್ಯೆ ಕಾಮವನ್ನು ಬಲವಂತವಾಗಿ ಹತ್ತಿಕ್ಕಿಕೊಂಡು ಬದುಕಿದ ಒಬ್ಬ ಬಿಷಪ್ಪನಿ ಗೆ ಹಾಕುವ ಸವಾಲುಗಳ ಮೂಲಕ ಕವಿ ಕಂಡುಕೊಂಡ ಸತ್ಯಗಳನ್ನು ಬಯಲು ಮಾಡುತ್ತದೆ. ಹೀಗೆ ದೇಶ-ಕಾಲಗಳ ಪರಿಮಿತಿಗಳನ್ನು ಮೀರಿ ಮಹತ್ವ ಪಡೆದ ಕವನಗಳನ್ನು ಈ ಸಂಕಲನ ಸೇರಿಸಿಕೊಂಡಿದೆ. ಇವು ಅನುವಾದ ಅನ್ನುವುದಕ್ಕಿಂತಲೂ ಯೇಟ್ಸನ ಮೂಲ ಕವನಗಳ ಸ್ಫೂರ್ತಿ ಪಡೆದು ಬರೆದ ಸ್ವತಂತ್ರ ಕವನಗಳಂತಿ ವೆ.ಹಲವು ಪದಗಳು,ಪದಪುಂಜಗಳು,ಕೆಲವೊಮ್ಮೆ ಪೂ ರ್ತಿ ಸಾಲುಗಳೇ ತಮ್ಮ ಸ್ವರೂಪದಲ್ಲಿ ಮೂಲಕ್ಕಿಂತ ಭಿನ್ನ ವಾಗಿ ನಿಲ್ಲುವುದು ಸ್ಪಷ್ಟವಾಗಿ ಕಾಣುತ್ತದೆ. ‘ಆಫ್ಟರ್ ಲಾಂ ಗ್ ಸೈಲೆನ್ಸ್’, ‘ಅ ಡಯಲಾಗ್ ಆಫ್ ದ ಸೆಲ್ಫ್ ಅಂಡ್ ಸೋಲ್’ ‘ದ ಚಾಯಿಸ್’ ಮೊದಲಾದ ಕವನಗಳಲ್ಲಿ ಇದಕ್ಕೆ ನಿದರ್ಶನಗಳನ್ನು ಕಾಣಬಹುದು. ************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

ಶತಮಾನದ ಕವಿ ಯೇಟ್ಸ್ Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಮನೆಖರೀದಿ ಪತ್ರ 2009ನೇ ಇಸವಿ. ಹೆಸರಾಂತ ರಿವಾಯತ್ ಗಾಯಕರಾದ ಕದರಮಂಡಲಗಿ ಅಲ್ಲಾಬಕ್ಷರ ಭೇಟಿ ಮುಗಿಸಿಕೊಂಡು, ಬ್ಯಾಡಗಿಯಿಂದ ಹಂಪಿಗೆ ಹಿಂತಿರುಗುತ್ತಿದ್ದೆ. ದಾರಿಯಲ್ಲಿ ಬಳ್ಳಾರಿ ಜಿಲ್ಲೆ ಪ್ರವೇಶಿಸುವಾಗ ಹಾವೇರಿ ಜಿಲ್ಲೆಯ ಕೊನೆಯ ಊರು ಗುತ್ತಲ ಸಿಕ್ಕಿತು. ಅಲ್ಲೊಬ್ಬ ಗಾಯಕ ಇದ್ದಾನೆಂದು ತಿಳಿದು ಹುಡುಕಿಕೊಂಡು ಹೊರಟೆ. ಹೆಸರು ಗೌಸ್‍ಸಾಬ್ ಹಾಲಗಿ. ಗೌಸ್‍ಸಾಬರು ಮನೆಯೊಂದರ ಜಗುಲಿಕಟ್ಟೆಯ ಮೇಲೆ ಕುಳಿತು ಮನೆಖರೀದಿ ಪತ್ರ ಬರೆಯುತ್ತಿದ್ದರು. ಈ ಕೆಲಸಕ್ಕೆ ರೆವಿನ್ಯೊ ಇಲಾಖೆಯಲ್ಲಿ `ಬಿಕ್ಕಲಂ’ ಎನ್ನುವರು. ಪ್ರಾಮಿಸರಿ ನೋಟಿನ ಬರೆಹ ಮುಗಿದ ಬಳಿಕ ಅವರಿಂದ ರಿವಾಯತ್ ಹಾಡನ್ನೂ ಕಿತ್ತೂರ ಚೆನ್ನಮ್ಮನ ಲಾವಣಿಯನ್ನೂ ಆಲಿಸಿದೆ. ಅವರು ಬರೆದ ಪತ್ರದ ಕನ್ನಡ ವಿಶಿಷ್ಟವಾಗಿತ್ತು. ಅದರ ಕೊನೆಯ ಭಾಗ ಹೀಗಿತ್ತು: “ಕೆಂಪು ಹಂಚಿನಮನೆ, ನನ್ನ ಖಬ್ಜೀಲೆ ಖಾತೆ ವ ವಹಿವಾಟು ಇದ್ದು, ಈಗ ನಮ್ಮ ಗೃಹಬಳಕೆಯ ಸಾಲಕೊಡಲಿಕ್ಕೆ ಅವಶ್ಯ ರಖಮ್ ಬೇಕಾಗಿದ್ದರಿಂದ ಈ ಮೇಲ್ಕಂಡ ಕೆಂಪು ಹಂಚಿನಮನೆ ವ್ಯಾಪಾರಕ್ಕೆ ಹಚ್ಚಲು ನೀವು ಈಗಿನ ಬಜಾರ್ ಭಾವದ ಪ್ರಕಾರ, ಯೋಗ್ಯ ಬೆಲೆಯಾದ ಪೂರಾ ಮನೆಗೆ ಎಪ್ಪತ್ತಾರು ಸಾವಿರ ರೂಪಾಯಿಗಳಿಗೆ ಖಂಡಮೊತ್ತ ಖರೀದಿಗೆ ಕೇಳಿದ್ದರಿಂದ, ನಿಮ್ಮ ಬೆಲಿಯು ಯೋಗ್ಯ ಹೆಚ್ಚಿದ್ದರಿಂದ, ನಾನು ಮನಸಾರೆ ಒಪ್ಪಿಕೊಂಡು ನಿಮಗೆ ತಕ್ಕ ಖರೀದಿಗೆ ಕೊಟ್ಟು, ಈ ದಿವಸ ನಿಮ್ಮ ಕಡೆಯಿಂದ ಕೆಳಗೆ ಸಹಿ ಮಾಡಿದ ಸಾಕ್ಷೀದಾರರ ಸಮಕ್ಷಮ, ಸಂಚಗಾರವಾಗಿ 36000 ರೂಪಾಯಿಗಳನ್ನು ಚುಕ್ತ ಪಡೆದುಕೊಂಡಿರುತ್ತೇನೆ. ಬಾಕಿ ಉಳಿದ ರಕಂ ನೀವು ಕರದಾಗ ಬಂದು ಹಾವೇರಿ ಸಬರಿಜಿಸ್ಟ್ರಾರ ಸಾಹೇಬರ ಸಮಕ್ಷಮ ಚುಕ್ತ ಎಣಿಸಿಕೊಂಡು ನಿಮದೇ ಖರ್ಚಿನಿಂದ ನೋಂದ ಮಾಡಿಸಿಕೊಡುತ್ತೇನೆ. ಮನೆ ಕಬಜಾ ಇವತ್ತಿನಿಂದಲೇ ನಿಮ ಕಬಜಾ ಕೊಟ್ಟಿರುತ್ತೇನೆ. ನೀವು ನಿಮ್ಮ ಮರ್ಜಿ ಪ್ರಕಾರ ವಹಿವಾಟು ಉಪಭೋಗ ಮಾಡಿಕೊಳ್ಳತಕ್ಕದ್ದು. ಈ ವ್ಯವಹಾರದಲ್ಲಿ ನನ ಕಡಿಂದಾಗಲಿ ನನ ವಾರಸಾ ಕಡಿಂದಾಗಲಿ, ತಂಟೆ ತಕರಾರು ಬಂದು ಮನೆ ಕಬಜಾ ತಪ್ಪಿ ನಿಮಗೆ ಲುಕ್ಸಾನ್ ಸಂಭವಿಸಿದಲ್ಲಿ, ನಾನು ನನ್ನ ಜಾತಿನಿಷೆಯಿಂದ ಲುಕ್ಸಾನ್ ಭರಾಯಿಸಿ ಕೊಡುತ್ತೇನೆ ಅಂತ ಆತ್ಮಸಂತೋಷದಿಂದ ವ ಅಕ್ಕಲ ಹುಶಾರಿಯಿಂದ ಬರದುಕೊಟ್ಟ ಹಂಚಿನಮನೆ ಖರೀದಿ ಒಪ್ಪಂದ ಪತ್ರವು.’’ ಪತ್ರದ ಭಾಷೆಯಲ್ಲಿ ಮರಾಠಿ ಕನ್ನಡ ಫಾರಸಿ ಇಂಗ್ಲೀಶು ಎಲ್ಲ ಮಿಶ್ರವಾಗಿವೆ. ಈ ಸಂಕರಭಾಷೆಯ ಹಿಂದೆ ಫಾರಸಿಯನ್ನು ಆಡಳಿತ ಭಾಷೆಯಾಗಿಸಿಕೊಂಡಿದ್ದ ಮೊಗಲರು ಮತ್ತು ಬಿಜಾಪುರದ ಆದಿಲಶಾಹಿಗಳು; ಮರಾಠಿ ಮತ್ತು ಫಾರಸಿಯನ್ನು ಬಳಸುತ್ತಿದ್ದ ಪೇಶ್ವೆಗಳೇ ಮೊದಲಾಗಿ ಮರಾಠಿ ಸಂಸ್ಥಾನಿಕರು; ಇಂಗ್ಲೀಶ್ ಆಡಳಿತ ಭಾಷೆಯಾಗಿಸಿಕೊಂಡಿದ್ದ ಮುಂಬೈ ಪ್ರಾಂತ್ಯದ ಬ್ರಿಟಿಶರು; ಕನ್ನಡ ಆಡಳಿತ ಭಾಷೆಯಾಗಿಸಿಕೊಂಡಿರುವ ಸದ್ಯದ ಕರ್ನಾಟಕ ಸರ್ಕಾರ-ಈ ಎಲ್ಲರ ಆಳಿಕೆಯ ಚಾರಿತ್ರಿಕ ಹಿನ್ನೆಲೆಯಿದೆ. ಹಲವು ಆಡಳಿತ ಪದ್ಧತಿಗಳು ಕೂಡಿ ಹುಟ್ಟಿಸಿರುವ ಕನ್ನಡವಿದು. ಬೆಳಗಾವಿ ಬಳ್ಳಾರಿ ಗುಲಬರ್ಗ ಮಂಗಳೂರು ಮೈಸೂರು ಭಾಗಗಳಲ್ಲಿರುವ ಇಂತಹ ಖರೀದಿ ಪತ್ರಗಳ ಜತೆಗಿಟ್ಟು ನೋಡಿದರೆ, ಇದರ ವಿಶಿಷ್ಟತೆ ಮತ್ತಷ್ಟು ಸ್ಪಷ್ಟವಾದೀತು. ಇದನ್ನು ನೋಡುವಾಗ, ಕರ್ನಾಟಕದ ಬೇರೆಬೇರೆ ಆಡಳಿತಗಾರರು ರೂಢಿಸಿದ್ದ ಕನ್ನಡಗಳು ನೆನಪಾಗುತ್ತವೆ. ಹೈದರ್ ಟಿಪ್ಪು ಪೂರ್ಣಯ್ಯ ಮುಂತಾದವರು ಬರೆಸಿದ ಪತ್ರ ಹಾಗೂ ಹೊರಡಿಸಿದ ಫರ್ಮಾನುಗಳು ನೆನಪಾಗುತ್ತವೆ; ನಲ್ಲಪ್ಪ ಶೆಟ್ಟಿ ವಿರಚಿತ ಹೈದರಾಲಿಯ ಜೀವನಚರಿತ್ರೆ `ಹೈದರ್‍ನಾಮಾ’ದ ಕನ್ನಡವು ಇನ್ನೂ ಅನನ್ಯ. ಶ್ರೀರಂಗಪಟ್ಟಣದ ಖಾಜಿಯಾಗಿದ್ದ ಮಿಸ್‍ಕಿನ್ ನಸೀರುದ್ದೀನನ `ಜಂಗನಾಮಾ’ದ ಕನ್ನಡ ಇನ್ನೊಂದು ಬಗೆಯಾಗಿದೆ. ಶೃಂಗೇರಿ ಮಠದ ಕಡತಗಳಲ್ಲಿಯೂ 19ನೇ ಶತಮಾನದ ವ್ಯಾವಹಾರಿಕ ಕನ್ನಡವಿದೆ. ಮೈಸೂರು ರಾಜ್ಯದಲ್ಲಿ ಬ್ರಿಟಿಶರ ಕಾಲದಲ್ಲಿ ರೆವಿನ್ಯೂ ಅಧಿಕಾರಿಯಾಗಿದ್ದ ನವರತ್ನ ರಾಮರಾಯರು ಬರೆದ ಆತ್ಮಕಥೆಯ ಗದ್ಯ ಕೂಡ ಇಂತಹ ಫಾರಸಿ ಮಿಶ್ರಿತ ಕಸುವುಳ್ಳದ್ದು. ಮುಂಬೈ ಪ್ರಾಂತ್ಯದಲ್ಲಿ ದೊಡ್ಡ ಅಧಿಕಾರಿಯಾಗಿದ್ದ ಅರಟಾಳ ರುದ್ರಗೌಡರು ಬರೆಯಿಸಿದ ತಮ್ಮ ಆತ್ಮಚರಿತ್ರೆಯಲ್ಲಿ ಬಳಕೆಯಾಗಿರುವ ಕನ್ನಡವು ಮರಾಠಿ ಮಿಶ್ರಣದಿಂದ ಕೂಡಿದೆ. ಕನ್ನಡ ಗದ್ಯಕ್ಕೆ ಕುವೆಂಪು ಸಂಸ್ಕøತ ಬೆರೆಸುತ್ತ ಒಂದು ಖದರನ್ನು ಒದಗಿಸಿದರೆ, ಗೋವಿಂದ ಪೈಗಳು, ಹಳಗನ್ನಡ ರೂಪಗಳನ್ನು ಬಳಸುತ್ತ ಇನ್ನೊಂದು ಚಹರೆ ಕಟ್ಟಿಕೊಟ್ಟರು. ಹೀಗೆ ಕನ್ನಡವು ಬೇರೆಬೇರೆ ವೃತ್ತಿಕ್ಷೇತ್ರಗಳಲ್ಲಿ ಬಳಕೆಯಾಗುತ್ತ ರೂಪವೈವಿಧ್ಯ ಪಡೆದುಕೊಂಡಿದೆ. ಅದು ತನಗೆ ಅಗತ್ಯವಾದ ಶಬ್ದಗಳನ್ನು ಕಾಲಕಾಲಕ್ಕೆ ಬೇರೆಬೇರೆ ಭಾಷೆಗಳಿಂದ ಪಡೆದುಕೊಂಡು ಸಮೃದ್ಧವಾಗಿದೆ. ಆ ಶಬ್ದಗಳನ್ನು ಹೊರಹಾಕಿ ಅಚ್ಚಗನ್ನಡ ಉಳಿಸಿಕೊಳ್ಳುವುದು ಕನ್ನಡಪರ ಕೆಲಸ ಎಂದು ಕೆಲವರು ಭಾವಿಸಿದ್ದಾರೆ; ಎಗ್ಗಿಲ್ಲದ ಸ್ವೀಕಾರ ನಡೆಯಲಿ ಏನಾಗುತ್ತೆ ಎನ್ನುವ ನಿಶ್ಚಿಂತವಾದಿಗಳೂ ಉಂಟು. ಯಾವುದೇ ಸ್ವೀಕಾರ-ನಿರಾಕರಣೆಗಳಿಗೆ, ಅದು ಒಂದು ಭಾಷೆ ಮತ್ತು ಭಾಷಿಕರ ಮೂಲಶಕ್ತಿಯನ್ನು ಹಿಗ್ಗಿಸಿದೆಯೊ ಕುಗ್ಗಿಸಿದೆಯೊ ಎಂಬುದೇ ಮಾನದಂಡ. ಕನ್ನಡವು ಮೊದಲಿಂದಲೂ ಅತಿರೇಕಗಳನ್ನು ನಿರಾಕರಿಸಿದೆ. ಪಂಪನ `ದೇಸಿಯೊಳ್ ಪೊಕ್ಕು ಮಾರ್ಗದೊಳೆ ತಳ್ವುದು’ ಕೇವಲ ಕಾವ್ಯಕ್ಕೆ ಮಾತ್ರವಲ್ಲ, ಭಾಷೆಗೂ, ಜೀವನ ವಿಧಾನಕ್ಕೂ ಅನ್ವಯವಾಗುವ ಸಮತೋಲನ ವಿಧಾನವಾಗಿದೆ. ನಮ್ಮ ನಾಡಿನ ಸಾಂಸ್ಕøತಿಕ ಸಮೃದ್ಧಿಯಂತೂ ಈ ಕೊಡುಕೊಳೆಯ ವಿವೇಕದಿಂದಲೇ ಸಂಭವಿಸಿದೆ.ಯೂರೋಪಿನಿಂದ ಬಂದ ಹಾರ್ಮೊನಿಯಂ, ವೈಯಲಿನ್, ಅರಬಸ್ಥಾನದಿಂದ ಬಂದ ದಫ್ (ಡಪ್ಪು) ನಮ್ಮ ಸಂಗೀತ-ರಂಗಭೂಮಿಗಳಲ್ಲಿ ಸೇರಿಹೋಗಿರುವ ಬಗೆಯನ್ನು ಗಮನಿಸಬೇಕು.ಕನ್ನಡ ಗದ್ಯಕ್ಕಿರುವ ಅನಂತ ಮಗ್ಗುಲುಗಳನ್ನು ಗಮನಿಸುವಾಗ ಸೋಜಿಗವಾಗುತ್ತದೆ. ಮಾತ್ರವಲ್ಲ, ಪತ್ರಿಕೆಗಳಲ್ಲಿ ನಮ್ಮ ಬರೆಹಗಳಲ್ಲಿ ನಾವು ಬಳಸುತ್ತಿರುವ ಗದ್ಯ ಎಷ್ಟೊಂದು ನಿಸ್ಸತ್ವವಾಗಿದೆ ಎಂದು ದುಗುಡವೂ ಆವರಿಸುತ್ತದೆ. ಜನರಾಡುವ ಮಾತುಗಳನ್ನು ಆಲಿಸದೆ ಹೊಸಭಾಷೆಯನ್ನು ಲೇಖಕರು ಕೇವಲ ಸ್ವಪ್ರತಿಭೆಯೊಂದರಿಂದಲೇ ಹುಟ್ಟಿಸಲಾರರು. ಹುಟ್ಟಿಸಿದರೂ ಅದಕ್ಕೆ ನೆಲದ ಕಸುವು ಇರುವುದಿಲ್ಲ. ಭಾಷೆಯ ಬೆಳವಣಿಗೆ ಎಂದರೇನು? ಬೋರ್ಡು ಬ್ಯಾನರುಗಳಲ್ಲಿ ಬಳಕೆಯಾಗುವುದೇ? ಅದು ಬಳಕೆಯ ಒಂದು ಹೊರ ಮತ್ತು ಸರಳ ಮುಖವಷ್ಟೆ. ಭಾಷೆಗೆ ದೈನಿಕ ಬದುಕಿನ ಮಾತುಕತೆಯಲ್ಲಿ ವ್ಯವಹಾರದಲ್ಲಿ ಬಳಕೆಯಾಗುವ ಹಲವಾರು ಸ್ತರಗಳಿವೆ. ಶಿಕ್ಷಣ ಮತ್ತು ಆಡಳಿತದಲ್ಲಿ ಬಳಕೆಯಾಗುವ ಸ್ತರಗಳಿವೆ. ಇವುಗಳ ಜತೆಗೆ ಗಹನವಾದ ವಿಚಾರಗಳನ್ನು ಅಭಿವ್ಯಕ್ತಿ ಮಾಡಲು ಸಾಧ್ಯವಾಗುವಂತೆ, ಧಾರಣಶಕ್ತಿಯನ್ನು ಪಡೆಯುವ ಸ್ತರವೂ ಇದೆ. ಇದನ್ನು 12ನೇ ಶತಮಾನದಲ್ಲಿ ಶರಣರು ತಾತ್ವಿಕವಾದ ವಾಗ್ವಾದಕ್ಕೆ ಕನ್ನಡವನ್ನು ಬಳಸುವ ಮೂಲಕ ಮಾಡಿದರು. ನೋಡಲು ಸರಳವಾಗಿ ಕಾಣುವ ಆದರೆ ದಾರ್ಶನಿಕ ಅರ್ಥಗಳಿಂದ ತುಂಬಿದ ಅಲ್ಲಮನ ವಚನಗಳ ಕನ್ನಡ ಒಂದು ಅದ್ಭುತ. ಭಾಷೆಗೆ ಧಾರಣ ಶಕ್ತಿ ಮಾತ್ರವಲ್ಲ, ಅನುಭವ-ವಿಚಾರಗಳನ್ನು ರೂಪಕ ಪ್ರತಿಮೆ ನುಡಿಗಟ್ಟುಗಳಲ್ಲಿ ಹೇಳುವಂತೆ ಸೌಂದರ್ಯಾತ್ಮಕ ಸ್ತರವೂ ಬೇಕು. ಈ ಸ್ತರವು ಹಳ್ಳಿಗಳಲ್ಲಿ ಅತ್ಯಂತ ಚತುರ ಮಾತುಗಾರರು ಆಡುವ ಭಾಷೆ ಕಂಡರೂ ಗೊತ್ತಾಗುತ್ತದೆ. ಇದು ಪಂಪನ ಕಾವ್ಯ, ಬೇಂದ್ರೆಯವರ ಪದ್ಯ, ಕುವೆಂಪು ಕಾದಂಬರಿಗಳ ಗದ್ಯ ನೋಡಿದರೆ ಅರಿವಾಗುತ್ತದೆ. ನಾಗೇಶ್ ಹೆಗಡೆ, ಚನ್ನೇಶ್ ಮುಂತಾದವರು ಬರೆಯುವ ವಿಜ್ಞಾನದ ಬರೆಹಗಳು ಅವುಗಳ ಭಾಷೆ ಈ ಕಾರಣಕ್ಕೇ ಮಹತ್ವದವಾಗಿವೆ.ಯಾವುದೇ ಜನ ಭಾಷೆಗೆ ಆಂತರಿಕವಾದ ಸ್ತರಸಂಪತ್ತು ಮತ್ತು ಕಸುವುಗಳಿದ್ದರೆ ಸಾಲದು. ಅದು ಬಳಕೆಯಾಗುವ ವಿಪುಲ ಮತ್ತು ಸವಾಲಿನ ಅವಕಾಶಗಳೂ ನಿರ್ಮಾಣವಾಗಬೇಕು. ಇಲ್ಲವಾದರೆ, ಕುಸ್ತಿ ಪಂದ್ಯಗಳಿಲ್ಲದೆ ದೃಢದೇಹ ಸಾಕಿಕೊಂಡ ಪೈಲ್ವಾನನಂತೆ. ವೈರುಧ್ಯವೆಂದರೆ, ದಿನಗಳೆದಂತೆ ಕೋರ್ಟು, ವೈದ್ಯ, ಇಂಜಿನಿಯರಿಂಗ್, ವಿಜ್ಞಾನಗಳಲ್ಲಿ ಕನ್ನಡ ಬಳಕೆಯ ಅವಕಾಶಗಳು ಕ್ಷೀಣಿಸುತ್ತಲೇ ಹೋಗುತ್ತಿವೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿವೆಯೆಂದು ನಾವು ಬೀಗುತ್ತಲೇ ಇದ್ದೇವೆ. ************************************ ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

You cannot copy content of this page

Scroll to Top