Category: ದಾರಾವಾಹಿ

ಗುರುರಾಜ್ ಸನಿಲ್ ಅವರ ದಾರಾವಾಹಿಯ ಏಳನೇ ಕಂತು
ಆದ್ದರಿಂದ ತನ್ನ ಹೆತ್ತವರಿಂದ ತಾನು ಅನುಭವಿಸಿದ ಅಭದ್ರತೆ, ಏಕಾಂಗಿತನದ ನೋವು ತನ್ನ ಮಗುವಿಗೂ ದಕ್ಕುವುದುಬೇಡ ಎಂದು ಯೋಚಿಸಿದವಳು ಗಂಡನ ದುರ್ವತನೆಗಳನ್ನೆಲ್ಲ ಸಹಿಸಿಕೊಂಡು ಆದಷ್ಟು ಹೊಂದಾಣಿಕೆ ಮಾಡಿಕೊಳ್ಳುತ್ತ ಬದುಕತೊಡಗಿದಳು.

ಅವರನ್ನು ಓಲೈಸಿ ತನ್ನ ಹಳೆಯ ಹಕ್ರ್ಯೂಲಸ್ ಸೈಕಲ್ ಹತ್ತಿಕೊಂಡು ಹೊರಟ. ಇಂದು ಅವನ ಮನಸ್ಸಿನ ತುಂಬಾ ಸ್ವಂತ ಜಾಗದ ಕಲ್ಪನೆಯೇ ಹರಿದಾಡುತ್ತಿತ್ತು. ತಾನಂದುಕೊಂಡಿದ್ದು ನೆರವೇರುವ ಕಾಲವಿನ್ನು ಬಹಳ ದೂರವಿಲ್ಲ ಎಂದುಕೊಳ್ಳುತ್ತ ಉತ್ಸಾಹದಿಂದ ಸೈಕಲ್ ತುಳಿದ

‘ಅರೇ ನೀವೇನ್ರೀ…! ಫೋನ್ ಮಾಡಿರೋರು ನೀವು. ಆವಿಷಯ ತಿಳಿಸುವುದನ್ನು ಬಿಟ್ಟು ಹೀಗೆ ಸತಾಯಿಸಿದರೆ ಹೇಗೆ? ನೀವ್ಯಾರೆಂದು ತಿಳಿಯುತ್ತಿದ್ದರೆ ನಾವೇಕೆ ಗುರುತಿಲ್ಲ ಅನ್ನುತ್ತಿದ್ದೆವು. ನಮ್ಮ ಮೊಬೈಲಲ್ಲಿ ನಿಮ್ಮ ಫೋಟೋ ಬೀಳುತ್ತದಾ?’ ಎಂದು ತಾವೂ ವ್ಯಂಗ್ಯವಾಗಿ ಉತ್ತರಿಸಿದರು.

ದಾರಾವಾಹಿ-04 ಅದ್ಯಾಯ-04 ಮುಂಬೈ ಪೆದುಮಾಳರ ಮನೆಯನ್ನು ತೊರೆದು ಹೊರಟ ಏಕನಾಥ ಕದಿಕೆಬೆಟ್ಟಿನ ತನ್ನ ಮಾವನ ಮನೆಗೆ ಬಂದು ತಲುಪಿದ. ಯಾವ ಸೂಚನೆಯನ್ನೂ ನೀಡದೆ ಬಂದು ನಿಂತ ಗಂಡನನ್ನು ಕಂಡ ದೇವಕಿಗೆ ಅಚ್ಚರಿಯಾಯಿತು. ‘ಅಯ್ಯೋ ದೇವರೇ! ಏನ್ರಿ ಇದು, ಒಂದು ಪತ್ರವನ್ನಾದರೂ ಬರೆಯುತ್ತಿದ್ದವರು ಇವತ್ತು ಏನೂ ತಿಳಿಸದೆ ಪ್ರತ್ಯಕ್ಷವಾಗಿಬಿಟ್ಟಿರಲ್ಲ…!’ ಎಂದು ಖುಷಿಯಿಂದ ಅಂದವಳು, ಅವನು ತಂದಿದ್ದ ಸಾಮಾನು ಸರಂಜಾಮುಗಳನ್ನು ಒಳಗಿಡಲು ಮುಂದಾದಳು. ಆದರೆ ಅವನೊಂದಿಗಿದ್ದ ದೊಡ್ಡ ಹೊರೆಯನ್ನು ಕಂಡವಳಿಗೆ ಆತಂಕ ಸುಳಿಯಿತು. ‘ಹೌದು ಮಾರಾಯ್ತೀ, ಯಾವಾಗಲೂ ತಿಳಿಸಿಯೇ ಬರುವುದಲ್ಲವಾ. ಈ ಸಲ ನಿಮ್ಮನ್ನೊಂದಿಷ್ಟು ಅಚ್ಚರಿ ಪಡಿಸುವ ಅಂತ ಅನ್ನಿಸಿತು. ಎದ್ದು ಬಂದುಬಿಟ್ಟೆ!’ ಎಂದು ಏಕನಾಥನೂ ನಗುತ್ತ ಅಂದಾಗ ದೇವಕಿಯ ಕಳವಳ ಮರೆಯಾಯಿತು. ಪ್ರೀತಿಯಿಂದ ನಗುತ್ತ ಗಂಡನನ್ನು ಒಳಗೆ ಕರೆದೊಯ್ದು ವಿಶ್ರಾಂತಿಗೆ ವ್ಯವಸ್ಥೆ ಮಾಡಿದಳು. ಏಕನಾಥ ಆಹೊತ್ತು ಹೆಂಡತಿಯೊಂದಿಗೆ ಗೆಲುವಿನಿಂದ ಮಾತಾಡಿದನಾದರೂ ಆನಂತರ ದಿನವಿಡೀ ಗಂಭೀರವಾಗಿ ಕಳೆದ. ಮರುದಿನವೂ ಅದೇ ಸ್ಥಿತಿಯಲ್ಲಿದ್ದ. ದೇವಕಿಗೆ ಮರಳಿ ಆತಂಕವೆದ್ದಿತು. ‘ಏನಾಯ್ತುರೀ…? ನಿನ್ನೆಯಿಂದ ನಿಮ್ಮನ್ನು ಗಮನಿಸುತ್ತಿದ್ದೇನೆ, ಯಾವುದೋ ಚಿಂತೆಯಲ್ಲಿರುವ ಹಾಗಿದೆಯಲ್ಲಾ? ಬೊಂಬೈಯಲ್ಲಿ ಏನಾದರೂ ತೊಂದರೆಯಾಯ್ತಾ…?’ ಎಂದು ಮೃದುವಾಗಿ ಕೇಳಿದಳು. ‘ಹೌದು ಮಾರಾಯ್ತೀ ಸ್ವಲ್ಪ ಸಮಸ್ಯೆಯಾಯಿತು. ಗುರುಗಳಿಗೂ ನನಗೂ ಜಗಳವಾಯಿತು. ಇನ್ನು ಮುಂದೆ ಅವರ ಸಹವಾಸವೇ ಬೇಡವೆಂದು ನಿರ್ಧರಿಸಿ ಬಂದುಬಿಟ್ಟೆ!’ ಎಂದು ಏಕನಾಥ ಅನ್ನುತ್ತಿದ್ದಂತೆಯೇ ಅವನ ಮಾವ ಸುಬ್ಬಣ್ಣನೂ ಬಂದು ಅಳಿಯನೆದುರು ಕುಳಿತರು. ಏಕನಾಥ ಅವರಿಗೂ, ಹೆಂಡತಿಗೂ ತನ್ನ ಮತ್ತು ಗುರುಗಳ ನಡುವಿನ ಮನಸ್ತಾಪದ ಕಾರಣವನ್ನು ನೋವಿನಿಂದ ವಿವರಿಸಿದ. ಆದರೆ ಸುಬ್ಬಣ್ಣನಿಗೆ, ಅಳಿಯ ತನ್ನ ಸಂಸಾರವನ್ನು ಊರಲ್ಲಿ ಬಿಟ್ಟು ಎಲ್ಲೋ ಪರವೂರಿನಲ್ಲಿ ದುಡಿಯುತ್ತಿದ್ದುದು ಸ್ವಲ್ಪವೂ ಇಷ್ಟವಿರಲಿಲ್ಲ. ಅವನು ಊರಿಗೆ ಬಂದಾಗಲೆಲ್ಲ ಅದನ್ನು ಸೂಕ್ಷ್ಮವಾಗಿ ಗಮನಕ್ಕೆ ತರುತ್ತಿದ್ದರು. ಇಂದು ಅವನೇ ಆ ನಿರ್ಧಾರ ತೆಗೆದುಕೊಂಡಿರುವುದನ್ನು ತಿಳಿದವರಿಗೆ ನಿರಾಳವಾಯಿತು. ‘ಬಹಳ ಒಳ್ಳೆಯದಾಯ್ತು ಮಾರಾಯಾ. ಸರಿಯಾದ ನಿರ್ಧಾರ ಮಾಡಿದ್ದಿ. ಇನ್ನೂ ಎಷ್ಟು ಕಾಲ ಅಂತ ಇನ್ನೊಬ್ಬರ ಅಡಿಯಾಳಾಗಿ ಬದುಕುತ್ತಿ ಹೇಳು? ಇಲ್ಲಿಯತನಕ ಅಲ್ಲಿದ್ದುಕೊಂಡು ಏನೇನು ಕಲಿತಿದ್ದಿಯೋ ಅದನ್ನು ಬಳಸಿಕೊಂಡು ಊರಲ್ಲೇ ದುಡಿಯುತ್ತ ಹೆಂಡತಿ ಮಕ್ಕಳೊಂದಿಗೆ ನೆಮ್ಮದಿಯಿಂದ ಸಂಸಾರ ಮಾಡು. ಮುಂದೆಲ್ಲಾ ಸರಿ ಹೋಗುತ್ತದೆ!’ ಎಂದು ಧೈರ್ಯ ತುಂಬಿದರು. ದೇವಕಿಗೂ ಗಂಡನ ಯೋಚನೆ ಇಷ್ಟವಾಯಿತು. ತಾನೂ ಸಾಂತ್ವನ ಹೇಳಿದಳು. ಆದ್ದರಿಂದ ಏಕನಾಥ ಹೆಂಡತಿಯ ಮನೆಯಲ್ಲಿ ನಾಲ್ಕು ದಿನ ಸಮಾಧಾನದಿಂದ ಕಳೆದ. ಬಳಿಕ ಮಾವನಿಂದ ಒಪ್ಪಿಗೆ ಪಡೆದು ದೇವಕಿಯನ್ನೂ ಮಕ್ಕಳು ದೀಕ್ಷಾ ಮತ್ತು ದ್ವಿತೇಶ್‍ನನ್ನು ಕರೆದುಕೊಂಡು ತನ್ನ ಮನೆಗೆ ಹೋಗಿ ವಾಸಿಸತೊಡಗಿದ. ಆದರೆ ಒಂದು ತಿಂಗಳು ಕಳೆಯುವಷ್ಟಲ್ಲಿ ಮುಂದೆ ಜೀವನಕ್ಕೇನು ಮಾಡುವುದು…? ಎಂಬ ಚಿಂತೆ ಅವನನ್ನು ಕಾಡತೊಡಗಿತು. ಇಷ್ಟು ವರ್ಷಗಳ ಕಾಲ ಮುಂಬೈಯಲ್ಲಿದ್ದು ವಿವಿಧ ದೇವರು ದಿಂಡರುಗಳ ಪೂಜೆ ಪುನಸ್ಕಾರಗಳನ್ನು ಶ್ರದ್ಧಾಭಕ್ತಿಯಿಂದ ಮಾಡಿಕೊಂಡು ಬಂದ ತನ್ನಂಥ ಬಡವನ ಬದುಕಿಗೊಂದು ನೆಲೆಯನ್ನು ಕಂಡುಕೊಳ್ಳಲು ಆ ದುಷ್ಟ ಪೆದುಮಾಳ ಕೊನೆಗೂ ಅವಕಾಶ ಕೊಡಲಿಲ್ಲವಲ್ಲ! ಅವನೊಂದಿಗೆ ನಾಯಿಗಿಂತಲೂ ಕಡೆಯಾಗಿ ದುಡಿದ ಋಣಕ್ಕಾದರೂ ಅವನ ಮನಸ್ಸು ಕರಗಬೇಕಿತ್ತು. ಅವನು ಪರಮ ಸ್ವಾರ್ಥಿ! ಅವನ ಅಲ್ಪತನಕ್ಕೇ ತಾನಾವತ್ತು ಕೋಪಿಸಿಕೊಂಡು ಹದ್ದುಮೀರಿ ವಾದಿಸಿದ್ದು ಎಂದು ಯೋಚಿಸಿದ ಏಕನಾಥನಿಗೆ ಆವತ್ತು ತನಗೂ ಪೆದುಮಾಳರಿಗೂ ನಡೆದ ಬಿರುಸಾದ ಚರ್ಚೆಯ ಚಿತ್ರಣವು ಮುನ್ನೆಲೆ ಬಂತು. ‘ಗುರುಗಳೇ, ಇನ್ನೆಷ್ಟು ಸಮಯ ಅಂತ ನಾನೂ ಚಾಕರಿ ಮಾಡಿಕೊಂಡೇ ಬದುಕುವುದು ಹೇಳಿ? ನನಗೂ ಸಂಸಾರ ಉಂಟಲ್ಲವಾ. ತಾವು ದೊಡ್ಡ ಮನಸ್ಸು ಮಾಡಿ ಸಣ್ಣಪುಟ್ಟ ಪೂಜಾ ಕೈಂಕರ್ಯಗಳನ್ನು ನನಗೂ ವಹಿಸಿಕೊಟ್ಟು ಆಶೀರ್ವದಿಸಬೇಕು!’ ಎಂದು ಎಷ್ಟೊಂದು ನಮ್ರವಾಗಿ ಕೇಳಿಕೊಂಡೆ. ಆದರೆ ಅಷ್ಟು ಕೇಳಿದ ಅವರು ಹೇಗೆ ವರ್ತಿಸಿಬಿಟ್ಟರು! ತಾನು ಅವರ ಅರ್ಧ ಆಸ್ತಿಯನ್ನೇ ಕೇಳಿಬಿಟ್ಟೆನೇನೋ ಎಂಬಂಥ ರೋಷ ಅವರಲ್ಲಿ ಉಕ್ಕಿತು. ‘ಹೌದೌದೋ…ನಿನ್ನ ಕೆಲಸ ಕಲಿಯುವ ತರಾತುರಿಯಿಂದಲೇ ಅಂದುಕೊಂಡೆವು ನೀನೂ ನಮ್ಮ ಬುಡಕ್ಕೇ ಕೊಡಲಿಯಿಡುವ ಹುನ್ನಾರದಲ್ಲಿದ್ದಿ ಅಂತ!’ ಎಂದು ಬಿರುಸಿನಿಂದ ಅಂದವರು ಮರುಕ್ಷಣ ಏನಾಯಿತೋ, ತಟ್ಟನೆ ತಣ್ಣಗಾದರು. ಬಳಿಕ, ‘ಆದರೂ ಚಿಂತೆಯಿಲ್ಲ ಬಿಡು. ನಿನಗೂ ಒಂದಷ್ಟು ಕೆಲಸವನ್ನು ವಹಿಸಿಕೊಡಬಹುದಿತ್ತು. ಆದರೆ ನೀನಿನ್ನೂ ಪೂರ್ಣ ವಿದ್ಯೆಯನ್ನೇ ಕಲಿತಿಲ್ಲವಲ್ಲ ಮಾರಾಯಾ! ಒಂದೇ ಒಂದು ಪೂಜಾವಿಧಿಯ ಆಚರಣೆಯಾಗಲೀ ಪೂರ್ಣಾಹುತಿಯ ಕ್ರಮವಾಗಲಿ ನಿನಗೆಷ್ಟು ಗೊತ್ತುಂಟು ಹೇಳು? ನಿನ್ನ ನೇಮನಿಷ್ಠೆಯನ್ನು ನಾವೂ ಕಂಡವರಲ್ಲವಾ. ಸುದರ್ಶನ ಹೋಮದ ಮೊದಲ ಮಂತ್ರ ಹೇಳಿದ ನಂತರ ಬೆಬ್ಬೆಬ್ಬೇ! ಅಂತ ನನ್ನ ಮುಖ ನೋಡುತ್ತಿ. ಗಣೇಶ ಸ್ತೋತ್ತ್ರವಾದರೂ ನೆಟ್ಟಗೆ ಬರುತ್ತದೋ ನಿನಗೆ? ಅದೇ ಗೊತ್ತಿಲ್ಲದ ಮೇಲೆ ಸ್ವತಂತ್ರವಾಗಿ ಹ್ಯಾಗೆ ಬದುಕುತ್ತಿ ಹೇಳು? ಇದು ನಿನ್ನೂರು ಅಂಗೈಯಗಲದ ದೈವದ ಓಣಿ ಅಂತ ತಿಳಿಯಬೇಡ. ಇದು ಮಹಾರಾಷ್ಟ್ರ. ಬಹಳ ದೊಡ್ಡ ಸಾಗರವಿದು! ಇಲ್ಲಿ ಈಜಬೇಕಾದರೆ ಬರೇ ವಿದ್ಯೆಯೊಂದಿದ್ದರೆ ಸಾಲದು, ಗಟ್ಟಿ ಬುದ್ಧಿವಂತಿಕೆ ಮತ್ತು ಆತ್ಮಬಲವೂ ಬೇಕು. ಇಲ್ಲಿನ ಮಂದಿ ಏನೇನೋ ವ್ಯಾಪಾರ, ವಹಿವಾಟು ಮಾಡಿಕೊಂಡು ತಮಗಿಷ್ಟ ಬಂದಂತೆ ಬದುಕುತ್ತಿರಬಹುದು. ಆದರೆ ತಂತಮ್ಮ ದೈವ ದೇವರುಗಳ ವಿಷಯದಲ್ಲಿ ಮಾತ್ರ ಎಲ್ಲರೂ ಅತೀವ ಶ್ರದ್ಧಾಭಕ್ತಿಯುಳ್ಳವರು. ತಾವು ನಂಬಿದ ದೈವಶಕ್ತಿಗಳ ಪೂಜೆ ಪುನಸ್ಕಾರಗಳಲ್ಲಿ ಬಹಳ ಪ್ರಾಮಾಣಿಕವಾಗಿ ತೊಡಗಿಕೊಂಡವರು. ನಿನಗಿನ್ನೊಂದು ವಿಷಯ ಗೊತ್ತುಂಟೋ? ಅಂಥವರಲ್ಲಿ ಕೆಲವರಿಗೆ ನಮ್ಮ ಅನೇಕ ಮಂತ್ರ, ಸ್ತ್ರೋತ್ರಗಳೆಲ್ಲ ಬಾಯಿಪಾಠ ಬರುತ್ತವೆ. ಒಂದು ವೇಳೆ ನಾವು ತಪ್ಪು ಉಚ್ಛರಣೆ ಮಾಡಿದರೂ ನಮ್ಮನ್ನು ತಟ್ಟನೆ ಎಚ್ಚರಿಸಿ ಸರಿಪಡಿಸಿದಂಥ ಎಷ್ಟೋ ಘಟನೆಗಳು ನಮ್ಮ ಕಣ್ಣ ಮುಂದೆಯೇ ನಡೆದದ್ದಿವೆ! ಹೀಗಿರುವಾಗ ನಿನ್ನ ಅರೆಬರೆ ಶ್ಲೋಕ, ಆಚರಣೆಗಳಿಂದ ಅವರನ್ನೆಲ್ಲ ಮಂಗ ಮಾಡಲು ಹೊರಟೆಯೆಂದರೆ ಒಂದು ದಿನ ನಿನ್ನ ಹೆಣ ವರ್ಲಿ ಗಟಾರದಲ್ಲಿ ಬಿದ್ದು ಕೊಳೆತು ಹೋದೀತು! ಆದ್ದರಿಂದ ಈಗ ಸದ್ಯ ನಾವು ಹೇಳುವ ಕೆಲಸ ಮಾಡಿಕೊಂಡು ಸುಮ್ಮನಿದ್ದುಬಿಡು. ಯಾವುದಕ್ಕೂ ಕಾಲ ಕೂಡಿ ಬರಬೇಕು. ನಮಗೂ ವಯಸ್ಸಾಗುತ್ತ ಬಂತಲ್ಲವಾ ಮಾರಾಯಾ. ಈ ಕ್ಷೇತ್ರದಲ್ಲಿ ನಮ್ಮ ಓಡಾಟ ನಿಲ್ಲುವ ಹೊತ್ತಿಗೆ ನೀನೇ ಎಲ್ಲವನ್ನೂ ಸಂಭಾಳಿಸುವಿಯಂತೆ. ಈಗ ಹೋಗಿ ಕೆಲಸ ನೋಡಿಕೋ ಹೋಗು ಹೋಗು!’ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಅಸಡ್ಡೆಯಿಂದ ಮಾತಾಡಿದರು. ಆಗ ತನಗೂ ಸಹನೆ ತಪ್ಪಿತು. ‘ದೇವರ ಪೂಜೆ ಪುನಸ್ಕಾರಗಳನ್ನು ಮಾಡಲು ಅದೆಂಥ ಬುದ್ಧಿವಂತಿಕೆ ಬೇಕು? ಒಂದಿಷ್ಟು ಮಂತ್ರಗಳೂ ಆಚರಿಸುವ ನಿಯಮವೂ ಮತ್ತದಕ್ಕೆ ತಕ್ಕಂಥ ಶ್ರದ್ಧಾಭಕ್ತಿಯಿದ್ದರೆ ಸಾಲದಾ? ಅದೂ ಅಲ್ಲದೇ ನಿಮ್ಮೊಂದಿಗೆ ನಾನು ಎಷ್ಟು ವರ್ಷಗಳಿಂದ ದುಡಿಯುತ್ತಿದ್ದೇನೆ! ಯಾವತ್ತಾದರೂ ಒಂದು ಮಂತ್ರವನ್ನಾಗಲೀ, ಅದರ ಅಂತ್ಯದ ನಿಯಮವನ್ನಾಗಲೀ ನೀವು ನನಗೆ ನೋಡಲು, ಕಲಿಯಲು ಬಿಟ್ಟದ್ದುಂಟಾ? ಅದೇ ಹೊತ್ತಲ್ಲಿ ಏನಾದರೊಂದು ಅಗತ್ಯವಿಲ್ಲದ ಕೆಲಸ ಸೂಚಿಸಿ ಒಳಗೋ ಹೊರಗೋ ಅಟ್ಟುತ್ತಿದ್ದಿರಲ್ಲ. ಹಾಗಾದರೆ ನಾನಾದರೂ ಹೇಗೆ ಕಲಿಯಲು ಸಾಧ್ಯ?’ ಎಂದು ತಾನೂ ರೋಸಿ ಪ್ರಶ್ನಿಸಿದೆ. ಅಷ್ಟು ಕೇಳಿದ್ದೇ ಪೆದುಮಾಳರ ಕಣ್ಣುಗಳು ಹೇಗೆ ಕೆಂಡ ಕಾರತೊಡಗಿದವು! ‘ಓಹೋ… ನೀನು ಈ ಮಟ್ಟಕ್ಕೆ ಯೋಚಿಸುತ್ತಿದ್ದೀಯಾ…? ಅಂದರೆ ನಮ್ಮ ವಿದ್ಯೆಯನ್ನೆಲ್ಲ ನಿನಗೆ ನಾವು ನಮ್ರವಾಗಿ ಧಾರೆಯೆರೆದುಕೊಡಬೇಕು. ಆಮೇಲೆ ನೀನು ಮುಂಬೈಯ ರಾಜಮಾಂತ್ರಿಕನಂತೆ ಮೆರೆಯಬೇಕು. ನಾವು ಫುಟ್‍ಪಾತ್‍ನಲ್ಲಿ ಗಿಣಿಶಾಸ್ತ್ರ ಹೇಳಿಕೊಂಡು ಬದುಕಬೇಕು ಅಂತಾನಾ ನಿನ್ನ ಉಪಾಯ? ಅದೆಲ್ಲ ನಾವು ಜೀವಂತವಿರುವವರೆಗೆ ಆಗಿಹೋಗದ ಮಾತು ಬಿಡೋ! ಹ್ಯಾಗೂ ನೀನೀಗ ನಮ್ಮ ಮುಂದೆಯೇ ನಿಂತು ಮಾತಾಡುವಷ್ಟು ಬೆಳೆದುಬಿಟ್ಟಿದ್ದೀಯ. ಅಂದಮೇಲೆ ನಮ್ಮ ನಿರ್ಧಾರವನ್ನೂ ಕೇಳು. ಆದರೆ ಅದಕ್ಕಿಂತ ಮೊದಲು ನಿನಗೊಂದು ಕಥೆ ಹೇಳುತ್ತೇವೆ ಕೇಳು. ನಿನಗಿಂತಲೂ ಮೊದಲೊಬ್ಬ ಪದ್ಮನಾಭ ಅನ್ನುವ ಗುಳ್ಳೆ ನರಿಯಂಥವನು ನಮ್ಮವನೇ ಎಂದು ಸುಳ್ಳು ಹೇಳಿಕೊಂಡು ಬಂದಿದ್ದ. ಮಲಯಾಳಿ, ತುಳು, ಕನ್ನಡ ಭಾಷೆಯನ್ನೆಲ್ಲ ಕಲಸುಮೇಲೊಗರ ಮಾಡಿ ಮಾತಾಡುತ್ತಿದ್ದ. ನಿನ್ನ ಹಾಗೆಯೇ ನಮ್ಮ ಜೊತೆ ಅನ್ಯೋನ್ಯವಾಗಿ ಬೆರೆತು ಕೆಲಸ ಮಾಡುತ್ತಿದ್ದ. ಅವನು ತೋರಿಸುತ್ತಿದ್ದ ಪ್ರೀತಿ ಗೌರವ ಹೇಗಿತ್ತೆಂದರೆ, ನಮ್ಮಿಬ್ಬರು ಮಕ್ಕಳು ವಿದ್ಯಾಭ್ಯಾಸ ಮುಗಿಸಿ ಪರದೇಶಗಳಿಗೆ ಹೊರಟು ಹೋದವರು ಅಲ್ಲಿನ ಬಿಳಿ ಚರ್ಮದ ಹುಡುಗಿಯರನ್ನು ಕಟ್ಟಿಕೊಂಡು ಅಪ್ಪ ಅಮ್ಮನನ್ನು ಮರೆತುಬಿಟ್ಟ ಸಂದರ್ಭದಲ್ಲೇ ಅವನು ನಮ್ಮ ಪಾಲಿಗೆ ಮನೆ ಮಗನಂತಾಗಿಬಿಟ್ಟಿದ್ದ. ನಮ್ಮೆಲ್ಲಾ ಆಸ್ತಿಪಾಸ್ತಿಗೆ ಅವನೇ ವಾರಿಸುದಾರನಾಗುವ ಯೋಗ್ಯತೆಯುಳ್ಳವನು ಮತ್ತು ನಮ್ಮ ಕಡೆಗಾಲದಲ್ಲೂ ಆಸರೆಯಾದಾನು ಎಂದು ಯೋಚಿಸಿ ನಾವೂ ನೆಮ್ಮದಿಪಟ್ಟೆವು. ಹಾಗಾಗಿ ನಮ್ಮ ಸರ್ವ ವಿದ್ಯೆಗಳನ್ನೂ ಅವನಿಗೆ ಧಾರೆಯೆರೆಯಲು ಮುಂದಾದೆವು. ಆದರೆ ಅಷ್ಟರಲ್ಲಿ ಆ ಲಫಂಗ ಏನು ಮಾಡಿದ ಗೊತ್ತಾ?’ ಎಂದ ಪೆದುಮಾಳರು ನನ್ನನ್ನೊಮ್ಮೆ ಜಿಗುಪ್ಸೆಯಿಂದ ದಿಟ್ಟಿಸಿದವರು, ವೀಳ್ಯದ ಕಂಚಿನ ಹರಿವಾಣವನ್ನು ರಪ್ಪನೆ ಹತ್ತಿರ ಎಳೆದುಕೊಂಡು ಎಲೆಯಡಿಕೆ ಮತ್ತು ಸುಣ್ಣಕ್ಕೆ ಚಿಟಿಕೆ ತಂಬಾಕು ಬೆರೆಸಿ ಬಾಯಿಗಿಟ್ಟು ಜರಜರನೇ ಜಗಿಯುತ್ತ ದೀರ್ಘ ಶ್ವಾಸ ದಬ್ಬಿ ಮಾತು ಮುಂದುವರೆಸಿದರು. ‘ಹಿಂದೂ ಧರ್ಮಶಾಸ್ತ್ರ ಅಥವಾ ವೇದೋಪನಿಷತ್ತುಗಳಲ್ಲಿ ಉಲ್ಲೇಖವೇ ಇಲ್ಲದಂಥ ಯಾವು ಯಾವುದೋ ಹೆಸರುಗಳ ಕ್ಷುಧ್ರ ಭೂತ, ಪಿಶಾಚಿಗಳನ್ನು ಆ ಅವಿವೇಕಿ ಸೃಷ್ಟಿಸಿಕೊಂಡ! ಈಗ ಜೋಗಾಪುರಿಯ ನಟ್ಟನಡುವೆ ದೊಡ್ಡ ದೇವಸ್ಥಾನವೊಂದು ಎದ್ದು ನಿಂತಿದೆಯಲ್ಲ ಗೊತ್ತುಂಟಾ ನಿನಗೆ…?’ ಎಂದು ಪೆದುಮಾಳರು ತನ್ನನ್ನು ತೀಕ್ಷ್ಣವಾಗಿ ಪ್ರಶ್ನಿಸಿದರು. ‘ಹೌದು. ಗೊತ್ತಿದೆ. ಅದೀಗ ಇಡೀ ಮುಂಬೈಗೆ ಪ್ರಸಿದ್ಧವಾದ ದೇವಸ್ಥಾನವಲ್ಲವಾ. ಮಹಾ ಮಾಂತ್ರಿಕರೆನಿಸಿಕೊಂಡ ಪದ್ಮರಾಜ ಗುರೂಜಿಯವರು ಅದನ್ನು ನಡೆಸುತ್ತಿರುವುದು. ಅದರಿಂದೇನಾಯ್ತು?’ ಎಂದು ತಾನೂ ಆಶ್ಚರ್ಯದಿಂದ ಪ್ರಶ್ನಿಸಿದೆ. ‘ಹೇ, ಥೂ! ಅವನೆಂಥ ಮಹಾ ಮಾಂತ್ರಿಕ? ಅವನೊಬ್ಬ ನರವಂಚಕ! ಅದೆಂಥ ದೇವಸ್ಥಾನ ಸುಡುಗಾಡು. ನಮ್ಮ ಶ್ರೇಷ್ಠ ಹಿಂದೂ ಧರ್ಮಕ್ಕೆ ಮಸಿ ಬಳಿಯುವಂಥ ಕೆಲಸ ಮಾಡುತ್ತಿದ್ದಾನೆ ಆ ದರವೇಶಿ! ಅಲ್ಲಿ ಆರಾಧನೆ ನಡೆಯುತ್ತಿರುವುದು ಅವನೇ ಸೃಷ್ಟಿಸಿಕೊಂಡಿರುವ ಕ್ಷುಧ್ರ ಪಿಶಾಚಿಗಳಿಗೆ. ಮಂತ್ರಶಾಸ್ತ್ರಗಳ ಬಗ್ಗೆಯಾಗಲೀ ತಾಂತ್ರಿಂಕವಿದ್ಯೆಯ ಕುರಿತಾಗಲೀ ಎಳ್ಳಷ್ಟಾದರೂ ಜ್ಞಾನ ಉಂಟಾ ಅವನಿಗೆ? ಇದ್ದರೆ ಯಾರಿಂದ ಕಲಿತ, ಅವನ ಗುರು ಯಾರು…? ಅವನು ಕಲಿತದ್ದು ಮೂರನೇ ಕ್ಲಾಸು. ಆ ವಯಸ್ಸಿನಲ್ಲೇ ಯಾವುದೋ ಲಾರಿ ಹತ್ತಿ ಮುಂಬೈಗೆ ಓಡಿ ಬಂದವನು ಹೊಟೇಲು, ಬಾರುಗಳಲ್ಲಿ ಲೋಟ ತಟ್ಟೆ ತೊಳೆದುಕೊಂಡು ಬದುಕುತ್ತಿದ್ದ. ಬಿಡುವಿನಲ್ಲಿ ಫುಟ್‍ಪಾತ್‍ಗಳಲ್ಲಿರುವ ಗುಡಿ, ಗುಂಡಾರಗಳೆದುರು ಹುಚ್ಚನಂತೆ ಕುಣಿಯುತ್ತ, ಕಣ್ಣುಮುಚ್ಚಿ ಕೂರುತ್ತ ಇದ್ದನಂತೆ. ನಮ್ಮ ಪರಿಚಯದವರೊಬ್ಬರು ಅವನು ಮಹಾ ದೈವಭಕ್ತ ಬಾಲಕನೇ ಇರಬೇಕೆಂದು ಭ್ರಮಿಸಿ ಅವನನ್ನು ಹಿಡಿದು ಮಾತಾಡಿಸಿದರು. ಆಗ ಅವನು ಅನಾಥನೆಂದು ತಿಳಿದು ನಮ್ಮ ಹತ್ತಿರ ಕರೆತಂದು ಬಿಟ್ಟು ಹೋದರು. ಅಂದಿನಿಂದ ಅವನು ನಮ್ಮೊಂದಿಗೆ ಇರತೊಡಗಿದ. ಇಲ್ಲಿಗೆ ಬಂದ ನಂತರವೂ ಅವನುಆಗಾಗ ಮೂಕನಂತೆ ಮೂಲೆ ಸೇರಿ ಕುಳಿತು ಏನೇನೋ ಬಡಬಡಿಸುತ್ತಿದ್ದ. ಆಗೆಲ್ಲ ನಮಗೆ ಆತಂಕವಾಗುತ್ತಿತ್ತು. ಅವನನ್ನು ಆದಷ್ಟು ಪ್ರೀತಿಯಿಂದ ನೋಡಿಕೊಳ್ಳತೊಡಗಿದೆವು. ಒಮ್ಮೆ ಅವನ ಜಾತಕವನ್ನೂ ತಯಾರಿಸಿದೆವು. ಅದರಲ್ಲಿ ಅವನಿಗೆ ಜನ್ಮದೋಷವಿದ್ದುದು ಕಂಡು ಬಂತು. ಅದಕ್ಕೆ ಸೂಕ್ತ ಶಾಂತಿಯನ್ನೂ ಮಾಡಿಸಿದೆವು. ಆದರೂ ಅವನ ನಡವಳಿಕೆ ಸರಿ ಹೋಗಲಿಲ್ಲ. ಕೊನೆಗೆ ಇವಳ ಒತ್ತಾಯಕ್ಕೆ ಮಣಿದು ಮನೋವೈದ್ಯರ ಹತ್ತಿರವೂ ಕರೆದೊಯ್ದೆವು. ಅಲ್ಲಿ, ಅವನು ಎಂಥದ್ದೋ ಹಿಸ್ಟೀರಿಯಾ ಎಂಬ ಮನೋರೋಗಕ್ಕೆ ತುತ್ತಾಗಿದ್ದಾನೆ. ಅದು ಗುಣವಾಗಲು ದೀರ್ಘಕಾಲದ ಔಷಧಿ ಬೇಕಾಗುತ್ತದೆ! ಎಂದು ಡಾಕ್ಟರ್ ಹೇಳಿದರು. ಅದನ್ನೂ ಮಾಡಿಸತೊಡಗಿದೆವು. ಆದರೆ ಅಷ್ಟರಲ್ಲಾಗಲೇ ಅವನ ಹಣೆಬರಹ ಕೆಟ್ಟಿತೆಂದು ತೋರುತ್ತದೆ. ಒಮ್ಮೆ ಇವಳ ಒಂದಷ್ಟು ಚಿನ್ನಾಭರಣವನ್ನೂ ನಮ್ಮ ಹಣವನ್ನೂ ದೋಚಿಕೊಂಡು ರಾತ್ರೋರಾತ್ರಿ ಓಡಿ ಹೋಗಿಬಿಟ್ಟ! ಜೊತೆಗೆ ಅಷ್ಟೊತ್ತಿಗಾಗಲೇ ನಮ್ಮಿಂದ ಕೆಲವು ತಾಂತ್ರಿಕ ವಿದ್ಯೆಗಳನ್ನೂ ಕಲಿತಿದ್ದ ಫಟಿಂಗ! ಆದ್ದರಿಂದ ನಾವೂ ಸಾಕಷ್ಟು ಹುಡುಕಿದೆವು. ಆದರೆ ಈ ಮುಂಬೈಯಲ್ಲಿ ಅವನಂಥ ಹುಚ್ಚನನ್ನು ಪತ್ತೆಹಚ್ಚುವುದು ಅಸಾಧ್ಯದ ಮಾತು ಎಂಬರಿವಾಗಿ ಅವನಾಸೆ ಬಿಟ್ಟೆವು. ಇದಾದ ಕೆಲವು ವರ್ಷಗಳ ನಂತರ ನಮಗೊಂದು ವಿಸ್ಮಯ ಕಾದಿತ್ತು. ಆ ಹುಚ್ಚ ಪದ್ದುವು, ‘ಪದ್ಮರಾಜ ಗುರೂಜಿ’ ಎಂಬ ಹೆಸರಿನಿಂದ ಮೆರೆಯತೊಡಗಿದ್ದ! ಅದನ್ನು ತಿಳಿದ ಇವಳು ತಲೆ ಬಡಿದುಕೊಂಡು ಅತ್ತಳು. ಈಗ ನೋಡಬೇಕು ಆ ಲಫಂಗನ ಕಪಟ ಮಾಂತ್ರಿಕ ವಿದ್ಯೆಗಳನ್ನು. ಪ್ರತೀ ಶುಕ್ರವಾರ ಒಂದೊಂದು ಕ್ಷುಧ್ರ ಪಿಶಾಚಿಗಳು ಅವನ ಮೈಮೇಲೆ ಬರುತ್ತವಂತೆ! ಆಹೊತ್ತು ಅವನು ತನ್ನ ಕಾಲ ಬುಡದಲ್ಲಿ ಕೆಂಡದ ರಾಶಿಯನ್ನು ಸುರಿದುಕೊಂಡು ಅದರ ಸುತ್ತ ಆವೇಶದಿಂದ ನಡೆದಾಡುವುದೇನು, ಕುಣಿದು ಕುಪ್ಪಳಿಸುವುದೇನು. ಅಬ್ಬಾ ದೇವರೇ! ಅವನ ಅಬ್ಬರ, ಅಟ್ಟಹಾಸದ ಕ್ರೌರ್ಯವನ್ನು ನೋಡಬೇಕು. ಥೂ, ಥೂ! ಎಂಥ ನೀಚ ಜನ್ಮ ಅವನದ್ದು! ಆ ಹುಚ್ಚನ ಕೀಳುಮಟ್ಟದ ಕಪಿಚೇಷ್ಟೆಯನ್ನೂ ದೈವದೇವರುಗಳ ಅಲೌಕಿಕ ವರ್ತನೆ, ಪವಾಡಗಳೆಂದು ನಂಬಿ ಆ ಮೂರ್ಖನಿಂದಲೇ ತಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸಿಕೊಳ್ಳಲು ಹಾತೊರೆಯುತ್ತ ಅವನ ಸುತ್ತಲೂ ಭಯಭಕ್ತಿಯಿಂದ ಮುತ್ತಿಕೊಳ್ಳುವ ಪಾಪ ಜನಗಳ ಅವಸ್ಥೆಯನ್ನು ನೀನೂ ಒಮ್ಮೆ ನೋಡಬೇಕು. ಅಬ್ಬಾ! ಎಂಥ ಕಲಿಗಾಲ ಬಂತಪ್ಪಾ ಅಂತ ಅನ್ನಿಸುತ್ತದೆ. ಈ ಮುಂಬೈ ನಗರಕ್ಕೆ ಬರುವ ಮುಕ್ಕಾಲು ಪಾಲು ಜನರು ಪಾಪ ಯಾವ್ಯಾವುದೋ ಬಡ ಊರು, ಗ್ರಾಮಗಳಿಂದ ಒಂದಿಷ್ಟು ಹಣ, ಆಸ್ತಿ, ಅಂತಸ್ತನ್ನು ಸಂಪಾದಿಸಿಕೊಂಡು ನೆಮ್ಮದಿಯಿಂದ ಬಾಳಬೇಕೆಂಬ ಹಿರಿಯಾಸೆಯಿಂದ ಬರುತ್ತಾರೆ. ಅಂಥವರ ಓಟ, ಹುಡುಕಾಟವೆಲ್ಲವೂ ಆ ವಿಷಯವಸ್ತುಗಳ ಹಿಂದೆಯೇ ಹರಿದಾಡುತ್ತದೆ. ಆದರೆ ಅದಕ್ಕೆ ತಕ್ಕಂಥ ಯಶಸ್ಸು ದೊರಕದೆ ಮತ್ತು ಸ್ವಂತ ಊರನ್ನೂ ಆಪ್ತೇಷ್ಟರನ್ನೂ ತೊರೆದು ಸಾವಿರಾರು ಮೈಲಿ ದೂರ ಬಂದ ದುಃಖ, ಅನಾಥಭಾವಗಳೆಲ್ಲವೂ ಸೇರಿ ಅವರಲ್ಲನೇಕರ ಮನಸ್ಥಿತಿಗಳು ದುರ್ಬಲಗೊಳ್ಳುತ್ತವೆ. ಅಂಥ ವಿಷಮಸ್ಥಿತಿಯಲ್ಲೇ ಆ ಅಮಾಯಕರು ಮನಶ್ಶಾಂತಿಯನ್ನು ಹುಡುಕುತ್ತ ಪದ್ಮರಾಜನಂಥ ಮೋಸಗಾರರು ಬೀಸುವ ಬಲೆಗೆ ಬಿದ್ದುಬಿಡುತ್ತಾರೆ ಮತ್ತು ಅವರು ಹೇರುವ ಅನೇಕ ಮೂಢನಂಬಿಕೆಗಳಿಗೂ ಅವುಗಳ ಆಚರಣೆಗಳಿಗೂ ಬಲಿಯಾಗುತ್ತ ತಮ್ಮ ಜೀವನದ ಸಹಜ ಚೆಲುವನ್ನೇ ಕೆಡಿಸಿಕೊಂಡು ಮೊಂಡಾಮೊಚ್ಚಿ ಬಿಡುತ್ತಾರೆ. ಈಚೆಗೆ ಇಲ್ಲಿನ ಒಂದಷ್ಟು ಅಡ್ಡ ದಂಧಿಗರ ಮನಸ್ಥಿತಿಗಳೂ ಎಷ್ಟೊಂದು ಹದಗೆಟ್ಟಿವೆಯೆಂದರೆ, ಆ ಪದ್ಮರಾಜನ ಉನ್ಮಾದರೋಗವನ್ನೇ ದೈವಾವೇಶವೆಂದು ಭ್ರಮಿಸಿ ಅವನೇ ‘ದೇವರು’ ಎಂದು ಪೂಜಿಸುವುದನ್ನು ಕಂಡರೆ ತಿಳಿಯುತ್ತದೆ. ನಮ್ಮ ಸರಕಾರವು ಅದೇನೋ ಐಟಿ ಬಿಟಿ ದಾಳಿ ಅಂತ ಶುರು ಮಾಡಿದೆಯಲ್ಲ. ಅದಕ್ಕೆ ಸಂಬಂಧಿಸಿದ ಕಳ್ಳ ಖದೀಮರನ್ನೂ ದೇಶದ್ರೋಹಿಗಳನ್ನೂ ರೆಡ್‍ಹ್ಯಾಂಡ್ ಆಗಿ ಹಿಡಿಯಬೇಕೆಂದಿದ್ದರೆ ಆ ಸರಕಾರಿ ಅಧಿಕಾರಿಗಳು ಈ ಪದ್ಮರಾಜನಂಥ ಮಂತ್ರವಾದಿಗಳಿಗೆ ಆವೇಶ ಬರುವ ಹೊತ್ತಿನಲ್ಲಿ ವೇಷ ಮರೆಸಿಕೊಂಡು ಹೋಗಿ ತಾಳ್ಮೆಯಿಂದ ನಿಂತು ಕಾಯಬೇಕು ನೋಡು. ಇಡೀ ದೇಶವನ್ನು ನಾನಾ ರೀತಿಯಲ್ಲಿ ಕೊಳ್ಳೆ ಹೊಡೆಯುವ ಭಾರೀ ಕುಳಗಳೆಲ್ಲ ಅಂಥ ಸ್ಥಳಗಳಲ್ಲಿಯೇ ಸಿಗುತ್ತಾರೆ!’ ಎಂದು ಪೆದುಮಾಳರು ಜೋರಾಗಿ ನಕ್ಕವರು ಮತ್ತೆ ಮಾತು ಮುಂದುವೆರೆಸಿದರು. ‘ಥೂ, ಥೂ! ಇಂಥ ಮೋಸದ ವಿಚಾರಗಳಿಂದ ನಾವೆಂದೂ ಯಾರ ಮೇಲೂ ಮಂಕುಬೂದಿ ಎರಚಿದವರಲ್ಲ ಮಾರಾಯಾ! ಅದೇ ನಮಗೆ ನಮ್ಮ ವೃತ್ತಿಯಲ್ಲಿ ತೃಪ್ತಿ ನೀಡುವ ವಿಚಾರ. ನಿನಗೂ ಒಂದು ಕಿವಿ ಮಾತು ಹೇಳುತ್ತೇವೆ ಕೇಳು. ನಮ್ಮ ಪ್ರಾಚೀನ ಋಷಿಮುನಿಗಳ ಅನೇಕ ತಲೆಮಾರುಗಳು ಅವಿರತವಾಗಿ ಶ್ರಮಿಸುತ್ತ ತಮ್ಮ ದಿವ್ಯಜ್ಞಾನದಿಂದ ಸಾಕ್ಷಾತ್ಕರಿಸಿಕೊಂಡ ಜ್ಯೋತಿರ್ವಿಜ್ಞಾನವನ್ನಾಗಲೀ ವೇದೋಪನಿಷತ್ತುಗಳನ್ನಾಗಲೀ ಅಥವಾ ಪುರಾಣಗ್ರಂಥಗಳನ್ನಾಗಲೀ ಯಾರು ಧರ್ಮಶ್ರದ್ಧೆಯಿಂದ ಆಮೂಲಾಗ್ರವಾಗಿ ಅಭ್ಯಾಸಿಸುವುದಿಲ್ಲವೋ ಮತ್ತು ಅಂಥ ಜ್ಞಾನವನ್ನು ಪಡೆದರೂ ಸಮಾಜದಲ್ಲಿ ನ್ಯಾಯವಾಗಿ ವ್ಯವಹರಿಸುವುದಿಲ್ಲವೋ ಅಂಥವರು ಇಹಪರ ಎರಡರಲ್ಲೂ ಉದ್ಧಾರವಾಗೋದಿಲ್ಲ ಮಾತ್ರವಲ್ಲ ತಮ್ಮ ಕೊನೆಗಾಲದಲ್ಲೂ ಅವರು ಸೃಷ್ಟಿ ನಿಯಮದ ಪ್ರಕಾರ ಘೋರ ಶಿಕ್ಷೆಗೆ ಗುರಿಯಾಗುತ್ತಾರೆ!-ಎಂದು ಆ ಋಷಿಮುನಿಗಳೇ ಬರೆದಿಟ್ಟಿದ್ದಾರೆ ಮಾರಾಯಾ! ಹಾಗಾಗಿ ಪದ್ಮರಾಜನಂಥ ದ್ರೋಹಿಯನ್ನು ಕಂಡ ಮೇಲೆ ಇನ್ನು ಮುಂದೆ ನಮ್ಮಲ್ಲಿಗೆ ಯಾರೇ ಬಂದರೂ ಅವರಿಗೆ ಪೂರ್ಣ ವಿದ್ಯೆಯನ್ನೆಂದೂ ನೀಡುವುದಿಲ್ಲ ಎಂದು ನಿರ್ಧರಿಸಿಬಿಟ್ಟೆವು!’ ಎಂದು ಪೆದುಮಾಳರು ಕಡ್ಡಿ ಮುರಿದಂತೆ ಹೇಳಿ ತನ್ನಲ್ಲಿ ಎಂಥ ನಿರಾಶೆ ಮೂಡಿಸಿದರು! ‘ಅಂದರೆ ಎಲ್ಲರೂ ಆ ಪದ್ಮರಾಜನಂತೆಯೇ ಮೋಸಗಾರರಾಗುತ್ತಾರೆ ಅಂತಲೇ ನಿಮ್ಮ ಮಾತಿನ ಅರ್ಥವಾ…?’ ಎಂದು ನಾನೂ ಕೆರಳಿ ಪ್ರಶ್ನಿಸಿದೆ. ‘ಹೌದೌದೋ… ಸರಿಯಾಗೇ ಊಹಿಸಿದೆ ನೀನು. ಮುಂದೊಂದು ದಿನ ನೀನೂ ಅವನಂತೆಯೇ ಆಗುತ್ತಿ ಅನ್ನುವುದನ್ನು ನಮ್ಮ ಜ್ಯೋತಿಷ್ಯವೇ ಹೇಳುತ್ತಿದೆಯಿಲ್ಲಿ! ಹಾಗಾಗಿ ನಿನಗೂ ನಮ್ಮಿಂದ ಯಾವ ವಿದ್ಯೆಯೂ ದಕ್ಕುವುದಿಲ್ಲ. ಅದಕ್ಕೇನು ಮಾಡಬೇಕೆಂದಿರುವಿ…?’ ಎಂದು ಅವರೂ ಗುಡುಗಿದರು.  ‘ಹೌದಾ…? ಸರಿ ಹಾಗಾದರೆ, ನನ್ನ ನಿರ್ಧಾರವನ್ನೂ ಕೇಳಿಸಿಕೊಳ್ಳಿ. ಜೀವನ ಪರ್ಯಂತ ನಿಮ್ಮ ಗುಲಾಮನಾಗಿ ದುಡಿಯಲು ನನ್ನಿಂದಲೂ ಸಾಧ್ಯವಿಲ್ಲ. ನನ್ನ ಹೆಂಡತಿ ಮಕ್ಕಳು ಅಲ್ಲಿ ನತದೃಷ್ಟರಂತೆ ಬದುಕುತ್ತಿದ್ದಾರೆ. ಅವರ ಭವಿಷ್ಯಕ್ಕಾದರೂ ನಾನೊಂದಿಷ್ಟು ಹೆಚ್ಚಿಗೆ ಸಂಪಾದಿಸಬೇಕು. ಆದ್ದರಿಂದ ನಾಳೆನೇ ಊರಿಗೆ ಹೊರಟು ಹೋಗುತ್ತೇನೆ!’ ಎಂದು ತಾನೂ ಸಹನೆ ತಪ್ಪಿ ಅಂದೆ. ಆದರೆ ಆ ಮನುಷ್ಯನಿಗೆ ಆಗಲೂ ಆತಂಕವಾಗಲೀ, ಆಘಾತವಾಗಲೀ ಆಗಲೇ ಇಲ್ಲ! ‘ಹೇ, ಹೋಗಲೋ, ಹೋಗ್! ನಿನ್ನಿಂದಲೇ ನಮಗೆ ಬೆಳಕಾಗುತ್ತದೆಯೆಂದು ನೀನು ಭಾವಿಸಿದ್ದಿಯಾದರೆ ಅದು ನಿನ್ನ ಮೂರ್ಖತನ! ಹಾಗನ್ನುತ್ತಿಯಾದರೆ ನಮಗೂ ನಿನ್ನ ಅವಶ್ಯಕತೆಯಿಲ್ಲ. ನೀನಲ್ಲದಿದ್ದರೆ ನಿನ್ನಂಥ ಹತ್ತು ಜನರನ್ನು ನಿನ್ನ ಮಾವನಂಥವರೇ ತಂದು ನಮಗೆ ಒದಗಿಸುತ್ತಾರೆ ತಿಳ್ಕೋ. ಆದ್ದರಿಂದ ಇರುವುದಾದರೆ ಮುಚ್ಚಿಕೊಂಡಿರು. ಇಲ್ಲಾ ಈಗಲೇ ಹಾಳಾಗಿ ಹೋಗು! ಇಷ್ಟು ವರ್ಷ ಸಾಕಿ ಬೆಳೆಸಿದ್ದಕ್ಕೆ ಇಂದು ನಮ್ಮ ಅನ್ನದ ಬಟ್ಟಲಿಗೇ ಮಣ್ಣು ಹಾಕುವ ದುರ್ಬುದ್ಧಿ ನಿನಗೆ ಬಂದಿದೆಯೆಂದರೆ ಯಾರಿಂದೇನು ಮಾಡಲು ಸಾಧ್ಯ? ಎಲ್ಲಾ ನಿನ್ನ ಹಣೆಬರಹ. ಏನಾದರೂ ಮಾಡಿಕೋ ಹೋಗ್!’ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಲ್ಲದೇ ಹದಿನೈದು ವರ್ಷ ತಾನು ಗಾಣದೆತ್ತುವಿನಂತೆ ದುಡಿದದ್ದಕ್ಕೆ ನಯಾಪೈಸೆಯನ್ನೂ ಕೊಡದೆ ಉಟ್ಟಬಟ್ಟೆಯಲ್ಲೇ ಅಟ್ಟಿದಂಥ ಮಹಾ ಕೃತಘ್ನನಾತ!- ಎಂದು ಆವತ್ತಿನ ಇಡೀ ಘಟನೆಯನ್ನು ಮೆಲುಕು ಹಾಕಿದ ಏಕನಾಥನಿಗೆ ಪೆದುಮಾಳರ ಮೇಲೆ ಅಸಾಧ್ಯ ಸಿಟ್ಟು ಭುಗಿಲೆದ್ದು ಚಡಪಡಿಸಿದ. ಜೊತೆಗೆ ಊರಿಗೆ ಬಂದು ಕುಳಿತ ನಂತರ ಇಲ್ಲೂ ಸ್ಥಿರವಾದ ಉದ್ಯೋಗವಿಲ್ಲದೆ, ಕೈಯಲ್ಲಿ ಕಾಸೂ ಇಲ್ಲದೆ ಪರದಾಡುವ ತನ್ನ ಸ್ಥಿತಿಯನ್ನು ನೆನೆದು ಇನ್ನಷ್ಟು ದುರ್ಬಲ ಯೋಚನೆಗಳು ಅವನನ್ನು ಮುತ್ತಿಕೊಂಡವು. ಹದಿನೈದು ವರ್ಷಗಳ ಕಾಲ ತನ್ನತನವನ್ನೇ ಮರೆತು ಪೆದುಮಾಳನೆಂಬ ತಾಂತ್ರಿಕನ ಕೈಕೆಳಗೆ ದುಡಿದ ತಾನು ಇನ್ನು ಮುಂದೆಯೂ ಅವನ ಸಹಾಯವಿಲ್ಲದೆ ಸ್ವತಂತ್ರನಾಗಿ ಬದುಕಬಲ್ಲೆನೇ…? ಮುಂಬೈ ಎಂಬ ಆ ಮರಾಠಿ ನೆಲದಲ್ಲಿ ಏಗುತ್ತಿದ್ದಷ್ಟು ಸಮಯ ಕೂಡಿಡಲು ಸಾಧ್ಯವಾಗದಿದ್ದರೂ ಹೆಂಡತಿ ಮಕ್ಕಳ ಹೊಟ್ಟೆ ಬಟ್ಟೆ ಕಟ್ಟದಂತೆ ಬದುಕಲೇನೂ ಅಡ್ಡಿಯಿರಲಿಲ್ಲ. ವರ್ಷಕ್ಕೊಮ್ಮೆಯಾದರೂ ಊರಿಗೆ ಬಂದು ಸ್ವಲ್ಪಕಾಲ ಸಂಸಾರದೊಂದಿಗಿದ್ದು ಮರಳಿ ಹಿಂದಿರುಗುತ್ತಿದ್ದ ತನ್ನ ಜೀವನವು ಮೊನ್ನೆಮೊನ್ನೆಯವರೆಗೆ ಪರರ ಹಂಗಿನಲ್ಲಿತ್ತಾದರೂ ಅದರಲ್ಲೂ ಒಂದು ಬಗೆಯ ಸುಖವಿತ್ತು. ಹೀಗಿದ್ದವನು ಇದ್ದಕ್ಕಿದ್ದಂತೆ ಅಂಥ ಭದ್ರತೆಯನ್ನು ಕಳಚಿಕೊಂಡು ಬರುವ ದುಡುಕಿನ ನಿರ್ಧಾರವನ್ನೇನಾದರೂ ಮಾಡಿಬಿಟ್ಟೆನಾ…? ಎಂದು ಚಿಂತಿಸುತ್ತ ಗೊಂದಲಕ್ಕೆ ಬಿದ್ದ. ಮರುಕ್ಷಣ, ಇಲ್ಲ, ಇಲ್ಲ. ತಾನಿಟ್ಟ ಹೆಜ್ಜೆ ಸರಿಯಾಗೇ ಇದೆ. ಇನ್ನೂ ಎಷ್ಟು ಕಾಲಾಂತ ಗುಲಾಮಗಿರಿ ಮಾಡುತ್ತ ಬದುಕುವುದು? ಒಂದುವೇಳೆ ಇದು ನನ್ನ ದುಡುಕೇ ಆದರೂ ಚಿಂತೆಯಿಲ್ಲ. ಎಲ್ಲರಂತೆ ತಾನೂ ತನ್ನ ಕಾಲ ಮೇಲೆ ನಿಂತು ತೋರಿಸಬೇಕು. ಹಾಗಿಲ್ಲದ ತನ್ನ ಜನ್ಮವೇ ವ್ಯರ್ಥ! ಸಂಸಾರವನ್ನು ಸುಸೂತ್ರವಾಗಿ ದಡ ಸೇರಿಸುವ ಹಾಗೂ ಇಬ್ಬರು ವಂಶದ ಕುಡಿಗಳ ಭವಿಷ್ಯವನ್ನು ರೂಪಿಸುವ ದೊಡ್ಡ ಜವಾಬ್ದಾರಿ ತನ್ನ ಮೇಲಿದೆ. ಆದ್ದರಿಂದ ತನ್ನನ್ನು ಕಾಡುಕತ್ತೆಯಂತೆ ದುಡಿಸಿಕೊಳ್ಳುತ್ತ ಶ್ರೀಮಂತಿಕೆಯ ತುತ್ತತುದಿಗೇರಿ ಮೆರೆಯುತ್ತಿರುವ ಆ ದುಷ್ಟ ಪೆದುಮಾಳನಿಗಿಂತ ದುಪ್ಪಟ್ಟು ಎತ್ತರಕ್ಕೆ ಬೆಳೆದು ನಿಲ್ಲದಿದ್ದರೆ ಅಪ್ಪನಿಗೆ ಹುಟ್ಟಿದ ಮಗನೇ ಅಲ್ಲ ನಾನು! ಎಂದು ಏಕನಾಥ ರೋಷದಿಂದ ನಿರ್ಧರಿಸಿದವನು ಆ ಕಾರ್ಯಸಾಧನೆಯ ಬಗ್ಗೆ ತೀವ್ರ ಯೋಚನೆಗೆ ಬಿದ್ದ. ಸದ್ಯದ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆಂಬುದನ್ನು ಮೊದಲು ಕಂಡುಕೊಳ್ಳಬೇಕು. ಗಣಹೋಮ, ಆಶ್ಲೇಷಬಲಿ, ಮೃತ್ಯುಂಜಯ ಹೋಮ, ನಾಗ ಸಂಸ್ಕಾರ, ವರ್ಧಾಂತಿ, ಶ್ರಾದ್ಧಾ, ಸಮಾರಾಧನೆ, ವಾಸ್ತುಪೂಜೆ, ಸತ್ಯನಾರಾಯಣ ಪೂಜೆ, ಶಾಂತಿ ಹೋಮ, ಸುದರ್ಶನ ಹೋಮಗಳಂಥ ಹೆಚ್ಚಿನ ಪೂಜಾವಿಧಿಗಳು ಮತ್ತು ಸ್ವಲ್ಪಮಟ್ಟಿನ ಜ್ಯೋತಿಷ್ಯವೂ, ಇನ್ನೊಂದಷ್ಟು ವಾಸ್ತುಶಾಸ್ತ್ರವೂ ತನಗೆ ಸುಮಾರಾಗಿ ತಿಳಿದಿದೆ. ಆದರೆ ಅದನ್ನು ಸ್ವತಂತ್ರವಾಗಿ ನಿರ್ವಹಿಸಲು ಪೆದುಮಾಳನೆಂದೂ ಅವಕಾಶ ಕೊಡಲಿಲ್ಲ. ಹಾಗಾಗಿಯೇ ಆ ಧಾರ್ಮಿಕ ವಿಧಿಗಳನ್ನು ಧೈರ್ಯವಾಗಿ ವಹಿಸಿಕೊಳ್ಳಲು ಎಂಥದ್ದೋ ಅಳುಕು, ಅಂಜಿಕೆ ಕಾಡುತ್ತದೆ. ಅಷ್ಟುಮಾತ್ರವಲ್ಲದೇ ಧಾರ್ಮಿಕಾಚರಣೆಯ ವಿಷಯದಲ್ಲಿ ಮುಂಬೈ ಜನರ ಕಥೆಯೇ ಬೇರೆ. ಊರಿನವರ ಮನಸ್ಥಿತಿಯೇ ಬೇರಿದೆ. ನನ್ನ ಇಷ್ಟು ಸಣ್ಣ ಊರಿನಲ್ಲಿಯೇ ನೂರಾರು ಮಂದಿ ತಾಂತ್ರಿಕರೂ, ಜ್ಯೋತಿಷ್ಯರೂ, ವಾಸ್ತುತಜ್ಞರೂ ಇದ್ದು ಅವರವರ ನಡುವೆಯೇ ತೀವ್ರ ಪೈಪೋಟಿ ಇರುವಾಗ ತನಗೆಲ್ಲಿ ಅವಕಾಶ ಸಿಕ್ಕೀತು? ಎಂದು ಚಿಂತಿಸಿದ ಏಕನಾಥ ಮರಳಿ ಖಿನ್ನನಾದ. ಗೊಂದಲಗೊಂಡ ಅವನ ಮನಸ್ಸು ಒಂದರ ಮೇಲೊಂದರಂತೆ ವಿಚಾರಗಳನ್ನು ಮುನ್ನೆಲೆಗೆ ತಳ್ಳುತ್ತಲೇ ಇತ್ತಾದರೂ ಅವುಗಳ ಆಳದಲ್ಲೆಲ್ಲೋ ಅವಿತಿದ್ದ ಛಲ ಮತ್ತು ಆಶಾಭಾವನೆಗಳು ಪುಟಿದೆದ್ದುವು. ಆದ್ದರಿಂದ ಸ್ಪರ್ಧೆ, ಪೈಪೋಟಿ ಅನ್ನುವುದು ಎಲ್ಲಾ ಕ್ಷೇತ್ರಗಳಲ್ಲೂ ಇದ್ದೇ ಇರುವಂಥದ್ದು. ನಿನ್ನೆ ಮೊನ್ನೆ ಹುಟ್ಟಿದ ಹುಡುಗರೆಲ್ಲ ಧಾರ್ಮಿಕ ಕ್ರಿಯಾವಿಧಿಗಳ ಬಗ್ಗೆ ನಾಲ್ಕೈದು ಪಾಠ ಹೇಳಿಸಿಕೊಂಡು ಕಾರ್ಯಭಾರಕ್ಕಿಳಿದು ಮಿಂಚುತ್ತಿರುವಾಗ ತಾನು ಹದಿನೈದು ವರ್ಷಗಳ ಅನುಭವ ಇರುವವನು ಹೆದರುವುದಕ್ಕೆ ಅರ್ಥವಿದೆಯೇ! ಹೆಚ್ಚು ಬೇಡ, ಇನ್ನೊಂದು ತಿಂಗಳು ಇದೇ ರೀತಿ ಕುಳಿತೆನೆಂದರೆ ಹೆಂಡತಿ ಮಕ್ಕಳು ಉಪವಾಸ ಬೀಳುವುದು ಖಂಡಿತಾ! ಇಲ್ಲ, ಹಾಗಾಗಲು ಬಿಡಬಾರದು. ಇನ್ನು ಮುಂದೆ ಅರ್ಥವಿಲ್ಲದ್ದನ್ನು ಚಿಂತಿಸಿ ಫಲವಿಲ್ಲ. ಸ್ವಂತ ದುಡಿಮೆ ಸಿಗುವವರೆಗೆ ಯಾರೊಂದಿಗಾದರೂ ಸಹಾಯಕನಾಗಿಯಾದರೂ ಹೋಗಲೇಬೇಕು. ಅದಂತೂ ಸಿಕ್ಕೇ ಸಿಗುತ್ತದೆ. ತನ್ನ ಹಿರಿಯರೂ ತಾನೂ ನಂಬಿಕೊಂಡು ಬಂದಂಥ ಶ್ರೀ ಕೃಷ್ಣ ಪರಮಾತ್ಮನು ಎಂದೂ ತನ್ನ ಕೈ ಬಿಡಲಿಕ್ಕಿಲ್ಲ. ಪ್ರಯತ್ನ ನನ್ನದು. ಫಲಾನುಫಲ ಅವನದು!- ಎಂದು ನಿರ್ಧರಿಸಿದವನು ಸ್ವಲ್ಪ ನಿರಾಳನಾದ. (ಮುಂದುವರೆಯುವುದು)    ****************************************** ಗುರುರಾಜ್ ಸನಿಲ್ […]

ದಾರಾವಾಹಿ- ಅದ್ಯಾಯ-03 ಮುತ್ತಯ್ಯ ಕೊಡುವ ಅರ್ಧ ಸಂಬಳ ಗೋಪಾಲನ ಸಂಸಾರ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಅವನು ತನ್ನ ಗುಡಿಸಲನ್ನು ಬಾಡಿಗೆದಾರರಿಗೆ ಪುಕ್ಕಟೆ ನೀಡಿದ್ದೇನೆಂದು ಕಣ್ಣುಕಟ್ಟಿಗೆ ಹೇಳುತ್ತಿದ್ದ. ಆದರೆ ಅದರ ಬಾಡಿಗೆಯನ್ನು ಗೋಪಾಲ ದಂಪತಿಯ ದುಡಿಮೆಯಿಂದಲೇ ಸೂಕ್ಷ್ಮವಾಗಿ ವಸೂಲಿ ಮಾಡುತ್ತಿದ್ದ. ಈ ಸಂಗತಿಯನ್ನು ಅ‍ರಿತಿದ್ದ ಗೋಪಾಲನೂ ಅವನ ತೋಟದ ಕೆಲಸಕ್ಕೆ ನಿತ್ಯ ಹೋಗುವುದನ್ನು ನಿಲ್ಲಿಸಿಬಿಟ್ಟ. ವಾರದಲ್ಲಿ ಎರಡು, ಮೂರು ದಿನ ಮಾತ್ರ ದುಡಿಯುತ್ತ ಉಳಿದ ದಿನಗಳಲ್ಲಿ ಹೊರಗಡೆ ಹೆಚ್ಚಿಗೆ ಸಂಬಳಕ್ಕೆ ಹೋಗುತ್ತಿದ್ದ. ಆದರೆ ಅದು ಮುತ್ತಯ್ಯನಿಗೆ ಹಿಡಿಸುತ್ತಿರಲಿಲ್ಲ. ಅವನು ಆಗಾಗಗೋಪಾಲನ ಗುಡಿಸಲಿನೆದುರು ಬಂದು,‘ಏನಲೇ ಗೋಪಾಲ, ನೀನು ವಾರ ಪೂರ್ತಿ ಕೆಲಸಕ್ಕೆ ಯಾಕೆ ಬರುವುದಿಲ್ಲ ಮಾರಾಯಾ, ಹೊರಗೆ ದುಡಿಯುವುದಕ್ಕಾ ನಿನಗೆ ಮನೆ ಕೊಟ್ಟಿರುವುದು…?’ ಎಂದು ಗದರಿಸುತ್ತಿದ್ದ. ಆಗೆಲ್ಲ ಗೋಪಾಲನೂ,‘ಅಯ್ಯೋ ಹಾಗೆಲ್ಲ ಭಾವಿಸಬೇಡಿ ಧಣಿ, ನಿಮ್ಮಲ್ಲಿಯೇ ದುಡಿಯಲಿಕ್ಕೆ ಬಂದವರಲ್ಲವ ನಾವು. ಆದರೂ ಕೆಲವೊಮ್ಮೆ ನಿಮ್ಮ ತೋಟದಲ್ಲೂ ಕೆಲಸ ಕಮ್ಮಿ ಇರುತ್ತದಲ್ಲ ಆವಾಗ ಸಂಜೀವ ಶೆಟ್ಟರೋ ಡ್ಯಾನಿ ಪರ್ಬುಗಳೋ ತಮ್ಮ ಹೊಲ, ತೋಟಗಳ ಅಗತ್ಯದ ಕೆಲಸಕ್ಕೆ ಕರೆಯುತ್ತಾರೆ. ಹೋಗಿ ಮಾಡಿಕೊಟ್ಟು ಬರುತ್ತೇನಷ್ಟೆ. ಅವರೂ ನನ್ನ ಕಷ್ಟದ ಕಾಲದಲ್ಲಿ ಸಹಾಯ ಮಾಡುತ್ತಾರೆ. ಇಲ್ಲಿ ನಾನಿಲ್ಲದಿದ್ದರೂ ರಾಧಾ ಬರುತ್ತಾಳಲ್ಲ ಧಣಿ…!’ ಎಂದು ಅವನನ್ನು ಪುಸಲಾಯಿಸುತ್ತಿದ್ದ. ರಾಧಾಳ ಹೆಸರೆತ್ತುತ್ತಲೇ ಮುತ್ತಯ್ಯ ಮೃದುವಾಗುತ್ತಿದ್ದ. ಅವಳ ಸೌಂದರ್ಯಕ್ಕೆ ಅವನು ಯಾವತ್ತೋ ಮನ ಸೋತಿದ್ದ. ಎರಡು ಮಕ್ಕಳ ತಾಯಿಯಾಗಿ ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೂ ಅವಳ ಮೋಹಕ ಚೆಲುವಿನ್ನೂ ಮಾಸಿರಲಿಲ್ಲ. ಹಾಲು ಬೆಳದಿಂಗಳಿನಂಥ ಅವಳ ರೂಪವು ಅವನನ್ನು ಹುಚ್ಚೆಬ್ಬಿಸುತ್ತಿತ್ತು.    ಹಾಗಾಗಿಗೋಪಾಲ ಬೆಳಿಗ್ಗೆ ಮನೆಯಿಂದ ಹೊರಡುವ ತನಕ ಅವನ ಸುಳಿವಿರುತ್ತಿರಲಿಲ್ಲ. ಅವನು ಸೈಕಲ್ ಹತ್ತಿ ‘ಹೋಗಿ ಬರುತ್ತೇನೆ ಮಾರಾಯ್ತೀ!’ ಎಂದು ಹೆಂಡತಿ ಮಕ್ಕಳಿಗೆ ಬೆಲ್ ಹೊಡೆದ ಸೂಚನೆ ದೊರೆತ ಕೂಡಲೇ ಮುತ್ತಯ್ಯನ ಸವಾರಿಯು ಗೋಪಾಲನ ಗುಡಿಸಲ ಮುಂದೆ ಪ್ರಕಟವಾಗುತ್ತಿತ್ತು. ಇವತ್ತೂ ಅದೇ ಚಪಲದಿಂದ ಬಂದಿದ್ದ. ಆದರೆ ಅಲ್ಲಿನ ದೃಶ್ಯವೊಂದು ಅವನ  ಮನಸ್ಸನ್ನು ಕೆಡಿಸಿಬಿಟ್ಟಿತು.  ‘ರಾಧಾ, ಹೇ, ರಾಧಾ ಎಲ್ಲಿದ್ದಿ ಮಾರಾಯ್ತೀ…! ಸ್ವಲ್ಪ ಹೊರಗೆ ಬಾ! ಇಲ್ಲಿ ನೋಡಿಲ್ಲಿ ನಿನ್ನ ಮಕ್ಕಳ ಅವಸ್ಥೆ! ಥೂ! ಹೊರಗೆಲ್ಲಾ ಹೇಸಿಗೆ ಮಾಡಿಟ್ಟಿದ್ದಾರೆ. ಏನಿದು ತೋಟದೊಳಗೆಲ್ಲಾ, ಭಾಷೆ ಬೇಡವಾ ನಿಮಗೆ! ಅವುಗಳನ್ನು ಕಕ್ಕಸಿನಲ್ಲಿ ಕೂರಿಸಲೇನು ದಾಡಿ ನಿಂಗೆ!’ ಎಂದು ಜೋರಾಗಿ ಸಿಡುಕಿದ. ರಾಧಾ ಅನ್ನಕ್ಕೆ ನೀರಿಡುತ್ತಿದ್ದವಳು ಮುತ್ತಯ್ಯನ ಒರಟು ಧ್ವನಿ ಕೇಳಿ ಆತಂಕದಿಂದ ಹೊರಗೆ ಬಂದಳು. ಮಕ್ಕಳಿಬ್ಬರೂ ತೋಟದ ಮೂಲೆಯಲ್ಲಿ ಕುಳಿತು ಪಂಚಾತಿಕೆ ಹೊಡೆಯುತ್ತ ಸಂಡಾಸು ಮಾಡುತ್ತಿದ್ದರು. ಆದರೆ ಮುತ್ತಯ್ಯನ ಕೆಕ್ಕರು ದೃಷ್ಟಿಗೆ ಹೆದರಿ ರಪ್ಪನೆದ್ದು ಅಪರಾಧಿಗಳಂತೆ ನಿಂತಿದ್ದರು. ರಾಧಾಳಿಗೆ ನಾಚಿಕೆಯಾಯಿತು. ಅವರತ್ತ ಹೋಗಿ ಕಿವಿ ಹಿಂಡಿ ಎಳೆದೊಯ್ದು ಒಳಗೆ ಬಿಟ್ಟು, ಆತುರಾತುರವಾಗಿ ಹೊರಗೆ ಬಂದು, ‘ತಪ್ಪಾಯ್ತು ಧಣಿ… ಮಕ್ಕಳು ಯಾವತ್ತೂ ಹೀಗೆ ಮಾಡಿದವರಲ್ಲ. ಇವತ್ತೇನಾಯಿತೋ?’ ಎಂದು ಸಂಕೋಚದಿಂದ ಹಿಡಿಯಾಗಿ ಕ್ಷಮೆಯಾಚಿಸಿದಳು. ಮುತ್ತಯ್ಯ ಅಷ್ಟಕ್ಕೇ ಮೆತ್ತಗಾದ. ‘ಹ್ಞೂಂ ಪರ್ವಾಗಿಲ್ಲ, ಬಿಡು. ಇನ್ನು ಮುಂದೆ ಅವು ಹಾಗೆ ಮಾಡದಂತೆ ನೋಡಿಕೋ. ಅವನೆಲ್ಲಿ ಹೋದ ಗೋಪಾಲ…? ತೋಟದ ಮಡಲು, ಕಾಯಿ ತಪ್ಪರಿಗೆಗಳನ್ನೆಲ್ಲಾ ಹೆಕ್ಕಿ ಮನೆಯತ್ತ ತಂದು ಹಾಕು ಅಂತ ಮೊನ್ನೆಯಿಂದ ಬೊಬ್ಬೆ ಹೊಡೆಯುತ್ತಿದ್ದೇನೆ. ಅವನಿಗದು ನಾಟುವುದೇ ಇಲ್ಲವಲ್ಲಾ! ಒಂದೋ ನೀನು ಹೆಕ್ಕಿ ಹಾಕು. ಇಲ್ಲಾ ಅವನು ಬಂದ ಕೂಡಲೇ ರಾಶಿ ಹಾಕಿಸು. ತೋಟ ನೋಡಲೇ ಬೇಸರವಾಗುತ್ತದೆ!’ ಎಂದು ಹೇಳುವಾಗ ಅವನ ದೃಷ್ಟಿ ಅವಳ ಎದೆಯ ಮೇಲೆ ನೆಟ್ಟಿತ್ತು. ಅಷ್ಟರಲ್ಲಿ ಮಕ್ಕಳಿಬ್ಬರೂ ಆಡಲು ತೋಟದತ್ತ ಓಡಿದರು.    ಅದನ್ನು ಕಂಡ ಮುತ್ತಯ್ಯ ಮೀಸೆಯಡಿಯಲ್ಲೇ ನಕ್ಕ. ರಾಧಾಳನ್ನು ಅನುಭವಿಸುವ ಬಯಕೆ ಮತ್ತೆ ಅವನಲ್ಲಿ ಹೆಡೆಯೆತ್ತಿತು. ಅವನ ಮುಖಭಾವವನ್ನು ಗಮನಿಸಿದ ರಾಧಾಳಿಗೆ ಭಯ, ಮುಜುಗರ ಒಟ್ಟೊಟ್ಟಿಗಾಯಿತು. ತಲೆತಗ್ಗಿಸಿ ಎದೆಯ ಭಾಗವನ್ನು ಸೆರಗಿನಿಂದ ಮತ್ತಷ್ಟು ಮುಚ್ಚಿಕೊಳ್ಳುತ್ತ, ‘ಆಯ್ತು ಧಣಿ. ಅವರು ಬಂದ ಕೂಡಲೇ ಹೇಳುತ್ತೇನೆ. ನನಗೆ ಮನೆ ಕೆಲಸವೇ ತುಂಬಾ ಇದೆ’  ಎಂದು ಹೇಳಿ ರುಮ್ಮನೆ ಒಳಗೆ ಹೋದಳು. ಬಳುಕುತ್ತ ಕಣ್ಮರೆಯಾದ ಅವಳ ಮೈಮಾಟವನ್ನು ಕಂಡ ಮುತ್ತಯ್ಯ ಉನ್ಮತ್ತನಾಗಿ, ‘ಆಯ್ತು… ಪರ್ವಾಗಿಲ್ಲ. ನೀನೇನೂ ಮಾಡಬೇಡ. ನಿನ್ನ ಕಷ್ಟ ನನಗಿಲ್ಲಿ ‘ಎದ್ದು’ ಕಾಣುತ್ತಿದೆ!’ ಎಂದು ಆಸೆಯಿಂದ ಹೇಳಿದವನು ಸ್ವಲ್ಪಹೊತ್ತು ಅಲ್ಲೇ ಅಂಗಳದಲ್ಲಿ ಸುತ್ತಾಡುತ್ತ ಯೋಚಿಸಿದ. ಥೂ! ಈದೇವರು ಬಡ ಹೆಂಗಸರಿಗೇ ಯಾಕೆ ನಮ್ಮಂಥ ಗಂಡಸರನ್ನು ಹುಚ್ಚೆಬ್ಬಿಸುವ ರೂಪ, ಲಾವಣ್ಯವನ್ನು ಕೊಡುತ್ತಾನೋ? ಇವರ ವನಪು ವೈಯ್ಯಾರಗಳೆಲ್ಲ ನಮ್ಮ ತಲೆ ಹಾಳು ಮಾಡಿ ಬಿಡುತ್ತವೆ ಕರ್ಮದ್ದು. ನನ್ನವಳೂ ಒಬ್ಬಳಿದ್ದಾಳೆ. ಆದರೆ ಪ್ರಯೋಜನವೇನುಬಂತು? ದರಿದ್ರವಳಿಗೆ ಯಾವಾಗಲೂ ಒಂದಲ್ಲಾ ಒಂದು ಕಾಯಿಲೆ! ಮೈಬಗ್ಗಿಸಿ ದುಡಿಯದೆ ಕೂತುಂಡು ಆನೆಮರಿಯಂತಾಗಿದ್ದಾಳೆ ಲೌಡಿ. ಅಂಥವಳ ಜೊತೆ ಏಗುವುದೋ ಬಿಡುವುದೋ ದೇವರಿಗೇ ಗೊತ್ತು!    ಆದರೆ ಮನೆ ಕೆಲಸದ ನಾಗವೇಣಿ ಕೆಳ ಜಾತಿಯವಳಾದರೂ ಎಷ್ಟೊಂದು ಪಸಂದಾಗಿದ್ದಾಳೆ. ನಾನೂ ಉಪ್ಪು ಹುಳಿ ಖಾರ ತಿನ್ನುವವನಲ್ಲವಾ! ಅದಕ್ಕೇ ಆವತ್ತೊಮ್ಮೆ ಆಗುವುದಾಗಲಿ ಎಂದುಕೊಂಡು ಅವಳನ್ನು ಬಾಚಿ ತಬ್ಬಿ ಕೊಂಡದ್ದು. ಅವಳು ರಂಪ ಮಾಡಿಬಿಡುತ್ತಾಳೇನೋ ಎಂದು ಭಾವಿಸಿದ್ದೆ. ಆದರೆ ನಡೆದದ್ದು ಬೇರೆಯೇ. ಮೊದಲಿಗೆ ಬೆಚ್ಚಿಬಿದ್ದು ದಿಟ್ಟಿಸಿದವಳು ತಕ್ಷಣ ಮೆದುವಾಗಿ ನಗುತ್ತ ತೋಳ ತೆಕ್ಕೆಗೆ ಬಿದ್ದುಬಿಟ್ಟಳು. ಆವತ್ತಿನಿಂದ ಒಂದಿಷ್ಟು ಸುಖ ಅವಳಿಂದ ಸಿಗದಿರುತ್ತಿದ್ದರೆ ಈ ಕಾಡುಹಂದಿಯನ್ನು ಕಟ್ಟಿಕೊಂಡು ನಾನೇನು ಮಾಡಬೇಕಿತ್ತೋ. ಆದರೆ ಆ ನಾಗಿಯ ಗಂಡ ಕುಡ್ಚೇಲ ಮಣಿಯಾಣಿಯ ದುಡ್ಡಿನ ಪೀಡನೆ ನೆನೆದರೆ ಮಾತ್ರ ಅವಳನ್ನೂ ಮುಟ್ಟುವುದು ಬೇಡ ಅಂತನ್ನಿಸುತ್ತದೆ! ಎಂದು ತಲೆಕೊಡವಿಕೊಂಡ. ಬಳಿಕ ಮತ್ತೆ, ಈ ರಾಧಾ ಸಖತ್ ಆಗಿದ್ದಾಳೆ. ನಾಗಿಯಷ್ಟು ಚಾಲಾಕಿನವಳೂ ಅಲ್ಲ. ಗೋಪಾಲನೂ ದುರಾಸೆಯ ಮನುಷ್ಯನಲ್ಲ. ಅವಕಾಶ ಸಿಕ್ಕಿದರೆ ಇವಳನ್ನೇ ಒಲಿಸಿಕೊಂಡು ಪರ್ಮನೆಂಟಾಗಿ ಇಟ್ಟುಕೊಳ್ಳಬೇಕು! ಎಂಬ ಯೋಚನೆಯಲ್ಲಿ ತೇಲಾಡುತ್ತ ಮೆತ್ತಗೆ ರಾಧಾಳ ಮನೆಯೊಳಗೆ ಅಡಿಯಿಟ್ಟ.    ಅಷ್ಟರವರೆಗೆ ಅಡುಗೆ ಕೋಣೆಯಲ್ಲಿದ್ದ ರಾಧಾ, ಮುತ್ತಯ್ಯ ಹೊರಟು ಹೋದನೆಂದು ಭಾವಿಸಿ ಹೊರಗೆ ಬಂದವಳು ಅವನನ್ನು ಕಂಡು ನಡುಗಿಬಿಟ್ಟಳು. ಮುತ್ತಯ್ಯ ಪಡಸಾಲೆಯಲ್ಲಿ ನಿಂತಿದ್ದ. ‘ಏ…,ಏನೂ…ಏನು ಬೇ…ಕಿ…ತ್ತು…ಧಣೀ…!’ ಎಂದೆನ್ನುತ್ತ ಮೂಲೆಗೆ ಸರಿದು ನಿಂತಳು. ‘ಅರೆರೇ, ನೀನೆಂಥದು ಮಾರಾಯ್ತೀ ಇಷ್ಟೊಂದು ಹೆದರುವುದು? ನಾನೇನು ಹುಲಿನಾ, ಸಿಂಹನಾ…? ಎರಡು ಮಕ್ಕಳ ತಾಯಿ ನೀನು, ನಾನ್ಯಾಕೆ ಬಂದೆನೆಂದು ತಿಳಿಯದಷ್ಟು ಪೆದ್ದಿಯಾ…? ನಿನ್ನ ಆತಂಕ  ನನಗೂ ಅರ್ಥವಾಗುತ್ತದೆ. ಹೆದರಬೇಡ. ಸ್ವಲ್ಪ ಹೊತ್ತು ಸುಮ್ಮನಿದ್ದುಬಿಡು. ಆಮೇಲೆ ನಿನ್ನನ್ನು ರಾಣಿಯಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು!’ ಎಂದು ನಾಲಗೆಯಿಂದ ಕೆಳದುಟಿ ಸವರುತ್ತ ಮುಂದುವರೆದ. ರಾಧಾ ಮತ್ತಷ್ಟು ಬೆದರಿದಳು. ದುಃಖ ಉಮ್ಮಳಿಸಿ ಬಂತು. ಮುತ್ತಯ್ಯ ಅವಳನ್ನು ಬಾಚಿ ತಬ್ಬಿಕೊಳ್ಳಲು ಮುಂದಾದ. ಅದನ್ನು ತಿಳಿದವಳಿಗೆ ಕೆಟ್ಟ ರೋಷವೆದ್ದಿತು. ‘ಛೀ! ಮುಟ್ಬೇಡಿ ನನ್ನ! ಇಂಥ ಕೆಲಸ ಮಾಡಲು ನಾಚಿಕೆಯಾಗುವುದಿಲ್ಲವಾ ನಿಮಗೆ…? ನೀವೆಣಿದಂಥ ಹೆಂಗಸಲ್ಲ ನಾನು. ಮರ್ಯಾದೆಯಿಂದ ಹೊರಟು ಹೋಗಿ. ಇಲ್ಲವಾದರೆ ಜೋರಾಗಿ ಬೊಬ್ಬೆ ಹೊಡೆಯುತೇನಷ್ಟೆ!’ ಎಂದು ಒರಟಾಗಿ ಗದರಿಸಿದಳು. ನಾಗವೇಣಿಯಂತೆ ಇವಳೂ ತಾನು ಮುಟ್ಟಿದ ಕೂಡಲೇ ತೆಕ್ಕೆಗೆಬಿದ್ದು ಮಂದಹಾಸ ಬೀರುತ್ತಾಳೆಂದುಕೊಂಡಿದ್ದ ಮುತ್ತಯ್ಯನ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿಬಿಟ್ಟಿತು. ಅವನು ಅವಕ್ಕಾದವನು, ‘ಆಯ್ತು, ಆಯ್ತು ಮಾರಾಯ್ತೀ. ಕಿರುಚಬೇಡ. ನಿನಗಿಷ್ಟವಿದ್ದರೆ ಮಾತ್ರ. ಯಾರನ್ನೂ ನಾನು ಬಲವಂತ ಮಾಡುವವನಲ್ಲ. ಇರಲಿ. ಕುಡಿಯಲಿಕ್ಕೆ ಸ್ವಲ್ಪ ನೀರಾದರೂ ಕೊಡುತ್ತೀಯಾ ಇಲ್ವಾ…?’ ಎಂದ ಹುಸಿನಗುತ್ತ. ‘ನೀರೂ ಇಲ್ಲ, ಮಣ್ಣೂ ಇಲ್ಲ! ಮನೆಗೆ ಹೋಗಿ ಕುಡಿದು ಕೊಳ್ಳಿ. ಹ್ಞೂಂ ಹೊರಡಿ!’ ಎಂದು ರಾಧಾ ಇನ್ನಷ್ಟು ಕೋಪದಿಂದ ಗುಡುಗಿದವಳು ತಿರುಗಿ ಅಡುಗೆ ಕೋಣೆಗೆ ನುಸುಳಿ ದಢಾರ್ರನೇ ಕದವಿಕ್ಕಿಕೊಂಡಳು.      ಮುತ್ತಯ್ಯನಿಗೆ ಕಪಾಳಕ್ಕೆ ಹೊಡೆದಷ್ಟು ಅವಮಾನ, ಭಯಒಟ್ಟೊಟ್ಟಿಗಾಯಿತು. ರಪ್ಪನೆ ಹೊರಗೆ ಧಾವಿಸಿದ. ಅವನಿಗೆ ತಾನು ಕೆಲವೇ ಕ್ಷಣಗಳ ಹಿಂದಷ್ಟೇ ಕಂಡು ಮೋಹಿಸಿದ್ದ ರಾಧಾಳ ರೂಪವು ಈಗ ಮಹಾಕಾಳಿಯಂತಾಗಿ ಕಣ್ಣೆದುರು  ಸುಳಿಯಿತು. ‘ಅಬ್ಬಾ! ಇವಳೇ…ಇಷ್ಟೊಂದು ಜೋರಿದ್ದಾಳಾ…!’ ಎಂದುಕೊಂಡವನು, ಯಾರಾದರೂ ಕೇಳಿಸಿಕೊಂಡರಾ…? ಎಂದು ಒಮ್ಮೆಸುತ್ತಮುತ್ತ ಕಳ್ಳ ದೃಷ್ಟಿ ಬೀರಿದ. ಪುಣ್ಯಕ್ಕೆ ಯಾರೂ ಕಾಣಿಸಲಿಲ್ಲ. ಮತ್ತೆ ಅಲ್ಲಿ ನಿಲ್ಲಲಾಗದೆ ರಪರಪನೇ ತೋಟದತ್ತ ಹೆಜ್ಜೆ ಹಾಕಿದ. ಆದರೆ ಅವನ ಹಸಿವಿನ್ನೂ ತಣಿದಿರಲಿಲ್ಲ. ಆ ನಿರಾಶೆಯು ಅವಳ ಮೇಲಿನ ಕೋಪವಾಗಿ ಮಾರ್ಪಟ್ಟಿತು. ‘ಅಲ್ಲಾ, ಎಷ್ಟೊಂದು ಸೊಕ್ಕು ಈ ಹಡೆರಂಡೆಗೆ! ಮನೆ ಕೊಟ್ಟ ಧಣಿ ಅಂತಾನ್ನೂ ಲೆಕ್ಕಿಸದೆ ನಾಯಿಯನ್ನು ಗದರಿಸುವಂತೆ ಗದರಿಸಿಬಿಟ್ಟಳಲ್ಲ! ಇವಳು ಉರುವಲು ಬೇಕೆಂದು ಬಂದಾಗಲೆಲ್ಲ ಪಾಪ ಬಡಹೆಂಗಸು ಎಂದುಕೊಂಡು ಒಣ ಮಡಲು, ತಪ್ಪರಿಗೆ, ತೆಂಗಿನ ಹೆಡೆ, ಕಾಯಿ, ಬಾಳೆಹಣ್ಣುಗಳನ್ನೆಲ್ಲ ಬಾಚಿ ಬಾಚಿ ಕೊಡುತ್ತಿದ್ದೆನಲ್ಲ. ಅವಕ್ಕೆಲ್ಲ ಬೆಲೆಯೇ ಇಲ್ಲವಾ ಹಾಗಾದರೆ? ಇಲ್ಲ, ಇನ್ನು ಇವಳನ್ನು ಸುಮ್ಮನೆ ಬಿಡಲಿಕ್ಕಿಲ್ಲ. ಇಂದಲ್ಲ ನಾಳೆ ಅನುಭವಿಸಿಯೇ ತೀರಬೇಕು. ಇನ್ನೂ ಸ್ವಲ್ಪ ಕಾಲ ಮನವೊಲಿಸುವ ನಾಟಕವಾಡುವ. ಒಲಿದರೆ ಗೆದ್ದಳು. ಇಲ್ಲವಾದರೆ ಸೆರಗು ಹರಿದಾದರೂ ಚಿಂತೆಯಿಲ್ಲ, ಒಮ್ಮೆ ರುಚಿ ನೋಡಲೇಬೇಕು! ಎಂದು ನಿರ್ಧರಿಸಿ ಸ್ವಲ್ಪ ಸ್ಥಿಮಿತಕ್ಕೆ ಬಂದ. ಮರುಕ್ಷಣ ಅವನಿಗೆ ಮತ್ತೊಂದು ಯೋಚನೆ ಹುಟ್ಟಿತು. ಇವಳು ಕೋಪದ ಬರದಲ್ಲಿ ಗಂಡ ಬಂದ ತಕ್ಷಣ ತನ್ನ ಮೇಲೆ ಚಾಡಿ ಹೇಳದೆ ಬಿಡಲಾರಳು. ಅವನಿಗೆ ತಿಳಿದರೆ ಕಷ್ಟ. ಹಾಗಾಗಲು ಬಿಡಬಾರದು ಎಂದುಕೊಂಡು ರಪ್ಪನೆ ಹಿಂದಿರುಗಿ ನಡೆದ. ಅವಳ ಅಂಗಳದಲ್ಲಿ ನಿಂತುಕೊಂಡು, ‘ರಾಧಾ…!’ ಎಂದು ಮೃದುವಾಗಿ ಕರೆದ. ರಾಧಾಳಿಗೆ ಮತ್ತೆ ಅಳುಕೆದ್ದಿತು. ಆದರೂ ತೋರಿಸಿಕೊಳ್ಳದೆ ಒಳಗಿನಿಂದಲೇ,  ‘ಏನು…?’ ಎಂದು ಒರಟಾಗಿ ಪ್ರಶ್ನಿಸಿದಳು. ‘ಸ್ವಲ್ಪ ಹೊರಗೆ ಬಾ ಮಾರಾಯ್ತೀ…’ ಎಂದು ಅಂಗಲಾಚಿದ. ಆದರೆ ಅವಳು, ‘ಈ ನೀಚ ಇನ್ನೊಮ್ಮೆ ತನ್ನನ್ನು ಮುಟ್ಟಲು ಪ್ರಯತ್ನಿಸಬೇಕು, ಸಿಗಿದೇ ಹಾಕುತ್ತೇನೆ!’ ಎಂದುಕೊಂಡು ಕತ್ತಿಯನ್ನು ಸೆರಗಿನ ಮರೆಯಲ್ಲಿಟ್ಟುಕೊಂಡೇ ಹೊಸ್ತಿಲಿಗೆ ಬಂದು, ‘ಏನೂ…!’ ಎಂಬಂತೆ ಅವನನ್ನು ತೀಕ್ಷ್ಣವಾಗಿ ದಿಟ್ಟಿಸಿದಳು. ಆದರೆ ಅವನ ಮುಖ ಕಂಡು ಹೇಸಿಗೆಯೆನಿಸಿತು. ದೃಷ್ಟಿ ತಪ್ಪಿಸಿ ಎತ್ತಲೋ ನೋಡುತ್ತ ನಿಂತಳು. ಮುತ್ತಯ್ಯ ಮತ್ತೊಮ್ಮೆ ಬೆದರಿದ. ಆದರೂ ತನ್ನ ಅದುರುವ ದೇಹವನ್ನು ಹತೋಟಿಗೆ ತಂದುಕೊಳ್ಳುತ್ತ, ‘ಬೇಜಾರು ಮಾಡಿಕೊಳ್ಳಬೇಡ ಮಾರಾಯ್ತಿ. ಏನೋ ಕೆಟ್ಟ ಗಳಿಗೆ. ನಿನ್ನ ಚಂದಕ್ಕೆ ಮನಸ್ಸು ಮರುಳಾಯಿತು. ಹೆಣ್ಣಿನಾಸೆ ಯಾವ ಗಂಡಸನ್ನು ಬಿಟ್ಟಿದೆ ಹೇಳು? ನನ್ನ ಹೆಂಡತಿಯೊಬ್ಬಳು ಸರಿಯಿರುತ್ತಿದ್ದರೆ ಇಂಥದ್ದಕ್ಕೆಲ್ಲ ಕೈಹಾಕಲಿಕ್ಕಿತ್ತಾ ನಾನು? ಅದನ್ನೆಲ್ಲ ನಿನ್ನ ಹತ್ತಿರ ಹೇಳಿ ಪ್ರಯೋಜನವಿಲ್ಲ ಬಿಡು. ನನ್ನಿಂದ ತಪ್ಪಾಯ್ತು. ನಡೆದದ್ದನ್ನು ಮರೆತುಬಿಡು. ಗಂಡನಿಗೆ ತಿಳಿಸಿ ನಿಷ್ಠೂರ ಕಟ್ಟಿಕೊಳ್ಳುವುದು ಬೇಡ. ಹ್ಞಾಂ, ಇನ್ನೊಂದು ಮಾತು. ಕಾಯಿ, ಗೀಯಿ, ಕಟ್ಟಿಗೆ ಬೇಕಾದರೆ ಹಿಂದಿನಂತೆಯೇ ಸಂಕೋಚಪಡದೆ ತೆಗೆದುಕೊಂಡು ಹೋಗು ಮಾರಾಯ್ತಿ. ಒಟ್ಟಾರೆ ನೀವು ಒಕ್ಕಲಿನವರು ಚೆನ್ನಾಗಿರಬೇಕುಅಷ್ಟೇ. ನಾನೇನು ಹೋಗುವಾಗ ಕೊಂಡು ಹೋಗುತ್ತೇನಾ!’ ಎಂದು ವೈರಾಗಿಯಂತೆ ನುಡಿದು ಹಿಂಬದಿಯನ್ನು ಪರಪರ ಕೆರೆದುಕೊಳ್ಳುತ್ತ ಹೊರಟು ಹೋದ. ರಾಧಾಳಿಗೆ ಅವನ ಮಾತು, ವರ್ತನೆಗಳು ಅಸಹ್ಯವೆನಿಸಿದುವು. ಏನೂ ಉತ್ತರಿಸಿದೆ ತುಟಿ ಕಚ್ಚಿ ನಿಂತಳು. ಮುತ್ತಯ್ಯನ ಕೀಳು ಚಪಲ, ನೀಚತನವನ್ನು ಹಿಂದಿನಿಂದಲೂ ಅನುಭವಿಸುತ್ತ ಬಂದವಳಿಗೆ ಇಂದಿನ ಘಟನೆಯಿಂದ ಸಹನೆ ತಪ್ಪಿಬಿಟ್ಟಿತು. ಇಂಥವರಹಂಗಿನ ಗುಡಿಸಲೂ ಸಾಕು! ಈ ಲಂಪಟರ ಹಸಿದ ದೃಷ್ಟಿಗೆ ಬಲಿಯಾಗಿದ್ದೂ ಸಾಕು. ಒಂದಿಷ್ಟಿರುವ ಬಂಗಾರ ಮಾರಿ ಹೋದರೂ ಚಿಂತೆಯಿಲ್ಲ. ಆದಷ್ಟು ಬೇಗ ಒಂದು ತುಂಡು ಸ್ವಂತ ಭೂಮಿಯನ್ನು ಮಾಡಿಕೊಳ್ಳಲೇಬೇಕು. ಆಮೇಲೆ ಬೀಡಿ ಕಟ್ಟಿ, ಗಂಜಿ ಉಂಡಾದರೂ ಬದುಕಬಹುದು. ಯಾವುದಕ್ಕೂ ಇವರೊಮ್ಮೆ ಮನೆಗೆ ಬಂದುಕೊಳ್ಳಲಿ. ಕೊರಳಪಟ್ಟಿ ಹಿಡಿದು ಎರಡರಲ್ಲೊಂದು ಇತ್ಯಾರ್ಥ ಮಾಡಿಯೇ ತೀರುತ್ತೇನೆ! ಎಂದು ಕುದಿಯುತ್ತ ಗಂಡನ ದಾರಿ ಕಾಯತೊಡಗಿದಳು. (ಮುಂದುವರೆಯುವುದು) ************************** ಗುರುರಾಜ್ ಸನಿಲ್ ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, […]

ದಾರಾವಾಹಿ- ಅದ್ಯಾಯ-02 ಗೋಪಾಲ ಮೂಲತಃ ಈಶ್ವರಪುರ ಜಿಲ್ಲೆಯ ಅಶೋಕ ನಗರದವನು. ಅವನ ಹೆಂಡತಿ ರಾಧಾ ಕಾರ್ನಾಡಿನವಳು. ‘ಗಜವದನ’ ಬಸ್ಸು ಕಂಪನಿಯಲ್ಲಿ ಹಿರಿಯ ಚಾಲಕರಾಗಿದ್ದ ಸಂಜೀವಣ್ಣನ ಮೂರು ಗಂಡು, ಎರಡು ಹೆಣ್ಣು ಮಕ್ಕಳಲ್ಲಿ ಗೋಪಾಲ ಕೊನೆಯವನು. ಸಂಜೀವಣ್ಣ ತಮ್ಮ ಪ್ರಾಮಾಣಿಕ ದುಡಿಮೆಯಲ್ಲಿ ಆಸ್ತಪಾಸ್ತಿಯನ್ನೇನೂ ಮಾಡಿರಲಿಲ್ಲ. ಆದರೆ ಮಕ್ಕಳು ಓದುವಷ್ಟು ವಿದ್ಯೆಯನ್ನೂ, ತನ್ನ ಸಂಸಾರ ಸ್ವತಂತ್ರರಾಗಿರಲೊಂದು ಹಂಚಿನ ಮನೆಯನ್ನೂ ಕಟ್ಟಿಸಿ, ಒಂದಷ್ಟು ಸಾಲಸೋಲ ಮಾಡಿ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿದ್ದರು. ಆ ಸಾಲ ತೀರುವ ಹೊತ್ತಿಗೆ ಹಿರಿಯ […]

ಆವರ್ತನ

ಇದು ಗುರುರಾಜ್ ಸನಿಲ್ ಅವರ ‘ಆವರ್ತನ’ ಎಂಬ ಸಾಮಾಜಿಕ ಕಾದಂಬರಿ. ಪ್ರಸ್ತುತ ಕಾಲಘಟ್ಟದ ಸಮಾಜದಲ್ಲಿ ನಮ್ಮ ಕೆಲವು ನಂಬಿಕೆ, ಆಚರಣೆಗಳು ಯಾವ ಯಾವ ರೀತಿಗಳಲ್ಲಿ ಜನಜೀವನ ಶೋಷಣೆಗೂ, ಹಸಿರು ಪರಿಸರ ಮತ್ತು ವನ್ಯಜೀವರಾಶಿಗಳ ಮಾರಣಹೋಮಕ್ಕೂ ಕಾರಣವಾಗುತ್ತಿವೆ ಎಂಬುದನ್ನು ಬಹಳ ಸಮೀಪದಿಂದ ಕಾಣುತ್ತ ಬಂದವರು ಇವರು.. ಹಾಗಾಗಿ ಅದೇ ಕಥಾವಸ್ತುವನ್ನು ಕಾದಂಬರಿ ಪ್ರಕಾರದಲ್ಲೂ ಆಯ್ದುಕೊಂಡು ಜನಜಾಗ್ರತಿ ಮೂಡಿಸುವುದು ಅಗತ್ಯ ಎಂದು ತೋರಿ ಈ ಕೃತಿಯನ್ನು ರಚಿಸಿದ್ದಾರೆ. ಇದು ಪುಸ್ತಕರೂಪದಲ್ಲಿ ಪ್ರಕಟವಾಗುವ ಮುನ್ನ ಸಂಗಾತಿಯ ಓದುಗರನ್ನು ತಲುಪಲೆಂದು ಪ್ರತಿ ಬಾನುವಾರ ಇದನ್ನು ಕಂತುಗಳಲ್ಲಿ ಪ್ರಕಟಿಸಲಾಗುತ್ತಿದೆ. ದಾರಾವಾಹಿ ಕ್ಷೇತ್ರದಲ್ಲಿ ಇದು ಸಂಗಾತಿಯ ಮೊದಲ ಪ್ರಯತ್ನ ಓದುಗರು ತಮ್ಮ ಅನಿಸಿಕೆ ತಿಳಿಸಬೇಕೆಂದು ಕೋರುತ್ತೇವೆ

Back To Top