ಕಾವ್ಯಯಾನ
ಕವಿತೆ ಹುಟ್ಟುವುದಿಲ್ಲ ಸ್ಮಿತಾ ರಾಘವೇಂದ್ರ ಆತ್ಮವೆಂಬ ಅನೂಹ್ಯ ಭಾವಗರ್ಭಗುಡಿಯ ಹೊಕ್ಕು ಹಲವು ಕವಿತೆಗಳು ತಣ್ಣಗೆ ಹೊರ ನಡೆಯುತ್ತವೆ ಕವಿತೆಯ ಹಡೆದ ಮೌನದಂತೆ! ನಭೋಮಂಡಲವ ತಿರು ತಿರುಗಿ ವಿರಮಿಸಿ ಉಸುರಿದಾಗೊಂದು- ನಿಟ್ಟುಸಿರು: ಆತ್ಮಕ್ಕೆ ದಕ್ಕಿದ್ದು ಕಾಯಕ್ಕೆ ದಕ್ಕುವದಿಲ್ಲ! ಅಣು ರೇಣುವಿನಲಿ ಪಲ್ಲವಿಸಿ ತಲೆದೂಗಿ ರಿಂಗಣಿಸಿ ಒಳಗೊಳಗೇ ಭೋರ್ಗರೆದು ಮಂಜುಗಟ್ಟಿದ ಕಣ್ಣ ತೊರೆದು ಅರಿಯದೇ ಉದುರಿದ ಕವಿತೆಯ ಕರುಣೆ- ತೊರೆದ ನಿರಾಳ ಬದುಕಿನ ಕೊನೆಯ ಕವಿತೆಗೆ ಮಾತೂ ಇರುವುದಿಲ್ಲ ಮೂಕ ಮರ್ಮರವೊಂದರ ಅಂತರಾತ್ಮ: ಸೋತ ಕಣ್ಣುಗಳಿಂದ ಸರಿದ ಸುಂದರ ನೋಟ. ಸಾವಿನ ಆಲಿಂಗನ, ಆಲಿಂದ ದಾಟಿ ತಿರುಗಿಯೂ ನೋಡದೇ ನಡೆದ ಕರುಳ ಹಿಂಡಿದ ಕವಿತೆ, ಆತ್ಮ ಸಂಗಾತ ಬಿಂದುವೊಂದಕೆ ಬಂದು ಸೇರಿದ ಭಾವ- ಬೃಹದಾಕಾರ ಚದುರಿ- ವಿವಿಧ ರೂಪಕ ಸೇರಿ ಜಗದ ತುಂಬಾ ಪುಟ್ಟ ಪುಟ್ಟ ಕವಿತೆಯ ಧಾರಣ! ಹುಟ್ಟೂ ಇಲ್ಲದ ಸಾವೂ ಇಲ್ಲದ ನಿರಂತರ ಚಲನೆ ಜಗದ ಏಕೈಕ ಕವಿತೆ ಸಕಲವನೂ ಸಹಿಸುತ್ತದೆ! ಕವಿತೆ ಹುಟ್ಟುವುದಿಲ್ಲ ಸ್ವಯಂ ಹೆರುತ್ತದೆ!! *********









