ಕನ್ನಡ ಕಾವ್ಯ ಕುರಿತು
ಕಾವ್ಯವನ್ನು ಬಗೆಯುವ ಬಗೆ ರಾಮಸ್ವಾಮಿ ಡಿ.ಎಸ್. ಕಾವ್ಯವನ್ನು ಬಗೆಯುವ ಬಗೆ ಮೊನ್ನೆ ಭಾನುವಾರ ನಾವೆಲ್ಲ ಸ್ವಯಂ ಕರ್ಫ್ಯೂ ವಿಧಿಸಿಕೊಂಡು ಮನೆಯಲ್ಲೇ ಇದ್ದಾಗ ಬೆಳಗಾವಿಯ ಕವಿ ಪ್ರವೀಣ ಆಯ್ದ ಕೆಲ ಯುವ ಕವಿಗಳನ್ನು ಫೇಸ್ಬುಕ್ ಲೈವಲ್ಲಿ ಬರುವಂತೆ ಆಯೋಜಿಸಿ ಕವಿತೆಗೆ ಇರುವ ಅನನ್ಯ ಸಾಧ್ಯತೆಗಳ ವಿಸ್ತಾರವನ್ನು ಮತ್ತೊಮ್ಮೆ ಕಾವ್ಯಾಸಕ್ತರಿಗೆ ತಿಳಿಯಪಡಿಸಿದರು. ಶ್ರೀ ಪ್ರವೀಣ ಮತ್ತು ಅವರ ಎಲ್ಲ ಗೆಳೆಯರಿಗೂ ಅಭಿನಂದನೆಗಳು. ಕೆಲಸವಿಲ್ಲದೆ ಸುಮ್ಮನೆ ಏನನ್ನೋ ಟ್ರೋಲ್ ಮಾಡುತ್ತಿದ್ದಾಗ ಈ ಕವಿಗೋಷ್ಠಿಯ ಮೊದಲ ಕವಿ ವೀರಣ್ಣ ಮಡಿವಾಳರನ್ನು ಕೇಳಿಸಿಕೊಂಡೆ. ಅವರ ಮೊದಲ ಸಂಕಲನ ಸಾಕಷ್ಟು ಹೆಸರು ಮಾಡಿತ್ತು. ಮತ್ತು ಆ ಸಂಕಲನ ಕುರಿತ ಮೊದಲ ವಿಮರ್ಶೆ ಕನ್ನಡಪ್ರಭ ನನ್ನಿಂದ ಬರೆಸಿ ಪ್ರಕಟಿಸಿತ್ತು. ಕುತೂಹಲ ಹೆಚ್ಚಿ ಅವತ್ತು ಕವಿತೆಗಳನ್ನು ಪ್ರಸ್ತುತ ಪಡಿಸಿದ ಎಲ್ಲ ಕವಿಗಳನ್ನೂ ಕೇಳುತ್ತ (ಹಲವೊಮ್ಮೆ ನೆಟ್ ವರ್ಕ್ ಸಮಸ್ಯೆ ಇದ್ದರೂ) ವರ್ತಮಾನದಲ್ಲಿ ಬರೆಯುತ್ತಿರುವ ಭರವಸೆಯ ಮುಖಗಳನ್ನು ಕಂಡೆ. ರಾಜೇಂದ್ರ ಪ್ರಸಾದ್, ಭುವನಾ ಹಿರೇಮಠ, ಪ್ರವೀಣ, ಅರುಣ ಜೋಳದ ಕೂಡ್ಲಗಿ, ಮಮತಾ ಅರಸೀಕೆರೆ, ಭಾಗ್ಯಲಕ್ಡ್ಮಿ, ಮುಲ್ತಾನಿ, ಋಗ್ವೇದಿ ಮೊದಲಾಗಿ ಭಗವಹಿಸಿದ ( ಕೆಲವರ ಹೆಸರು ಮರೆತೆ) ಎಲ್ಲರ ಕವಿತೆಗಳೂ ಬೇರೆ ಬೇರೆ ಆಶಯದ ಆದರೆ ಮನು ಕುಲದ ನಿತ್ಯ ಸತ್ಯದ ಬೇಡಿಕೆಯಾಗಿಯೇ ಇದ್ದುದು ವಿಶೇಷ. ಕಾವ್ಯಾಸಕ್ತತೆ ಮತ್ತು ಪ್ರಯೋಗಶೀಲತೆ ಹೊಸ ಕವಿಯ ರಚನೆಗಳಲ್ಲಿ ಕಂಡೊಡನೆಯೇ ಪ್ರತಿಕ್ರಯಿಸುವುದು ನನ್ನ ಅಭ್ಯಾಸ. ವೀರಣ್ಣ, ಅರುಣ, ಮಮತಾ, ರಾಜೇಂದ್ರ ಪ್ರಸಾದ್ ಕುರಿತು ಪತ್ರಿಕೆಗೆ ಬರೆದಂತೆಯೇ ಪ್ರವೀಣ, ಭುವನಾ, ಕುರಿತು ಫೇಸ್ಬುಕ್ಕಲ್ಲಿ ಬರೆದು ಅನ್ನಿಸಿದನ್ನು ದಾಖಲಿಸಿದ್ದೇನೆ. ವಿಮರ್ಶೆಯ ಹರಿತ ಸ್ನೇಹಕ್ಕೆ ಮುಳುವಾದ ಸಂದರ್ಭಗಳೂ ಇವೆ! ಇರಲಿ. ಕಳೆದ ಮೂವತ್ತೈದು ವರ್ಷಗಳಿಂದಲೂ ಕವಿತೆಯ ಸಾಗಂತ್ಯದಲ್ಲಿ ಬದುಕು ಕಂಡುಕೊಂಡ ನನಗೆ ಹೊಸಕಾಲದ ಅದರಲ್ಲೂ ಹೊಸ ಮಾಧ್ಯಮಗಳಾದ ಫೇಸ್ಬುಕ್ ಮತ್ತು ವಾಟ್ಸ್ ಅಪ್ ಗುಂಪುಗಳಲ್ಲಿ ಹಾಗೇ ವೈಯುಕ್ತಿಕ ಪೇಜಲ್ಲಿ ಬರೆಯುತ್ತಿರುವ ಹಲವರ ಬಗ್ಗೆ ಖುಷಿ ಮತ್ತು ಕೆಲವರ ಬಗ್ಗೆ ಸಂತಾಪಗಳೂ ಇವೆ. ಹೊಗಳಿಕೆಗೋ ಲೈಕಿಗೋ ಅಥವ ತುಂಬ ಈಸಿಯಾದ ಇಮೋಜಿಗಳಿಗೋ ಇರುವ ಪ್ರಾಧಾನ್ಯತೆ ವಿಮರ್ಶೆಯ ನಿಜದ ಮಾತುಗಳಿಗೆ ಪ್ರೋತ್ಸಾಹಕ್ಕೆ ಹೇಳಿದ ತಿದ್ದುಪಡಿಗಳಿಗೆ ಇಲ್ಲದುದನ್ನು ಕಂಡಾಗ ಬೇಸರವೂ ಆಗಿದೆ. ಕಾವ್ಯಕೇಳಿ, ಕಾಜಾಣ, ಪದ್ಯ, ಮೊದಲಾದ ತಾಣಗಳು, ಹಾಗೇ ಅವಧಿ, ಕೆಂಡಸಂಪಿಗೆ, ಸಂಗಾತಿ, ಸಂಪದ ಮೊದಲಾದ ವೆಬ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಕವಿತೆಗಳೂ ಇದುವರೆಗೂ ನಂಬಿದ್ದ ಸಾಹಿತ್ಯ ಚರಿತ್ರೆ ಕಟ್ಟಿಕೊಟ್ಟಿದ್ದ ಮಿತಿ ಮತ್ತು ಪಾತಳಿಯನ್ನು ವಿಸ್ತರಿಸಿ ಹಾಗೇ ಕೆಡವಿ ಹೊಸದನ್ನು ಕಟ್ಟುತ್ತಿರುವ ಈ ಕಾಲದ ಎಲ್ಲ ನಿಜ ಕವಿಗಳನ್ನೂ ಅಭಿನಂದಿಸುತ್ತೇನೆ. ಈ ಕುರಿತು ಸದ್ಯ ಅನಿಸಿದ್ದನ್ನು ವಿಸ್ತರಿಸಿ ಈ ಲೇಖನ. ನಮ್ಮಲ್ಲಿ ಬಹಳ ಜನ ಕವಿತೆಯೆಂದರೆ ಕವಿಗೋಷ್ಠಿಯೆಂದರೆ ಮೂಗು ಮುರಿಯುತ್ತೇವೆ. ಕವಿತೆಯನ್ನು ಓದುವುದು ಅಥವ ಬರೆಯುವುದೆಂದರೆ ಮಾಡಲು ಬೇರೇನೂ ಕೆಲಸವಿಲ್ಲದವರು ಹೊಂಚಿಕೊಂಡ ಕೆಲಸವೆಂದು ಅನ್ನುವವರೂ ಇದ್ದಾರೆ. ಆದರೂ ಸಾಹಿತ್ಯ ಸಮ್ಮೇಳನಗಳ ಮುಖ್ಯ ಆಕರ್ಷಣೆಯೇ ಕವಿಗೋಷ್ಠಿಗಳಾಗಿರುವುದೂ ವಿಶೇಷವೇ. ಪಂಡಿತರಿಗಷ್ಟೇ ಕವಿತೆ ಪಾಮರರಿಗೆ ಏಕದರ ಗೊಡವೆ ಅನ್ನುವವರೂ ಇದ್ದಾರೆ. ಇನ್ನು ಕವಿಯಲ್ಲದವರು ಅಥವ ಕವಿತೆಯ ಗೊಡವೆ ಬೇಡದೆಯೂ ಕವಿತೆಯ ಜೊತೆಗೆ ಅನಿವಾರ್ಯವಾಗಿ ಬೆರೆಯುವವರೆಂದರೆ ಅದನ್ನು ಪಠ್ಯವಾಗಿ ಓದಲೇಬೇಕಿರುವ ವಿದ್ಯಾರ್ಥಿಗಳು ಮತ್ತು ಅದನ್ನವರಿಗೆ ಪಾಠ ಹೇಳಬೇಕಾದ ಗುರುತರ ಜಾವಾಬ್ದಾರಿ ಹೊಂದಿರುವ ಅಧ್ಯಾಪಕರು.ಕವಿತೆಯನ್ನು ಪಾಠ ಮಾಡುವುದು ಎಂದರೆ ಅಧ್ಯಾಪಕರಿಗೆ ಹಿಂಜರಿಕೆ.ವರ್ಷಾವಧಿ ಪರೀಕ್ಷೆಯಲ್ಲಿ ಕವಿತೆಗಳ ಮೇಲೆ ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವುದೆಂದರೆ ವಿದ್ಯಾರ್ಥಿಗಳಿಗೆ ಅಂಜಿಕೆ. ಅರ್ಥವಾಗದು ಎಂಬ ಅಂಜಿಕೆ ಹುಡುಗರಿಗೆ. ಅರ್ಥವಾಗದಿದ್ದರೆ ಎಂಬ ಅಂಜಿಕೆ ಅಧ್ಯಾಪಕರಿಗೆ. ಓದಿದ ಕವಿತೆ ಅರ್ಥವಾಗದಿದ್ದರೆ ನಮ್ಮ ಅಹಂಕಾರಕ್ಕೆ ಪೆಟ್ಟು. ಅದಕ್ಕೇ ನಮಗೆ ಕವಿತೆಯ ಉಸಾಬರಿಯೇ ಬೇಡ ಎಂದು ಮುಖ ತಿರುಗಿಸುವ ಮಂದಿ ಬಹಳ. ಕವಿತೆಯೊಂದನ್ನು ಓದಿದೊಡನೆಯೇ ಅದು ಅರ್ಥವಾಗಲೇ ಬೇಕು ಎಂದು ದಯವಿಟ್ಟು ಹಠಮಾಡಬೇಡಿ. ಕವಿತೆಯನ್ನು ಅರ್ಥದ ಗೂಟಕ್ಕೆ ಕಟ್ಟಬೇಡಿ. ಅದನ್ನು ಸುಮ್ಮನೆ ವಿಹಾರಕ್ಕೆ ಬಿಡಿ. ಅಂಗಳದಲ್ಲಿ ಆಡಬಯಸುವ ಪುಟ್ಟ ಮಗುವಿನಂತೆ ಕವಿತೆ ಆರಾಮಾಗಿ ನಿಮ್ಮ ಮನದ ಅಂಗಳದಲ್ಲಿ ಆಡಿಕೊಳ್ಳಲಿ. ಕವಿತೆಯ ಭಯವನ್ನು ಗೆಲ್ಲಲು ನಾವು ಆರಂಭದಲ್ಲಿ ಕೈಗೊಳ್ಳಬೇಕಾದ ಸುಲಭ ಉಪಾಯವಿದು. ಸುಮ್ಮನೆ ಓದುತ್ತಾ ಹೋದರೆ, ಓದುತ್ತಲೇ ಹೋದರೆ ಹೇಗೆ ಈಗ ತಾನೇ ಓಡಾಡಲು ಪ್ರಾರಂಭಿಸಿರುವ ಮಗು ತನ್ನ ಆಟದಲ್ಲಿ ಒಂದು ಲಯ ಕಂಡೀತೋ ಹಾಗೆಯೇ ನೀವೂ ಕವಿತೆಯನ್ನು ಕಾಣಬೇಕು. ಕವಿತೆ ಹೇಗೆ ನಡೆಯುವುದು, ಹೇಗೆ ನಗುವುದು, ಹೇಗೆ ಅತಾರ್ಕಿಕವನ್ನು ಪಲುಕುವುದು ಗಮನಿಸಿ.ಕವಿತೆ ಎಂದರೆ ಮೊದಲು ಗಮನಿಸ ಬೇಕಾದದ್ದು ಅದನ್ನು ಕವಿಯು ಹೇಗೆ ಗುನುಗುನಿಸುವ ಮಾತುಗಳನ್ನು ಹಿಡಿದು ನೇಯ್ದು ಮಾಲೆ ಮಾಡಿದ್ದಾನೆ ಎಂಬುದನ್ನು ಓದಿನ ಮೂಲಕವೇ ದಕ್ಕಿಸಿಕೊಳ್ಳಬೇಕು.ಕವಿತೆಯ ಗ್ರಹಿಕೆ ಎಂಬುದು ಕವಿತೆಯ ಶಬ್ದ ಸಾಮಗ್ರಿಯಿಂದ ನೀವೇ ಸ್ವಂತ ಕಟ್ಟಿಕೊಂಡ ಗ್ರಹಿಕೆ ಎಂಬುದನ್ನು ಮರೆಯದಿರಿ. ಈ ಪದ್ಯದ ಇನ್ನೊಬ್ಬ ಓದುಗ ಭಿನ್ನವಾದ ಬೇರೆ ಒಂದು ಗ್ರಹಿಕೆಯನ್ನೇ ತನ್ನ ಓದಿನಿಂದ ಕಟ್ಟಿಕೊಂಡರೆ ನೀವು ಆತಂಕಗೊಳ್ಳಬೇಕಿಲ್ಲ. ಸದ್ಯಕ್ಕೆ ಇದು ನಿಮ್ಮ ಕಾವ್ಯ ಗ್ರಹಿಕೆ. ಮುಂದೆ ನಿಮ್ಮ ಓದು ಪರಿಷ್ಕಾರಗೊಂಡಂತೆ ಕವಿತೆ ಬೇರೊಂದು ವಿಭಿನ್ನವಾದ ಗ್ರಹಿಕೆಯನ್ನೇ ಕಟ್ಟಿಕೊಳ್ಳಬಲ್ಲುದು. ಕವಿತೆ ಒಂದೇ; ಆದರೆ ಅದರ ಗ್ರಹಿಕೆಗಳೂ ಅನಂತ. ಈ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಹೊಸ ಕಾವ್ಯಾರ್ಥಿಗಳು ತಮ್ಮ ಕಾವ್ಯ ಶೋಧವನ್ನು ಮುಂದುವರೆಸಲಿ. ಕವಿತೆಯೆಂಬುದು ನಿರಂತರ ವಿಕಸನಶೀಲವಾದ ಒಂದು ಜೈವಿಕ ಭಾಷಾನುಸಂಧಾನ ಎಂಬ ಅರಿವು ನಿಮಗಿರಲಿ. ಅದಕ್ಕಿಂತ ಮುಖ್ಯ ನಮ್ಮ ಪೂರ್ವಸೂರಿಗಳನ್ನೂ ಹಾಗೇ ಸಮಕಾಲೀನರನ್ನೂ ಎಷ್ಟು ಓದಿಕೊಂಡಿದ್ದೀರಿ ಎನ್ನುವುದು ಮುಖ್ಯ. ಸಾಹಿತ್ಯ ಚರಿತ್ರೆಯ ಅದು ನಡೆದ ಬಂದ ದಾರಿಯ ಬಗ್ಗೆ ಕೊಂಚವಾದರೂ ತಿಳುವಳಿಕೆ ನಾವು ನಡೆಯುತ್ತಿರುವ ದಾರಿಗೆ ತೋರುಬೆರಳು ಅನ್ನುವುದನ್ನು ಮರೆಯದಿರೋಣ. ಹಲವು ಯುವ ಬರಹಗಾರರು ಪರಂಪರೆಯನ್ನು ಧ್ಯಾನಿಸದೇ ಸುಮ್ಮನೇ ಮುಂದುವರಯುತ್ತಿರುವುದನ್ನೂ ಓದಿನಿಂದ ಬಲ್ಲೆ. ನಿಜಕ್ಕೂ ಭಾಷೆಯ ಸೊಗಸು, ಅದರ ನಿರ್ಮಿತಿಯ ವಿನ್ಯಾಸ ಹಾಗೂ ಮಿತಿ ಅರ್ಥವಾಗುವುದೇ ನಿರಂತರದ ಓದಿನಿಂದ. ಅನ್ಯರನ್ನು ಓದದೇ ನಾವು ನಮ್ಮ ಕಾವ್ಯ ಬೆಳೆಯಲಾರದು. ಇನ್ನು ನವ್ಯ ನವೋದಯ ಬಂಡಾಯ ಇತ್ಯಾದಿ ಇತ್ಯಾದಿ ಪ್ರಬೇಧಗಳೆಲ್ಲ ನಮ್ಮ ಓದಿನ ರುಚಿಯನ್ನು ಮತ್ತು ಕವಿತೆಗಳ ಓದಿನ ಮೂಲಕ ನಾವೇ ಕಟ್ಟಿಕೊಂಡ ಗ್ರಹಿಕೆಗಳನ್ನು ಅಳೆಯುವ ಸಾಧನವಾಗಿವೆಯೇ ವಿನಾ ಅವೇ ಅಂತಿಮವಲ್ಲ. ಏಕೆಂದರೆ ಒಂದು ಕಾಲದಲ್ಲಿ ಗಣ ಪ್ರಸ್ತಾರ ಛಂದೋಬಂಧವಿರದುದನ್ನು ಕಾವ್ಯವೆಂದು ಒಪ್ಪುತ್ತಿರಲಿಲ್ಲ. ನಂತರ ಬಂದ ನವೋದಯ ಸಾಹಿತ್ಯ ಮಾರ್ಗ ಲಯ ಮತ್ತು ಭಾವಗೀತಾತ್ಮಕ ಶೈಲಿಯನ್ನು ಮೈಗೂಡಿಸಿಕೊಂಡಿದ್ದರೆ ನಂತರದ ಪ್ರಗತಿಶೀಲ ಮಾರ್ಗ ಸರ್ವ ಸಮಾನತೆಯನ್ನು ಒಟ್ಟು ಜನಕಲ್ಯಾಣವನ್ನು ಬಯಸುವ ಸಮಾಜವಾದದ ಆಯಕಟ್ಟಿನ ಮೇಲೆ ನಿಂತಿತ್ತು. ನವ್ಯ ಕಾವ್ಯವಂತೂ ಕನ್ನಡ ಕಾವ್ಯ ಕೃಷಿಯ ಜಮೀನಿನ ಮೇಲೆ ಬಿದ್ದ ಹೊಸ ಬಗೆಯ ಬೆಳೆ. ಅಲ್ಲಿಯವರೆಗೂ ಮನುಷ್ಯನ ಆಂತರಿಕ ಸಂಗತಿಗಳನ್ನು ಅಷ್ಟಾಗಿ ಪ್ರಕಟಪಡಿಸದೇ ಪ್ರಾಕೃತಿಕ ಬಣ್ಣನೆಯಲ್ಲೇ ಕಳೆದು ಹೋಗಿದ್ದವರು ತಮ್ಮ ತಮ್ಮ ಜೀವನದ ಖಾಸಗೀ ಸಂಗತಿಗಳಿಗೂ ಕಾವ್ಯದ ಸ್ಪರ್ಶ ಕೊಟ್ಟ ಸಂದರ್ಭವಿದು. ಇನ್ನು ಬಂಡಾಯ ಮಾರ್ಗ ಕನ್ನಡಕಾವ್ಯ ಪರಂಪರೆಗೆ ಹೊಸ ದಿಕ್ಕು ದೆಸೆಗಳನ್ನು ಕೊಟ್ಟು ಬೇಡಿಕೆಯನ್ನು ಹಕ್ಕಾಗಿ ಪ್ರಕಟಿಸುವ ಧೈರ್ಯವಾಗಿ ಮೊಳಗಿದ್ದು ಈಗ ಇತಿಹಾಸ. ಇನ್ನು ಸದ್ಯದ ಕಾವ್ಯ ಇನ್ನೂ ತನ್ನ ದಾರಿಯನ್ನು ಸ್ಪಷ್ಟಗೊಳಿಸಿಕೊಳ್ಳಬೇಕಿದೆ. ನವೋದಯದ ರಮ್ಯತೆ ಕಳೆದು ನವ್ಯದ ಪ್ರತಿಮೆ ರೂಪಕಗಳೂ ಸವೆದು ಬಂಡಾಯದ ದನಿ ಉಡುಗಿಹೋಗಿರುವ ಸಂದರ್ಭದಲ್ಲಿ ಕಾವ್ಯವೆಂದರೆ ಆ ಕ್ಷಣ ಅನ್ನಿಸಿದ್ದನ್ನು ತತ್ ಕ್ಷಣವೇ ಬರೆದು ಪ್ರಕಟಿಸುವ ಸಾಮಾಜಿಕ ಜಾಲತಾಣಗಳ ಪುಟಗಳಾಗಿ ಬದಲಾಗುತ್ತಿದೆ. ಇದು ಗಮನಿಸಬೇಕಾದ ಮುಖ್ಯ ಸಂಗತಿ. ಕವಿತೆ ಬರೆಯುವವರೆಂದರೆ ಅದ್ಯಾಪಕರೇ ಎಂಬ ಹುಸಿಯನ್ನು ವರ್ತಮಾನದ ಕವಿಗಳು ಅಳಿಸಿಹಾಕಿದ್ದಾರೆ. ಬದುಕಿನ ಹಲವು ಸ್ತರಗಳಿಂದ ಅನುಭವಗಳಿಂದ ಹುರಿಗೊಂಡ ಅನೇಕ ಮನಸ್ಸುಗಳು ಆಧುನಿಕ ಕಾವ್ಯ ಪ್ರಕಾರವನ್ನು ಕಟ್ಟುತ್ತಿವೆ. ತಮಗನ್ನಿಸಿದ್ದನ್ನು ನಿರ್ಭಿಡೆಯಿಂದ ಸ್ಪಷ್ಟವಾಗಿ ಹೇಳುವ ಸಿದ್ಧ ಸಾಮಗ್ರಿ ಈಕಾಲದ ಕವಿಗಳಿಗಿರುವುದು ವಿಶೇಷ. ದಿನಕ್ಕೊಂದು ಕವಿಯ ಒಂದೇ ಒಂದು ಕವಿತೆಯನ್ನು ಅಭ್ಯಾಸ ಮಾಡುವ ಕ್ರಮವನ್ನು ರೂಢಿಸಿಕೊಂಡರೆ ನಾವೇ ಅತ್ಯುತ್ತಮ ವಿಮರ್ಶಕರಾಗಲು ಸಾಧ್ಯ. ಆದರೆ ಅದಕ್ಕೂ ಮೊದಲು ನಮಗೆ ನಾವೇ ಹಾಕಿಕೊಂಡಿರುವ ಆದರ್ಶದ ಗೆರೆಗಳನ್ನು ಅಳಿಸಿಕೊಳ್ಳಬೇಕು. ಎಲ್ಲವನ್ನೂ ಎಲ್ಲವನ್ನೂ ಮುಗ್ಧತೆಯಿಂದ ನೋಡುವ ಗುಣವನ್ನು ಸಾಧಿಸಬೇಕು. ಆಗ ಬರಿಯ ಪ್ರಕಟಿತ ಕವಿತೆಯೇನು ಬದುಕಿನ ಹಲವು ಪಲುಕಗಳಲ್ಲಿ ನಿತ್ಯನೂತನ ಸಂಗತಿಗಳಲ್ಲಿರುವ ಕಾವ್ಯವನ್ನು ಅರಿಯಲು ಸಾಧ್ಯ. ಏನಂತೀರಿ? – ಡಿ.ಎಸ್.ರಾಮಸ್ವಾಮಿ
ಯುಗಾದಿಗೊಂದು ಗಝಲ್
ಗಝಲ್ ಸುಜಾತಾ ಲಕ್ಮನೆ ಒಲಿದೊಮ್ಮೆ ನಕ್ಕುಬಿಡು ಯುಗಾದಿ ಚೆಲ್ಲಲಿ ನಮ್ಮೊಳಗೆ ಮುನಿಸೇಕೆ ಹೇಳಿಬಿಡು ಯುಗಾದಿ ಮಾಗಲಿ ನಮ್ಮೊಳಗೆ ಕನಸು ಕಂಗಳ ತುಂಬ ರಂಗು ರಂಗಿನ ಚುಂಬಕ ಚಿತ್ತಾರ ಚುಕ್ಕಿಗಳ ಸುರಿದುಬಿಡು ಯುಗಾದಿ ತುಂಬಲಿ ನಮ್ಮೊಳಗೆ ಹೀಗೆ ವರುಷ ವರುಷಕೂ ಬರುವ ಹಬ್ಬವೇತಕೆ ಹೇಳು ನವ ಹರುಷವ ತೂಗಿಬಿಡು ಯುಗಾದಿ ಜೀಕಲಿ ನಮ್ಮೊಳಗೆ ತೆರೆಯು ತೆರೆವ ತೆರದಿ ನಾವು ತೆರೆದು ಬೆರೆಯಲಾರೆವೇನು ತೆರೆತೆರೆದು ಬೆರೆತುಬಿಡು ಯುಗಾದಿ ಬೀಗಲಿ ನಮ್ಮೊಳಗೆ ಉಸಿರುಸಿರು ಬೆರೆಯದೇ ಒಳಗೆ ಬಿಸುಪು ಹರಿವುದೇನೇ ನಿನ್ನ್ಹೆಸರ ಉಸಿರಿಬಿಡು ಯುಗಾದಿ ಮಿಂಚಲಿ ನಮ್ಮೊಳಗೆ ಹಗಲಿರುಳು ಪ್ರೀತಿ ಸುರಿವಾಗ ಜಗದ ಗೊಡವೆ ನಮಗೇಕೆ ಬರಸೆಳೆದು ಅಪ್ಪಿಬಿಡು ಯುಗಾದಿ ನಾಚಲಿ ನಮ್ಮೊಳಗೆ ಎದೆಕದವು ತೆರೆದಿದೆ ನಿನಗೆ ನೇರ ಒಳಗೆ ಬಾ ಎನ್ನೊಲವೆ “ಸುಜೂ” ಒಳ ಭಾವ ಅರಿತುಬಿಡು ಯುಗಾದಿ ಬಾಳಲಿ ನಮ್ಮೊಳಗೆ
ಯುಗಾದಿ ಕಾವ್ಯ
ಶಾವ೯ರಿ ಯುಗಾದಿ ರೇಖಾ ವಿ.ಕಂಪ್ಲಿ ಯುಗಾದಿ ನಿನ್ನ ಸ್ವಾಗತಿಸುವ ಸಂಭ್ರಮ ಸಡಗರ ಮಡುಗಟ್ಟಿದೇ ವಿಕಾರಿ ಸಂವತ್ಸರದ ಕೊನೆಯಲಿ ವಿಷಕಾರಿತು ಕರೋನಾ ಜಗವ ತಲ್ಲಣಗೊಳಿಸಿದೇ ಉಸಿರಿಸಲು ಬೇವರಿಳಿಸುವಂತೆ ಮಾಡಿದೆ ಎಲ್ಲರನ್ನು ಮನೆಯೊಕ್ಕಿಸಿ ಬಿಟ್ಟಿದೆ ಮಹಾಮಾರಿ ರೋಗಕ್ಕೆ ಬೆದರಿದೇ ಜಗದೆದೆಯನು ಜಲ್ಲ ಎನ್ನಿಸಿದೆ ಯುಗಾದಿ ನಿನ್ನ ಸ್ವಾಗತಿಸುವ ಸಂಭ್ರಮ ಸಡಗರ ಮಡುಗಟ್ಟಿದೇ ಮುಡಿಗಟ್ಟಿ ಅದರುಟ್ಟಡಿಗಿಸಲು ಬಾ ಯುಗಾದಿ ಬಾ ಯುಗಾದಿ ಬಾ …………. ಯುಗಾದಿ ಯುಗ ಯುಗಾಂತರ ಕಳೆದರು ಹೊಸತು ತರುವ ನಿನ್ನ ಹಚ್ಚ ತೋರಣದಿ ಆಹ್ವಾನಿಸಲು ಶಾವ೯ರಿಯು ಕಾಯುತಿರುವಳು ಬಾ ಯುಗಾದಿ ಬಾ ಯುಗಾದಿ ಬಾ ಮೆಲ್ಲ ಮುದುಡಿದ ಮನಗಳ ಮೆಲ್ಲ ಮೇಲೆತ್ತಲು ನೀ ಮೆದುವಾಗಿ ಬಾ ಶಾವ೯ರಿಯ ಶಾಖಕ್ಕೆ ಸರಿದು ಹೋಗಲಿ ಜಗವ ಆವರಿಸಿದ ಮಹಾಮಾರಿಗಳೆಲ್ಲಾ ಮಯಾವಾಗಲಿ ಮತ್ತೆ ಬಾರದಾಗಲಿ ಬಾ ಯುಗಾದಿ ಬಾ ಯುಗಾದಿ ಬಾ…………. *******
ಯುಗಾದಿ ಕಾವ್ಯ
ಭರವಸೆಯೊಂದಿರಲಿ ಶಾಲಿನಿ ಆರ್. ಚಿಗುರಿದೆಲಿ ಮ್ಯಾಲೆಲ್ಲ ಚುಂಬನವಿತ್ತಿದೆ ಸಾವಿರ ಸೂರ್ಯಕಿರಣ ಗಾಳ್ಯಾಗ ತೇಲಿಬರುತಿವೆ ಹೂವ ಪರಿಮಳ ದುಂಬಿಗದುವೆ ಪ್ರಾಣ, ಹೊಸ ಆದಿಗೆ ತಳಿರು ತೂಗಿವೆ ತೋರಣ ಹೊಸ ಮನ್ವಂತರಕೆ ರಸದೌತಣವ ಬೀಡಿಗೆ ಪ್ರಕೃತಿ ಹಾಡಿದೆ ತಾನನ, ಕೋಗಿಲೆಯ ಗಾನ ದುಂಬಿಯ ಝೇಂಕಾರ ಕೇಳುತ ಮೈಮರೆತಿವೆ ಮರಗಳೆಲ್ಲ ಕೂತು ಹರಸುತ ನಮ್ಮನ್ನೆಲ್ಲ, ಬೇವಿನಮರಕದು ಹೂವಿನ ಸೀರಿ ಮಾವಿನ ಮರದಲಿ ಕಾಯಿಗಳ ಮೋಡಿ ಸುಂದರ ಸೊಬಗಿದು ಯುಗದ ಆದಿ ಎದಿಮನವ ಬೆಸೆದಿದೆ ಸಿರಿ ಸಂಭ್ರಮ ಚೈತ್ರ, ಬದುಕೆಲ್ಲ ಹಿಂಗಾ ಇರಲಿ ಸುಖ ದುಃಖಗಳ ಬಾಳ್ವೆ ಸಮ್ಮಿಳಿತವಾಗಿರಲಿ ಬೇವುಮಾವುಗಳ ಉಗಾದಿಯಾಗಿ ಚೈತ್ರದ ಒಲುಮೆಯಿದು ಮರಳಿ ಮರಳಿ ಬರಲಿ ಪ್ರತಿ ವರುಷ ಹೊಸ ಹರುಷ ಹೊಸ ಭರವಸೆಯೊಂದಿರಲಿ… *******
ಯುಗಾದಿ ಕಾವ್ಯ
ಬಾರೆ ಶಾರ್ವರಿ ಡಾ.ಗೋವಿಂದ ಹೆಗಡೆ ಬಂದೆಯಾ ಬಾ ಬಾರೆ ಶಾರ್ವರಿ ನಲವಿನೂಟೆ ತಾರೆ | ಕಾಲನ ಕಾಲಲಿ ಕುಸಿದಿದೆ ಜನಪದ ಬದುಕನುಣಿಸು ಬಾರೆ|| ಕಿರೀಟಿ ಕ್ರಿಮಿಯ ಬಾಧೆಯ ಬೇಗೆಗೆ ನಲುಗಿದೆಯೇ ಜೀವ | ನೆಲೆಗಾಣದೆ ಗೋಳಿಟ್ಟಿದೆ ಮನುಕುಲ ತಾರೆ ಕರುಣೆ ತೇವ || ನಿನ್ನಯ ಹೆಸರೇ ಇರುಳೆಂದರಿತೆ ಶಕ್ತಿಯೂ ಹೌದು ನೀನು | ಕತ್ತಲ ಮಣ್ಣಲಿ ಬೆಳಕನು ಬೆಳೆವ ವರವನು ನೀ ತಾರೆ || ಬಾಳಲಿ ಶ್ರದ್ಧೆಯ ನೀ ಮರುಕಳಿಸು ಬೆಳೆಯಲಿ ನಿನ್ನೊಲುಮೆ | ದುರಿತವ ದೂರಾಗಿಸಿ ನೀ ಹರಸು ಎರೆ ನೆಮ್ಮದಿ ನಲುಮೆ || ********
ಯುಗಾದಿ ಕಾವ್ಯ
ಮಾಸಿದ ಉಗಾದಿ… ಕೃಷ್ಣಮೂರ್ತಿ ಕುಲಕರ್ಣಿ ಸಂಭ್ರಮಿಸುವ ಉಗಾದಿ ಸಂಭ್ರಮ ಮಾಸಿಹೋತ ಗೆಳತಿ../ ಬೆಲ್ಲ ಕರಗಿಹೋಗಿ ಬರೀ ಬೇವೆ ಬಟ್ಟಲು ತುಂಬೈತಿ…// ದೇವರ ಮನಿ ನಂದಾದೀಪ ಮಿಣ ಮಿಣ ಅಂತೈತಿ ಬೇವಿನ ಸ್ನಾನ ಸವಿ ಸವಿ ಹೂರಣ ಅದ್ಯಾಕೊ ದೂರಸರಿದೈತಿ ವರ್ಷದ ಮೊದಲ ಹಿಂಗಾದ್ರೈಂಗ ಹಳವಂಡ ಕಾಡತೈ ಬದುಕಿನ ಚಿಗುರೆ ಉಗಾದಿ ಬಾಡಿದ್ರ ಬದುಕುಇನ್ನೈಲಿ.. ಮಣ್ಣಿನಮಕ್ಕಳ ಕನಸೆ ಉಗಾದಿ ಕತ್ತಲು ಕವಿದೈತಿ.. ಉತ್ತುವ ಬಿತ್ತುವ ಆಸೆಗಳೆಲ್ಲ ಕಮರೇ ಹೋಗೈತಿ../ ಬೇವು ಹೆಚ್ಚಿದ್ದರೂ ಇರಲಿ ಬೆಲ್ಲವೂ ಇರಲಿಸ್ವಲ್ಪ ದೇವರ ದರುಶನ ಬ್ಯಾಡಾಂದ್ರ ಇನ್ನು ಬದುಕು ಹೆಂಗ್ಯಪ್ಪ ಯುಗದ ಆದಿ ಉಗಾದಿ ತರಲಿ ಹರುಷ ನೆಮ್ಮದಿ ಬೇವಿರಲಿ ಬೆಲ್ಲವೂ ಇರಲಿ ಸರಿ ಸಮಾನತೆ ಕಾಣಲಿ. *******
ಯುಗಾದಿ ಕಾವ್ಯ
ಯುಗಾದಿ ಐ.ಜಯಮ್ಮ *ನಿಸರ್ಗವು ಚೈತನ್ಯದಿ ಸಂಭ್ರಮಿಸುವ ನವಕಾಲ ಪ್ರಕೃತಿ ಅಪ್ಸರೆಯಂತೆ ಮೆರೆಯುವ ಸವಿಕಾಲ ಬ್ರಹ್ಮದೇವನು ವಿಶ್ವಸೃಷ್ಠಿಸಿದ ಚೈತ್ರಮಾಸ ಭೂತಾಯಿ ಹಸಿರ ಸೀರೆಯನ್ನುಟ್ಟ ವಸಂತಕಾಲ ಮೇಘಗಳ ಘರ್ಜನೆಗೆ ಮಯುರಿ ನರ್ತಿಸಲು ಚಿಗುರೆಲೆಯ ಮಾಮರದಿ ಕೋಗಿಲೆಯು ಕೂಗಿರಲು ಬಾನಂಗಳದಿ ಹರ್ಷದಿ ಹಕ್ಕಿಗಳು ಹಾರಿರಲು ಪುಷ್ಪಗಳೆಲ್ಲ ಆರಳಿ ಸುಗಂದ ದ್ರವ್ಯಸುಸಿರಲು ಮಕರಂದ ಹೀರುವ ಜೇನಿನ ಝೇಂಕಾರ ಪೃಥ್ವಿಯ ಬೆಳಗುವ ಭಾಸ್ಕರನಿಗೆ ನಮಸ್ಕಾರ ಅಭ್ಯಂಜನ ಸ್ನಾನದ ಶೃಂಗಾರ ದೇವ ಮಂದಿರದಲ್ಲಿ ಶಿವನಾಮದ ಓಂಕಾರ ಮನೆಯ ಬಾಗಿಲಿಗೆ ತಳಿರುಗಳ ತೋರಣ ಅಂಗಳದಿ ವರ್ಣಗಳ ರಂಗೋಲಿಗಳ ಚಿತ್ರಣ ಬೇವು ಬೆಲ್ಲಗಳ ಮಿಶ್ರಣಗಳ ಸವಿಯೋಣ ಕಷ್ಟಸುಖಗಳ ಜೀವನ ಸಮನಾಗಿ ಅನುಭವಿಸೋಣ ಹೊಸ ಬಟ್ಟೆಗಳ ಧರಿಸಿ ಸಂಭ್ರಮಿಸಿ ಚಂದ್ರದರ್ಶನ ಮಾಡಿ ಕೈಮುಗಿದು ನಮಿಸಿ ಗುರುಹಿರಿಯರಿಗೆ ಭಕ್ತಿಭಾವದಿ ನಮಸ್ಕರಿಸಿ ಸಂತಸದಿ ನಾಡಿನೆಲ್ಲೆಡೆ ಯುಗಾದಿ ಹಬ್ಬ ಆಚರಿಸಿ **********
ಯುಗಾದಿ ಕಾವ್ಯ
ಚೈತ್ರೋತ್ಸವ ಕೆ.ಎ.ಸುಜಾತಾ ಗುಪ್ತ ಸದ್ದು ಗದ್ದಲವಿಲ್ಲದೆ ಈ ಸೃಷ್ಟಿಯ ಅರಮನೆಗೆ ಅತಿಥಿಯಾಗಿ ಆಗಮಿಸಿರುವ ಉಲ್ಲಸಿತ ವಸಂತ ಋತುವು.. ಸಾಕ್ಷಿಯಾಯಿತು ನಿಶ್ಯಬ್ಧದಲಿ ಋತು ಮನ್ವಂತರಕೆ… ಚೇತೋಹಾರಿಯೋ.. ಚಿತ್ತ ಮನೋಹರಿಯೋ.. ವಿಸ್ಮಿತ ನೇತ್ರಗಳಲಿ ಸುಹಾಸಿನಿಯೋ..! ಹೃನ್ಮನಗಳಿಗೆ ಸುಲಲಿತೆಯೋ.. ಈ ನವ ವಸಂತವು. ಚೈತ್ರವು ವಸಂತದ ಕೈಹಿಡಿದು ಕಿಣಿ ಕಿಣಿ ನಾದದೆ ಹೆಜ್ಜೆಯನಾಕಿ ಚೈತ್ರೋತ್ಸವಸಂಭ್ರಮಿಸುತಿರೆ. ಪ್ರಕೃತಿ ಮುಗ್ಧ ಮನೋಹರಿ, ಭಾವೋಜ್ವಲೆ.. ಹೃದ್ಗೋಚರ ದೃಶ್ಯಕೆ ಹರ್ಷೋದ್ಭವವು.. ಈ ನರ ಜನುಮ ಪಾವನವೋ. ತಿಳಿ ಹಸಿರು, ಗಿಳಿ ಹಸಿರು, ಪಚ್ಚ ಪಸಿರು ಪರ್ಣಗಳು ತಲೆದೂಗಲು ಪಾದಪಗಳಲಿ , ಕಾಮನಬಿಲ್ಲಿಗೇ ಸೋಜಿಗವೆನಿಸೋ.. ಹೋಳಿಯಲಿ ಮಿಂದೆದ್ದ ವರ್ಣಮಯ ಪ್ರಸೂನಗಳು, ಬಯಸಿರಲು ವಸಂತನಿಗೆ ಸ್ವಾಗತವ, ಅತಿಶಯದೆ ವಸಂತವಿರೆ ದಿಗ್ಭಾಂತಿಯಲಿ.. ಚೈತ್ರದೂತ ಹಸಿರು ರೆಕ್ಕೆ ಬಡಿದು ಉಬ್ಬಿ ತಬ್ಬಿ ಹರುಷ ತೋರುತ ಕಂಠ ಸಿರಿಯ ಸಮೀರದಲಿ ಸಮೀಕರಿಸಿ, ಕೂಜನಗೈಯೇ ಕುಹೂ.ಕುಹೂ. ಷಡೃತುಗಳ ಚೂಡಾಮಣಿ ತಾ ವಸಂತ ತೇಜೋಮಯದೆ ಕಣ್ ಸೆಳೆಯಿತು. ಬೇವು- ಮಾವು ಗಂಧ ಬೀರೆ ಹಸಿರು ಗಿಳಿ ಕೆಂಪು ಕೊಕ್ಕಿನಿಂದ ಹಸಿರು ಮಾವು ಕುಕ್ಕಿ ತಿನ್ನೆ, ಮನೆ ಮನೆಗೆ ಹಸಿರು ಮಾವಿನ ತೋರಣವ ಹಿಡಿದು ಬರಲು ನವ ಯುಗಾದಿ ನಾವೆಲ್ಲ ಸೇರಿ ಬೇವು – ಬೆಲ್ಲ ತಿಂದು ಸಂಭ್ರಮಿಸುವ ಚೈತ್ರೋತ್ಸವವ. *********************
ಯುಗಾದಿ ಕಾವ್ಯ
ನವ ವಸಂತ ಎನ್ ಶಂಕರರಾವ್ ಹೊಸತೇನು ನಮ್ಮ ಬಾಳಲ್ಲಿ *ಹೊಸವರ್ಷ* ಮರಳಿ ಬಂದಲ್ಲಿ, ಹೊಸ ಪರಿವರ್ತನೆ ಸೃಷ್ಟಿಯ ಸಂಕೇತ, ವಸಂತನಾಗಮನ ಬಾಳ ಪಯಣದಲಿ. ಋತುಮಾನ ಬದಲಾವಣೆ ತಂದಿತು ಪ್ರಕೃತಿಯಲಿ ಸಂಭ್ರಮ, ಅಂತರಾತ್ಮದ ಪ್ರತಿಧ್ವನಿ, ಆತ್ಮಾವಲೋಕನ ಮನದಾಳದಿ. ಕಾಲಚಕ್ರ ಯಾನದ ಪ್ರಗತಿ ಸುಲಲಿತ ಪರಿಭಾಷೆಯ ಮುನ್ನುಡಿ, ಸಚ್ಚರಿತ ಸದ್ಭಾವನೆಯ ನುಡಿ, ಸಚ್ಚಿದಾನಂದ ಆತ್ಮ ಸಂತೃಪ್ತಿ. ನವ್ಯ ನವೀನತೆಯ ಸಂತಸ, ನವೋದಯ ಉಲ್ಲಾಸ ಮಾನಸ, ನವೋಲ್ಲಾಸ ನಿತ್ಯೋತ್ಸವ ಭುವಿಯಲಿ, ನವ್ಯ ನಲ್ಮೆಯ ಬಾಳಿನಾ ನಾಂದಿ. ಹೊಸ ವರ್ಷ ತರಲಿ ಹರ್ಷ, ಹೊಸ ಕಾಮನೆಗಳ ವರ್ಷ, ಹೊಸ ಪರಿಕಲ್ಪನೆ ಸಾಕಾರವಾಗೆ ಹೊಸ ದಿಗಂತದ ಅನಾವರಣ. ಅದೇನು ಸಂಭ್ರಮ ಸಡಗರ ಅದೇನು ಸಂತಸ ಕಾತುರ, ಸದಾ ಹಳೆಯ ನೆನಪಿನ ನವಿಲುಗರಿ, ಬದುಕಿನ ಆಶಾಕಿರಣದ ಸಿರಿ. ಹೊಸ ವರ್ಷದ ಕ್ಷಣಗಣನೆ, ಸಂಭ್ರಮಾಚರಣೆಯ ಮನನ, ಶಾರ್ವರಿ ನಾಮಸಂವತ್ಸರದ ಚಾಂದ್ರಮಾನ ಯುಗಾದಿ ನವವಸಂತ ನಗುವ ತರಲಿ ಎಲ್ಲರ ಮನ ಮನೆ ಯಲಿ. ****************
ಯುಗಾದಿ ಕಾವ್ಯ
ಯುಗಾದಿ ಬಂದಿದೆ ವೀಣಾ ರಮೇಶ್ ಯುಗಾದಿ ಬಂದಿದೆ ಇಳೆಯ ಹೊಸಿಲಿಗೆ ಅಡಿಇಟ್ಟ ಹೊಂಗಿರಣ ವಸಂತನ ಚಿಗುರಿನಲಿ ತರುಲತೆಗಳ ತೋರಣ ಯುಗಾದಿ ತಂದ ಸಿಹಿ ಸಿಹಿ ಹೂರಣ ಹೊಸ ಪರ್ವದ ಹಾದಿ ಚೈತ್ರಮಾಸದ ಯುಗಾದಿ ಹಳೆಯ ನೆನಪುಗಳು ತಿವಿದು ಹೊರಳಿದೆ ಮತ್ತದೇ ಹೊಸ ಕನಸು ಬಗೆದು ಮರಳಿದೆ ಸಿಹಿ ಕಹಿಗಳು ತಬ್ಬಿವೆ ಮತ್ತದೇ ಬದುಕಿನ, ಸಾಂಗತ್ಯಕೆ ಬದುಕು ಬೆಸೆದಿದೆ, ಹಸಿರು ಸಿರಿಯಲಿ ನಿಸರ್ಗ ಮೈತುಂಬಿದೆ ಮಾವು,ಬೇವುಗಳ ಭಾವ ಸಮಾಗಮ ಏಳು ಬೀಳುವಿನ ಸಿಹಿಕಹಿ ಸುಖದ ಲೇಪನ ಬೇವು ಬೆಲ್ಲದ ಜೀವನ ಸವಿಯೋಣ ಸಮಾನತೆ ಹಂಚೋಣ ಯುಗಾದಿ ಅರ್ಥತಿಳಿದು ಆಚರಿಸೋಣ *********
