Category: ಕಾವ್ಯಯಾನ

ಕಾವ್ಯಯಾನ

ಯುಗಾದಿ ಕಾವ್ಯ

ಮರಳಿ ಬಂದಿದೆ ಯುಗಾದಿ :- ಹರೀಶ್ ಬಾಬು ಹಣ್ಣೆಲೆ ಉದುರಿ ಚಿಗುರೆಲೆ ಅರಳಿ ನಗೆ ಬೀರಿವ ಪುಷ್ಪವರಳಿ ನೂತನ ವರುಷ ಮರಳಿ ಎಲ್ಲರ ತನು ಮನಗಳೊಡನೆ ನಗೆಯಾ ಬೀರಿ ತಂದಿದೆ ಹರುಷ ಯುಗ ಯುಗಾದಿ ಮರಳಿ ಚೈತ್ರ ಮಾಸವ ತೆರಳಿ ಬೇವು ಬೆಲ್ಲ ತಿನ್ನುತ್ತಾ ಸಿಹಿ ಕಹಿಯಾ ಹೀರುತ್ತಾ ದ್ವೇಷ ಮತ್ಸಾರ ತೊಲಗಿಸುತ್ತಾ ಪ್ರೀತಿ ಪ್ರೇಮವ ಹಂಚುತ್ತಾ ನೂತನ ಯುಗದ ಆಗಮನದ ಸಂತೋಷ. ದ್ವೇಷ ಅಸೂಯೆ ಮರೆಸಿ ಎಲ್ಲರ ಮನದಲ್ಲಿ ಬಿತ್ತುತ್ತಿದೆ ನೂತನ ಶೈಲಿಯಾ ಭಾವನೆಗಳ ಕೂಡಿ ಬಾಳುವ ಭರವಸೆ ಬೆಳೆಸಿ ಸೋದರತ್ವದ ಜೀವನ ತಿಳಿಸಿ ತಂದಿದೆ ಮನದಲ್ಲಿ ನೂತನ ವರುಷ ಚಿಗುರೆಲೆ ಅರಳಿ ನಿಂತು ತಂಪಾದ ಗಾಳಿ ಸೋಬನೆ ಹಾಡಿ ಬಿಸಿಲ ತಾಪಕ್ಕೆ ತಂಪೆರೆದು ಹೂಗಳು ಗಮಗಮ ಸುವಾಸನೆ ಬೀರಿ ಬಯಲು ತುಂಬೆಲ್ಲಾ ಹಸಿರೇ ತಣಿಸಿ ನೋಡುಗರ ಮನಕ್ಕೆ ತಂದಿದೆ ಹರುಷ. ಬಣ್ಣ ಬಣ್ಣದ ಉಡುಪುಗಳ ತೊಟ್ಟು ರಂಗು ರಂಗಿನ ವಣ೯ಗಳ ಮನೆಗೆ ಬಳಿದು ತಳಿರು ತೋರಣಗಳಿಂದ ಬಾಗಿಲು ಸಿಂಗರಿಸಿ ಚಿತ್ರ ವಿಚಿತ್ರದ ರಂಗೋಲಿ ಅಜಾರಕ್ಕೆ  ಹಾಕಿ ಬೇವಿನೆಳೆ ಮನೆ ಮೂಲೆ ಮೂಲ್ಗೆ ಸುಚ್ಚಿ ಎಲ್ಲಿಲ್ಲದ ಹಬ್ಬದ ಸಡಗರದ ಸಂತೋಷ . ಹೋಳಿಗೆ ತಿಂಡಿ ರುಚಿಯ ಸವಿಯುತ್ತಾ ಬಗೆ ಬಗೆಯಾ ಭಾವನೆಗಳ ಅರಿಯುತ್ತಾ ದುಡ್ಡಾಟ ಕಿತ್ತಾಟ ತುಂಟಾಟ ಆಡುತ್ತಾ ಕಷ್ಟ  ಸುಖಗಳನ್ನು ವಿನಿಮಯಿಸುತ್ತಾ ಸುಃಖ ದುಃಖಗಳನ್ನು ದೇವರ ಬಳಿ ಕೇಳುತ್ತಾ ಇದುವೇ ನಮ್ಮೆಲ್ಲರ ಹಬ್ಬ  ದಿನಗಳ ಉಲ್ಲಾಸ ********

ಯುಗಾದಿ ಕಾವ್ಯ

ಯುಗಾದಿಗೆ ಸ್ವಾಗತ ರತ್ನಾ ನಾಗರಾಜ ಯುಗ ಯುಗ ಕಳೆದರು ಯುಗಾದಿ ಹುಟ್ಟುತ್ತಲೆ ಇರುತ್ತದೆ ನಶ್ವರವೆಂಬುವುದು ಅದು ಕಾಣದು ಚಿರಂಜೀವಿ ಯುಗಾದಿಗೆ ಸ್ವಾಗತ ಮನುಷ್ಯ ಹುಟ್ಟುತ್ತಾನೆ ಹುಟ್ಟಿ ಸಾಯುತ್ತಾನೆ ಯುಗಾದಿ ಅವನಿಗೊಂದಷ್ಟು ಗಾದಿಗಳನ್ನು ಕೊಟ್ಟು ಯುಗಾದಿಗೆ ಉತ್ಸಾಹದ ಸ್ವಾಗತ ಯುಗಾದಿ ಮರೆಯಾಗುತ್ತದೆ ಹಳೆಯದನ್ನು ನೆನಪಾಗಿಯಿಟ್ಟು ಹೊಸದತ್ತ ಪಯಣಿಸುತ್ತಲೆಯಿರುತ್ತದೆ ಗಡಿಯಾರದ ಮುಳ್ಳಿನಂತೆ ಅದಕ್ಕೆ ತಳಿರು ತೋರಣಗಳ ಸ್ವಾಗತ ಯುಗಾದಿ ಬೇವು ಬೆಲ್ಲದ ಮಿಶ್ರಣದ ಸುಖ ಬರಿ ಬೇವು ಬೇಡ, ಸದಾ ಸಿಹಿಯು ಬೇಡ ಒಂದರೊಳಗೊಂದು ಇದ್ದರೆ ಜೀವನ ಪಾವನ ಅದಕ್ಕೆ ಸಮಿಶ್ರಣ ಯುಗಾದಿಗೆ ಸ್ವಾಗತ ನವ ಚೈತನ್ಯ ನವ ಉಲ್ಲಾಸ ತರುವ ಯುಗಾದಿ ಹಳೆಯದನ್ನು ಮಂಕುತನವನ್ನು ಓಡಿಸುವ ಯುಗಾದಿಗೆ ಸ್ವಾಗತ ಯುಗಾದಿಗೆ ಶುಭ ಶಕುನ ನುಡಿಯುತ್ತಾರೆ ಹೊಸ ಉಡಿಗೆ ತೊಡಿಗೆ ಕಾಣಿಕೆಗಳು ಲಭಿಸುತ್ತದೆ ನೆಂಟರಿಷ್ಟರರು ಆಗಮಿಸುವ ಸಂಭ್ರಮ ತರುವ ಯುಗಾದಿಗೆ ಸ್ವಾಗತ ನವ ವಸಂತ ಪ್ರಕೃತಿಗೆ ಹೊಸ ಚಿಗುರು ಹೊಸ ಉಸಿರು ನೀಡುತ್ತಾನೆ, ಹಚ್ಚ ಹಸಿರು ತುಂಬುತ್ತಾನೆ ಸದಾ ಕಾಲ ಜೀವಿಗಳಿಗೆ ಜೀವ ನೀಡುವ ಯುಗಾದಿಗೆ ಸ್ವಾಗತ ಬೀರು ಬಿಸಲ ಬೆವರು ಹರಿದರು ವಿಹಾರ ವಿರಾಮ ತರುವ ಮದುವೆ ದಿಬ್ಬಣ ಹೊತ್ತು ಬರುವ ಹಳೆಯ ಲೆಕ್ಕಾಚಾರ ತುಲನೆ ಮಾಡಿ ಹೊಸ ವ್ಯವಹಾರಕ್ಕೆ ಮುನ್ನುಡಿಯಿಡುವ ಯುಗಾದಿಗೆ ಸ್ವಾಗತ ನೂತನ ಪಂಚಾಗ ವಷðವಿಡಿ ಭವಿಷ್ಯ ಪಲುಕಿ ವಷðತಡಕು ಭೋಜನ ಪ್ರಿಯ ಜಾತ್ರೆ ಹರಕೆ ನದಿ ಜಳಕ ಮೋಜು ಮಸ್ತಿ ಕುಸ್ತಿಯಾಟ ಆಡಿಸುವ ಯುಗಾದಿಗೆ ಸ್ವಾಗತ ********

ಯುಗಾದಿ ಕಾವ್ಯ

ಪರಿಭ್ರಮಣ ಸುಕನ್ಯ ಎ.ಆರ್. ಕಡಲಲೆಗಳಂತೆ ಬರುತಿಹುದು ಹೊಸವರುಷ ಬದುಕಿನ ನೋವು ನಲಿವಿನ ಸಂಘರ್ಷ ಕ್ಷಣ ಕ್ಷಣದಲ್ಲೂ ಹರುಷದ ನಿಮಿಷ ನಮ್ಮೆಲ್ಲರ ಬಾಳು ಬೆಳಗಲಿ ಈ ವರುಷ ಋತುಮಾನದ ಪರಿಭ್ರಮಣ ಚೈತ್ರಮಾಸದ ತೇರನೇರಿ ಹೊಂಗೆ ಮಾವು ಬೇವಿನ ಆಗಮನ ಹೊಸ ವರ್ಷದ ಸಂಭ್ರಮ ಒಳಿತು ಕೆಡುಕನು ಮರೆಮಾಚಿ ಮೊಗದಲ್ಲಿ ನೆಮ್ಮದಿಯ ನಗುವ ಮಳೆಹರಿಸಿ ಸಹಬಾಳ್ವೆಯಲ್ಲಿ ಶುಭವ ಹಾರೈಸಿ ನೆನಪಿನಂಗಳದಲ್ಲಿ ಬರುತಿಹುದು ಹೊಸವರುಷ ಹೊಂಗೆ.ತೆಂಗು.ಮಾವು.ಬಾಳೆ.ಬೇವುಗಳ ತಳಿರು ತೋರಣವ ಶೃಂಗಾರದಿ ಪ್ರಕೃತಿ ಮಾತೆಯು ಅಲಂಕರಿಸಿ ಸ್ವಾಗತಿಸುವಳು ಹೊಸ ವರುಷವ ರೋಗ ರುಜಿನಗಳನು ಮೀರಿ ಬಿಸಿಲು ತಾಪವ ಹೊಂಗೆಯ ನೆರಳಲಿ ತಂಪಾಗಿಸಿ ಸೂರ್ಯ ಚಂದ್ರರ ಕಣ್ಣಾಮುಚ್ಚಾಲೆಯಲಿ ಕಳೆದವು ಋತುಮಾನಗಳು ಆದರೂ ಸ್ವಾಗತಿಸುವೆವು ಪ್ರತಿ ವರ್ಷ ನವ ಯುಗಾದಿಯ ಆದಿಯ ಬೇರು.ಆನಾದಿಯ ಚಿಗುರು ಯುಗ ಯುಗಗಳ ಸಂಗಮ ಕಹಿ ಘಟನೆಗಳ ಮರೆತು ಸವಿ ಬದುಕಿನ ನವ ಚೇತನ ಈ ಯುಗಾದಿ ಆದಿ ಅಂತ್ಯದ ಸೂಚಕ ಯುಗಾದಿ ಹಬ್ಬದ ಪ್ರತೀಕ ಹೊಸ ವರ್ಷದ ಸೂಚನ ಫಲಕ ಅರುಣೋದಯದ ಹೊಸತನದ ಹೊಂಬೆಳಕ ಬಟ್ಟ ಬಯಲಲ್ಲಿ ಮೂಡಿತು ಪಡುವನದಿ ಅರ್ಧಚಂದ್ರನ ದರ್ಶನ ಜನರ ಹರ್ಷೋಡ್ಗರ ಮೊಳಗಿತು ಹುಣ್ಣಿಮೆ ಚಂದ್ರನ ಆಗಮನ *********

ಕಾವ್ಯಯಾನ

ಏನಿದ್ದರೇನು…? ಪ್ಯಾರಿಸುತ ಈ ದೇಶಕೆ ಏನಿದ್ದರೇನು ನೀನೇ ಇಲ್ಲವಲ್ಲ ಗಾಂಧಿ….? ಖಾಲಿಯಾದ ಕುರ್ಚಿ,ಗಾದಿ,ಖಾದಿ ಕನ್ನಡಕದ ಕಡ್ಡಿ ಎಲ್ಲವೂ ಬೆತ್ತಲೆಯಾಗಿ ಬೆರಗು ಕಂಡು ಸುಮ್ಮನಾದವು ಕೋರ್ಟು,ಕಛೇರಿ, ಶಾಲಾಕಾಲೇಜುಗಳಲ್ಲಿ ನಿನ್ನ ಭಾವಚಿತ್ರವೊಂದು ಮೊಳೆ ಹೊಡೆದ ಆಸರೆಗೆ ಗೋಡೆಯನೇರಿ ಕುಳಿತು ಅದೇ ನಗುವ ಬೀರಿದೆ ಮಾಲೆಯು ಸುಗಂಧ ಸೂಸಿದೆ ಇಷ್ಟೇ ಸಾಲದು ಇನ್ನು ಇದೆ ಗಮನದಲಿ ಕೇಳು..!! ನೀನಿರುವ ಹಾಳೆಯ ಚೂರೊಂದು ಸಾಕು ಅದರಿಂದಲೇ ಇಲ್ಲೆಲ್ಲವು ಬೆಲೆಯುಳ್ಳವಾಗಿವೆ…! ಆದರೆ…? ನಿನ್ನ ಸಿದ್ದಾಂತ ಹೊತ್ತಿಗೆಯಲಿ ಹೊತ್ತಿ ಕರಕಲಾಗಿದೆ ನೀತಿ ಕಲೆತ ಮಂಗಗಳು ಮರವನೇರಿ ಕುಳಿತು ನೀ ಬರುವ ದಾರಿಗೆ ದಿಟ್ಟಿಸಿವೆ ನಿನ್ನ ಬರುವಿಕೆಯ ಸೂಚನೆಗೆ…! ಗಾಢ ಕತ್ತಲು ಕವಿಯುವ ಮೊದಲೇ ಚಪ್ಪಲಿ ಹೊಲೆಯುವನ ಗಾಡಿ ತಳ್ಳುವವನ ಕಣವೆ ಕೂಲಿಯವನ ಇನ್ನಾರದೋ ಮನೆಯ ಚಿಮುಣಿಗೆ ಇಲ್ಲವೇ ….? ನಿನ್ನದೇ ನಿರ್ಮಿಸಿದ ಸ್ಮಾರಕದ ಬೆಳಕಿಗಾದರೂ ಬಂದು ನಿಲ್ಲು ಉಳಿದವರು, ಉಳ್ಳವರು ನಿನ್ನನ್ನು ಗುರುತಿಸಲು ಸೋಲಬಹುದು…! ಕೆಲವು ಕಡೆ ನಿನ್ನ ಅನುಪಸ್ಥಿತಿ ಅವಮಾನಸಿದೆ ಅದೇ ಘೋಷ ಅದೇ ವೇಷ ಮತ್ತದೇ ರೋಷ ಮತ್ತೊಂದಿಷ್ಟು ಉಪವಾಸಗಳ ಅವಶ್ಯಕತೆಯಲ್ಲಿ ನಿನ್ನ ಬೇಡಿಕೆ ಅಪಾರವಾಗಿದೆ *******

ಕಾವ್ಯಯಾನ

ಇನಿಯನೆಂದರೆ… ನಿರ್ಮಲಾ ಆರ್. ಇನಿಯನೆಂದರೆ… ಇರುಳಲಿ ನಗುವ ಚಂದಿರನು ಬೆಳದಿಂಗಳಲಿ ನನ್ನೊಂದಿಗೆ ವಿಹರಿಸುವನು ತಾರೆಗಳ ನಡುವಲಿ ಇರುವನು ತಿಳಿ ಹಾಲಿನಂತಹ ಮನದವನು ಇನಿಯನೆಂದರೆ… ಆಗಸದಲಿ ಸದಾ ಮಿನುಗುವನು ದೂರದಿಂದಲೇ ನನ್ಮನದ ಧನಿಯ ಕೇಳುವನು ನನ್ನಂತರಾಳದ ಮಾತ ಅರಿಯುವನು ಪ್ರತಿ ಇರುಳಲಿ ನನಗಾಗಿ ಬರುವನು ಇನಿಯನೆಂದರೆ… ಕನಸ ಕಾಣುವ ಕಂಗಳಿಗೆ ತಂಪನೆರೆವನು ಕಂಡ ಕನಸಿಗೆ ಬಣ್ಣ ಹಚ್ಚುವನು ಕಣ್ಣ ಕಾಡಿಗೆಯ ಕದಿಯುವನು ಕಚಗುಳಿಯನಿಟ್ಟು ಕೆನ್ನೆಯ ರಂಗೇರಿಸುವನು ಇನಿಯನೆಂದರೆ… ಮನವೆಂಬ ಇಣುಕುವನು ತಿಳಿಯ ನೀರಲಿ ಚಹರೆಯ ಬಿಂಬ ಬಿಟ್ಟವನು ನಾ ಕಾಣುವ ಕನಸಲಿ ಪ್ರತಿದಿನ ಬರುವನು ಕನಸಲಿ ಕನಸಾಗೇ ಉಳಿದವನು. *****************

ಕಾವ್ಯಯಾನ

ನನ್ನ ಕವಿತೆ ಅಮೃತಾ ಮೆಹಂದಳೆ ನನ್ನ ಕವಿತೆ,ರಾಗ ತಾಳ ಭಾವವಿಲ್ಲದ ಮೂಕ ಗೀತೆವೀಣೆಗೆ ತ೦ತಿ ಮೀಟದಮುರಳಿಗೆ ಕುಹೂ ಹಾಡದ ಶೋಕಗೀತೆಆದರೊಮ್ಮೊಮ್ಮೆ ಹಿಡಿದಿಟ್ಟರೆ ನಿಲ್ಲುವುದುನಗಿಸಿದರೆ ನಕ್ಕು ಅಳಿಸಿದರೆ ಅಳುವುದುಏಕಾ೦ತಕೆ ಜೊತೆ ಹಾಡಿದರೆ ಭಾವಗೀತೆನನ್ನ ಭಾವದ೦ತೆ… ನನ್ನ ಕವಿತೆ,ಬರಿದಾದ ಬಿಳಿಯಾದ ಹಾಳೆಯ೦ತೆನಡುನಡುವೆ ಕಪ್ಪು ಚುಕ್ಕೆಯಾಗುವುದು ಚಿ೦ತೆಚೆಲ್ಲಿದರೆ ಕಣ್ಣುಕುಕ್ಕುವುದು ಬಣ್ಣಬರಿದು ಮನ ಬಿ೦ಬಿಸುವುದು ಬರೀ ಸೊನ್ನೆಹರಿದರೆ ಚೂರು ಮುಚ್ಚಿಟ್ಟರೆ ನೆನಪುಎಚ್ಚರದಿ ಬಿಡಿಸಿದರೆ ಸೆಳೆವ ಚಿತ್ರದ೦ತೆನನ್ನ ಚಿತ್ತದ೦ತೆ… ನನ್ನ ಕವಿತೆ,ಆಗಸದಿ ತೇಲುವ ಮೋಡದ೦ತೆಕೆಲವೊಮ್ಮೆ ಮೈದು೦ಬಿ ಸುರಿಯುವುದು ವರ್ಷದ೦ತೆಒಮ್ಮೆ ಬಿಳುಪು, ಇನ್ನೊಮ್ಮೆ ಕಪ್ಪುಬಣ್ಣ ಬಣ್ಣ ಹೊಳಪು, ತಾರೆಗಳ ನು೦ಗಿದ೦ತೆಮತ್ತೊಮ್ಮೆ ಕಪ್ಪುಕತ್ತಲೆ ಇದ್ದಕ್ಕಿದ್ದ೦ತೆನನ್ನ ಕನಸಿನ೦ತೆ… ನನ್ನ ಕವಿತೆ,ಮನದ ಕನ್ನಡಿಯ೦ತೆ,ದು:ಖದಲಿ ವಿರಹಗೀತೆಸ೦ತಸದಿ ನಲಿವ ಪ್ರೇಮಗೀತೆಇದಿ೦ದು ಹುಚ್ಚಿ, ನಾಳೆ ವಿರಾಗಿನಾಡಿದ್ದು ನಾಚುವ ಮದುಮಗಳುಆಮೇಲೆ ಪ್ರೌಢೆನೋವಿಗೆ ಜೊತೆಗಾತಿನಲಿವಿನಲ್ಲಿ ಸ೦ಗಾತಿನನ್ನ೦ತೆ… ********

ಕಾವ್ಯಯಾನ

ಕವಿತೆ ಚೈತ್ರಾ ಶಿವಯೋಗಿಮಠ ಕವಿ ಕೆ.ಎಸ್.ಎನ್ ಕ್ಷಮೆ ಕೋರುತ್ತಾ….. ಬರೆದ ಕವಿತೆಯ ಬಿಚ್ಚಿ, ತುಂಡರಿಸಿ ಕೊಯ್ವರು, ಬರೆದುದರೆಲ್ಲದರಲಿ ಬರಿ ತಪ್ಪ ಕಾಣ್ವರು ಯಾವುದೂ ಸರಿ ಇಲ್ಲ ಎಂದಿವರ ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ!! ಭಾವ ಚಂದವಿರಲು, ಈ ಪದವು ಯಾಕೆ? ಪದಗಳೆಲ್ಲವುಕೆ ಸಮ್ಮತಿಯು ಇರಲು, ಭಾವ ತೀವ್ರತೆಯು ಸಾಕೆ? ಎಲ್ಲದಕೂ ಬರಿ ಕೊಂಕು ಎಲ್ಲದಕು ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ!! ಓದೋಕೆ ಲಯವಿರೆ, ಛಂದೋಬದ್ಧ ಇಲ್ಲಂತೆ! ಪ್ರಾಸವಿಲ್ಲದಿರೆ ಓದಲು ತ್ರಾಸಂತೆ.. ಪ್ರಾಸವಿರೆ, ಪ್ರಾಸಕ್ಕೆ ತ್ರಾಸೆಂದು ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ! ಅರ್ಥವಾಗದಿರೆ, ಅರೆ ಇದೆಂಥ ಕವಿತೆ? ಅರ್ಥವಾದರೆ, ಧ್ವನಿಯಿಲ್ಲ ಅದು ಬರಿ ವಾಚ್ಯವಂತೆ! ಎಲ್ಲದಕು ಇವರದು ಅರ್ಥವಿಲ್ಲದ ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ! ಪತ್ರಿಕೆಗೆ ಕಳಿಸಿ ಪ್ರಕಟಿಸಿದರೆ, ಕೀರ್ತಿಯ ಹುಚ್ಚಂತೆ ಈಗೆಲ್ಲ ಬರೆಯುವವರ ಇವರು ಮೆಚ್ಚರಂತೆ! ಬರೆದುದೆಲ್ಲದಕು ಬರೀ ಟಿಪ್ಪಣಿ-ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ! **********

ಕಾವ್ಯಯಾನ

ಕವಿತೆ ಹುಟ್ಟುವುದಿಲ್ಲ ಸ್ಮಿತಾ ರಾಘವೇಂದ್ರ ಆತ್ಮವೆಂಬ ಅನೂಹ್ಯ ಭಾವಗರ್ಭಗುಡಿಯ ಹೊಕ್ಕು ಹಲವು ಕವಿತೆಗಳು ತಣ್ಣಗೆ ಹೊರ ನಡೆಯುತ್ತವೆ ಕವಿತೆಯ ಹಡೆದ ಮೌನದಂತೆ! ನಭೋಮಂಡಲವ ತಿರು ತಿರುಗಿ ವಿರಮಿಸಿ ಉಸುರಿದಾಗೊಂದು- ನಿಟ್ಟುಸಿರು: ಆತ್ಮಕ್ಕೆ ದಕ್ಕಿದ್ದು ಕಾಯಕ್ಕೆ ದಕ್ಕುವದಿಲ್ಲ! ಅಣು ರೇಣುವಿನಲಿ ಪಲ್ಲವಿಸಿ ತಲೆದೂಗಿ ರಿಂಗಣಿಸಿ ಒಳಗೊಳಗೇ ಭೋರ್ಗರೆದು ಮಂಜುಗಟ್ಟಿದ ಕಣ್ಣ ತೊರೆದು ಅರಿಯದೇ ಉದುರಿದ ಕವಿತೆಯ ಕರುಣೆ- ತೊರೆದ ನಿರಾಳ ಬದುಕಿನ ಕೊನೆಯ ಕವಿತೆಗೆ ಮಾತೂ ಇರುವುದಿಲ್ಲ ಮೂಕ ಮರ್ಮರವೊಂದರ ಅಂತರಾತ್ಮ: ಸೋತ ಕಣ್ಣುಗಳಿಂದ ಸರಿದ ಸುಂದರ ನೋಟ. ಸಾವಿನ ಆಲಿಂಗನ, ಆಲಿಂದ ದಾಟಿ ತಿರುಗಿಯೂ ನೋಡದೇ ನಡೆದ ಕರುಳ ಹಿಂಡಿದ ಕವಿತೆ, ಆತ್ಮ ಸಂಗಾತ ಬಿಂದುವೊಂದಕೆ ಬಂದು ಸೇರಿದ ಭಾವ- ಬೃಹದಾಕಾರ ಚದುರಿ- ವಿವಿಧ ರೂಪಕ ಸೇರಿ ಜಗದ ತುಂಬಾ ಪುಟ್ಟ ಪುಟ್ಟ ಕವಿತೆಯ ಧಾರಣ! ಹುಟ್ಟೂ ಇಲ್ಲದ ಸಾವೂ ಇಲ್ಲದ ನಿರಂತರ ಚಲನೆ ಜಗದ ಏಕೈಕ ಕವಿತೆ ಸಕಲವನೂ ಸಹಿಸುತ್ತದೆ! ಕವಿತೆ ಹುಟ್ಟುವುದಿಲ್ಲ ಸ್ವಯಂ ಹೆರುತ್ತದೆ!! *********

ಕಾವ್ಯಯಾನ

ದಕ್ಕಿತೆಷ್ಟು ಪ್ರೀತಿ ವಿನುತಾ ಹಂಚಿನಮನಿ (ವೆಲೆಂಟಾಯಿನ್ ಡೇ’ದ ಸಂಭ್ರಮ ಮುಗಿದಾಯ್ತು ಅದರ ಉತ್ತರಾರ್ಧ ಹೀಗೂ ಇರಬಹುದೇ …….) ಲಕ್ಷ್ಮಣ ರೇಖೆ ದಾಟಿದ ಒಂದು ತಪ್ಪಿಗೆ ದಕ್ಷಿಣೆ ತೆರಬೇಕಾಯ್ತು ನೂರೊಂದು ತೆಪ್ಪಗೆ ರಕ್ಷಣೆ ಇಲ್ಲದಾಯ್ತು ಕಾಡಿನಲಿ ತಾಯ್ತನಕೆ ದಕ್ಷ ಸಹನೆ ತ್ಯಾಗದ ಮೂರುತಿ ಸೀತೆಗೆ ಅಕ್ಷಯವಾದ ವನವಾಸ ಪತಿಯ ದೇಣಿಗೆ ಶ್ರೇಷ್ಠ ರಾಧೆಯ ಪ್ರೀತಿಗೆ ಹಂಬಲಿಸಿದವ ಅಷ್ಟ ಮಹಿಷಿಯರಿಗೆ ವಲ್ಲಭನಾದ ಗೋಕುಲದ ಕೃಷ್ಣ ಗೋಪಿಲೋಲನೀತ ದ್ವಾರಕಾಧೀಶನಾಗಿ ಬಾಲ್ಯದ ಗೆಳತಿಯ ಮರೆತ ಪದ್ಮಪತ್ರದ ಜಲಬಿಂದುವಾಗಿ ರಾಧೆಗೆ ದೊರೆತ ಐವರು ಶೂರ ಪತಿಗಳ ಧರ್ಮದ ಹಠಕೆ ದ್ರೌಪದಿಯ ಎದೆಯಾಯ್ತು ಪಗಡೆಯ ಪಠ ಅವಮಾನ ವನವಾಸಗಳೇ ಕೊಡುಗೆ ಸೂರ್ಯ ಚಂದ್ರರೆ ಸಾಕ್ಷಿ ಶೋಷಣೆಗೆ ಅಗ್ನಿಪುತ್ರಿಯ ಜೀವ ಉರಿದ ಬವಣೆಗೆ ಸಲೀಮನ ಪ್ರೇಮದ ಪುತ್ಥಳಿ ಅನಾರ್ಕಲಿ ಅಕಬರನ ಅಂತಸ್ತಿಗಾದಳು ನರಬಲಿ ಜೀವಂತ ಹುಗಿಸಿದ ಅವಳ ಮಹಾಬಲಿ ಜಹಾಂಗೀರನಿಗೆ ಚಕ್ರವರ್ತಿಯ ಪಟ್ಟ ಪ್ರೀತಿಯ ಸಮಾಧಿಯ ಮೇಲೆ ಕಟ್ಟಿ ಶಹಾಜಾನನ ಪ್ರೇಮದಫಲದ ಸೊತ್ತು ಹದಿಮೂರು ಬಾರಿ ಗರ್ಭ ಹೊತ್ತು ಕೊನೆಗೆ ಮಣ್ಣಾದಳು ಹೆತ್ತು ಹೆತ್ತು ತಾಜಮಹಲ ಅವನ ಪ್ರೀತಿಯ ಕುರುಹು ಮುಮ್ತಾಜಳ ಬಲಿದಾನದ ಗುರುತು ಆದಿಲಶಾಹಿಯ ಪಿಸುಮಾತಿನ ಬಲೆಗೆ ಮೊದಲು ಮರುಳಾದ ರಂಭ ಒಲಿದು ಜೀವತೆತ್ತು ಮಲಗಿದಳು ಗೋಲಗುಮ್ಮಜದಿ ಕಾದಿಹಳು ಶತಶತಮಾನ ಗುಮ್ಮಟದಿ ಬಾದಶಹನ ಪ್ರೇಮ ನಿವೇದನೆಗೆ ಒಲವಿನ ನಾಟಕದ ಅಂಕದ ಪರದೆ ಜಾರಿ ನಲುಗಿತು ನಾರಿಯ ಸಮ್ಮಾನ ಬಾರಿಬಾರಿ ತಿಳಿಯದಾದೆಯಾ ನೀ ಜಗದ ನೀತಿ ನಿನ್ನ ಪ್ರೇಮ ತ್ಯಾಗಗಳ ಅಳೆದ ರೀತಿ ನಿನಗೆ ಇದರಲಿ ದಕ್ಕಿತೆಷ್ಟು ಪ್ರೀತಿ? *******

ಕಾವ್ಯಯಾನ

ರಾತ್ರಿ ಮೆರವಣಿಗೆ ಪ್ಯಾರಿಸುತ ಹಗಲು ಸರಿದು ಇರುಳು ಕವಿದು ಕಣ್ಣು ಕನಸುಬೇಡಿದೆ ಹೃದಯ ಕಥೆ ಕೇಳಲು ತಣಿವರೆಸಿದೆ ಬೆಚ್ಚಗೆ ಹೊದಿಕೆ ಮೈಗೆ ಮುಡಿಯಲಿನ್ನು ರಾತ್ರಿ ಜೊತೆ ಮೆರವಣಿಗೆ…. ಚುಕ್ಕಿ ಚಂದ್ರನನ್ನು ಓಲೈಸುವಂತೆ ಚಂದ್ರಕಾಂತಿ ಸೂರ್ಯಪ್ರಭೆಯನ್ನು ನಂಬಿರುವಂತೆ ನಾನು ನಿನ್ನನ್ನು ಮಾತ್ರ ನಂಬಿದ್ದೇನೆ ಇಲ್ಲಿ ನನ್ನ ನಿನ್ನ ನಂಬಿಕೆ ಮುಖ್ಯವಲ್ಲ ಪ್ರೀತಿ ಜೀವಂತಿಕೆ ಅಷ್ಟೇ ಮುಖ್ಯವಾಗುವದು…! ಬಿಕೋ ಅನ್ನುತ್ತಿರುವ ರೋಡಿನಲ್ಲಿ ಬೀದಿದೀಪಗಳ ಅಲಂಕಾರ ದಟ್ಟ ವಾಹನಗಳ ವಾದ್ಯಮೇಳ ಅಕ್ಷತೆ ಹಾಕುವಂತೆ ರಪ ರಪ ಮಳೆಯ ಹನಿ ದೀಪದೂಳುಗಳ ಗುಯ್ಯಗುಟ್ಟುವ ಮಂತ್ರಘೋಷ ಅಪ್ಪಟ ಮದುವೆ ಮನೆಯಂತೆ ನೋಟಕ್ಕೆ ಸಿಗುವ ಈ ರಾತ್ರಿ ಅಧ್ಭುತ ಸೃಷ್ಟಿಸಿದೆ…! ಹೀಗೆ ಬಂದು ಹಾಗೆ ಹೋಗುವ ಕನಸುಗಳ ಮೇಲೆ ಅದೇನು ಕವಿತೆ ಬರೆಯಲಿ ಅದೇನೇ ಬರೆದರೂ ಅವಳ ಹಾಜರಾತಿ ಇರುವದು ಅಲ್ಲೊಮ್ಮೆ ಇಲ್ಲೊಮ್ಮೆ ಬರುವ ಸುಳಿವು ಕೊಡುವನೀನು , ಅದೆಂತಹ ಮಾಯಗಾತಿ…! ನನ್ನೆಲ್ಲ ರಾತ್ರಿಯನು ಧಾರೆಯರೆದರೂ ಇನ್ನೂ ಮೀನಾಮೇಷ ಮಾಡುತ್ತಿರುವೆ ******

Back To Top